ಭಾರತ ತನ್ನೆಲ್ಲಾ ಬಗೆಹರಿಸಲಾಗದ ಸಮಸ್ಯೆಗಳ ನಡುವೆ ತೊಳಲಾಡುತ್ತಲೇ ಜನಸಂಖ್ಯೆಯಲ್ಲಿ ಜಗತ್ತನ್ನೇ ಮೀರಿಸಿದೆಯಂತಲ್ಲಾ. ಇಷ್ಟೆಲ್ಲಾ ವಿಚ್ಛೇದನಗಳು, ಸಂತಾನಹರಣ ಸಾಮಗ್ರಿಗಳು, ಸಂತಾನ ನಿಯಂತ್ರಣ ನಿಯಮಗಳಿದ್ದರೂ, ಚೀನಾ ಎಂಬ ಜೀವ ಸೃಷ್ಟಿ ಕಾರ್ಖಾನೆಯನ್ನು ಮೀರಿಸಿ ಮುನ್ನಡೆದಿರುವುದು ಭಾರತದ ಬಡವರ ದಿಗ್ವಿಜಯವೇ ಸರಿ. ಇದ್ದಕ್ಕಿದ್ದಂತೆ ಆಕಾಶದಿಂದ ಉದುರಿದಂತೆ ಮಕ್ಕಳು ಹೆಚ್ಚಾಗಲು ಕಾರಣ ಕೊರೊನಾ ಸಮಯದಲ್ಲಿ ಹೊರಹೋಗದಂತೆ ತಿಂಗಳುಗಟ್ಟಲೆ ಸರಕಾರ ಜನರನ್ನ ಮನೆಯಲ್ಲಿ ಕೂಡಿಹಾಕಿದ್ದೇ ಕಾರಣವೆಂದು ಹಳ್ಳಿಗರ ವಾದವಾಗಿದೆಯಲ್ಲಾ. ಕೆಲಸ ಇರಲಿ ಇಲ್ಲದಿರಲಿ ದಿನವಿಡಿ ನಾಯಿಯಂತೆ ಅಲೆದು ಬರುತ್ತಿದ್ದ ಗಂಡಸರು ಏನೋ ಕಡಿದು ಕಟ್ಟೆಹಾಕಿ ಬಂದವರಂತೆ ಮಲಗಿಬಿಡುತ್ತಿದ್ದರು. ಆದರೆ ಕೊರೊನಾ ಕಾಲದಲ್ಲಿ ಮನೆಯಲ್ಲೇ ಬಂದಿಯಾದ ಅವರಿಗೆ ಹೆಂಡತಿ ಪ್ರೀತಿಯಿಂದ ಗರ್ಮಿ ಪದಾರ್ಥಗಳನ್ನ ಹುರಿದು ಕರಿದು ಕೊಟ್ಟ ಕಾರಣಕ್ಕೆ ಗರ್ಭ ಕುದುರಿತೆಂದು ಹಳ್ಳಿಗರು ಹಾಸ್ಯ ಮಾಡುತ್ತಿದ್ದಾರಲ್ಲಾ. ಈ ಸಮಯದಲ್ಲಿ ನಡೆದುಹೋದ ಇನ್ನೆಂದು ಅನಾಹುತ ಯಾರ ಗಮನಕ್ಕೆ ಬಂದಿಲ್ಲ. ಅದೇನೆಂದರೆ ಮನೆಯಲ್ಲಿದ್ದ ಗೃಹಿಣಿಯರು ಮೂರು ಹೊತ್ತು ಪ್ರಸಾರವಾಗುವ ಮಂಗಳಗೌರಿ ಮದುವೆ, ದೊರೆಸಾನಿ, ನಾಗಿಣಿ, ಕನ್ನಡತಿ, ಗೀತಾ, ಗಿಣಿರಾಮ ಧಾರಾವಾಹಿಗಳನ್ನ ಗಂಡಂದಿರೂ ನೋಡುವಂತೆ ಮಾಡಿದರಂತಲ್ಲಾ, ಥೂತ್ತೇರಿ.
