Homeರಾಜಕೀಯಜಯಮಾಲ ಮೇಡಂಗೆ ಮಂತ್ರಿಗಿರಿ ಒಲಿದ ಮರ್ಮವೇನು?

ಜಯಮಾಲ ಮೇಡಂಗೆ ಮಂತ್ರಿಗಿರಿ ಒಲಿದ ಮರ್ಮವೇನು?

- Advertisement -
- Advertisement -

ಸಿಕ್ಕಾಪಟ್ಟೆ ಸರ್ಕಸ್ ತರುವಾಯ ಸಮ್ಮಿಶ್ರ ಸರ್ಕಾರದ ಅರೆಬೆಂದ ಸಚಿವ ಸಂಪುಟ ಅಣಿಯಾಗಿದೆ. ಸಚಿವಗಿರಿ ಸಿಗದೆ ಬಂಡಾಯದ ಬಾವುಟ ಹಾರಾಡಿಸಿಕೊಂಡು ದಿಲ್ಲಿಗೂ, ಬೆಂಗ್ಳೂರಿಗೂ ಅಲೆದಾಡಿದ ಪುಣ್ಯಾತ್ಮರೂ ದಿನದಿಂದ ದಿನಕ್ಕೆ ತಣ್ಣಗಾಗುತ್ತಿದ್ದಾರೆ. ಇನ್ನು ಸಿಕ್ಕ ಖಾತೆಗಳ ಬಗ್ಗೆ ಕ್ಯಾತೆ ತೆಗೆದವರೂ, ಪಾಲಿಗೆ ಬಂದ ಪಂಚಾಮೃತದ ಮುಂದೆ ಚಕ್ಕಮಕ್ಕಳ ಹಾಕಿ ಕೂತು, ಕೈ-ಬಾಯಿ ಅಣಿಯಾಗಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಕುಮಾರಣ್ಣನ ಸಂಪುಟದ ರೈಲು ನಿಧಾನಕ್ಕೆ ಹಳಿಗಳಿಗೆ ಕುದುರಿಕೊಳ್ಳಲು ಶುರುವಾಗಿದೆ. ಒಂದು ಸರ್ಕಾರ ಅಂತ ರಚನೆಯಾದಾಗ, ಅದರಲ್ಲೂ ಬಣ್ಣಬಣ್ಣದ ಕೌದಿಯಂತಹ ಸಮ್ಮಿಶ್ರ ಸರ್ಕಾರ ಅಂದಮೇಲೆ ಇಂತದ್ದೆಲ್ಲ ಮಾಮೂಲಿ. ಈ ಸಲದ ಸಂಪುಟ ಕಸರತ್ತಿನಲ್ಲಿ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಬಸವರಾಜ್ ಹೊರಟ್ಟಿಯಂತಹ ಘಟಾನುಘಟಿಗಳಿಗೆ ಮಂತ್ರಿಗಿರಿ ಮಿಸ್ ಆಗಿರೋದು ಎಷ್ಟು ಶಾಕ್‍ನ ಸಂಗತಿಯೋ, ಗಿರಿಕನ್ಯೆ ಜಯಮಾಲಾ ಮೇಡಂಗೆ ಮಂತ್ರಿಗಿರಿ ಸಿಕ್ಕಿರೋದೂ ಅಷ್ಟೇ ದಿಗ್ಬ್ರಾಂತಿಯ ವಿಷಯವಾಗಿದೆ. ಯಾಕೆಂದರೆ ಯಾರೊಬ್ಬರೂ ಜಯಮಾಲಾ ಮಿನಿಸ್ಟರ್ ಆಗಲಿದ್ದಾರೆ ಅಂತ ಎಣಿಸಿರಲಿಲ್ಲ. ಮಹಿಳಾ ಕೋಟಾದ ಪ್ರಶ್ನೆ ಬಂದಾಗಲೂ ಡಿಕೇಶಿ ಬಳಗದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಮರಾಠಾ ಬ್ರ್ಯಾಂಡಿನ ಖಾನಾಪುರದ ಅಂಜಲಿ ನಿಂಬಾಳ್ಕರ್ ನಡುವೆಯೇ ಹಗ್ಗಜಗ್ಗಾಟ ನಡೆದಿತ್ತು. ಪಾಪದ ಮೋಟಮ್ಮ ನನ್ನನ್ನ ಮಂತ್ರಿ ಮಾಡಿ ಅಂತ ಕೇಳಿದಾಗಲೂ `ಏಯ್ ಸುಮ್ನೇ ಇರಮ್ಮ, ಗೆದ್ದ ಶಾಸಕರನ್ನೇ ಬಿಜೆಪಿಯವರ ಬಕಾಸುರ ಬಾಯಿಂದ ಕಾಪಾಡಿಕೊಳ್ಳಲು ಹೆಣಗಾಡ್ತಿದೀವಿ. ಹಾಗಾಗಿ ಅವ್ರನ್ನ ತೃಪ್ತಿ ಪಡಿಸ್ಲಿಕ್ಕೇ ಸಾಕುಸಾಕಾಗಿ ಹೋಗ್ತಿದೆ. ಅದಕ್ಕೋಸ್ಕರ ಈ ಸಲ ಎಂಎಲ್‍ಸಿಗಳಿಗೆ ಮಂತ್ರಿ ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ. ನಂತ್ರ ನೋಡೋಣ’ ಅನ್ನೋ ಉತ್ತರ ಬಿಸಾಕಿದ ದಿಲ್ಲಿ ದಲ್ಲಾಳಿಗಳು ಆಯಮ್ಮನನ್ನು ಗದರಿಕೊಂಡಿದ್ದರಂತೆ.
ಆದರೆ ಕೊನೇ ಘಳಿಗೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‍ರನ್ನು ಹಿಂದಿಕ್ಕಿದ್ದಲ್ಲದೇ, ಎಂಎಲ್‍ಸಿಗಳಿಗೆ ಮಂತ್ರಿಭಾಗ್ಯ ಇಲ್ಲ ಎಂಬ ಅಡ್ಡಗೋಡೆಯನ್ನೂ ಜಿಗಿದುಬಂದ ಜಯಮಾಲ ಮೇಡಂ ಮಂತ್ರಿಣಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಮಂತ್ರಿಗಿರಿ ಮಿಸ್ ಮಾಡಿಕೊಂಡ `ಪುಣ್ಯಾತ್ಮ’ರು ಅಂಟಿಸುವ `ನಿಷ್ಠಾವಂತರಿಗೆ ಬೆಲೆ ಇಲ್ಲದಂತಾಗಿದೆ. ಪಕ್ಷಕ್ಕೆ ದುಡಿದವರಿಗೆ ಸ್ಥಾನ ಕೊಡದೆ, ಬಕೇಟು ಹಿಡಿದ ಲಾಬಿ ಗಿರಾಕಿಗಳನ್ನು ಮಂತ್ರಿ ಮಾಡಿದ್ದಾರೆ. ನನ್ನ ಬೆಂಬಲಿಗರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರ್ತೀನಿ’ ಅನ್ನೋ ಠುಸ್ ಪಟಾಕಿಗೆ ಪ್ರತಿಯಾಗಿ ಮಂತ್ರಿಗಿರಿ ಸಿಕ್ಕ `ಮಹಾತ್ಮ’ರು `ನನ್ನ ನಿಷ್ಠೆ ನೋಡಿ ಪಕ್ಷ ಈ ಸ್ಥಾನ ನೀಡಿದೆ. ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಿದವನೇ/ಳೇ ಅಲ್ಲ. ನನ್ನ ಗೆಲ್ಲಿಸಿದ ಜನರ ಸೇವೆಗೆ ಇದನ್ನು ಸದುಪಯೋಗ ಮಾಡಿಕೊಳ್ತೀನಿ’ ಅನ್ನೋ ಢಂಢಂ ಪಟಾಕಿ ಅಂಟಿಸೋದು ಸಹಜ. ಜಮಯಾಲ ಮೇಡಂ ಕೂಡಾ ಅಂತದ್ದೇ ಒಂದು ಢಂಢಂ ಪಟಾಕಿ ಅಂಟಿಸಿದ್ದಾರಾದರು ಅವರ ಮಂತ್ರಿಗಿರಿಯ ಹಿಂದೆ ಒಂದು ಪೊಲಿಟಿಕಲ್ ಲಾಬಿ ಇದ್ದೇ ಇದೆ ಅನ್ನೋದು ಮಾತ್ರ ಸುಳ್ಳಲ್ಲ.
ಬಣ್ಣದ ಲೋಕದಿಂದ ಬಂದ ಬೇರೆಬೇರೆ ಪಾರ್ಟ್‍ಟೈಂ ರಾಜಕಾರಣಿಗಳಿಗೆ ಹೋಲಿಸಿದರೆ ಜಯಮಾಲ ಮೇಡಮ್ಮು ಹೆಚ್ಚು ದಕ್ಷ, ದಿಟ್ಟ ರಾಜಕಾರಣಿ ಅನ್ನೋದ್ರಲ್ಲಿ ಸಂಶಯವಿಲ್ಲ. ಆದರೆ, ಇರೋ ಒಂದು ರೊಟ್ಟಿಯನ್ನೇ ಹರಿದು, ಹಸಿವಿನಿಂದ ರಂಪಾಟ ಮಾಡುತ್ತಿರುವ ತನ್ನ ಸಂತಾನ ಸೈನ್ಯಕ್ಕೆ ಹಂಚಬೇಕಾದ ನಿಕೃಷ್ಟ ಬರಗಾಲಕ್ಕೆ ಸಿಲುಕಿರುವ ಕಾಂಗ್ರೆಸ್ ಅನ್ನೋ ಶತಮಾನದ ಪಾರ್ಟಿ ಯಾವ ಲಾಬಿಯೂ ಇಲ್ಲದೆ, ದಕ್ಷತೆಯ ಮೈಲೇಜಿನ ಮೇಲೆ ಜಯಮಾಲರನ್ನು ಮಂತ್ರಿ ಮಾಡುತ್ತೆ ಅನ್ನೋದನ್ನು ನಂಬಲು ಕಷ್ಟ; ಅದೂ, ಮ್ಯಾನ್ ಆಫ್ ದಿ ಮ್ಯಾಚ್ ಡಿಕೇಶಿ ಬೆಟಾಲಿಯನ್ನಿನ ವಿಕೆಟನ್ನೇ ರನ್‍ಔಟ್ ಮಾಡಿಸಿ! ಜಯಮಾಲರನ್ನು ಮಂತ್ರಿ ಮಾಡಲೇಬೇಕು ಅಂತ ಪಟ್ಟು ಹಿಡಿದು, ಲಾಬಿ ಮಾಡಿದ್ದು ಮಾಜಿ ಸಿಎಂ ಸಿದ್ರಾಮಯ್ಯನವರು ಅನ್ನೋ ಮಾತುಗಳು ಕಾಂಗ್ರೆಸ್ ಪಡಸಾಲೆಯಿಂದಲೇ ಕೇಳಿಬರುತ್ತಿವೆ. ಜಯಮಾಲ ಮೊದಲಿನಿಂದಲೂ ಸಿದ್ರಾಮಯ್ಯನವರ ಅತ್ಯಾಪ್ತ ವಲಯದ ರಾಜಕೀಯ ಪಟು. ಸಿದ್ದು ಸಿಎಂ ಆಗಿದ್ದಾಗ, ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲು 16 ಜನರ ಒಂದು ಸಮಿತಿ ರಚಿಸಿದ್ದರು. ಆ ಸಮಿತಿಗೆ ಅಧ್ಯಕ್ಷೆಯನ್ನಾಗಿ ಸಿದ್ದು ಆಯ್ಕೆ ಮಾಡಿದ್ದು ಇದೇ ಜಯಮಾಲ ಮೇಡಂರನ್ನು. ಇನ್ನು ಮೊನ್ನೆಯ ಎಲೆಕ್ಷನ್ ವೇಳೆ, ಸಿದ್ದುವಿಗೆ ಚಾಮುಂಡೇಶ್ವರಿಯಲ್ಲಿ ಕಂಟಕವಿರುವ ಮುನ್ಸೂಚನೆ ಸಿಕ್ಕಾಗ ಜಯಮಾಲ ಮೇಡಂ, ಒಂದು ಕಾಲದ ಬಿಜೆಪಿ ಒಡನಾಡಿ ಮುಖ್ಯಮಂತ್ರಿ ಚಂದ್ರುರಂತಹ ಸಹೋದ್ಯೋಗಿಯನ್ನೇ ಕರಕೊಂಡು ಬಂದು ಸಿದ್ದು ಪರ ಅದ್ದೂರಿ ಪ್ರಚಾರ ಮಾಡಿದ್ದರು. ಅಷ್ಟರಮಟ್ಟಿಗೆ ಅವರಿಬ್ಬರ ನಡುವೆ ಆಪ್ತತೆ ಇದೆ, ಅಭಿಮಾನವಿದೆ. ಸಿದ್ದು, ಜಯಮಾಲರ ಮೇಲಿಟ್ಟಿರುವ ಆ ಅಭಿಮಾನವೇ ಇವತ್ತು ಅವರನ್ನು ಮಂತ್ರಿ ಮಾಡಿದೆ. ಅಂದಹಾಗೆ, ಸಿದ್ದು ಬಗ್ಗೆ ಜಯಮಾಲ ಮೇಡಂಗೆ ಅಭಿಮಾನ ತುಂಬಿ ಬಂದು, ಅಂತರಾಳದಿಂದ ಹೆಮ್ಮೆ ಎನಿಸಿದಾಗ ಏನಂತ ಹೊಗಳ್ತಾರೆ ಗೊತ್ತುಂಟಾ, `ನಂ ಸಿದ್ರಾಮಯ್ಯನೋರು ಗಂಡು ಹುಲಿ ಕಣ್ರೀ!’.
ಸಂಪುಟ ರಚನೆಯಲ್ಲಿ ಸಿದ್ರಾಮಯ್ಯರನ್ನು ಹೈಕಮಾಂಡ್ ಮೂಲೆಗುಂಪು ಮಾಡಿದೆ, ಅವರ ಆಪ್ತರಿಗೆ ಸಚಿವಗಿರಿ ತಪ್ಪಿಸಲಾಗಿದೆ ಅಂತ ಬೊಬ್ಬಿಡುವ ಖಾಲಿ ಡಬ್ಬಗಳಿಗೆ ಜಯಮಾಲ ಆಯ್ಕೆಯೇ ಒಂದು ದೊಡ್ಡ ಉತ್ತರ. ಕಾಂಗ್ರೆಸ್‍ನೊಳಗೆ ಸಿದ್ದು ಈಗಲೂ ಡಿಗ್ನಿಫೈಡ್ ರೋಲ್ ನಿಭಾಯಿಸುತ್ತಿದ್ದಾರೆ ಅನ್ನೋದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್‍ರನ್ನ ಓವರ್‍ಟೇಕ್ ಮಾಡಿ ಜಯಮಾಲ ಮಂತ್ರಿಯಾಗಿರೋದು ಸಾಕ್ಷಿ. ಇದೆಲ್ಲ ಆಯ್ಕೆ ಹಿಂದಿನ ಕಸರತ್ತಾಯ್ತು. ಇನ್ನು ದಕ್ಷತೆ ವಿಚಾರಕ್ಕೆ ಬಂದರೆ, ಈ ಸಮ್ಮಿಶ್ರ ಸಂಪುಟದಲ್ಲಿರುವ ಕೆಲವೇ ಕೆಲವು ಅರ್ಹ ಮಂತ್ರಿಗಳಲ್ಲಿ ಜಯಮಾಲ ಕೂಡಾ ಒಬ್ಬರು ಅನ್ನೋದ್ರಲ್ಲಿ ತಪ್ಪಿಲ್ಲ. ಸಿದ್ದು ಲಾಬಿಯಿಂದ ಸಿಕ್ಕಿದೆಯೋ, ಬಿಲ್ಲವ ಕೋಟಾದಡಿ ದಕ್ಕಿದೆಯೋ, ಒಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಬ್ಬ ಸಮರ್ಥ ಸಾರಥಿಯೇ ಸಿಕ್ಕಂತಾಗಿದೆ. ಯಾಕೆಂದರೆ ಜಯಮಾಲ ಗ್ರಾಮೀಣ ಮಹಿಳೆಯರ ಪುನರ್ವಸತಿ ವಿಷಯದ ಮೇಲೆ ಅಧ್ಯಯನ ಮಾಡಿಯೇ ಡಾಕ್ಟರೇಟ್ ಪದವಿ ಪಡೆದುಕೊಂಡಂತವರು. ಮೊದಲೇ ಹೇಳಿದಂತೆ ಕಳೆದ ಸರ್ಕಾರದಲ್ಲಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿದ ಸಮಿತಿಯ ಅಧ್ಯಕ್ಷೆಯಾಗಿಯೂ ಮಹಿಳಾ ಸವಾಲುಗಳನ್ನು ಕಂಡ ಅನುಭವವಿದೆ. ಈ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಕನ್ನಡ ಸಿನಿರಂಗದ ಬಿಕ್ಕಟ್ಟುಗಳನ್ನು ಬಗೆಹರಿಸಿದ ಗಟ್ಟಿತನವಿರುವ ಜಯಮಾಲರಿಗೆ ಮಂತ್ರಿಯಾಗುವ ಸಾಮಥ್ರ್ಯ ಉಳಿದ ಬಣ್ಣದ ಮಂದಿಗಿಂತ ಹೆಚ್ಚಿದೆ ಅನ್ನೋದ್ರಲ್ಲಿ ತಪ್ಪಿಲ್ಲ. ಅಂದಹಾಗೆ, 1993ರಲ್ಲಿ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಘಳಿಗೆಯಿಂದ ಇಲ್ಲಿಯವರೆಗು ಕಾಂಗ್ರೆಸ್‍ನಲ್ಲೇ ಗುರುತಿಸಿಕೊಂಡು ಬಂದಿದ್ದಾರೆ. ಇತರರಂತೆ ಪಕ್ಷಾಂತರ ಮಾಡಿದವರಲ್ಲ.
ತನ್ನ 13ನೇ ವಯಸ್ಸಿಗೇ ಬಣ್ಣ ಹಚ್ಚಿ, 16ನೇ ವಯಸ್ಸಿಗೆ ಡಾ.ರಾಜ್ ಎದುರು ಪ್ರೇಮದ ಕಾಣಿಕೆಯಲ್ಲಿ ನಾಯಕಿಯಾಗಿ ಮಿಂಚಿದ ಈ ಗಿರಿಕನ್ಯೆ ತನ್ನ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏಳುಬೀಳು ಕಂಡುಬಂದಂತವರು. ಪ್ರತಿಭಾವಂತ ನಟನಾಗಿದ್ದರೂ, ತನ್ನ ಚಟಗಳಿಗೆ ಮಿತಿ ಹೇರಿಕೊಳ್ಳದೆ ಮರೆಯಾಗಿ ಹೋದ ಟೈಗರ್ ಪ್ರಭಾಕರ್ ಜೊತೆ ಜಯಮಾಲ ಇಟ್ಟ ಮೊದಲ ದಾಂಪತ್ಯ ದೀರ್ಘಕಾಲ ಉಳಿಯಲಿಲ್ಲ. ಯಾವ ಮುಲಾಜುಗಳಿಗೂ ಕಟ್ಟುಬೀಳದೆ ಡೈವೋರ್ಸ್ ಪಡೆದು ಆ ದಾಂಪತ್ಯದಿಂದ ಹೊರಬಂದ ಅವರು ನಂತರ ಛಾಯಾಗ್ರಾಹಕ ರಾಮಚಂದ್ರರವರನ್ನು ಮದುವೆಯಾಗಿ ಮತ್ತೊಮ್ಮೆ ದಿಟ್ಟತೆ ತೋರಿದ್ದರು. ಮಹಿಳೆಯರಿಗೆ ಪ್ರವೇಶವಿಲ್ಲದ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದ ವಿವಾದ ಭುಗಿಲೆದ್ದಾಗಲೂ ಜಯಮಾಲ ಬಲು ದಿಟ್ಟತೆಯಿಂದಲೇ ಎದುರಿಸಿದ್ದರು. ಕಮರ್ಷಿಯಲ್ ಚಿತ್ರಗಳಲ್ಲಿ ಹೀರೋಯಿನ್ ಆಗಿ ಮಿಂಚುತ್ತಲೇ `ತಾಯಿ ಸಾಹೇಬ’ದಂತಹ ರಾಷ್ಟ್ರಪ್ರಶಸ್ತಿ ವಿಜೇತ ಕಲಾತ್ಮಕ ಚಿತ್ರವನ್ನೂ ನಿರ್ಮಿಸಿ ಸೈ ಅನ್ನಿಸಿಕೊಂಡಿದ್ದ ಅವರು ಮಹಿಳಾ ಕಲ್ಯಾಣ ಹಾಗೂ ಕನ್ನಡ, ಸಂಸ್ಕøತಿ ಇಲಾಖೆಗಳಿಗೆ ನ್ಯಾಯ ಸಲ್ಲಿಸುತ್ತಾರೆಂಬ ವಿಶ್ವಾಸವಿದೆ. ಕಾದು ನೋಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...