“ಅಂಬೇಡ್ಕರ್, ಗಾಂಧಿ, ನೆಹರೂ ಮತ್ತು ಕಾಂಗ್ರೆಸ್ಸಿನ ಹೋರಾಟದ ಚರಿತ್ರೆಯನ್ನು ನಾವು ಮುಂದಿನ ಪೀಳಿಗೆಗೆ ಅರ್ಥ ಮಾಡಿಸಬೇಕಿದೆ. ನಾವು ಗಾಂಧಿ ವಂಶಸ್ಥರು ಅವರು ಗೋಡ್ಸೆ ವಂಶಸ್ಥರು. ಬಿಜೆಪಿ ಮತ್ತು ಕಾಂಗ್ರೆಸ್ಸಿನ ಈ ಸೈದ್ಧಾಂತಿಕ ವ್ಯತ್ಯಾಸವನ್ನು ಇವತ್ತಿನ ಯುವ ಪೀಳಿಗೆಗೆ ಅರ್ಥೈಸಬೇಕಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು.
ಬೆಳಗಾವಿಯಲ್ಲಿ ಇದೇ ಜನವರಿ 21 ರಂದು ನಡೆಯಲಿರುವ ಗಾಂಧಿ ಭಾರತ ಕಾರ್ಯಕ್ರಮ ಮತ್ತು ಜೈ ಬಾಪು-ಜೈ ಭೀಮ್ – ಜೈ ಸಂವಿಧಾನ ಅಭಿಯಾನದ ಬೃಹತ್ ಸಮಾವೇಶದ ಪೂರ್ವ ಸಿದ್ಧತಾ ಸಭೆ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, “ಜೈ ಬಾಪು-ಜೈ ಭೀಮ್-ಜೈ ಸಂವಿಧಾನದ ಐತಿಹಾಸಿಕ ಅಭಿಯಾನವನ್ನು ಅತ್ಯಂತ ಯಶಸ್ವಿ ಮಾಡೋಣ. ಜ 21ರ ಬೆಳಗಾವಿಯ ಚಾರಿತ್ರಿಕ ಸಮಾವೇಷಕ್ಕೆ ಮುನ್ನಡೆಯಿರಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
“ಕಾಂಗ್ರೆಸ್ ಪಕ್ಷ ಹೋರಾಟ, ತ್ಯಾಗ, ಬಲಿದಾನಗಳಿಂದ ಕಟ್ಟಿದ್ದಾಗಿದೆ. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ಹುತಾತ್ಮರಾದರು. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರು ತಮ್ಮ ಪಾಲಿಗೆ ಒದಗಿ ಬಂದಿದ್ದ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಈ ಆದರ್ಶಗಳ ಮಾರ್ಗದಲ್ಲಿ ನಾವು ಮುನ್ನಡೆಯೋಣ” ಎಂದರು.
“ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಬಗ್ಗೆ ಗೌರವ ಇಲ್ಲದೆ, ವಿಗ್ರಹ ಮಾಡಿಟ್ಟುಕೊಂಡಿರುವ ಬಿಜೆಪಿಯವರು, ಗಾಂಧಿ ಬಗ್ಗೆ ಗೌರವ ಇಲ್ಲದ ಬಿಜೆಪಿಯವರು, ಸ್ವಾತಂತ್ರ್ಯ ಹೋರಾಟದ ಬಗ್ಗೆ ಗೌರವ ಇಲ್ಲದ ಇವರಿಗೆ, ಅಂಬೇಡ್ಕರ್, ನೆಹರೂ ಯಾರ ಬಗ್ಗೆಯೂ ಗೌರವ ಇಲ್ಲದ ಬಿಜೆಪಿಯವರಿಗೆ ದೇಶದ ಸಂವಿಧಾನ ಮತ್ತು ಚರಿತ್ರೆಯ ಬಗ್ಗೆಯೂ ಗೌರವ ಇಲ್ಲ” ಎಂದು ಆಕ್ರೋಶ ಹೊರಹಾಕಿದರು.
“ಅಂಬೇಡ್ಕರ್, ಗಾಂಧಿ, ನೆಹರೂ ಮತ್ತು ಕಾಂಗ್ರೆಸ್ಸಿನ ಹೋರಾಟದ ಚರಿತ್ರೆಯನ್ನು ನಾವು ಮುಂದಿನ ಪೀಳಿಗೆಗೆ ಅರ್ಥ ಮಾಡಿಸಬೇಕಿದೆ. ನಾವು ಗಾಂಧಿ ವಂಶಸ್ಥರು ಅವರು ಗೋಡ್ಸೆ ವಂಶಸ್ಥರು. ಬಿಜೆಪಿ ಮತ್ತು ಕಾಂಗ್ರೆಸ್ಸಿನ ಈ ಸೈದ್ಧಾಂತಿಕ ವ್ಯತ್ಯಾಸವನ್ನು ಇವತ್ತಿನ ಯುವ ಪೀಳಿಗೆಗೆ ಅರ್ಥೈಸಬೇಕಿದೆ. ಇದಕ್ಕಾಗಿ ಜ 21ರ ಗಾಂಧಿ ಭಾರತ ಸಮಾವೇಷವನ್ನು ಅತ್ಯಂತ ಯಶಸ್ವಿಗೊಳಿಸೋಣ” ಎಂದು ಕರೆ ನೀಡಿದರು.
ದೇಶದ ಸ್ವಾತಂತ್ರ್ಯ ಮತ್ತು ಸಂವಿಧಾನದ ಬಗ್ಗೆ ಗೌರವ ಇರುವ ಎಲ್ಲರಿಗೂ, ಎಲ್ಲಾ ಪಕ್ಷದವರಿಗೂ ಸಮಾವೇಷಕ್ಕೆ ಸ್ವಾಗತ ಎಂದರು.
ಇದನ್ನೂ ಓದಿ; ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ಮಂಡನೆ – ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ


