Homeಮುಖಪುಟ’ಸರೋಜಿನಿ ಮಹಿಷಿ’ ವರದಿ ಜಾರಿಗೆ ಬಂದ್‌: ಅಂತಾದ್ದೇನಿದೆ ಈ ವರದಿಯಲ್ಲಿ? ಜಾರಿಗೆ ಮೀನಾಮೇಷವೇಕೆ?

’ಸರೋಜಿನಿ ಮಹಿಷಿ’ ವರದಿ ಜಾರಿಗೆ ಬಂದ್‌: ಅಂತಾದ್ದೇನಿದೆ ಈ ವರದಿಯಲ್ಲಿ? ಜಾರಿಗೆ ಮೀನಾಮೇಷವೇಕೆ?

ನಾಳೆ ಅಂದರೆ ಫೆ.13ರಂದು ಕೆಲ ಕನ್ನಡಪರ ಸಂಘಟನೆಗಳು ಬಂದ್‌ಗಿಳಿದಿವೆ. ವರದಿ ಬಿಡುಗಡೆಯಾಗಿ 30 ವರ್ಷದ ನಂತರವೂ ಪ್ರತಿಭಟನೆ ನಡೆಯುತ್ತಿದೆ ಎಂದರೆ ಆ ವರದಿಯಲ್ಲೇನಿದೆ?

- Advertisement -
- Advertisement -

ಕರ್ನಾಟಕದಲ್ಲಿ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳ ಕೆಲಸದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಎಂಬ ಆಶೋತ್ತರಗಳನ್ನು ಹೊತ್ತ ರಾಜ್ಯದ ಮೊದಲ ವರದಿ ಎಂಬ ಶ್ರೇಯ ಡಾ. ಸರೋಜಿನಿ ಮಹಿಷಿ ವರದಿಗೆ ಸಲ್ಲುತ್ತದೆ. ಅಸಲಿಗೆ ಮಾಜಿ ಸಂಸದೆ ಡಾ. ಸರೋಜಿನಿ ಮಹಿಷಿ 1986ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಈ ವರದಿಯನ್ನು ಕೇಂದ್ರವನ್ನಾಗಿಟ್ಟುಕೊಂಡು 2020ರಲ್ಲೂ ಸಹ ಪ್ರತಿಭಟನೆ ನಡೆಯುತ್ತವೆ, ಬಂದ್‌ಗೆ ಕರೆ ನೀಡಲಾಗುತ್ತದೆ, ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಕೆಲಸ ನೀಡಿ ಎಂಬ ಘೋಷ ವಾಕ್ಯಗಳು ಮೊಳಗುತ್ತವೆ ಎಂದರೆ 3 ದಶಕಗಳೇ ಕರೆದರೂ ಸ್ವಂತ ನೆಲದಲ್ಲಿ ಬದಲಾಗದ ಕನ್ನಡಿಗರ ಪರಿಸ್ಥಿತಿಯನ್ನು ನಾವು ಊಹಿಸಬಹುದು.

ಪ್ರಸ್ತುತ ರಾಜ್ಯದಲ್ಲಿ ಯುವಜನರ ಪರಿಸ್ಥಿತಿ ಮುಂಚಿನಂತಿಲ್ಲ. ನಿರುದ್ಯೋಗ ಎಂಬುದು ದಿನೇ ದಿನೇ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ಆರ್ಥಿಕ ಕುಸಿತದ ಹೆಸರಿನಲ್ಲಿ ದಿನದಿಂದ ದಿನಕ್ಕೆ ಒಂದಷ್ಟು ಯುವಜನರು ಕೆಲಸವನ್ನು ಕಳೆದುಕೊಳ್ಳುತ್ತಲೇ ಇದ್ದಾರೆ. ಕನ್ನಡ ಭಾಷೆ ಅನ್ನದ ಪ್ರಶ್ನೆಯಾಗದ ಕಾರಣ ಮಕ್ಕಳ ಪ್ರಾಥಮಿಕ ಶಿಕ್ಷಣದಿಂದಲೂ ಕನ್ನಡ ಕ್ರಮೇಣ ದೂರವಾಗುತ್ತಿದೆ. ಇಂತಹ ಸಂದಿಗ್ಧ ದಿನಗಳಲ್ಲಿ ಸರೋಜಿನಿ ಮಹಿಷಿ ವರದಿ ಕುರಿತ ಕೂಗು ಅನಿವಾರ್ಯ ಹಾಗೂ ಅವಶ್ಯಕವೂ ಹೌದು. ಆ ನಿಟ್ಟಿನಲ್ಲಿ ಫೆಬ್ರವರಿ. 13 ರಂದು ಕರೆ ನೀಡಲಾಗಿರುವ ಬಂದ್ ಸಾಕಷ್ಟು ಮಹತ್ವಪಡೆದುಕೊಂಡಿದೆ