*****
ಆರೆಸ್ಸೆಸಿಗರು ಮೀಸಲಾತಿ ವಿರೋಧಿಗಳು. ಅವರ ಮನುಧರ್ಮಶಾಸ್ತ್ರದಲ್ಲಿ ಮೀಸಲಾತಿಯಿಲ್ಲವಂತಲ್ಲಾ. ಅವರ ಪ್ರಕಾರ ಶ್ರೇಣೀಕೃತ ಸಮಾಜದ ಜೀವಿಗಳು ತಮ್ಮತಮ್ಮ ಆವರಣದಲ್ಲಿ ನಿಂತು ಅಲ್ಲಿಯೇ ಅಭಿವೃದ್ಧಿ ಕಾಣಬೇಕು. ಅಂದರೆ ದೋಭಿ ತನಗೆ ಧರ್ಮ ನಿಗದಿಪಡಿಸಿದ ಕೆಲಸದಲ್ಲಿ ಭಗವಂತನನ್ನ ಕಾಣಬೇಕು. ಇನ್ನ ಜಲಗಾರ, ಮಡಿವಾಳ, ಕ್ಷೌರಿಕ, ಕುರಿಗಾಯಿ, ದನಗಾಯಿ ಹೀಗೆ ಸಕಲೆಂಟು ಜಾತಿಗಳು ತಮ್ಮತಮ್ಮ ಆವರಣದಲ್ಲಿ ಧೃಢವಾಗಿ ನಿಂತು ತಮ್ಮ ಕರ್ತವ್ಯ ಮಾಡಬೇಕು. ಇದು ನಮ್ಮ ಧರ್ಮದ ನಿಯಮ. ಇದನ್ನ ಒಪ್ಪಿದ ನಮ್ಮ ಕನ್ನಡದ ಶ್ರೇಷ್ಠ ಕತೆಗಾರ ಮಾಸ್ತಿಯವರೂ ಇದನ್ನು ಪ್ರತಿಪಾದಿಸಿದರು. ಇನ್ನು ಆ ತುದಿಯಲ್ಲಿ ನ್ಯಾಯಾಂಗದ ಉನ್ನತ ಸ್ಥಾನ ಅಲಂಕರಿಸಿ ಬಂದ ರಾಮಾಜೋಯಿಸರು ಕೂಡ ಇದನ್ನೇ ಪ್ರತಿವಾದಿಸಿದ್ದಲ್ಲದೆ, ಮೀಸಲಾತಿ ಕೊಡಕೂಡದೆಂಬ ಅರ್ಜಿಯನ್ನು ಸುಪ್ರೀಂಕೊರ್ಟಿಗೆ ಕೊಟ್ಟಿದ್ದರು. ಇವರೇ ಜಡ್ಜ್ ಆಗಿ ಅಂತಹ ಅರ್ಜಿ ಬಂದಿದ್ದರೆ, ಅನಾಮತ್ತು ಅಂಗೀಕರಿಸಿ ಆಜ್ಞೆ ಮಾಡುತ್ತಿದ್ದರೇನೋ! ಆದರೆ ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿದ್ದ ಜಡ್ಜ್ ಸಾಹೇಬರು ಈ ರಾಮಾಜೋಯಿಸರ ಅರ್ಜಿಯನ್ನ ನೋಡಿ ಹುಸಿನಕ್ಕು ತಿರಸ್ಕರಿಸಿದರು. ನಾನೂ ಒಬ್ಬ ಜಡ್ಜ್ ಆಗಿದ್ದು ನನ್ನ ಆರ್ಜಿಯನ್ನ ನನಗಿಂತ ಕಿರಿಯರಿಂದ ತಿರಸ್ಕರಿಸಲ್ಪಟ್ಟಿತಲ್ಲಾ ಎಂದು ನೊಂದುಕೊಂಡರಂತೆ ರಾಮಾಜೋಯಿಸರು. ಈಗ ಮೇಲ್ಜಾತಿಗಳಿಗೆ ಅದರಲ್ಲಿ ಬ್ರಾಹ್ಮಣರಿಗೆ ಉಪಯೋಗವಾಗುವ ಹತ್ತು ಪರಸೆಂಟ್ ಮೀಸಲಾತಿ ತಂದಿರುವುದು ಚಡ್ಡಿಗಳಿಗೆ ತಡೆಯಲಾರದ ಸಂತೋಷವಾಗಿದೆಯಂತಲ್ಲಾ, ಥೂತ್ತೇರಿ.
******
ಹತ್ತು ಪರಸೆಂಟ್ ಮೀಸಲಾತಿ ಹೇಗೆ ಸಂವಿಧಾನದ ಆಶಯಕ್ಕೆ ಧಕ್ಕೆಯಾಗಿದೆ ಎಂಬ ದೇವನೂರರ ವಿವರಣೆಯಿಂದ ಆರೆಸ್ಸಿಸಿಗರ ಬಾಲಕ್ಕೆ ಬೆಂಕಿ ಬಿದ್ದಿದೆಯಂತಲ್ಲಾ. ಅವುಗಳು ಹತ್ತು ಪರಸೆಂಟಿನ ಫಲಾನುಭವಿಗಳು ಯಾರು ಎಂಬ ಬಗ್ಗೆ ವಿವರ ಕೊಡಲಾಗಿ ಈ ವಿವರವೂ ಸಮತೂಕದಲ್ಲಿ ಸಮಂಜಸವಾಗಿದೆ ಎಂದು ಕವಿ ಚಂದ್ರಶೇಖರ ತಾಳ್ಯ ವಕಾಲತ್ತು ವಹಿಸಿದ್ದಾರಲ್ಲಾ. ಕವಿ ಮನಸ್ಸು ಆರೋಗ್ಯವಾಗಿರಬೇಕು. ಯಾವುದೇ ಕೆಲಸ ಅಥವಾ ಮಾತುಕತೆಯಲ್ಲಿ ತಮ್ಮ ಅಜೆಂಡಾಗಳ ಸಂಚನ್ನೇ ಹೂಡುವ ಪುರೋಹಿತರನ್ನು ಸರಿಯಾಗಿ ಅರಿಯಬೇಕು. ಮೀಸಲಾತಿ ವಿರೋಧಿಗಳು ಹತ್ತು ಪರಸೆಂಟನ್ನ ಪ್ರತಿವಾದಿಸಿ ಸಂಭ್ರಮಿಸುವುದರ ಹಿಂದಿನ ಹಿಕಮತ್ತು ಅರಿವಾಗಬೇಕು. ಈ ನಮ್ಮ ದೇಶದಲ್ಲಿ ಅಸಾಧ್ಯವಾದ ಯಾವುದೇ ಅಕ್ರಮವಿಲ್ಲ. ಆದ್ದರಿಂದ ಹತ್ತು ಪರಸೆಂಟು ಯಾರ ಮೀಸಲಾಗುತ್ತದೆಂದು ಅರಿಯಬೇಕಿತ್ತು. ಇಲ್ಲಿ ಜಾತಿ ಕಾರಣಕ್ಕೆ ಬಡವರಾದವರು ದರಿದ್ರರಾದರು ಮತ್ತು ಇಂದು ಕೂಡ ಅಸ್ಪೃಶ್ಯತೆಗೆ ತುತ್ತಾದವರು. ಇದು ಕವಿಗೆ ಕಾಣಬೇಕಿತ್ತು. ಸಾಮಾಜಿಕವಾಗಿ ಮೇಲ್ವರ್ಗದಲ್ಲಿದ್ದು ಬಡವನಾದವನ ಬಡತನ ಎಂತಹದ್ದು ಎಂಬುದನ್ನ ಗ್ರಹಿಸಬೇಕಿತ್ತು. ಸಾವಿರಾರು ವರ್ಷದಿಂದ ಬಡ ಬ್ರಾಹ್ಮಣ ಎಂಬ ಹಣೆಪಟ್ಟಿ ಅಂಟಿಸಿಕೊಂಡು ನಿಜವಾದ ಬಡವವರಿಗೆ ಬಳಸಲು ಪದವೇ ಇಲ್ಲದಂತೆ ಮಾಡಿರುವವರ ಸಂಚು ತಾಳ್ಯರಿಗೆ ತಿಳಿಯಬೇಕಿತ್ತಲ್ಲಾ, ಥೂತ್ತೇರಿ.
