Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ-2: ಈ ಹಕ್ಕಿಗಳು ಎಲ್ಲಿರುತ್ತವೋ ಏನೋ?

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-2: ಈ ಹಕ್ಕಿಗಳು ಎಲ್ಲಿರುತ್ತವೋ ಏನೋ?

ನಮ್ಮ ತೋಟದ ಖಾಯಂ ವಾಸಿಗಳೆಂದರೆ ಕೆಂಬೂತ ಎಂದು ಕರೆಯಲ್ಪಡುವ ಸಾಂಬಾರ್ಗಾಗೆಗಳು. ಈ ಸುಂದರ ಪಕ್ಷಿಗಳನ್ನು ಯಾಕೆ ಕೆಂಬೂತ ಎಂದು ಕರೆದರೋ ಎನ್ನುತ್ತಾರೆ ಕೃಷ್ಣಮೂರ್ತಿ ಬಿಳಿಗೆರೆಯವರು...

- Advertisement -
- Advertisement -

ಗ್ರಾಸ್‌ ಕಟರ್‌ನಿಂದ ಹುಲ್ಲು ಹೊಡೆಯುತ್ತಿದ್ದರೆ ಕೊಕ್ಕರೆಗಳು ಹೇಳಿ ಕಳಿಸಿದಂತೆ ನನ್ನ ಹಿಂದೆ ಹಾಜರಿರುತ್ತವೆ. ಅವು ನನ್ನನ್ನು ಸದರ ಮಾಡಿಕೊಂಡು ಯಾವ ಭಯವೂ ಇಲ್ಲದೆ ಸುತ್ತ ನೆರೆದಿರುತ್ತವೆ. ಅವುಗಳಿಗೆ ಈ ಹುಲ್ಲು ಹೊಡೆಯುವ ಸದ್ದು ಊಟದ ಕರೆ ಗಂಟೆಯಂತೆ ಕೇಳಿಸುವುದು ರೂಢಿಯಾಗಿರಬೇಕು. ಹಕ್ಕಿಗಳು ಮನುಷ್ಯರಿಗೆ ಹೆದರುತ್ತವೆ. ಅದಕ್ಕೆ ಅವು ಹಾರುವುದನ್ನು ಕಲಿತಿರುವುದು. ಆದರೆ ನೇಗಿಲಲ್ಲಿ ಉಳುಮೆ ಮಾಡುವ ಮನುಷ್ಯರಿಗೆ ಅವು ಹೆದರುವುದಿಲ್ಲ. ಉಳುಮೆ ಮಾಡುತ್ತಾ ಮುಂದೆ ಸಾಗುತ್ತಿದ್ದಂತೆ ಅವು ನೇಗಿಲ ಗೆರೆಯಲ್ಲಿ ಪ್ರತ್ಯಕ್ಷವಾಗಿಬಿಡುವ ಎರೆಹುಳು, ಗೆದ್ದಲು, ಗೊಣ್ಣೆಹುಳ ಇನ್ನಿತರ ಜೀವ ಜಂತುಗಳ ಸವಿಯೂಟ ಮಾಡುತ್ತಾ ಸಾಗುವವು.

