Homeಅಂಕಣಗಳುಅಳಿದ ಮೇಲೂ ಇಲ್ಲಿ ಉಳಿಯುವುದಿದೆ...

ಅಳಿದ ಮೇಲೂ ಇಲ್ಲಿ ಉಳಿಯುವುದಿದೆ…

- Advertisement -
- Advertisement -

| ಅಕ್ಷತಾ ಹುಂಚದಕಟ್ಟೆ |

`ಆಗೊಮ್ಮೆ ಈಗೊಮ್ಮೆ’ ಗಿರೀಶ ಕಾರ್ನಾಡರ ಲೇಖನಗಳ ಸಂಗ್ರಹದಲ್ಲಿ `ಅಳಿದ ಮೇಲೆ’ ಎಂಬೊಂದು ಲೇಖನ ಇದೆ. ಆ ಬರೆಹ ಹೀಗೆ ಸುರುವಾಗುತ್ತದೆ. `ನನ್ನ ಕಡೆಗೆ ಕಣ್ಣು ಹಾಯಿಸಿದಾಗಲೆಲ್ಲ ರಿಜವಿಯ ಕಣ್ಣಲ್ಲಿ ಒಂದು ತುಂಟ ನಗು ಕುಣಿಯುತ್ತಿತ್ತು’. ರಿಜವಿ ಮುಂಬೈ ಮಹಾನಗರದ ಒಬ್ಬ ಟೆಲಿಫಿಲ್ಮ್ ನಿರ್ದೇಶಕ. ರಿಜವಿಯ ಅಣ್ಣ ಭಾಷಾಂತರಕಾರ ಅವರು ಉರ್ದುವಿಗೆ ಅನುವಾದಿಸಿದ ಕಾರಂತರ `ಅಳಿದ ಮೇಲೆ’ ಕಾದಂಬರಿಯನ್ನು ಓದಿ ರಿಜವಿ ಹುಚ್ಚಾಗಿ ಬಿಟ್ಟಿದ್ದಾರೆ.. ಅವರಿಗೆ ಅದನ್ನು ಟೆಲಿಫಿಲ್ಮ್ ಮಾಡಬೇಕೆಂಬ ಹುಕ್ಕಿ ಬಂದುಬಿಟ್ಟಿದೆ. ಕಾದಂಬರಿಯಲ್ಲಿ ಬರುವ ಕಾರಂತರ ಪಾತ್ರಕ್ಕೆ ಗಿರೀಶ್ ಕಾರ್ನಾಡರನ್ನು, ಯಶವಂತರಾಯನ ಪಾತ್ರಕ್ಕೆ ಅನಂತ್ ನಾಗ್ ಅವರನ್ನು ಮನಸಿನಲ್ಲಿಯೇ ನಿಕ್ಕಿ ಮಾಡಿಕೊಂಡು ಬಂದು ಕಾರ್ನಾಡರನ್ನು ಕಾಣುತ್ತಾರೆ. ಮೊದಲಿಗೆ ತನ್ನ ಡಿಟೆಕ್ಟಿವ್ ಧಾರವಾಹಿಯೊಂದರಲ್ಲಿ ಪಾತ್ರ ವಹಿಸಲು ಕಾರ್ನಾಡರನ್ನು ಒಪ್ಪಿಸಿ ನಂತರ `ಅಳಿದಮೇಲೆ’ ವಿಷಯ ಪ್ರಸ್ತಾಪಿಸುತ್ತಾರೆ. ಬಹಳ ಇಂಟ್ರೆಸ್ಟಿಂಗ್ ಸಂಗತಿ ಎಂದರೆ ಉರ್ದುವಿನಲ್ಲಿ ಕಾದಂಬರಿ ಓದಿದ್ದರಿಂದ ರಿಜವಿಗೆ ಅದರ ಕನ್ನಡ ಹೆಸರು ಗೊತ್ತಿಲ್ಲ. ಕಾರ್ನಾಡರಿಗೆ ಅದರ ಉರ್ದು ಹೆಸರು ಗೊತ್ತಾಗುತ್ತಿಲ್ಲ. ರಿಜವಿ ಕಥೆಯ ಸಾರಾಂಶ ಹೇಳಿದಾಗ ಕಾರ್ನಾಡರು ಅದನ್ನು `ಅಳಿದ ಮೇಲೆ’ ಕಾದಂಬರಿ ಎಂದು ಗುರುತು ಹಿಡಿಯುತ್ತಾರೆ. ಆ ಕೂಡಲೇ ಕಾರ್ನಾಡರ ಸಹಾಯದಿಂದ ಅನಂತನಾಗ್ ಅವರ ಒಪ್ಪಿಗೆಯು ದೊರಕುತ್ತದೆ.

ಇನ್ನು ಉಳಿದದ್ದು ಕಾರಂತರ ಒಪ್ಪಿಗೆ; ಕನ್ನಡ ಸಂಸ್ಕøತಿಯ ಗಂಧ ಗಾಳಿಯಿಲ್ಲದ, ಉತ್ತರ ಪ್ರದೇಶದ ಯಾವುದೋ ಮೂಲೆ ಹಳ್ಳಿಯಿಂದ ಮುಂಬೈಗೆ ಬಂದು ತೃತೀಯ ದರ್ಜೆ ಗಲ್ಲಾಪೆಟ್ಟಿಗೆ ಚಿತ್ರಗಳನ್ನು ನಿರ್ದೇಶಿಸಿ ಹೊಟ್ಟೆ ಹೊರಕೊಳ್ಳುತ್ತಿದ್ದ ರಿಜವಿಗೆ ಕಟ್ಟುನಿಟ್ಟಿನ ಕಾರಂತರು ಖಂಡಿತಾ ಅನುಮತಿ ನೀಡುವುದಿಲ್ಲ ಎಂದು ಕಾರ್ನಾಡರು ಎಣಿಸಿದ್ದರೆ ಅಚ್ಚರಿ ಎನಿಸುವಂತೆ ಕಾರಂತರು ರಿಜವಿಯ ಒಂದು ಪತ್ರಕ್ಕೆ `ಬನ್ನಿ ಮಾತಾಡೋಣ’ ಎಂದು ಹಸಿರು ಸಿಗ್ನಲ್ ತೋರಿಸಿದ್ದಾರೆ. ರಿಜವಿಯ ಖುಷಿಗೆ ಪಾರವೇ ಇಲ್ಲವಾಗಿದೆ.

. ಅಷ್ಟರಲ್ಲಾಗಲೇ ರಿಜವಿ ಇದಕ್ಕಾಗಿಯೇ ವಿಶೇಷ ತಾಲೀಮು ಎಂಬಂತೆ ಒಂದೂ ಬಿಡದೆ ಕನ್ನಡದ ಎಲ್ಲ ಕಲಾತ್ಮಕ ಚಿತ್ರಪಟಗಳನ್ನು ನೋಡಿ ಟಿಪ್ಪಣಿ ಮಾಡಿದ್ದರು. `ಅಳಿದ ಮೇಲೆ’ಯ ಚಿತ್ರೀಕರಣಕ್ಕೆ ಪ್ರಯೋಜನಕಾರಿ ಆಗುವಂತ ಅಂಶಗಳೇನಾದರೂ ಸಿಗುತ್ತವೆಯೇ ಎಂಬುದೆ ರಿಜವಿಯ ಅಂತಿಮ ಹುಡುಕಾಟದಂತಿತ್ತು. `ಬ್ರಾಹ್ಮಣರಲ್ಲಿ ವಿಧವೆಯರಿಗೆ ಮಂಡನ ಮಾಡುತ್ತಿದ್ದರು ಆದ್ದರಿಂದ ಈ ಚಿತ್ರದಲ್ಲಿ ಬರುವ ಇಬ್ಬರೂ ವಿಧವೆಯರ ತಲೆ ಬೋಳಿಸಬೇಕು’ ಎಂದು ಕಾರ್ನಾಡರು ಹೇಳಿದರೆ ಘಟಶ್ರಾದ್ಧ ಸಿನಿಮಾ ನೋಡಿದ ರಿಜವಿ `ಈ ಸಿನಿಮಾದಲ್ಲಿ ವಿಧವೆ ಹುಡುಗಿಗೆ ತಲೆ ಬೋಳಿಸಿಲ್ಲವಲ್ಲ’ ಎಂದು ಮರುಪ್ರಶ್ನೆ ಹಾಕುತ್ತಾರೆ. ಪ್ರತಿಬಾರಿಯು ಈ ಸಿನಿಮಾದ ಬಗ್ಗೆ ಮಾತಾಡುವಾಗ ರಿಜವಿ ಗದ್ಗದಿತರಾಗುತ್ತಾರೆ `ಕಾರಂತರು ಹಳ್ಳಿಗೆ ಬರೋದು, ಮಿತ್ರ ಯಶವಂತರಾಯನ ಸಾಕುತಾಯಿಯನ್ನು ಕಾಣೋದು! ಆ ಹಣ್ಣು ಹಣ್ಣು ಮುದುಕಿಯ ಆಸೆ ಪೂರೈಸಲಿಕ್ಕೆ ಗುಡಿಯ ಜೀರ್ಣೋದ್ದಾರ ಮಾಡುವುದು. ಒಂದೇ ಊರಿನಲ್ಲಿದ್ದರೂ ವೈರಿಗಳ ಹಾಗಿದ್ದ ಆ ಇಬ್ಬರು ಹಣ್ಣು ಮುದುಕಿಯರು ಒಂದಾಗೋದು’. ಎಂಥ ಅದ್ಭುತ ಸನ್ನಿವೇಶವಿದು ಎನ್ನುವುದನ್ನು ಅರ್ಧ ಡಜನ್ ಬಾರಿ ಕೇಳಿ ಕಾರ್ನಾಡರು `ಅದು ಕಾದಂಬರಿಯ ಪೂರ್ವಾರ್ಧ ಕಣ್ರಿ. ಯಶವಂತರಾಯರ ಹೆಂಡತಿ, ಮಕ್ಕಳನ್ನು ಕಾರಂತರು ಭೇಟಿಯಾಗುವ ದೃಶ್ಯಗಳು ಇವೆ’ ಎಂದರೆ ರಿಜವಿಯದು ಅದಕ್ಕೆ ಪೂರ್ತಿ ಮೌನ. ರಿಜವಿಯ ಪಾಲಿಗೆ ದೇವಸ್ಥಾನದ ಜೀರ್ಣೋದ್ದಾರವೇ ಕಾದಂಬರಿಯ ಕೇಂದ್ರ. ಮನುಷ್ಯನ ಸ್ಪಿರಿಚ್ಯುವಲ್ ಜಾಗೃತಿಗೆ ಅದು ಸಿಂಬಲ್ ಎನ್ನುವ ರಿಜವಿಗೆ ಟೆಲಿಫಿಲ್ಮದಲ್ಲಿ ಕೂಡಾ ಅದನ್ನೇ ಕೇಂದ್ರವಾಗಿಸುವ ಕನಸು.
ಕಾರಂತರ ಅನುಮತಿ ಪಡೆಯಲು ರಿಜವಿ ಸಾಲಿಗ್ರಾಮಕ್ಕೆ ಹೊರಡುತ್ತಾರೆ. ಕಾರ್ನಾಡರು ಯಾವುದೋ ಚಿತ್ರದ ಚಿತ್ರೀಕರಣಕ್ಕಾಗಿ ಸಿಂಗಪೂರಕ್ಕೆ. ಸಾಲಿಗ್ರಾಮಕ್ಕೆ ಹೋದ ರಿಜವಿ ಮೊದಲಿಗೆ ಬೆಂಗಳೂರಿಗೆ ಹೋಗಿ ಅನಂತನಾಗ್ ಬಳಿ ಮಾತಾಡಿಕೊಂಡು, ನಂತರ ಕಾರಂತರನ್ನು ಭೇಟಿ ಮಾಡಲು ಹೋಗುವಾಗ ಬಸ್ಸಿನಲ್ಲಿ ಮೂಲ್ಕಿ ಬಳಿ ಟ್ರಂಕ್ ಒಂದು ತಲೆ ಮೇಲೆ ಬಿದ್ದು ಸತ್ತೆ ಹೋಗುತ್ತಾರೆ. ಸಿಂಗಪೂರದಿಂದ ಮರಳಿದ ಕಾರ್ನಾಡರಿಗೆ ವಿಷಯ ತಿಳಿಯುತ್ತದೆ. ಅವರು ರಿಜವಿಯ ಮನೆ ಹುಡುಕಿಕೊಂಡು ಹೊರಡುತ್ತಾರೆ.

ಇಷ್ಟರ ನಡುವೆ ದೇಶದೆಲ್ಲೆಡೆ ಈ ಸಂದರ್ಭದಲ್ಲಿ ಅಯೋಧ್ಯೆಯ ಗದ್ದಲ ಜೋರಾಗಿ ಹಬ್ಬಿದೆ. ಗಲ್ಲಿಯೊಂದರಲ್ಲಿ ಇರುವ ಹಳೆಯ ಬಾಡಿಗೆ ಮನೆಯೊಂದರಲ್ಲಿ ಕಾರ್ನಾಡರು ರಿಜವಿಯ ಹೆಂಡತಿ ಮತ್ತು ಮಗನನ್ನು ಭೇಟಿಯಾಗುತ್ತಾರೆ. ಮೂವತ್ತು ವರುಷದಿಂದ ಇಂಡಸ್ಟ್ರಿಯಲ್ಲಿದ್ದ ರಿಜವಿ ಒಂದು ಮನೆಯನ್ನು ಮಾಡಿಕೊಳ್ಳಲಿಲ್ಲ. ಬೆಳೆದ ಮಗಳ ಮದುವೆ ಮಾಡಿಲ್ಲ, ಮನೆಯವರ ಹೊಟ್ಟೆ ಪಾಡು ಕಷ್ಟವಿದೆ ಎಂಬ ಸತ್ಯ ಕಾರ್ನಾಡರ ಕಣ್ಣಿಗೆ ರಾಚುತ್ತದೆ. ಮಗ ಯಾಕೂಬ್ `ಅಳಿದ ಮೇಲೆ ಫಿಲ್ಮ್‍ಗಾಗಿ ಫೈನಾನ್ಸ್ ಕೊಡಲು ಈ ಮೊದಲೇ ಒಪ್ಪಿದ್ದ ಕೆ.ಪಿ ಫಿಲ್ಮ್ ನವರು ತಯಾರಿದ್ದಾರೆ. ರಿಜವಿ ಈಗಾಗಲೇ ಒಂದು ಲಕ್ಷ ಅಡ್ವಾನ್ಸ್ ತೆಗೆದುಕೊಂಡು ಹಂಚಿಯು ಆಗಿದೆ. ಉಳಿದ ಹಣ ಕೊಡಲು ಅವರು ತಯಾರಿದ್ದಾರೆ’ ಎನ್ನುತ್ತಾನೆ. ರಿಜವಿಯ ಹೆಂಡತಿಯು ಮಗಳ ಮದುವೆಗಾಗಿ ನೀವು ಈ ಉಪಕಾರ ಮಾಡಿರಿ ಎಂದು ಬೇಡುತ್ತಾಳೆ. ಕಾರ್ನಾಡರು ಕಾರಂತರ ಬಳಿ ಮಾತಾಡುತ್ತಾರೆ. ಕಾರಂತರು `ತಾವು ರಿಜವಿಗೆ ಒಪ್ಪಿಗೆ ಕೊಟ್ಟು ಆಗಿದೆ. ಅವರ ಕುಟುಂಬದವರ್ಯಾರಾದರೂ ಮಾಡಬಹುದು‘ ಎನ್ನುತ್ತಾರೆ. ಯಾಕೂಬನನ್ನು ಕರೆದುಕೊಂಡು ಕೆ.ಪಿ ಪ್ರೊಡಕ್ಷನ್ ಅವರ ಬಳಿ ಹೋಗಿ ಹನ್ನೊಂದು ಲಕ್ಷ ಸಾದ್ಯವೇ ಇಲ್ಲ ಹದಿನೆಂಟು ಲಕ್ಷವಾದರೆ ಈ ಫಿಲ್ಮ್ ಮುಗಿಸಿಕೊಡುತ್ತೇವೆ ಎಂದು ಕಾರ್ನಾಡರು ಶರತ್ತು ಹಾಕುತ್ತಾರೆ. ಯಾಕೂಬನಿಗೆ ಅಪ್ಪ ಅಡ್ವಾನ್ಸ ತೆಗೆದುಕೊಂಡ ಮೇಲೆ ಅದನ್ನು ಮುಗಿಸಿಕೊಡುವುದು ತನ್ನ ಜವಾಬ್ದಾರಿ ಎಂಬ ಭಾವ. ಆದರೆ ಕಾರ್ನಾಡರಿಗೆ ಅಷ್ಟರಲ್ಲಿ ಫಿಲ್ಮ್ ಮಾಡಲು ಸಾಧ್ಯವೇ ಇಲ್ಲ. ರಿಜವಿಯಂಥ ಹುಂಬ, ಹುಚ್ಚ ಮಾತ್ರ ಇಂಥ ಕನಸಿಗೆ ರೆಕ್ಕೆಕೊಟ್ಟು ಮತ್ತಷ್ಟು ಸಾಲಗಾರನಾಗುತ್ತಾನೆ ಎಂಬ ಅರಿವಿದೆ. ಈ ಹುಡುಗನನ್ನು ಸಾಲಕ್ಕೆ ನೂಕಬಾರದು ಎಂಬ ಎಚ್ಚರವಿದೆ. ಪ್ರೊಡಕ್ಷನ್ ನವರು ಒಪ್ಪುವುದಿಲ್ಲ. ಬರಿಗೈಯಲ್ಲಿ ಮರಳುತ್ತಾರೆ.

ಇದೇ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಲಾಗುತ್ತದೆ. ಕಾರ್ನಾಡರ ಜೊತೆ ರಿಜವಿಯ ಸಿನಿಮಾದಲ್ಲಿ ನಟಿಸುತ್ತಿದ್ದ ರಿಜವಿಯ ಹೆಂಡತಿ ಮಾಡುತ್ತಿದ್ದ ಮಾಂಸದಡುಗೆಯನ್ನು ಇಷ್ಟಪಟ್ಟು ತಿನ್ನುತ್ತಿದ್ದ, ಆ ಕಾರಣಕ್ಕಾಗಿಯೇ ರಿಜವಿಯ ಚಿತ್ರಪಟದಲ್ಲಿ ತಾನು ಭಾಗವಹಿಸುವುದು ಎನ್ನುತ್ತಿದ್ದ ಭೂಷಣ ಫೋನ್ ಮಾಡಿ `ಒಳ್ಳೆದಾಯಿತು, ಅವರಿಗೆ ಹಾಗೆ ಬುದ್ಧಿ ಕಲಿಸಬೇಕು. ಇಲ್ಲದಿದ್ದರೆ ಕಲಿಯೋದಿಲ್ಲ ಅವರು’ ಎಂದ. ತಮ್ಮ ನೆಂಟರಿಷ್ಟರು, ಮಿತ್ರರು, ಮನೆ ಮಂದಿ ಎಲ್ಲರೂ ಭೂಷಣನ ಮಾತಿಗೆ ಹೌದೆಂದು ತಲೆದೂಗುವಂತೆ, ತನ್ನ ಹಿಂಸೆಗೆ ನಿಗುರಿ ತನ್ನ ಪರಿಸರ ವೀರ್ಯಸ್ಕಲನ ಮಾಡಿಕೊಂಡ ಹಾಗೆ ಕಾರ್ನಾಡರಿಗೆ ಕಾಣುತ್ತಿತ್ತು.
ಈ ಹೊತ್ತಲ್ಲೆ ಮತ್ತೆ ಯಾಕೂಬ ಕಾರ್ನಾಡರಿಗೆ ಫೋನ್ ಮಾಡಿದ. ಅವ್ವ ಮಾಡಿದ ಸ್ಪೆಷಲ್ ಸಿಹಿಯೊಂದಿಗೆ ಹುಡುಗ ಖುಷಿಯಿಂದ ಬಂದಿದ್ದ. ಏಕೆಂದರೆ ಪ್ರೊಡಕ್ಷನ್ ಹೌಸ್‍ನವರು ಅಳಿದ ಮೇಲೆ ಫಿಲ್ಮ್ ಮಾಡಲು ಇವರು ಹೇಳಿದ ಮೊತ್ತಕ್ಕೆ ಒಪ್ಪಿಗೆ ಕೊಟ್ಟಿದ್ದರು. ಆದರೆ ಕಾರ್ನಾಡರು ಖುಷಿಯಾಗಲಿಲ್ಲ. `ಸಾರಿ ನಾನು ಟೆಲಿಫಿಲ್ಮ್ ಮಾಡಲಿಕ್ಕೊಲ್ಲೆ. ಅಳಿದ ಮೇಲೆ ಈಗಂತೂ ಸಾಧ್ಯವಿಲ್ಲ’ ಎನ್ನುತ್ತಾರೆ. ಯಾಕೂಬನಿಗೆ ಏಕೆ ಎಂದು ಅರ್ಥವೇ ಆಗುವುದಿಲ್ಲ. ಮುಗ್ಧ ಹುಡುಗ ತಂಗಿಯ ಮದುವೆ, ಮನೆಯ ಕಷ್ಟಗಳು ಎಲ್ಲವೂ ಈ ಟೆಲಿಫಿಲ್ಮ್‍ನ ನಿರ್ಮಾಣದಿಂದ ಪರಿಹಾರವಾಗುತ್ತವೆ ಎಂದುಕೊಂಡು ಬಂದವನಿಗೆ ಕಾರ್ನಾಡರ ನಿರಾಕರಣೆಯಿಂದಾಗಿ ದಣಿದು ಕೂತ.

`ನೋಡು ನಿನ್ನ ತಂದೆ ಈ ಕತೆಗೆ ಮಾರು ಹೋದದ್ದು ಒಂದೇ ಕಾರಣಕ್ಕಾಗಿ ಚಿತ್ರಪಟದ ಕೊನೆಗೆ ಪುನರ್ಜನ್ಮ ತಾಳಿ ಬರುವ ಮಂದಿರಕ್ಕಾಗಿ ಅದು ಅವನಿಗೆ ಮಾನವೀಯತೆಯ ಪ್ರತೀಕವಾಗಿತ್ತು. ಆದರೀಗ ಮಂದಿರದ ಪುನರುತ್ಥಾನ ಎಂಬ ನುಡಿಗಟ್ಟಿನ ಅರ್ಥವೇ ಬದಲಾಗಿದೆ ಬಾಬರೀ ಮಸೀದಿ ಕೆಡವಿದ ದುರುಳರು ಈಗ ಆ ಸ್ಥಾನದಲ್ಲಿ ಮಂದಿರ ಕಟ್ಟಬೇಕೆನ್ನುತ್ತಿದ್ದಾರೆ…. ಅಯೋಧ್ಯೆಯಲ್ಲಿ ನಡೆದ ಬರ್ಬರತೆಯಿಂದಾಗಿ ಮಂದಿರ ನಿರ್ಮಾಣದ ಕಲ್ಪನೆನೆ ಭ್ರಷ್ಟವಾಗಿಬಿಟ್ಟಿದೆ…. ನನ್ನಿಂದಂತೂ ಈ ಸಂದರ್ಭದಲ್ಲಿ ಈ ಚಿತ್ರಪಟ ಸಾದ್ಯವಿಲ್ಲ…‘ ಕಾರ್ನಾಡರು ಯಾಕೂಬನಿಗೆ ಹೇಳಲಾರದೆ ಹೇಳುತ್ತಾರೆ.

ಆದರೆ ಯಾಕೂಬನಿಗೆ ಇವರ ಸಂಧಿಗ್ಧ ಅರ್ಥವಾಗುವುದಿಲ್ಲ. ಮಸೀದಿ ಬಿದ್ದಿದೆ ನಿಜ ಆದರೆ ಈ ಸಿನಿಮಾದಲ್ಲಿ ಮಂದಿರ ನಿರ್ಮಾಣ ಮಾಡುವುದೆ ಕೇಂದ್ರವಾಗಿದ್ದರೆ ಅದು ಇರಲಿ. ಅದಕ್ಕೂ ಇದಕ್ಕೂ ಸಂಬಂಧವೇನಿದೆ… ಎನ್ನುವ ಭಾವ. ಮಸೀದಿ, ಮಂದಿರ ಮೀರಿ ಯಾಕೂಬನಿಗೆ ತನ್ನ ತತ್ತರಿಸುತ್ತಿರುವ ತನ್ನ ಕುಟುಂಬವನ್ನು ಎತ್ತಿ ನಿಲ್ಲಿಸಬೇಕಾಗಿದೆ. `ಈ ಸಿನಿಮಾದಿಂದ ಅಕ್ಕನ ಮದುವೆ ಆಗುತ್ತದೆ. ನೀವೆ ಗತಿ ಅಂಕಲ್ ಎಂದು ಅಂಗಲಾಚುವನು’.

ಕಾರ್ನಾಡರಿಗೆ ಇವನ ಅಸಹಾಯಕತೆ ನೋಡಿ ನೆರವಾಗುವ ಮನಸು ಆದರೆ ನಾಳೆ ಈ ಚಿತ್ರ ಟೆಲಿಪರದೆಯ ಮೇಲೆ ಪ್ರೇಕ್ಷಕರಿಗೆ ರಿಜವಿಯ ಮಗಳ ಮದುವೆಯ ಸಂದರ್ಭವನ್ನು ಯಾರು ವಿವರಿಸುತ್ತಾರೆ… ಎಲ್ಲರಿಗೂ ತಾನು ಕನ್ನಡದ ಅಮೋಘ ಕಾದಂಬರಿಯನ್ನು ಒಂದು ಲಜ್ಜಾಸ್ಪದ ಘಟನೆಯ ಹೆಗ್ಗಳಿಕೆಗೆ ಬಳಸುತ್ತೇನೆ ಎನ್ನುವುದಷ್ಟೇ ಕಾಣಿಸುತ್ತದೆ ಎನಿಸುತ್ತದೆ. `ಬಾಬರೀ ಮಸೀದಿ ಮಾತ್ರ ಅಳಿದುಹೋಗಿಲ್ಲ ಯಾಕೂಬ್ ಅದರ ಜೊತೆ ನಿನ್ನ ತಂದೆಯ ಕನಸೂ ಅಳಿದು ಹೋಗಿದೆ’ ಎಂದು ಹೇಳಲೂ ಹೋಗಿ ಹೇಳಲಾಗದೆ ಮೌನವಾಗುಳಿದ ಕಾರ್ನಾಡರನ್ನು ನೋಡಿ ಅವರಿಗೆ ಮನಸಿಲ್ಲ ಎಂಬುದನ್ನು ಅರಿತವನಂತೆ ಯಾಕೂಬ್ ಚಿತ್ರಕಥೆಯನ್ನು ಅಲ್ಲೆ ಬಿಟ್ಟು ಕಾರ್ನಾಡರು ಅದನ್ನು ತೆಗೆದುಕೊಂಡು ಹೋಗು ಎಂದರೂ ಕೇಳದೆ `ಬೇಡ ಅಂಕಲ್ ಅದರಿಂದ ಏನು ಪ್ರಯೋಜನ ‘ ಎನ್ನುತ್ತಾ ಬರಿಗೈಯಲಿ ಮರಳುವನು.
ದುರಿತ ಕಾಲದಲ್ಲಿ ಬುದ್ಧಿಜೀವಿ ಲೇಖಕರು ಕೂಡಾ ಎಷ್ಟು ಅಸಹಾಯಕರು ಎಂಬುದಕ್ಕೆ ರೂಪಕವಾಗಿಯೂ ಈ ಲೇಖನ ಮತ್ತೆ ಮತ್ತೆ ನಮಗೆ ಪ್ರಸ್ತುತವಾಗುತ್ತದೆ. ಇಂಥ ನಮ್ಮೊಳಗನ್ನು ನಮಗೆ ಕಾಣಿಸುವ ಬರೆಹ ಕನ್ನಡಿಯನ್ನಿತ್ತ ಮಹೋನ್ನತ ಲೇಖಕ ಕಾರ್ನಾಡರಿಗೆ ನಮಸ್ಕಾರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...

ಮುಂಬೈ: 2 ದಿನಗಳಿಂದ ಹೊತ್ತಿ ಉರಿಯುತ್ತಿರುವ ಪೊವೈ ಬೆಟ್ಟಗಳು: ನಿವಾಸಿಗಳಿಂದ ಅಧಿಕಾರಿಗಳ ನಿಷ್ಕ್ರಿಯತೆಯ ಆರೋಪ 

ಮುಂಬೈನ ಪೊವೈ ಬೆಟ್ಟಗಳ ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ಕಳೆದ ಎರಡು ದಿನಗಳಿಂದ ಉರಿಯುತ್ತಿದೆ ಎಂದು ವರದಿಯಾಗಿದೆ. ನಿವಾಸಿಗಳು ಬೆಂಕಿಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ನಾಗರಿಕ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆಯು ಸಿಕ್ಕಿಲ್ಲ...