Homeಮುಖಪುಟ"ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ" ದೆಹಲಿ...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

- Advertisement -
- Advertisement -

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ (ಏ.3) ದೆಹಲಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮಾಲೋಚನಾ ಸಭೆಯೊಂದು ವಿಕೋಪಕ್ಕೆ ತಿರುಗಿದ್ದು, ಟ್ರಾನ್ಸ್‌ಜೆಂಡರ್ ಸಮುದಾಯದ ಒಳಗಡೆಯೇ ಜಾತಿ ತಾರತಮ್ಯ ಎಷ್ಟು ಆಳವಾಗಿ ಬೇರೂರಿದೆ ಎಂಬುವುದು ಬಯಲಾಗಿದೆ.

ದಲಿತ ಮತ್ತು ಟ್ರಾನ್ಸ್‌ಜೆಂಡರ್ ಹಕ್ಕುಗಳ ಹಿರಿಯ ಹೋರಾಟಗಾರ್ತಿ ಗ್ರೇಸ್ ಬಾನು ಅವರು ಏಪ್ರಿಲ್ 3ರಂದು ದೆಹಲಿಯ ‘ದಿ ಲಲಿತ್’ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತೀವ್ರವಾದ ಮೌಖಿಕ ದಾಳಿ ಮತ್ತು ದೈಹಿಕ ದೌರ್ಜನ್ಯದ ಬೆದರಿಕೆಯನ್ನು ಎದುರಿಸಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ ಖಾತೆಯಲ್ಲಿ ಈ ಭೀಕರ ಅನುಭವದ ಬಗ್ಗೆ ವಿವರವಾದ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

ಆರಂಭದಲ್ಲಿ, ಈ ಸಮಾಲೋಚನಾ ಸಭೆಯ ಕಾರ್ಯಸೂಚಿಯ ಪ್ರಕಾರ ಪ್ರಖ್ಯಾತ ಟ್ರಾನ್ಸ್‌ಜೆಂಡರ್ ಹಕ್ಕುಗಳ ಹೋರಾಟಗಾರ್ತಿ, ಬಾಲಿವುಡ್ ನಟಿ, ಭರತನಾಟ್ಯ ನೃತ್ಯಗಾರ್ತಿ ಹಾಗೂ ಕಿನ್ನರ್ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಆಗಿರುವ ಲಕ್ಷ್ಮಿ ನಾರಾಯಣ ತ್ರಿಪಾಠಿ (ಎನ್‌ಎನ್‌ಟಿ) ಅವರನ್ನು ಮುಖ್ಯ ಭಾಷಣಕಾರರನ್ನಾಗಿ ನಿಗದಿಪಡಿಸಲಾಗಿತ್ತು.

“ಆಕೆ (ಲಕ್ಷ್ಮಿ ನಾರಾಯಣ ತ್ರಿಪಾಠಿ) ಅನುಸರಿಸುವ ಬ್ರಾಹ್ಮಣ್ಯದ ಹಿಂದುತ್ವ ಸಿದ್ಧಾಂತದ ಕಾರಣದಿಂದಾಗಿ, ಮತ್ತೊಬ್ಬ ಅಂಬೇಡ್ಕರ್ ವಾದಿ ಹೋರಾಟಗಾರ್ತಿ ಮತ್ತು ನಾನು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ್ದೆವು. ನಮ್ಮ ಆಕ್ಷೇಪಣೆಗಳನ್ನು ಪರಿಗಣಿಸಿ, ಆಯೋಜಕರಾದ ಹಮ್‌ಸಫರ್ ಟ್ರಸ್ಟ್, ಕೆಎಸ್‌ಎಫ್ ಮತ್ತು ನಾಜ್ ಸಂಸ್ಥೆಗಳು ಪರಿಷ್ಕೃತ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿದವು, ಆ ನಂತರವಷ್ಟೇ ನಾನು ಕಾರ್ಯಕ್ರಮಕ್ಕೆ ಹಾಜರಾದೆ. ಸಮಾಲೋಚನೆಯ ವೇಳೆ, ಲಕ್ಷ್ಮಿ ನಾರಾಯಣ ತ್ರಿಪಾಠಿ ಅವರು ‘ಜೈ ಶ್ರೀ ಮಹಾಕಾಲ್’ ಮತ್ತು ‘ನಾನು ಬ್ರಾಹ್ಮಣಳು ಎಂದು ಹೆಮ್ಮೆಪಡುತ್ತೇನೆ’ ಎಂದು ಹೇಳುವ ಮೂಲಕ ಭಾಷಣ ಪ್ರಾರಂಭಿಸಿದರು; ಇದಕ್ಕೆ ನಾನು ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಅಷ್ಟೇ ಅಲ್ಲದೆ, ಅವರು ಮಾತನಾಡುವಾಗ ಅಥವಾ ಆನಂತರವೂ ನಾನು ಯಾವುದೇ ಅಡ್ಡಿಪಡಿಸಲಿಲ್ಲ ಅಥವಾ ಪ್ರತಿಕ್ರಿಯಿಸಲಿಲ್ಲ. ವಾಸ್ತವವಾಗಿ, ಅವರು ಅಲ್ಲಿ ನೆರೆದಿದ್ದ ಕೆಲವು ಯುವ ಟ್ರಾನ್ಸ್‌ಜೆಂಡರ್‌ಗಳನ್ನು ಅವರು ತಮ್ಮ ಮಕ್ಕಳೆಂದೇ ಕರೆದರು” ಎಂದು ಬಾನು ತಿಳಿಸಿದ್ದಾರೆ.

ಬಾನು ಅವರ ಹೇಳಿಕೆಯ ಪ್ರಕಾರ, ಅವರು ಸಭೆಯನ್ನು “ಜೈ ಭೀಮ್!” ಎಂದು ಸ್ವಾಗತಿಸಿ, “ನಾವೆಲ್ಲರೂ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ರಮಾಬಾಯಿ ಅವರ ಮೊಮ್ಮಕ್ಕಳು” ಎಂದು ಹೇಳಿದ ನಂತರ ಸಂಘರ್ಷ ಭುಗಿಲೆದ್ದಿದೆ. ಬಾನು ಕೇಂದ್ರದ ತಿದ್ದುಪಡಿ ಕಾಯ್ದೆಯನ್ನು “ಹಿಂದುತ್ವ ಬ್ರಾಹ್ಮಣಶಾಹಿ ಪಿತೃಪ್ರಧಾನ ಕಾಯ್ದೆ” ಎಂದು ಟೀಕಿಸಿದ್ದರು ಎನ್ನಲಾಗಿದೆ.

“ನಾನು ಮಾತನಾಡಿದ ಸಮಿತಿ ಚರ್ಚೆಯು ಊಟದ ಸಮಯಕ್ಕೆ ಹತ್ತಿರವಾಗುತ್ತಿದ್ದಂತೆ ಮುಕ್ತಾಯವಾಯಿತು. ತದನಂತರ, ಲಕ್ಷ್ಮಿ ನಾರಾಯಣ ತ್ರಿಪಾಠಿ ಪ್ರತಿಕ್ರಿಯಿಸಲು ಮುಂದಾದರು. ಸಂಘಟಕರು ಸ್ವಲ್ಪ ಕಾಯುವಂತೆ ಸೂಚಿಸಿದರೂ ಸಹ, ಮೈಕ್ ಕೈಗೆತ್ತಿಕೊಂಡ ತ್ರಿಪಾಠಿ ಅವರು, ಆಕ್ರಮಣಕಾರಿ ಮತ್ತು ಜಾತಿ ನಿಂದನೆಯ ಧಾಟಿಯಲ್ಲಿ ನನ್ನ ಹೆಸರನ್ನು ನೇರವಾಗಿ ಪ್ರಸ್ತಾಪಿಸಿ ಕೂಗಾಡಿದರು. ತಾನು ಬ್ರಾಹ್ಮಣಳು ಎಂಬುದನ್ನು ಪ್ರತಿಪಾದಿಸಿದ ಅವರು, ತಾನೂ ಕೂಡ ಯಾವುದೇ ದಲಿತರಷ್ಟೇ ತುಳಿತಕ್ಕೆ ಒಳಗಾದ ಸಂತ್ರಸ್ತೆ ಎಂದು ವಾದಿಸಿದರು,” ಎಂದು ಬಾನು ವಿವರಿಸಿದ್ದಾರೆ. ಬಾನು ಅವರ ಪ್ರಕಾರ, ಲಕ್ಷ್ಮಿ ಅವರು ಮೈಕ್ ಕಸಿದುಕೊಂಡು, ಜಾತಿವಾದಿ ಧಾಟಿಯಲ್ಲಿ ಬಾನು ಮೇಲೆ ಕಿರುಚಾಡಿದ್ದಾರೆ ಮತ್ತು ತಮ್ಮ ಬ್ರಾಹ್ಮಣ ಅಸ್ಮಿತೆಯನ್ನು ಎತ್ತಿಹಿಡಿದಿದ್ದಾರೆ.

en.themooknayak.com ವರದಿ ಪ್ರಕಾರ, ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಪುರುಷ ಬಾಡಿಬಿಲ್ಡರ್, ವಕೀಲ ಮತ್ತು ಹೋರಾಟಗಾರ ಆರ್ಯನ್ ಪಾಶಾ ಅವರು ಹಿಂದಿಯಲ್ಲಿ ಬಾನು ಅವರ ಮೇಲೆ ಕಿರುಚಾಡಿದಾಗ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು: “ನೀನು ನಿಜವಾಗಿಯೂ ಅಂಬೇಡ್ಕರ್ ಮಗಳೇ ಎಂದು ತಿಳಿಯಲು ನಾವು ನಿನ್ನ ಡಿಎನ್ಎ ಪರೀಕ್ಷೆ ಮಾಡುತ್ತೇವೆ!” ಎಂದು ಅವರು ಕೂಗಿದರು. ಬಾನು ಅವರಿಗೆ ಹಿಂದಿ ಅರ್ಥವಾಗುವುದಿಲ್ಲ ಎಂಬುದು ತಿಳಿದಿದ್ದರೂ, ಪಾಶಾ ಅವರು ಮೈಕ್ ಹಿಡಿದು ಅವರ ಬಳಿ ನಡೆದು ಬಂದು, ದೈಹಿಕವಾಗಿ ಹೆದರಿಸುವ ಉದ್ದೇಶದಿಂದ ಅತ್ಯಂತ ಹತ್ತಿರದಲ್ಲಿ ಬೆದರಿಸುವಂತೆ ನಿಂತರು ಎಂದು ಆರೋಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೋಯಲ್ ಘೋಷ್ ಎಂಬವರು ಪಾಶಾ ಅವರ ವರ್ತನೆಯನ್ನು ಪ್ರಶ್ನಿಸಿದಾಗ, ಅವರು ಘೋಷ್ ಅವರ ಕಾಲರ್ ಹಿಡಿದು ಎಳೆದಾಡಿದರು ಎಂದು ಆರೋಪಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸಹ-ಪ್ಯಾನಲಿಸ್ಟ್‌ಗಳು ಮಧ್ಯಪ್ರವೇಶಿಸಿ ಅವರನ್ನು ತಡೆಯಬೇಕಾಯಿತು ಎಂದು ವರದಿ ಉಲ್ಲೇಖಿಸಿದೆ.

ಈ ಇಡೀ ಘಟನೆಯುದ್ದಕ್ಕೂ ಬಾನು ಅವರು ಶಾಂತತೆಯನ್ನು ಕಾಪಾಡಿಕೊಂಡರು. ಆಯೋಜಕರಾದ ಹಮ್‌ಸಫರ್ ಟ್ರಸ್ಟ್, ಕೆಎಸ್‌ಎಫ್ ಮತ್ತು ನಾಜ್ ಫೌಂಡೇಶನ್ ನಂತರ ವೈಯಕ್ತಿಕವಾಗಿ ಬಾನು ಅವರ ಕ್ಷಮೆಯಾಚಿಸಿದರಾದರೂ, ಸಾರ್ವಜನಿಕವಾಗಿ ತಟಸ್ಥ ನಿಲುವನ್ನು ತಳೆದರು ಎಂದಿದೆ.

