Homeಅಂಕಣಗಳುಗೌರಿ ಆಶಯಗಳ ಜೊತೆಗೆ.....

ಗೌರಿ ಆಶಯಗಳ ಜೊತೆಗೆ…..

- Advertisement -
- Advertisement -

ಬಂಧುಗಳೇ,

ಗೌರಿ ಲಂಕೇಶ್‌ರ ಹತ್ಯೆ ಮಾಡುವ ಮೂಲಕ ತಮ್ಮ ವಿರುದ್ಧದ ಗಟ್ಟಿದನಿಯನ್ನು ಇಲ್ಲವಾಗಿಸುವುದು ಆ ಸಂಚುಕೂಟದ ಲೆಕ್ಕಾಚಾರವಾಗಿತ್ತು. ಆದರೆ ಈ ನಾಡಿನ ಜನತೆ ‘ನಾನೂ ಗೌರಿ! ನಾವೆಲ್ಲಾ ಗೌರಿ!!’ ಎಂದು ಒಕ್ಕೊರಲಿನಿಂದ ಕೂಗಿ ಹೇಳಿ ಈ ಸಂಚುಕೂಟಕ್ಕೆ ಬೇರೆಯದೇ ಸಂದೇಶವನ್ನು ರವಾನಿಸಿದ್ದಾರೆ. ”ವ್ಯಕ್ತಿಗಳಿಗೆ ಗುಂಡಿಕ್ಕಬಹುದೇ ಹೊರತು ವಿಚಾರಗಳಿಗೆ ಗುಂಡಿಕ್ಕಲು ನಿಮ್ಮಿಂದ ಎಂದಿಗೂ ಸಾಧ್ಯವಿಲ್ಲ” ಎಂದು ಸಾರಿ ಹೇಳಿದ್ದಾರೆ. ‘ಒಬ್ಬ ಗೌರಿಯ ವಿಚಾರವನ್ನು ಸಾವಿರಾರು ಗೌರಿಯರಾಗಿ ನಾವು ಮುಂದುವರೆಸುತ್ತೇವೆ’ ಎಂಬ ಪಣ ತೊಟ್ಟಿದ್ದಾರೆ.

ಇಂಥ ಒಂದು ಸಾಮೂಹಿಕ ದೃಢ ಸಂಕಲ್ಪದ ಫಲವಾಗಿ ‘ನಾನು ಗೌರಿ’ ಪತ್ರಿಕೆ ಆರಂಭವಾಗಿದೆ. ಪತ್ರಿಕೆಯ ಆರಂಭದೊಂದಿಗೆ ನಮ್ಮ ಗೌರಿ ಲಂಕೇಶ್ ಮರುಹುಟ್ಟು ಪಡೆದಿದ್ದಾರೆ. ಗೌರಿ ಇಲ್ಲದ ಈ ಸಂಕಟಮಯ ಸನ್ನಿವೇಶದಲ್ಲಿ ಗೌರಿ ಪತ್ರಿಕೆಯನ್ನು ಹೊರತರಲು ಕೈಜೋಡಿಸಿದ ಎಲ್ಲರಿಗೂ ‘ಗೌರಿ ಮೀಡಿಯಾ’ ತಂಡದ ಹೃದಯಪೂರ್ವಕ ಕೃತಜ್ಞತೆಗಳು.

ಲಂಕೇಶ್‌ರು ಹುಟ್ಟುಹಾಕಿದ ಜನಪರ, ನಿರ್ಭೀತ ಪತ್ರಿಕೋದ್ಯಮದ ಮಾದರಿಯನ್ನು ಮುಂದುವರೆಸಿದ ಗೌರಿ ಲಂಕೇಶ್ ಆಕ್ಟಿವಿಸ್ಟ್ ಆಗಿ, ಪತ್ರಕರ್ತೆಯಾಗಿ ಹಾಕಿಕೊಟ್ಟ ಮಾದರಿ ನಮಗೆ ಸದಾ ಸ್ಫೂರ್ತಿ. ಈ ಎರಡೂ ಲೆಗಸಿಗಳನ್ನು ಮುಂದುವರೆಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಜೊತೆಗೆ ಈ ಕಾಲಘಟ್ಟದ ಹೊಸ ಸಂಕೀರ್ಣತೆಗಳಿಗೆ ಮುಖಾಮುಖಿಯಾಗಬೇಕಿರುವ ಸವಾಲು ನಮ್ಮ ಮುಂದಿದೆಯೆಂಬುದನ್ನೂ ಅರಿತು ಮುಂದಡಿ ಇಡುತ್ತಿದ್ದೇವೆ.

