Homeಚಳವಳಿಲಾಕ್‌ ಡೌನ್‌ ಕಾಲದಲ್ಲಿ ದೋಣಕುಪ್ಪೆ: ಲೋಕೇಶ್‌ ಬರೆದ ಸ್ವಾರಸ್ಯಕರ ವಿಷಾದಗೀತೆ

ಲಾಕ್‌ ಡೌನ್‌ ಕಾಲದಲ್ಲಿ ದೋಣಕುಪ್ಪೆ: ಲೋಕೇಶ್‌ ಬರೆದ ಸ್ವಾರಸ್ಯಕರ ವಿಷಾದಗೀತೆ

ಲಾಕ್‌ ಡೌನ್‌ ಕಾಲದಲ್ಲಿ ನಗರಗಳೇ ಎಲ್ಲರ ಗಮನ ಸೆಳೆದಿದ್ದವು. ಆದರೆ ಇದೇ ಹೊತ್ತಿನಲ್ಲಿ ನಗರಗಳಲ್ಲಿರುವವರೂ ಹೋಗಲು ಬಯಸುತ್ತಿದ್ದ ಹಳ್ಳಿಗಳ ಕಥೆ ಏನಾಗಿತ್ತು? ಇದನ್ನು ಸಾಕ್ಷಾತ್‌ ಅಲ್ಲೇ ಇದ್ದವರೇ ಬರೆಯಬೇಕೆಂದು, ಹಲವರಿಗೆ ಬೆನ್ನು ಹತ್ತಿದ್ದು ಕೆ.ಪಿ.ಸುರೇಶ್.‌ ಅಂತಹ ಒಂದು ಸ್ವಾರಸ್ಯಕರವಾದ ಆದರೆ ವಿಷಾದವನ್ನೂ ಹುಟ್ಟಿಸುವ ಬರಹವನ್ನು ಲೋಕೇಶ್‌ ಬರೆದಿದ್ದಾರೆ.

- Advertisement -
- Advertisement -

ಯುಗಾದಿ ಹಬ್ಬದ ಹಿಂದು ಮುಂದಿನ ರಾತ್ರಿಗಳು ಸಾಮಾನ್ಯವಾಗಿ ನಮಗೆ ನಿದ್ರಾರಹಿತ ರಾತ್ರಿಗಳು. ನಮ್ಮೂರು ದೋಣಕುಪ್ಪೆ. ಅದು ರಾಜ್ಯ ಹೆದ್ದಾರಿ 86 ರ ಪಕ್ಕದಲ್ಲಿ ಬರುವುದರಿಂದಲೂ, ಹೆದ್ದಾರಿಗೆ ನಮ್ಮ ಮನೆ ಹೊಂದಿಕೊಂಡಿರುವುದರಿಂದಲೂ, ಮಾಗಡಿ ದನಗಳ ಜಾತ್ರೆಗೆ ಮಂಡ್ಯ, ಮದ್ದೂರಿನ ಕಡೆ ರೈತರು ನಮ್ಮ ಮನೆ ಮುಂದೆ ರಸ್ತೆಯಲ್ಲೇ ಮಾಗಡಿ ಜಾತ್ರೆಗೆ ಹೋಗುತ್ತಾರೆ. ಬೇಸಿಗೆಯ ಬಿಸಲ ಬೇಗೆಗೆ ದನ ಬಳಲಿದಾವು ಎಂದು ರಾತ್ರಿ ಪ್ರಯಾಣ ಮಾಡುತ್ತಾರೆ. ರಾತ್ರಿ ಪೂರ ಲಾಳ ಕಟ್ಟಿದ ಗೊರಸುಗಳು ಡಾಂಬರು ರಸ್ತೆಗೆ ತಾಗಿ ಬರುವ ಶಬ್ದವೇ ತಾಳ; ಕೊರಳಿಗೆ ಕಟ್ಟಿದ ಘಂಟೆಗಳ ಸದ್ದೇ ಮೇಳ. ಒಟ್ಟಿನಲ್ಲಿ ದನಗಳ ಯಾತ್ರೆಯೇ ಸಂಗೀತದಂತಿದ್ದ ನಮ್ಮ ರಸ್ತೆಯಲ್ಲಿ ಈ ವರ್ಷ ಕಾರು, ಬೈಕುಗಳ ಮೊರೆತ, ಹಾರ್ನುಗಳ ಕರ್ಕಶ ದನಿಯ ಪರಿಣಾಮ ಕಣ್ಣುಗಳಿಂದ ನಿದ್ದೆ ಹಾರಿಹೋಯಿತು.

