ಅಸಹಜ ಸಾವೀಗೀಡಾಗಿದ್ದ ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಅವರ ಅಂತಿಮ ದರ್ಶನಕ್ಕೆ ಹೋಗಿದ್ದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರಿಗೆ ಮಹಿಳಾ ವೈದ್ಯೆಯೊಬ್ಬರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಆಕ್ರೋಶಗೊಂಡಿದ್ದ ಮಹಿಳಾ ವೈದ್ಯೆ ‘”ನಿಮ್ಮ ನಮಸ್ಕಾರ, ನಿಮ್ಮ ಸರ್ಕಾರ ಬೇಕಿಲ್ಲ, ನಮಗೆ ನಾಗೇಂದ್ರ ಬೇಕು. ಕೊಡಿಸಕ್ಕಾಗುದಾದರೆ ಕೊಡಿಸಿ, ಇಲ್ಲಾಂದ್ರ ತೊಲಗಿ. ಬ್ರೇಕಿಂಗ್ ನ್ಯೂಸ್ ಹಾಕಿ ಹೋಗಿ. 30 ಲಕ್ಷ ಪರಿಹಾರ ಕೊಡ್ತೀರಾ? ಥೂ, ನಿಮ್ಮ ಯೋಗ್ಯತೆಗಿಷ್ಟು ಬೆಂಕಿ ಹಾಕ, ನಾವು ವೈದ್ಯರು ನಮ್ಮ ಒಂದು ತಿಂಗಳ ಸಂಬಳ ಕೊಟ್ಟರೆ ಹತ್ತುಕೋಟಿ ಆಗುತ್ತೆ. ನಾಚಿಕೆ ಆಗಲ್ವ ನಿಮಗೆ. ನಾಚಿಕೆ ಇಲ್ಲದೆ ಇಲ್ಲಿ ತನಕ ಬಂದಿದ್ದೀರ. ಯೋಗ್ಯತೆನೆ ಇಲ್ಲ. ನಿಮ್ಮನ್ನು ಬೇಡಿಕೊಳ್ಳಬೇಕಾ. ನನಗೆ ತುಂಬಾ ಒತ್ತಡ ಆಗುತ್ತಿದೆ ಅವರು ಹೇಳುತ್ತಿದ್ದರು ಯಾರೂ ಕೇಳಲಿಲ್ಲ. ಸಾಯಿಸಿಬಿಟ್ರಲ್ಲ, ಹೋಗಿ ಸಮಾಧಾನ ಆಯಿತಲ್ಲ. ನಮ್ಮನ್ನೆಲ್ಲ ಬಳಸಿಕೊಲ್ಳುವ ಯೋಗ್ಯತೆ ನಿಮಗಿಲ್ಲ. ನಮ್ಮಂತವರನ್ನು ಉಪಯೋಗಿಸಿಕೊಳ್ಳುವ ಯೋಗ್ಯತೆ ನಿಮಗಿಲ್ಲ.” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
’ಥೂ… ನಿಮ್ಮ ಯೋಗ್ಯತೆಗಿಷ್ಟು ಬೆಂಕಿ ಹಾಕ’; ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ಗೆ ಮಹಿಳಾ ವೈದ್ಯೆ ಛೀಮಾರಿ
Posted by Naanu Gauri on Friday, August 21, 2020
ಮೃತ ನಾಗೇಂದ್ರ ಕುಟುಂಬಕ್ಕೆ ನಿನ್ನೆ 30 ಲಕ್ಷ ಪರಿಹಾರ ಕೊಡುವುದಾಗಿ ಘೋಷಿಸಿದ್ದ ಸಚಿವ ಸುಧಾಕರ್ ಇಂದು 50 ಲಕ್ಷ ಪರಿಹಾರ ಹಾಗು ವೈದ್ಯರ ಪತ್ನಿಗೆ ಸಬ್ರಿಜಿಸ್ಟ್ರಾರ್ ಹುದ್ದೆ ನೀಡುವುದಾಗಿ ಹೇಳಿದ್ದಾರೆ.
ನಂಜನಗೂಡಿನ ತಾಲ್ಲೂಕು ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ನಾಗೇಂದ್ರ ನಿನ್ನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಇಒ ಪ್ರಶಾಂತ ಕುಮಾರ್ ಮಿಶ್ರಾ ನೀಡುತ್ತಿದ್ದ ಕಿರುಕುಳವೆ ಅವರ ಆತ್ಮಹತ್ಯೆಗೆ ಕಾರಣ ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ. ಅಲ್ಲದೇ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಎದುರು ಶವವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅಂತಿಮ ದರ್ಶನಕ್ಕೆ ಬಂದಿದ್ದ ಸಚಿವರಿಗೆ ಅಲ್ಲಿದ್ದವರು ಛೀಮಾರಿ ಹಾಕಿದ್ದಾರೆ.
ಈ ವೇಳೆ ನೆರೆದಿದ್ದ ಇತರ ವೈದ್ಯರು ಸರ್ಕಾರಕ್ಕೆ ದಿಕ್ಕಾರ ಕೂಗಿ ಇನ್ನು ಮುಂದೆ ನಾವು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ. ಸೋಮವಾರದಿಂದ ಪ್ರತಿಭಟನೆ ನಡೆಸುತ್ತೇವೆ ಎಂದು ಘೋಷಿಸಿದ್ದಾರೆ. ಇಡೀ ಘಟನೆಯಲ್ಲಿ ಸಚಿವ ಸುಧಾಕರ್ ಮೂಕ ಪ್ರೇಕ್ಷಕರಾಗಿ ನಿಂತೆ ಇದ್ದರು.
“ಸಿಇಒ ಪ್ರತಿದಿನ 300 ಮಂದಿಗೆ ಕೊರೊನಾ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಿಸಬೇಕು ಎಂದು ಟಾರ್ಗೆಟ್ ನೀಡುತ್ತಿದ್ದರು, ಇದು ಮಾಡದಿದ್ದರೆ ಅವರನ್ನು ಏಕವಚನದಲ್ಲಿ ನಿಂದಿಸುತ್ತಿದ್ದರು. ಇದರಿಂದಾಗಿ ವೈದ್ಯ ನಾಗೇಂದ್ರ ಒತ್ತಡಕ್ಕೀಡಾಗಿದ್ದರು” ಎಂದು ವೈದ್ಯರ ಸಂಬಂಧಿಕರು ಹೇಳಿದ್ದಾರೆ.
ಘಟನೆ ಖಂಡಿಸಿ ಪ್ರಸ್ತುತ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯರ, ಆರೋಗ್ಯ ಸಿಬ್ಬಂದಿ ಮುಷ್ಕರ ಹೂಡಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ ಎನ್ನಲಾಗಿದ್ದು, ಅಲ್ಲದೆ ಸೋಮವಾರದಿಂದ ರಾಜ್ಯಾದ್ಯಂತ ವೈದ್ಯರ ಮುಷ್ಕರಕ್ಕೆ ನಿರ್ಧರಿಸಲಾಗಿದ್ದು, ಕರ್ತವ್ಯಕ್ಕೆ ಗೈರುಹಾಜರಾಗಲಿದ್ದಾರೆ.
ನಿನ್ನೆ ಮೂವತ್ತು ಲಕ್ಷ ರುಪಾಯಿ ವೈದ್ಯರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಹೇಳಿದ್ದ ಸಚಿವ ಸುಧಾಕರ್ ಇದೀಗ 50 ಲಕ್ಷ ರೂ. ಪರಿಹಾರ ಧನ ಹಾಗು ಮೃತಪಟ್ಟ ವೈದ್ಯರ ಸಬ್ ರಿಜಿಸ್ಟ್ರಾರ್ ಉದ್ಯೋಗವನ್ನು ನೀಡಲು ಮುಖ್ಯಮಂತ್ರಿ ಒಪ್ಪಿಗೆ ನಿಡಿದ್ದಾರೆ. ಪ್ರಕರಣದ ಸಂಪೂರ್ಣ ತನಿಖೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ನಿನ್ನೆ ದೈವಾಧೀನರಾದ ನಂಜನಗೂಡಿನ ಆರೋಗ್ಯಾಧಿಕಾರಿ ಶ್ರೀ ನಾಗೇಂದ್ರ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಧನ ಹಾಗು ಮೃತರ ಶ್ರೀಮತಿಯವರಿಗೆ ಸಬ್ ರಿಜಿಸ್ಟ್ರಾರ್ ಉದ್ಯೋಗವನ್ನು ನೀಡಲು ಒಪ್ಪಿಗೆ ಸೂಚಿಸಿರುವ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @BSYBJP ರವರಿಗೆ ಅಭಿನಂದನೆಗಳು. ಪ್ರಕರಣದ ಸಂಪೂರ್ಣ ತನಿಖೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು. pic.twitter.com/7OgjzrFqXv
— Dr Sudhakar K (@mla_sudhakar) August 21, 2020
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ: 104
ಇದನ್ನೂ ಓದಿ: ಕೊರೊನಾ, ನಿರುದ್ಯೋಗದ ಕುರಿತು ಎಚ್ಚರಿಸಿದ್ದೆ, ಮಾಧ್ಯಮಗಳು ಅಣಕಿಸಿದ್ದವು: ರಾಹುಲ್ ಗಾಂಧಿ