themooknayak.com ಈ ಗಂಭೀರ ಆರೋಪಗಳ ಕುರಿತು ಪ್ರತಿಕ್ರಿಯೆ ಮತ್ತು ವಿವರಣೆ ಕೋರಿ ಲಕ್ಷ್ಮಿ ನಾರಾಯಣ ತ್ರಿಪಾಠಿ ಅವರನ್ನು ಸಂಪರ್ಕಿಸಿತು, ಆದರೆ ಯಾವುದೇ ಪ್ರತಿಕ್ರಿಯೆಗೆ ಅವರು ಲಭ್ಯವಾಗಿಲ್ಲ. ಆಯೋಜಕ ತಂಡದ ಸದಸ್ಯರೊಬ್ಬರು ಸಹ ಈ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದ ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಆಗಿರುವ ಗ್ರೇಸ್ ಬಾನು ಅವರು, ಪ್ರಮುಖ ದಲಿತ-ಟ್ರಾನ್ಸ್‌ಜೆಂಡರ್ ಹಕ್ಕುಗಳ ಹೋರಾಟಗಾರ್ತಿ ಹಾಗೂ ‘ಟ್ರಾನ್ಸ್ ರೈಟ್ಸ್ ನೌ ಕಲೆಕ್ಟಿವ್’ (Trans Rights Now Collective) ಸಂಸ್ಥೆಯ ಸಂಸ್ಥಾಪಕಿಯಾಗಿದ್ದಾರೆ. ದಲಿತ ಮತ್ತು ಬಹುಜನ ಟ್ರಾನ್ಸ್‌ಜೆಂಡರ್‌ಗಳಿಗೆ ಮೀಸಲಾತಿ ಸೇರಿದಂತೆ ಅಂತರ್-ವಿಭಾಗೀಯ ಹಕ್ಕುಗಳಿಗಾಗಿ ಅವರು ದೀರ್ಘಕಾಲದಿಂದ ಪ್ರತಿಪಾದಿಸುತ್ತಿದ್ದಾರೆ ಮತ್ತು 2026ರ ತಿದ್ದುಪಡಿ ಮಸೂದೆಯನ್ನು ವಿರೋಧಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.

ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅಂಚಿನಲ್ಲಿರುವ ಸಮುದಾಯಗಳ ಒಳಗೂ ಇರುವ ಜಾತಿ ತಾರತಮ್ಯದ ಕಹಿ ಸತ್ಯವನ್ನು ಈ ಆಘಾತಕಾರಿ ಘಟನೆ ಮತ್ತೊಮ್ಮೆ ಬಯಲು ಮಾಡಿದೆ. ಈ ಘಟನೆಯಿಂದ ತೀವ್ರವಾಗಿ ನೊಂದಿರುವ ಗ್ರೇಸ್ ಬಾನು ನಂತರ ಹೀಗೆ ಬರೆದಿದ್ದಾರೆ, “ನಾನು ಅತ್ಯಂತ ದುಃಖಿತ ಹೃದಯದಿಂದ ಇದನ್ನು ಬರೆಯುತ್ತಿದ್ದೇನೆ… ನನ್ನ ಕೊನೆಯ ಉಸಿರಿರುವವರೆಗೂ ನಾನು ಬಾಬಾಸಾಹೇಬ್ ಮತ್ತು ರಮಾಬಾಯಿಯವರ ಮೊಮ್ಮಗಳು ಎಂದು ಹೇಳುತ್ತಲೇ ಇರುತ್ತೇನೆ. ಜೈ ಭೀಮ್! ಜೈ ರಮಾಬಾಯಿ!”

ಇತ್ತೀಚಿನ ಮಾಹಿತಿಯ ಪ್ರಕಾರ, ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಅಂಗೀಕಾರಗೊಂಡ ಈ ತಿದ್ದುಪಡಿಯು, ಒಬ್ಬ ವ್ಯಕ್ತಿಯು ತನ್ನ ಲಿಂಗವನ್ನು ತಾನೇ ನಿರ್ಧರಿಸಿಕೊಳ್ಳುವ (Self-determination) ಹಕ್ಕನ್ನು ಕಸಿದುಕೊಂಡಿದೆ.

Courtesy : en.themooknayak.com


 



ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...

ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಇರಾನ್‌ನಿಂದ ತೈಲ ಖರೀದಿಸಿದ ಭಾರತ

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಸರಬರಾಜಿನಲ್ಲಿ ಅಡ್ಡಿ ಉಂಟಾಗಿರುವ ಮಧ್ಯೆ, ಭಾರತೀಯ ಸಂಸ್ಕರಣಾಗಾರರು ಇರಾನ್ ತೈಲವನ್ನು ಖರೀದಿಸಿದ್ದಾರೆ ಎಂದು ತೈಲ ಸಚಿವಾಲಯ ಶನಿವಾರ (ಏ.4) ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ವಿಶ್ವದ...