Homeಮುಖಪುಟಅಟಾರ್ನಿ ಜನರಲ್ ಹೆಸರನ್ನೇ ಕೈಬಿಟ್ಟ ಸುಪ್ರೀಂಕೋರ್ಟ್: ಭಿನ್ನ ಅಭಿಪ್ರಾಯಕ್ಕೆ ಕತ್ತರಿಯೇ?

ಅಟಾರ್ನಿ ಜನರಲ್ ಹೆಸರನ್ನೇ ಕೈಬಿಟ್ಟ ಸುಪ್ರೀಂಕೋರ್ಟ್: ಭಿನ್ನ ಅಭಿಪ್ರಾಯಕ್ಕೆ ಕತ್ತರಿಯೇ?

ಆದರೆ ಅಟಾರ್ನಿ ಜನರಲ್‌ರವರು ಪ್ರಶಾಂತ್ ಭೂಷಣ್‌ರವರಿಗೆ ಶಿಕ್ಷೆ ನೀಡಬೇಡಿ, ಅವರು ಸಾರ್ವಜನಿಕವಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಪೀಠದ ಮುಂದೆ ಮನವಿ ಮಾಡಿದ್ದರು. ಆದರೆ ಪೀಠ ಅದನ್ನು ನಿರಾಕರಿಸಿತ್ತು.

- Advertisement -
- Advertisement -

ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್‌ರವರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ‘ಭೂಷಣ್ ತಮ್ಮ ಹೇಳಿಕೆಯ ಕುರಿತು ಮರುಪರಿಶೀಲಿಸಲು’ ಮೂರು ದಿನಗಳ ಸಮಯ ನೀಡಿದೆ.

ಆಶ್ಚರ್ಯವೆಂದರೆ ಸುಪ್ರೀಂ ಕೋರ್ಟಿನ ಆರ್ಡರ್‌ ಶೀಟ್‌ಅನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ಹಾಜರಿದ್ದ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್‌ರವರನ್ನು ಅದರಲ್ಲಿ ಹೆಸರಿಸಲಾಗಿಲ್ಲ.

ಎರಡೂವರೆ ಗಂಟೆಗೂ ಹೆಚ್ಚು ವೇಳೆ ನಡೆದ ವಾದ-ವಿವಾದದಲ್ಲಿ ಅಟಾರ್ನಿ ಜನರಲ್ ಹಾಜರಿದ್ದರು ಮಾತ್ರವಲ್ಲ ಕೋರ್ಟಿಗೆ ಭೂಷಣ್ ಪರವಾಗಿ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದ್ದರು.

ಪ್ರಶಾಂತ್ ಭೂಷಣ್‌ರವರ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಆಗಸ್ಟ್ 5 ರಂದು ನಡೆದ ಮೊದಲ ವಿಚಾರಣೆಯಲ್ಲಿ ಸಂದರ್ಭದಲ್ಲಿ ಅವರು ಹಾಜರಿದ್ದುದ್ದನ್ನು ಅಂದಿನ ನಡಾವಳಿಗಳಲ್ಲಿ ದಾಖಲಿಸಲಾಗಿತ್ತು. ಆದರೆ ನಿನ್ನೆಯ ತೀರ್ಪು ನೀಡುವ ವಿಚಾರಣೆಯಲ್ಲಿ ಅವರನ್ನು ಕೈಬಿಟ್ಟಿರುವುದು ಏಕೆ ಎಂಬ ಪ್ರಶ್ನೆ ಉದ್ಭವವಾಗಿದೆ.

ವಿಚಾರಣೆಯ ಸಂದರ್ಭದಲ್ಲಿ ಪ್ರಶಾಂತ್ ಭೂಷಣ್‌ರವರು ತಮ್ಮ ಹೇಳಿಕೆಯನ್ನು ದಾಖಲಿಸಿದ ನಂತರ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವೇ ‘ಭೂಷಣ್ ಅವರಿಗೆ ತಮ್ಮ ಹೇಳಿಕೆಯನ್ನು ಮರುಪರಿಶೀಲಿಸಲು ಸಮಯ ನೀಡಬಹುದೇ’ ಎಂದು ಅಟಾರ್ನಿ ಜನರಲ್‌ರವರ ಸಲಹೆ ಕೇಳಿತ್ತು. ಆಗ ಅವರು ಸಮಯ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದರು.

ಆದರೆ ಅಟಾರ್ನಿ ಜನರಲ್‌ರವರು ಪ್ರಶಾಂತ್ ಭೂಷಣ್‌ರವರಿಗೆ ಶಿಕ್ಷೆ ನೀಡಬೇಡಿ, ಅವರು ಸಾರ್ವಜನಿಕವಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಪೀಠದ ಮುಂದೆ ಮನವಿ ಮಾಡಿದ್ದರು. ಆದರೆ ಪೀಠ ಅದನ್ನು ನಿರಾಕರಿಸಿತ್ತು.

ಆಗಸ್ಟ್ 5 ರಂದು ನಡೆದ ವಿಚಾರಣೆಯಲ್ಲಿ ಅಟಾರ್ನಿ ಜನರಲ್ ಹೆಸರು ನಮೂದಿಸಿರುವುದು..

ವಿಚಾರಣೆಯ ಕೊನೆಯಲ್ಲಿ ಅಟಾರ್ನಿ ಜನರಲ್‌ರವರು “”ಉನ್ನತ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿರುವ 9 ನ್ಯಾಯಾಧೀಶರ ಪಟ್ಟಿ ನನ್ನ ಬಳಿ ಇದೆ. 1987ರಲ್ಲಿ ನಾನು ಕೂಡ ಹೇಳಿದ್ದೆ” ಎಂದು  ಹೇಳುತ್ತಿರುವಾಗ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಮಿಶ್ರಾರವರು “ಅದನ್ನೆಲ್ಲ ಕೇಳಲು ನಾವು ಇಲ್ಲಿ ಕೂತಿಲ್ಲ  ಮಿ.ಅಟಾರ್ನಿ” ಎಂದು ಹೇಳುವ ಮೂಲಕ ತಡೆದರು.

ವಿಚಾರಣೆಯ ಆರಂಭದಲ್ಲಿ ಭೂಷಣ್ ಪರ ವಕೀಲರಾದ ರಾಜೀವ್ ಧವನ್ ಮತ್ತು ದುಷ್ಯಂತ್ ದವೆಯವರು ಅಟಾರ್ನಿ ಜನರಲ್‌ರವರು ಸಹ ವಿಡಿಯೋ ಕಾನ್ಫರೆನ್ಸ್‌ನಲ್ಲಿದ್ದು, ತಮ್ಮ ಹೇಳಿಕೆಯನ್ನು ದಾಖಲಿಸಲು ಕಾಯುತ್ತಿದ್ದಾರೆ ಎಂದು ನೆನಪಿಸಿದ್ದರು. ಆದರೆ ನ್ಯಾಯಮೂರ್ತಿ ಮಿಶ್ರಾರವರು ಅದು ನಮಗೂ ಗೊತ್ತಿದೆ, ನೀವು ನೆನಪಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು.

ಒಟ್ಟಿನಲ್ಲಿ ಅಟಾರ್ನಿ ಜನರಲ್ ವಿಚಾರಣೆಯ ವೇಳೆ ಸಕ್ರಿಯರಾಗಿ ಭಾಗವಹಿಸಿದ್ದರು. ಅವರು ಪ್ರಶಾಂತ್ ಭೂಷಣ್ ಪರ ವಾದ ಮಂಡಿಸಿದರು. ನ್ಯಾಯಪೀಠ ಅವರ ಸಲಹೆಯನ್ನು ಸಹ ಪಡೆದುಕೊಂಡಿತು. ಆದರೆ ಸಂಜೆ ಪ್ರಕಟವಾದ ತೀರ್ಪು ಬರಹದಲ್ಲಿ ಮಾತ್ರ ಅವರ ಹೆಸರನ್ನು ನಮೂದಿಸಿಲ್ಲ.

ಒಂದು ವೇಳೆ ಅಟಾರ್ನಿಯವರ ಹೆಸರು ಹಾಕುವುದೇ ಇಲ್ಲ ಎಂದಾದಲ್ಲಿ, ಇದೇ ಕೇಸಿನಲ್ಲಿ ಹಿಂದೆ ಏಕೆ ಹಾಕಿದರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ದಿನದ ವಿಚಾರಣೆಯ ಸಂದರ್ಭದಲ್ಲಿ ಅವರ ಅಗತ್ಯವಿರಲಿಲ್ಲ ಎನ್ನುವುದಾದರೆ, ಸುಪ್ರೀಂಕೋರ್ಟಿನ ಪೀಠ ಅವರನ್ನು ಕರೆಸಿದ್ದೇಕೆ? ವಿಚಾರಣೆಯ ನಡುವೆ ಅವರ ಅನಿಸಿಕೆಯನ್ನು ಕೇಳಿದ್ದೇಕೆ ಎಂಬುದು ಸಹಜ ಪ್ರಶ್ನೆ.

ಅಂದರೆ ಸರ್ಕಾರದ ಪರವಾಗಿರುವ ವಕೀಲರೂ ಸಹಾ ಪ್ರಶಾಂತ್ ಭೂಷಣ್ ಹೇಳಿದ್ದನ್ನಾಗಲೀ, ಪ್ರಶಾಂತ್ ಭೂಷಣ್ ಅವರ ಕೊಡುಗೆಯನ್ನಾಗಲೀ ನಿರಾಕರಿಸುವ ಸ್ಥಿತಿಯಲ್ಲಿಲ್ಲ; ಬದಲಿಗೆ ಪೂರಕವಾದ ಮಾತುಗಳನ್ನಾಡಬೇಕಾದ ಅನಿವಾರ್ಯತೆ ಇದ್ದಂತಿದೆ. ಇದನ್ನು ನಿರೀಕ್ಷಿಸಿರದ ಪೀಠ ಎಡವಿಬಿಟ್ಟು, ಇದೀಗ ಆ ರೀತಿಯ ಭಿನ್ನ ಅಭಿಪ್ರಾಯವನ್ನು ದಾಖಲಿಸಿದ ಅಟಾರ್ನಿಯವರ ಹೆಸರನ್ನೇ ಆರ್ಡರ್ ಶೀಟ್‌ನಲ್ಲಿ ಕೈಬಿಟ್ಟಿದೆ.

ಈ ಕುರಿತು ನಾನುಗೌರಿ.ಕಾಂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಸಂಜಯ್ ಹೆಗಡೆ ಮತ್ತು ಹಿರಿಯ ಕಾರ್ಮಿಕ ಮುಖಂಡರಾದ ಎಸ್‌.ಬಾಲನ್‌ರವರನ್ನು ಮಾತನಾಡಿಸಿತು. ಇದು ಸುಪ್ರೀಂ ಕೋರ್ಟ್ ಬೇಕಂತಲೇ ಮಾಡಿದ್ದಲ್ಲ, ಅಪ್ಪಿ ತಪ್ಪಿ ಆದ ತಪ್ಪಾಗಿದೆ. ಅದನ್ನು ಅವರು ಸರಿಪಡಿಸಿಕೊಳ್ಳಬಹುದು. ಆದರೆ ಉಳಿದ ವಿಷಯಗಳು ಚರ್ಚಾರ್ಹ ಎಂದಿದ್ದಾರೆ.


ಇದನ್ನೂ ಓದಿ: ಸುಪ್ರೀಂಕೋರ್ಟಿನಲ್ಲಿ ಪ್ರಶಾಂತ್ ಭೂಷಣ್ ಅವರ ಐತಿಹಾಸಿಕ ಹೇಳಿಕೆಯ ಪೂರ್ಣಪಾಠ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...