ಸುಮಾರು 70 ಲಕ್ಷ ‘ಬಂಗಾಳಿ ಮುಸ್ಲಿಮರ’ನ್ನು ಭಾರತದಿಂದ ಹೊರಹಾಕುವುದು ‘ಮಾನವೀಯವಾಗಿ ಸಾಧ್ಯವಿಲ್ಲ’. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಈ 70 ಲಕ್ಷ ಬಂಗಾಳಿ ಮುಸ್ಲಿಮರನ್ನು ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು ಎಂದು ಸಿಎಂ ಶರ್ಮಾ, ಅವರ ಸರ್ಕಾರ ಮತ್ತು ಹಿಂದುತ್ವ ಸಂಘಟನೆಗಳು ಹೇಳುತ್ತಿವೆ. ಅವರನ್ನು ಒಂದು ರೀತಿ ಅವಹೇಳನಕಾರಿಯಾಗಿ ‘ಮಿಯಾ ಮುಸ್ಲಿಮರು’ ಎಂಬ ಪದ ಬಳಸಿ ಕರೆಯಲಾಗುತ್ತಿದೆ.
ಶುಕ್ರವಾರ (ಮಾ.13) ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಆಜ್ತಕ್ ಸುದ್ದಿವಾಹಿನಿ ನಿರೂಪಕಿ ಅಂಜನಾ ಓಂ ಕಶ್ಯಪ್ ನೇತೃತ್ವದಲ್ಲಿ ‘ಪಂಚಾಯತ್ ಆಜ್ತಕ್’ ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಅದರಲ್ಲಿ ಮಾತನಾಡಿದ ಸಿಎಂ ಶರ್ಮಾ, “ನಾವು 70 ಲಕ್ಷ ಜನರನ್ನು ಓಡಿಸಲು ಸಾಧ್ಯವಿಲ್ಲ. 70 ಲಕ್ಷ ಜನರನ್ನು ಕರೆದೊಯ್ಯುವ ರೈಲು ಭಾರತದಲ್ಲಿ ಇಲ್ಲ. ಅದು ಮಾನವೀಯವಾಗಿ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಹಾಗಾಗಿ, ಆ 70 ಲಕ್ಷ ಜನರು ಅಸ್ಸಾಂನಲ್ಲಿ ಅಥವಾ ಭಾರತದಲ್ಲಿ ವಾಸಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ. ಈ ಮೂಲಕ ಅವರೇ ದೇಶ ಬಿಡುವಂತೆ ಮಾಡುತ್ತೇವೆ ಎಂದಿದ್ದಾರೆ.
ಮುಸ್ಲಿಂ ಆಟೋ ಚಾಲಕರಿಗೆ 5 ರೂಪಾಯಿ ಬದಲು 4 ರೂಪಾಯಿ ಕೊಡಿ ಎಂಬ ಈ ಹಿಂದಿನ ತನ್ನ ವಿವಾದಾತ್ಮಕ ಹೇಳಿಕೆಯನ್ನು ನೆನಪಿಸಿದ ಶರ್ಮಾ, “ನಾನು ಯಾರಿಗೂ ಥಳಿಸಲು ಅಥವಾ ದಾಳಿ ಮಾಡಲು ಹೇಳಿಲ್ಲ. ಅವರಿಗೆ (ಬಂಗಾಳಿ ಮುಸ್ಲಿಮರು) ಉಸಿರುಗಟ್ಟುವಂತೆ ವಾತಾವರಣ ಸೃಷ್ಟಿಸಿ ಎಂಬುವುದಾಗಿ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
“ಕಾನೂನು ಕೈಗೆತ್ತಿಕೊಳ್ಳಬೇಡಿ, ಯಾರಿಗೂ ದೈಹಿಕವಾಗಿ ಹಾನಿ ಮಾಡಬೇಡಿ. ನಾನು ಎಂದಿಗೂ ಯಾರನ್ನೂ ಕೊಲ್ಲಿ ಎಂದು ಹೇಳಿಲ್ಲ, ಅದಕ್ಕೆ ಅವಕಾಶವಿಲ್ಲ. ಆದರೆ ಅವರು (ಬಂಗಾಳಿ ಮುಸ್ಲಿಮರು) ಅವರಾಗಿಯೇ ದೇಶ ಬಿಟ್ಟು ಹೋಗಬೇಕೆಂದು ಭಾವಿಸುವ ಮಟ್ಟಿಗೆ ಅವರಿಗೆ ತೊಂದರೆ ಕೊಡಿ” ಎಂದು ಎಂದಿದ್ದೇನೆ ಎಂದು ತನ್ನ ಮುಸ್ಲಿಂ ದ್ವೇಷದ ಹೇಳಿಕೆಯನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ.
ಗುಂಡಿಕ್ಕುವ ವಿಡಿಯೋ ರಿಪೋಸ್ಟ್ ಮಾಡುತ್ತೇವೆ
ಸಿಎಂ ಶರ್ಮಾ ಮುಸ್ಲಿಮರನ್ನು ಗುರಿಯಾಗಿಸಿ ಗುಂಡಿಕ್ಕಿದಂತೆ ತೋರಿಸುವ ಎಐ ವಿಡಿಯೋವನ್ನು ಇತ್ತೀಚೆಗೆ ಅಸ್ಸಾಂ ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್ ಮಾಡಿತ್ತು. ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ, ಅದನ್ನು ಡಿಲೀಟ್ ಮಾಡಿತ್ತು.
ಆ ವಿಡಿಯೋ ವಿರುದ್ದ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ಗೆ ಹೋಗಿ ಎಂದಿತ್ತು. ಹಾಗಾಗಿ, ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಸಿಎಂ ಶರ್ಮಾಗೆ ನೋಟಿಸ್ ಜಾರಿ ಮಾಡಿದೆ.
ವಿಡಿಯೋದಲ್ಲಿ ಸಿಎಂ ಶರ್ಮಾ ಅವರು ಬಂದೂಕು ಹಿಡಿದು ಶೂಟ್ ಮಾಡಿದ ನೈಜ ದೃಶ್ಯದೊಂದಿಗೆ, ಮುಸ್ಲಿಂ ಸಮುದಾಯದವರಂತೆ ಕಾಣುವ ವ್ಯಕ್ತಿಗಳನ್ನು ಗುರಿಯಾಗಿಸಿ ಗುಂಡು ಹಾರಿಸುವ ಎಐ ಸೃಷ್ಟಿತ ಚಿತ್ರಗಳನ್ನು ಬಳಸಲಾಗಿತ್ತು.
ಈ ವಿಡಿಯೋ ಕುರಿತು ‘ಪಂಚಾಯತ್ ಆಜ್ತಕ್’ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಶರ್ಮಾ, “ಆ ವಿಡಿಯೋ ಸರಿಯಾಗಿತ್ತು. ಆದರೆ, ಅದರಲ್ಲಿ ಗುರಿಯಾಗಿಸಿದ ಮುಸ್ಲಿಮರು ‘ಬಾಂಗ್ಲಾದೇಶದವರು’ ಎಂದು ಉಲ್ಲೇಖಿಸಬೇಕಿತ್ತು ಎಂದಿದ್ದಾರೆ.
ದಾಖಲೆರಹಿತ ವಲಸಿಗರಿಗೂ ಕೂಡ ಕಾನೂನುಬದ್ಧವಾಗಿ ಗುಂಡಿಕ್ಕಲು ಸಾಧ್ಯವಿಲ್ಲ ಎಂದು ನಿರೂಪಕರು ಹೇಳಿದಾಗ, ವಿಡಿಯೋದಲ್ಲಿ ಗುಂಡಿಕ್ಕಿದಂತೆ ತೋರಿಸಿರುವುದು ಸಾಂಕೇತಿಕ ಎಂದು ಸಿಎಂ ಶರ್ಮಾ ಸಮರ್ಥಿಸಿಕೊಂಡಿದ್ದಾರೆ.
ಬಾಂಗ್ಲಾದೇಶಿಯರು ಅಸ್ಸಾಂಗೆ ನುಸುಳುವುದನ್ನು ತಡೆಯಲು, ಅಸ್ಸಾಂ ಮುಖ್ಯಮಂತ್ರಿ ಅವರ ಮೇಲೆ ಸಾಂಕೇತಿಕವಾಗಿ ಗುಂಡು ಹಾರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ವಿಡಿಯೋದಲ್ಲಿರುವ ವ್ಯಕ್ತಿಗಳು ಬಾಂಗ್ಲಾದೇಶಿಯರು ಎಂದು ಉಲ್ಲೇಖಿಸದಿರುವುದು ಕಾನೂನಾತ್ಮಕವಾಗಿ ಮತ್ತು ಸಾಂವಿಧಾನಿಕವಾಗಿ ತಪ್ಪು. ಹಾಗಾಗಿ, ಅದನ್ನು ಡಿಲೀಟ್ ಮಾಡಿದ್ದೇವೆ. ಕರೆಕ್ಷನ್ ಮಾಡಿ ಮತ್ತೆ ಅದೇ ವಿಡಿಯೋವನ್ನು ಪೋಸ್ಟ್ ಮಾಡುತ್ತೇವೆ. ಬಿಜೆಪಿ ರಾಜ್ಯ ಘಕಟದ ಖಾತೆಗಿಂತ ತನ್ನ ವೈಯಕ್ತಿಕ ಖಾತೆಯಲ್ಲಿ ಪೋಸ್ಟ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಅಸ್ಸಾಂನಲ್ಲಿ ‘ಮಿಯಾ’ ಎಂಬ ಪದವನ್ನು ಸಾಮಾನ್ಯವಾಗಿ ಬಂಗಾಳಿ ಮೂಲದ ಮುಸ್ಲಿಮರನ್ನು ಹೀಯಾಳಿಸಲು ಅವಮಾನಕಾರಿ ಪದವಾಗಿ ಬಳಸಲಾಗುತ್ತದೆ. ಇವರಲ್ಲಿ ಅನೇಕರು ಬಾಂಗ್ಲಾದೇಶದಿಂದ ಬಂದ ದಾಖಲೆ ರಹಿತ ವಲಸಿಗರು ಎಂದು ಆರೋಪಿಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿರುವ ಸಿಎಂ ಶರ್ಮಾ ಬಂಗಾಳಿ ಮುಸ್ಲಿಮರನ್ನು ಗುರಿಯಾಗಿಸಿ ಇತರ ಅನೇಕ ದ್ವೇಷದ ಹೇಳಿಕೆಗಳನ್ನು ನೀಡಿದ್ದಾರೆ. “ಅವರಿಗೆ (ಬಂಗಾಳಿ ಮುಸ್ಲಿಮರಿಗೆ) ತೊಂದರೆ ಕೊಡುವುದೇ ನಮ್ಮ ಕೆಲಸ” ಎಂದು ಹೇಳಿಕೊಂಡಿದ್ದಾರೆ. ಮತದಾರರ ಪಟ್ಟಿಯಿಂದ ಬಂಗಾಳಿ ಮುಸ್ಲಿಮರ ಹೆಸರುಗಳನ್ನು ತೆಗೆದುಹಾಕಲು ಅರ್ಜಿಗಳನ್ನು ಸಲ್ಲಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.


