ನಿನ್ನೆ ಇಂದಿರಾ ಜೈಸಿಂಗ್ ಮತ್ತು ಅವರ ಪತಿ ಆನಂದ್ ಗ್ರೋವರ್ ಅವರ ಸ್ವಯಂ ಸೇವಾ ಸಂಸ್ಥೆಯ (ಲಾಯರ್ಸ್ ಕಲೆಕ್ಟಿವ್) ಕಚೇರಿಗಳ ಮೇಲೆ ಸಿಬಿಐ ದಾಳಿ ಮಾಡಿದ್ದು, ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ, 2010ರ ಅಡಿಯಲ್ಲಿ ಹಲವು ಆರೋಪಗಳನ್ನು ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದಿರಾ ಜೈಸಿಂಗ್ ಯಾರು, ಯಾತಕ್ಕಾಗಿ ಸಿಬಿಐ ದಾಳಿ ಮತ್ತಿತರರ ವಿಚಾರಗಳನ್ನು ಚರ್ಚಿಸಬೇಕಾಗಿದೆ.
ಇಂದಿರಾ ಜೈಸಿಂಗ್ ಯಾರು?
ಮಾನವ ಹಕ್ಕುಗಳ ರಕ್ಷಣೆಯ ಹೋರಾಟದಲ್ಲಿ ಇಂದಿರಾ ಜೈಸಿಂಗ್ ರವರ ಹೆಸರು ಐತಿಹಾಸಿಕವಾದುದ್ದು. ಹಲವು ಕಾನೂನು ಹೋರಾಟಗಳಲ್ಲಿ ಬಹಿರಂಗ ಮತ್ತು ಧೈರ್ಯವಂತಿಕೆಯ ಮಧ್ಯಪ್ರವೇಶ ಮತ್ತು ಕೆಲಸಕ್ಕೆ ಹೆಸರುವಾಸಿಯಾದ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಹ ದೊರಕಿದೆ. 1986 ರಲ್ಲಿ, ಬಾಂಬೆಯ ಹೈಕೋರ್ಟ್ ಹಿರಿಯ ವಕೀಲರಾಗಿ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರು 2009 ರಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡರು.
ಇಂದಿರಾ ಜೈಸಿಂಗ್ ಹಲವಾರು ಮಹತ್ವದ ಕಾನೂನು ಹೋರಾಟಗಳನ್ನು ಗೆದ್ದಿದ್ದಾರೆ, ಅದರಲ್ಲೂ ವಿಶೇಷವಾಗಿ ಕ್ರಿಶ್ಚಿಯನ್ ಮಹಿಳೆಯರ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುವ ಹಕ್ಕು, ಮಕ್ಕಳ ಪಾಲನೆ ಪ್ರಕರಣಗಳಲ್ಲಿ ನೈಸರ್ಗಿಕ ರಕ್ಷಕರಾಗಿ ತಾಯಿಯ ಹಕ್ಕು ಮುಖ್ಯವಾದವು. ಜೊತೆಗೆ 1984 ರ ಡಿಸೆಂಬರ್ನಲ್ಲಿ ಭೋಪಾಲ್ ಅನಿಲ ದುರಂತದಿಂದ ಬಲಿಯಾದವರಿಗೆ ಮತ್ತು ಬದುಕುಳಿದವರಿಗೆ ನ್ಯಾಯ ಮತ್ತು ಪರಿಹಾರಕ್ಕಾಗಿ ಅವರು ಯೂನಿಯನ್ ಕಾರ್ಬೈಡ್ ನಿಗಮದ ವಿರುದ್ಧ ಹೋರಾಡಿದವರು.
1980 ರ ಅವಧಿಯಲ್ಲಿ ಬಾಂಬೆಯ ಪಾದಚಾರಿ ನಿವಾಸಿಗಳ ಹಕ್ಕುಗಳ ಪರವಾಗಿ ಮತ್ತು ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳ ಪ್ರದೇಶವನ್ನು ಗಣಿಗಾರಿಕೆಯಿಂದ ರಕ್ಷಿಸುವ ಸಲುವಾಗಿ ಇವರು ಮಾಡಿರುವ ಕೆಲಸಗಳು ಮಾನವ ಹಕ್ಕುಗಳು ಮತ್ತು ಪರಿಸರ ಕಾರ್ಯಗಳಲ್ಲಿ ಪ್ರಮುಖವಾದವುಗಳಾಗಿವೆ.
ಜೀವ ಉಳಿಸುವ ಕ್ಯಾನ್ಸರ್ ಔಷಧ ಗ್ಲಿವೆಕ್ ಎಲ್ಲಾರಿಗೂ ಸಿಗಬೇಕೆಂದು ನೊವಾರ್ಟಿಸ್ ಪೇಟೆಂಟ್ ಅನ್ನು ವಿರೋಧಿಸುವ ಹೋರಾಟದಲ್ಲಿ ಇಂದಿರಾ ಜೈಸಿಂಗ್ ನೇತೃತ್ವದ ಲಾಯರ್ಸ್ ಕಲೆಕ್ಟಿವ್ ಸಾಕಷ್ಟು ಕೆಲಸ ಮಾಡೆದೆ. ತದ ನಂತರವಷ್ಟೇ ಏಪ್ರಿಲ್ 01, 2013 ರಂದು, ನೊವಾರ್ಟಿಸ್ ಅವರ ಪೇಟೆಂಟ್ ಅನ್ನು ಭಾರತದ ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಉದ್ಯೋಗ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಎಚ್ಐವಿ ವ್ಯಕ್ತಿ ಗಳಿಗೆ ತಾರತಮ್ಯದ ಮಸೂದೆಯ ವಿರುದ್ಧವೂ ಜೈಸಿಂಗ್ ಕೆಲಸ ಮಾಡಿದ್ದಾರೆ.
ಇಂದಿರಾ ಜೈಸಿಂಗ್ ರವರ ಲಾಯರ್ಸ್ ಕಲೆಕ್ಟಿವ್ ಮೇಲೆ ಸಿಬಿಐ ದಾಳಿ ಏಕೆ?
ಎಫ್ಸಿಆರ್ಎ (ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ, 2010) ಉಲ್ಲಂಘನೆ ಆರೋಪದ ಮೇಲೆ ಗೃಹ ಸಚಿವಾಲಯದ ಆದೇಶದ ಮೇರೆಗೆ ಆರು ತಿಂಗಳ ಕಾಲ ಲಾಯರ್ಸ್ ಕಲೆಕ್ಟಿವ್ ಪರವಾನಗಿಗಳನ್ನು ರದ್ದುಗೊಳಿಸಿದೆ. ಲಾಯರ್ಸ್ ಕಲೆಕ್ಟಿವ್ ಜೂನ್ 2016 ರಿಂದಲೂ ಮೋದಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ವಿದೇಶಿ ದೇಣಿಗೆಯನ್ನು ರಾಜಕೀಯ ಪ್ರೇರಿತ ರ್ಯಾಲಿ ಮತ್ತು ಧರಣಿಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. 2016 ರಲ್ಲಿ ದೇಶದ ಹಿತಾಸಕ್ತಿಗೆ ಹಾನಿಕಾರಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆಂದು ಆರೋಪಿಸಲಾದ 25 ಎನ್ಜಿಒಗಳ ಪಟ್ಟಿಯಲ್ಲಿಯೂ ಈ ಸಂಘಟನೆಯನ್ನು ಸೇರಿಸಲಾಗಿದೆ.
ಇಂದಿರಾ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಲ್ಲೇ 2016 ರಲ್ಲಿಯೇ ದಾಖಲೆಗಳನ್ನು ನೀಡಿ ಸ್ಪಷ್ಟಪಡಿಸಿದ್ದಾರೆ. ಆದರೆ 2019 ರ ಮೇ ತಿಂಗಳಲ್ಲಿ ಬಿಜೆಪಿ ಬೆಂಬಲಿತ ಲಾಯರ್ಸ್ ವಾಯ್ಸ್ ಎಂಬ ಮತ್ತೊಂದು ಎನ್ಜಿಒ ಸುಪ್ರೀಂ ಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿ ಲಾಯರ್ಸ್ ಕಲೆಕ್ಟಿವ್ ಎಫ್ಸಿಆರ್ಎ ಉಲ್ಲಂಘಿಸಿದೆ ಎಂದು ಆರೋಪಿಸಿತ್ತು. “ರಾಷ್ಟ್ರದ ವಿರುದ್ಧದ ಚಟುವಟಿಕೆಗಳಿಗಾಗಿ” ವಿದೇಶಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಲಾಯರ್ಸ್ ಕಲೆಕ್ಟಿವ್ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಲಾಯರ್ಸ್ ವಾಯ್ಸ್ ಕೋರಿದೆ. ಲಾಯರ್ಸ್ ವಾಯ್ಸ್ ನ ಸಂಯೋಜಕರಾದ ನೀರಜ್ ಅವರು ಬಿಜೆಪಿಯ ಅಖಿಲ ಭಾರತ ಕಾನೂನು ಸೆಲ್ ನ ಸಹ ಸಂಯೋಜಕರು ಆಗಿದ್ದಾರೆ.
ಇಂದಿರಾರವರ ಚಟುವಟಿಕೆಗಳು “ದೇಶದ ಹಿತಾಸಕ್ತಿಗಳಿಗೆ ಹಾನಿಕಾರಕವೆ”?
ಮೇಲ್ನೋಟದಲ್ಲಿಯೇ ಈ ಆರೋಪಗಳು ಸುಳ್ಳೆಂದು ಕಾಣುತ್ತವೆ. ಗೃಹ ಸಚಿವಾಲಯವು ಲಾಯರ್ಸ್ ಕಲೆಕ್ಟಿವ್ 2009, 2011 ಮತ್ತು 2014 ರಲ್ಲಿ ಕರಡು ಮಸೂದೆ ರಚಿಸುವ ಶಾಸನ ಸಭೆಗಳಿಗೆ ಮತ್ತು ಸಂಸದರು ಹಾಗೂ ಮಾಧ್ಯಮದ ಪರವಾಗಿ ವಕಾಲತ್ತು ವಹಿಸಲು, ರ್ಯಾಲಿಗಳು / ಧರಣಿಗಳನ್ನು ಆಯೋಜಿಸಲು ವಿದೇಶಿ ಕೊಡುಗೆಯಿಂದ 13 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ಬಳಸಿದೆ, ಎಂದು ಆರೋಪಿಸಿದೆ.
ನಿಜ ಅಂದರೆ ಯಾವುದೇ ಮಸೂದೆ ರಚನೆಯಾಗಬೇಕಾದರೆ ಹಲವಾರು ಕರಡುಗಳು ಮತ್ತು ಸಂಬಂಧಪಟ್ಟವರ ಸಭೆಗಳ ಮೂಲಕ ನಡೆಯಬೇಕು. ಕರಡು ಶಾಸನ ಸಭೆಗಳು, ರ್ಯಾಲಿಗಳನ್ನು ಆಯೋಜಿಸಿದ್ದು ಕೂಡ ತಾನು ಕಾರ್ಯನಿರ್ವಹಿಸುತ್ತಿರುವ ಎಚ್ಐವಿ ಸೊಂಕಿತರಿಗೆ ತಾರತಮ್ಯವಾಗಬಾರದು ಎಂಬ ಮಸೂದೆಗಾಗಿ. ಆನಂದ್ ಗ್ರೋವರ್ ಮೇಲೆ ಆರೋಪಿಸಿರುವ ವಿದೇಶಿ ಕೊಡುಗೆಯೊಂದಿಗೆ ಪ್ರಯಾಣವು ನೊವಾರ್ಟಿಸ್ ಪ್ರಕರಣಕ್ಕೆ ಸಂಬಂಧಿಸಿದೆ. ಇವುಗಳಲ್ಲಿ ಯಾವುದಾದರೂ ರಾಷ್ಟ್ರ ವಿರೋಧಿ ಹೇಗೆ ಆಗುತ್ತದೆ?
ಇಂದಿರಾ ಜೈಸಿಂಗ್ ಅವರು ಸರ್ಕಾರಿ ನೌಕರರಾಗಿದ್ದಾಗ ವಿದೇಶಿ ಹಣವನ್ನು ಸ್ವೀಕರಿಸಿದ್ದಾರೆ ಎಂಬ ಆರೋಪವಿದೆ. ಅದು ಲಾಯರ್ಸ್ ಕಲೆಕ್ಟಿವ್ ಅನುದಾನ ಪಡೆದಿರುವುದೇ ವಿನಃ ಲಂಚವಲ್ಲವೆಂದು ಮತ್ತು ಆ ಅವಧಿಯಲ್ಲಿ ಅವರು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ಕಾರಣದಿಂದ ಲಾಯರ್ಸ್ ಕಲೆಕ್ವಿವ್ ಗೆ ಕೆಲಸ ಮಾಡಿಲ್ಲವೆಂದೂ, ಆ ಅವಧಿಯಲ್ಲಿ ಪಡೆದ ಅನುದಾನಕ್ಕೆ ಸರ್ಕಾರದ ಅನುಮತಿ ಸಹ ಇತ್ತು ಎಂದು ಅವರು 2016 ರಲ್ಲಿಯೇ ಸ್ಪಷ್ಟಪಡಿಸಿದ್ದರು. ಇದರಲ್ಲಿ ಅಪರಾಧವೇನಿದೆ?
ಹಾಗಾದರೆ ಇವರ ಮೇಲೆ ಟಾರ್ಗೆಟ್ ಏಕೆ?
ಏಕೆಂದರೆ 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನರೇಂದ್ರ ಮೋದಿಯವರ ನೀತಿಗಳನ್ನು ಈ ದಂಪತಿಗಳು ನಿರ್ಭಯವಾಗಿ ಟೀಕಿಸುತ್ತಿದ್ದರು. ಜೊತೆಗೆ ಭಾರತೀಯ ಜನತಾ ಪಕ್ಷದ ಅವ್ಯವಹಾರ ಮತ್ತು ಸಂವಿಧಾನ ವಿರೋಧಿ ನಡೆಗಳನ್ನು ಪ್ರಶ್ನಿಸಿದ ಸಂಜೀವ್ ಭಟ್, ತಿಸ್ತಾ ಸೆಟ್ಲವಾದ್ ರವರ ಪರವಾದ ಕೇಸುಗಳನ್ನು ಇಂದಿರಾ ಜೈಸಿಂಗ್ ಮತ್ತು ಆನಂದ್ ಗ್ರೋವರ್ ರವರ ಲಾಯರ್ಸ್ ಕಲೆಕ್ವಿವ್ ನಡೆಸುತ್ತಿದೆ. ಈ ರೀತಿಯ ಪ್ರಜಾತಾಂತ್ರಿಕ ಮತ್ತು ಸಂವಿಧಾನಬದ್ಧವಾದ ಕೆಲಸ ಮಾಡುತ್ತಿರುವುದೇ ಮೋದಿ ಮತ್ತು ಅಮಿತ್ ಶಾರಿಗೆ ತಲೆನೋವಾಗಿದೆ. ಆ ಕಾರಣಕ್ಕಾಗಿಯೇ ಇವರ ಮೇಲೆ ದಾಳಿ ನಡೆಸಲಾಗುತ್ತಿದೆ.
ಭುಗಿಲೆದ್ದ ಪ್ರತಿರೋಧ
ವಕೀಲರಾದ ಇಂದಿರಾ ಜೈಸಿಂಗ್ ಮತ್ತು ಆನಂದ್ ಗ್ರೋವರ್ ಅವರ ಮನೆಗಳು ಮತ್ತು ಕಚೇರಿಗಳ ಮೇಲೆ ಸಿಬಿಐ ನಡೆಸಿದ ದಾಳಿಯನ್ನು ಖಂಡಿಸಿ ಸುಮಾರು 200 ಶಿಕ್ಷಣ ತಜ್ಞರು, ಕಾರ್ಯಕರ್ತರು, ಕಲಾವಿದರು ಮತ್ತು ಇತರರು ಹೇಳಿಕೆಗೆ ಸಹಿ ಹಾಕಿದ್ದಾರೆ. ಹಿರಿಯ ವಕೀಲರ ಮೇಲಿನ ದಾಳಿಗಳನ್ನು ಖಂಡಿಸಿ ರಾಜ್ಯಸಭೆಯ ಪ್ರತಿಪಕ್ಷ ಸಂಸದರು ಪಿಎಂ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
A group of Opposition MPs in Rajya Sabha have written to PM Narendra Modi condemning the raids on senior advocates Indira Jaising and Anand Grover in a FCRA case, say 'it is a brute show of intimidation and gross abuse of power' pic.twitter.com/xSq1iKDf43
— ANI (@ANI) July 11, 2019
ಈ ದಂಪತಿಗಳ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ನಾಗರಿಕ ಸಮಾಜದ ಪ್ರತಿನಿಧಿಗಳು ಇಂದಿರಾ ಮತ್ತು ಗ್ರೋವರ್ ಮೇಲಿನ ದಾಳಿಯೂ ದೀರ್ಘಕಾಲದಿಂದಲೂ ನಡೆಯುತ್ತಿರುವ ಬೆದರಿಕೆ ಮತ್ತು ಹತ್ತಿಕ್ಕುವಿಕೆಯ ಇತ್ತೀಚೆಗಿನ ಸೇರ್ಪಡೆಗಳಾಗಿವೆ. ಇದು ಅಧಿಕಾರ ದುರಪಯೋಗದ ಹಸಿ ಕ್ರೌರ್ಯವಲ್ಲದೇ ಬೇರೆನಲ್ಲ ಎಂದು ಕಿಡಿಕಾರಿದ್ದಾರೆ.
ಇಂಗ್ಲಿಷ್ ನಲ್ಲಿ ಓದಿ: Who is Indira Jaising and why CBI raid?
ಸಹಿ ಮಾಡಿದವರಲ್ಲಿ ಅರ್ಥಶಾಸ್ತ್ರಜ್ಞರಾದ ಅಮಿಯಾ ಕುಮಾರ್ ಬಾಗ್ಚಿ ಮತ್ತು ಜಯತಿ ಘೋಷ್, ಲೇಖಕಿ ಗೀತಾ ಹರಿಹರನ್, ಪತ್ರಕರ್ತರಾದ ನಿತಿನ್ ಸೇಥಿ ಮತ್ತು ಪಮೇಲಾ ಫಿಲಿಪೋಸ್, ಮತ್ತು ಕಲಾವಿದರು ವಿವನ್ ಸುಂದರಂ ಮತ್ತು ಪಾರ್ಥಿವ್ ಷಾ ಪ್ರಮುಖರಾಗಿದ್ದಾರೆ.


