Homeಮುಖಪುಟಪೊಲೀಸ್ ಹಾಗೂ ರಾಜಕೀಯ ಸಂಬಂಧವೆ ವಿಕಾಸ್ ದುಬೆಯ ಅಪರಾಧಕ್ಕೆ ಕಾರಣ: ಇದು ಎಲ್ಲ ರಾಜ್ಯಗಳಿಗೂ ಪಾಠ

ಪೊಲೀಸ್ ಹಾಗೂ ರಾಜಕೀಯ ಸಂಬಂಧವೆ ವಿಕಾಸ್ ದುಬೆಯ ಅಪರಾಧಕ್ಕೆ ಕಾರಣ: ಇದು ಎಲ್ಲ ರಾಜ್ಯಗಳಿಗೂ ಪಾಠ

8 ಪೊಲೀಸರನ್ನೇ ನಿರ್ದಯವಾಗಿ ಕೊಲ್ಲುವ ಮಟ್ಟಕ್ಕೆ ವಿಕಾಸ್ ದುಬೆ ಬೆಳೆದುದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ ಉತ್ತರ ಪ್ರದೇಶ ಮಾಜಿ ಪೊಲೀಸ್ ಮಹಾನಿರ್ದೇಶಕರು..

- Advertisement -
- Advertisement -

ಕಾನ್ಪುರದಲ್ಲಿ ದರೋಡೆಕೋರ, ಕ್ರಿಮಿನಲ್ ವಿಕಾಸ್ ದುಬೆ ಮತ್ತು ಆತನ ಸಹಚರರು ಎಂಟು ಪೊಲೀಸರನ್ನು ಕೊಂದದ್ದು ಪದಗಳಿಗೆ ನಿಲುಕದ ದುರಂತ. ಇದರ ನೋವಿನ ಆಳ ನನಗೆ ಗೊತ್ತಾಗುತ್ತದೆ. ಯಾಕೆಂದರೆ 2017 ಎಪ್ರಿಲ್ ವರೆಗೆ ನಾನು ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥನಾಗಿ ಪೊಲೀಸರನ್ನು ಮುನ್ನಡೆಸುವ ಗೌರವ ಪಡೆದಿದ್ದೇನೆ. ನನ್ನ ಮಾಜಿ ಸಹೋದ್ಯೋಗಿಗಳ ಮೇಲಾದ ಗುಂಡಿನ ಸುರಿಮಳೆ ನನ್ನನ್ನು ವಿಚಲಿತನನ್ನಾಗಿಸುತ್ತದೆ. ವಿಕಾಸ್ ದುಬೆ ಯಾಕಾಗಿ ಇದನ್ನು ಮಾಡಿದ?

ವಿಕಾಸ್ ದುಬೆ, ಕಳೆದ ಕೆಲವು ದಶಕಗಳಲ್ಲಿ ಉತ್ತರಪ್ರದೇಶದಲ್ಲಿ ಆಳವಾಗಿ ಬೇರು ಬಿಟ್ಟುಕೊಂಡಿರುವ ಪೊಲೀಸ್-ರಾಜಕೀಯ ಸಂಬಂಧದ ಫಲಾನುಭವಿ. ಏಕಕಾಲದಲ್ಲಿ ಈತ ಕ್ರಿಮಿನಲ್, ಭೂ ಕಬಳಿಕೆದಾರ, ರಾಜಕೀಯ ಶಕ್ತಿಯ ದಲ್ಲಾಳಿ, ಬ್ರಾಹ್ಮಣ ರಾಬಿನ್ ಹುಡ್ ಆಗಲು ಸಾಧ್ಯವಾಗಿದ್ದಾದರೂ ಹೇಗೆ?

ನಾನು ಇದರ ಕುರಿತು ವಿವರಿಸಲು ಪ್ರಯತ್ನಿಸುತ್ತೇನೆ. ವಿಕಾಸ್ ದುಬೆ ಗ್ರಾಮೀಣ ಕಾನ್ಪುರ್ ಪ್ರದೇಶದ ಚೌಬೆಪುರದ ನಿವಾಸಿ. 1990 ರ ದಶಕದ ಆರಂಭದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಈತ ಕಾನೂನಿನ ಬಗ್ಗೆ ತಿರಸ್ಕಾರ ಹಾಗೂ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಆ ಸಮಯದಲ್ಲಿ ಆಡಳಿತ ಪಕ್ಷದಲ್ಲಿದ್ದ ಅತ್ಯಂತ ಹಿರಿಯ ಸ್ಥಳೀಯ ರಾಜಕಾರಣಿ ಈತನಿಗೆ ಪ್ರೋತ್ಸಾಹ ನೀಡಿದ್ದರು.

ಇದು ಯುವಕ ದುಬೆಗೆ ನಿರ್ಣಾಯಕವಾಗಿತ್ತು. ದುಬೆ ಸ್ಥಳೀಯ ರಾಜಕೀಯ ಪ್ರವೇಶಿಸಿ ಅವುಗಳ ಚಲನಶೀಲತೆಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ. ಇದು ಮುಂದಿನ 25-30 ವರ್ಷಗಳಲ್ಲಿ ಅವನು ತನ್ನ ಅನುಕೂಲಕ್ಕೆ ತಕ್ಕಂತೆ ಅವರನ್ನು ಆಡಿಸುವಂತಾಯಿತು. ಈತ 1990 ಮತ್ತು 2000 ರ ದಶಕಗಳಲ್ಲಿ ಒಂದು ರಾಜಕೀಯ ಪಕ್ಷದಿಂದ ಇನ್ನೊಂದಕ್ಕೆ ಹಾರುತ್ತಾ ಕ್ರಿಯಾಶೀಲವಾಗಿದ್ದ. ಅದೇ ಸಮಯದಲ್ಲಿ ವೇಗವಾಗಿ ನಗರೀಕರಣಗೊಳ್ಳುತ್ತಿದ್ದ ಚೌಬೆಪುರ ಪ್ರದೇಶದಲ್ಲಿ ಅಸಹಾಯಕರಿಂದ ಭೂಮಿಯನ್ನು ಕಸಿದುಕೊಳ್ಳುತ್ತಿದ್ದ. ರಾಜಕೀಯ ಪ್ರೋತ್ಸಾಹವು ಪೊಲೀಸ್ ತನಿಖೆಯಿಂದ ದುಬೆಗೆ ರಕ್ಷಣೆ ನೀಡಿತು.

ಪೊಲೀಸ್ ಠಾಣೆಯೊಳಗಡೆ ಕೊಲೆ

ಸ್ಥಳೀಯ ಭಾರತೀಯ ಜನತಾ ಪಕ್ಷದ ಮುಖಂಡ ಸಂತೋಷ್ ಶುಕ್ಲಾ ಸಕ್ರಿಯವಾಗಿರುವವರೆಗೂ ತನ್ನ ರಾಜಕೀಯ ಮಹತ್ವಾಕಾಂಕ್ಷೆಗಳು ಈಡೇರುವುದಿಲ್ಲ ಎಂದು ದುಬೆ ಅರಿತುಕೊಂಡಿದ್ದ. ಶುಕ್ಲಾ ಕೂಡ ಬ್ರಾಹ್ಮಣರಾಗಿದ್ದು, ಈರ್ವರು ಪ್ರಮುಖ ಓಟ್‌ಬ್ಯಾಂಕ್ ಅನ್ನು ಮುನ್ನಡೆಸಲು ಸ್ಪರ್ಧಿಸುತ್ತಿದ್ದರು. ಇದಲ್ಲದೆ, ಶುಕ್ಲಾ ದುಬೆಗಿಂತ ಸೀನಿಯರ್. ಇದರಿಂದ ತನಗಿರುವ ರಾಜಕೀಯ ಬೆಂಬಲದಿಮದ ದುಬೆ 2001 ರಲ್ಲಿ ಶಿವ್ಲಿ ಪೊಲೀಸ್ ಠಾಣೆಯೊಳಗೆ ಸಚಿವ ಮಟ್ಟದ ಕಾರ್ಯಕಾರಿಯಾಗಿದ್ದ ಶುಕ್ಲಾರನ್ನು ಕೊಲೆ ಮಾಡಿದ.

ವಿಕಾಸ್ ದುಬೆಗಿರುವ ಪೊಲೀಸರೊಂದಿಗಿನ ಮೈತ್ರಿಯನ್ನು ಅನೇಕ ಪುಟಗಳಲ್ಲಿ ಬರೆಯಬಹುದು. ಆದರೆ ನಾನು ಶುಕ್ಲಾ ಹತ್ಯೆಯಿಂದ ಪ್ರಾರಂಭಿಸಿ ಬರೆಯುತ್ತೇನೆ. ತನಿಖೆಯು ಆತನನ್ನು ಆರೋಪಿಯೆಂದು ಘೋಷಿಸಿ, ಚಾರ್ಜ್‌ಶೀಟ್ ಸಲ್ಲಿಸಲಾಯಿತು. ಆದರೆ ವಿಚಾರಣೆಯ ಸಮಯದಲ್ಲಿ, ಪ್ರತ್ಯಕ್ಷದರ್ಶಿಗಳು, ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿಗಳು ಪ್ರತಿಕೂಲ ಸಾಕ್ಷ್ಯ ನುಡಿದರು. ಪೊಲೀಸ್ ಠಾಣೆಯೊಳಗೆ ಸರ್ಕಾರಿ ಸಚಿವ ಮಟ್ಟದ ರಾಜಕಾರಣಿಯನ್ನು ಹೊಡೆದುರುಳಿಸಿದರೂ ಸಾಕ್ಷ್ಯಾಧಾರದ ಕೊರತೆಯಿಂದ ಅವನನ್ನು ಖುಲಾಸೆಗೊಳಿಸಲಾಯಿತು.

ಆ ಸಮಯದಲ್ಲಿ ಪ್ರಾಸಿಕ್ಯೂಷನ್ ಏನು ಮಾಡುತ್ತಿತ್ತು? ರಾಜಕೀಯ ನೇಮಕಾತಿಯಾಗಿರುವ ಜಿಲ್ಲಾ ಸರ್ಕಾರಿ ಮಂಡಳಿ ಪ್ರಶ್ನೆ ಎತ್ತ ಬೇಕಿತ್ತು. ಪ್ರಾಸಿಕ್ಯೂಷನ್ ಉಸ್ತುವಾರಿ ಹೊಂದಿರುವ ಜಿಲ್ಲಾಧಿಕಾರಿ ಇದನ್ನು ಕೈಗೈತ್ತಿಕೊಂಡು ವಾದಿಸಬೇಕಿತ್ತು. ಆದರೆ ಇದರ ಬದಲಾಗಿ ಖುಲಾಸೆ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸಲಾಗುವುದಿಲ್ಲ ಎಂದು ಜಿಲ್ಲಾಡಳಿತ ನಿರ್ಧರಿಸಿತು.

ಅದರ ನಂತರ, 2000 ರಲ್ಲಿ ಶಾಲಾ ಪ್ರಾಂಶುಪಾಲರ ಹತ್ಯೆ ಪ್ರಕರಣದಲ್ಲಿ ದುಬೆ ಮತ್ತೊಂದು ವಿಚಾರಣೆಯನ್ನು ಎದುರಿಸಬೇಕಾಯಿತು, 2004 ರಲ್ಲಿ ಈ ಪ್ರಕರಣಕ್ಕೆ ಜೀವಾವಧಿ ಶಿಕ್ಷೆ ಘೋಷಿಸಲಾಯಿತು. ಆದರೆ ಆಶ್ಚರ್ಯವೇನೆಂದರೆ ಅನೇಕ ಕೊಲೆ ಪ್ರಕರಣಗಳು ಮತ್ತು ದರೋಡೆ ಸೇರಿದಂತೆ 60 ಕ್ಕೂ ಹೆಚ್ಚು ಪ್ರಕರಣಗಳ ಅಪರಾಧ ಇತಿಹಾಸ ಹೊಂದಿರುವ ವ್ಯಕ್ತಿಗೆ ಶೀಘ್ರದಲ್ಲೇ ಜಾಮೀನು ನೀಡಲಾಗುತ್ತಿರವುದು. ಮತ್ತೆ ಚೌಬೆಪುರಕ್ಕೆ ಬಂದಾಗ ಆತನಿಗೆ ಪೊಲೀಸ್ ರಕ್ಷಣೆಯನ್ನೂ ನೀಡಲಾಗಿದೆ ಎಂದು ವರದಿಯಾಗಿದೆ. ವಿವಿಧ ಸರ್ಕಾರಗಳ ಅಡಿಯಲ್ಲಿ ಈತನ ಅಪರಾಧಗಳ ವಿರುದ್ಧದ ಕ್ರಮ ಕೈಗೊಳ್ಳಲು ಏಕೆ ಸಾಧ್ಯವಾಗಲಿಲ್ಲ?

ಬಲಶಾಲಿ ಬ್ರಾಹ್ಮಣ 

ಆ ಹೊತ್ತಿಗೆ, ವಿಕಾಸ್ ದುಬೆ ಚೌಬೆಪುರ ಪ್ರದೇಶದಲ್ಲಿ ಎರಡು ಡಜನ್‌ಗೂ ಹೆಚ್ಚು ಬ್ರಾಹ್ಮಣ ಪ್ರಾಬಲ್ಯದ ಗ್ರಾಮಗಳನ್ನು ನಿಯಂತ್ರಿಸುವ ಮಟ್ಟಿಗೆ ಖ್ಯಾತಿ ಪಡೆದಿದ್ದನು. ಅವನು ಹೇಳಿದವರು ಮಾತ್ರ ಈ ಗ್ರಾಮಗಳಲ್ಲಿ ಪ್ರಧಾನ್ ಆಗಲು ಸಾಧ್ಯವಾಗುತ್ತಿತ್ತು. ಈ ಮೂಲಕ ಅನಧಿಕೃತವಾಗಿ ಅಧಿಕಾರ ಅನುಭವಿಸುತ್ತಿದ್ದ. ಆತನ ಪರವಾಗಿ 20 ಪ್ರಧಾನ್‌ಗಳು ಆಯ್ಕೆಯಾದರೆ ಸಾಕು ಶಾಸಕಾಂಗ ಸಭೆ ಸ್ಥಾನವನ್ನು ಗೆಲ್ಲಲು ಮತ್ತು ಸಂಸತ್ತಿನ ಚುನಾವಣೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಲು ಇದು ಸಾಕಾಗುತ್ತಿತ್ತು.

ಸ್ಥಳೀಯ ರಾಜಕೀಯ ಪುಡಾರಿಗಳ ಆಜ್ಞೆಯ ಮೇರೆಗೆ ಸ್ಟೇಷನ್ ಹೌಸ್ ಅಧಿಕಾರಿಯನ್ನು ವಾಡಿಕೆಯಂತೆ ನಿಯೋಜಿಸಲಾಗುತ್ತಿತ್ತು. ಇದರಿಂದ ಸ್ಥಳೀಯ ಪೊಲೀಸರು ದುಬೆಯನ್ನು ಎದುರು ಹಾಕಿಕೊಳ್ಳಲು ಧೈರ್ಯಮಾಡುತ್ತಾರೆಯೇ? ಅವರು ಬ್ಯಾಲೆನ್ಸ್ ಕಾಪಾಡಿಕೊಳ್ಳಬೇಕಾಗಿತ್ತು. ಪೊಲೀಸರು ಇರುವುದು ಸುವ್ಯವಸ್ಥೆ‌ ಕಾಪಾಡಿಕೊಳ್ಳಲು ಮಾತ್ರ. ಎಲ್ಲಿಯವರೆಗೆ ಅವರು ದುಬೆಗೆ ತೊಂದರೆ ನೀಡಲಿಲ್ಲವೋ, ಅಲ್ಲಿಯವರೆಗೆ ಆತ ಪೊಲೀಸರಿಗೆ ತೊಂದರೆ ನೀಡಲಿಲ್ಲ. ರಾಜ್ಯ ರಾಜಧಾನಿ ಲಕ್ನೋ ಇದನ್ನೆಲ್ಲ ತಿಳಿಯಲು ಅಥವಾ ಕಾಳಜಿ ವಹಿಸಲು ತುಂಬಾ ದೂರದಲ್ಲಿತ್ತು.

ತೀರಾ ಇತ್ತೀಚೆಗೆ, ಸೋದರ ಸಂಬಂಧಿಯನ್ನು ಕೊಲೆ ಮಾಡಿದ್ದಕ್ಕಾಗಿ 2018 ರಲ್ಲಿ ಬಂಧಿಸಲ್ಪಟ್ಟಿದ್ದರೂ ದುಬೆ ಫೆಬ್ರವರಿಯಲ್ಲಿ ಜಾಮೀನು ಪಡೆದಿದ್ದ.

ಈಗ ಸ್ಪಷ್ಟವಾದ ಸಂಗತಿಯೆಂದರೆ, ದುರಂತ ನಡೆದ ಎರಡು – ಮೂರು ದಿನಗಳ ಮೊದಲು, ಹೊಸ ಅಧಿಕಾರಿಯೊಬ್ಬರು ಕಾನ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾದರು. ಅವರು ಪರಾರಿಯಾದ ವಿಕಾಸ್ ದುಬೆ ಬಗ್ಗೆ ಸುಳಿವು ಕೊಟ್ಟವರಿಗೆ 25 ಸಾವಿರ ರೂ.ಗಳ ಬಹುಮಾನವನ್ನು ಘೋಷಿಸಿದರು. ಬಹುಮಾನದ ಘೋಷಣೆಯು ಅಪರಾಧಿನ್ನು “ಭೀತಿಗೊಳಿಸುವ ಅಂಶ”ವಾಗಿತ್ತು.

ಸರ್ಕಲ್ ಇನ್ಸ್‌ಪೆಕ್ಟರ್ ದೇವೇಂದರ್ ಮಿಶ್ರಾ ನೇತೃತ್ವದ ಪೊಲೀಸ್ ಪಡೆ ಜುಲೈ 1 ರಂದು ವಿಕಾಸ್ ದುಬೆ ಮೇಲೆ ದಾಳಿ ನಡೆಸಲು ಯೋಜಿಸಿದಾಗ, ಕಾನ್ಪುರ್ ಪೊಲೀಸರೇ ಯಾರೋ ದುಬೆಗೆ ದಾಳಿಯ ಮಾಹಿತಿ ಕೊಟ್ಟಿದ್ದಾರೆ. ಇದರಿಂದ ಶೂಟರ್‌ಗಳನ್ನು ಬಾಡಿಗೆಗೆ ಕರೆತಂದು ಹೊಂಚುಹಾಕಿ ದಾಳಿ ಮಾಡಿರುವುದರಿಂದ ಈ ದುರ್ಘಟನೆ ಜರುಗಿದೆ.

ಜೀವ ಕಳೆದುಕೊಂಡ ನನ್ನ ಸಂಗಾತಿಗಳಿಗಾಗಿ ನಾನು ದುಃಖಿಸುತ್ತೇನೆ. ನಾನು ಈ ವ್ಯವಸ್ಥೆಯ ಬಗ್ಗೆ ವಿಷಾದಿಸುತ್ತೇನೆ ಮತ್ತು ಅದು ಬದಲಾಗಬೇಕೆಂದು ಒತ್ತಾಯಿಸುತ್ತೇನೆ. ಪೊಲೀಸರು ತಮ್ಮ ಕೆಲಸವನ್ನು ವೃತ್ತಪರವಾಗಿ ಮಾಡುತ್ತಾರೆಯೇ ಹೊರತು ದ್ವೇಷ, ಕೋಪದಿಂದಲ್ಲ ಎಂದು ನಾನು ನಂಬುತ್ತೇನೆ. ಆರೋಪಿಗೆ ಶಿಕ್ಷೆಯಾಗುವಂತೆ ಸಾಕ್ಷಿಗಳನ್ನು ಸಂಗ್ರಹಿಸುತ್ತಾರೆ ಎಂದು ನಾನು ನಂಬುತ್ತೇನೆ.

ಕೃಪೆ: ಜಾವೀದ್ ಅಹ್ಮದ್, ಸ್ಕ್ರೋಲ್.ಇನ್

(ಜಾವೀದ್ ಅಹ್ಮದ್, ಉತ್ತರ ಪ್ರದೇಶ ಮಾಜಿ ಪೊಲೀಸ್ ಮಹಾನಿರ್ದೇಶಕರು)


ಓದಿ: ವಿಕಾಸ್ ದುಬೆಗೆ ‘ದಾಳಿಯ ಮಾಹಿತಿ ಸೋರಿಕೆ’: 3 ಕಾನ್ಪುರ ಪೊಲೀಸರ ಮೇಲೆ ಶಂಕೆ – ಅಮಾನತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...