Homeಅಂಕಣಗಳುಹಾಡಬೇಕು ಕರಾಳತೆಯ ಬಗ್ಗೆಯೇ ಹಾಡುಗಳನ್ನು.....

ಹಾಡಬೇಕು ಕರಾಳತೆಯ ಬಗ್ಗೆಯೇ ಹಾಡುಗಳನ್ನು…..

ಪ್ರಭುತ್ವಗಳು ತನ್ನ ವಿರುದ್ಧದ ಸಣ್ಣ ಸಣ್ಣ ಟೀಕೆಗಳನ್ನೂ ಸಹಿಸದೆ ತನ್ನ ನಾಗರಿಕರ ಮೇಲೆಯೇ ಇಂತಹ ಕರಾಳ ಕಾನೂನುಗಳ ಪ್ರಹಾರ ನಡೆಸುತ್ತಾ ಬಂದಿದ್ದರೂ ಇಂತಹ ವಿದ್ಯಮಾನಗಳ ಬಗ್ಗೆ ನಾಗರಿಕರಲ್ಲಿ ಒಟ್ಟಾರೆಯಾಗಿ ಎಚ್ಚರಿಕೆ ಅಥವಾ ವಿವೇಕ ಇನ್ನು ಮೂಡಿಯೇ ಇಲ್ಲ ಎಂದು ಸಂಶಯವಿಲ್ಲದೆ ಹೇಳುವ ದುರಂತ ಸ್ಥಿತಿಯಲ್ಲಿ ನಾವಿದ್ದೇವೆ

- Advertisement -
- Advertisement -

ಬೀದರ್‌ನ ಶಾಹೀನ್ ಶೈಕ್ಷಣಿಕ ಸಂಸ್ಥೆ ಮತ್ತೆ ಸುದ್ದಿಯಲ್ಲಿದೆ. ಶಾಹೀನ್ ಕಾಲೇಜಿಗೆ ಸೇರಿದ ಕಾರ್ತಿಕ್ ರೆಡ್ಡಿ ಎಂಬ ವಿದ್ಯಾರ್ಥಿ ನ್ಯಾಶನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್ (NEET)ನ ಅಖಿಲ ಭಾರತೀಯ ರ್ಯಾಂಕಿಂಗ್‍ನಲ್ಲಿ 9 ನೇ ಸ್ಥಾನ ಗಳಿಸಿರುವುದು ಇದಕ್ಕೆ ಕಾರಣ. ಇದೇ ಕೆಲವು ತಿಂಗಳುಗಳ ಹಿಂದೆ ಶಾಹೀನ್ ಶಿಕ್ಷಣ ಸಂಸ್ಥೆಗೆ ಸೇರಿದ ಬೀದರ್‌ನ ಶಾಲೆ ಬೇರೆ ಕಾರಣಕ್ಕೆ ಭಾರಿ ಸುದ್ದಿಯಲ್ಲಿ ಇದ್ದದ್ದನ್ನು ನಾವೆಲ್ಲ ಮರೆತಿರಲಾರೆವು. ಸಿಎಎ ಮತ್ತು ಎನ್‍ಆರ್‌ಸಿ ವಿರೋಧಿ ನಾಟಕ ಪ್ರದರ್ಶನದಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ಸಂಭಾಷಣೆಗಳಿವೆ ಎಂಬ ಆರೋಪ ಹೊರಿಸಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು. ಶಾಲೆಯ ಮುಖ್ಯಶಿಕ್ಷಕಿ ಮತ್ತು ನಾಟಕದಲ್ಲಿ ಅಭಿನಯಿಸಿದ್ದ ವಿದ್ಯಾರ್ಥಿಯ ತಾಯಿಯ ಮೇಲೂ ಆರೋಪ ಹೊರಿಸಲಾಗಿತ್ತು. ಆದರೆ ಶಾಹೀನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಾಗ, ನಾಟಕದ ಯಾವ ಸಂಭಾಷಣೆಯೂ ದೇಶದ್ರೋಹದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದ ಸೆಶನ್ಸ್ ಕೋರ್ಟ್ ನ್ಯಾಯಾಧೀಶರು ಪ್ರಕರಣ ದಾಖಲಿಸಿದ ಕ್ರಮವನ್ನು ಟೀಕಿಸಿದ್ದರು. ಇಂತಹ ನ್ಯಾಯಾಧೀಶರ ಎದುರು ಪ್ರಕರಣ ವಿಚಾರಣೆ ಬಂದದ್ದಕ್ಕೆ ಮತ್ತು ಇಂತಹ ತೀರ್ಪು ಸಿಕ್ಕಿದ್ದಕ್ಕೆ ಆ ಮುಗ್ಧ ಆರೋಪಿಗಳೆಲ್ಲಾ ಅದೃಷ್ಟವಂತರೇ ಎಂದು ಹೇಳಬೇಕು! ರಾಜಕೀಯ ದುರುದ್ದೇಶಕ್ಕಾಗಿ ದೇಶದ ಮೂಲೆ ಮೂಲೆಯಲ್ಲಿ ದೇಶದ್ರೋಹ, ಯುಎಪಿಎ ಇತ್ಯಾದಿ ಕರಾಳ ಕಾಯ್ದೆಗಳಡಿಲ್ಲಿ ಪ್ರಭುತ್ವಗಳಿಂದ ಅರೋಪ ಹೊರಿಸಿಕೊಂಡು ಸೆರೆವಾಸಿಗಳಾಗಿರುವ ಎಷ್ಟೋ ಚಿಂತಕರು, ಪತ್ರಕರ್ತರು ಮತ್ತು ಹೋರಾಟಗಾರರಿಗೆ ಈ ಅದೃಷ್ಟದ ಬಲ ಇನ್ನೂ ಒಲಿದಿಲ್ಲ.

ಇಂತಹ ಎಷ್ಟೋ ಶೋಷಣೆಯ ಘಟನೆಗಳು ಇತಿಹಾಸದಲ್ಲಿ ಮತ್ತೆ ಮತ್ತೆ ನಡೆದಿದ್ದರೂ ಮತ್ತು ಪ್ರಭುತ್ವಗಳು ತನ್ನ ವಿರುದ್ಧದ ಸಣ್ಣ ಸಣ್ಣ ಟೀಕೆಗಳನ್ನೂ ಸಹಿಸದೆ ತನ್ನ ನಾಗರಿಕರ ಮೇಲೆಯೇ ಇಂತಹ ಕರಾಳ ಕಾನೂನುಗಳ ಪ್ರಹಾರ ನಡೆಸುತ್ತಾ ಬಂದಿದ್ದರೂ ಇಂತಹ ವಿದ್ಯಮಾನಗಳ ಬಗ್ಗೆ ನಾಗರಿಕರಲ್ಲಿ ಒಟ್ಟಾರೆಯಾಗಿ ಎಚ್ಚರಿಕೆ ಅಥವಾ ವಿವೇಕ ಇನ್ನು ಮೂಡಿಯೇ ಇಲ್ಲ ಎಂದು ಸಂಶಯವಿಲ್ಲದೆ ಹೇಳುವ ದುರಂತ ಸ್ಥಿತಿಯಲ್ಲಿ ನಾವಿದ್ದೇವೆ. ‘ಕರಾಳ ಸಮಯದಲ್ಲಿ ಹಾಡು ಹಸೆ ಉಂಟೇ, ಹೌದು ಹಾಡಬೇಕು ಕರಾಳತೆಯ ಬಗ್ಗೆಯೇ ಹಾಡುಗಳನ್ನು’ ಎನ್ನುವ ಜರ್ಮನ್ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್‌ನ ಮಾತಿನಂತೆ ಅಮೆರಿಕಾದಲ್ಲಿ 59 ವರ್ಷದ ನಿರ್ದೇಶಕ ಅರೋನ್ ಸಾರ್ಕಿನ್ ತನ್ನ ದೇಶದ ಕರಾಳ ದಿನಗಳ ಬಗ್ಗೆ ನಿರ್ದೇಶಿಸಿರುವ ಚಲನಚಿತ್ರ ‘ದ ಟ್ರಯಲ್ ಆಫ್ ಶಿಕಾಗೋ 7’ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ.

ಅಮೆರಿಕಾ, ವಿಯೆಟ್ನಾಂ ದೇಶದ ವಿರುದ್ಧ ನಡೆಸಿದ ಯುದ್ಧವನ್ನು ಪ್ರತಿಭಟಿಸಲು 1968ರಲ್ಲಿ ಅಮೆರಿಕಾದ ನಗರ ಶಿಕಾಗೋದಲ್ಲಿ ನೆರೆದಿದ್ದ ಸಾವಿರಾರು ಜನರ ಮೇಲೆ ಪೊಲೀಸರೇ ಹಿಂಸೆ ಪ್ರಾರಂಭಿಸಿ, ನೂರಾರು ಜನರನ್ನು ಬಂಧಿಸಿದ್ದ ಘಟನೆಗೆ ಸಂಬಂಧಿಸಿದಂತೆ, ತದನಂತರ ಚುನಾಯಿತಗೊಳ್ಳುವ ಸರ್ಕಾರ ಏಳು ಯುವ ಮುಖಂಡರ ಮೇಲೆ ಹಸಿ ಸುಳ್ಳು ಅರೋಪಗಳನ್ನು ಹೊರಿಸಿ, ಪ್ರಕರಣ ದಾಖಲಿಸುವ ಮತ್ತು ಅದರ ಟ್ರಯಲ್‍ಗೆ ಸಂಬಂಧಿಸಿದ ಚಲನಚಿತ್ರ ಇದು. ತನ್ನ ಶೋಷಣೆಗಳನ್ನು, ದೌರ್ಜನ್ಯಗಳನ್ನು ಮುಚ್ಚಿಕೊಳ್ಳಲು, ತನ್ನನ್ನು ಸಮರ್ಥಿಸಿಕೊಳ್ಳಲು ಮತ್ತು ಯಾವುದೇ ಪ್ರತಿರೋಧವನ್ನು ಹತ್ತಿಕ್ಕಲು ಪ್ರಭುತ್ವ ಯಾವ ನೀಚ ಮಟ್ಟಕ್ಕಾದರೂ ಇಳಿಯಬಲ್ಲದು ಮತ್ತು ಇಂತಹ ಕಾರ್ಯಕ್ಕೆ ಪ್ರಭುತ್ವದ ಸಂಸ್ಥೆಗಳು (ಪೊಲೀಸ್, ವಕೀಲರು, ನ್ಯಾಯಾಧೀಶರು ಮತ್ತು ಕೋರ್ಟ್) ಹೇಗೆ ಕೈ ಜೋಡಿಸಬಲ್ಲವು ಎಂಬ 1968ರ ಇತಿಹಾಸದ ನೈಜ ಕಥೆಯನ್ನಾಧರಿಸಿದ ಚಿತ್ರಕಥೆ ದೇಶಕಾಲಗಳನ್ನು ಮೀರಿ ಭಾರತಕ್ಕೂ ಅದರಲ್ಲೂ ಈ ದೇಶದಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳಿಗೂ ಅನ್ವಯಿಸುವಂತೆ ಇದೆ. ಈ ಟ್ರಯಲ್‍ಲ್ಲಿ ಎಂಟನೇ ಆರೋಪಿಯಾಗಿದ್ದ ಕಪ್ಪು ಜನಾಂಗದ ಬ್ಲ್ಯಾಕ್ ಪ್ಯಾಂಥರ್ಸ್ ಮುಖಂಡ ಬಾಬಿ ಸೀಲ್ (ವಿಯೆಟ್ನಾಮ್ ವಿರೋಧಿ ಪ್ರತಿಭಟನೆಯ ಆಯೋಜನೆಯಲ್ಲಿ ಅವರ ಯಾವುದೇ ಪಾತ್ರ ಇರುವುದಿಲ್ಲ) ಅವರಿಗೆ ತಮ್ಮ ವಿರುದ್ಧ ಹೊರಿಸಿರುವ ಆರೋಪಗಳನ್ನು ತಿರಸ್ಕರಿಸಿ ಡಿಫೆಂಡ್ ಮಾಡಿಕೊಳ್ಳಲು ಅವಕಾಶವನ್ನೂ ನೀಡದೆ, ಆತನನ್ನು ನ್ಯಾಯಾಂಗ ನಿಂದನೆಗೆ ಒಳಪಡಿಸಿ, ಕೈಕಾಲುಗಳಿಗೆ ಚೈನು ಕಟ್ಟಿ, ಬಾಯಿಗೆ ಬಟ್ಟೆ ತುರಿಕಿ ವಿಚಾರಣೆಯಲ್ಲಿ ಕೂರಿಸುವ ದೃಶ್ಯ ‘ವಾಸ್ತವ, ಕಲ್ಪಿತ ಕಥೆಗಿಂತಲೂ ಕ್ರೂರವಾಗಿರಬಲ್ಲದು’ ಎಂಬುದನ್ನು ನೆನಪಿಸುವುದಲ್ಲದೆ, ನ್ಯಾಯಪ್ರದಾನ ವ್ಯವಸ್ಥೆಯಲ್ಲಿ ಒಬ್ಬ ಕಪ್ಪು ಜನಾಂಗೀಯ ವ್ಯಕ್ತಿಗೆ ಇರುವ ಹೆಚ್ಚಿನ ಶೋಷಣೆ ಮತ್ತು ಅಡೆತಡೆಯನ್ನು ಎತ್ತಿತೋರಿಸುತ್ತದೆ. ಈ ದೇಶದಲ್ಲಿಯೂ ಶೋಷಿತ ಸಮುದಾಯದ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ ಈ ಕಥಾಭಾಗವನ್ನು ಅನ್ವಯಿಸಿಕೊಳ್ಳುವುದು ಕಷ್ಟವೇನಿಲ್ಲ. ರಾಷ್ಟ್ರಭಕ್ತಿಯ ಅಮಲೇರಿಸಿಕೊಂಡವನಿಗೂ ‘ದ ಟ್ರಯಲ್ ಆಫ್ ಶಿಕಾಗೋ 7’ ಸ್ವಲ್ಪವಾದರೂ ಕಾಡದೆ ಇರದು.

