Homeಮುಖಪುಟಗುಂಪು ಥಳಿತ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಉತ್ತರ ಪ್ರದೇಶ ಕಾನೂನು ಆಯೋಗದ ಶಿಫಾರಸು

ಗುಂಪು ಥಳಿತ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಉತ್ತರ ಪ್ರದೇಶ ಕಾನೂನು ಆಯೋಗದ ಶಿಫಾರಸು

ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದ ವರದಿಯೊಂದರಲ್ಲಿ ಉತ್ತರ ಪ್ರದೇಶದ ಕಾನೂನು ಆಯೋಗವು ಗುಂಪು ಥಳಿತದಿಂದ ಸಾವಿನ ಪ್ರಕರಣಗಳಿಗೆ ಕಡಿವಾಣ ಹಾಕಲು ವಿಶೇಷ ಕಾನೂನು ತರುವಂತೆ ಶಿಫಾರಸು ಮಾಡಿದೆ.

- Advertisement -
- Advertisement -

ಕೃಪೆ: ದಿ ವೈರ್
ಅನುವಾದ: ನಿಖಿಲ್ ಕೋಲ್ಪೆ

ಗೋರಕ್ಷಕರು ನಡೆಸಿರುವುದು ಸೇರಿದಂತೆ, ವಿವಿಧ ಗುಂಪು ಥಳಿತದಿಂದ ನಡೆದಿರುವ ಸಾವಿನ ಘಟನೆಗಳನ್ನು ಗಣನೆಗೆ ತೆಗೆದುಕೊಂಡಿರುವ ಉತ್ತರ ಪ್ರದೇಶದ ಕಾನೂನು ಆಯೋಗವು, ಈ ಅಪರಾಧಕ್ಕೆ ಜೀವಾವಧಿಯ ತನಕ ಶಿಕ್ಷೆ ವಿಧಿಸಲು ಶಿಫಾರಸು ಮಾಡುವ ಕರಡು ಮಸೂದೆಯೊಂದನ್ನು ಸರಕಾರಕ್ಕೆ ಸಲ್ಲಿಸಿದೆ.

ಗುಂಪು ಥಳಿತದಿಂದ ಕೊಲೆ ಕುರಿತ ವರದಿಯನ್ನು ಕರಡು ಮಸೂದೆಯೊಂದರ ಸಹಿತ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎ.ಎನ್. ಮಿತ್ತಲ್ ಅವರು ಬುಧವಾರ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದ್ದಾರೆ.

ಈ 128 ಪುಟಗಳ ವರದಿಯು ಗುಂಪು ಥಳಿತದಿಂದ ಸಾವು ಸಂಭವಿಸಿದ ವಿವಿಧ ಪ್ರಕರಣಗಳನ್ನು ಉಲ್ಲೇಖಿಸಿದ್ದು, 2018ರಲ್ಲಿ ಸುಪ್ರೀಂಕೋರ್ಟ್ ಕೋರ್ಟ್ ಮಾಡಿರುವ ಶಿಫಾರಸುಗಳಿಗೆ ಅನುಗುಣವಾಗಿ ತಕ್ಷಣವೇ ಕಾನೂನು ತರುವಂತೆ ಶಿಫಾರಸು ಮಾಡಿದೆ.

ಗುಂಪು ಥಳಿತದಿಂದಾಗುವ ಕೊಲೆ ಪ್ರಕರಣಗಳನ್ನು ನಿಯಂತ್ರಿಸಲು ಈಗಿರುವ ಕಾನೂನುಗಳು ಸಾಕಾಗವು ಎಂದಿರುವ ಆಯೋಗವು, ಅವುಗಳನ್ನು ನಿಭಾಯಿಸಲು ಪ್ರತ್ಯೇಕ ಕಾನೂನಿರಬೇಕು ಎಂದು ಒತ್ತಿಹೇಳಿದೆ. ಇಂತಹಾ ಅಪರಾಧಗಳಿಗೆ ಏಳು ವರ್ಷಗಳ ಸೆರೆವಾಸದಿಂದ ಜೀವಾವಧಿಯ ತನಕ ಶಿಕ್ಷೆಯನ್ನು ಅದು ಶಿಫಾರಸು ಮಾಡಿದೆ.

