Homeಚಳವಳಿಲಾಕ್‌ ಡೌನ್‌ ಕಾಲದಲ್ಲಿ ದೋಣಕುಪ್ಪೆ: ಲೋಕೇಶ್‌ ಬರೆದ ಸ್ವಾರಸ್ಯಕರ ವಿಷಾದಗೀತೆ

ಲಾಕ್‌ ಡೌನ್‌ ಕಾಲದಲ್ಲಿ ದೋಣಕುಪ್ಪೆ: ಲೋಕೇಶ್‌ ಬರೆದ ಸ್ವಾರಸ್ಯಕರ ವಿಷಾದಗೀತೆ

ಲಾಕ್‌ ಡೌನ್‌ ಕಾಲದಲ್ಲಿ ನಗರಗಳೇ ಎಲ್ಲರ ಗಮನ ಸೆಳೆದಿದ್ದವು. ಆದರೆ ಇದೇ ಹೊತ್ತಿನಲ್ಲಿ ನಗರಗಳಲ್ಲಿರುವವರೂ ಹೋಗಲು ಬಯಸುತ್ತಿದ್ದ ಹಳ್ಳಿಗಳ ಕಥೆ ಏನಾಗಿತ್ತು? ಇದನ್ನು ಸಾಕ್ಷಾತ್‌ ಅಲ್ಲೇ ಇದ್ದವರೇ ಬರೆಯಬೇಕೆಂದು, ಹಲವರಿಗೆ ಬೆನ್ನು ಹತ್ತಿದ್ದು ಕೆ.ಪಿ.ಸುರೇಶ್.‌ ಅಂತಹ ಒಂದು ಸ್ವಾರಸ್ಯಕರವಾದ ಆದರೆ ವಿಷಾದವನ್ನೂ ಹುಟ್ಟಿಸುವ ಬರಹವನ್ನು ಲೋಕೇಶ್‌ ಬರೆದಿದ್ದಾರೆ.

- Advertisement -
- Advertisement -

ಯುಗಾದಿ ಹಬ್ಬದ ಹಿಂದು ಮುಂದಿನ ರಾತ್ರಿಗಳು ಸಾಮಾನ್ಯವಾಗಿ ನಮಗೆ ನಿದ್ರಾರಹಿತ ರಾತ್ರಿಗಳು. ನಮ್ಮೂರು ದೋಣಕುಪ್ಪೆ. ಅದು ರಾಜ್ಯ ಹೆದ್ದಾರಿ 86 ರ ಪಕ್ಕದಲ್ಲಿ ಬರುವುದರಿಂದಲೂ, ಹೆದ್ದಾರಿಗೆ ನಮ್ಮ ಮನೆ ಹೊಂದಿಕೊಂಡಿರುವುದರಿಂದಲೂ, ಮಾಗಡಿ ದನಗಳ ಜಾತ್ರೆಗೆ ಮಂಡ್ಯ, ಮದ್ದೂರಿನ ಕಡೆ ರೈತರು ನಮ್ಮ ಮನೆ ಮುಂದೆ ರಸ್ತೆಯಲ್ಲೇ ಮಾಗಡಿ ಜಾತ್ರೆಗೆ ಹೋಗುತ್ತಾರೆ. ಬೇಸಿಗೆಯ ಬಿಸಲ ಬೇಗೆಗೆ ದನ ಬಳಲಿದಾವು ಎಂದು ರಾತ್ರಿ ಪ್ರಯಾಣ ಮಾಡುತ್ತಾರೆ. ರಾತ್ರಿ ಪೂರ ಲಾಳ ಕಟ್ಟಿದ ಗೊರಸುಗಳು ಡಾಂಬರು ರಸ್ತೆಗೆ ತಾಗಿ ಬರುವ ಶಬ್ದವೇ ತಾಳ; ಕೊರಳಿಗೆ ಕಟ್ಟಿದ ಘಂಟೆಗಳ ಸದ್ದೇ ಮೇಳ. ಒಟ್ಟಿನಲ್ಲಿ ದನಗಳ ಯಾತ್ರೆಯೇ ಸಂಗೀತದಂತಿದ್ದ ನಮ್ಮ ರಸ್ತೆಯಲ್ಲಿ ಈ ವರ್ಷ ಕಾರು, ಬೈಕುಗಳ ಮೊರೆತ, ಹಾರ್ನುಗಳ ಕರ್ಕಶ ದನಿಯ ಪರಿಣಾಮ ಕಣ್ಣುಗಳಿಂದ ನಿದ್ದೆ ಹಾರಿಹೋಯಿತು.