ನಿರುದ್ಯೋಗ ಎಂಬುದು ಭಾರತದ ಮಾತ್ರವಲ್ಲ ಕರ್ನಾಟಕದ ಪಾಲಿಗೂ ಸುಮಾರು ಆರು ದಶಕಗಳ ಪಿಡುಗು. ಹೀಗಾಗಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡ ಅನ್ನದ ಪ್ರಶ್ನೆಯಾಗಬೇಕು ಎಂಬ ಕೂಗು 1983ರಿಂದಲೂ ಇದೆ. ದಿವಂಗತ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗು ತುಸು ಜೋರಾಗಿಯೇ ಇತ್ತು. ಹೋರಾಟಗಳೂ ಸಹ ಉಗ್ರರೂಪ ತಳೆದಿತ್ತು.
ಈ ವೇಳೆ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ರಾಜ್ಯದ ಮೊದಲ ಮಹಿಳಾ ಸಂಸದೆ, ಸಚಿವೆ ಹಾಗೂ ಮಹಿಳಾ ಹೋರಾಟಗಾರ್ತಿ ಸರೋಜಿನಿ ಮಹಿಷಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದ್ದರು. ಸತತ ಮೂರು ವರ್ಷ ಈ ಕುರಿತು ಪರಿಶೀಲನೆ ನಡೆಸಿದ್ದ ಸಮಿತಿ 1986ರಲ್ಲಿ ಸರ್ಕಾರಕ್ಕೆ 53 ಅಂಶಗಳ ಒಂದು ವರದಿಯನ್ನು ಸಲ್ಲಿಸಿತ್ತು. ಅದೇ “ಸರೋಜಿನಿ ಮಹಿಷಿ” ವರದಿ.

ಅಸಲಿಗೆ 1986ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ 2020ರಲ್ಲಿ ಏಕೆ ಬಂದ್‌, ಪ್ರತಿಭಟನೆಗಳು ನಡೆಯುತ್ತಿವೆ? ಯಾರು ಈ ಸರೋಜಿನಿ ಮಹಿಷಿ? ಇವರು ನೀಡಿದ್ದ ವರದಿಯಲ್ಲಿ ಏನೇನು ಅಂಶಗಳಿವೆ? ಅದರ ಜಾರಿಗೆ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಏಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಯಾರು ಈ ಸರೋಜಿನಿ ಮಹಿಷಿ?

ಧಾರವಾಡದ ಶಿರಹಟ್ಟಿ ತಾಲೂಕಿನಲ್ಲಿ 1923ರ ಮಾರ್ಚ್ 3 ರಂದು ಬಿಂದುರಾವ್ ಮಹಿಷಿ ಹಾಗೂ ಕಮಲಾಬಾಯಿ ದಂಪತಿಗಳಿಗೆ ಜನಿಸಿದ ಸರೋಜಿನಿ ಮಹಿಷಿ, ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಧಾರವಾಡದಲ್ಲೇ ಪೂರ್ಣಗೊಳಿಸಿದರು. ನಂತರ ಸಾಂಗ್ಲಿಯ ಮಿಲಿಂಗಟನ್ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತ ವಿಷಯದಲ್ಲಿ ಬಿಎ ಪದವಿ ಪಡೆದರು. ಮುಂಬೈನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.

ಹೋಮಿಯೋಪತಿ, ನಿಸರ್ಗ ಚಿಕಿತ್ಸೆ ಕಲಿಕೆಗಾಗಿ ಬೆಳಗಾವಿಯ ಆರ್‌ಎಲ್ಎಸ್ ಕಾಲೇಜಿನಲ್ಲಿ ಎಲ್.ಎಲ್.ಟಿ ಅಧ್ಯಯನ ಮಾಡಿ 1955ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಮೊದಲ ರ್‍ಯಾಂಕ್‌ನಲ್ಲಿ ಕಾನೂನು ಪದವಿ ಪಡೆದರು. ಅಲ್ಲದೆ, ಧಾರವಾಡದ ಜನತಾ ಲಾ ಕಾಲೇಜಿನಲ್ಲಿ ಕಾನೂನು ಪ್ರಾಧ್ಯಾಪಕಿಯಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನಂತರ ವಕೀಲ ವೃತ್ತಿ ಪ್ರಾರಂಭಿಸಿ ಬಾರ್ ಕೌನ್ಸಿಲ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು. ನಾಲ್ಕು ಬಾರಿ ಧಾರವಾಡದ ಸಂಸದೆಯಾಗಿದ್ದ ಇವರು 2 ಅವಧಿಗೆ ರಾಜ್ಯಸಭೆಗೂ ಆಯ್ಕೆಯಾಗಿದ್ದಾರೆ. ಮಹಿಳೆಯರ ಸಬಲೀಕರಣದ ಕುರಿತಾಗಿ ಸಾಕಷ್ಟು ಕೆಲಸ ಮಾಡಿದ ಇವರು ಸದ್ದು ಮಾಡಿದ್ದು, ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದ್ದು ಸ್ಥಳೀಯರಿಗೆ ಉದ್ಯೋಗ ಎಂಬ “ಮಣ್ಣಿನ ಮಗ” ನೀತಿಯನ್ನು ಪ್ರತಿಪಾದಿಸುವ ಸರೋಜಿನಿ ಮಹಿಷಿ ವರದಿ ನೀಡಿದ ನಂತರವೇ.

ಅಂತಾದ್ದೇನಿದೆ ಈ ಸರೋಜಿನಿ ಮಹಿಷಿ ವರದಿಯಲ್ಲಿ?

ಮಿಶ್ರ ಆರ್ಥಿಕ ನೀತಿಯಿಂದ ಮಾತ್ರ ಭಾರತವನ್ನು ಅಭಿವೃದ್ಧಿ ಪಥದಲ್ಲಿ ನಡೆಸಲು ಸಾಧ್ಯ ಎಂಬ ಪರ್ಯಾಯ ಆರ್ಥಿಕ ವ್ಯವಸ್ಥೆಯ ಜಾರಿಗೆ ತುದಿಗಾಲಲ್ಲಿ ನಿಂತಿದ್ದ 90ರ ದಶಕವದು. ಪಿ. ವಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತಂದಿತ್ತು. ಆದರೆ, ಮಿಶ್ರ ಆರ್ಥಿಕತೆ ಇಂದು ಮೇಲ್ನೋಟಕ್ಕೆ ಒಂದೇ ರೀತಿ ಕಂಡು ಬಂದರೂ ಮುಕ್ತ ಹಾಗೂ ಮಿಶ್ರ ಆರ್ಥಿಕ ನೀತಿಯ ಮಧ್ಯೆ ಭಿನ್ನತೆ ಇದೆ.

ಸರ್ಕಾರದ ಭಾಗವಹಿಸುವಿಕೆ ಇಲ್ಲದೆ ಇಂದು ಖಾಸಗಿ ಕಂಪನಿ ದೇಶದ ಯಾವುದೇ ಮೂಲೆಯಲ್ಲಿ ತಮ್ಮ ವ್ಯವಹಾರವನ್ನು ಆರಂಭಿಸುವಷ್ಟು ಸ್ವಾತಂತ್ರ್ಯವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡಲಾಗಿದೆ. ಒಂದು ಕಂಪನಿ ಯಾವುದೇ ರಾಜ್ಯದಲ್ಲಿ ತನ್ನ ಕಾರ್ಯಚಟುವಟಿಕೆ ಆರಂಭಿಸಿದರೆ ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅಧಿಕಾರಿಗಳ ಆಜ್ಞೆಯನ್ನು ಪಾಲಿಸಬೇಕು.

ಆದರೆ, ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಸರ್ಕಾರವನ್ನೇ ನಿಯಂತ್ರಿಸಬಲ್ಲಷ್ಟು ಶಕ್ತಿ ಪಡೆದಿವೆ. ಇಲ್ಲಿ ಸರ್ಕಾರದ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹಾಗಾಗಿ ರಾಜ್ಯದ ಯುವಜನತೆ ಕೆಲಸವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಉದ್ಯೋಗ ಸೃಷ್ಠಿ ಹೊಸ ಆರ್ಥಿಕ ನೀತಿಯ ಮೊದಲ ಆದ್ಯತೆಯಾದರೂ ಸ್ಥಳೀಯರಿಗೆ ಮಣೆಹಾಕುವ ಯಾವುದೇ ನೀತಿ ಪ್ರಚಲಿತದಲ್ಲಿಲ್ಲ. ಇಂಗ್ಲೀಷ್ ಭಾಷೆ ಕಲಿತರೆ ಮಾತ್ರ ಇಲ್ಲಿನ ಐಟಿ-ಬಿಟಿ ಉದ್ಯಮಗಳಲ್ಲಿ ಕೆಲಸ ಪಡೆಯುವುದು ಸಾಧ್ಯ. ಹಾಗಾಗಿ ಪಾಲಕರು ತಮ್ಮ ಮಕ್ಕಳ ಭವಿಷ್ಯದ ಚಿಂತೆಯಿಂದ ಶಾಲಾ ದಿನಗಳಿಂದಲೇ ಇಂಗ್ಲೀಷ್ ಮಾಧ್ಯಮಕ್ಕೆ ಆದ್ಯತೆ ನೀಡುತ್ತಿದ್ದಾರೆ.

ಹಾಗಾಗಿ ಕನ್ನಡ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸದಲ್ಲಿ ಶೇ.5ರಷ್ಟು ಮೀಸಲು ಸೌಲಭ್ಯ ನೀಡಿದಂತೆ, ರಾಜಧಾನಿಯಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲೂ ಮೀಸಲಾತಿ ನೀಡಬೇಕು. ಕನ್ನಡ, ಯುವಜನರಿಗೆ ಉದ್ಯೋಗಾವಕಾಶ ಲಭಿಸಿದರೆ ಕನ್ನಡದಿಂದ ಅನ್ನ ಲಭಿಸಿದರೆ, ಸಾಮಾನ್ಯವಾಗಿ ಕನ್ನಡದ ಉಳಿವಿನ ಪ್ರಶ್ನೆ ತೆರೆಯ ಮರೆಗೆ ಸರಿಯಲಾರಂಭಿಸುತ್ತದೆ.

ಈ ನಿಟ್ಟಿನಲ್ಲಿ ಡಾ. ಸರೋಜಿನಿ ಮಹಿಷಿ ವರದಿ ಕರ್ನಾಟಕದ ಮಟ್ಟಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿಕೆಯಲ್ಲಿ ಆದ್ಯತೆ ಇರಬೇಕು. ಸರ್ಕಾರಿ ವಲಯದಲ್ಲಿ ಶೇ.90 ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೇ ನೀಡಬೇಕು. ಬಹುರಾಷ್ಟ್ರೀಯ ಮತ್ತು ಖಾಸಗಿ ಉದ್ದಿಮೆಗಳಲ್ಲೂ ಮೊದಲು ಶೇ.5 ರಷ್ಟು ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕೆಲಸ ನೀಡಬೇಕು ಎಂಬುದು ವರದಿಯ ಮುಖ್ಯಾಂಶಗಳು.

ಆನಂತರ ಇದು ಹಂತ ಹಂತವಾಗಿ ಶೇ.100ರಷ್ಟು ಕನ್ನಡಿಗರಿಗೆ ಅವಕಾಶ ನೀಡಬೇಕು ಎಂಬುದನ್ನೂ ಸೇರಿದಂತೆ ಡಾ. ಸರೋಜಿನಿ ಮಹಿಷಿ ಆಯೋಗ 1986ರಲ್ಲೇ 58 ಶಿಫಾರಸ್ಸುಗಳನ್ನೊಳಗೊಂಡ ಸಮಗ್ರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು.

ಅಂದಿನ ಸರ್ಕಾರ ಈ ವರದಿಯಲ್ಲಿನ 12 ಶಿಫಾರಸ್ಸುಗಳನ್ನು ತನಗೆ ಒಪ್ಪುವ ಅಧಿಕಾರವಲ್ಲವೆಂದು ಕೈಬಿಟ್ಟಿದ್ದು, ಉಳಿದ ಶಿಫಾರಸ್ಸುಗಳ ಅನುಷ್ಠಾನಕ್ಕೆ ತರಲು ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿತ್ತು. ಆದರೆ ಬಹುರಾಷ್ಟ್ರೀಯ/ಖಾಸಗಿ ಕಂಪನಿಗಳಲ್ಲಿ ಈ ಶಿಫಾರಸ್ಸನ್ನು ಪಾಲಿಸಬೇಕು, ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು ಎನ್ನುವ ಪ್ರಮುಖ ಶಿಫಾರಸಿಗೆ ಈವರೆಗೆ ಯಾವುದೇ ಸರ್ಕಾರ ಒಪ್ಪಿಗೆ ನೀಡಿಲ್ಲ.

ಪರಿಣಾಮ ಸರೋಜಿನಿ ಮಹಿಷಿ ಕನ್ನಡಿಗರಿಗೆ ಕನ್ನಡ ಅನ್ನದ ಪ್ರಶ್ನೆಯಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಸಲ್ಲಿಸಿದ ವರದಿ ಮೂರು ದಶಕಗಳಾದರೂ ಇಂದಿಗೂ ಜಾರಿಗೆ ಬರಲಿ ಎಂಬ ಕೂಗು ಕೇಳಿಬರುತ್ತಲೇ ಇದೆಯೇ ಹೊರತು, ಕಾರ್ಯರೂಪಕ್ಕೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಪರಿಣಾಮ ರಾಜ್ಯದ ಉದ್ಯೋಗಗಳು ಕನ್ನಡಿಗರಿಗೆ ಲಭ್ಯವಾಗದೆ ಅನ್ಯ ರಾಜ್ಯದವರ ಪಾಲಾಗುತ್ತಿದೆ.

ಒಂದೆಡೆ ನೆರೆಯ ತಮಿಳುನಾಡಿನಲ್ಲಿ ದಶಕದ ಹಿಂದೆಯೇ ಸರ್ಕಾರಿ ಕೆಲಸವನ್ನು ಶೇ.90 ರಷ್ಟು ಸ್ಥಳೀಯರಿಗೆ ನೀಡಬೇಕು ಎಂಬ ಕಾಯ್ದೆ ಚಾಲ್ತಿಯಲ್ಲಿದೆ. ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸರ್ಕಾರಿ ಹುದ್ದೆಗಳು ಸ್ಥಳೀಯರಿಗೆ ಮಾತ್ರ ಎಂಬ ಕಾನೂನನ್ನು ಜಾರಿಗೆ ತಂದಿದ್ದರು. ಆದರೆ, ಖಾಸಗಿ ಕಂಪೆನಿಗಳಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬ ಕುರಿತು ಯಾವ ರಾಜ್ಯದಲ್ಲೂ ಸ್ಪಷ್ಟ ಕಾನೂನು ಇಲ್ಲ. ಕೇಂದ್ರ ಸರ್ಕಾರ ಈ ಕುರಿತು ತಲೆ ಕೆಡಿಸಿಕೊಳ್ಳುವ ಗೋಜಿಗೂ ಹೋಗಿಲ್ಲ.

ಆದರೆ, ರಾಜ್ಯ ಮಟ್ಟದಲ್ಲಿ ಕರ್ನಾಟಕದಲ್ಲಿ ಈ ಹೋರಾಟಕ್ಕೆ ಜೀವ ತುಂಬಬೇಕಾದ ಕೆಲ ಕನ್ನಡಪರ ಸಂಘಟನೆಗಳೂ ಸಹ ಇದೀಗ ಹೋರಾಟದ ಕಣದಿಂದ ಹಿಂದೆ ಸರಿದಿರುವುದು ಭವಿಷ್ಯದ ಆತಂಕಕ್ಕೆ ಕಾರಣವಾಗಿದೆ. ಇವನ್ನೆಲ್ಲಾ ಗಮನಿಸಿದರೆ ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಒತ್ತಾಯಿಸಿ ಇನ್ನೂ ಹತ್ತಾರು ದಶಕಗಳ ನಂತರ ಹೋರಾಟ ನಡೆದರೂ ಅಚ್ಚರಿ ಇಲ್ಲ ಎಂದೆನಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಣಿಪುರ ಹಿಂಸಾಚಾರ: ಸೋರಿಕೆಯಾದ ಸಂಪೂರ್ಣ ಆಡಿಯೋ ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಿಲ್ಲ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2023ರ ಜನಾಂಗೀಯ ಹಿಂಸಾಚಾರದಲ್ಲಿ ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಪಾತ್ರವನ್ನು ಸೂಚಿಸಿರುವ ಅರ್ಜಿಯಲ್ಲಿ ಲಭ್ಯವಿರುವ ಸಂಪೂರ್ಣ ಸೋರಿಕೆಯಾದ ಆಡಿಯೋ ತುಣುಕುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಲಿಲ್ಲ ಎಂದು...

ಎಸ್‌ಐಆರ್‌ ಭಯಕ್ಕೆ ಮತ್ತೊಂದು ಬಲಿ: ಬಂಗಾಳದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ, ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಗೆ ಸಂಬಂಧಿಸಿದ ಭಯದಿಂದ ವೃದ್ಧನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತರನ್ನು ರಣಘಾಟ್‌ನ...

MGNREGA ಬದಲು VB-G Ram G : ರಾಜ್ಯಗಳ ಮೇಲೆ 40 ಶೇಕಡ ಆರ್ಥಿಕ ಹೊರೆ

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2005ರಲ್ಲಿ ಜಾರಿಗೆ ತಂದ ಮಹತ್ವಕಾಂಕ್ಷೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಮತ್ತು ಅದರಡಿ ರೂಪಿಸಲಾದ ನರೇಗಾ ಯೋಜನೆಯ ಹೆಸರನ್ನು ಬದಲಿಸಲು ಕೇಂದ್ರ...

ಕೇರಳ: ಕೊಲ್ಲಂ ಕಾರ್ಪೊರೇಷನ್‌ನಲ್ಲಿ 25 ವರ್ಷಗಳ ಎಲ್‌ಡಿಎಫ್‌ ಆಳ್ವಿಕೆ ಕೊನೆಗೊಳಿಸಿದ ಯುಡಿಎಫ್

2025 ರ ಕೇರಳ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳು ರಾಜ್ಯದಲ್ಲಿ ಅತ್ಯಂತ ಅಚ್ಚರಿಯ ರಾಜಕೀಯ ಫಲಿತಾಂಶಳನ್ನು ನೀಡಿವೆ. ಅದರಲ್ಲಿ, ಕೊಲ್ಲಂ ಕಾರ್ಪೊರೇಷನ್‌ನಲ್ಲಿ ಎಡಪಂಥೀಯ ಪ್ರಜಾಸತ್ತಾತ್ಮಕ ರಂಗದ ನಿರಂತರ 25 ವರ್ಷಗಳ ನಿಯಂತ್ರಣವನ್ನು ಯುನೈಟೆಡ್...

‘ಇಂಡಿಯಾ ಬಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ’: ಕಾಂಗ್ರೆಸ್‌ನ ‘ವೋಟ್ ಚೋರಿ’ ಅಭಿಯಾನದ ಬಗ್ಗೆ ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕಾಂಗ್ರೆಸ್‌ನ "ಮತ ಚೋರಿ" ಅಭಿಯಾನದಿಂದ ದೂರ ಉಳಿದಿದ್ದಾರೆ, ಈ ವಿಷಯವು ಒಟ್ಟಾರೆಯಾಗಿ ವಿರೋಧ ಪಕ್ಷದ ಇಂಡಿಯಾ ಬಣದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೋಮವಾರ...

ಇಂಡಿಗೋ ವಿಮಾನ ರದ್ದತಿಗೆ ಸಂಬಂಧಿಸಿದ ಪಿಐಎಲ್ ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್

ನೂರಾರು ಇಂಡಿಗೋ ವಿಮಾನಗಳ ರದ್ದತಿಗೆ ನ್ಯಾಯಾಂಗ ಹಸ್ತಕ್ಷೇಪ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸೋಮವಾರ ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಅರ್ಜಿದಾರರು ತಮ್ಮ ದೂರುಗಳೊಂದಿಗೆ ದೆಹಲಿ ಹೈಕೋರ್ಟ್ ಅನ್ನು...

ಹಣ ಅಕ್ರಮ ವರ್ಗಾವಣೆ ಪ್ರಕರಣ : ಪತ್ರಕರ್ತ ಮಹೇಶ್ ಲಾಂಗಾಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು

ವಂಚನೆ ಆರೋಪದ ಮೇಲೆ ದಾಖಲಾಗಿರುವ ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪತ್ರಕರ್ತ ಮಹೇಶ್ ಲಾಂಗಾ ಅವರಿಗೆ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ (ಡಿ.15) ಮಧ್ಯಂತರ ಜಾಮೀನು ನೀಡಿದೆ. ಜಿಎಸ್‌ಟಿ ವಂಚನೆ...

‘ಮಹಿಳೆಯರು ಗಂಡಂದಿರ ಜೊತೆ ಮಲಗಲು ಮಾತ್ರ’: ಸಿಪಿಎಂ ನಾಯಕನ ಅಸೂಕ್ಷ್ಮ ಹೇಳಿಕೆಗೆ ವ್ಯಾಪಕ ಆಕ್ರೋಶ

ಮಲಪ್ಪುರಂ ಜಿಲ್ಲೆಯಲ್ಲಿ ಸಿಪಿಎಂ ಪ್ರಾದೇಶಿಕ ನಾಯಕ ಸಯೀದ್ ಅಲಿ ಮಜೀದ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವಾಗ ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡಿದ ನಂತರ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.  ಸಯೀದ್ ಅಲಿ ಮಜೀದ್, ತೆನ್ನೆಲಾ ಪಂಚಾಯತ್ ವಾರ್ಡ್ ಅನ್ನು...

ಅಖ್ಲಾಕ್ ಹತ್ಯೆ ಪ್ರಕರಣ ಹಿಂತೆಗೆದುಕೊಳ್ಳುವುದು ನ್ಯಾಯಾಂಗ ಪ್ರಕ್ರಿಯೆ ಹಳಿತಪ್ಪಿಸುವ ಪ್ರಯತ್ನ: ಬೃಂದಾ ಕಾರಟ್

ರಾಜ್ಯಪಾಲರ ಅನುಮತಿಯೊಂದಿಗೆ ಮೊಹಮ್ಮದ್ ಅಖ್ಲಾಕ್ ಅವರ ಕೊಲೆ ಮತ್ತು ಗುಂಪು ಹತ್ಯೆಗೆ ಸಂಬಂಧಿಸಿದ ಪ್ರಕರಣವನ್ನು ಹಿಂತೆಗೆದುಕೊಳ್ಳುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರ ಖಂಡಿಸಿ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಹಿರಿಯ ನಾಯಕಿ ಬೃಂದಾ ಕಾರಟ್...

ಮತ್ತೆ ಮುನ್ನೆಲೆಗೆ ಬಂದ ‘Avalkoppam’: ದಿಲೀಪ್ ಖುಲಾಸೆ ಬಳಿಕ ಕೇರಳದಾದ್ಯಂತ ಪ್ರತಿಭಟನೆ

ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿರುವ ನ್ಯಾಯಾಲಯದ ತೀರ್ಪಿಗೆ ಕೇರಳದಾದ್ಯಂತ ದೊಡ್ಡ ಮಟ್ಟದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. 2017ರಲ್ಲಿ ನಟಿ ಮೇಲೆ ದೌರ್ಜನ್ಯ ನಡೆದಾಗ...