ಸಿನೆಮಾ ಕಥೆಯ ಒಳಗೆ ಅಥವಾ ಇತಿಹಾಸದ ಒಳಗೆ ಹೊಕ್ಕು ವಿಶ್ಲೇಷಿಸುವುದಕ್ಕಿಂತಲೂ, ಒಬ್ಬ ಕಲಾವಿದನಾಗಿ, ನಿರ್ದೇಶಕನಾಗಿ ಪ್ರಸ್ತುತ ಸವಾಲುಗಳಿಗೆ ಸ್ಪಂದಿಸುವ ತುರ್ತನ್ನು ಅರ್ಥ ಮಾಡಿಕೊಳ್ಳುವ ಜರೂರಿನ ಕಾರಣಕ್ಕೆ ಇದನ್ನು ಪ್ರಸ್ತಾಪಿಸುವುದು ಮುಖ್ಯ ಎಂದೆನಿಸಿತು. ಸಿನೆಮಾ ಜನಪ್ರಿಯ ಮಾಧ್ಯಮ. ಈ ಮಾಧ್ಯಮದ ಮೂಲಕ ಜನರನ್ನು ತಲುಪುವುದು, ಜನರ ಸಂವೇದನೆಯನ್ನು ಉದ್ದೀಪಿಸುವುದು, ಚಿಂತನೆಗೆ ಹಚ್ಚುವುದು ಬೇರೆ ಕಲಾಪ್ರಕಾರಗಳಿಗೆ ಹೋಲಿಸಿದರೆ ಸುಲಭ ಮತ್ತು ಪರಿಣಾಮಕಾರಿ. ಭಾರತದಲ್ಲಿ ‘ದ ಟ್ರಯಲ್ ಆಫ್ ಶಿಕಾಗೋ 7’ನಂತಹ ಪ್ರಯತ್ನಗಳು ಬೆರಳೆಣಿಕೆಯಷ್ಟು. ನೆರೆ ರಾಜ್ಯಗಳಲ್ಲಿ ಅಲ್ಲೊಂದು ಇಲ್ಲೊಂದು ಇಂತಹ ಶೋಷಣೆಯ ವಸ್ತುಗಳನ್ನು ಇಟ್ಟುಕೊಂಡು, ಪ್ರಭುತ್ವಗಳನ್ನು – ಆಡಳಿತ ವ್ಯವಸ್ಥೆಯ ದುರ್ನೀತಿ ಮತ್ತು ದೌರ್ಜನ್ಯದ ನಡೆಗಳನ್ನು ತರಾಟೆಗೆ ತೆಗೆದುಕೊಂಡ ಸಿನೆಮಾಗಳು ಮೂಡಿವೆ. ಆದರೆ ಕರ್ನಾಟಕದ ಮಟ್ಟಿಗೆ – ಕನ್ನಡ ಚಲನಚಿತ್ರಗಳ ಮಟ್ಟಿಗೆ ಇದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ.

ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ‘ಫಿಲ್ಮ್ ಯುನೈಟೆಡ್ ಕ್ಲಬ್’ (ಎಫ್‍ಯುಸಿ) ಎಂಬ ಸಿನೆಮಾ ನಿರ್ದೇಶಕರ, ವಿಮರ್ಶಕರ ವೇದಿಕೆ ಪ್ರಾರಂಭವಾಯಿತು. ಅದರ ಜಾಲತಾಣದ ಪಟ್ಟಿಯಲ್ಲಿ ಕಾಣುವ ನಿರ್ದೇಶಕರ ಫಿಲ್ಮೋಗ್ರಫಿ ಮೇಲೆ ಕಣ್ಣಾಡಿಸಿದರೆ ಒಂದು ಮಟ್ಟದ ನಿರಾಶೆ ಮೂಡುವುದಂತೂ ನಿಜ. ಇನ್ನು ಕೆಲವು ದಿನಗಳಿಂದ ಈ ತಂಡ ನಡೆಸಿಕೊಂಡು ಬರುತ್ತಿರುವ ಸಿನೆಮಾ ಬಗೆಗಿನ ವೆಬಿನಾರ್‌ಗಳನ್ನು ಗಮನಿಸಿದಾಗಲೂ, ಇಂದು ಪ್ರಸಕ್ತ ದೈತ್ಯವಾಗಿ ಬೆಳೆದಿರುವ ಪ್ರಭುತ್ವ ಪ್ರಣೀತ ಸಮಸ್ಯೆಗಳನ್ನು ಚರ್ಚಿಸುವ ಮತ್ತು ಅವುಗಳನ್ನು ಕಲೆಯ ಮೂಲಕ ಅವಲೋಕಿಸುವ, ಚರ್ಚಿಸುವ, ಉತ್ತರ ಹುಡುಕಲು ಪ್ರಯತ್ನಿಸುವ ಕೆಲಸಗಳೂ ನಡೆದಂತೆ ಕಾಣುವುದಿಲ್ಲ. ಮನರಂಜನೆಗಿಂತಲೂ ಮಿಗಿಲಾದ ಮುಂದಿನ ಹೆಜ್ಜೆ ಇಡಲು ಈ ತಂಡ ಮುಂದಾದಂತೆ ಕಾಣುತ್ತಿಲ್ಲ. ನಿಜ, ಬಂಡವಾಳ, ಪ್ರಭುತ್ವ ವಿರೋಧಿ ಮತ್ತು ಜನರ ಸಮಸ್ಯೆಗೆ ನಿಜವಾಗಿ ಕನ್ನಡಿ ಹಿಡಿಯುವ ಚಿತ್ರಗಳನ್ನು ಬಯಸುವುದಿಲ್ಲ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿಸಿಕೊಳ್ಳಬಯಸುವ ಯಾವುದೇ ಕಲಾವಿದ ಅದಕ್ಕೆ ಮಾರ್ಗಗಳನ್ನು ಹುಡುಕುವುದಕ್ಕೆ ಖಂಡಿತಾ ಹಿಂಜರಿಯುವುದಿಲ್ಲ.

ಅಂತಹ ಪ್ರಯತ್ನಗಳು ಕನ್ನಡ ಸಿನಿ ಜಗತ್ತಿನಲ್ಲಿಯೂ ಮುಂದೆ ಕಾಣಬಲ್ಲವೇ?


ಇದನ್ನೂ ಓದಿ: ಭಾರತದಲ್ಲಿ ಮಾನವಹಕ್ಕು ಹೋರಾಟಗಾರರ ಬಂಧನವಾಗುತ್ತಿದೆ: ವಿಶ್ವಸಂಸ್ಥೆ ಕಳವಳ

ವಿವೇಕವೂ ಜನಪ್ರಿಯವಾಗಬಲ್ಲದು ಎಂಬುದಕ್ಕೆ ‘ದ ಟ್ರಯಲ್ ಆಫ್ ಶಿಕಾಗೋ 7’ ಸಿನೆಮಾ ಎಷ್ಟು ಸಾಕ್ಷಿಯೋ, ಹಾಗೆಯೇ ಕೆಲವೇ ದಿನಗಳ ಹಿಂದೆ ನ್ಯೂಜಿಲ್ಯಾಂಡ್ ದೇಶದಲ್ಲಿ ಪ್ರಧಾನಿಯಾಗಿ ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಜನಬೆಂಬಲದೊಂದಿಗೆ ಮರು ಆಯ್ಕೆಯಾದ ಲೇಬರ್ ಪಕ್ಷದ (ಎಡಪಂಥೀಯ ಪಕ್ಷ) ಜಸಿಂಡಾ ಅರ್ಡನ್ ಅವರನ್ನು ಕೂಡ ಸಾಕ್ಷಿ ಎನ್ನಬಹುದು. ಜಗತ್ತಿನಾದ್ಯಂತ (ಅಮೆರಿಕಾ, ಬ್ರೆಜಿಲ್, ಟರ್ಕಿ, ಸ್ವೀಡನ್, ಇಂಗ್ಲೆಂಡ್, ಭಾರತ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ) ಬಲಪಂಥೀಯ ಪಾಪ್ಯುಲಿಸ್ಟ್ ಸರ್ಕಾರಗಳು ಕಲ್ಪಿತ ಶತ್ರುಗಳ ಬಗ್ಗೆ ಮಧ್ಯಮ ವರ್ಗದ ಜನರ ನಡುವೆ ಪ್ರಚಾರ ನಡೆಸಿಕೊಂಡು, ಜನರ ನಿಜವಾದ ಕಾಳಜಿ ಆಶೋತ್ತರಗಳಿಗೆ ಸ್ಪಂದಿಸದೆ ಅಧಿಕಾರಕ್ಕೆ ಬರುತ್ತಿರುವ ಸಂದರ್ಭದಲ್ಲಿ ಜಸಿಂಡಾ ಅರ್ಡನ್ ಅವರ ಧನಾತ್ಮಕ ಜನಪ್ರಿಯತೆ ಜಗತ್ತಿನಾದ್ಯಂತ ಲಿಬರಲ್ ದೋರಣೆಯುಳ್ಳ, ಪ್ರತಿರೋಧದ ಮನಸ್ಸಿನ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಗೆ ತುಡಿಯುವ ಜನರಿಗೆ ಭರವಸೆಯಾಗಿ ಕಂಡಿರುವುದು ಸುಳ್ಳಲ್ಲ.

ಹಿಂದಿನ ಅವಧಿಯಲ್ಲಿ ಹೆಚ್ಚು ಜನಪರವಾದ ಸಾಮಾಜಿಕ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಇಂಪ್ಲಿಮೆಂಟ್ ಮಾಡಲು ಅವರಿಗೆ ಸಾಧ್ಯವಾಗಿಲ್ಲ ಎಂಬ ಆರೋಪ ಅವರ ಮೇಲಿದ್ದರೂ, ಈಗ ಬಂದಿರುವ ಭಾರಿ ಜನಮತದ ಕಾರಣದಿಂದಾಗಿ ಅವರು ಅವುಗಳ ಬಗ್ಗೆ ಈ ಅವಧಿಯಲ್ಲಿ ಗಮನ ಹರಿಸಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.

ಮತ್ತೆ ಬಂಡವಾಳಿಗರು ಮತ್ತು ಜಾಗತಿಕ ಬಂಡವಾಳ ವ್ಯವಸ್ಥೆ ಜನಪರ ಮತ್ತು ಸಾಮಾಜ ಕಲ್ಯಾಣ ಯೋಜನೆಗಳಿಗೆ ಸುಲಭವಾದ ಅವಕಾಶ ಮಾಡಿಕೊಡುವುದಿಲ್ಲ ಎಂಬ ವಿಷಯ ತಿಳಿದಿರುವುದೇ! ಕೆಲವೇ ವರ್ಷಗಳ ಹಿಂದೆ ಗ್ರೀಸ್ ದೇಶ ಸಾಲದ ಸುಳಿಯಲ್ಲಿ ಸಿಲುಕಿದ್ದಾಗ ಇಯು (ಯುರೋಪಿಯನ್ ಯೂನಿಯನ್), ಇಸಿಬಿ (ಯುರೋಪಿಯನ್ ಸೆಂಟ್ರಲ್ ಬ್ಯಾಂಕ್) ಮತ್ತು ಐಎಂಫ್ (ಇಂಟರ್‌ನ್ಯಾಶನಲ್ ಮಾನೆಟರಿ ಫಂಡ್), ಗ್ರೀಸ್ ದೇಶಕ್ಕೆ ಆರ್ಥಿಕ ಸಹಾಯಹಸ್ತ ಚಾಚಲು ಹಾಕಿದ ನಿರ್ಬಂಧಗಳನ್ನು ನೆನಪಿಸಿಕೊಂಡರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಈ ಸಂಸ್ಥೆಗಳು ಹಾಕಿದ ನಿರ್ಬಂಧಗಳು ಗ್ರೀಕ್ ಪಿಂಚಣಿ ಫಂಡ್‍ಗಳು, ಸಾಮಾಜಿಕ ಕಾರ್ಯಕ್ರಮಗಳ ಮೇಲೆ ಬೀರುತ್ತಿದ್ದ ವ್ಯತಿರಿಕ್ತ ಪರಿಣಾಮಗಳನ್ನು ಅಂದಿನ ಗ್ರೀಕ್ ವಿತ್ತ ಸಚಿವರಾದ ಯಾನಿಸ್ ವೆರುಫಕಿಸ್ ‘ಅಡಲ್ಟ್ಸ್ ಇನ್ ದ ರೂಮ್’ ಎಂಬ ಪುಸ್ತಕದಲ್ಲಿ ನೆನಪಿಸಿಕೊಂಡಿದ್ದರು. ಅದೇ ಹೆಸರಿನಲ್ಲಿ ಅದು ಸಿನೆಮಾ ಕೂಡ ಆಗಿ ಹೆಚ್ಚಿನ ಜನರನ್ನು ತಲುಪಿತ್ತು. ಈ ವಿತ್ತ ಸಂಸ್ಥೆಗಳು ಗ್ರೀಸ್ ಮೇಲೆ ತಮ್ಮ ಹಿಡಿತ ಸಾಧಿಸಿ, ಯಾನಿಸ್ ವೆರುಫಕಿಸ್ ಅವರು ರಾಜೀನಾಮೆ ನೀಡುವಂತೆ ಒತ್ತಡ ಹಾಕಲು ಸಫಲವಾಗಿದ್ದವು.

ಈಗ ಎರಡನೇ ಬಾರಿಗೆ ಆಯ್ಕೆ ಆಗಿರುವ ಜಸಿಂಡಾ ಅರ್ಡನ್ ತಮ್ಮ ವಿಜಯೋತ್ಸವದ ಭಾಷಣದಲ್ಲಿ, ಹಿಂದೆ ಲೇಬರ್ ಪಕ್ಷವನ್ನು ಬೆಂಬಲಿಸದವರೂ ಕೂಡ ಈಗ ಮತ ನೀಡಿರುವುದಕ್ಕೆ ಧನ್ಯವಾದ ಹೇಳಿ ಪ್ರತಿ ನ್ಯೂಜಿಲ್ಯಾಂಡರ್‌ನ ಹಿತ ಕಾಯುವುದಾಗಿ ನುಡಿದಿದ್ದಾರೆ. ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸುವ, ಬಡತನ ಮತ್ತು ಅಸಮಾನತೆ ಸರಿಪಡಿಸುವ (ಈ ಹಿಂದೆ ಶ್ರೀಮಂತರಿಗೆ ಹೆಚ್ಚು ತೆರಿಗೆ ಹಾಕುವ ಪ್ರಸ್ತಾಪ ಮತ್ತು ಒತ್ತಡ ಅವರ ಮೇಲಿತ್ತು), ಮನೆಯಿಲ್ಲದವರಿಗೆ ಸರ್ಕಾರದಿಂದ ಸೂರು ನೀಡುವ, ಬಡ ವ್ಯವಹಾರಗಳಿಗೆ ಬಡ್ಡಿ ರಹಿತ ಸಾಲ ನೀಡುವ ಇತ್ಯಾದಿ ಜನಪರ ಯೋಜನೆಗಳನ್ನು ಈ ಅವಧಿಯಲ್ಲಿ ಇಂಪ್ಲಿಮೆಂಟ್ ಮಾಡುವ ಬಗ್ಗೆ ಘೋಷಿಸಿದ್ದಾರೆ.

ಅವರು ಆಯ್ಕೆಯಾದ ದಿನ ಪ್ರತಿಕ್ರಿಯಿಸಿದ್ದ ನೂಜಿಲ್ಯಾಂಡ್ ನಾಗರಿಕರೊಬ್ಬರು, ತಾವು ಇಲ್ಲಿಯವರೆಗೂ ಬಲಪಂಥೀಯ ಧೋರಣೆಯ ಪಕ್ಷಕ್ಕೇ ಮತ ಚಲಾಯಿಸುತ್ತಿದ್ದಾಗಿಯೂ, ಆದರೆ ಜಸಿಂಡಾ ಅವರು ಕ್ರೈಸ್ತ್‌ಚರ್ಚ್ ನಗರದ ಮಸೀದಿಗಳ (ಬಿಳಿ ಜನಾಂಗೀಯವಾದಿ ಮತ್ತು ತೀವ್ರ ಬಲಪಂಥೀಯ ವ್ಯಕ್ತಿಯೊಬ್ಬ ನಡೆಸಿದ ಈ ಗುಂಡಿನ ದಾಳಿಯಲ್ಲಿ 51 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಈ ಇಸ್ಲಮಾಫೋಬಿಯಾವನ್ನು ಟೀಕಿಸಿದ್ದ ಜಸಿಂಡಾ ಅವರು ಇದು ತಮ್ಮ ದೇಶದ ಕರಾಳ ದಿನ ಎಂದಿದ್ದಲ್ಲದೆ, ಆರೋಪಿಯ ಶೀಘ್ರ ವಿಚಾರಣೆಗೆ ಸರ್ಕಾರ ಕ್ರಮ ಕೈಗೊಂಡಿತ್ತು) ಮೇಲೆ ನಡೆದ ದಾಳಿಯನ್ನು ನಿರ್ವಹಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಾವು ಪಂಥ ಬದಲಾಯಿಸಿದ ಬಗ್ಗೆ ನಿವೇದಿಸಿಕೊಂಡಿದ್ದಾರೆ.

ಇಸ್ಲಮಾಫೋಬಿಯಾ ಸೇರಿದಂತೆ, ಮಾನವೀಯತೆ ಮರೆತಿರುವ ಸೈದ್ಧಾಂತಿಕ ಧ್ರುವೀಕರಣದಿಂದ ಜನರ ಮಧ್ಯೆ ತೀವ್ರ ಒಡಕು ತರುತ್ತಿರುವ ಇಂದಿನ ದಿನಗಳಲ್ಲಿ ಇದಕ್ಕೆ ಪರಿಹಾರ ಸಾಧ್ಯ ಎಂಬಂತೆ ಅತಿ ಪುಟ್ಟ ರಾಷ್ಟ್ರವಾದರೂ (ಸುಮಾರು 50 ಲಕ್ಷ ಜನಸಂಖ್ಯೆ) ನ್ಯೂಜಿಲ್ಯಾಂಡ್ ಭರವಸೆಯಾಗಿ ಕಾಣಿಸಿಕೊಂಡಿದೆ.

ಇವತ್ತು ನಮ್ಮ ಮುಂದೆ ಇರುವ ಇಂತಹ ಸಮಸ್ಯೆಗಳಿಗೆ ಹಲವು ಶತಮಾನಗಳ ಹಿಂದೆ ಶರಣ ಚಳವಳಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿತ್ತು ಎಂಬ ಅಂಶ ನಿಜಕ್ಕೂ ಅಚ್ಚರಿ ಮೂಡಿಸುವಂತದ್ದು. ಅಂದು ಪ್ರಧಾನವಾಗಿ ನೆಲೆಸಿದ್ದ ಜಡ್ಡುಗಟ್ಟಿದ ತಾರತಮ್ಯದ ವೈದಿಕ ವ್ಯವಸ್ಥೆಗೆ ಸೆಡ್ಡುಹೊಡೆದು ಸಮಸಮಾಜದ ಅಡಿಪಾಯ ಹಾಕಿಕೊಟ್ಟಿದ್ದ ಮತ್ತು ಅದೇ ಸಮಯದಲ್ಲಿ ತಮ್ಮ ಎಲ್ಲಾ ಹೊಸ ಮಾನವೀಯ ಪ್ರತಿಪಾದನೆಗಳು ಜನಸಾಮಾನ್ಯರಿಗೆ ತಲುಪಬೇಕೆಂದು ಶಾಸ್ತ್ರೀಯ ಭಾಷೆಯನ್ನು ತಿರಸ್ಕರಿಸಿ ಜನರ ಆಡು ಮಾತುಗಳಲ್ಲಿ ವಚನ ಕಟ್ಟಿ ಜನಪ್ರಿಯವಾಗಿ ಬೆಳೆದ, ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಶ್ರಮ ಮತ್ತು ಕಾಯಕದ ಆಧಾರದಲ್ಲಿ ಜಾತಿ ವ್ಯವಸ್ಥೆಯನ್ನು ತಿರಸ್ಕರಿಸಿದ ಶರಣ ಚಳವಳಿ ಬಿಕ್ಕಟ್ಟಿನ ಪ್ರಸಕ್ತ ಸನ್ನಿವೇಶದಲ್ಲಿ ಕನ್ನಡ ಜನರಿಗೆ, ಭಾರತೀಯರಿಗೆ ಮತ್ತು ಜಗತ್ತಿಗೆ ಮಾದರಿಯಾಗಬಲ್ಲದೇ? ಈ ಸಂಚಿಕೆ ಆ ಚರ್ಚೆಯನ್ನು ಮತ್ತೆ ಎತ್ತಿದೆ.


ನ್ಯಾಯಪಥ ಸಂಪಾದಕೀಯ ವಿಡಿಯೋ ನೋಡಿ: ನ್ಯೂಜಿಲ್ಯಾಂಡ್ ನಲ್ಲಿ ಲೇಬರ್ ಪಕ್ಷದ ಮರು ಆಯ್ಕೆ: ಬದಲಾವಣೆ ಶಕೆಯ ಮುನ್ಸೂಚನೆಯೇ?
  • ಗುರುಪ್ರಸಾದ್ ಡಿ ಎನ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...