ಲಾಕ್‌ ಡೌನ್
ಸಾಂದರ್ಭಿಕ ಚಿತ್ರ

ರೂಢಿಯಂತೆ ಯುಗಾದಿಗೆ ಊರಿಗೆ ಬರುವವರಿದ್ದರೂ, ಈ ವರ್ಷ ಮೊದಲ ಬಾರಿಗೆ ಯುಗಾದಿಗೆ 21 ದಿನಗಳ ರಜೆ ಕೊಟ್ಟು ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ ಪರಿಣಾಮ ಬೆಂಗಳೂರಿನಲ್ಲೇ ಹೆಂಡತಿ ಮಕ್ಕಳೊಂದಿಗೆ ಹಬ್ಬವನ್ನು ಆಚರಿಸುತ್ತಿದ್ದವರು, ಹಳ್ಳಿಗೆ ಹೋದರೆ ತಮ್ಮ ಘನತೆಗೆ ಕುಂದೆಂದು ಭಾವಿಸುತ್ತಿದ್ದವರೂ ಕೂಡ 21 ದಿನಗಳು ಹೊರಗೆಲ್ಲೂ ಹೋಗದೆ, ಬೆಂಗಳೂರಿನ ಕಿಷ್ಕಿಂಧೆಯಂತಹ ಮನೆಯಲ್ಲೂ ಇರಲಾರದೆ ಗಂಟು ಮೂಟೆ ಕಟ್ಟಿ ಸಿಕ್ಕ ಸಿಕ್ಕ ವಾಹನಗಳಲ್ಲಿ ಹಳ್ಳಿಗೆ ದೌಡಾಯಿಸಿದ ಪರಿಣಾಮ ಸತತ 2-3 ದಿನ ನಮ್ಮೂರಿನ ರಸ್ತೆ ಗಿಜಿಗುಡುವಂತಾಯಿತು.

ಎರಡು ದಿನಗಳ ನಂತರ ಎಲ್ಲವೂ ಸ್ತಬ್ಧವಾಯಿತು. ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ ತುಂಬಾ ದಿನಗಳಿಂದ ಬರೀ ಮುದಿಜೀವಗಳೇ ಇದ್ದು ಕಳೆಗುಂದಿದ್ದ ಕೆಲವು ಮನೆಗಳಲ್ಲಿ ಮೊಮ್ಮಕ್ಕಳ ಹೆಜ್ಜೆ ಸಪ್ಪಳ ಮೂಡಿ, ಕೊನೆದಿನಗಳ ಎಣಿಸುವವರ ಕೊನೆಯಾಸೆ ತೀರಿತು. ಹಿರಿಜೀವಗಳು ತೃಪ್ತಿಗೊಂಡು ಕರೋನಾಗೆ ಮನದಲ್ಲೇ ನಮಿಸಿದವು.

ಎರಡು ದಿನಗಳು ಯುಗಾದಿ, ಕರಿ ಹಬ್ಬಗಳೆಂದು ಸಡಗರದಲ್ಲಿದ್ದ ನಮಗೆ ಮುಂಬರಲಿರುವ ಭೀಕರತೆಗಳ ಪರಿವೆಯೇ ಇರಲಿಲ್ಲ. ಹಲವು ವರ್ಷಗಳ ನಂತರ ಸಂಧಿಸಿದ್ದರಿಂದ ಆನಂದ ಪರವಶರಾಗಿ ಸುಖಸಾಗರದಲ್ಲಿ ತೇಲುತ್ತಲಿದ್ದವರಿಗೆ ಮುಂಬರುವ ಸುನಾಮಿಗೆ ತಾವು ಕೊಚ್ಚಿ ದಡ ಸೇರುವ ದಿನಗಳು ಇನ್ನೆರಡೇ ಎಂಬುವುದು ತಿಳಿದಿರಲಿಲ್ಲ.


ಹಬ್ಬ ಮುಗಿಯಿತು, ಒಣ ಬೇಸಾಯ ಮಾಡುವ ನಮ್ಮಂತವರಿಗೇನು ಚಿಂತೆಯಿಲ್ಲ, ಜಾನುವಾರುಗಳಿಗೆ ಇನ್ನೂ 2-3 ತಿಂಗಳಿಗಾಗುವಷ್ಟು ರಾಗಿ ಹುಲ್ಲು ಬಣವೆಯಲ್ಲಿತ್ತು. ಮಳೆ ಬರುವವರೆಗೂ ನೆಮ್ಮದಿಯ ಜೀವನ. ಆದರೆ ಸುಮಾರು ವರ್ಷಗಳ ಉಳಿತಾಯದ ಹಣದಲ್ಲೋ, ಸಾಲ ಮಾಡಿಯೋ ಕೊಳವೆ ಬಾವಿ ಕೊರೆಸಿ ಹಣ್ಣು ತರಕಾರಿಗಳನ್ನು ಬೆಳೆದವರಿಗೆ ಸಂಕಷ್ಟ ಶುರುವಾಯಿತು. ನಮ್ಮ ದೊಡ್ಡಪ್ಪನ ಮಗ ನಟರಾಜ ಒಂದು ಎಕರೆಯಲ್ಲಿ ತಿಂಗಳುರುಳಿಕಾಯಿ ಬೆಳೆದಿದ್ದ. ಒಳ್ಳೆಯ ಇಳುವರಿ ಬಂದಿತ್ತು. ಯಾವಾಗಲೂ ಎದುರಿಸುತ್ತಿದ್ದ ಕಾರ್ಮಿಕರ ಸಮಸ್ಯೆ ಇರಲಿಲ್ಲ. ಬೆಂಗಳೂರಿನಿಂದ ಬಂದಿದ್ದ ಅಕ್ಕಂದಿರು, ಅವರ  ಮಕ್ಕಳೆಲ್ಲ ಸೇರಿ ತುಂಬಾ ಘಾಸಿಯಲ್ಲದ ಕಾಯಿಬಿಡಿಸುವ ಕೆಲಸವನ್ನು ಮಾಡಿದ್ದರು. ಮಾರುಕಟ್ಟೆಗೆ ಸಾಗಿಸಲು ಸಾರಿಗೆ ವ್ಯವಸ್ಥೆ ಇಲ್ಲವೇ ಇಲ್ಲ. ಕಾಡಿ, ಬೇಡಿ, ದುಬಾರಿ ಬಾಡಿಗೆಗೆ ಲಗೇಜು ಆಟೋವೊಂದನ್ನು ಗೊತ್ತುಪಡಿಸಿಕೊಂಡು ಮಧ್ಯರಾತ್ರಿಗೇ ರಾಮನಗರ ಮಾರುಕಟ್ಟೆಗೆ ಕೊಂಡೊಯ್ದ. ಆದರೆ ಹುರುಳಿಕಾಯಿ ಕೇಳುವವರೇ ದಿಕ್ಕಿಲ್ಲ. ಬೆಳಗಿನ ಜಾವದವರೆಗೂ ಕಾದು ಇನ್ನು ಇಲ್ಲೇ ಇದ್ದರೆ ನಾತಂದ ಕಾಯನ್ನೇ ಮನೆಗೆ ಒಯ್ಯಬೇಕೆಂದು ಅರಿತು ಅದೇ ಆಟೋದಲ್ಲಿ ಬೆಂಗಳೂರು ಕೃಷ್ಣರಾಜ ಮಾರುಕಟ್ಟೆಗೆ ತಂದ. ಹಬ್ಬದ 2 ದಿನ ರಜೆ ತೆಗೆದುಕೊಂಡಿದ್ದರಿಂದ ಇದ್ದಬದ್ದದ್ದನ್ನೆಲ್ಲ ಒಂದೇ ದಿನ ಮಾರುಕಟ್ಟೆಗೆ ತಂದಿದ್ದಾರೆ ರೈತರು. ಆದರೆ ಕೊಳ್ಳುವ ಗಿರಾಕಿಗಳೇ ಇಲ್ಲ.

ಬೇರೆ ರಾಜ್ಯಕ್ಕೆ ತರಕಾರಿ ಕಳಿಸುವ ವ್ಯಾಪಾರಸ್ಥರು ಸಾಗಿಸಲು ಅವಕಾಶ ಇದೆಯೋ ಇಲ್ಲವೋ ಎಂಬ ಅನುಮಾನದಿಂದ ಕೊಳ್ಳಲು ಮುಂದೆ ಬರುತ್ತಿಲ್ಲ. ಪೊಲೀಸರು ವ್ಯಾಪಾರಕ್ಕೆ ಅವಕಾಶ ಕೊಡುತ್ತಾರೋ ಇಲ್ಲವೋ ಎಂದು ಚಿಲ್ಲರೆ ವ್ಯಾಪಾರಿಗಳು ಹೆಚ್ಚು ತರಕಾರಿಗಳಿಗೆ  ಬಂಡವಾಳ ಹೂಡಲು ಹೆದರಿದರು. ಈ ನಡುವೆ ಜನರ ಗುಂಪು ಸೇರಿದ್ದರಿಂದ ಪೊಲೀಸರು ಲಾಠಿ ಬೀಸಿದರು. ತರಕಾರಿ ಬೆಳದಿದ್ದಕ್ಕೆ ಬೋನಸ್ ಎಂಬಂತೆ ಬಾಸುಂಡೆಗಳು ಉಚಿತವಾಗಿ ದೊರಕಿದವು. ಪ್ರತಿ ವರ್ಷ ಈ ಸಮಯದಲ್ಲಿ ಮಣಕ್ಕೆ 800- 1000 ರೂಪಾಯಿಗಳಿರುತ್ತಿದ್ದ ಹುರುಳಿಕಾಯನ್ನು 250ಕ್ಕೆ ಮಾರಿ ಪೊಲೀಸರು ಹೊಡೆದಿದ್ದ ಕಾಲನ್ನು ಎಳೆಯುತ್ತಾ ಮನೆಗೆ ಬಂದ.

ಲಾಕ್‌ ಡೌನ್
ಎರಡು ಮೂರು ದಿನಗಳಲ್ಲಿ ತರಕಾರಿ ಮತ್ತು ಕೃಷಿ ಉತ್ಪನ್ನಗಳ ಸಾಗಣೆ ಮತ್ತು ವ್ಯಾಪಾರಕ್ಕೆ ಯಾವುದೇ ನಿರ್ಬಂಧವಿಲ್ಲವೆಂದು ಸರ್ಕಾರ ಸ್ಪಷ್ಟಪಡಿಸಿದ ನಂತರ ತರಕಾರಿ ಬೆಳೆದವರು ನಿಟ್ಟುಸಿರುಬಿಟ್ಟರು. ನಟರಾಜ ನಂತರದ ದಿನಗಳಲ್ಲಿ ರಾಮನಗರದಲ್ಲೇ ಮಣಕ್ಕೆ 500-600 ರೂಗಳಂತೆ ಹುರುಳಿಕಾಯನ್ನು ಮಾರಿದ.

ತರಕಾರಿಯದು ಒಂದು ಹಂತಕ್ಕೆ ಬರುತ್ತಿದ್ದಂತೆ ಹಾಲಿನ ಸಮಸ್ಯೆ ಶುರುವಾಯಿತು, ಉತ್ಪಾದನೆಯಾದ ಹಾಲಿನ ಬಹುಪಾಲು ವ್ಯಾಪಾರವಾಗದೆ ಉಳಿಯುತ್ತಿದ್ದುದರಿಂದ ಮತ್ತು ಅಷ್ಟೊಂದು ಹಾಲನ್ನು ಪುಡಿಮಾಡುವ ವ್ಯವಸ್ಥೆ ಇಲ್ಲದ ಕಾರಣ ಹಾಲು ಮಹಾಮಂಡಳಿಯವರು ಹಾಲಿನ ಶೇಖರಣೆ ನಿಲ್ಲಿಸುವರೆಂಬ ಸುದ್ದಿ ಕೇಳಿ, ಇಡೀ ಊರಿಗೂರೇ ದಂಗುಬಡಿದಂತಾಯಿತು. ಸುಮಾರು ರೈತರ ಅನ್ನಮಾರ್ಗವಾಗಿರುವ ಹಾಲು ಶೇಖರಣೆಯನ್ನು ನಿಲ್ಲಿಸಿದರೆ ರೈತರು ಘನಘೋರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನರಿತ ಸರ್ಕಾರ ಉಚಿತ ಹಾಲು ವಿತರಣೆ ಯೋಜನೆಯ ಮೂಲಕ ರೈತರ ಹಿತ ಕಾಯ್ದದ್ದನ್ನು ಸ್ಮರಿಸಲೇಬೇಕು.‌

ಲಾಕ್‌ ಡೌನ್

ಇತ್ತ ನಮ್ಮಪ್ಪ ಮಾವಿನ ತೋಟವನ್ನು ವ್ಯಾಪರಿಯೊಬ್ಬನಿಗೆ ಮಾರಿ ಆಗಲೇ 3 ತಿಂಗಳಾಗಿತ್ತು. ಆಗಲೇ ಒಂದೆರಡು ಸೇಂದುರ ಮರದ ಕಾಯಿಗಳನ್ನು ಲಾಕ್ ಡೌನ್‌ಗಿಂತ ಮೊದಲೇ ಕಿತ್ತುಕೊಂಡಿದ್ದ. ಈಗ ಅವನನ್ನು ಸ್ವಲ್ಪ ಮುಂಗಡ ಹಣ ಕೇಳಿದರೆ ಲಾಕ್ ಡೌನ್ ಮುಗಿಯಲಿ ಕೊಡುತ್ತೇನೆ ಎನ್ನುತ್ತಾನೆ. ಲಾಕ್ ಡೌನ್ ಮುಗಿಯದೆ ವ್ಯಾಪಾರ ಕಷ್ಟವಾಗುವ ಸಂದರ್ಭ ಬಂದರೆ ನಷ್ಟ ಅನುಭವಿಸಲು ತಯಾರಿಲ್ಲದ ಅವನು ಒಪ್ಪಂದ ರದ್ದುಗೊಳಿಸುವ ಇರಾದೆಯಲ್ಲಿದ್ದಾನೆ. ಆದರೆ ಎಲ್ಲವೂ ಸರಿಹೋಗಿ ವ್ಯಾಪಾರ ಸುಗಮವಾದರೆ? ತೋಟ ಬಿಟ್ಟು ಬರುವ ಲಾಭಕ್ಕೆ ಕಲ್ಲು ಹಾಕಿಕೊಳ್ಳುವುದಕ್ಕೆ ಇಷ್ಟವಿಲ್ಲದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾನೆ. ಅವನ ಮಾತುಗಳಿಂದ ಗೊಂದಲಕ್ಕೊಳಗಾದ ನಮ್ಮಪ್ಪ ಮಾತ್ರ ತೋಟವನ್ನು ಬೇರೆ ವ್ಯಾಪಾರಿಗೂ ಮಾರದಂತಹ, ಇವನನ್ನು ನಂಬಿ ಸುಮ್ಮನೆಯೂ ಕೂರದಂತಹ ಎರಡಲುಗಿನ ಕತ್ತಿಗೆ ಕುತ್ತಿಗೆಯೊಡ್ಡಿದ್ದಾರೆ.


ಇದನ್ನೂ ಓದಿ: ವಲಸೆ ಕಾರ್ಮಿಕರು ಊರಿಗೆ ಹೋಗದಂತೆ ತಡೆಯುತ್ತಿರುವುದೇಕೆ?