ಕಲ್ಬುರ್ಗಿ ಹತ್ಯೆ ಖಂಡಿಸಿ ಗೌರಿ ಹಾಗೂ ಇನ್ನಿತರೆ ಪ್ರಗತಿಪರರ ಪ್ರತಿಭಟನೆ

ಇಂದು ನಮ್ಮ ಪ್ರಜಾತಂತ್ರ ಬಿಕ್ಕಟ್ಟಿನಲ್ಲಿದೆ. ನಮ್ಮ ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಬುನಾದಿಯನ್ನೇ ಅಲುಗಾಡಿಸುವ ಮಟ್ಟಕ್ಕೆ ಇಂದು ಫ್ಯಾಸಿಸ್ಟ್ ಶಕ್ತಿಗಳು ಬೆಳೆದು ನಿಂತಿವೆ. ಸ್ವತಂತ್ರ, ನಿರ್ಭೀತ ಪತ್ರಿಕೆಗಳ ಹಾಗೂ ಪತ್ರಕರ್ತರ ದನಿ ಅಡಗಿಸಲು ಈ ಹಿಟ್ಲರ್‌ಶಾಹಿಗಳು ದೇಶಾದ್ಯಂತ ಸೃಷ್ಟಿಸುತ್ತಿರುವ ಭೀಭತ್ಸಕ್ಕೆ ಗೌರಿಯವರ ಹತ್ಯೆಯೇ ಸಾಕ್ಷಿ. ದೀನ ದಲಿತರ, ದುರ್ಬಲರ ದನಿಯಾಗಬೇಕಿದ್ದ ಮಾಧ್ಯಮ ಕ್ಷೇತ್ರವನ್ನು ಇಡಿಯಾಗಿ ಕಾರ್ಪೊರೇಟ್ ಶಕ್ತಿಗಳು ಆವರಿಸಿಕೊಳ್ಳುತ್ತಿವೆ. ಸಾಮಾಜಿಕ ಮಾಧ್ಯಮದಲ್ಲೂ ಫ್ಯಾಸಿಸ್ಟ್‌ಗಳದೇ ಕಾರುಬಾರು.

ಹಿಟ್ಲರ್‌ಶಾಹಿಗಳು ಸೃಷ್ಟಿಸಿರುವ ಇಂಥ ವಿಷಮ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸದೆ ಹೋದರೆ ಈ ದೇಶದ ಪ್ರಜಾತಂತ್ರದ ಅಸ್ತಿತ್ವಕ್ಕೇ ಸಂಚಕಾರ ಒದಗುವ ಅಪಾಯವಿದೆ. ಈ ಕಾಲದ ಕರೆಗೆ ಓಗೊಡಬೇಕಾದ್ದು ಜನಪರ ಪತ್ರಿಕೆಯೊಂದರ ಆದ್ಯ ಕರ್ತವ್ಯ. ‘ನಾನು ಗೌರಿ’ ಪತ್ರಿಕೆ ಈ ಕರ್ತವ್ಯವನ್ನು ನಿರ್ವಹಿಸಲು ಬದ್ಧವಾಗಿದೆ. ಹಾಗೆಯೇ ಗದ್ದುಗೆಯಲ್ಲಿರುವವರ ಜನವಿರೋಧಿತನವನ್ನು ಎದುರಿಸಿ ನಿರಂತರ ವಿರೋಧ ಪಕ್ಷವಾಗಿ ನಿಲ್ಲುವ ಆಶಯ ನಮ್ಮದು. ಯಾವುದೇ ರಾಜಕೀಯ ಪಕ್ಷದ, ರಾಜಕಾರಣಿಗಳ ಮರ್ಜಿಗೆ ಒಳಗಾಗದೆ ಅಥವ ಜಾಹಿರಾತುಗಳ ಹಂಗಿಗೆ ಸಿಲುಕದೆ ಪತ್ರಿಕಾ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ‘ನಾನು ಗೌರಿ’ ಬದ್ಧವಾಗಿರುತ್ತದೆ.

ಪತ್ರಿಕೆಯ ಸ್ವಭಾವ ಮತ್ತು ಗುಣಮಟ್ಟಗಳನ್ನು ಉತ್ತಮಪಡಿಸುವ ನಿರಂತರ ಪ್ರಕ್ರಿಯೆಯ ಭಾಗವಾಗಿ ಹೊಸದಾರಿಯಲ್ಲಿ ಸಾಗುತ್ತೇವೆ. ಇದರ ಭಾಗವಾಗಿ ಹೊಸ ತಲೆಮಾರಿನ ಬರಹಗಾರರನ್ನು ಒಳಗೊಳ್ಳುವುದು ಮಾತ್ರವಲ್ಲದೆ, ವಿವಿಧ ಜನಪರ ಚಳವಳಿಗಳ ನಮ್ಮ ನಡುವಿನ ಭಿನ್ನ ವಿಚಾರ ಧಾರೆಗಳ ನಡುವೆ ರಚನಾತ್ಮಕ ಸಂವಾದಕ್ಕೆ ‘ಪತ್ರಿಕೆ’ ವೇದಿಕೆಯಾಗಲಿದೆ. ವರ್ತಮಾನಕ್ಕೆ ಸಂವಾದಿಯಾಗಿ ಬರಹದಲ್ಲಿ ತೊಡಗಿಸಿಕೊಂಡಿರುವ ಹಲವು ಗಣ್ಯರ ಅಂಕಣಗಳೂ ಇರುತ್ತವೆ. ದಿಕ್ಕೆಟ್ಟ ರಾಜಕಾರಣ, ಆರ್ಥಿಕ ಕ್ಷೇತ್ರದ ಕಾರ್ಪೊರೇಟ್ ಹಿಡಿತ, ಸಾಮಾಜಿಕ-ಸಾಂಸ್ಕೃತಿಕ ಸಮಸ್ಯೆಗಳು, ಸಾಹಿತ್ಯ, ಸಿನಿಮಾ, ವಿಮರ್ಶೆ ಇತ್ಯಾದಿ ಹತ್ತು ಹಲವು ಬಗೆಯ ಬರಹಗಳನ್ನು ಪತ್ರಿಕೆ ಒಳಗೊಳ್ಳಲಿದೆ. ಕನ್ನಡದ ಜಾಣ, ಜಾಣೆಯರು ಇಷ್ಟಪಡುವ ರಂಜನೆ, ಬೋಧನೆ, ಪ್ರಚೋದನೆಗೆ ಪೂರಕವಾದ ಬರಹಗಳೂ ಇರುತ್ತವೆ.

ಗೌರಿ ಹತ್ಯೆಯನ್ನು ಖಂಡಿಸಿ, ಈ ಹಿಂದೆ ಗೌರಿ ಪ್ರತಿಭಟಿಸಿದ್ದ ಜಾಗದಲ್ಲೇ ಪ್ರಗತಿಪರರ ಪ್ರತಿಭಟನೆ!

ಗೌರಿ ಲಂಕೇಶ್‌ರ ಸಹೋದ್ಯೋಗಿಗಳಾಗಿದ್ದ ಬಹುತೇಕ ಲೇಖಕ, ಲೇಖಕಿಯರು ಹಾಗೂ ಇಡೀ ಕಚೇರಿ ಸಿಬ್ಬಂದಿ ಈ ಹೊಸ ಪ್ರಯತ್ನದಲ್ಲಿ ಹೃತ್ಪೂರ್ವಕವಾಗಿ ತೊಡಗಿಸಿಕೊಂಡಿರುವುದು ನಮ್ಮ ಶಕ್ತಿಯನ್ನು ಇಮ್ಮಡಿಸಿದೆ. ಎಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ ‘ನಾನು ಗೌರಿ’ ಪತ್ರಿಕೆ ಯಾರೊಬ್ಬರ ಖಾಸಗಿ ಸ್ವತ್ತಲ್ಲ. ಗೌರಿಯವರ ಆಶಯದೊಂದಿಗೆ ಏಕೀಭವಿಸುವ ಲಕ್ಷಾಂತರ ಜನರು ಪತ್ರಿಕೆ ಪ್ರಾರಂಭಿಸುವ ಪ್ರಕ್ರಿಯೆಯಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಹಾಗೆ ಹೇಳಬೇಕೆಂದರೆ ಈ ಪತ್ರಿಕೆ ಗೌರಿ ಆಶಯವನ್ನು ಪ್ರತಿನಿಧಿಸುವ ಎಲ್ಲರಿಗೂ ಸೇರಿದ್ದು.

ಈ ಡಿಜಿಟಲ್ ಮಾಧ್ಯಮದ ಯುಗದಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೆಗಳು ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಅದೆಷ್ಟೋ ಹಿರಿಯರು, ಹಿತೈಷಿಗಳು ಕಿವಿ ಮಾತು ಹೇಳಿದ್ದಾರೆ. ಇದು ಸುಗಮವಾದ ಹಾದಿಯಲ್ಲ ಎಂಬುದು ನಿಜ. ಆದರೆ ನಾಡಿನಾದ್ಯಂತ ‘ಪತ್ರಿಕೆ’ಗಾಗಿ ಆಗ್ರಹಿಸುತ್ತಿರುವವರ ಸಂಖ್ಯೆಯೂ ದೊಡ್ಡದಿದೆ ಎಂಬುದೂ ನಿಜ. ಆದರೆ ಗೌರಿ ಪತ್ರಿಕೆಯನ್ನು ಮುಂದುವರೆಸುವುದು ಭಾವನಾತ್ಮಕ ವಿಷಯ ಎಂಬುದಕ್ಕಿಂತಲೂ ಹೆಚ್ಚಾಗಿ ನಮ್ಮ ಬದ್ಧತೆಗೆ ಸಂಬಂಧಿಸಿದ್ದು. ನಿಮ್ಮಲ್ಲರ ಬೆಂಬಲ, ಪ್ರೋತ್ಸಾಹಗಳ ಬಲದಿಂದ ಪತ್ರಿಕೆ ನಡೆಸುವ ಸಂಕಷ್ಟವನ್ನು ದಾಟಬಹುದೆಂಬ ವಿಶ್ವಾಸ ನಮ್ಮದು.

ಪ್ರತಿರೋಧ ಸಮಾವೇಶದಲ್ಲಿ ಗೌರಿ ಹತ್ಯಗೆ ಮಿಡಿದ ಜನಸಾಗರ

ನಮ್ಮೆಲ್ಲರ ಹೃದಯದಾಳದಲ್ಲಿ ಮಡುಗಟ್ಟಿದ ನೋವು, ಆಕ್ರೋಶಗಳು ನಮ್ಮ ಈ ಬದ್ಧತೆಯನ್ನು ಗಟ್ಟಿಗೊಳಿಸಿ, ಪತ್ರಿಕೆಯ ಮರುಹುಟ್ಟಿಗೆ ಭದ್ರ ಬುನಾದಿ ಹಾಕಿಕೊಟ್ಟಿವೆ. ಈ ಸವಾಲಿನ ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸದಿಂದ ನಮ್ಮ ತಂಡ ಕಾರ್ಯೋನ್ಮುಖವಾಗಿದೆ. ಹಾಗೆಂದು ಸಮಸ್ಯೆಗಳೇ ಇರುವುದಿಲ್ಲ, ತಪ್ಪುಗಳೇ ಆಗುವುದಿಲ್ಲ ಎಂದರ್ಥವಲ್ಲ. ನಾವು ಎಡವಿದಾಗ ನೀವು ನಮ್ಮ ಕೈಹಿಡಿಯುತ್ತೀರಿ, ತಪ್ಪು ಮಾಡಿದಾಗ ಕಿವಿ ಹಿಂಡುತ್ತೀರಿ, ಪತ್ರಿಕೆಯ ನೋವು-ನಲಿವುಗಳಲ್ಲಿ ನಮ್ಮೊಂದಿಗಿರುತ್ತೀರಿ ಎಂಬ ತುಂಬು ವಿಶ್ವಾಸ ನಮ್ಮದು.

ಕೊನೆಯದಾಗಿ, ಈಜಿಪ್ಟ್ ಬಂಡಾಯದ ಸಂದರ್ಭದಲ್ಲಿ ಹುಟ್ಟಿಕೊಂಡ ಒಂದು ಮಾತು ನೆನಪಿಸುತ್ತೇನೆ. “The power of the people is stronger than the people in power”. ಅಂದರೆ ಅಧಿಕಾರದಲ್ಲಿರುವವರ ಬಲಕ್ಕಿಂತ ಜನಶಕ್ತಿಯ ಬಲ ಹೆಚ್ಚು ಬಲಿಷ್ಠವಾದುದು. ಅಂಥಾ ಜನಶಕ್ತಿಯ ಬಲವನ್ನು ನಿರೂಪಿಸಲು ನಾವೆಲ್ಲರೂ ಒಗ್ಗೂಡೋಣ. ಗೆಲುವಿನ ಹಾದಿ ನಮ್ಮದು.
ನಾನು ಗೌರಿ! ನಾವೆಲ್ಲಾ ಗೌರಿ!!

ಗೌರಿ ಮೀಡಿಯಾ ಟ್ರಸ್ಟ್ ಪರವಾಗಿ
ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...