‘ದಿ ವೈರ್’ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ನ್ಯಾ. ಮಿತ್ತಲ್ ಅವರು, ಇನ್ನು ರಾಜ್ಯದ ಗೃಹ ಸಚಿವಾಲಯವು ಈ ವರದಿಯನ್ನು ಅಧ್ಯಯನ ಮಾಡಿ, ಕಾನೂನಿನ ಆವಶ್ಯಕತೆಯ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.

“ಗುಂಪು ಹಿಂಸಾಚಾರದ ಅತ್ಯಂತ ಕಟು ವಿವರಣೆ ಎಂದರೆ,
1901 ಯುಎಸ್‌ಎಯ ಮಿಸ್ಸೂರಿಯಲ್ಲಿ ನಡೆದ ಜನಾಂಗೀಯ ಗುಂಪು ಕೊಲೆಯ ಬಗ್ಗೆ ಲೇಖಕ ಮಾರ್ಕ್ ಟ್ವೈನ್‌ನ ಪ್ರತಿಕ್ರಿಯೆಯಾಗಿದೆ. ಆತ ಅದರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವು ಯುನೈಟೆಡ್ ಸ್ಟೇಟ್ಸ್ ಆಫ್ ಲಿಂಚ್‌ಡಂ ಆಗಿ ಬದಲಾಗುವ ಅಪಾಯವನ್ನು ಕಂಡಿದ್ದಾನೆ. ಇದೀಗ ಒಂದು ಶತಮಾನದ ಬಳಿಕ ಜಾತ್ಯತೀತ ಗಣರಾಜ್ಯವಾದ ಭಾರತವು ಇದೇ ರೀತಿಯ ಭಯದ ನೆರಳಲ್ಲಿ ಇರುವಂತೆ ಕಾಣುತ್ತಿದೆ” ಎಂದು ಈ ವರದಿಯ ಪ್ರಸ್ತಾವನೆಯಲ್ಲಿ ನ್ಯಾ. ಮಿತ್ತಲ್ ಬರೆದಿದ್ದಾರೆ.

ಈ ವಿಶೇಷ ಕಾನೂನನ್ನು ‘ಉತ್ತರ ಪ್ರದೇಶ ಗುಂಪು ಹತ್ಯೆ ವಿರುದ್ಧ ಹೋರಾಟ ಕಾಯಿದೆ’ ಎಂದು ಕರೆಯಬಹುದು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಇಂತಹಾ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮತ್ತು ಪೋಲಿಸ್ ಅಧಿಕಾರಿಗಳ ಹೊಣೆಗಾರಿಕೆಗಳನ್ನು ಆಯೋಗವು ನಿಗದಿಪಡಿಸಿದ್ದು, ಕರ್ತವ್ಯಚ್ಯುತಿಗೆ ಶಿಕ್ಷೆಯನ್ನೂ ಸ್ಪಷ್ಟಪಡಿಸಿದೆ.

ಹೊಸ ಕಾನೂನು, ಗಾಯಗೊಂಡವರು ಮತ್ತು ಮೃತಪಟ್ಟವರ ಕುಟುಂಬಕ್ಕೆ ಹಾಗೂ ಆದ ಆಸ್ತಿ ಹಾನಿಗೆ ಪರಿಹಾರವನ್ನೂ ಕಲ್ಪಿಸಬೇಕು ಎಂದೂ ಆಯೋಗ ಹೇಳಿದೆ. ಹಿಂಸೆಗೆ ಗುರಿಯಾದವರು, ಮತ್ತವರ ಕುಟುಂಬದ ಪುನರ್ವಸತಿಗೂ ಕಾನೂನಿನಲ್ಲಿ ಅವಕಾಶ ಇರಬೇಕು ಎಂದೂ ಅದು ಹೇಳಿದೆ.