ಯುಗಾದಿ ಹಬ್ಬ, ಮದುವೆ ಲಗ್ನ ಕಾಲದಲ್ಲಿ ನಡೆಯುವ ಮದುವೆ ಮುಂಜಿ, ಊರ ಹಬ್ಬ, ಜಾತ್ರೆ, ದೇವರ ಉತ್ಸವಗಳನ್ನು ನಂಬಿಕೊಂಡು ಎಕರೆಗಟ್ಟಲೇ ಹೂ ಬೆಳೆದ ನನ್ನ ಇಬ್ಬರು ಸ್ನೇಹಿತರ ಪರಿಸ್ಥಿತಿಯಂತೂ ಯಾರಿಗೂ ಬೇಡ. ಲಾಕ್ ಡೌನ್ ಪರಿಣಾಮವಾಗಿ ಯಾವ ಸಂಭ್ರಮದ ಕಾರ್ಯಕ್ರಮವೂ ಬೇಡ, ಹೆಣದ ಮೇಲೆ ಹಾಕುವುದಕ್ಕೂ ಯಾರೂ ತೆಗೆದುಕೊಂಡು ಹೋಗುತ್ತಿಲ್ಲ. ನಷ್ಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡರೆ ಅವರದ್ದೇ ಹೆಣ ಶೃಂಗರಿಸುವುದಕ್ಕೆ ಮಾತ್ರ ಅವುಗಳ ಉಪಯೋಗ.
ನಮ್ಮೂರಿನ ಈ ಕತೆಗಳ ಮುಂದುವರಿಕೆಯಾಗಿ ಕೇವಲ ಒಂದೇ ವಾರಕ್ಕೆ ಕೆಲವರಿಗೆ ಹಳ್ಳಿ ಬೇಸರವಾಗತೊಡಗಿತು. ಬೆಂಗಳೂರಿನ ಟ್ರಾಫಿಕ್, ಮಾಲಿನ್ಯದಿಂದ ಬೇಸತ್ತವರಿಗೆ ಹಳ್ಳಿ ಆಪ್ತವಾಗತೊಡಗಿತು. ಕೃಷಿಯೋ, ಹೈನುಗಾರಿಕೆಯೋ ಮತ್ತೊಂದೋ ಮಾಡಿಕೊಂಡು ಊರಲ್ಲೇ ಬೇರು ಬಿಡುವ ಮಾನಸ್ಸಾಯಿತು ಕೆಲವರಿಗೆ. ಆದರೆ ಹಳ್ಳಿಯಲ್ಲಿ ಮಕ್ಕಳಿಗೆ ಸೂಕ್ತ ಶಿಕ್ಷಣ ವ್ಯವಸ್ಥೆ ಇಲ್ಲವೆಂಬುದು ಕೆಲವು ನಾರಿಯರ ಗೊಣಗಾಟ. ಸಣ್ಣ ಪುಟ್ಟ ಕೆಲಸ ಮಾಡಿ ತಮ್ಮ ದೇಹದ ಬಲಾಬಲ ಕಂಡ ಕೆಲವರಿಗೆ  ಕೊಬ್ಬುತುಂಬಿದ ತಮ್ಮ ದೇಹ ಕೃಷಿ ಕೆಲಸಗಳಿಗೆ ಸಹಕರಿಸುವುದಿಲ್ಲ ಎಂಬುದನ್ನು ಅರಿತವರು ಕೆಲವರು.. ಇಲ್ಲಿಯೇ ಉಳಿಯಬೇಕೆಂಬ ಅದಮ್ಯ ಆಸೆ ಹೊಂದಿದ ಕೆಲವರಿಗೆ ತಮ್ಮ ಬೈಕು, ಕಾರುಗಳ EMIಗಳು ದುಃಸ್ವಪ್ನವಾದವು. ಕೆಲವರಿಗೆ ಭೂಮಿ ಇಲ್ಲದಿರುವುದು ನುಂಗಲಾರದ ತುತ್ತಾಯಿತು. ಹಣದ ಹಿಂದೆ ಬಿದ್ದವರಿಗೆ, ಹಣವೊಂದೇ ಧ್ಯೇಯವಾದವರಿಗೆ ಹಳ್ಳಿಇನ್ನೂ ಅಸ್ಪೃಷ್ಯವಾಗಿಯೇ ಇದೆ.. ಒಟ್ಟಿನಲ್ಲಿ ನಗರದಿಂದ ಬಂದವರು ಹಳ್ಳಿಗಳಿಗೆ ಕೆಲವು ದಿನಗಳ ನಂತರ ವಿದಾಯ ಹೇಳುವುದು ಖಚಿತ, ಹಳ್ಳಿಗಳು ಮತ್ತೆ ಭಣಗುಡುವುದು ಖಾತರಿ.

ಲೇಖಕರು: ಲೋಕೇಶ್‌ ದೋಣಕುಪ್ಪೆ

ಸರಣಿ ಸಂಪಾದಕರು: ಕೆ.ಪಿ ಸುರೇಶ್‌


ಇದನ್ನೂ ಓದಿ: ಲಾಕ್‌ ಡೌನ್‌ ನಂತರದ ಪ್ರಥಮ ಆದ್ಯತೆ ಏನಾಗಿರಬೇಕು? ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರು ಹೀಗೆ ಹೇಳುತ್ತಾರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...