ಲಾಕ್‌ ಡೌನ್
ಸಾಂದರ್ಭಿಕ ಚಿತ್ರ

ರೂಢಿಯಂತೆ ಯುಗಾದಿಗೆ ಊರಿಗೆ ಬರುವವರಿದ್ದರೂ, ಈ ವರ್ಷ ಮೊದಲ ಬಾರಿಗೆ ಯುಗಾದಿಗೆ 21 ದಿನಗಳ ರಜೆ ಕೊಟ್ಟು ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ ಪರಿಣಾಮ ಬೆಂಗಳೂರಿನಲ್ಲೇ ಹೆಂಡತಿ ಮಕ್ಕಳೊಂದಿಗೆ ಹಬ್ಬವನ್ನು ಆಚರಿಸುತ್ತಿದ್ದವರು, ಹಳ್ಳಿಗೆ ಹೋದರೆ ತಮ್ಮ ಘನತೆಗೆ ಕುಂದೆಂದು ಭಾವಿಸುತ್ತಿದ್ದವರೂ ಕೂಡ 21 ದಿನಗಳು ಹೊರಗೆಲ್ಲೂ ಹೋಗದೆ, ಬೆಂಗಳೂರಿನ ಕಿಷ್ಕಿಂಧೆಯಂತಹ ಮನೆಯಲ್ಲೂ ಇರಲಾರದೆ ಗಂಟು ಮೂಟೆ ಕಟ್ಟಿ ಸಿಕ್ಕ ಸಿಕ್ಕ ವಾಹನಗಳಲ್ಲಿ ಹಳ್ಳಿಗೆ ದೌಡಾಯಿಸಿದ ಪರಿಣಾಮ ಸತತ 2-3 ದಿನ ನಮ್ಮೂರಿನ ರಸ್ತೆ ಗಿಜಿಗುಡುವಂತಾಯಿತು.

ಎರಡು ದಿನಗಳ ನಂತರ ಎಲ್ಲವೂ ಸ್ತಬ್ಧವಾಯಿತು. ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ ತುಂಬಾ ದಿನಗಳಿಂದ ಬರೀ ಮುದಿಜೀವಗಳೇ ಇದ್ದು ಕಳೆಗುಂದಿದ್ದ ಕೆಲವು ಮನೆಗಳಲ್ಲಿ ಮೊಮ್ಮಕ್ಕಳ ಹೆಜ್ಜೆ ಸಪ್ಪಳ ಮೂಡಿ, ಕೊನೆದಿನಗಳ ಎಣಿಸುವವರ ಕೊನೆಯಾಸೆ ತೀರಿತು. ಹಿರಿಜೀವಗಳು ತೃಪ್ತಿಗೊಂಡು ಕರೋನಾಗೆ ಮನದಲ್ಲೇ ನಮಿಸಿದವು.

ಎರಡು ದಿನಗಳು ಯುಗಾದಿ, ಕರಿ ಹಬ್ಬಗಳೆಂದು ಸಡಗರದಲ್ಲಿದ್ದ ನಮಗೆ ಮುಂಬರಲಿರುವ ಭೀಕರತೆಗಳ ಪರಿವೆಯೇ ಇರಲಿಲ್ಲ. ಹಲವು ವರ್ಷಗಳ ನಂತರ ಸಂಧಿಸಿದ್ದರಿಂದ ಆನಂದ ಪರವಶರಾಗಿ ಸುಖಸಾಗರದಲ್ಲಿ ತೇಲುತ್ತಲಿದ್ದವರಿಗೆ ಮುಂಬರುವ ಸುನಾಮಿಗೆ ತಾವು ಕೊಚ್ಚಿ ದಡ ಸೇರುವ ದಿನಗಳು ಇನ್ನೆರಡೇ ಎಂಬುವುದು ತಿಳಿದಿರಲಿಲ್ಲ.


ಹಬ್ಬ ಮುಗಿಯಿತು, ಒಣ ಬೇಸಾಯ ಮಾಡುವ ನಮ್ಮಂತವರಿಗೇನು ಚಿಂತೆಯಿಲ್ಲ, ಜಾನುವಾರುಗಳಿಗೆ ಇನ್ನೂ 2-3 ತಿಂಗಳಿಗಾಗುವಷ್ಟು ರಾಗಿ ಹುಲ್ಲು ಬಣವೆಯಲ್ಲಿತ್ತು. ಮಳೆ ಬರುವವರೆಗೂ ನೆಮ್ಮದಿಯ ಜೀವನ. ಆದರೆ ಸುಮಾರು ವರ್ಷಗಳ ಉಳಿತಾಯದ ಹಣದಲ್ಲೋ, ಸಾಲ ಮಾಡಿಯೋ ಕೊಳವೆ ಬಾವಿ ಕೊರೆಸಿ ಹಣ್ಣು ತರಕಾರಿಗಳನ್ನು ಬೆಳೆದವರಿಗೆ ಸಂಕಷ್ಟ ಶುರುವಾಯಿತು. ನಮ್ಮ ದೊಡ್ಡಪ್ಪನ ಮಗ ನಟರಾಜ ಒಂದು ಎಕರೆಯಲ್ಲಿ ತಿಂಗಳುರುಳಿಕಾಯಿ ಬೆಳೆದಿದ್ದ. ಒಳ್ಳೆಯ ಇಳುವರಿ ಬಂದಿತ್ತು. ಯಾವಾಗಲೂ ಎದುರಿಸುತ್ತಿದ್ದ ಕಾರ್ಮಿಕರ ಸಮಸ್ಯೆ ಇರಲಿಲ್ಲ. ಬೆಂಗಳೂರಿನಿಂದ ಬಂದಿದ್ದ ಅಕ್ಕಂದಿರು, ಅವರ  ಮಕ್ಕಳೆಲ್ಲ ಸೇರಿ ತುಂಬಾ ಘಾಸಿಯಲ್ಲದ ಕಾಯಿಬಿಡಿಸುವ ಕೆಲಸವನ್ನು ಮಾಡಿದ್ದರು. ಮಾರುಕಟ್ಟೆಗೆ ಸಾಗಿಸಲು ಸಾರಿಗೆ ವ್ಯವಸ್ಥೆ ಇಲ್ಲವೇ ಇಲ್ಲ. ಕಾಡಿ, ಬೇಡಿ, ದುಬಾರಿ ಬಾಡಿಗೆಗೆ ಲಗೇಜು ಆಟೋವೊಂದನ್ನು ಗೊತ್ತುಪಡಿಸಿಕೊಂಡು ಮಧ್ಯರಾತ್ರಿಗೇ ರಾಮನಗರ ಮಾರುಕಟ್ಟೆಗೆ ಕೊಂಡೊಯ್ದ. ಆದರೆ ಹುರುಳಿಕಾಯಿ ಕೇಳುವವರೇ ದಿಕ್ಕಿಲ್ಲ. ಬೆಳಗಿನ ಜಾವದವರೆಗೂ ಕಾದು ಇನ್ನು ಇಲ್ಲೇ ಇದ್ದರೆ ನಾತಂದ ಕಾಯನ್ನೇ ಮನೆಗೆ ಒಯ್ಯಬೇಕೆಂದು ಅರಿತು ಅದೇ ಆಟೋದಲ್ಲಿ ಬೆಂಗಳೂರು ಕೃಷ್ಣರಾಜ ಮಾರುಕಟ್ಟೆಗೆ ತಂದ. ಹಬ್ಬದ 2 ದಿನ ರಜೆ ತೆಗೆದುಕೊಂಡಿದ್ದರಿಂದ ಇದ್ದಬದ್ದದ್ದನ್ನೆಲ್ಲ ಒಂದೇ ದಿನ ಮಾರುಕಟ್ಟೆಗೆ ತಂದಿದ್ದಾರೆ ರೈತರು. ಆದರೆ ಕೊಳ್ಳುವ ಗಿರಾಕಿಗಳೇ ಇಲ್ಲ.

ಬೇರೆ ರಾಜ್ಯಕ್ಕೆ ತರಕಾರಿ ಕಳಿಸುವ ವ್ಯಾಪಾರಸ್ಥರು ಸಾಗಿಸಲು ಅವಕಾಶ ಇದೆಯೋ ಇಲ್ಲವೋ ಎಂಬ ಅನುಮಾನದಿಂದ ಕೊಳ್ಳಲು ಮುಂದೆ ಬರುತ್ತಿಲ್ಲ. ಪೊಲೀಸರು ವ್ಯಾಪಾರಕ್ಕೆ ಅವಕಾಶ ಕೊಡುತ್ತಾರೋ ಇಲ್ಲವೋ ಎಂದು ಚಿಲ್ಲರೆ ವ್ಯಾಪಾರಿಗಳು ಹೆಚ್ಚು ತರಕಾರಿಗಳಿಗೆ  ಬಂಡವಾಳ ಹೂಡಲು ಹೆದರಿದರು. ಈ ನಡುವೆ ಜನರ ಗುಂಪು ಸೇರಿದ್ದರಿಂದ ಪೊಲೀಸರು ಲಾಠಿ ಬೀಸಿದರು. ತರಕಾರಿ ಬೆಳದಿದ್ದಕ್ಕೆ ಬೋನಸ್ ಎಂಬಂತೆ ಬಾಸುಂಡೆಗಳು ಉಚಿತವಾಗಿ ದೊರಕಿದವು. ಪ್ರತಿ ವರ್ಷ ಈ ಸಮಯದಲ್ಲಿ ಮಣಕ್ಕೆ 800- 1000 ರೂಪಾಯಿಗಳಿರುತ್ತಿದ್ದ ಹುರುಳಿಕಾಯನ್ನು 250ಕ್ಕೆ ಮಾರಿ ಪೊಲೀಸರು ಹೊಡೆದಿದ್ದ ಕಾಲನ್ನು ಎಳೆಯುತ್ತಾ ಮನೆಗೆ ಬಂದ.

ಲಾಕ್‌ ಡೌನ್
ಎರಡು ಮೂರು ದಿನಗಳಲ್ಲಿ ತರಕಾರಿ ಮತ್ತು ಕೃಷಿ ಉತ್ಪನ್ನಗಳ ಸಾಗಣೆ ಮತ್ತು ವ್ಯಾಪಾರಕ್ಕೆ ಯಾವುದೇ ನಿರ್ಬಂಧವಿಲ್ಲವೆಂದು ಸರ್ಕಾರ ಸ್ಪಷ್ಟಪಡಿಸಿದ ನಂತರ ತರಕಾರಿ ಬೆಳೆದವರು ನಿಟ್ಟುಸಿರುಬಿಟ್ಟರು. ನಟರಾಜ ನಂತರದ ದಿನಗಳಲ್ಲಿ ರಾಮನಗರದಲ್ಲೇ ಮಣಕ್ಕೆ 500-600 ರೂಗಳಂತೆ ಹುರುಳಿಕಾಯನ್ನು ಮಾರಿದ.

ತರಕಾರಿಯದು ಒಂದು ಹಂತಕ್ಕೆ ಬರುತ್ತಿದ್ದಂತೆ ಹಾಲಿನ ಸಮಸ್ಯೆ ಶುರುವಾಯಿತು, ಉತ್ಪಾದನೆಯಾದ ಹಾಲಿನ ಬಹುಪಾಲು ವ್ಯಾಪಾರವಾಗದೆ ಉಳಿಯುತ್ತಿದ್ದುದರಿಂದ ಮತ್ತು ಅಷ್ಟೊಂದು ಹಾಲನ್ನು ಪುಡಿಮಾಡುವ ವ್ಯವಸ್ಥೆ ಇಲ್ಲದ ಕಾರಣ ಹಾಲು ಮಹಾಮಂಡಳಿಯವರು ಹಾಲಿನ ಶೇಖರಣೆ ನಿಲ್ಲಿಸುವರೆಂಬ ಸುದ್ದಿ ಕೇಳಿ, ಇಡೀ ಊರಿಗೂರೇ ದಂಗುಬಡಿದಂತಾಯಿತು. ಸುಮಾರು ರೈತರ ಅನ್ನಮಾರ್ಗವಾಗಿರುವ ಹಾಲು ಶೇಖರಣೆಯನ್ನು ನಿಲ್ಲಿಸಿದರೆ ರೈತರು ಘನಘೋರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನರಿತ ಸರ್ಕಾರ ಉಚಿತ ಹಾಲು ವಿತರಣೆ ಯೋಜನೆಯ ಮೂಲಕ ರೈತರ ಹಿತ ಕಾಯ್ದದ್ದನ್ನು ಸ್ಮರಿಸಲೇಬೇಕು.‌

ಲಾಕ್‌ ಡೌನ್

ಇತ್ತ ನಮ್ಮಪ್ಪ ಮಾವಿನ ತೋಟವನ್ನು ವ್ಯಾಪರಿಯೊಬ್ಬನಿಗೆ ಮಾರಿ ಆಗಲೇ 3 ತಿಂಗಳಾಗಿತ್ತು. ಆಗಲೇ ಒಂದೆರಡು ಸೇಂದುರ ಮರದ ಕಾಯಿಗಳನ್ನು ಲಾಕ್ ಡೌನ್‌ಗಿಂತ ಮೊದಲೇ ಕಿತ್ತುಕೊಂಡಿದ್ದ. ಈಗ ಅವನನ್ನು ಸ್ವಲ್ಪ ಮುಂಗಡ ಹಣ ಕೇಳಿದರೆ ಲಾಕ್ ಡೌನ್ ಮುಗಿಯಲಿ ಕೊಡುತ್ತೇನೆ ಎನ್ನುತ್ತಾನೆ. ಲಾಕ್ ಡೌನ್ ಮುಗಿಯದೆ ವ್ಯಾಪಾರ ಕಷ್ಟವಾಗುವ ಸಂದರ್ಭ ಬಂದರೆ ನಷ್ಟ ಅನುಭವಿಸಲು ತಯಾರಿಲ್ಲದ ಅವನು ಒಪ್ಪಂದ ರದ್ದುಗೊಳಿಸುವ ಇರಾದೆಯಲ್ಲಿದ್ದಾನೆ. ಆದರೆ ಎಲ್ಲವೂ ಸರಿಹೋಗಿ ವ್ಯಾಪಾರ ಸುಗಮವಾದರೆ? ತೋಟ ಬಿಟ್ಟು ಬರುವ ಲಾಭಕ್ಕೆ ಕಲ್ಲು ಹಾಕಿಕೊಳ್ಳುವುದಕ್ಕೆ ಇಷ್ಟವಿಲ್ಲದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾನೆ. ಅವನ ಮಾತುಗಳಿಂದ ಗೊಂದಲಕ್ಕೊಳಗಾದ ನಮ್ಮಪ್ಪ ಮಾತ್ರ ತೋಟವನ್ನು ಬೇರೆ ವ್ಯಾಪಾರಿಗೂ ಮಾರದಂತಹ, ಇವನನ್ನು ನಂಬಿ ಸುಮ್ಮನೆಯೂ ಕೂರದಂತಹ ಎರಡಲುಗಿನ ಕತ್ತಿಗೆ ಕುತ್ತಿಗೆಯೊಡ್ಡಿದ್ದಾರೆ.


ಇದನ್ನೂ ಓದಿ: ವಲಸೆ ಕಾರ್ಮಿಕರು ಊರಿಗೆ ಹೋಗದಂತೆ ತಡೆಯುತ್ತಿರುವುದೇಕೆ?


