Homeಕರ್ನಾಟಕಪರಮ್‍ಗೆ ಮೊದಲೇ ಸಿಕ್ಕಿತ್ತೇ ಐಟಿ ದಾಳಿಯ ಸುಳಿವು...

ಪರಮ್‍ಗೆ ಮೊದಲೇ ಸಿಕ್ಕಿತ್ತೇ ಐಟಿ ದಾಳಿಯ ಸುಳಿವು…

- Advertisement -
- Advertisement -

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ತಮ್ಮ ಮೇಲಾಗುವ ಐಟಿ ರೈಡ್ ವಿಷಯ ಎರಡು ತಿಂಗಳಿಗೂ ಮೊದಲೇ ತಿಳಿದಿತ್ತು. ಅದಕ್ಕೆ ಅವರು ಹಿಂದೆ ಗೃಹ ಸಚಿವರಾಗಿದ್ದದ್ದೂ ಕಾರಣವಿರಬಹುದು. ಈ ವಿಷಯ ಗೊತ್ತಿದ್ದ ಕಾರಣ ಪರಮೇಶ್ವರ್ ತಮ್ಮ ಶಿಕ್ಷಣ ಸಂಸ್ಥೆಗಳ ಎಲ್ಲಾ ನೌಕರರು ಮತ್ತು ಸಿಬ್ಬಂದಿಗೆ ಚೆಕ್ ಮೂಲಕ ವೇತನ ಪಾವತಿಸಿದ್ದರು. ಒಂದು ವಾರ ಎಲ್ಲಿಗೂ ಹೋಗದೆ ಮನೆಯಲ್ಲೇ ಠಿಕಾಣಿ ಹೂಡಿ ತಮ್ಮೆಲ್ಲಾ ಸಂಸ್ಥೆಗಳ ನಿರ್ವಹಣೆಗೆ ಆಗುತ್ತಿರುವ ಖರ್ಚು-ವೆಚ್ಚಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಸಂಸ್ಥೆಯ ಚಾರ್ಟರ್ಡ್ ಅಕೌಂಟೆಂಟ್‍ಗಳ ಸಮ್ಮುಖದಲ್ಲಿ ಪ್ರತಿಯೊಂದು ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು.

ಐಟಿ ರೈಡ್ ಆಗುವ ದಿನ ಅಂದರೆ ಅಕ್ಟೋಬರ್ 10ರಂದು ಮುಂಜಾನೆ ಎಂಟು ಗಂಟೆಗೆ ಕೊರಟಗೆರೆ ಕ್ಷೇತ್ರದ ಜಂಪೇನಹಳ್ಳಿ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪರಮೇಶ್ವರ್ ಸಿದ್ದಾರ್ಥನಗರದ ಮನೆಯಲ್ಲಿ ಇಲ್ಲ ಎಂಬುದು ಖಚಿತಪಡಿಸಿಕೊಂಡ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೇರ ಜಂಪೇನಹಳ್ಳಿಗೆ ಹೋದರು. ಅಲ್ಲಿಂದ ಕೊರಟಗೆರೆ ಐಬಿಯಲ್ಲಿ ವಿಚಾರಣೆ ನಡೆಸಿದ ಮೇಲೆ ಪರಮೇಶ್ವರ್ ಬೆಂಗಳೂರಿಗೆ ಹೋಗಿದ್ದು…

ಸಿದ್ದಾರ್ಥ ಶಿಕ್ಷಣ ಸಂಸ್ಥೆಯಡಿಯಲ್ಲಿ ಶಾಲಾ ಕಾಲೇಜುಗಳು, ಇಂಜಿನಿಯರ್, ವೈದ್ಯಕೀಯ ಕಾಲೇಜುಗಳ ಸೇರಿ 100ಕ್ಕೂ ಹೆಚ್ಚು ಸಂಸ್ಥೆಗಳಿವೆ. ಕರ್ನಾಟಕವಲ್ಲದೆ ಹೊರ ರಾಜ್ಯಗಳು ಮತ್ತು ಹೊರ ದೇಶದಲ್ಲೂ ಇವರ ಕಾಲೇಜುಗಳಿವೆ. ಇಷ್ಟೆಲ್ಲಾ ಸಂಸ್ಥೆಗಳ ವ್ಯವಹಾರ-ಹಣಕಾಸು ವಹಿವಾಟನ್ನು ಈ ಹಿಂದೆ ಪರಮೇಶ್ವರ್‍ರವರ ಸೋದರ ಡಾ.ಜಿ. ಶಿವಪ್ರಸಾದ್ ನೋಡಿಕೊಳ್ಳುತ್ತಿದ್ದರು. ಅವರು ಆಡಳಿತದ ಸಂಪೂರ್ಣ ಉಸ್ತುವಾರಿ ವಹಿಸಿದ್ದಾಗ ಎಲ್ಲಾ ಕಾಲೇಜುಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದರು. ಪ್ರತಿ ವಾರಕ್ಕೊಮ್ಮೆ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ವ್ಯವಸ್ಥಾಪಕರನ್ನು ಕರೆಸಿ ಹಣಕಾಸಿನ ವಹಿವಾಟಿನ ಲೆಕ್ಕ ಪಡೆಯುತ್ತಿದ್ದರು. ಆಡಳಿತದ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಶಿವಪ್ರಸಾದ್ ತೀರಿಕೊಂಡ ಮೇಲೆಯೇ ಪರಮೇಶ್ವರ್ ಕಾಲೇಜು ಉಸ್ತುವಾರಿ ವಹಿಸಿಕೊಂಡಿದ್ದು..

2011ರಲ್ಲಿ ಮರಳೂರು ದಿಣ್ಣೆಯಲ್ಲಿ ನೂತನವಾಗಿ ನಿರ್ಮಿಸಿದ್ದ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಉದ್ಘಾಟನೆಗೆ ಡಾ.ಜಿ.ಪರಮೇಶ್ವರ್ ಬಂದಿದ್ದರು. ಅದುವರೆಗೂ ಅವರು ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಆಡಳಿತದಲ್ಲಿ ತಲೆಹಾಕಿರಲಿಲ್ಲ. ಎಂಟು ವರ್ಷ ಕೆಪಿಸಿಸಿಯ ಸಾರಥ್ಯ ವಹಿಸಿದ್ದೇ ಇದಕ್ಕೆ ಪ್ರಮುಖ ಕಾರಣ. ರಾಜಕೀಯದಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದ ಪರಮೇಶ್ವರ್ ಅಣ್ಣ ಶಿವಪ್ರಸಾದ್ ತೀರಿಕೊಂಡ ಮೇಲೆ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೂ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳೇ ಎಲ್ಲವನ್ನೂ ನೋಡಿಕೊಂಡಿದ್ದರು. ನರಸಿಂಹಮೂರ್ತಿ, ವೈ.ಎಂ.ವಿ.ರೆಡ್ಡಿ ಆಡಳಿತಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದರು. ಒಟ್ಟಿನಲ್ಲಿ ಈ ಎಲ್ಲಾ ಶಿಕ್ಷಣ ಸಂಸ್ಥೆಗಳ ಲಾಭ ಮಾತ್ರ ತೆಗೆದುಕೊಳ್ಳುತ್ತಿದ್ದ ಪರಮೇಶ್ವರ್ ಅದರ ಬಗ್ಗೆ ಎಚ್ಚರ ವಹಿಸದಿದ್ದುದರ ಪರಿಣಾಮವನ್ನು ಈಗ ಐಟಿ ದಾಳಿಯಲ್ಲಿ ಅನುಭವಿಸಬೇಕಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಲ್‍ಪಿ ಮತ್ತು ಪ್ರತಿಪಕ್ಷದ ನಾಯಕರಾಗಿ ನೇಮಕಗೊಂಡರು. ಇದರಿಂದ ಪರಮೇಶ್ವರ್ ಬೇಸರಗೊಂಡಿದ್ದರು. ಹೀಗಾಗಿಯೇ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿ ನೇಮಕಗೊಂಡ ಎರಡು ದಿನಗಳಲ್ಲೇ ಪರಮೇಶ್ವರ್ ಅವರನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ದೆಹಲಿಗೆ ಕರೆಸಿಕೊಂಡರು. ಅದಾಗಲೇ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿತ್ತು. ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಸಂಪೂರ್ಣ ಖರ್ಚು ವೆಚ್ಚ ನಿಭಾಯಿಸಿದ್ದ ಪರಮೇಶ್ವರ್ ಹೆಗಲಿಗೆ ಮಹಾರಾಷ್ಟ್ರ ಚುನಾವಣೆಯ ಜವಾಬ್ದಾರಿ ವಹಿಸಿದರು. ಹಾಗಾಗಿಯೇ ಪರಮೇಶ್ವರ್‍ರವರನ್ನು ದಿಕ್ಕುತಪ್ಪಿಸಲು ದುರುದ್ದೇಶಪೂರ್ವಕವಾಗಿ, ದ್ವೇಷದಿಂದ ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ವಿರುದ್ಧ ಕೇಂದ್ರದ ನಿಯಂತ್ರಣದಲ್ಲಿರುವ ಐಟಿ ದಾಳಿ ನಡೆಸಿದೆ ಎಂದು ಕೂಡ ವಿಶ್ಲೇಷಿಸಲಾಗುತ್ತಿದೆ.

ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು ಇವೆ. ಅಲ್ಲೇನು ಕಡಿಮೆ ಶುಲ್ಕ ತೆಗೆದುಕೊಳ್ಳುತ್ತಾರೆಯೇ? ಬಿಜೆಪಿ ಮುಖಂಡ ಪ್ರಭಾಕರ್ ಕೋರೆ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್, ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ, ಬಿಜೆಪಿ ಬೆಂಬಲಿತ ಮೋಹನ್ ಆಳ್ವಾ ಮತ್ತು ಮಠಗಳಿಗೆ ಸೇರಿದ ಸಂಸ್ಥೆಗಳು, ಹೀಗೆ ಹಲವು ಮುಖಂಡರ ಕಾಲೇಜುಗಳು ಇವೆ. ಅವರ ಕಾಲೇಜುಗಳಲ್ಲಿ ಕೋಟಿ ಕೋಟಿ ಶುಲ್ಕ ಪಡೆಯುತ್ತಿಲ್ಲವೇ? ಎಂಬ ಪ್ರಶ್ನೆಗಳು ಸಹ ಎದ್ದಿವೆ.

ಎಲ್‍ಕೆಜಿ, ಯುಕೆಜಿ ಪ್ರವೇಶಕ್ಕೆ ಹೋಬಳಿ ಮಟ್ಟದಲ್ಲಿ 20 ಸಾವಿರ, ಜಿಲ್ಲಾ ಮಟ್ಟದಲ್ಲಿ 1 ಲಕ್ಷ, ಬೆಂಗಳೂರು ರಾಜಧಾನಿಯಲ್ಲಿ 2 ಲಕ್ಷ, ವಸತಿ ಶಾಲೆಗಳಲ್ಲಿ 5 ಲಕ್ಷ, ಆಳ್ವಾಸ್ ಕಾಲೇಜುಗಳಲ್ಲಿ 1 ಲಕ್ಷ ಶುಲ್ಕ ಪಡೆಯಲಾಗುತ್ತಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಹೊರ ರಾಜ್ಯದವರಿಗೆ ಆದರೆ 2 ಕೋಟಿ ರೂಪಾಯಿಯಿಂದ 5 ಕೋಟಿ ಪಡೆಯುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ಹಗಲು ರಹಸ್ಯ. ಪ್ರಬಲ ಜಾತಿಗಳಾದ ಲಿಂಗಾಯತ, ಒಕ್ಕಲಿಗ ಶಿಕ್ಷಣ ಸಂಸ್ಥೆಗಳಲ್ಲಿ ಅವ್ಯವಹಾರ ನಡೆಯುತ್ತಿಲ್ಲವೇ, ಅವುಗಳ ಮೇಲೆ ತಾಕತ್ತಿದ್ದರೆ ಐಟಿ ದಾಳಿ ಮಾಡಲಿ ಎಂಬ ವಾದವೂ ಇದೇ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿದೆ.

ಇನ್ನು ಆದಾಯ ತೆರಿಗೆ ಅಧಿಕಾರಿಗಳ ಮುಂದೆ ಅಕ್ಟೋಬರ್ 15ರಂದು ಪರಮೇಶ್ವರ್‌ ಹಾಜರಾಗಿದ್ದಾರೆ. ಐಟಿ ಅಧಿಕಾರಿಗಳು ಅವರನ್ನು ಪ್ರಶ್ನೆ ಮಾಡಿದ್ದೇ ತಡ ನನಗೆ ಮೂರ್ನಾಲ್ಕು ದಿನ ಸಮಯಕೊಡಿ ಎಂದ ಪರಂ ಬೇಡಿಕೆಗೆ ಐಟಿ ಅಧಿಕಾರಿಗಳು ಮರುಮಾತಿಲ್ಲದೇ ಒಪ್ಪಿಕೊಂಡಿದ್ದಾರೆ. ತನಿಖೆಯ ನಂತರ ಮಾಧ್ಯಮಗಳ ಜೊತೆ ಮಾತಾಡಿದ ಅವರು `ನನ್ನ ಸೆಕ್ರಟರಿ ರಮೇಶ್ ಸಾವಿನ ಕುರಿತು ಸಮರ್ಪಕ ತನಿಖೆಯಾಗಬೇಕು. ಏಕೆಂದರೆ ಕೆಲವು ಮಾಧ್ಯಮಗಳು ನಾನೇ ಕೊಲೆ ಮಾಡಿಸಿದ್ದೇನೆ, ನನ್ನ ಸ್ನೇಹಿತರು ಕೊಲೆ ಮಾಡಿಸಿದ್ದಾರೆ ಎಂದೆಲ್ಲಾ ಬಿತ್ತರಿಸಿದ್ದಾರೆ. ಇದಕ್ಕೆ ಉತ್ತರ ಸಿಗಬೇಕಾದರೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಪತ್ರಬರೆಯುತ್ತೇನೆ’ ಎಂದು ಪರಂ ಹೇಳಿದ್ದಾರೆ. ಒಟ್ಟಾರೆ ಅವರ ಮಾತಿನಲ್ಲಿ ಗತ್ತಿದೆಯೇ ಹೊರತು ಯಾವ ಭಯವೂ ಇಲ್ಲ..

ಐಟಿಯನ್ನೇ ಅಳುಕಿಸಿತಾ ರಮೇಶ್ ಸಾವು?
ಒಂದು ಕಡೆ ನಾಲ್ಕು ಕೋಟಿ ಹಣ ಸಿಕ್ಕಿದೆ, ಇನ್ನೊಂದು ಕಡೆ ಅವರ ಆಪ್ತ ಸಹಾಯಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಐಟಿಯೂ ಸಿಕ್ಕಿಬಿದ್ದಿದೆ. ಮೊದಲಿಗೆ ಪರಂ ಪಿಎ ರಮೇಶ್ ಆತ್ಮಹತ್ಯೆ ಮಾಡಿಕೊಂಡಾಗ ಐಟಿ ಅಧಿಕಾರಿಗಳು `ನಾವು ಮನೆಗೆ ಹೋಗಿಲ್ಲ, ಅವರನ್ನು ವಿಚಾರಣೆ ನಡೆಸಿಲ್ಲ’ ಎಂದು ಹೇಳಿಕೆ ನೀಡಿ ಜಾರಿಕೊಳ್ಳಲು ಪ್ರಯತ್ನಿಸಿದರು. ಆದರೆ ಆರು ಜನರ ತಂಡ ಅವರ ಮನೆಗೆ ಹೋಗಿ ವಿಚಾರಣೆ ನಡೆಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವಾದ್ದರಿಂದ ರಮೇಶ್ ಸಾವು ಐಟಿಯವರನ್ನೇ ಅಳುಕಿಸಿದೆ.
ಮೂರು ತಿಂಗಳ ಹಿಂದೆಯಷ್ಟೇ ಎಸ್‍ಎಂ ಕೃಷ್ಣರ ಅಳಿಯ ಸಿದ್ಧಾರ್ಥ್ ಇದೇ ಐಟಿ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡು ದೇಶವ್ಯಾಪಿ ಸುದ್ದಿಯಾಗಿದ್ದರ ಹಿನ್ನೆಲೆಯಲ್ಲಿ ರಮೇಶ್ ಸಾವು ಸಹ ಸಂಭವಿಸಿರುವುದರಿಂದ ಐಟಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...