ಹಾಗೆ ನಾನು ಹುಲ್ಲು ಹೊಡೆಯತ್ತಾ ಮುಂದೆ ಸಾಗಿದಂತೆ ಉಣ್ಣೆಗೊರವ ಮತ್ತು ಕೊಕ್ಕರೆಗಳು ಹುಲ್ಲೊಳಗೆ ಕುಂತ, ನಿಂತ, ಮಲಗಿಕೊಂಡಿದ್ದ ಮಿಡತೆ, ಹುಲ್ಲುನೊಣ, ಗೊಣ್ಣೆಹುಳ, ಕಂಬಳಿಹುಳು, ಬಸವನಹುಳು, ಅಂಗುಲದುಳವೇ ಮುಂತಾದ ಕೀಟಗಳು ದಿಢೀರ್‌ ಒದಗಿದ ಆಪತ್ತಿನಿಂದ ತಪ್ಪಿಸಿಕೊಂಡು ಚೆಲ್ಲಾಪಿಲ್ಲಿಯಾಗಿ ನೆಗೆನೆಗೆದು ಓಡತೊಡಗಿದರೆ ಅವುಗಳಲ್ಲಿ ಕೆಲವನ್ನಾದರೂ ಈ ಹಕ್ಕಿಗಳು ಕುಕ್ಕಿ ಕಬಳಿಸುತ್ತವೆ. ಆ ಊಟದ ಆಟ ಅಥವ ಕೀಟದ ಪೀಕಲಾಟ ಸಾಗುತ್ತಿರುತ್ತದೆ. ಒಮ್ಮೊಮ್ಮೆ ಈ ಆಟಕ್ಕೆ ಒಂದೆರಡು ನಾಯಿಗಳು ಸೇರಿಕೊಳ್ಳುತ್ತವೆ. ಅವು ತೋಟದೊಳಗೆ ಇಲಿ ಮತ್ತು ಅಳಿಲುಗಳನ್ನು ಸಾಧ್ಯವಾದರೆ ಮೊಲಗಳನ್ನೂ ಹುಡುಕುತ್ತವೆ. ಅವು ಸಿಗದಿದ್ದಾಗ ಅಲ್ಲಿಯೇ ಕೈಯ್ಯಳತೆಯಲ್ಲಿ ಸಿಗಬಹುದೆಂದು ಭ್ರಮೆ ಹುಟ್ಟಿಸುವ ಕೊಕ್ಕರೆಗಳ ಕತ್ತಿಗೂ ಬಾಯಿ ಹಾಕಲು ವಿಫಲ ಯತ್ನ ನಡೆಸಿ ತಮ್ಮ ಬೇಟೆಯ ಚಟ ತೀರಿಸಿಕೊಳ್ಳುತ್ತವೆ.

ಇನ್ನು ತೋಟದಲ್ಲಿನ ಸೀಬೇ ಮರಗಳು ಕಾಯಿಬಿಟ್ಟು ಸಂಭ್ರಮಿಸುತ್ತಿರುವಾಗ ಹೇಳಿಕಳಿಸಿದಂತೆ ಬರುವ ಗಿಣಿಗಳು ಮರಗಳ ಮೊದಲ ಹಣ್ಣಿನ ರುಚಿ ನೋಡುವುದು ಮಾಮೂಲಿಯಾಗಿದೆ. ಇವು ತಿಂದು ಬಿಟ್ಟ ಗಿಣಿಗಡಕಗಳು ನಮಗೆ. ಗಿಣಿಗಳು ಒಂಟಿಯಾಗಿರುವುದಿಲ್ಲ ಯಾವಾಗಲು ದಂಡು ಕಟ್ಟಿಕೊಂಡೇ ಇರುವುದು, ಬರುವುದು ದಾಳಿ ಮಾಡುವುದು. ಇವು ಮೆಣಸಿನ ಗಿಡಗಳಿಗೆ ಬಿದ್ದರೆ ಅವುಗಳ ಕತೆ ಮುಗಿದಂತೆ, ಆ ಹಸಿರು ಮೆಣಸಿನ ಕಾಯಿಗಳನ್ನು ಸರಿಯಾಗಿ ಅರ್ಧಕ್ಕೆ ಸೀಳಿ ಒಳಗಿನ ಬೀಜಗಳನ್ನು ಸ್ವಾಹ ಮಾಡುವುದು ಇವುಗಳ ವೈಶಿಷ್ಟ್ಯ. ಮೆಣಸಿ ಕಾಯಿ ಮನುಷ್ಯರಿಗೆ ಖಾರವೆನಿಸಿದರೆ ಈ ಗಿಣಿಗಳಿಗೆ ಸಿಹಿ ಜೇನಿರಬಹುದು ಯಾರಿಗೆ ಗೊತ್ತು?

ಇನ್ನು ಹೀರೇ ಹಕ್ಕಿಗಳು ರಾತ್ರಿ ಪಾಳಿಯಲ್ಲಿ ಬಂದು, ಕತ್ತಲ ಬೆಳಕಲ್ಲಿ ಒಳ್ಳೊಳ್ಳೆಯ ಹಣ್ಣುಗಳನ್ನು ಹುಡುಕಿ, ಕೊಕ್ಕಿನಿಂದ ಕಚ್ಚಿ ತಂದು ತೆಂಗಿನ ಮರದ ಗರಿಗಳ ವಾಕವಾದ ಜಾಗಕ್ಕೆ ಕೂತು ತಿಂದು ಹೋಗುತ್ತವೆ. ಕೆಲವು ಹಣ್ಣುಗಳು ಅವುಗಳ ಕೊಕ್ಕಿನ ಹಕ್ಕಿನಿಂದ ತಪ್ಪಿಸಿಕೊಂಡು ಉದುರಿ ಕೆಳಗೆ ಬಿದ್ದ ಹಣ್ಣುಗಳು ನಮಗೆ ಸಿಗುತ್ತವೆ. ನಾವು ಸೀಬೆ ಮರದಡಿಯಲ್ಲಿ ಸೀಬೇ ಹಣ್ಣು ಹುಡುಕುವುದಕ್ಕಿಂತ ತೆಂಗಿನ ಮರದಡಿಯಲ್ಲಿ ಹುಡುಕುವುದೇ ಹೆಚ್ಚು ಫಲಪ್ರದವಾಗಿರುತ್ತದೆ. ಬೆಳಗಾಗುವ ಮುನ್ನವೇ ಹೋಗಿ ಮನುಷ್ಯರ ಮಧ್ಯದ ಆಲದ ಮರಗಳಿಗೆ ತಲೆಕೆಳಗಾಗಿ ನೇತೇ ಬೀಳುವ ಈ ಹಕ್ಕಿಗಳಿಗೆ ಅದೆಷ್ಟು ಧೈರ್ಯವೋ ತಿಳಿಯದು

PC : Pinterest

ನಿಜ ಹೇಳಬೇಕೆಂದರೆ ಈ ಸೀಬೇ ಗಿಡಗಳು ಯಾವುವೂ ನಾವು ನೆಟ್ಟ ಮರಗಳಲ್ಲ. ಅವು ಇದೇ ತೆರನಾಗಿ ಹಕ್ಕಿಗಳೇ ಇಟ್ಟ ಹಿಕ್ಕೆಯ ಜೊತೆಯಲ್ಲಿ ಹುಟ್ಟಿದ ಮರಗಳು. ಅವು ಹಕ್ಕಿಗಳ ಹಕ್ಕಿನ ಮರಗಳು.

ನಮ್ಮ ತೋಟದ ಖಾಯಂ ವಾಸಿಗಳೆಂದರೆ ಕೆಂಬೂತ ಎಂದು ಕರೆಯಲ್ಪಡುವ ಸಾಂಬಾರ್ಗಾಗೆಗಳು. ಈ ಸುಂದರ ಪಕ್ಷಿಗಳನ್ನು ಯಾಕೆ ಕೆಂಬೂತ ಎಂದು ಕರೆದರೋ.

PC : Freepik

ಇವು ಯಾಕಿಷ್ಟು ನಾಚಿಕೆಯನ್ನು ಬೆಳೆಸಿಕೊಂಡಿವೆಯೋ ಗೊತ್ತಿಲ್ಲ. ಅವು ನಮ್ಮ ಕಣ್ಣಿಗೆ ಬಿದ್ದರೆ, ನಾವು ಅವುಗಳ ಕಣ್ಣಿಗೆ ಬಿದ್ದರೆ ಒಡನೆಯೇ ಅವಿತುಕೊಳ್ಳಲು ಹಾತೊರೆಯತ್ತವೆ. ಏನೇ ಇರಲಿ ನಮ್ಮ ತೋಟದೊಳಗೆ ಇವುಗಳನ್ನು ನೋಡದ ದಿನವಿಲ್ಲ. ಅಂದರೆ ಈ ತೋಟ ಸಾಂಬಾರ್ಗಾಗೆಯದು ಎಂಬುದನ್ನು ಒಪ್ಪಲೇಬೇಕು. ಇತರ ಹಕ್ಕಿಗಳಂತೆ ಇವು ಜೋಡಿಯಾಗಿರುವುದಿಲ್ಲ, ಯಾವಾಗಲೂ ಒಂಟಿ. ಆದರೆ ಸ್ವಲ್ಪ ದೂರದಲ್ಲೆ ಅದರ ಸಂಗಾತಿ  ಇರುವುದನ್ನು ಅವುಗಳ ಕೂಗುಗಳಿಂದ ಗುರ್ತಿಸಬಹುದು. ಇವು ಇಲಿ ಪ್ರಿಯ ಹಕ್ಕಿಗಳು, ತೆಂಗಿನ ನೆತ್ತಿ ಸುಳಿಯಲ್ಲಿ ಇಲಿ ಗೂಡುಗಳನ್ನು ಹುಡುಕಿ, ಬೆದಕಿ ಇಲಿ ಮರಿಗಳನ್ನು ಹೆಕ್ಕಿ ತಿನ್ನುತ್ತವೆ. ಈ ಹಕ್ಕಿಗಳು ಹಣ್ಣುಗಳನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. ಇವು ಹೀಗೆ ಇಲಿಗಳನ್ನು ನಮ್ಮ ತೆಂಗಿನ ತೋಟಗಳಲ್ಲಿ ನಿಯಂತ್ರಿಸದಿದ್ದರೆ ಒಂದು ಎಳನೀರನ್ನು ಕಾಣಲಾಗುತ್ತಿರಲಿಲ್ಲವೇನೋ. ಇಷ್ಟಾಗಿಯೂ ಇಲಿ ಬುಲ್ಡೆಗಳು ಮರದ ಬುಡದಲ್ಲಿ ಇಟ್ಟಾಡುತ್ತಿರುವುದು ಇಲಿಗಳ ಬುದ್ಧಿವಂತಿಕೆಗೆ ಸಾಕ್ಷಿ. ಎಲ್ಲಾ ಕಡೆಯೂ ಹಕ್ಕಿಗಳು ಹಾರಡುತ್ತವೆ, ಆದರೆ ನಮ್ಮ ತೋಟದಲ್ಲಿ ವಾಸಮಾಡುತ್ತವೆ.

ಸೋಬಾನೆ ಹಕ್ಕಿಗಳು ಬೆಳಗು, ಸಂಜೆ ಬೇಲಿ ಸಾಲುಗಳಲ್ಲಿ ಆಡುವುದನ್ನು ನೋಡಬೇಕು,  ತಿಂಡಿ ತಿಂದು ಅರ್ಜೆಂಟಾಗಿ ಎಲ್ಲಿಗೋ ಹೋಗಬೇಕು ಎನ್ನುವಂತೆ ಚಡಪಡಿಸುತ್ತಿರುತ್ತವೆ. ಅವುಗಳು ಬೇಲಿ ಸಾಲಿನಲ್ಲಿ ನಿಖರವಾಗಿ ಏನೇನು ತಿನ್ನುತ್ತವೆ ಎಂದು ಕಂಡುಹಿಡಿಯುವುದು ನನಗಿನ್ನೂ ಸಾಧ್ಯವಾಗಿಲ್ಲ. ಕೀಟಗಳು ಅವುಗಳ ಮುಖ್ಯ ಆಹಾರವೆಂಬುದು ನಿಜ, ಅವು ಎಳೆ ಹುಲ್ಲನ್ನು, ಹುಲ್ಲಿನ ಬೀಜಗಳನ್ನು ತಿನ್ನುತ್ತವೆ ಎನ್ನುವುದು ನನ್ನ ಅನುಮಾನ. ಗುಂಪು ಗುಂಪಾಗಿಯೆ ಇರುವ ಈ ಸೋಬಾನೆ ಹಕ್ಕಿಗಳು ಅವುಗಳ ಚಲನೆಯಲ್ಲಿ ಸ್ವಲ್ಪ “ಮದ್ದ” ಅನಿಸಿದರೂ ತಮ್ಮ ತಮ್ಮಲ್ಲಿ ಅತಿ ಎನ್ನಿಸುವಷ್ಟು ಮಾತಾಡುತ್ತಿರುತ್ತವೆ. ಈ ವಿಷಯದಲ್ಲಿ ಇವು ಮೇಷ್ಟ್ರರ ಜಾತಿ.

ಈ ನವಿಲುಗಳನ್ನು ಪಕ್ಷಿ ಎನ್ನಬೇಕೋ ಪ್ರಾಣಿ ಎನ್ನಬೇಕೋ ಹಾಗಿರುತ್ತದೆ ಅವುಗಳ ನಡೆ ನುಡಿ. ನಡೆದಾಡುವ ಪಕ್ಷಿಗಳು ಎಂದರೆ ಸ್ವಲ್ಪ ಸರಿ. ಹಾರುವ ಪ್ರಾಣಿ ಎಂದರೆ ಅದೂ ಸ್ವಲ್ಪ ಸರಿ. ಕೂಗುವುದು ಪ್ರಾಣಿಗಳ ಹಾಗೆ, ಕಾಣುವುದು ಪಕ್ಷಿಗಳ ಹಾಗೆ. ಇತ್ತೀಚೆಗೆ ಇವು ನಮ್ಮ ಬಯಲು ಸೀಮೆಯಲ್ಲಿ ಅತಿ ಎನ್ನಿಸುವಷ್ಟು ಹೆಚ್ಚಿವೆ. ಇವುಗಳನ್ನು ಬೇಟೆಯಾಡುವ ಪ್ರಾಣಿಗಳು ಕಾಡು ಮೇಡು ತೊರೆದು ಹಗಲು ಹೊತ್ತಲ್ಲಿ ತೋಟದ ಸಾಲಿಗೆ ಬರದಿರುವುದು ಇದಕ್ಕೆ ಕಾರಣವಿರಬಹುದು.

ಈ ನವಿಲುಗಳು ಹುಲ್ಲಿನ ಪೊದೆಗಳಲ್ಲಿ ಯಾವ ಭಯವೂ ಇಲ್ಲದೆ ಮೊಟ್ಟೆ ಇಟ್ಟು ಮರಿಮಾಡಿಕೊಂಡು ಹೋಗುವುದನ್ನು ರೂಢಿಮಾಡಿಕೊಂಡಿವೆ. ಮನುಷ್ಯರಿಗೆ ಇವುಗಳನ್ನು ಬೇಟೆಯಾಡಲು ಆಸೆ ಆದರೆ ಜೈಲು ಸೇರುವ ಭಯದಲ್ಲಿ ಅವುಗಳನ್ನು ನೋಡಿ, ಎಷ್ಟು ಕೇಜಿ ಮಾಂಸ ಬರಬಹುದು ಎಂದು ಊಹಿಸಿಕೊಂಡು ಜೊಲ್ಲು ಸುರಿಸಿ ಸುಮ್ಮನಾಗುತ್ತಾರೆ. ಹೊಲದಲ್ಲಿ ಬಿತ್ತಿದ ತೊಗರಿ, ಅವರೆ ಕಾಳುಗಳನ್ನು ಸಾಲು ಹಿಡಿದು ತಿನ್ನುವ ಈ ನವಿಲುಗಳನ್ನು ಕಂಡರೆ ನಮ್ಮ ರೈತರಿಗೀಗ ಅಭಿಮಾನವಿಲ್ಲ, ಕೊಲ್ಲುವಷ್ಟು ಸಿಟ್ಟು ಬಂದಿದೆ. ಇವು ಈಗ ಮಾಡುತ್ತಿರುವ ಹಾನಿ ಅತಿಯಾಗಿದೆ. ಎಳೆಯ ಪೈರುಗಳನ್ನು ಸ್ವಾಹ ಮಾಡುತ್ತವೆ. ಆಹಾರದ ಕೊರತೆಯಾದಾಗ ಅವು ಊರೊಳಕ್ಕು ಬರುವುದನ್ನು ರೂಢಿ ಮಾಡಿಕೊಳ್ಳುತ್ತಿವೆ. ರಾಷ್ಟ್ರಪಕ್ಷಿಯಾದ ನವಿಲು ಎಂಜಲು ಮುಸುರೆಯನ್ನು ಕುಡಿಯುವ ವಾಸ್ತವ ನಮ್ಮ ಕಣ್ಣ ಮುಂದಿದೆ. ಕಾಡುಗಳನ್ನು ಇನ್ನಿಲ್ಲದಂತೆ ಸವರಿ ಹಾಕಿ ಒತ್ತುವರಿ ಮಾಡಿದ್ದು, ಬೆಟ್ಟ ಗುಡ್ಡಗಳೆಲ್ಲೆಡೆಯಲ್ಲಿನ ಗಣಿಗಾರಿಕೆ ನೆಪದಲ್ಲಿ ಸಿಡಿಸುವ ಡೈನಾಮೈಟ್‌ ಸಾವಿನ ಸದ್ದು, ಹುಲ್ಲುಗಾವಲುಗಳ ಕಣ್ಮರೆ, ನವಿಲಷ್ಟೇ ಅಲ್ಲ ಇತರ ಕಾಡು ಪ್ರಾಣಿಗಳ ಅಬ್ಬೇಪಾರಿತನ್ನಕ್ಕೆ ಕಾರಣವಾಗಿದೆ.

ಗುಚ್ಚಕ್ಕಿ ತೋಟಕ್ಕೆ ಬರುವುದಿಲ್ಲ. ಅವು ಊರೊಳಗೆ ಮಾತ್ರ ತಮ್ಮ ವಸತಿ ಮಾಡಿಕೊಂಡಿರುತ್ತವೆ. ಅದಕ್ಕೆ ಅವು ಬೇಗ ರೋಗ ರುಜಿನಗಳಿಗೆ ತುತ್ತಾಗಿ ಈಗ ಅಲ್ಪ ಸಂಖ್ಯಾತವಾಗಿವೆ. ಕಾಗೆಗಳು ಉಭಯವಾಸಿಗಳು ತೋಟ ಹೊಲ ಮತ್ತು ಊರೊಳಗೆ ಎರಡೂ ಕಡೆ ತಮ್ಮ ನೆಲೆ ಕಂಡುಕೊಂಡಿವೆ. ನಮ್ಮ ತೋಟದಲ್ಲಿ ಅವು ಕಾ ಕಾ ಎಂದು ಕೂಗಿದವೆಂದರೆ ಪರಂಗಿ ಗಿಡದಲ್ಲಿ ಹಣ್ಣುಗಳು ರೆಡಿ ಇವೆ ಎಂದೇ ಅರ್ಥ. ಅವು ಇಲಿಗಳನ್ನು ಹಿಡಿದು ತಿನ್ನುವುದು ನಿಜವಾದರೂ ಅವಕ್ಕೆ ಪರಂಗಿ, ಹಲಸು, ಸತ್ತ ಪ್ರಾಣಿಗಳು, ಮೆಣಸಿನಕಾಯಿ ಎಂದರೆ ಬಲು ಇಷ್ಟ.

ಮರಕುಟುಕ ಹಕ್ಕಿಗಳು ಯಾಕೋ ಕಮ್ಮಿಯಾದಂತೆ ಅನಿಸಿದೆ. ಎಲ್ಲೋ ಒಂದೊಂದು ಮರಕುಟುಕ ಮಿಡತೆ, ಜೇನುಹುಳ, ಕಡಜ ಮುಂತಾದ ಕೀಟಗಳನ್ನು ಕೊಕ್ಕಲ್ಲಿ ಹಿಡಿದು ಮರಕ್ಕೆ ಬಡಿದು ಸಾಯಿಸಿ ತಿನ್ನುವ ದೃಶ್ಯವನ್ನು ನೋಡಬಹುದಾಗಿದೆ. ಈ ಮೊದಲು ಅವು ಮರದ ಟೊಳ್ಳು ಭಾಗವನ್ನು ತಮ್ಮ ಕೊಕ್ಕಿನಿಂದ ಟಪ್‌ ಟಪ್‌ ಎಂದು ಕುಕ್ಕುತ್ತಾ, ಆ ಕುಕ್ಕಿದ ಭಾಗದಿಂದ ಈಚೆ ಹೊರಡುವ ಅಮಾಯಕ ಹುಳುಗಳನ್ನು ಕಬಳಿಸುವ ದೃಶ್ಯವನ್ನು ತೋಟದ ಅನೇಕ ಭಾಗಗಳಲ್ಲಿ ನೋಡಬಹುದಾಗಿತ್ತು. ಅಂಥಾ ಚೂಟಿ ಹಕ್ಕಿಗಳು ಎಲ್ಲಿ ಹೋದವೋ ಯಾರಿಗೆ ಗೊತ್ತು.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ. ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ: ಕೋಟಿ ಕೀಟಗಳ ಉಳುಮೆ, ಹುಲ್ಲು ಬೇರಿನ ಮಹಿಮೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...

ಮುಂಬೈ: 2 ದಿನಗಳಿಂದ ಹೊತ್ತಿ ಉರಿಯುತ್ತಿರುವ ಪೊವೈ ಬೆಟ್ಟಗಳು: ನಿವಾಸಿಗಳಿಂದ ಅಧಿಕಾರಿಗಳ ನಿಷ್ಕ್ರಿಯತೆಯ ಆರೋಪ 

ಮುಂಬೈನ ಪೊವೈ ಬೆಟ್ಟಗಳ ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ಕಳೆದ ಎರಡು ದಿನಗಳಿಂದ ಉರಿಯುತ್ತಿದೆ ಎಂದು ವರದಿಯಾಗಿದೆ. ನಿವಾಸಿಗಳು ಬೆಂಕಿಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ನಾಗರಿಕ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆಯು ಸಿಕ್ಕಿಲ್ಲ...

‘ದಲಿತ ಕ್ರೈಸ್ತ’ರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಬೇಕು: ಮಾನವ ಹಕ್ಕುಗಳ ಕಾರ್ಯಕರ್ತ ವಿನ್ಸೆಂಟ್ ಕಥಿರ್

"ದಲಿತ ಕ್ರೈಸ್ತರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಬೇಕು, ಇದರಿಂದಾಗಿ ಜಾತಿ ಹಿಂಸಾಚಾರದ ಬಲಿಪಶುಗಳು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳ ಪ್ರಕಾರ ಸರ್ಕಾರದಿಂದ ಪರಿಹಾರವನ್ನು ಪಡೆಯಬಹುದು" ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ...

ಪಶ್ಚಿಮ ಏಷ್ಯಾ ಬಿಕ್ಕಟ್ಟು : ಇರಾನ್ ವಿದೇಶಾಂಗ ಸಚಿವರ ಜೊತೆ ಜೈಶಂಕರ್ ಚರ್ಚೆ

ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅವರೊಂದಿಗೆ ಮಂಗಳವಾರ (ಮಾ.10) ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಈ ವೇಳೆ ಪಶ್ಚಿಮ ಏಷ್ಯಾದ ಬೆಳವಣಿಗೆಗಳು...

ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ಆರೋಪ : ನೌಕಾಪಡೆಯ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ಬಂಧನ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ 24 ವರ್ಷದ ಭಾರತೀಯ ನೌಕಾಪಡೆಯ ಲ್ಯಾನ್ಸ್ ನಾಯಕ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮಂಗಳವಾರ (ಮಾ.10)...

ಅಮೆರಿಕದ ತೈಲ ಸಂಸ್ಕರಣಾ ಘಟಕಕ್ಕೆ ರಿಲಯನ್ಸ್ ಹೂಡಿಕೆ : ಟ್ರಂಪ್ ಘೋಷಣೆ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಹೂಡಿಕೆಯ ಸಹಾಯದಿಂದ 50 ವರ್ಷಗಳಲ್ಲಿ ಅಮೆರಿಕ ತನ್ನ ಮೊದಲ ಹೊಸ ತೈಲ ಸಂಸ್ಕರಣಾಗಾರವನ್ನು ಪಡೆಯಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 'ಅಮೆರಿಕ ಫಸ್ಟ್ ರಿಫೈನಿಂಗ್ ಸಂಸ್ಥೆ'ಯು ಟೆಕ್ಸಾಸ್‌ನ...

ಭಾರತೀಯರ ಅಡುಗೆ ಮನೆ ತಲುಪಿದ ಯುದ್ಧದ ಪರಿಣಾಮ : ದೇಶದಾದ್ಯಂತ ಎಲ್‌ಪಿಜಿ ಕೊರತೆ ಉಲ್ಬಣ

ಅಮೆರಿಕ, ಇಸ್ರೇಲ್, ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ಸಂಘರ್ಷದಿಂದ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ದೇಶ ಪ್ರಧಾನಿ ಮೋದಿಯವರ ಕೈಯಲ್ಲಿ ಭದ್ರವಾಗಿದೆ ಎಂದು ಒಂದಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿರುವಾಗಲೇ,...