HomeUncategorizedತುರ್ತು ಪರಿಸ್ಥಿತಿಯ ಆರಾಧಕರ ಮುದ್ದಿನ ಕಾನೂನು-‘ದೇಶದ್ರೋಹ’

ತುರ್ತು ಪರಿಸ್ಥಿತಿಯ ಆರಾಧಕರ ಮುದ್ದಿನ ಕಾನೂನು-‘ದೇಶದ್ರೋಹ’

- Advertisement -
- Advertisement -

‘ದೇಶದ್ರೋಹ’: ಈ ಮೊದಲು ಯಾವುದೋ ನಕ್ಸಲ್ ಕೇಸಲ್ಲಿ ಅದಕ್ಕೂ ಮುಂಚೆ ಖಲಿಸ್ತಾನ್ ಕೇಸುಗಳಲ್ಲಿ, ಮತ್ತಂಥದ್ಯಾವುದೋ ಕೇಸುಗಳಲ್ಲಿ ನಾವು ಪೇಪರಿನಲ್ಲಿ ಓದುತ್ತಿದ್ದೆವು. ನಮ್ಮ ಸುತ್ತಲಿನ ನಿತ್ಯದ ಬದುಕಲ್ಲಿ ಅದರ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯೂ ಇರಲಿಲ್ಲ.

‘ದೇಶದ್ರೋಹ’ದ ಆಪಾದನೆಗಳು ಒಂದು ಕಾಲಘಟ್ಟದಲ್ಲಿ ಹೆಚ್ಚಾಗಿ ಕಂಡುಬಂದಿದ್ದು ಎಪ್ಪತ್ತರ ದಶಕದ ಎಮರ್ಜೆನ್ಸಿ ಸಮಯದಲ್ಲಿ. ಸ್ವಾತಂತ್ರ್ಯಪೂರ್ವದಲ್ಲಿ ಅದೊಂದು ನಿತ್ಯದ ಅಪರಾಧವಾಗಿತ್ತು. ದೇಶದ್ರೋಹದ ಆಪಾದನೆಯಿಲ್ಲದ ಸ್ವಾತಂತ್ರ್ಯ ಹೋರಾಟಗಾರನಿರಲಿಲ್ಲ. ನಮ್ಮ ದ.ರಾ ಬೇಂದ್ರೆಯವರನ್ನು ಕಾಡಿತ್ತು ದೇಶದ್ರೋಹದ ಶಿಕ್ಷೆ. ಅವರ ‘ನಾದಲೀಲೆ’ ಕವನಸಂಕಲನ ಆ ಸಮಯದಲ್ಲಿ ಬರೆದದ್ದು.

ಅಷ್ಟಕ್ಕೂ ಏನಿದು ‘ದೇಶದ್ರೋಹ’? ನಮ್ಮ ಕಾನೂನಿನಲ್ಲಿ, ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ, ಕಾನೂನಾತ್ಮಕವಾಗಿ ನಡೆಸುತ್ತಿರುವ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಶಾಂತಿಭಂಗವಾಗುವಂಥ ವಾತಾವರಣ ಸೃಷ್ಟಿ ಮಾಡುವುದು ‘ದೇಶದ್ರೋಹ’ವೆನ್ನಲಾಗುತ್ತದೆ.

ಸರ್ಕಾರವನ್ನು ಟೀಕಿಸುವ, ವಿಮರ್ಶಿಸುವ ಅಧಿಕಾರ ನಮಗಿಲ್ಲವೇ? ಅದೆಷ್ಟೋ ಜನ ಸರ್ಕಾರಗಳನ್ನ ತರಾಟೆಗೆ ತೆಗೆದುಕೊಳ್ತಾರೆ – ವಿರೋಧಪಕ್ಷವಾಗಲೀ, ಮಾಧ್ಯಮದವರಾಗಲೀ ತಮ್ಮ ಹದ್ದಿನಕಣ್ಣಿನಿಂದ ಯಾವಾಗಲೂ ನೋಡುತ್ತಿರುತ್ತಾರೆ ಹಾಗೂ ಪ್ರತಿ ಚಿಕ್ಕತಪ್ಪನ್ನು ಎತ್ತಿಹಿಡಿಯುತ್ತಾರೆ. ಅದೇನಾದರೂ ಭ್ರಷ್ಟತೆಯ ಆರೋಪವಾದರೆ ಮುಗಿಯಿತು ಸರ್ಕಾರವನ್ನು ಹಿಗ್ಗಾಮುಗ್ಗಾ ಬೈಯುತ್ತಿರುತ್ತಾರೆ. ಎಂತೆಂಥದೋ ಕೆಟ್ಟ ಶಬ್ದಗಳನ್ನ ಉಪಯೋಗಿಸಲಾಗುತ್ತದೆ. ಅದೇ ಅಲ್ಲವೇ ಪ್ರಜಾಪ್ರಭುತ್ವವೆಂದರೆ ಎಂದು ನೀವು ಕೇಳಬಹುದು. ಆಶ್ಚರ್ಯದ ಸಂಗತಿ ಏನೆಂದರೆ ಸುಪ್ರೀಂಕೋರ್ಟು, ಹೈಕೋರ್ಟುಗಳು ಕೂಡ ಇದನ್ನೇ ಹೇಳುತ್ತವೆ. ಹಾಗಾದರೆ ಅದು ಅಪರಾಧ ಹೇಗಾಯಿತು?

ದುರಂತವೆಂದರೆ ಸ್ವಾತಂತ್ರ್ಯಾನಂತರ ದೇಶದ್ರೋಹದ ಅಪರಾಧವನ್ನು ಕಾನೂನಲ್ಲಿ ಉಳಿಸಿಕೊಳ್ಳಲಾಯಿತು. ಈ ಅಪರಾಧ ಊರ್ಜಿತವಲ್ಲವೆಂದು, ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದಾಗ ದೇಶದ್ರೋಹ ಉಳಿಯುವ ಅವಕಾಶವಿಲ್ಲವೆಂದು ಕೇದಾರನಾಥ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‍ನಲ್ಲಿ ವಾದಿಸಲಾಯಿತು. ಅಂದಿನ ಕಾಲಘಟ್ಟದಲ್ಲಿನ ಸ್ಥಿತಿಗಳು ಆ ಅಪರಾಧದ ಕಾನೂನನ್ನು ಉಳಿಸಿಕೊಳ್ಳುವ ಅವಶ್ಯಕತೆಯನ್ನ ಒಪ್ಪಿಸಿದ್ದವು. ಇಂದಿಗೂ ಕೇದಾರನಾಥ್ ಪ್ರಕರಣ ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮೈಲಿಗಲ್ಲು.

ಕೇದಾರನಾಥ್ ಪ್ರಕರಣದ ಮುಖ್ಯ ತೀರ್ಪೆಂದರೆ ಎಲ್ಲವುದೂ ದೇಶದ್ರೋಹವಲ್ಲ. 124ಎ ನಲ್ಲಿಯೇ ಅದಕ್ಕೆ ರಕ್ಷಣೆ ಕೊಡಲಾಗಿದೆ. ಸರ್ಕಾರದ ನೀತಿಗಳಿಗೆ ವಿರೋಧ ವ್ಯಕ್ತಪಡಿಸುವುದು, ಸರಿಯಿಲ್ಲವೆನ್ನುವುದು, ಮೂರ್ಖತ್ವದಿಂದ ಕೂಡಿದೆಯೆಂಬುದು, ಜನವಿರೋಧಿ ಎನ್ನುವುದು, ಮತ್ತು ಯಾವುದೇ ರೀತಿಯ ವಿಮರ್ಶೆಯನ್ನು ಅಲ್ಲಿ ರಕ್ಷಿಸಲಾಗಿದೆ. ಅದಿಲ್ಲದೇ ಇದ್ದರೇ ಪ್ರತಿ ವಿರೋಧಪಕ್ಷದ ರಾಜಕಾರಣಿಯನ್ನು ಜೈಲಲ್ಲಿಡಬಹುದು – ಅದು ಸಾಂವಿಧಾನಿಕ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ.

ಕೇದಾರನಾಥ್ ತೀರ್ಪು ಎಷ್ಟೇ ಸರಿಯಿದ್ದರೂ, ಸರ್ಕಾರಗಳೆಂದೂ ತುಂಬಾ ಶ್ರದ್ಧೆಯಿಂದ ಆ ತೀರ್ಪನ್ನು ಕಡೆಗಣಿಸಿವೆ ಎಂಬುದು ಚಾರಿತ್ರಿಕ ಸತ್ಯ. ಆದರೆ ಇದನ್ನ ಯಾರ ಮೇಲೆ ಪ್ರಯೋಗಿಸಲಾಯಿತು ಎಂದರೆ, ಸಾಮಾನ್ಯವಾಗಿ ಜನಪರ ಚಳವಳಿಗಳ ಮೇಲೆ. ಅವುಗಳ ನಾಯಕರನ್ನು ಯಾವಾಗಲೂ ದೇಶದ್ರೋಹದ ಪಟ್ಟಿಯಲ್ಲಿ ಸೇರಿಸಲಾಗಿದೆ. ಜಯಪ್ರಕಾಶ್ ನಾರಾಯಣ್ ಇರಲಿ, ಕಮ್ಯೂನಿಸ್ಟ್ ನಾಯಕರಿರಲಿ, ಅಟಲ್ ಬಿಹಾರಿ ವಾಜಪೇಯಿಯವರಿರಲಿ ಒಂದು ಚಳವಳಿಯ ನೇತಾರರಾಗಿದ್ದರೆ ದೇಶದ್ರೋಹದ ಆರೋಪ ಕಟ್ಟಿಟ್ಟಬುತ್ತಿ ಎಂಬಂತಿದೆ. ಇಂದಿಗೂ ಆ ಸ್ಥಿತಿ ಬದಲಾಗಿಲ್ಲ.

ಎಮರ್ಜೆನ್ಸಿ ಸಮಯದಲ್ಲಂತೂ ಈ ಅಪರಾಧ ಕಾನೂನನ್ನು, ಸರ್ಕಾರದ ಮಾತನ್ನು ವಿರೋಧಿಸಿದವರೆಲ್ಲರ ಮೇಲೂ ಉಪಯೋಗಿಸಲಾಯಿತು. ಅದರ ಪರಿಣಾಮ ನಮಗೆಲ್ಲರಿಗೂ ತಿಳಿದ ಇತಿಹಾಸ.

ಎಂಭತ್ತರ, ತೊಂಭತ್ತರ ದಶಕ ಹಾಗೂ ಇಪ್ಪತ್ತೊಂದನೇ ಶತಮಾನದ ಮೊದಲ ದಶಕದ ಆರಂಭದಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಕಂಡರೂ (ಬಹುಶಃ ಮೈತ್ರಿ ಸರ್ಕಾರಗಳ ಕಾರಣವಿರಬಹುದು) ಕಳೆದೈದು ವರ್ಷಗಳಲ್ಲಿ ಇದರ ದುರುಪಯೋಗ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲೆಂದೆ ತಂದ UAPA ಕಾಯ್ದೆ ನಂತರದ ರೂಪಗಳಲ್ಲಿ, TADA ಹಾಗೂ POTA ಕಾಯ್ದೆಗಳಿಗೆ ಪರ್ಯಾಯವಾಗಿ ಬದಲಾವಣೆಯಾಗಿದ್ದು ಚಾರಿತ್ರಿಕ ಸತ್ಯ. ಯಾವುದೋ ಆತಂಕವಾದಿ ಸಂಘಟನೆಯನ್ನು ಬಹಿಷ್ಕರಿಸುವ ಹಾಗೂ ಅದರ ಕಾರ್ಯಗಳನ್ನು ಕಟ್ಟಿಹಾಕುವ ಹಾಗೂ ಯಾವುದೇ ಅಂಥಾ ಘಟನೆಗಳಿಗೆ ಶಿಕ್ಷಿಸುವಂಥಾ ಉದ್ದೇಶವನ್ನು ಹೊಂದಿದ್ದು ತನ್ನ ಹೊಸ ಅವತಾರದಲ್ಲಿ ಯಾರನ್ನಾದರೂ ಅದರಡಿಯಲ್ಲಿ ಜೈಲಿಗೆ ತಳ್ಳಬಹುದಾದ ಮತ್ತು ಸಂವಿಧಾನ ಜನಿತ ಹಕ್ಕುಗಳನ್ನು ಇಲ್ಲದಂತೆ ಮಾಡುವ ಅಧಿಕಾರವನ್ನು ಹೊಂದಿದೆ.

ಅದರ ತೀವ್ರ ದುರುಪಯೋಗ ಇಂದು ನಾವೆಲ್ಲ ಕಾಣುತ್ತಿದ್ದೇವೆ. ಬೀದರಿನ ಶಾಲೆಯಲ್ಲಿ ನಾಟಕಕ್ಕೆಂದು ಮಗುವಿಗೆ ಹಳೆಯ ಚಪ್ಪಲಿಯೊಂದು ಕೊಟ್ಟಿದ್ದು ತಾಯಿಯ ದೇಶದ್ರೋಹವಾಗುವಷ್ಟು, ಒಂದು ಕವನ ಬರೆದರೆ, ಒಂದು ಕಾರ್ಟೂನನ್ನು ಶೇರ್ ಮಾಡಿದರೆ, ಕಾರ್ಟೂನ್ ಚಿತ್ರಿಸಿದರೆ, ಒಂದು ಸ್ಲೋಗನ್ ಕೂಗಿದರೂ ದೇಶದ್ರೋಹ ಪ್ರಕರಣ ದಾಖಲಿಸುವ ಸ್ಥಿತಿಯನ್ನು ನಾವು ತಲುಪಿದ್ದೇವೆ. ಮಾನವ ಹಕ್ಕುಗಳನ್ನು ಕೇಳುವವರನ್ನು ಜೈಲಿಗಟ್ಟುತ್ತಿದೇವೆ. ಅದು ಒಬ್ಬ ಕವಿಯಿರಲಿ, ಪ್ರಾಧ್ಯಾಪಕನಿರಲಿ, ವಿದ್ಯಾರ್ಥಿಯಿರಲಿ, ಬಸರಿಯಿರಲಿ, ಸಂವಿಧಾನಿಕ ರೀತಿಯ ಹೋರಾಟವನ್ನು ತನ್ನದಾಗಿಸಿಕೊಂಡವನಿರಲಿ, ಸರ್ಕಾರಗಳು ಸಹಿಸುತ್ತಿಲ್ಲ. ಇಂದು ಇಂಥಾ ಕಾನೂನುಗಳಲ್ಲಿ ಆರೋಪಿಸುವುದಕ್ಕೆ ಬಲವಾದ ಕಾರಣಗಳೂ ಬೇಕಿಲ್ಲ.

ಇವು ನಾವು ನಮಗಾಗಿ ಬರೆದುಕೊಂಡಿರುವ, ನಮ್ಮದಾದ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಚ್ಯುತಿ ತಂದಿವೆ. ಇಂಥಾ ಕರಾಳ ಕಾಯ್ದೆಗಳ ಮರುಪರಿಶೀಲನೆ ಅತ್ಯವಶ್ಯವಾಗಿದೆ. ಇಂಥಾ ಕಾನೂನುಗಳ ದುರುಪಯೋಗ ನಿಲ್ಲಬೇಕಿದೆ.


ಇದನ್ನು ಓದಿ: ಪತಂಜಲಿ ಕೊರೊನಾ ಔಷಧಿ ಮಾರಿದರೆ ಕ್ರಮ: ರಾಜಸ್ಥಾನ ಸಚಿವರ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಮಾದಕ ದ್ರವ್ಯ ಕಳ್ಳಸಾಗಣೆ, ಜುಗಾರಿ,  ಭಿಕ್ಷೆ ಬೇಡುವುದನ್ನು ‘ವೃತ್ತಿ’ ಎಂದು ಪಟ್ಟಿ ಮಾಡಿದ...

0
ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರಪ್ರದೇಶ ಸರಕಾರ ಮತ್ತೆ ಮುಜುಗರಕ್ಕೆ ಈಡಾಗಿದ್ದು, ಉತ್ತರಪ್ರದೇಶ ಪೊಲೀಸ್ ಮೊಬೈಲ್ ಅಪ್ಲಿಕೇಶನ್ UPCOPನಲ್ಲಿ ಬಾಡಿಗೆದಾರರ ಪರಿಶೀಲನೆಗಾಗಿ ವೃತ್ತಿ ಬಗ್ಗೆ ಪಟ್ಟಿ ಮಾಡಿದೆ. ಅವುಗಳಲ್ಲಿ 'ಮಾದಕ ದ್ರವ್ಯಗಳ ಕಳ್ಳಸಾಗಣೆ', 'ಜುಗಾರಿ',  ಮತ್ತು...