ಯುಗಾದಿ ಹಬ್ಬ, ಮದುವೆ ಲಗ್ನ ಕಾಲದಲ್ಲಿ ನಡೆಯುವ ಮದುವೆ ಮುಂಜಿ, ಊರ ಹಬ್ಬ, ಜಾತ್ರೆ, ದೇವರ ಉತ್ಸವಗಳನ್ನು ನಂಬಿಕೊಂಡು ಎಕರೆಗಟ್ಟಲೇ ಹೂ ಬೆಳೆದ ನನ್ನ ಇಬ್ಬರು ಸ್ನೇಹಿತರ ಪರಿಸ್ಥಿತಿಯಂತೂ ಯಾರಿಗೂ ಬೇಡ. ಲಾಕ್ ಡೌನ್ ಪರಿಣಾಮವಾಗಿ ಯಾವ ಸಂಭ್ರಮದ ಕಾರ್ಯಕ್ರಮವೂ ಬೇಡ, ಹೆಣದ ಮೇಲೆ ಹಾಕುವುದಕ್ಕೂ ಯಾರೂ ತೆಗೆದುಕೊಂಡು ಹೋಗುತ್ತಿಲ್ಲ. ನಷ್ಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡರೆ ಅವರದ್ದೇ ಹೆಣ ಶೃಂಗರಿಸುವುದಕ್ಕೆ ಮಾತ್ರ ಅವುಗಳ ಉಪಯೋಗ.
ನಮ್ಮೂರಿನ ಈ ಕತೆಗಳ ಮುಂದುವರಿಕೆಯಾಗಿ ಕೇವಲ ಒಂದೇ ವಾರಕ್ಕೆ ಕೆಲವರಿಗೆ ಹಳ್ಳಿ ಬೇಸರವಾಗತೊಡಗಿತು. ಬೆಂಗಳೂರಿನ ಟ್ರಾಫಿಕ್, ಮಾಲಿನ್ಯದಿಂದ ಬೇಸತ್ತವರಿಗೆ ಹಳ್ಳಿ ಆಪ್ತವಾಗತೊಡಗಿತು. ಕೃಷಿಯೋ, ಹೈನುಗಾರಿಕೆಯೋ ಮತ್ತೊಂದೋ ಮಾಡಿಕೊಂಡು ಊರಲ್ಲೇ ಬೇರು ಬಿಡುವ ಮಾನಸ್ಸಾಯಿತು ಕೆಲವರಿಗೆ. ಆದರೆ ಹಳ್ಳಿಯಲ್ಲಿ ಮಕ್ಕಳಿಗೆ ಸೂಕ್ತ ಶಿಕ್ಷಣ ವ್ಯವಸ್ಥೆ ಇಲ್ಲವೆಂಬುದು ಕೆಲವು ನಾರಿಯರ ಗೊಣಗಾಟ. ಸಣ್ಣ ಪುಟ್ಟ ಕೆಲಸ ಮಾಡಿ ತಮ್ಮ ದೇಹದ ಬಲಾಬಲ ಕಂಡ ಕೆಲವರಿಗೆ  ಕೊಬ್ಬುತುಂಬಿದ ತಮ್ಮ ದೇಹ ಕೃಷಿ ಕೆಲಸಗಳಿಗೆ ಸಹಕರಿಸುವುದಿಲ್ಲ ಎಂಬುದನ್ನು ಅರಿತವರು ಕೆಲವರು.. ಇಲ್ಲಿಯೇ ಉಳಿಯಬೇಕೆಂಬ ಅದಮ್ಯ ಆಸೆ ಹೊಂದಿದ ಕೆಲವರಿಗೆ ತಮ್ಮ ಬೈಕು, ಕಾರುಗಳ EMIಗಳು ದುಃಸ್ವಪ್ನವಾದವು. ಕೆಲವರಿಗೆ ಭೂಮಿ ಇಲ್ಲದಿರುವುದು ನುಂಗಲಾರದ ತುತ್ತಾಯಿತು. ಹಣದ ಹಿಂದೆ ಬಿದ್ದವರಿಗೆ, ಹಣವೊಂದೇ ಧ್ಯೇಯವಾದವರಿಗೆ ಹಳ್ಳಿಇನ್ನೂ ಅಸ್ಪೃಷ್ಯವಾಗಿಯೇ ಇದೆ.. ಒಟ್ಟಿನಲ್ಲಿ ನಗರದಿಂದ ಬಂದವರು ಹಳ್ಳಿಗಳಿಗೆ ಕೆಲವು ದಿನಗಳ ನಂತರ ವಿದಾಯ ಹೇಳುವುದು ಖಚಿತ, ಹಳ್ಳಿಗಳು ಮತ್ತೆ ಭಣಗುಡುವುದು ಖಾತರಿ.

ಲೇಖಕರು: ಲೋಕೇಶ್‌ ದೋಣಕುಪ್ಪೆ

ಸರಣಿ ಸಂಪಾದಕರು: ಕೆ.ಪಿ ಸುರೇಶ್‌


ಇದನ್ನೂ ಓದಿ: ಲಾಕ್‌ ಡೌನ್‌ ನಂತರದ ಪ್ರಥಮ ಆದ್ಯತೆ ಏನಾಗಿರಬೇಕು? ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರು ಹೀಗೆ ಹೇಳುತ್ತಾರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...