ರಾಜ್ಯದಲ್ಲಿ 2012ರಿಂದ 2019 ವರೆಗಿನ ಲಭ್ಯ ಅಂಕಿಅಂಶಗಳ ಪ್ರಕಾರ 50 ಗುಂಪು ಥಳಿತದ ಘಟನೆಗಳು ನಡೆದಿವೆ. ಸುಮಾರು 50 ಬಲಿಪಶುಗಳಲ್ಲಿ ಹನ್ನೊಂದು ಮಂದಿ ಸತ್ತಿದ್ದು, 25  ಪ್ರಕರಣಗಳು ಗಂಭೀರವಾದ ಹಲ್ಲೆಗೆ ಸಂಬಂಧಿಸಿದವಾಗಿದ್ದು, ಇವುಗಳಲ್ಲಿ ತಥಾಕಥಿತ ಗೋರಕ್ಷಕರು ನಡೆಸಿದ ಹಲ್ಲೆಗಳೂ ಸೇರಿವೆ.

ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆಯೋಗವು ಸ್ವಯಂಪ್ರೇರಿತ ತನಿಖೆಯನ್ನು ಕೈಗೆತ್ತಿಕೊಂಡಿತ್ತು ಎಂದು ಆಯೋಗದ ಕಾರ್ಯದರ್ಶಿ ಸ್ವಪ್ನಾ ತ್ರಿಪಾಠಿ ಹೇಳಿದ್ದಾರೆ.

ಗುಂಪು ಹಲ್ಲೆಯನ್ನು ಹತ್ತಿಕ್ಕುವ ಸಲುವಾಗಿ 2018ರ ಜುಲೈಯಲ್ಲಿ ಸುಪ್ರೀಂಕೋರ್ಟ್, ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಕೆಲವು ಪರಿಶಮನಕಾರಿ ಮತ್ತು ದಂಡನಾತ್ಮಕ ಕ್ರಮಗಳ ಸರಣಿಯನ್ನೇ ಜಾರಿ ಮಾಡಿತ್ತು ಮಾತ್ರವಲ್ಲದೆ, ನಾಲ್ಕು ವಾರಗಳಲ್ಲೇ ಅವುಗಳನ್ನು ಅನುಷ್ಠಾನಗೊಳಿಸುವಂತೆ ತಾಕೀತು ಮಾಡಿತ್ತೆಂಬುದನ್ನು ಇಲ್ಲಿ ನೆನಪಿಸುವುದು ಅಗತ್ಯ.

“ಪ್ರಜಾಪ್ರಭುತ್ವದಲ್ಲಿ ಗುಂಪುಪ್ರಭುತ್ವಕ್ಕೆ ಎಡೆ ನೀಡುವುದು ಸಾಧ್ಯವಿಲ್ಲ” ಎಂದು ಹೇಳಿದ್ದ ನ್ಯಾಯಾಲಯವು, ಕಾನೂನು ಮತ್ತು ಶಿಸ್ತನ್ನು ಕಾಯುವಂತೆ ಸರಕಾರಗಳಿಗೆ ಆದೇಶಿಸಿತ್ತು. ನಿರ್ದಿಷ್ಟವಾಗಿ ಗುಂಪು ಥಳಿತದಿಂದ ಹತ್ಯೆಯ ಪ್ರಕರಣಗಳನ್ನು ನಿಭಾಯಿಸುವ ಕಾನೂನುಗಳನ್ನು ತರುವಂತೆ ಸರಕಾರಗಳಿಗೆ ಶಿಫಾರಸು ಮಾಡಿತ್ತು.

ಉತ್ತರ ಪ್ರದೇಶ ಕಾನೂನು ಆಯೋಗದ ವರದಿಯ ಪ್ರಕಾರ ಈ ತನಕ ಮಣಿಪುರ ಮಾತ್ರ ಈ ಕಾನೂನನ್ನು ತಂದಿದೆ. ಮಾಧ್ಯಮ ವರದಿಗಳ ಪ್ರಕಾರ ಮಧ್ಯ ಪ್ರದೇಶ ಸದ್ಯದಲ್ಲೇ ಇಂತಹಾ ಕಾನೂನನ್ನು ಜಾರಿಗೆ ತರಲಿದೆ. ವರದಿಯು ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾದಂತಹ ದೇಶಗಳಲ್ಲಿರುವ ಕಾನೂನುಗಳನ್ನೂ ಉಲ್ಲೇಖಿಸಿದೆ.

