ರಾಜ್ಯದಲ್ಲಿ ಜೆಡಿಎಸ್ಗೆ ಬುದ್ಧಿ ಹೇಳುವವರಿಲ್ಲ, ಜೆಡಿಎಸ್ ರೈತರ ಪರವಾಗಿಲ್ಲ. ಮುಂದಿನ ಚುನಾವಣೆಯಲ್ಲಿ ಮತದಾರರೇ ಅವರಿಗೆ ಪಾಠ ಕಲಿಸುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತರನ್ನು ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಬೆಂಗಳೂರು ಮಹಾನಗರ ಪಾಲಿಕೆಯ ಬಳಿಯಿಂದ ಫ್ರೀಡಂಪಾರ್ಕ್ವರೆಗೆ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದೆ. ಈ ವೇಳೆ ಕರವೇ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದ್ದಾರೆ. ಆದರೆ, ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಕರವೇ ತಿಳಿಸಿದೆ.
ಈ ವೇಳೆ ಮಾತನಾಡಿದ ನಾರಾಯಣಗೌಡ, ’ಅನ್ನದಾತರ ಬಗ್ಗೆ ಜೆಡಿಎಸ್ಗೆ ಎಷ್ಟು ಕಾಳಜಿ ಇದೆ ಎಂದು ಗೊತ್ತಾಗಿದೆ. ಜೆಡಿಎಸ್ಗೆ ಬುದ್ಧಿ ಹೇಳುವವರು ಯಾರೂ ಇಲ್ಲ, ಜೆಡಿಎಸ್ ರೈತರ ಪರವಾಗಿಲ್ಲ, ಅವರ ಮತ್ತೊಂದು ಮುಖ ಜನರಿಗೆ ಪರಿಚಯವಾಗಿದೆ. ಮುಂದಿನ ಚುನಾವಣೆಯಲ್ಲಿ ಮತದಾರರೇ ಅವರಿಗೆ ಪಾಠ ಕಲಿಸಲಿದ್ದಾರೆ’ ಎಂದರು.
ಇದನ್ನೂ ಓದಿ: ಈ ಕೃಷಿ ಕಾನೂನುಗಳನ್ನು ಕಾಂಗ್ರೆಸ್ ಕೂಡಾ ತರಲು ಬಯಸಿತ್ತು ಎಂದ ಬಿಜೆಪಿ; ತಿರುಗೇಟು ನೀಡಿದ ಪವಾರ್!
“ನಿನ್ನೆ ಮಧ್ಯಾಹ್ನದವರೆಗೂ ಜೆಡಿಎಸ್ ಕಾಯ್ದೆ ವಿರೋಧಿಸಿತ್ತು. ಆದ್ರೆ ಸಂಜೆ ವೇಳೆಗೆ ಕಾಯ್ದೆ ಜಾರಿಗೊಳಿಸಲು ಅಸ್ತು ಎಂದಿದೆ. ಇದರ ಹಿಂದೆ ಏನು ನಡೆದಿದೆ ಎಂಬುದು ಗೊತ್ತಿಲ್ಲ. ಆದರೆ, ಇದು ಜೆಡಿಎಸ್ನ ಇಬ್ಬಗೆಯ ನೀತಿಯನ್ನ ತೋರಿಸುತ್ತದೆ. ಇಂತ ಕಾಯ್ದೆಗಳನ್ನ ವಿರೋಧಿಸಿ ನಾವು ರೈತರ ಜೊತೆ ಇರುತ್ತೇವೆ. ರೈತ ವಿರೋಧಿ ಯಡಿಯೂರಪ್ಪನವರ ಸರ್ಕಾರಕ್ಕೆ ರಾಜ್ಯದ ಜನ ಉತ್ತರ ಕೊಡುತ್ತಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆಯ ನಂತರ ಕರವೇ ಪ್ರತಿನಿಧಿಗಳ ನಿಯೋಗ, ರಾಜ್ಯಪಾಲರನ್ನು ಭೇಟಿ ಮಾಡಿ, ಅವರ ಮೂಲಕ ರಾಷ್ಟ್ರಪತಿಗಳಿಗೆ ಆಗ್ರಹ ಪತ್ರ ಸಲ್ಲಿಸಲಿದೆ. ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ, ಕರಾಳ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ನಿಯೋಗ ಒತ್ತಾಯಿಸಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜ್ಯದ ಮೂವತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಆಗ್ರಹ ಪತ್ರ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಭೂ ಸುದಾರಣೆ ಕಾಯ್ದೆ ತಿದ್ದುಪಡಿಗೆ ಅಂಗೀಕಾರ ವಿರೋಧಿಸಿ ಪ್ರತಿಭಟನೆ: ಹೋರಾಟಗಾರರ ಬಂಧನ!