*******
ನಮ್ಮ ದೇಶದ ಲಾಂಛನವಾದ ಚತುರ್ಮುಖ ಸಿಂಹ ಈವರೆಗೆ ಧೀರಗಂಭೀರವಾಗಿ ದೇಶದ ಬಗ್ಗೆ ಯೋಚಿಸುವಂತೆ ಕಾಣುತಿತ್ತು. ಇದನ್ನ ಸಹಿಸಲಾಗದ ಮೋದಿಪಡೆ ಸಿಂಹ ವೈರಿ ಕಂಡಂತೆ ಘರ್ಜಿಸುವ ಮುಖಭಾವ ತಯಾರಿಸಿ ಹೊಸ ಪಾರ್ಲಿಮೆಂಟಿನ ಮೇಲೆ ಪ್ರತಿಷ್ಠಾಪಿದವಂತಲ್ಲಾ. ಈ ಮಹಾಕಾರ್ಯಕ್ಕೆ ವಿರೋಧ ಪಕ್ಷದ ಯಾರನ್ನೂ ಕರೆಯದೆ ಪ್ರಧಾನಿ ಸ್ವತಃ ತಾವೆ ಉದ್ಘಾಟಿಸಿ, ಕೆಳಗಿಳಿದು ಯಾವುದೋ ಪುರೋಹಿತ ಕೊಟ್ಟ ಕಾರ್ಯಕ್ರಮ ಹುಡುಕುತ್ತ ಹೋದರಂತಲ್ಲಾ. ಬಿ.ಜೆ.ಪಿಗಳು ಸಿಂಹಕ್ಕೆ ಸಿಟ್ಟುಬರಿಸುವ ಮುಖ ಮಾಡಿದ್ದು ಹೊಸದೇನಲ್ಲ. ಲಕ್ಷ್ಮಣ ಸೀತೆ ಮತ್ತು ಆಂಜನೇಯರೊಡಗೂಡಿ ಪುರುಷೋತ್ತಮನಂತೆ ನಿಂತಿದ್ದ ರಾಮನನ್ನ ಆ ಪಟದಿಂದ ಬೇರ್ಪಡಿಸಿ ಬಿಲ್ಲು ಬಾಣಗಳೊಡನೆ ಯುದ್ಧಕ್ಕೆ ನಿಂತ ಭಂಗಿ ರೂಪಿಸಿ ಸರ್ಕಲ್ಲುಗಳಲ್ಲಿ ನಿಲ್ಲಿಸಿ ಆಗಲೇ ಎರಡು ದಶಕವಾಯಿತು. ಅದು ಅಡ್ವಾನಿಯ ಕಾಲ. ಈ ಮೋದಿ ಕಾಲದಲ್ಲಿ ಕರ್ತವ್ಯ ಪ್ರಜ್ಞೆ, ಭಕ್ತಿ ವಿಧೇಯತೆ ಮತ್ತು ಅಸಾಮಾನ್ಯ ಸಂಗೀತದ ಪ್ರತೀಕವಾಗಿದ್ದ ಆಂಜನೇಯನನ್ನ ಶ್ರೀರಾಮನ ಪದತಲದಿಂದೆಳೆದು ವಾಘಾ ಗಡಿಯ ಕೆರಳಿದ ಸೈನಿಕನನ್ನಾಗಿ ಮಾಡಿ ದಶಕವೇ ಆಯ್ತು. ಈಗ ಎಲ್ಲಿ ನೋಡಿದರೂ ಕೆರಳಿದ ಒಂದು ರೀತಿ ನರಸಿಂಹನಂತೆ ಕಾಣುವ ಆಂಜನೇಯನ ಚಿತ್ರವನ್ನ ನೋಡುತ್ತಿದ್ದೇವೆ. ಬರಲಿರುವ ದಿನಗಳಲ್ಲಿ ನಮ್ಮ ಪುರಾಣದ ವ್ಯಕ್ತಿಗಳು ಈ ಬಿ.ಜೆ.ಪಿಗಳ ಕೈಗೆ ಸಿಕ್ಕಿ ಇನ್ನ ಯಾವ್ಯಾವ ಆಯುಧ ಹಿಡಿದುಕೊಂಡು ಕೆಕ್ಕರಿಸಿ ನೋಡುತ್ತವೋ ಏನೋ ಎಂಬಂತಾಗಿದೆಯಲ್ಲಾ, ಥೂತ್ತೇರಿ.
*******
ಬಿ.ಜೆ.ಪಿಗಳು ಆಂಜನೇಯನಿಗೇ ಅಂಟಿಕೊಳ್ಳಲು ಪ್ರಬಲ ಕಾರಣವಿದೆ. ಲಂಕಾಪಟ್ಟಣದ ಅಶೋಕವನದಲ್ಲಿ ಶೋಕಸಾಗರದಲ್ಲಿ ಕುಳಿತಿರುವ ಸೀತಾದೇವಿಯನ್ನ ಕಂಡು ’ರಾಮ ಬಂದು ಕರೆದುಕೊಂಡು ಹೋಗುತ್ತಾನೆಂದು ಧೈರ್ಯ ಹೇಳಿ ಬಾ’ ಎಂದು ಶ್ರೀರಾಮಚಂದ್ರ ಆಂಜನೇಯನನ್ನು ಕಳಿಸಿದನಂತೆ. ಆಗ ಆಂಜನೇಯ ಸೀತೆ ನನ್ನನ್ನು ನೋಡಿ ನಂಬದೇಹೋದರೆ ಏನುಮಾಡಬೇಕೆಂದು ಕೇಳಿದಾಗ ರಾಮ ಮುದ್ರೆಯುಂಗುರ ಕೊಟ್ಟು ಕಳಿಸಿದನಂತೆ. ಅದನ್ನು ತೆಗೆದುಕೊಂಡು ಹಾರಿಹೋದ ಹನುಮ ರಾಮ ಹೇಳಿದ ಕೆಲಸ ಮಾಡುವುದರ ಜೊತೆಗೆ ಲಂಕೆಗೆ ಬೆಂಕಿಯಿಟ್ಟು ಬಂದನಂತೆ. ರಾವಣನ ಕಡೆಯವರೇನೋ ಆಂಜನೇಯನ ಬಾಲಕ್ಕೆ ಬೆಂಕಿಹಚ್ಚಿದರು ಸರಿ. ಆದರೆ ಆಂಜನೇಯ ಜವಾಬ್ದಾರಿಯುತನಾಗಿದ್ದರೆ ಬೆಂಕಿ ನಂದಿಸಿಕೊಂಡು ಬರಬೇಕಿತ್ತು. ಅದು ಬಿಟ್ಟು ಲಂಕೆಗೇ ಬೇಂಕಿ ಹಚ್ಚಿದ. ಅಲ್ಲಿ ಮಕ್ಕಳಿದ್ದರು, ಮುದುಕರಿದ್ದರು, ಗರ್ಭಿಣಿಯರಿದ್ದರು. ಊರುಬಿಟ್ಟು ಓಡಲಾರದ ಅಶಕ್ತ ಅಸಹಾಯಕರಿದ್ದರು. ಇವರಿಗೂ ರಾವಣ ಹೊತ್ತು ತಂದ ಸೀತೆಗೂ ಯಾವ ಸಂಬಂಧವೂ ಇರಲಿಲ್ಲ. ಅದೇನಾದರಾಗಲಿ ಯಾವುದೇ ವಿವೇಚನೆಯಿಲ್ಲದೆ ತಾವು ಹೇಳಿದ ಕೇರಿಗೆ ಬೆಂಕಿ ಹಚ್ಚುವ ವ್ಯಕ್ತಿಗಳು ಬಿ.ಜೆ.ಪಿಗಳಿಗೆ ಸಿಕ್ಕಿವೆ. ಈ ವಾನರ ಸೇನೆಗೆ ಒಬ್ಬ ದೈವ ಬೇಕಿತ್ತು. ಅದಕ್ಕಾಗಿ ಆಂಜನೇಯನೇ ಸೂಕ್ತವೆಂದು ಮುಗ್ಧ ಆಂಜನೇಯನಿಗೆ ವ್ಯಗ್ರರೂಪಕೊಟ್ಟು ಮೆರೆಸುತ್ತಿದ್ದಾರಂತಲ್ಲಾ, ಥೂತ್ತೇರಿ.
– ಯಾಹೂ
ಕೊಲೆ ಮಾಡ್ತಿರೋದು SDPI,PFI . ಬಲಿ ಆಗ್ತಿರೋದು ಹಿಂದೂಗಳು ,ಆದರೂ ಇದಕ್ಕೆ ಹೊಣೆ ಹಿಂದೂ ಸಂಘಟನೆ , ಈ ಪತ್ರಿಕೆ ಸಂಪಾದಕ ಹೊಟ್ಟೆಗೆ ಎಂದೂ ಊಟ ತಿನ್ನಲ್ಲಾ ಅನಿಸುತ್ತೇ ಹಂದಿಗಳ ಲದ್ದಿ ಬಿಟ್ಟು ,ತೂ …..