ಸನ್ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ಕಾರ್ಯವು ಶ್ಲಾಘನೀಯ. ಇದೇ ಸಂದರ್ಭದಲ್ಲಿ ನನ್ನದೊಂದು ಮನವಿ.
ರಾಜ್ಯದ ರೈತರು ಒಂದೆಡೆ ಬರ, ಮತ್ತೊಂದೆಡೆ ಪ್ರವಾಹ ಹಾಗೂ ಈಗ ಕೊರೊನಾ ಲಾಕ್ ಡೌನ್ ನಿಂದ ಆರ್ಥಿಕವಾಗಿ ಕಂಗಾಲಾಗಿದ್ದಾರೆ ಎಂಬುದನ್ನು ರೈತಹೋರಾಟಗಾರರಾದ ತಾವು ಬಲ್ಲಿರಿ. ಈ ನಡುವೆಯೇ
ಈಗ ತಾನೆ ಕೃಷಿ ಚಟುವಟಿಕೆಗಳು ಆರಂಭವಾಗಿವೆ.
ಕೃಷಿಕರು ತಮ್ಮ ಕೃಷಿ ಚಟುವಟಿಕೆಗಾಗಿ ತಮ್ಮಲ್ಲಿ ಇದ್ದ ಒಂದಷ್ಟು ಒಡವೆಗಳನ್ನು ಬ್ಯಾಂಕ್ ಗಳಲ್ಲಿ ಇಟ್ಟು ಸರ್ಕಾರ ನೀಡಿದ್ದ ಅಗ್ರಿಗೋಲ್ಡ್ ಲೋನ್ ಅಡಿಯಲ್ಲಿ ನಾಲ್ಕು ಪರ್ಸೆಂಟ್ ಬಡ್ಡಿದರದಲ್ಲಿ ಸಾಲ ತೆಗೆದುಕೊಳ್ಳುತ್ತಿದ್ದರು. ಆದರೆ ತಮ್ಮ ಸರ್ಕಾರ ಈ ಅಗ್ರಿಗೋಲ್ಡ್ ಸಹಾಯ ಯೋಜನೆಯನ್ನು ರದ್ದು ಪಡಿಸಿರುವುದರಿಂದಾಗಿ ಈಗ ವಾರ್ಷಿಕ ಶೇ.10.45 ದರದಲ್ಲಿ ಚಿನ್ನ ಅಡವಿಡಬೇಕಿದೆ.
ಈಗಾಗಲೇ ರಾಜ್ಯದ್ಯಂತ ವಿವಿಧ ಬ್ಯಾಂಕ್ ಗಳಲ್ಲಿ ಅಗ್ರಿಗೋಲ್ಡ್ ಯೋಜನೆಯಡಿ ಚಿನ್ನ ಅಡವಿಟ್ಟಿರುವ ರೈತರಿಗೆ ಈಗಿನ 10.45 ದರದಲ್ಲಿ ಬಡ್ಡಿ ವಿಧಿಸಿರುವುದರಿಂದ ಅನೇಕ ರೈತರಿಗೆ ಅದಕ್ಕೆ ಅಷ್ಡು ಬಡ್ಡಿ ಪಾವತಿ ಮಾಡಿ ಅಡವಿಟ್ಟ ಚಿನ್ನವನ್ನು ಬಿಡಿಸಿಕೊಳ್ಳಲಾಗದ ದುಃಸ್ಥಿತಿಯಲ್ಲಿ ಇದ್ದಾರೆ.
ರೈತಪರವಾಗಿ ಯೋಚಿಸುವ ತಾವು, ಹಿಂದೆ ಇದ್ದ ಅಗ್ರಿಗೋಲ್ಡ್ ಯೋಜನೆಯನ್ನು ಮತ್ತೆ ತರಬೇಕು. ಇದು ಸ್ವಾವಲಂಭಿ ರೈತರಿಗೆ ಒಳ್ಳೆಯ ಮಾರ್ಗವಾಗಿದೆ.
ಈಗಾಗಲೇ 10.45% ಇರುವ ಬಡ್ಡಿದರವನ್ನು ದಯಮಾಡಿ ರದ್ದುಗೊಳಿಸಿ ಹಿಂದಿನ 4% ದರದ ಬಡ್ಡಿಯಲ್ಲಿ ರೈತರಿಂದ ಬಡ್ಡಿ ವಸೂಲಿ ಮಾಡಲು ಆದೇಶ ನೀಡಿದರೆ ಲಕ್ಷಾಂತರ ರೈತರ ಕೋಟ್ಯಾಂತರ ರೂಪಾಯಿಯ ಚಿನ್ನ ಅವರ ಕನಸಿನ ಚಿನ್ನವನ್ನು ಅವರು ಬಿಡಿಸಿಕೊಳ್ಳಲು ಸಹಾಯವಾಗುತ್ತದೆ.
ಅನೇಕರು ತಮ್ಮ ಕೃಷಿ ಸಾಲಕ್ಕಾಗಿ ತಮ್ಮ ತಾಯಿಯ, ಸೋದರಿಯ, ಮಡದಿಯ ಇಲ್ಲವೇ ಮಕ್ಕಳ ತಾಳಿಸಹಿತವಾದ ಒಡವೆಗಳನ್ನು ಅಡಮಾನ ಮಾಡಿರುತ್ತಾರೆ. ಅವರ ನೆರೆವಿಗೆ ನಿಲ್ಲಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ.
ಈಗಾಗಲೇ ಆಂದ್ರಪ್ರದೇಶ ಸರ್ಕಾರ ರೈತರ ಚಿನ್ನದ ಮೇಲಿನ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಿರುವುದಾಗಿ ತಿಳಿದು ಬಂದಿದೆ.
ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ, ರೈತರಿಗೆ ನರೇಗ ಯೋಜನೆಯಲ್ಲಿನ ಕೂಲಿಯನ್ನೂ ಹೆಚ್ಚು ಮಾಡಿದೆ, ಈಗ ರೈತರ ಹಿತಕ್ಕಾಗಿ ಕೃಷಿ ಚಟುವಟಿಕೆ ನಡೆಸುವುದಕ್ಕೂ ಲಾಕ್ ಡೌನ್ ಸಡಿಲಗೊಳಿಸಿದೆ.
ಇದೆಲ್ಲವೂ ರಾಜ್ಯ ಸರ್ಕಾರದ ರೈತಸ್ನೇಹಿ ನಡೆಗಳಾಗಿವೆ ಎಂಬುದನ್ನು ನೆನೆಯುತ್ತಲೇ ಬ್ಯಾಂಕುಗಳಲ್ಲಿ ರೈತರ ಚಿನ್ನದ ಮೇಲಿನ ಅಧಿಕ ಬಡ್ಡಿದರವನ್ನು ರದ್ದುಗೊಳಿಸಿ ಹಿಂದಿನ ಪದ್ದತಿಯಂತೆ 4% ಬಡ್ಡಿದರದಲ್ಲಿ ಅಗ್ರಿಗೋಲ್ಡ್ ಯೋಜನೆಯನ್ನು ಮುಂದುವರೆಸಲು ಮನವಿ ಮಾಡುತ್ತೇವೆ.
(ಲೇಖಕರು ಸಾಮಾಜಿಕ ಕಾರ್ಯಕರ್ತರು ಮತ್ತು ಯುವ ಬರಹಗಾರರು)
ಇದನ್ನೂ ಓದಿ: ಲಾಕ್ಡೌನ್ ಸಂಕಷ್ಟ: 1,610 ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ ಯಡಿಯೂರಪ್ಪ


