Homeಚಳವಳಿಲಾಕ್‌ ಡೌನ್‌ ಕಾಲದಲ್ಲಿ ದೋಣಕುಪ್ಪೆ: ಲೋಕೇಶ್‌ ಬರೆದ ಸ್ವಾರಸ್ಯಕರ ವಿಷಾದಗೀತೆ

ಲಾಕ್‌ ಡೌನ್‌ ಕಾಲದಲ್ಲಿ ದೋಣಕುಪ್ಪೆ: ಲೋಕೇಶ್‌ ಬರೆದ ಸ್ವಾರಸ್ಯಕರ ವಿಷಾದಗೀತೆ

ಲಾಕ್‌ ಡೌನ್‌ ಕಾಲದಲ್ಲಿ ನಗರಗಳೇ ಎಲ್ಲರ ಗಮನ ಸೆಳೆದಿದ್ದವು. ಆದರೆ ಇದೇ ಹೊತ್ತಿನಲ್ಲಿ ನಗರಗಳಲ್ಲಿರುವವರೂ ಹೋಗಲು ಬಯಸುತ್ತಿದ್ದ ಹಳ್ಳಿಗಳ ಕಥೆ ಏನಾಗಿತ್ತು? ಇದನ್ನು ಸಾಕ್ಷಾತ್‌ ಅಲ್ಲೇ ಇದ್ದವರೇ ಬರೆಯಬೇಕೆಂದು, ಹಲವರಿಗೆ ಬೆನ್ನು ಹತ್ತಿದ್ದು ಕೆ.ಪಿ.ಸುರೇಶ್.‌ ಅಂತಹ ಒಂದು ಸ್ವಾರಸ್ಯಕರವಾದ ಆದರೆ ವಿಷಾದವನ್ನೂ ಹುಟ್ಟಿಸುವ ಬರಹವನ್ನು ಲೋಕೇಶ್‌ ಬರೆದಿದ್ದಾರೆ.

- Advertisement -
- Advertisement -

ಯುಗಾದಿ ಹಬ್ಬದ ಹಿಂದು ಮುಂದಿನ ರಾತ್ರಿಗಳು ಸಾಮಾನ್ಯವಾಗಿ ನಮಗೆ ನಿದ್ರಾರಹಿತ ರಾತ್ರಿಗಳು. ನಮ್ಮೂರು ದೋಣಕುಪ್ಪೆ. ಅದು ರಾಜ್ಯ ಹೆದ್ದಾರಿ 86 ರ ಪಕ್ಕದಲ್ಲಿ ಬರುವುದರಿಂದಲೂ, ಹೆದ್ದಾರಿಗೆ ನಮ್ಮ ಮನೆ ಹೊಂದಿಕೊಂಡಿರುವುದರಿಂದಲೂ, ಮಾಗಡಿ ದನಗಳ ಜಾತ್ರೆಗೆ ಮಂಡ್ಯ, ಮದ್ದೂರಿನ ಕಡೆ ರೈತರು ನಮ್ಮ ಮನೆ ಮುಂದೆ ರಸ್ತೆಯಲ್ಲೇ ಮಾಗಡಿ ಜಾತ್ರೆಗೆ ಹೋಗುತ್ತಾರೆ. ಬೇಸಿಗೆಯ ಬಿಸಲ ಬೇಗೆಗೆ ದನ ಬಳಲಿದಾವು ಎಂದು ರಾತ್ರಿ ಪ್ರಯಾಣ ಮಾಡುತ್ತಾರೆ. ರಾತ್ರಿ ಪೂರ ಲಾಳ ಕಟ್ಟಿದ ಗೊರಸುಗಳು ಡಾಂಬರು ರಸ್ತೆಗೆ ತಾಗಿ ಬರುವ ಶಬ್ದವೇ ತಾಳ; ಕೊರಳಿಗೆ ಕಟ್ಟಿದ ಘಂಟೆಗಳ ಸದ್ದೇ ಮೇಳ. ಒಟ್ಟಿನಲ್ಲಿ ದನಗಳ ಯಾತ್ರೆಯೇ ಸಂಗೀತದಂತಿದ್ದ ನಮ್ಮ ರಸ್ತೆಯಲ್ಲಿ ಈ ವರ್ಷ ಕಾರು, ಬೈಕುಗಳ ಮೊರೆತ, ಹಾರ್ನುಗಳ ಕರ್ಕಶ ದನಿಯ ಪರಿಣಾಮ ಕಣ್ಣುಗಳಿಂದ ನಿದ್ದೆ ಹಾರಿಹೋಯಿತು.

ಲಾಕ್‌ ಡೌನ್
ಸಾಂದರ್ಭಿಕ ಚಿತ್ರ

ರೂಢಿಯಂತೆ ಯುಗಾದಿಗೆ ಊರಿಗೆ ಬರುವವರಿದ್ದರೂ, ಈ ವರ್ಷ ಮೊದಲ ಬಾರಿಗೆ ಯುಗಾದಿಗೆ 21 ದಿನಗಳ ರಜೆ ಕೊಟ್ಟು ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ ಪರಿಣಾಮ ಬೆಂಗಳೂರಿನಲ್ಲೇ ಹೆಂಡತಿ ಮಕ್ಕಳೊಂದಿಗೆ ಹಬ್ಬವನ್ನು ಆಚರಿಸುತ್ತಿದ್ದವರು, ಹಳ್ಳಿಗೆ ಹೋದರೆ ತಮ್ಮ ಘನತೆಗೆ ಕುಂದೆಂದು ಭಾವಿಸುತ್ತಿದ್ದವರೂ ಕೂಡ 21 ದಿನಗಳು ಹೊರಗೆಲ್ಲೂ ಹೋಗದೆ, ಬೆಂಗಳೂರಿನ ಕಿಷ್ಕಿಂಧೆಯಂತಹ ಮನೆಯಲ್ಲೂ ಇರಲಾರದೆ ಗಂಟು ಮೂಟೆ ಕಟ್ಟಿ ಸಿಕ್ಕ ಸಿಕ್ಕ ವಾಹನಗಳಲ್ಲಿ ಹಳ್ಳಿಗೆ ದೌಡಾಯಿಸಿದ ಪರಿಣಾಮ ಸತತ 2-3 ದಿನ ನಮ್ಮೂರಿನ ರಸ್ತೆ ಗಿಜಿಗುಡುವಂತಾಯಿತು.

ಎರಡು ದಿನಗಳ ನಂತರ ಎಲ್ಲವೂ ಸ್ತಬ್ಧವಾಯಿತು. ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ ತುಂಬಾ ದಿನಗಳಿಂದ ಬರೀ ಮುದಿಜೀವಗಳೇ ಇದ್ದು ಕಳೆಗುಂದಿದ್ದ ಕೆಲವು ಮನೆಗಳಲ್ಲಿ ಮೊಮ್ಮಕ್ಕಳ ಹೆಜ್ಜೆ ಸಪ್ಪಳ ಮೂಡಿ, ಕೊನೆದಿನಗಳ ಎಣಿಸುವವರ ಕೊನೆಯಾಸೆ ತೀರಿತು. ಹಿರಿಜೀವಗಳು ತೃಪ್ತಿಗೊಂಡು ಕರೋನಾಗೆ ಮನದಲ್ಲೇ ನಮಿಸಿದವು.

ಎರಡು ದಿನಗಳು ಯುಗಾದಿ, ಕರಿ ಹಬ್ಬಗಳೆಂದು ಸಡಗರದಲ್ಲಿದ್ದ ನಮಗೆ ಮುಂಬರಲಿರುವ ಭೀಕರತೆಗಳ ಪರಿವೆಯೇ ಇರಲಿಲ್ಲ. ಹಲವು ವರ್ಷಗಳ ನಂತರ ಸಂಧಿಸಿದ್ದರಿಂದ ಆನಂದ ಪರವಶರಾಗಿ ಸುಖಸಾಗರದಲ್ಲಿ ತೇಲುತ್ತಲಿದ್ದವರಿಗೆ ಮುಂಬರುವ ಸುನಾಮಿಗೆ ತಾವು ಕೊಚ್ಚಿ ದಡ ಸೇರುವ ದಿನಗಳು ಇನ್ನೆರಡೇ ಎಂಬುವುದು ತಿಳಿದಿರಲಿಲ್ಲ.


ಹಬ್ಬ ಮುಗಿಯಿತು, ಒಣ ಬೇಸಾಯ ಮಾಡುವ ನಮ್ಮಂತವರಿಗೇನು ಚಿಂತೆಯಿಲ್ಲ, ಜಾನುವಾರುಗಳಿಗೆ ಇನ್ನೂ 2-3 ತಿಂಗಳಿಗಾಗುವಷ್ಟು ರಾಗಿ ಹುಲ್ಲು ಬಣವೆಯಲ್ಲಿತ್ತು. ಮಳೆ ಬರುವವರೆಗೂ ನೆಮ್ಮದಿಯ ಜೀವನ. ಆದರೆ ಸುಮಾರು ವರ್ಷಗಳ ಉಳಿತಾಯದ ಹಣದಲ್ಲೋ, ಸಾಲ ಮಾಡಿಯೋ ಕೊಳವೆ ಬಾವಿ ಕೊರೆಸಿ ಹಣ್ಣು ತರಕಾರಿಗಳನ್ನು ಬೆಳೆದವರಿಗೆ ಸಂಕಷ್ಟ ಶುರುವಾಯಿತು. ನಮ್ಮ ದೊಡ್ಡಪ್ಪನ ಮಗ ನಟರಾಜ ಒಂದು ಎಕರೆಯಲ್ಲಿ ತಿಂಗಳುರುಳಿಕಾಯಿ ಬೆಳೆದಿದ್ದ. ಒಳ್ಳೆಯ ಇಳುವರಿ ಬಂದಿತ್ತು. ಯಾವಾಗಲೂ ಎದುರಿಸುತ್ತಿದ್ದ ಕಾರ್ಮಿಕರ ಸಮಸ್ಯೆ ಇರಲಿಲ್ಲ. ಬೆಂಗಳೂರಿನಿಂದ ಬಂದಿದ್ದ ಅಕ್ಕಂದಿರು, ಅವರ  ಮಕ್ಕಳೆಲ್ಲ ಸೇರಿ ತುಂಬಾ ಘಾಸಿಯಲ್ಲದ ಕಾಯಿಬಿಡಿಸುವ ಕೆಲಸವನ್ನು ಮಾಡಿದ್ದರು. ಮಾರುಕಟ್ಟೆಗೆ ಸಾಗಿಸಲು ಸಾರಿಗೆ ವ್ಯವಸ್ಥೆ ಇಲ್ಲವೇ ಇಲ್ಲ. ಕಾಡಿ, ಬೇಡಿ, ದುಬಾರಿ ಬಾಡಿಗೆಗೆ ಲಗೇಜು ಆಟೋವೊಂದನ್ನು ಗೊತ್ತುಪಡಿಸಿಕೊಂಡು ಮಧ್ಯರಾತ್ರಿಗೇ ರಾಮನಗರ ಮಾರುಕಟ್ಟೆಗೆ ಕೊಂಡೊಯ್ದ. ಆದರೆ ಹುರುಳಿಕಾಯಿ ಕೇಳುವವರೇ ದಿಕ್ಕಿಲ್ಲ. ಬೆಳಗಿನ ಜಾವದವರೆಗೂ ಕಾದು ಇನ್ನು ಇಲ್ಲೇ ಇದ್ದರೆ ನಾತಂದ ಕಾಯನ್ನೇ ಮನೆಗೆ ಒಯ್ಯಬೇಕೆಂದು ಅರಿತು ಅದೇ ಆಟೋದಲ್ಲಿ ಬೆಂಗಳೂರು ಕೃಷ್ಣರಾಜ ಮಾರುಕಟ್ಟೆಗೆ ತಂದ. ಹಬ್ಬದ 2 ದಿನ ರಜೆ ತೆಗೆದುಕೊಂಡಿದ್ದರಿಂದ ಇದ್ದಬದ್ದದ್ದನ್ನೆಲ್ಲ ಒಂದೇ ದಿನ ಮಾರುಕಟ್ಟೆಗೆ ತಂದಿದ್ದಾರೆ ರೈತರು. ಆದರೆ ಕೊಳ್ಳುವ ಗಿರಾಕಿಗಳೇ ಇಲ್ಲ.

ಬೇರೆ ರಾಜ್ಯಕ್ಕೆ ತರಕಾರಿ ಕಳಿಸುವ ವ್ಯಾಪಾರಸ್ಥರು ಸಾಗಿಸಲು ಅವಕಾಶ ಇದೆಯೋ ಇಲ್ಲವೋ ಎಂಬ ಅನುಮಾನದಿಂದ ಕೊಳ್ಳಲು ಮುಂದೆ ಬರುತ್ತಿಲ್ಲ. ಪೊಲೀಸರು ವ್ಯಾಪಾರಕ್ಕೆ ಅವಕಾಶ ಕೊಡುತ್ತಾರೋ ಇಲ್ಲವೋ ಎಂದು ಚಿಲ್ಲರೆ ವ್ಯಾಪಾರಿಗಳು ಹೆಚ್ಚು ತರಕಾರಿಗಳಿಗೆ  ಬಂಡವಾಳ ಹೂಡಲು ಹೆದರಿದರು. ಈ ನಡುವೆ ಜನರ ಗುಂಪು ಸೇರಿದ್ದರಿಂದ ಪೊಲೀಸರು ಲಾಠಿ ಬೀಸಿದರು. ತರಕಾರಿ ಬೆಳದಿದ್ದಕ್ಕೆ ಬೋನಸ್ ಎಂಬಂತೆ ಬಾಸುಂಡೆಗಳು ಉಚಿತವಾಗಿ ದೊರಕಿದವು. ಪ್ರತಿ ವರ್ಷ ಈ ಸಮಯದಲ್ಲಿ ಮಣಕ್ಕೆ 800- 1000 ರೂಪಾಯಿಗಳಿರುತ್ತಿದ್ದ ಹುರುಳಿಕಾಯನ್ನು 250ಕ್ಕೆ ಮಾರಿ ಪೊಲೀಸರು ಹೊಡೆದಿದ್ದ ಕಾಲನ್ನು ಎಳೆಯುತ್ತಾ ಮನೆಗೆ ಬಂದ.

ಲಾಕ್‌ ಡೌನ್
ಎರಡು ಮೂರು ದಿನಗಳಲ್ಲಿ ತರಕಾರಿ ಮತ್ತು ಕೃಷಿ ಉತ್ಪನ್ನಗಳ ಸಾಗಣೆ ಮತ್ತು ವ್ಯಾಪಾರಕ್ಕೆ ಯಾವುದೇ ನಿರ್ಬಂಧವಿಲ್ಲವೆಂದು ಸರ್ಕಾರ ಸ್ಪಷ್ಟಪಡಿಸಿದ ನಂತರ ತರಕಾರಿ ಬೆಳೆದವರು ನಿಟ್ಟುಸಿರುಬಿಟ್ಟರು. ನಟರಾಜ ನಂತರದ ದಿನಗಳಲ್ಲಿ ರಾಮನಗರದಲ್ಲೇ ಮಣಕ್ಕೆ 500-600 ರೂಗಳಂತೆ ಹುರುಳಿಕಾಯನ್ನು ಮಾರಿದ.

ತರಕಾರಿಯದು ಒಂದು ಹಂತಕ್ಕೆ ಬರುತ್ತಿದ್ದಂತೆ ಹಾಲಿನ ಸಮಸ್ಯೆ ಶುರುವಾಯಿತು, ಉತ್ಪಾದನೆಯಾದ ಹಾಲಿನ ಬಹುಪಾಲು ವ್ಯಾಪಾರವಾಗದೆ ಉಳಿಯುತ್ತಿದ್ದುದರಿಂದ ಮತ್ತು ಅಷ್ಟೊಂದು ಹಾಲನ್ನು ಪುಡಿಮಾಡುವ ವ್ಯವಸ್ಥೆ ಇಲ್ಲದ ಕಾರಣ ಹಾಲು ಮಹಾಮಂಡಳಿಯವರು ಹಾಲಿನ ಶೇಖರಣೆ ನಿಲ್ಲಿಸುವರೆಂಬ ಸುದ್ದಿ ಕೇಳಿ, ಇಡೀ ಊರಿಗೂರೇ ದಂಗುಬಡಿದಂತಾಯಿತು. ಸುಮಾರು ರೈತರ ಅನ್ನಮಾರ್ಗವಾಗಿರುವ ಹಾಲು ಶೇಖರಣೆಯನ್ನು ನಿಲ್ಲಿಸಿದರೆ ರೈತರು ಘನಘೋರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನರಿತ ಸರ್ಕಾರ ಉಚಿತ ಹಾಲು ವಿತರಣೆ ಯೋಜನೆಯ ಮೂಲಕ ರೈತರ ಹಿತ ಕಾಯ್ದದ್ದನ್ನು ಸ್ಮರಿಸಲೇಬೇಕು.‌

ಲಾಕ್‌ ಡೌನ್

ಇತ್ತ ನಮ್ಮಪ್ಪ ಮಾವಿನ ತೋಟವನ್ನು ವ್ಯಾಪರಿಯೊಬ್ಬನಿಗೆ ಮಾರಿ ಆಗಲೇ 3 ತಿಂಗಳಾಗಿತ್ತು. ಆಗಲೇ ಒಂದೆರಡು ಸೇಂದುರ ಮರದ ಕಾಯಿಗಳನ್ನು ಲಾಕ್ ಡೌನ್‌ಗಿಂತ ಮೊದಲೇ ಕಿತ್ತುಕೊಂಡಿದ್ದ. ಈಗ ಅವನನ್ನು ಸ್ವಲ್ಪ ಮುಂಗಡ ಹಣ ಕೇಳಿದರೆ ಲಾಕ್ ಡೌನ್ ಮುಗಿಯಲಿ ಕೊಡುತ್ತೇನೆ ಎನ್ನುತ್ತಾನೆ. ಲಾಕ್ ಡೌನ್ ಮುಗಿಯದೆ ವ್ಯಾಪಾರ ಕಷ್ಟವಾಗುವ ಸಂದರ್ಭ ಬಂದರೆ ನಷ್ಟ ಅನುಭವಿಸಲು ತಯಾರಿಲ್ಲದ ಅವನು ಒಪ್ಪಂದ ರದ್ದುಗೊಳಿಸುವ ಇರಾದೆಯಲ್ಲಿದ್ದಾನೆ. ಆದರೆ ಎಲ್ಲವೂ ಸರಿಹೋಗಿ ವ್ಯಾಪಾರ ಸುಗಮವಾದರೆ? ತೋಟ ಬಿಟ್ಟು ಬರುವ ಲಾಭಕ್ಕೆ ಕಲ್ಲು ಹಾಕಿಕೊಳ್ಳುವುದಕ್ಕೆ ಇಷ್ಟವಿಲ್ಲದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾನೆ. ಅವನ ಮಾತುಗಳಿಂದ ಗೊಂದಲಕ್ಕೊಳಗಾದ ನಮ್ಮಪ್ಪ ಮಾತ್ರ ತೋಟವನ್ನು ಬೇರೆ ವ್ಯಾಪಾರಿಗೂ ಮಾರದಂತಹ, ಇವನನ್ನು ನಂಬಿ ಸುಮ್ಮನೆಯೂ ಕೂರದಂತಹ ಎರಡಲುಗಿನ ಕತ್ತಿಗೆ ಕುತ್ತಿಗೆಯೊಡ್ಡಿದ್ದಾರೆ.


ಇದನ್ನೂ ಓದಿ: ವಲಸೆ ಕಾರ್ಮಿಕರು ಊರಿಗೆ ಹೋಗದಂತೆ ತಡೆಯುತ್ತಿರುವುದೇಕೆ?


ಯುಗಾದಿ ಹಬ್ಬ, ಮದುವೆ ಲಗ್ನ ಕಾಲದಲ್ಲಿ ನಡೆಯುವ ಮದುವೆ ಮುಂಜಿ, ಊರ ಹಬ್ಬ, ಜಾತ್ರೆ, ದೇವರ ಉತ್ಸವಗಳನ್ನು ನಂಬಿಕೊಂಡು ಎಕರೆಗಟ್ಟಲೇ ಹೂ ಬೆಳೆದ ನನ್ನ ಇಬ್ಬರು ಸ್ನೇಹಿತರ ಪರಿಸ್ಥಿತಿಯಂತೂ ಯಾರಿಗೂ ಬೇಡ. ಲಾಕ್ ಡೌನ್ ಪರಿಣಾಮವಾಗಿ ಯಾವ ಸಂಭ್ರಮದ ಕಾರ್ಯಕ್ರಮವೂ ಬೇಡ, ಹೆಣದ ಮೇಲೆ ಹಾಕುವುದಕ್ಕೂ ಯಾರೂ ತೆಗೆದುಕೊಂಡು ಹೋಗುತ್ತಿಲ್ಲ. ನಷ್ಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡರೆ ಅವರದ್ದೇ ಹೆಣ ಶೃಂಗರಿಸುವುದಕ್ಕೆ ಮಾತ್ರ ಅವುಗಳ ಉಪಯೋಗ.
ನಮ್ಮೂರಿನ ಈ ಕತೆಗಳ ಮುಂದುವರಿಕೆಯಾಗಿ ಕೇವಲ ಒಂದೇ ವಾರಕ್ಕೆ ಕೆಲವರಿಗೆ ಹಳ್ಳಿ ಬೇಸರವಾಗತೊಡಗಿತು. ಬೆಂಗಳೂರಿನ ಟ್ರಾಫಿಕ್, ಮಾಲಿನ್ಯದಿಂದ ಬೇಸತ್ತವರಿಗೆ ಹಳ್ಳಿ ಆಪ್ತವಾಗತೊಡಗಿತು. ಕೃಷಿಯೋ, ಹೈನುಗಾರಿಕೆಯೋ ಮತ್ತೊಂದೋ ಮಾಡಿಕೊಂಡು ಊರಲ್ಲೇ ಬೇರು ಬಿಡುವ ಮಾನಸ್ಸಾಯಿತು ಕೆಲವರಿಗೆ. ಆದರೆ ಹಳ್ಳಿಯಲ್ಲಿ ಮಕ್ಕಳಿಗೆ ಸೂಕ್ತ ಶಿಕ್ಷಣ ವ್ಯವಸ್ಥೆ ಇಲ್ಲವೆಂಬುದು ಕೆಲವು ನಾರಿಯರ ಗೊಣಗಾಟ. ಸಣ್ಣ ಪುಟ್ಟ ಕೆಲಸ ಮಾಡಿ ತಮ್ಮ ದೇಹದ ಬಲಾಬಲ ಕಂಡ ಕೆಲವರಿಗೆ  ಕೊಬ್ಬುತುಂಬಿದ ತಮ್ಮ ದೇಹ ಕೃಷಿ ಕೆಲಸಗಳಿಗೆ ಸಹಕರಿಸುವುದಿಲ್ಲ ಎಂಬುದನ್ನು ಅರಿತವರು ಕೆಲವರು.. ಇಲ್ಲಿಯೇ ಉಳಿಯಬೇಕೆಂಬ ಅದಮ್ಯ ಆಸೆ ಹೊಂದಿದ ಕೆಲವರಿಗೆ ತಮ್ಮ ಬೈಕು, ಕಾರುಗಳ EMIಗಳು ದುಃಸ್ವಪ್ನವಾದವು. ಕೆಲವರಿಗೆ ಭೂಮಿ ಇಲ್ಲದಿರುವುದು ನುಂಗಲಾರದ ತುತ್ತಾಯಿತು. ಹಣದ ಹಿಂದೆ ಬಿದ್ದವರಿಗೆ, ಹಣವೊಂದೇ ಧ್ಯೇಯವಾದವರಿಗೆ ಹಳ್ಳಿಇನ್ನೂ ಅಸ್ಪೃಷ್ಯವಾಗಿಯೇ ಇದೆ.. ಒಟ್ಟಿನಲ್ಲಿ ನಗರದಿಂದ ಬಂದವರು ಹಳ್ಳಿಗಳಿಗೆ ಕೆಲವು ದಿನಗಳ ನಂತರ ವಿದಾಯ ಹೇಳುವುದು ಖಚಿತ, ಹಳ್ಳಿಗಳು ಮತ್ತೆ ಭಣಗುಡುವುದು ಖಾತರಿ.

ಲೇಖಕರು: ಲೋಕೇಶ್‌ ದೋಣಕುಪ್ಪೆ

ಸರಣಿ ಸಂಪಾದಕರು: ಕೆ.ಪಿ ಸುರೇಶ್‌


ಇದನ್ನೂ ಓದಿ: ಲಾಕ್‌ ಡೌನ್‌ ನಂತರದ ಪ್ರಥಮ ಆದ್ಯತೆ ಏನಾಗಿರಬೇಕು? ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರು ಹೀಗೆ ಹೇಳುತ್ತಾರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...