ಬೀಫ್ ತಿಂದಿರುವ ಸಂಶಯದ ಮೇಲೆ 2015ರಲ್ಲಿ ಥಳಿಸಿ ಕೊಲ್ಲಲಾದ ಮೊಹಮ್ಮದ್ ಅಖ್ಲಾಕ್ ಪ್ರಕರಣ ಸಹಿತ ಹಲವು ಪ್ರಕರಣಗಳನ್ನು ಆಯೋಗದ ವರದಿಯು ಉಲ್ಲೇಖಿಸಿದೆ. ಅಖ್ಲಾಕ್ ಪ್ರಕರಣವು ರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದು, ದನದ ಹೆಸರಿನಲ್ಲಿ ನಡೆಯುತ್ತಿರುವ ಗೂಂಡಾಗಿರಿ ಹೆಚ್ಚುತ್ತಿರುವ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದ್ದ ಮೊದಲ ಪ್ರಕರಣಗಳಲ್ಲಿ ಒಂದಾಗಿತ್ತು.

ಈ ರೀತಿಯ ಗುಂಪು ಹಿಂಸಾಚಾರದಲ್ಲಿ ಸಾವಿಗೀಡಾದವರಲ್ಲಿ ಮುಸ್ಲಿಮರೇ ಹೆಚ್ಚೆಂಬುದನ್ನು ಮಾಧ್ಯಮ ಚರ್ಚೆಗಳಿಂದ ಗಮನಿಸಿರುವುದಾಗಿ ವರದಿ ಹೇಳಿದೆಯಾದರೂ, ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಯಾವುದೇ ಅಂಕಿಅಂಶಗಳು ಆಯೋಗದ ಬಳಿ ಇಲ್ಲ ಎಂದಿದೆ.

‘ದಿ ವೈರ್’ ಜೊತೆ ಮಾತನಾಡಿದ ನ್ಯಾಯಮೂರ್ತಿ ಮಿತ್ತಲ್, ಇಂತಹ ಕೃತ್ಯಗಳ ಬಹುಪಾಲನ್ನು ಮಾಡುವವರು ಗೋರಕ್ಷಕರು ಎಂದು ಹೇಳಿದರು. ಇದು ಉತ್ತರ ಪ್ರದೇಶದ ಮಟ್ಟಿಗೆ ಮಾತ್ರ ನಿಜವಾಗಿರುವುದಲ್ಲ; ಇಡೀ ದೇಶದ ಮಟ್ಟಿಗೂ ನಿಜ ಎಂದು ಅವರು ಹೇಳಿದರು. “ಆದರೆ, ಮಕ್ಕಳ ಅಪಹರಣದ ಶಂಕೆ, ಕಳವು ಮತ್ತು ಅಂತರ್ಧಮೀಯ ಮದುವೆಗಳಿಗೆ ಸಂಬಂಧಿಸಿದಂತೆಯೂ ಗುಂಪು ಥಳಿತ ನಡೆದಿರುವುದು ವರದಿಯಾಗಿದೆ” ಎಂದವರು ಹೇಳಿದರು.

ಡಿಸೆಂಬರ್ 3, 2018ರಂದು ಬುಲಂದ್‌ ಶಹರ್‌ನಲ್ಲಿ ಗದ್ದೆಯಲ್ಲಿ ಹಸುವಿನ ಶವ ಪತ್ತೆಯಾದ ಬಳಿಕ ಹಿಂದೂತ್ವವಾದಿಗಳು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯ ವೇಳೆ ಕೊಲೆಯಾದ ಇನ್ಸ್ಪೆಕ್ಟರ್ ಸುಬೋಧ್ ಸಿಂಗ್ ಪ್ರಕರಣವನ್ನೂ ವರದಿಯು ಉಲ್ಲೇಖಿಸಿದೆ. ಈ ಕುರಿತು ಆಯೋಗದ ಅಧ್ಯಕ್ಷರು, “ಈಗ ಗುಂಪುಗಳು ಪೊಲೀಸರ ಮೇಲೂ ದಾಳಿಗೆ ಮುಂದಾಗಿವೆ” ಎಂದು ಹೇಳಿದರು.

