ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದ ಹಾಗೂ ಅದರ ಪರವಾಗಿ ಪ್ರೊಪಗಾಂಡಾ ಸೃಷ್ಟಿಸುವ ಗುಂಪಾದ ನಮೋ ಬ್ರಿಗೇಡ್ನ ಹೊಸ ರೂಪ ‘ಯುವಾ ಬ್ರಿಗೇಡ್’ ನಡೆಸುವ ಕಾರ್ಯಕ್ರಮವೊಂದಕ್ಕೆ, ಯಾದಗಿರಿಯ ಜಿಲ್ಲೆಯ ಶಾಲಾ ಶಿಕ್ಷಕರನ್ನು ಭಾಗವಹಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಅಧಿಕಾರಿ ಶಿಲ್ಪಾ ಶರ್ಮಾ ಸುತ್ತೋಲೆ ಹೊರಡಿಸಿದ್ದಾರೆ. ನವೆಂಬರ್ 6 ರ ಶನಿವಾರ ಹೊರಡಿಸಲಾಗಿರುವ ಈ ಸುತ್ತೋಲೆಗೆ ಶಿಕ್ಷಣ ತಜ್ಞರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸಿಇಒ ಶಿಲ್ಪಾ ಶರ್ಮಾ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ, ಕಾರ್ಯಕ್ರಮಕ್ಕೆ ಜಿಲ್ಲೆಯ ಶಾಲೆಗಳಿಂದ ಒಬ್ಬ ಅಥವಾ ಇಬ್ಬರು ಶಿಕ್ಷಕರನ್ನು ಕಳುಹಿಸಬೇಕು. ಜೊತೆಗೆ ಭಾಗವಹಿಸುವ ಶಿಕ್ಷಕರಿಗೆ ನಿಯಮಾನುಸಾರ ಕರ್ತವ್ಯಯ ಅವಧಿ ಎಂದು ಪರಿಗಣಿಸಬೇಕು ಎಂದು ಹೇಳಿದೆ.
ಇದನ್ನೂ ಓದಿ: ‘ಕರ್ನಾಟಕ ಯುವ ನೀತಿ-2021’ ರೂಪಿಕರಣ ಸಮಿತಿಯಲ್ಲಿ ‘ಚಕ್ರವರ್ತಿ ಸೂಲಿಬೆಲೆ’!
ನಮೋ ಬ್ರಿಗೇಡ್ ಹೆಸರಿನಲ್ಲಿ ಬಿಜೆಪಿಗೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ನೆರವಾಗಿದ್ದ ಸಂಘಟನೆಯು ನಾಲ್ಕು ವರ್ಷಗಳ ಹಿಂದೆ ಯುವಾ ಬ್ರಿಗೇಡ್ ಎಂದು ಹೆಸರು ಬದಲಿಸಿತ್ತು. ಈ ಸಂಘಟನೆಯು ಯಾದಗಿರಿ ನಗರದಲ್ಲಿ ಗುರುವಾರದಂದು ‘ಪ್ರೇರಣಾ ಪ್ರವಾಹ’ ಎಂಬ ಕಾರ್ಯಗಾರವನ್ನು ಶಿಕ್ಷಕ-ಶಿಕ್ಷಕಿಯರನ್ನು ಗುರಿಯಾಗಿಸಿ ನಡೆಸುತ್ತಿದೆ.
ವಿಶೇಷವೇನೆಂದರೆ ಯಾದಗಿರಿ ಜಿಲ್ಲಾಧಿಕಾರಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶಿಕ್ಷಕರು ಭಾಗವಹಿಸಬೇಕು ಎಂದು ಸುತ್ತೋಲೆ ಹೊರಡಿಸಿರುವ ಜಿಲ್ಲಾ ಪಂಚಾಯತ್ ಸಿಇಒ ಶಿಲ್ಪಾ ಶರ್ಮಾ ಅವರು ಕಾರ್ಯಕ್ರಮ ಸಮಾರೋಪದ ಮುಖ್ಯ ಅಥಿತಿಯಾಗಿದ್ದಾರೆ. ಜೊತೆಗೆ ಬಿಜೆಪಿ ಬೆಂಬಲಿಗ ಚಕ್ರವರ್ತಿ ಸೂಲಿಬೆಲೆ ‘ಹೊಸ ಶಿಕ್ಷಣ ನೀತಿಗೆ ಸಜ್ಜಾಗೋಣ’ ಎಂಬ ರಾಜಕೀಯ ವಿಷಯದಲ್ಲಿ ಸಭೆಯಲ್ಲಿ ಮಾತನಾಡಲಿದ್ದಾರೆ.
ಈ ಕಾರ್ಯಗಾರಕ್ಕೆ ಜಿಲ್ಲೆಯ ಶಿಕ್ಷಕರನ್ನು ಕಳುಹಿಸಿಕೊಡಬೇಕು ಎಂದು ಯುವಾ ಬ್ರಿಗೇಡ್ ನ ಜಿಲ್ಲಾ ಸಂಚಾಲಕರಾದ ಶ್ರೀಕಾಂತ ಹಳ್ಳಿ ಎಂಬವರು ಜಿಲ್ಲಾ ಪಂಚಾಯತ್ಗೆ ಮನವಿ ಮಾಡಿದ್ದರಿಂದ, ಸಿಇಒ ಅದನ್ನು ಪರಿಗಣಿಸಿ ಸುತ್ತೋಲೆ ಹೊರಡಿಸಿದ್ದಾರೆ.
ಇದನ್ನೂ ಓದಿ: ಕೋಮು ಪ್ರಚೋದನೆ ಮಾಡಿದ ಸೂಲಿಬೆಲೆ: ಟ್ವಿಟರ್ನಲ್ಲಿ ಬುದ್ದಿವಾದ ಹೇಳಿದ ಪೊಲೀಸ್ ಅಧಿಕಾರಿ
ರಾಜಕೀಯ ಕಾರ್ಯಕ್ರಮವೊಂದಕ್ಕೆ ಶಾಲೆಯ ಶಿಕ್ಷಕರು ತೆರಳಬೇಕು ಎಂದು ಸರ್ಕಾರಿ ಅಧಿಕಾರಿಯೊಬ್ಬರು ಸುತ್ತೋಲೆ ಹೊರಡಿಸಿರುವ ಬಗ್ಗೆ ಶಿಕ್ಷಣ ತಜ್ಞರು ಸೇರಿದಂತೆ ಹಲವಾರು ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ, “ಕೊರೊನಾ ಮುಗಿದು ಈಗಷ್ಟೇ ಶಾಲೆಗಳು ಪ್ರಾರಂಭವಾಗಿದೆ. ಶಾಲೆಗಳು ನಡೆಯುವಾಗ ಶಿಕ್ಷಕರನ್ನು ತರಬೇತಿಗೆ ಹಾಕುವಂತಹದ್ದು ಸರಿಯಲ್ಲ ಎಂಬುವುದು ಶಿಕ್ಷಣ ಇಲಾಖೆಯ ಚರ್ಚೆ ನಡೆಯುವಾಗ ಬರುವ ಮಾತಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ, ಹಿರಿಯ ಪ್ರಾಥಮಿಕ ಶಾಲೆಗಳಾದರೆ ಕನಿಷ್ಠ 200 ಕಲಿಕಾ ಅವಧಿ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 220 ಕಲಿಕಾ ಅವಧಿ ಇರಲೇ ಬೇಕಾಗುತ್ತದೆ. ಈಗಾಗಲೆ ಶಿಕ್ಷಕರನ್ನು ತರಬೇತಿಗೆ ಹಾಕಿ ಹಾಕಿ ಕಲಿಕಾ ದಿನಗಳು ಬಹಳ ಕಡಿಮೆಯಾಗಿದೆ. ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ ಶಿಕ್ಷಕರ ತರಬೇತಿಗೆಂದೇ ಹಲವು ಸಂಸ್ಥೆಗಳಿವೆ. ಇಷ್ಟೆಲ್ಲಾ ಇದ್ದರೂ ಹೊರಗಡೆಯಿಂದ ಯಾಕೆ ತರಬೇತಿ ಕೊಡಬೇಕು? ಇದರ ಅವಶ್ಯಕತೆ ಏನು?” ಎಂದು ಅವರು ಪ್ರಶ್ನಿಸಿದ್ದಾರೆ.
“ಈಗ ಕಾರ್ಯಕ್ರಮ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಅನೇಕ ವಿರೋಧಗಳು ಇವೆ. ಅವರ ಹಿನ್ನಲೆ, ಅವರು ಪ್ರತಿನಿಧಿಸುವಂತಹ ಪಕ್ಷ ಸೇರಿದಂತೆ ಹಲವು ತಕರಾರುಗಳಿಗೆ ಇವೆ. ಪಕ್ಷ ರಾಜಕಾರಣವನ್ನು ಯಾಕೆ ಶಾಲಾ ಶಿಕ್ಷಣದಲ್ಲಿ ತರಬೇಕು? ಹಾಗಾಗಿ ಅದು ತಪ್ಪು ನಿರ್ಧಾರ. ಈಗ ಇವರ ಕಾರ್ಯಕ್ರಮಕ್ಕೆ ಶಿಕ್ಷಕರನ್ನು ಕಳುಹಿಸಿದರೆ, ಮುಂದೊಂದು ದಿನ ಬೇರೆ ಪಕ್ಷದವರೂ ಬಂದು ನಾವು ಕಾರ್ಯಕ್ರಮ ಮಾಡುತ್ತೇವೆ ನಮಗೂ ಶಿಕ್ಷಕರನ್ನು ಕಳುಹಿಸಿಕೊಡಿ ಎಂದು ಕೇಳುತ್ತಾರೆ. ಇದು ಬಹಳ ಕೆಟ್ಟ ಸಂಪ್ರದಾಯವಾಗುತ್ತದೆ, ಹಾಗಾಗಿ ಶಿಕ್ಷಕರನ್ನು ಕಾರ್ಯಕ್ರಮಕ್ಕೆ ಕಳುಹಿಸುವಂತೆ ಸುತ್ತೋಲೆ ಹೊರಡಿಸಿದ ಅಧಿಕಾರಿ ವಿರುದ್ದ ತಕ್ಷಣ ಕ್ರಮಕೈಗೊಳ್ಳಬೇಕು. ಜೊತೆಗೆ ಸುತ್ತೋಲೆಯನ್ನು ರದ್ದು ಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೋಮು ಪ್ರಚೋದನೆ ಮಾಡಿದ ಸೂಲಿಬೆಲೆ: ಟ್ವಿಟರ್ನಲ್ಲಿ ಬುದ್ದಿವಾದ ಹೇಳಿದ ಪೊಲೀಸ್ ಅಧಿಕಾರಿ
ಸಾಮಾಜಿಕ ಕಾರ್ಯಕರ್ತ ಹರ್ಷಕುಮಾರ್ ಕುಗ್ವೆ ಮಾತನಾಡಿ, “ಚಕ್ರವರ್ತಿ ಸೂಲಿಬೆಲೆ ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರು ಒಂದು ಪಕ್ಷದ ಬೆಂಬಲಕ್ಕಾಗಿ ಹಸಿ ಸುಳ್ಳುಗಳನ್ನು ಹೇಳಿ ಜನರ ತಲೆಕೆಡಿಸುತ್ತಿರುವ ವ್ಯಕ್ತಿ. ಹಾಗಾಗಿಯೆ ರಾಜ್ಯದ ಜನರು ಅವರಿಗೆ ‘ಹೆಂಗ್ಪುಂಗ್ಲಿ’ ಎಂಬ ಬಿರುದನ್ನೂ ನೀಡಿದ್ದಾರೆ. ಇಂತಹ ಜನರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ ಕಾರ್ಯಾಗಾರ ಮಾಡುವುದು ತುಂಬಾ ದೊಡ್ಡ ದುರಂತ. ಇಡೀ ಕಾರ್ಯಕ್ರಮ ರಾಜಕೀಯ ಪ್ರೊಪಗಾಂಡ ಕಾರ್ಯಕ್ರಮವಾಗಿದೆ. ಇದಕ್ಕೆ ಬೆಂಬಲ ನೀಡುತ್ತಿರುವಂತಹ ಸರ್ಕಾರಿ ಅಧಿಕಾರಿಗಳು ಯಾವುದೆ ಪ್ರಜ್ಞೆ ಇಲ್ಲದ ಮುಠ್ಠಾಳರು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾವು ಹೊರಡಿಸಿರುವ ಸುತ್ತೋಲೆ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ ಶಿಲ್ಪಾ ಶರ್ಮಾ ಅವರನ್ನು ಸಂಪರ್ಕಿಸಲು ನಾನುಗೌರಿ.ಕಾಂ ಪ್ರಯತ್ನಿಸಿದೆ. ಆದರೆ ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ. ಅವರ ಪ್ರತಿಕ್ರಿಯೆ ಸಿಕ್ಕ ಕೂಡಲೇ ಇಲ್ಲಿ ಅಪ್ಡೇಟ್ ಮಾಡಲಾಗುವುದು.
ಇದನ್ನೂ ಓದಿ: ಇಸ್ಲಾಂ ಮತ್ತು ಅಂಬೇಡ್ಕರ್ ಬಗೆಗಿನ ಸುಳ್ಳುಗಳು; ಮಹಾ ಮಾನವತಾವಾದಿಗೆ ‘ಸೂಲಿಬೆಲೆ’ ಮಾಡಿದ ಅವಮಾನ!
BJP is going to demonise the country via day by day.
Idu olledalla sarkari sevakaru avaru avarannu durpyoga madko bardu yakandre guru yavattu lagu agabardu