ತಮ್ಮ ಪತಂಜಲಿ ಔಷಧಿಗಳಿಂದ ಕೊರೊನಾ ಗುಣಪಡಿಸಬಹುದು ಎಂದು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಎಂದಿಗೂ ಹೇಳಿಕೊಂಡಿಲ್ಲ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ. ಕಳದ ವಾರ ಸರ್ಕಾರವು ಪತಂಜಲಿ ಕೊರೊನಾ ಔಷಧಿಗಳನ್ನು ಮಾರಬಾರದು ಎಂದು ಅದರ ಜಾಹೀರಾತುಗಳನ್ನು ನಿಷೇಧಿಸಿತ್ತು.
“ಕರೋನಿಲ್ ಮತ್ತ ಸಸ್ವಾರ ಔಷಧಿಯು ಕೊರೊನಾವನ್ನು ಗುಣಪಡಿಸಬಹುದು ಅಥವಾ ನಿಯಂತ್ರಿಸಬಹುದು ಎಂದು ನಾವು ಎಂದಿಗೂ ಹೇಳಿಲ್ಲ. ನಾವು ಔಷಧಿಗಳನ್ನು ತಯಾರಿಸಿದ್ದೇವೆ ಮತ್ತು ಕೊರೊನಾ ರೋಗಿಗಳನ್ನು ಗುಣಪಡಿಸುವ ನಿಯಂತ್ರಿತ ಕ್ಲಿನಿಕಲ್ ಪ್ರಯೋಗದಲ್ಲಿ ಬಳಸಿದ್ದೇವೆ ಎಂದು ಮಾತ್ರ ನಾವು ಹೇಳಿದ್ದೇವೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ” ಎಂದು ಪತಂಜಲಿಯ ಸಿಇಒ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆಂದು ಸುದ್ದಿ ಸಂಸ್ಥೆ ಎಎನ್ಐ ಉಲ್ಲೇಖಿಸಿದೆ.
ಔಷಧಿಗಳ ಸಂಯೋಜನೆ, ಅದರ ಸಂಶೋಧನೆಯ ಫಲಿತಾಂಶಗಳು, ಸಂಶೋಧನೆ ನಡೆಸಿದ ಆಸ್ಪತ್ರೆಗಳು, ಕಂಪನಿಯು ಸಾಂಸ್ಥಿಕ ನೈತಿಕ ಸಮಿತಿಯಿಂದ ಅನುಮತಿ ಪಡೆದಿದೆಯೇ ಮತ್ತು ಕ್ಲಿನಿಕಲ್ ಪ್ರಯೋಗ ನಡೆಸಲು ನೋಂದಾಯಿಸಿಕೊಂಡಿದೆಯೇ ಎಂಬ ವಿವರಗಳನ್ನು ಒದಗಿಸುವಂತೆ ಆಯುಷ್ ಸಚಿವಾಲಯ ಪತಂಜಲಿಯನ್ನು ಕೇಳಿದೆ.
ಪರವಾನಗಿ ನೀಡುವ ಅಧಿಕಾರಿಯೊಬ್ಬರು “ಪತಂಜಲಿ ಕಂಪನಿಯು ರೋಗನಿರೋಧಕ ವರ್ಧಕ, ಕೆಮ್ಮು ಮತ್ತು ಜ್ವರ ಗುಣಪಡಿಸುವಿಕೆಗಾಗಿ ಪರವಾನಗಿ ಕೋರಿದ್ದಾರೆ. ಉತ್ಪನ್ನಗಳು ಕೊರೊನಾ ಔಷಧಿ ಕಿಟ್ಗಳ ಭಾಗವೆಂದು ಅದು ಎಂದಿಗೂ ಬಹಿರಂಗಪಡಿಸಿಲ್ಲ” ಎಂದು ಹೇಳಿದ್ದಾರೆ. ಈ ಕುರಿತು ಕಂಪನಿಗೆ ರಾಜ್ಯ ಸರ್ಕಾರ ನೋಟಿಸ್ ಕಳುಹಿಸಿತ್ತು.
“ನಮ್ಮ ನೋಟಿಸ್ಗೆ ಉತ್ತರವಾಗಿ, ಪತಂಜಲಿ ಅವರು ಯಾವುದೇ ಕರೋನಾ ಕಿಟ್ ಅನ್ನು ಪ್ಯಾಕೇಜ್ ಮಾಡಿಲ್ಲ ಎಂದು ಹೇಳಿದೆ. ಕರೋನಿಲ್ ಪ್ಯಾಕೇಜಿಂಗ್ನಲ್ಲಿ ಕರೋನವೈರಸ್ನ ಪ್ರತಿನಿಧಿ ಚಿತ್ರವನ್ನು ಪತಂಜಲಿ ಮುದ್ರಿಸಿದ್ದಾರೆ. ಕೊರೊನಿಲ್ ಮತ್ತು ಇತರ ಎರಡು ಔಷಧಿಗಳನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ” ಎಂದು ಉತ್ತರಾಖಂಡ ಆಯುರ್ವೇದ ಇಲಾಖೆ ಪರವಾನಗಿ ಅಧಿಕಾರಿ ವೈ.ಎಸ್. ರಾವತ್ ಹೇಳಿದ್ದಾರೆ.
“ನಾವು ಇಂದು ಕೋವಿಡ್ ಔಷಧಿಗಳಾದ ಕೊರೊನಿಲ್ ಮತ್ತು ಸ್ವಸರಿಯನ್ನು ಪ್ರಾರಂಭಿಸುತ್ತಿದ್ದೇವೆ. ಇವುಗಳ ಎರಡು ಪ್ರಯೋಗಗಳನ್ನು ನಾವು ನಡೆಸಿದ್ದೇವೆ. ಮೊದಲ ಕ್ಲಿನಿಕಲ್ ನಿಯಂತ್ರಿತ ಅಧ್ಯಯನವು ದೆಹಲಿ, ಅಹಮದಾಬಾದ್ ಇತರ ಅನೇಕ ನಗರಗಳಲ್ಲಿ ನಡೆಯಿತು. ಇದರ ಅಡಿಯಲ್ಲಿ 280 ರೋಗಿಗಳನ್ನು ಪರೀಕ್ಷಿಸಲಾಗಿ 100 ಪ್ರತಿಶತದಷ್ಟು ರೋಗಿಗಳು ಗುಣವಾಗಿದ್ದಾರೆ. ನಾವು ಕರೋನಾ ಮತ್ತು ಅದರ ತೊಡಕುಗಳನ್ನು ನಿಯಂತ್ರಿಸಲು ಸಾಧ್ಯವಾಯಿತು. ಇದರ ನಂತರ ಎಲ್ಲ ಪ್ರಮುಖ ಕ್ಲಿನಿಕಲ್ ನಿಯಂತ್ರಣ ಪ್ರಯೋಗವನ್ನು ನಡೆಸಲಾಯಿತು” ಎಂದು ಉದ್ಘಾಟನೆ ವೇಳೆ ಬಾಬಾ ರಾಮ್ದೇವ್ ಹೇಳಿದ್ದರು.
“ಜೈಪುರದ ನಿಮ್ಸ್ ಸಹಾಯದಿಂದ ನಾವು 95 ರೋಗಿಗಳ ಮೇಲೆ ಕ್ಲಿನಿಕಲ್ ನಿಯಂತ್ರಣ ಅಧ್ಯಯನವನ್ನು ನಡೆಸಿದ್ದೇವೆ. ಇದರಿಂದ ಹೊರಬಂದ ದೊಡ್ಡ ವಿಷಯವೆಂದರೆ ಮೂರು ದಿನಗಳಲ್ಲಿ ಶೇಕಡಾ 69 ರಷ್ಟು ರೋಗಿಗಳು ಚೇತರಿಸಿಕೊಂಡರು ಮತ್ತು ಪಾಸಿಟಿವ್ ಪ್ರಕರಣಗಳಿಂದ ನೆಗೆಟಿವ್ ಆದರು. ಏಳು ದಿನಗಳಲ್ಲಿ ಶೇಕಡಾ 100 ಕ್ಕೆ 100 ರಷ್ಟು ಜನರು ನೆಗೆಟಿವ್ ಆದರು ಎಂದು ಅವರು ಹೇಳಿದ್ದರು.
ಈಗ ಅದೇ ಕಂಪನಿಯ ಸಿಇಓ ನಾವು ಕೊರನಾ ಗುಣಪಡಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂಬ ಹೇಳಿಕೆ ನೀಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಮತ್ತಷ್ಟು ಸುದ್ದಿಗಳು
ಪತಂಜಲಿ ಕೊರೊನಾ ಔಷಧಿ ಮಾರಿದರೆ ಕ್ರಮ: ರಾಜಸ್ಥಾನ ಸಚಿವರ ಎಚ್ಚರಿಕೆ
ಕೊರೊನಾಗೆ ಪತಂಜಲಿ ಔಷಧಿ: ಜಾಹೀರಾತು ನಿಲ್ಲಿಸುವಂತೆ ಬಾಬಾ ರಾಮ್ದೇವ್ಗೆ ತಾಕೀತು