“ಗುಂಪು ಹಿಂಸಾಚಾರಗಳು ಫಾರೂಖಾಬಾದ್, ಉನ್ನಾವ್, ಕಾನ್ಪುರ, ಹಾಪುರ್ ಮತ್ತು ಮುಝಾಫರ್ ನಗರ್ ಜಿಲ್ಲೆಗಳಲ್ಲಿ ನಡೆದಿದ್ದು, ಜನರು ಪೊಲೀಸರನ್ನೂ ತಮ್ಮ ಶತ್ರುಗಳೆಂದು ತಿಳಿದುಕೊಳ್ಳಲು ಆರಂಭಿಸಿರುವುದರಿಂದ ಅವರೂ ಬಲಿಪಶುಗಳಾಗುತ್ತಿದ್ದಾರೆ” ಎಂದು ನ್ಯಾ. ಮಿತ್ತಲ್ ಈ ವರದಿಯಲ್ಲಿ ಹೇಳಿದ್ದಾರೆ. “ಗಾಝಿಪುರದಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮತ್ತು ಜೈಲ್ ವಾರ್ಡನ್ ಕೊಲೆಗಳು ಇದಕ್ಕೆ ಉದಾಹರಣೆ” ಎಂದು ಅವರು ಹೇಳಿದ್ದಾರೆ.

ಕರಡು ಮಸೂದೆಯನ್ನು ಸಿದ್ಧಪಡಿಸುವ ಮೊದಲು ಆಯೋಗವು ವಿವಿಧ ದೇಶಗಳು, ರಾಜ್ಯಗಳಲ್ಲಿರುವ ಕಾನೂನುಗಳು ಮತ್ತು ಸುಪ್ರೀಂಕೋರ್ಟ್ ನಿರ್ಧಾರಗಳನ್ನು ಅಧ್ಯಯನ ಮಾಡಿದೆ.

ಸೂಚಿತ ಶಿಕ್ಷೆಗಳು ಸಂಚು, ಇಂತಹ ಪ್ರಕರಣಗಳಲ್ಲಿ ನೆರವು ಮತ್ತು ಪ್ರಚೋದನೆ ಮಾತ್ರವಲ್ಲದೇ, ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸುವ ಅಪರಾಧಗಳಿಗೂ ಇವೆ.

ಗುಂಪು ಹಲ್ಲೆಗಳನ್ನು ತಡೆಯುವ ಕ್ರಮಗಳು, ತಮ್ಮ ಕರ್ತವ್ಯ ನಿರ್ವಹಿಸಲು ಮತ್ತು ಗುಂಪು ಥಳಿತದ ಘಟನೆಗಳನ್ನು ತಡೆಯಲು ವಿಫಲರಾಗುವ ಸರಕಾರಿ ಅಧಿಕಾರಿಗಳ ವಿರುದ್ಧ ಕೈಗೊಳ್ಳಬೇಕಾದ ದಂಡನಾ ಕ್ರಮಗಳನ್ನು ಕೂಡಾ ಕರಡು ಮಸೂದೆಯಲ್ಲಿ ಸೂಚಿಸಲಾಗಿದೆ.

ವಿಚಾರಣಾ ಪ್ರಕ್ರಿಯೆಯನ್ನು ತ್ವರಿತಗಳಿಸಲು ಇಂತಹ ಪ್ರಕರಣಗಳನ್ನು ಗೊತ್ತುಪಡಿಸಿದ ನ್ಯಾಯಧೀಶರಿಗೆ ವಹಿಸಬೇಕು ಮತ್ತು ಅವರು ಆದ್ಯತೆಯ ಮೇಲೆ ವಿಚಾರಣೆ ನಡೆಸಬೇಕು ಎಂಬ ಸಲಹೆಯನ್ನೂ ವರದಿಯಲ್ಲಿ ನೀಡಲಾಗಿದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ-ವಿವಿಪ್ಯಾಟ್ ಎಲ್ಲಾ ಮತಗಳ ಎಣಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

0
ಇವಿಎಂ ಮತ್ತು ವಿವಿಪ್ಯಾಟ್‌ಗಳ ಎಲ್ಲಾ (ಶೇ.100) ಮತಗಳನ್ನು ತಾಳೆ ಮಾಡಿ ನೋಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರಿಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ...