Homeಚಳವಳಿಉಡುಗದ ದನಿ ಗುಡುಗಬೇಕಾದ ಕಾಲವಿದು : ಎಚ್.ಎಸ್. ದೊರೆಸ್ವಾಮಿ

ಉಡುಗದ ದನಿ ಗುಡುಗಬೇಕಾದ ಕಾಲವಿದು : ಎಚ್.ಎಸ್. ದೊರೆಸ್ವಾಮಿ

- Advertisement -
- Advertisement -

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರು ನೂರರ ವಯಸ್ಸಿನ ಗಡಿ ದಾಟಿದರೂ ತುಂಬು ಉತ್ಸಾಹ, ಕಳಕಳಿಯಿಂದ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ಯುವಪೀಳಿಗೆಗೆ ಮಾದರಿಯಾಗಿದ್ದಾರೆ. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಪತ್ರಕರ್ತರಾಗಿ, ಸಕ್ರಿಯ ಹೋರಾಟಗಾರರಾಗಿ ಪಾಲ್ಗೊಂಡಿದ್ದ ಅವರು ಈಗಲೂ ಬಡಜನರ ಪರವಾಗಿ ಭೂಮಿ ಮತ್ತು ವಸತಿ ಹಕ್ಕು ಹೋರಾಟದ ಮುಂಚೂಣಿ ವಹಿಸಿದ್ದಾರೆ. ಗೌರಿ ಮೆಮೋರಿಯಲ್ ಟ್ರಸ್ಟ್‍ನ ಅಧ್ಯಕ್ಷರೂ ಹೌದು. ಬೆಂಗಳೂರಿನ ಬಡಾವಣೆಯೊಂದರ ಉದ್ಯಾನವನದ ಸಮಸ್ಯೆಯಿಂದ ಹಿಡಿದು, ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ಭಾರತಕ್ಕಾಗುತ್ತಿರುವ ತಾರತಮ್ಯದವರೆಗೆ ಯಾವುದೂ ಅವರ ‘ಅನ್ಯಾಯದ ವಿರುದ್ಧದ ಹೋರಾಟ’ದ ಪರಿಧಿಯಿಂದ ಹೊರತಲ್ಲ.

1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, 14 ತಿಂಗಳ ಸ್ಥಾನ ಬದ್ಧತೆಯಲ್ಲಿ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿದ್ದೆ. 1944ರ ಏಪ್ರಿಲ್‍ನಲ್ಲಿ ನನ್ನ ಬಿಡುಗಡೆ ಆಯಿತು. ನಾನು ಬಿಡುವಾಗಿದ್ದೆ. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ನನ್ನ ಅಣ್ಣನವರು, ತಮ್ಮ ಇಬ್ಬರು ಹೆಣ್ಣುಮಕ್ಕಳಿಗೆ ವಿಷಮಶೀತ ಜ್ವರ ಬಂದಿರುವುದಾಗಿ ತಿಳಿಸಿ ನನ್ನನ್ನು ಕೂಡಲೇ ಹೊರಟುಬರಲು ಕೋರಿದ್ದರು. ನಾನು ಕೂಡ ಮೈಸೂರಿಗೆ ಹೊರಟೆ. ಆ ಮಕ್ಕಳಲ್ಲಿ ಒಬ್ಬಳಿಗೆ ಖಾಯಿಲೆ ಉಲ್ಬಣಗೊಂಡು ಆಸ್ಪತ್ರೆಗೆ ಸೇರಿಸಿದರೂ ಕೊನೆಯುಸಿರೆಳೆದಳು. ಮನೆಯಲ್ಲಿ ಶೋಕ ಆವರಿಸಿತು. ಈ ಪರಿಸ್ಥಿತಿಯಲ್ಲಿ ನಮ್ಮಣ್ಣನನ್ನು ಬಿಟ್ಟು ಬೆಂಗಳೂರಿಗೆ ಹಿಂದಿರುಗುವುದು ಸರಿಯಲ್ಲವೆಂದು ಭಾವಿಸಿ ಮೈಸೂರಿನಲ್ಲೇ ಸಾಹಿತ್ಯ ಮಂದಿರ ಎಂಬ ಪ್ರಕಾಶನ ಸಂಸ್ಥೆ ಮತ್ತು ಪುಸ್ತಕ ಮಳಿಗೆಯನ್ನು ತೆರೆದೆ.

ಒಂದು ವರ್ಷ ಪೂರೈಸುವುದರಲ್ಲಿ ನನ್ನ ಬೆಂಗಳೂರಿನ ಸ್ನೇಹಿತರೂ, ರಾಜಕೀಯ ಕಾರ್ಯಕರ್ತರೂ, ಪೌರವಾಣಿ ವಾರಪತ್ರಿಕೆಯ ಸಂಪಾದಕರೂ ಆಗಿದ್ದ ರುಮಾಲೆ ಭದ್ರಣ್ಣನವರು ಸಾವನ್ನಪ್ಪಿದ ಸುದ್ದಿ ತಲುಪಿತು. ನಾನು ಬೆಂಗಳೂರಿಗೆ ಹೋಗಿ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡೆ.

ಸಮಾಧಿ ಕಾರ್ಯಕ್ರಮ ಮುಗಿದ ರಾತ್ರಿ ಗೆಳೆಯರೆಲ್ಲ ಸಭೆ ಸೇರಿದೆವು. ಪತ್ರಿಕೆಯ ಜವಾಬ್ದಾರಿಯನ್ನು ಹೊರಲು ಯಾರು ಸಿದ್ಧರಿದ್ದಾರೆಂಬ ಪ್ರಶ್ನೆ ನಮ್ಮ ಮುಂದೆ ಬಂದಿತು. ನನ್ನ ಸ್ನೇಹಿತರನೇಕರಿಗೆ ಹೊರೆ ಹೊರುವ ಸಾಮಥ್ರ್ಯವಿತ್ತು. ಆದರೆ, ಅವರ್ಯಾರೂ ಸಂಪಾದಕರಾಗಲು ಮುಂದೆ ಬರಲಿಲ್ಲ. ನಾನು ವಹಿಸಿಕೊಳ್ಳುವುದಾಗಿ ಹೇಳಿದೆ. ಎಲ್ಲರೂ ಸಮ್ಮತಿ ಸೂಚಿಸಿದರು.

ಮೈಸೂರಿನ ಪುಸ್ತಕದಂಗಡಿ ಖಾಲಿ ಮಾಡಿ ಬೆಂಗಳೂರಿಗೆ ಬಂದುಬಿಟ್ಟೆ. ಪತ್ರಿಕಾ ಕಚೇರಿಯಲ್ಲೇ ಉಳಿಯುವುದು ಊಟಕ್ಕೆ ನನ್ನ ಸ್ನೇಹಿತರಾದ ಎಂ.ಎಸ್. ಸೀತಾರಾಮಯ್ಯನವರ ಮನೆಗೆ ಹೋಗುವುದು ಎಂದು ತೀರ್ಮಾನವಾಯಿತು.

1947ರ ಮೈಸೂರು ಚಲೋ ಸತ್ಯಾಗ್ರಹ ಆರಂಭವಾಗುವ ಸೂಚನೆ ಇದ್ದದ್ದರಿಂದ ನಾನು ಪೌರವಾಣಿ ವಾರಪತ್ರಿಕೆಯನ್ನು ದಿನಪತ್ರಿಕೆಯಾಗಿ ಪರಿವರ್ತಿಸಿ ಅದರ ಸಂಪಾದಕನಾದೆ. ಪತ್ರಿಕೆಯಲ್ಲಿ ಪ್ರತಿದಿನ ತೀಕ್ಷ್ಣವಾದ ಅಗ್ರ ಲೇಖನ ಹಾಗೂ ಪ್ರಧಾನ ಲೇಖನವೊಂದು ಇರುತ್ತಿತ್ತು. ಪತ್ರಿಕೆಯ ಬೆಲೆ ಮೂರು ಕಾಸು (2 ನಯಾಪೈಸೆಗೆ), 4 ಪುಟಗಳ ಪತ್ರಿಕೆ.

ಪತ್ರಿಕೆಯಲ್ಲಿ  PTI, Reuters  ಸುದ್ದಿಗಳಿರುತ್ತಿದ್ದವು. ಚಳವಳಿಯ ದಿನಗಳು ಹತ್ತಿರ ಬರುತ್ತಿದ್ದಂತೆ ಮುಖ್ಯ ಲೇಖನವನ್ನು ಬರೆದುಕೊಡಲು ತಿರುಮಲೆ ತಾತಾಶರ್ಮರನ್ನು ಪ್ರಾರ್ಥಿಸಿದೆ. ಅವರು ಹತ್ತು ಲೇಖನಗಳನ್ನು ಬರೆದರು. ನೇರವಾಗಿ ಮಹಾರಾಜರನ್ನು, ಮಹಾರಾಜರ ಸರ್ಕಾರವನ್ನು ಟೀಕಿಸುವ ಲೇಖನಗಳು ಅವಾಗಿದ್ದವು.

8ನೇ ಲೇಖನ ಪ್ರಕಟವಾದ ಕೂಡಲೇ ಸರ್ಕಾರದ ಚೀಫ್ ಸೆಕ್ರೆಟರಿಯವರಿಂದ ನನಗೊಂದು ನೋಟಿಸ್ ಬಂದಿತು. ’ಇನ್ನು ಮುಂದೆ ಯಾವುದೇ ಅಗ್ರಲೇಖನ ಅಥವಾ ಲೇಖನವನ್ನು ಪ್ರಕಟಿಸುವ ಮೊದಲು ಅದನ್ನು ಚೀಫ್ ಸೆಕ್ರೆಟರಿಯವರಿಗೆ ಕಳಿಸಿ. ಅವರ ಅನುಮತಿ ದೊರೆತ ಲೇಖನಗಳನ್ನು ಮಾತ್ರ ಪತ್ರಿಕೆಯಲ್ಲಿ ಪ್ರಕಟಿಸಬೇಕು’ ಎಂದು ಆ ನೋಟಿಸ್‍ನಲ್ಲಿ ಬರೆಯಲಾಗಿತ್ತು.

ಸರ್ಕಾರದ ಅವಗಾಹನೆಗೆ ಕಳಿಸದೆಯೇ ಉಳಿದ ಎರಡು ಲೇಖನಗಳನ್ನೂ, ಸಂಪಾದಕೀಯಗಳನ್ನು ಪ್ರಕಟಿಸಿ, ’ಸರ್ಕಾರದ ಇಂತಹ ಕಠೋರ ಆಜ್ಞೆಗಳಿಗೆ ಪೌರವಾಣಿ ತಲೆ ಬಾಗುವುದಿಲ್ಲ. ಸರ್ಕಾರದ ಅನುಮತಿಗೆ ಕಳಿಸದೆಯೇ ಈ ಎರಡೂ ದಿನ ಸಂಪಾದಕೀಯ ಮತ್ತು ಲೇಖನಗಳನ್ನು ಪ್ರಕಟಿಸಲಾಗಿದೆ. ಸರ್ಕಾರದ ಈ ಬಗೆಯ ನೋಟಿಸಿಗೆ ಬೇಸತ್ತು ನಾಳೆಯಿಂದ ಪತ್ರಿಕೆಯನ್ನು ಹೊರತರದೇ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ’ ಎಂಬ ಒಂದು ಬಾಕ್ಸ್ ಸುದ್ದಿಯನ್ನು ಪೌರವಾಣಿ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಪತ್ರಿಕೆಯ ಪ್ರಕಟಣೆಯನ್ನು ನಿಲ್ಲಿಸಲಾಯಿತು.

ಸರ್ಕಾರ ಪೌರವಾಣಿಯನ್ನು ಮುಟ್ಟುಗೋಲು ಹಾಕಿಕೊಂಡು ಕಚೇರಿಗೆ ಬೀಗಮುದ್ರೆ ಹಾಕಿಸಿತು. ಇನ್ನು ಸಂಪಾದಕರನ್ನು ಬಂಧಿಸಿ ನ್ಯಾಯಾಲಯದ ಮುಂದೆ ನಿಲ್ಲಿಸುವುದೇ ಬಾಕಿ ಉಳಿದಿರುವುದು ಎಂಬುದನ್ನು ಅರಿತಿದ್ದ ನಾನು ಬೇರೆ ಪ್ರಾಂತಕ್ಕೆ ಹೋಗಿ ಪತ್ರಿಕೆ ಹೊರತಂದು ಮುಂಬರುವ ಮೈಸೂರು ಚಲೋ ಸತ್ಯಾಗ್ರಹಕ್ಕೆ ಬೆಂಬಲವಾಗಿ ನಿಲ್ಲುವುದೇ ಸೈ ಎಂದು ನಿರ್ಧರಿಸಿ ಮಿತ್ರ ಕೆ.ಆರ್. ಶ್ರೀಧರಮೂರ್ತಿಯವರನ್ನು ಕರೆದುಕೊಂಡು ಆಂಧ್ರದ ಹಿಂದೂಪುರಕ್ಕೆ ಹೋಗಿ ಅಲ್ಲಿಂದ ಪೌರವಾಣಿ ಪತ್ರಿಕೆ ಹೊರತರಲು ನಿಶ್ಚಯಿಸಿದೆ.

ಹಿಂದೂಪುರದಲ್ಲಿ ಸಿರಾ ಕಡೆಯವರಾದ ಲಿಂಗಣ್ಣ ಎಂಬುವ ಗಣ್ಯರಿದ್ದರು. ಅವರ ಸಹಾಯ ಪಡೆದು ಹಿಂದೂಪುರದ ಸುದರ್ಶನಾ ಮುದ್ರಣಾಲಯದಲ್ಲಿ ಪೌರವಾಣಿ ಅಚ್ಚು ಹಾಕಿಸುವುದೆಂದು ನಿರ್ಧರಿಸಲಾಯಿತು. ಅನಂತಪುರಕ್ಕೆ ಹೋಗಿ ಅಲ್ಲಿಯ ಕಲೆಕ್ಟರ್ ಸಮ್ಮುಖದಲ್ಲಿ ಪೌರವಾಣಿ ಪತ್ರಿಕೆಯ ಸಂಪಾದಕರಾಗಿ ನೋಂದಾಯಿಸಿಕೊಂಡೆ. ಬೆಂಗಳೂರಿನಿಂದ ಮೈಸೂರು ಸಂಸ್ಥಾನದ ಇತರ ಕಡೆಗಳಿಂದ ಸುದ್ದಿ ತರಿಸಿಕೊಂಡು `ಮೈಸೂರು ಚಲೋ’ ಸತ್ಯಾಗ್ರಹಕ್ಕೆ ಪೂರಕವಾಗಿ ಪೌರವಾಣಿಯನ್ನು ನಡೆಸಲಾಯಿತು. ಪ್ರತಿದಿನವೂ ಒಬ್ಬ ಸತ್ಯಾಗ್ರಹಿಯ ಮೂಲಕ ಪತ್ರಿಕೆ ಬಂಡಲನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಆತನು ಪೊಲೀಸರ ಬಂಧನಕ್ಕೆ ತಯಾರಾಗಿಯೇ ಹೋಗಬೇಕಾಗಿತ್ತು.

ನನ್ನ ನೆರವಿಗೆ ಬೆಂಗಳೂರಿನಿಂದ ರುಮಾಲೆ ಚೆನ್ನಬಸವಯ್ಯನವರು, ತಿರುಮಲೆ ತೀರಂಗಾಚಾರ್ಯರು, ಮೈಸೂರಿನ ಎಚ್.ವಿ. ಸುಬ್ಬರಾಮಯ್ಯ, ಮಂಗಳೂರಿನ ಹಿಂದಿ ಪ್ರಚಾರಕ ಕೆ.ಎಲ್. ಶರ್ಮಾ, ಸೂರ್ಯನಾರಾಯಣ, ಕೃಷ್ಣಮೂರ್ತಿ ಮುಂತಾದವರಿದ್ದರು. 38 ದಿನ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿ, ಆ ನಂತರ ಬೆಂಗಳೂರಿಗೆ ಹಿಂತಿರುಗಿದೆ.

ಇದನ್ನೆಲ್ಲ ಇಲ್ಲಿ ಹೇಳಲು ಒಂದು ಕಾರಣವಿದೆ. ಕಾಲದ ಓಘದಲ್ಲಿ ಆಗಾಗ್ಗೆ ಇಂಥಾ ಕೆಟ್ಟ ಘಟ್ಟಗಳು ಎದುರಾಗುತ್ತಲೇ ಇರುತ್ತವೆ. ಇಂಥಾ ಘಟ್ಟಗಳು ಹೊಸದೂ ಅಲ್ಲ, ಅನಂತವಾದವೂ ಅಲ್ಲ. ಅವುಗಳಿಗೆ ದಿಟ್ಟವಾಗಿ ಉತ್ತರಿಸುವ ಪಣ ತೊಟ್ಟು ನಿಲ್ಲುವ ಗಟ್ಟಿ ಧೈರ್ಯ ಮಾಡುವುದೇ ನಿಜವಾದ ದೇಶಪ್ರೇಮಿಯ ಕಾಯಕ. ಗಾಂಧೀಜಿ ಮಾಡಿದ್ದೂ ಇದನ್ನೇ. ಈಗಲೂ ಅಂತಹುದೇ ಕಾಲ ಮರುಕಳಿಸಿದೆ. ಅಂದರೆ, ನಾವೀಗ ನಮ್ಮ ದೇಶಪ್ರೇಮವನ್ನು ಪಣಕ್ಕೊಡ್ಡುವ ಸಮಯ ಎದುರಾಗಿದೆ. ದೇಶಪ್ರೇಮಿಗಳ ದನಿ ಎಂದಿಗೂ ಉಡುಗುವಂತದ್ದಲ್ಲ, ಅದು ಗುಡುಗುವಂತದ್ದು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಕಲಿ ಆಪಲ್ ಪರಿಕರಗಳ ದಂಧೆ ಭೇದಿಸಿದ ಮುಂಬೈ ಪೊಲೀಸರು; ₹16.33 ಲಕ್ಷ ಮೌಲ್ಯದ ಸರಕುಗಳ ವಶ; ಆರು ಜನರ ವಿರುದ್ಧ ಪ್ರಕರಣ 

ಮುಂಬೈ: ನಕಲಿ ಬ್ರಾಂಡ್ ಸರಕುಗಳ ಮಾರಾಟದ ಮೇಲೆ ಪ್ರಮುಖ ದಾಳಿ ನಡೆಸಿರುವ ಮುಂಬೈ ಪೊಲೀಸರು, ಘಾಟ್ಕೋಪರ್ ಪೂರ್ವದಲ್ಲಿ ನಕಲಿ ಆಪಲ್ ಪರಿಕರಗಳನ್ನು ಮಾರಾಟ ಮಾಡುತ್ತಿದ್ದ ಸಂಘಟಿತ ದಂಧೆಯನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ 16.33...

ಇರಾನ್ ನಮ್ಮ ದೀರ್ಘಕಾಲೀನ ಮಿತ್ರ ರಾಷ್ಟ್ರ; ವಿಶ್ವಾಸಾರ್ಹ ಪಾಲುದಾರರೊಂದಿಗೆ ನಿಲ್ಲಲು ವಿಫಲವಾದರೆ ಭಾರತಕ್ಕೆ ಭಾರಿ ನಷ್ಟ: ರಾಜ್ ಠಾಕ್ರೆ

ಸೂಕ್ತ ಸಮಯದಲ್ಲಿ ಕೇಂದ್ರ ಸರ್ಕಾರ ಇರಾನ್‌ಗೆ ಬೆಂಬಲ ನೀಡದಿರುವುದನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.​ ಈ ಕುರಿತು ಗುರುವಾರ (ಮಾ.19) ಮಾತನಾಡಿರುವ ಅವರು, "ಇರಾನ್ ಭಾರತದ ದೀರ್ಘಕಾಲೀನ ಮಿತ್ರ...

ಕೇರಳ: 2026 ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧ; ಹಾಲಿ ಸಂಸದರು, ಲೈಂಗಿಕ ಪ್ರಕರಣದ ಆರೋಪಿಗಳಿಗಿಲ್ಲ ಸ್ಥಾನ

ತಿರುವನಂತಪುರಂ: ಬಹಳ ದಿನಗಳ ನಂತರ, ಏಪ್ರಿಲ್ 9 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಕೇರಳದ ಉಳಿದ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.  ಕಣ್ಣೂರು ಕಾರ್ಪೊರೇಷನ್‌ನ ಮಾಜಿ ಮೇಯರ್ ಟಿ.ಒ. ಮೋಹನನ್ ಅವರನ್ನು ಕಣ್ಣೂರಿನಲ್ಲಿ...

‘ನೀವು ಶಂಕಿತ’ : ಮುಹಮ್ಮದ್ ದೀಪಕ್‌ಗೆ ಉತ್ತರಾಖಂಡ ಹೈಕೋರ್ಟ್ ತರಾಟೆ!

ಇತ್ತೀಚೆಗೆ ಹಿಂದುತ್ವವಾದಿಗಳ ದಾಳಿಯಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿ ಶ್ಲಾಘನೆಗೆ ಪಾತ್ರರಾದ ಮುಹಮ್ಮದ್ ದೀಪಕ್ (ದೀಪಕ್ ಕುಮಾರ್) ಅವರನ್ನು ಉತ್ತರಾಖಂಡ ಹೈಕೋರ್ಟ್ ಗುರುವಾರ (ಮಾ.19) ತೀವ್ರ ತರಾಟೆಗೆ ತೆಗೆದುಕೊಂಡಿದೆ ಎಂದು barandbench.com ವರದಿ...

ಎಂಟು ವರ್ಷ ಜೈಲಿನಲ್ಲಿ ಕಳೆದ ಬಳಿಕ ಯುಎಪಿಎ ಅಡಿ ಬಂಧಿತ ಇಬ್ಬರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಏಳು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದ ನಂತರ, ದೆಹಲಿ ನ್ಯಾಯಾಲಯವು ಗುರುವಾರ (ಮಾರ್ಚ್ 19, 2026) ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲ್ಪಟ್ಟ ಇಬ್ಬರು ವ್ಯಕ್ತಿಗಳನ್ನು ಖುಲಾಸೆಗೊಳಿಸಿದೆ...

ಹಾವಿನ ವಿಷ ಪ್ರಕರಣ : ಎಲ್ವಿಶ್ ಯಾದವ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧದ ಹಾವಿನ ವಿಷ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಮತ್ತು ಕ್ರಿಮಿನಲ್ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಗುರುವಾರ (ಮಾ.19) ರದ್ದುಗೊಳಿಸಿದೆ.  ವನ್ಯಜೀವಿ (ರಕ್ಷಣೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲು ಅಧಿಕೃತ ವ್ಯಕ್ತಿಯಿಂದ ದೂರು...

ದೆಹಲಿಯ ಉತ್ತಮ್ ನಗರದಲ್ಲಿ ಮುಸ್ಲಿಮರಿಗೆ ಬೆದರಿಕೆ; ಅಮಿತ್ ಶಾಗೆ ಪತ್ರ ಬರೆದ ವಿಪಕ್ಷ ಸಂಸದರು

ರಾಷ್ಟ್ರ ರಾಜಧಾನಿಯ ಉತ್ತಮ್ ನಗರದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಿಂದುತ್ವ ಗುಂಪುಗಳು ಮಾಡುತ್ತಿರುವ ಬೆದರಿಕೆಗಳ ಬಗ್ಗೆ ತುರ್ತು ಹಸ್ತಕ್ಷೇಪವನ್ನು ಕೋರಿ ಹಲವಾರು ವಿರೋಧ ಪಕ್ಷದ ಸದಸ್ಯರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ...

‘ಇರಾನ್ ಕತಾರ್ ಮೇಲೆ ಮತ್ತೊಮ್ಮೆ ದಾಳಿ ಮಾಡಿದರೆ, ಸೌತ್ ಪಾರ್ಸ್ ಅನಿಲ ಕ್ಷೇತ್ರವನ್ನು ಸ್ಪೋಟಿಸುತ್ತೇವೆ’; ಟ್ರಂಪ್ ಬೆದರಿಕೆ

ಇರಾನ್ ಕತಾರ್‌ನ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡರೆ, ಅಮೆರಿಕ ”ಸೌತ್ ಪಾರ್ಸ್ ಅನಿಲ ಕ್ಷೇತ್ರವನ್ನು ಬೃಹತ್ ಪ್ರಮಾಣದಲ್ಲಿ ಸ್ಫೋಟಿಸುತ್ತದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ರಾಜ್ಯಸಭೆಯಲ್ಲಿ ಎಚ್ಚರಿಸಿದ್ದಾರೆ. ಇರಾನ್‌ನ ಸೌತ್ ಪಾರ್ಸ್ ಗ್ಯಾಸ್...

ಮುಸ್ಲಿಂ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿಕೊಂಡ ಓಲಾ ಚಾಲಕ; ‘ಇಸ್ಲಾಮೋಫೋಬಿಕ್’ ಕುರಿತು ಆತಂಕ ವ್ಯಕ್ತಪಡಿಸಿದ ವಕೀಲ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಓಲಾ ಕ್ಯಾಬ್ ಪ್ರಯಾಣದ ಸಂದರ್ಭದಲ್ಲಿ ಚಾಲಕನಿಂದ ನನಗೆ ಬೆದರಿಕೆ ಮತ್ತು ಇಸ್ಲಾಮೋಫೋಬಿಕ್ ಹೇಳಿಕೆಗಳು ಬಂದಿವೆ ಎಂದು ಸುಪ್ರೀಂ ಕೋರ್ಟ್ ವಕೀಲರೊಬ್ಬರು ಆರೋಪಿಸಿದ್ದಾರೆ. ಈ ಘಟನೆಯು, ಪ್ರಯಾಣಿಕರ ಸುರಕ್ಷತೆ ಮತ್ತು...

ಬೆಳ್ತಂಗಡಿ | ಮುಸ್ಲಿಂ ಬಾಲಕನ ಮೇಲೆ ಗುಂಪು ಹಲ್ಲೆ ಆರೋಪ; ಬಜರಂಗದಳದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ ಮುಸ್ಲಿಂ ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಅಪಹರಿಸಿ, ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಡಿ...