ಕೊರೊನಾ ವೈರಸ್ ರೋಗವನ್ನು ಗುಣಪಡಿಸುವುದಾಗಿ ಹೇಳಿಕೊಳ್ಳುವ ಪತಂಜಲಿ ಕಂಪನಿಯ ಔಷಧಿಯನ್ನು ಯಾರಾದರೂ ಮಾರಿದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾ ಹೇಳಿದ್ದಾರೆ.
ಅಲ್ಲದೆ ಕೊರೊನಾ ವೈರಸ್ ರೋಗವನ್ನು ಗುಣಪಡಿಸುವುದಾಗಿ ಹೇಳಿಕೊಳ್ಳುವ ಪತಂಜಲಿ ಔಷಧಿಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಬಾಬಾ ರಾಮದೇವ್ ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ.
ಔಷಧದ ಪ್ರಾಯೋಗಿಕ ಪರೀಕ್ಷೆಗಳಿಗೆ ರಾಜ್ಯ ಸರ್ಕಾರವು ಯಾವುದೇ ಪ್ರಸ್ತಾಪವನ್ನು ಸ್ವೀಕರಿಸಿಲ್ಲ ಮತ್ತು ಅವರು ಈ ವಿಷಯದಲ್ಲಿ ಯಾರಿಗೂ ಯಾವುದೇ ಅನುಮತಿ ನೀಡಿಲ್ಲ ಎಂದು ಶರ್ಮಾ ಹೇಳಿದ್ದಾರೆ.
“ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಮಾನವ ಪ್ರಯೋಗಗಳನ್ನು ನಡೆಸಲು ಸಾಧ್ಯವಿಲ್ಲ. ಸರ್ಕಾರದ ಅನುಮತಿಯಿಲ್ಲದೆ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುವವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ”ಎಂದು ಅವರು ಎಚ್ಚರಿಸಿದ್ದಾರೆ.
ಈ ನಡುವೆ ಪತಂಜಲಿ ಆಯುರ್ವೇದದ ತಮ್ಮ ಸಂಶೋಧಕರ ತಂಡವು ಕೋವಿಡ್ -19 ಅನ್ನು ಗುಣಪಡಿಸಲು ಔಷಧಿಯನ್ನು ಕಂಡುಹಿಡಿದಿದೆ ಎಂದು ಬಾಬಾ ರಾಮದೇವ್ ಮಂಗಳವಾರ ಹೇಳಿದ್ದಾರೆ. ಜೈಪುರದ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ನಿಮ್ಸ್) ವಿಶ್ವವಿದ್ಯಾಲಯದ ಜೊತೆಗೆ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗಿದೆ ಎಂದು ರಾಮದೇವ್ ತಿಳಿಸಿದ್ದಾರೆ.
ಕ್ಲಿನಿಕಲ್ ಪ್ರಯೋಗಗಳಿಗೆ ಅಗತ್ಯವಾದ ಎಲ್ಲ ಅನುಮೋದನೆಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಪ್ರಯೋಗಗಳನ್ನು ನಡೆಸುವ ಮೊದಲು ಸಿಟಿಆರ್ಐನಿಂದ ಅನುಮತಿ ಪಡೆಯಲಾಗಿದೆ ಎಂದು ನಿಮ್ಸ್ ನಿರ್ದೇಶಕ ಡಾ.ಅನುರಾಗ್ ತೋಮರ್ ಹೇಳಿದರು.
ಆಯುಷ್ ಸಚಿವಾಲಯವು ಬಾಬಾ ರಾಮದೇವ್ ಅವರಿಗೆ ಔಷಧದ ಬಗ್ಗೆ ವಿವರಗಳನ್ನು ನೀಡುವಂತೆ ಮತ್ತು ಉತ್ಪನ್ನಗಳ ಜಾಹೀರಾತನ್ನು ನಿಲ್ಲಿಸುವಂತೆ ಕೇಳಿದೆ.
ಕೋವಿಡ್ -19 ಅನ್ನು ಗುಣಪಡಿಸಲು ಬಾಬಾ ರಾಮ್ದೇವ್ ಹೇಳಿಕೊಂಡ ಔಷಧಿಯನ್ನು ಯಾರಾದರೂ ಮಾರಾಟ ಮಾಡುತ್ತಿರುವುದು ಕಂಡುಬಂದರೆ, ಆ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶರ್ಮಾ ಎಚ್ಚರಿಸಿದ್ದಾರೆ.
ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ 1940 ಮತ್ತು 1945 ರ ಅಡಿಯಲ್ಲಿ ಕೇಂದ್ರವು 2020 ರ ಜೂನ್ 21 ರಂದು ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ ಆಯುಷ್ ಸಚಿವಾಲಯದ ಅನುಮತಿಯಿಲ್ಲದೆ ಕೋವಿಡ್ -19ಗೆ ಯಾರೂ ಆಯುರ್ವೇದ ಔಷಧವನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.
ಕೋವಿಡ್ -19 ರೋಗಿಗಳ ಚಿಕಿತ್ಸೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ, ಆಯುಷ್ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾರ್ಗಸೂಚಿಗಳನ್ನು ರಾಜಸ್ಥಾನ ಸರ್ಕಾರ ಪಾಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಕೋವಿಡ್-19ಗೆ ಚಿಕಿತ್ಸೆ ಕಂಡುಹಿಡಿದಿರುವುದಾಗಿ ಪ್ರಚಾರ ನೀಡದಂತೆ ಪತಂಜಲಿಗೆ, ಆಯುಶ್ ಸಚಿವಾಲಯ ಬುಧವಾರ ಆಗ್ರಹಿಸಿದ ನಂತರ ಕೊರೊನ ಕಿಟ್ ಗೆ ಯಾವುದೇ ಪರವಾನಗಿ ನೀಡಿಲ್ಲ ಎಂದು ಉತ್ತರಾಖಂಡ ಸರ್ಕಾರ ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಹಾಗೆಯೇ ಈ ಸಂಬಂಧವಾಗಿ ಪತಂಜಲಿ ಅಧ್ಯಯನ ನಡೆಸಿದ್ದಾಗಿ ಹೇಳಿಕೊಂಡಿದ್ದ, ಜೈಪುರದ ಖಾಸಗಿ ಆಸ್ಪತ್ರೆ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ (ಎನ್ ಐ ಎಮ್ ಎಸ್) ನಲ್ಲಿ, ಈ ಕಾರಣಕ್ಕಾಗಿ ಯಾವುದೇ ಕ್ಲಿನಿಕಲ್ ಪರೀಕ್ಷೆ ನಡೆದಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ರಾಜಸ್ಥಾನ ಸರ್ಕಾರ ಹೇಳಿರುವುದಾಗಿಯೂ ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: ಕೊರೊನಾಗೆ ಪತಂಜಲಿ ಔಷಧಿ: ಜಾಹೀರಾತು ನಿಲ್ಲಿಸುವಂತೆ ಬಾಬಾ ರಾಮ್ದೇವ್ಗೆ ತಾಕೀತು