ಧರ್ಮಸ್ಥಳ ಸುತ್ತಮುತ್ತ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳನ್ನು ಕುರಿತು ‘ದೂತ’ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಎಐ ಆಧಾರಿತ ವಿಡಿಯೊ ಪ್ರಸಾರ ಮಾಡಿದ್ದ ಯೂಟ್ಯೂಬರ್ ಸಮೀರ್ ಅವರಿಗೆ ಮಂಗಳೂರು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ದೊರೆತಿದೆ.
ಪೊಲೀಸರು ಬಂಧಿಸಬಹುದು ಎಂಬ ಮುನ್ಸೂಚನೆ ಸಿಕ್ಕ ಕೂಡಲೇ ಸಮೀರ್ ತನ್ನ ವಕೀಲರ ಮೂಲಕ ಬೆಳ್ತಂಗಡಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಉಜಿರೆಯಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸುತ್ತಿದ್ದಂತೆ ಸಮೀರ್ಗೆ ಬಂಧನದ ಭೀತಿ ಎದುರಾಗಿತ್ತು. ಇಂದು ಬೆಳಗಿನಿಂದಲೇ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಸಮೀರ್ ಮನೆಯನ್ನು ಪೊಲೀಸರು ಸುತ್ತುವರಿದಿದ್ದರು. ಅವರನ್ನು ಬಂಧಿಸಲು ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆನಂದ್ ಎನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.
ಧರ್ಮಸ್ಥಳ ಕ್ಷೇತ್ರದ ಕುರಿತು ಅವಹೇಳನಕಾರಿ ವಿಡಿಯೊ ಮಾಡಿರುತ್ತಾರೆ, ಕೋಮು ವೈಷಮ್ಯ ಮೂಡಿಸಲು ಪ್ರಯತ್ನಿಸಿದ್ದಾರೆ ಎಂದು ಸಮೀರ್ ವಿರುದ್ಧ ಹಲವಾರು ಪ್ರಕಣಗಳನ್ನು ದಾಖಲಿಸಲಾಗಿತ್ತು.
ಮೂಲತಃ ಬಳ್ಳಾರಿಯವರಾದ ಸಮೀರ್ ಎಂ.ಡಿ, ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ʼದೂತʼ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಮೂಲಕ ಹಲವು ವಿಷಯಗಳ ಕುರಿತು ವಿಡಿಯೋ ನಿರೂಪಿಸಿದ್ದಾರೆ. ಸೌಜನ್ಯಾ ಅತ್ಯಚಾರ ಮತ್ತು ಕೊಲೆ ಪ್ರಕರಣ ಕುರಿತು ಇವರು ಮಾಡಿದ್ದ ಎಐ ವಿಡಿಯೊವನ್ನು ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.
ಇಂದು ಬೆಳಗಿನಿಂದಲೇ ‘ಮುಖ್ಯವಾಹಿನಿ’ ಮಾಧ್ಯಮಗಳಲ್ಲಿ ಸಮೀರ್ ಪರಾರಿಯಾಗಿದ್ದಾರೆ ಎಂಬ ಸುದ್ದಿಗಳು ಪ್ರಕಟವಾಗುತ್ತಿದ್ದವು. ಸಮೀರ್ ಆಪ್ತರು ಸ್ಪಷ್ಟನೆ ನೀಡಿ ವಿಚಾರಣೆಗೆ ಹಾಜರಾಗಲು ಪೊಲೀಸರಿಗೆ ಲಿಖಿತವಾಗಿ ಸಮಾಯಾವಕಾಶವನ್ನು ಕೇಳಿದ್ದರು. 15 ದಿನಗಳ ಕಾಲಾವಕಾಶವನ್ನು ಪೊಲೀಸರು ನೀಡಿದ್ದರು. ಆದರೆ ಇಂದು ಮಧ್ಯಾಹ್ನ ಪೊಲೀಸರು ಏಕಾಏಕಿ ಸಮೀರ್ ಮನೆಗೆ ಸರ್ಚ್ ವಾರೆಂಟ್ ಇಲ್ಲದೆ ತಪಾಸಣೆಗೆ ಆಗಮಿಸಿದ್ದರು. ಸತ್ಯವನ್ನು ಜನರಿಗೆ ಹೇಳಿದವರನ್ನು ಪೊಲೀಸರು ಬೇಟೆಯಾಡುತ್ತಿದ್ದಾರೆ. ಸಮೀರ್ ತಮ್ಮ ವಕೀಲರ ಜೊತೆ ನ್ಯಾಯಾಲಯದಲ್ಲಿದ್ದಾರೆ, ಎಲ್ಲಿಗೂ ಓಡಿ ಹೋಗಿಲ್ಲ ಎಂದು ತಿಳಿಸಿದ್ದರು.
‘ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಲಿ..’; ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ


