ವಾಣಿಜ್ಯ, ಶೈಕ್ಷಣಿಕ, ಬ್ಯಾಂಕಿಂಗ್, ಪ್ರವಾಸೋದ್ಯಮಗಳ ಸಮುದ್ರ ನಗರಿ ಮಂಗಳೂರು ಸಂಘಪರಿವಾರದ ಅನೈತಿಕ, ಅಸಂವಿಧಾನಿಕ ಚಟುವಟಿಕೆಗಳಿಂದ ತತ್ತರಿಸಿ ಹೋಗಿದೆ. ಇಡೀ ಜಿಲ್ಲೆಯಲ್ಲಿ ಮೋರಲ್ ಪೊಲೀಸಿಂಗ್ ಮಿತಿಮೀರಿ ಹೋಗಿದ್ದು, ಹಿಂದುತ್ವದ ಹೆಸರಲ್ಲಿ ದುಷ್ಕರ್ಮಿಗಳು ಆಟಾಟೋಪ ಮುಂದುವರಿಸಿದ್ದು, ಅಭಿವೃದ್ಧಿ ಮತ್ತು ಮಾನವೀಯತೆ ಸವಾಲಾಗಿ ನಿಂತಿದೆ.
2021ರ ಜನವರಿಯಿಂದ ಇಲ್ಲಿಯವರೆಗೆ 12 ‘ಮೋರಲ್ ಪೊಲೀಸಿಂಗ್’ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಕಳೆದ ಭಾನುವಾರ ಸಂಜೆ ಸುರತ್ಕಲ್ ಟೋಲ್ ಗೇಟ್ ಬಳಿ ವೈದ್ಯಕೀಯ ವಿಧ್ಯಾರ್ಥಿಗಳ ಮೇಲೆ ಬಜರಂಗದಳದವರು ನಡೆಸಿದ ಅಮಾನವೀಯ ದಾಳಿಯು, ಲಾಕ್ ಡೌನ್ ತೆರವಿನ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಘಟಿಸಿದ ನಾಲ್ಕನೇ ‘ಮೋರಲ್ ಪೊಲೀಸಿಂಗ್’ ಪ್ರಕರಣವಾಗಿದೆ.
ಭಾನುವಾರ ಮಂಗಳೂರಿನ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಮತ್ತು ಓರ್ವ ವಿದ್ಯಾರ್ಥಿನಿ ಇದ್ದ ಜೀಪನ್ನು ತಡೆದು ನಿಲ್ಲಿಸಿದ್ದ ಬಜರಂಗ ದಳದ ಜಿಲ್ಲಾ ಪ್ರಮುಖನೆನ್ನಲಾದ ಪ್ರೀತಮ್ ಶೆಟ್ಟಿ, ಸುರತ್ಕಲ್ ಬಜರಂಗದಳದ ಮುಂದಾಳು ಆರ್ಶಿತ್, ಶ್ರೀನಿವಾಸ್, ರಾಕೇಶ್, ಅಭಿಷೇಕ್ ಎಂಬವರ ತಂಡ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದೆ.
ಇದನ್ನೂ ಓದಿರಿ: ಬಜರಂಗದಳದ ‘ಮೋರಲ್ ಪೊಲೀಸಿಂಗ್’ ಅನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕಿಗೆ ಬಹಿರಂಗ ಬೆದರಿಕೆ
ಈ ಪ್ರಕರಣದಲ್ಲಿ ಐವರು ಹಲ್ಲೆಕೋರರನ್ನು ಬಂಧಿಸಲಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರ ಕಣ್ಣೆದುರೆ ದಾಂಧಲೆಯಾಗಿದ್ದರೂ ಆ ಪೊಲೀಸ್ ಅಧಿಕಾರಿ ಹಲ್ಲೆ ತಡೆದಿದ್ದರೂ ಆರೋಪಿಗಳನ್ನು ಬಂಧಿಸಲು ಮೀನಮೇ಼ಷ ಎಣಿಸಿದ್ದರು. ಭಜರಂಗ ದಳದವರು ತಾವು ಸುರತ್ಕಲ್ ಟೋಲ್ ಗೇಟ್ನಲ್ಲಿ ಮಾಡಿದ್ದ ‘ಧರ್ಮ ರಕ್ಷಣೆ’ ಹೆಸರಿನ ದುಷ್ಕೃತ್ಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಾಗ ವೈರಲ್ ಆಯಿತು. ಆಗ ಅನಿವಾರ್ಯವಾಗಿ ಆರೋಪಿಗಳನ್ನು ದಸ್ತಗಿರಿ ಮಾಡಲಾಯಿತು. ಅಂದರೆ ಆರೋಪಿಗಳು ಕಣ್ಣೆದುರಿದ್ದರೂ ಸೋಮವಾರ ಸಂಜೆಯ ವರೆಗೆ ಬಂಧನವಾಗಿರಲಿಲ್ಲ. ಆಳುವ ಬಿಜೆಪಿಯ ಬೆಂಬಲಿತ ಸಂಘಟನೆಗೆ ಆರೋಪಿಗಳು ಸೇರಿದ್ದರಿಂದ ಪೊಲೀಸರು ಕೈಕಟ್ಟಿ ಕೂತಿದ್ದರು ಎಂಬುದು ಬಹಿರಂಗ ರಹಸ್ಯ! ಸ್ವಯಂ ಪ್ರೇರಣೆಯಿಂದ ಕೇಸು ದಾಖಲಿಸಬೇಕಿದ್ದ ಸುರತ್ಕಲ್ ಪೊಲೀಸರು ಹಲ್ಲೆಗೀಡಾದ ವಿದ್ಯಾರ್ಥಿಯಿಂದ ದೂರು ಪಡೆದ ನಂತರವೇ ಬಂಧನದ ಪ್ರಹಸನ ಮಾಡಿದ್ದಾರೆ ಎಂದು ‘ಮೋರಲ್ ಪೊಲಿಸಿಂಗ್’ನ ಆತಂಕಗಳನ್ನು ಎದುರಿಸುತ್ತಿರುವ ಮಂಗಳೂರಿನ ಜನರು ಹೇಳುತ್ತಾರೆ.

ಸೆಪ್ಟೆಂಬರ್ನಲ್ಲಿ ಪುತ್ತೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ನಲ್ಲಿ ಸ್ಥಳೀಯ ಮುಸ್ಲಿಮ್ ಹುಡುಗ ಮತ್ತು ಬೆಂಗಳೂರು ಮೂಲದ ಇಬ್ಬರು ಮಹಿಳೆಯರು ಮಾತನಾಡಿದರೆಂಬ ಕಾರಣಕ್ಕೆ ಸಂಘ ಪರಿವಾರದ ಸಂಘಟನೆಯವರು ರಂಪಾಟ ಎಬ್ಬಿಸಿ ಹಲ್ಲೆ ಮಾಡಿದ್ದರು. ಇದರ ಬೆನ್ನಿಗೆ ಬಂಟ್ವಾಳದಲ್ಲಿ ಆರು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಮೇಲೆ ಐವರು ಭಜರಂಗದಳದವರು ದಾಳಿ ನಡೆಸಿದ್ದರು. ಕಾರಿಂಜ ದೇವಾಲಯಕ್ಕೆ ಮುಸ್ಲಿಮ್ ಗೆಳೆಯರೊಂದಿಗೆ ಹಿಂದೂ ಹುಡುಗರು ಹೋಗಿದ್ದೇ ಅಪರಾಧವಾಗಿತ್ತು. ಈ ಘಟನೆಯಲ್ಲಿ ಮೂವರನ್ನು ಬಂಧಿಸಲಾಗಿದೆ.
ಹಿಂದುತ್ವದ ಹೆಸರಲ್ಲಿ ನಡೆಯುತ್ತಿರುವ ಅತಿರೇಕದ ಘಟನೆಗಳ ಸೂತ್ರಧಾರರು ಕ್ರಿಮಿನಲ್ ಆರೋಪ ಹೊತ್ತವರೆಂಬುದು ಗಮನಾರ್ಹ ಸಂಗತಿಯಾಗಿದೆ. ಈ ಭಯ ಹುಟ್ಟಿಸುವ ಸರಣಿ ಪ್ರಕರಣಗಳು ದಕ್ಷಿಣ ಕನ್ನಡದ ಸಾಮಾಜಿಕ ಬದುಕು, ವಾಣಿಜ್ಯ ವಹಿವಾಟು ಮತ್ತು ಪ್ರವಸೋದ್ಯಮಕ್ಕೆ ಗಂಡಾಂತರಕಾರಿಯಾಗಿವೆ. ಹೊರಗಿನ ಉದ್ಯಮಿಗಳು, ಪ್ರವಾಸಿಗರು ಜಿಲ್ಲೆಗೆ ಬರಲು ಹತ್ತು ಬಾರಿ ಯೋಚಿಸಬೇಕಾದ ಸ್ಥಿತಿ ಎದುರಾಗಿದೆ. ಮೋರಲ್ ಪೋಲಿಸಿಂಗ್ ಅಂತರ್ ರಾಜ್ಯ ಮತ್ತು ಅಂತರ್ ರಾಷ್ಟ್ರೀಯ ಹೂಡಿಕೆದಾರರನ್ನು ಹಿಮ್ಮೆಟ್ಟಿಸುತ್ತಿವೆ. ಈ ಅಸಂವಿಧಾನಿಕ ಘಟನೆಗಳಿಗೆ ಕಡಿವಾಣಹಾಕಬೇಕಿದ್ದ ಜಿಲ್ಲಾಡಳಿತ ಮತ್ತು ಪೊಲೀಸ್ ವ್ಯವಸ್ಥೆಯ ವೈಫಲ್ಯ ಎದ್ದು ಕಾಣುತ್ತಿದೆ.
– ಶುದ್ದೋಧನ
ಇದನ್ನೂ ಓದಿರಿ: ಮಂಗಳೂರಿನಲ್ಲಿ ಮತ್ತೆ ‘ಮಾರಲ್ ಪೊಲೀಸಿಂಗ್’ – ಬಜರಂಗದಳ ಕಾರ್ಯಕರ್ತರ ಬಂಧನ


