Homeರಾಜಕೀಯಜಯಮಾಲ ಮೇಡಂಗೆ ಮಂತ್ರಿಗಿರಿ ಒಲಿದ ಮರ್ಮವೇನು?

ಜಯಮಾಲ ಮೇಡಂಗೆ ಮಂತ್ರಿಗಿರಿ ಒಲಿದ ಮರ್ಮವೇನು?

- Advertisement -
- Advertisement -

ಸಿಕ್ಕಾಪಟ್ಟೆ ಸರ್ಕಸ್ ತರುವಾಯ ಸಮ್ಮಿಶ್ರ ಸರ್ಕಾರದ ಅರೆಬೆಂದ ಸಚಿವ ಸಂಪುಟ ಅಣಿಯಾಗಿದೆ. ಸಚಿವಗಿರಿ ಸಿಗದೆ ಬಂಡಾಯದ ಬಾವುಟ ಹಾರಾಡಿಸಿಕೊಂಡು ದಿಲ್ಲಿಗೂ, ಬೆಂಗ್ಳೂರಿಗೂ ಅಲೆದಾಡಿದ ಪುಣ್ಯಾತ್ಮರೂ ದಿನದಿಂದ ದಿನಕ್ಕೆ ತಣ್ಣಗಾಗುತ್ತಿದ್ದಾರೆ. ಇನ್ನು ಸಿಕ್ಕ ಖಾತೆಗಳ ಬಗ್ಗೆ ಕ್ಯಾತೆ ತೆಗೆದವರೂ, ಪಾಲಿಗೆ ಬಂದ ಪಂಚಾಮೃತದ ಮುಂದೆ ಚಕ್ಕಮಕ್ಕಳ ಹಾಕಿ ಕೂತು, ಕೈ-ಬಾಯಿ ಅಣಿಯಾಗಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಕುಮಾರಣ್ಣನ ಸಂಪುಟದ ರೈಲು ನಿಧಾನಕ್ಕೆ ಹಳಿಗಳಿಗೆ ಕುದುರಿಕೊಳ್ಳಲು ಶುರುವಾಗಿದೆ. ಒಂದು ಸರ್ಕಾರ ಅಂತ ರಚನೆಯಾದಾಗ, ಅದರಲ್ಲೂ ಬಣ್ಣಬಣ್ಣದ ಕೌದಿಯಂತಹ ಸಮ್ಮಿಶ್ರ ಸರ್ಕಾರ ಅಂದಮೇಲೆ ಇಂತದ್ದೆಲ್ಲ ಮಾಮೂಲಿ. ಈ ಸಲದ ಸಂಪುಟ ಕಸರತ್ತಿನಲ್ಲಿ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಬಸವರಾಜ್ ಹೊರಟ್ಟಿಯಂತಹ ಘಟಾನುಘಟಿಗಳಿಗೆ ಮಂತ್ರಿಗಿರಿ ಮಿಸ್ ಆಗಿರೋದು ಎಷ್ಟು ಶಾಕ್‍ನ ಸಂಗತಿಯೋ, ಗಿರಿಕನ್ಯೆ ಜಯಮಾಲಾ ಮೇಡಂಗೆ ಮಂತ್ರಿಗಿರಿ ಸಿಕ್ಕಿರೋದೂ ಅಷ್ಟೇ ದಿಗ್ಬ್ರಾಂತಿಯ ವಿಷಯವಾಗಿದೆ. ಯಾಕೆಂದರೆ ಯಾರೊಬ್ಬರೂ ಜಯಮಾಲಾ ಮಿನಿಸ್ಟರ್ ಆಗಲಿದ್ದಾರೆ ಅಂತ ಎಣಿಸಿರಲಿಲ್ಲ. ಮಹಿಳಾ ಕೋಟಾದ ಪ್ರಶ್ನೆ ಬಂದಾಗಲೂ ಡಿಕೇಶಿ ಬಳಗದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಮರಾಠಾ ಬ್ರ್ಯಾಂಡಿನ ಖಾನಾಪುರದ ಅಂಜಲಿ ನಿಂಬಾಳ್ಕರ್ ನಡುವೆಯೇ ಹಗ್ಗಜಗ್ಗಾಟ ನಡೆದಿತ್ತು. ಪಾಪದ ಮೋಟಮ್ಮ ನನ್ನನ್ನ ಮಂತ್ರಿ ಮಾಡಿ ಅಂತ ಕೇಳಿದಾಗಲೂ `ಏಯ್ ಸುಮ್ನೇ ಇರಮ್ಮ, ಗೆದ್ದ ಶಾಸಕರನ್ನೇ ಬಿಜೆಪಿಯವರ ಬಕಾಸುರ ಬಾಯಿಂದ ಕಾಪಾಡಿಕೊಳ್ಳಲು ಹೆಣಗಾಡ್ತಿದೀವಿ. ಹಾಗಾಗಿ ಅವ್ರನ್ನ ತೃಪ್ತಿ ಪಡಿಸ್ಲಿಕ್ಕೇ ಸಾಕುಸಾಕಾಗಿ ಹೋಗ್ತಿದೆ. ಅದಕ್ಕೋಸ್ಕರ ಈ ಸಲ ಎಂಎಲ್‍ಸಿಗಳಿಗೆ ಮಂತ್ರಿ ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ. ನಂತ್ರ ನೋಡೋಣ’ ಅನ್ನೋ ಉತ್ತರ ಬಿಸಾಕಿದ ದಿಲ್ಲಿ ದಲ್ಲಾಳಿಗಳು ಆಯಮ್ಮನನ್ನು ಗದರಿಕೊಂಡಿದ್ದರಂತೆ.
ಆದರೆ ಕೊನೇ ಘಳಿಗೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‍ರನ್ನು ಹಿಂದಿಕ್ಕಿದ್ದಲ್ಲದೇ, ಎಂಎಲ್‍ಸಿಗಳಿಗೆ ಮಂತ್ರಿಭಾಗ್ಯ ಇಲ್ಲ ಎಂಬ ಅಡ್ಡಗೋಡೆಯನ್ನೂ ಜಿಗಿದುಬಂದ ಜಯಮಾಲ ಮೇಡಂ ಮಂತ್ರಿಣಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಮಂತ್ರಿಗಿರಿ ಮಿಸ್ ಮಾಡಿಕೊಂಡ `ಪುಣ್ಯಾತ್ಮ’ರು ಅಂಟಿಸುವ `ನಿಷ್ಠಾವಂತರಿಗೆ ಬೆಲೆ ಇಲ್ಲದಂತಾಗಿದೆ. ಪಕ್ಷಕ್ಕೆ ದುಡಿದವರಿಗೆ ಸ್ಥಾನ ಕೊಡದೆ, ಬಕೇಟು ಹಿಡಿದ ಲಾಬಿ ಗಿರಾಕಿಗಳನ್ನು ಮಂತ್ರಿ ಮಾಡಿದ್ದಾರೆ. ನನ್ನ ಬೆಂಬಲಿಗರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರ್ತೀನಿ’ ಅನ್ನೋ ಠುಸ್ ಪಟಾಕಿಗೆ ಪ್ರತಿಯಾಗಿ ಮಂತ್ರಿಗಿರಿ ಸಿಕ್ಕ `ಮಹಾತ್ಮ’ರು `ನನ್ನ ನಿಷ್ಠೆ ನೋಡಿ ಪಕ್ಷ ಈ ಸ್ಥಾನ ನೀಡಿದೆ. ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಿದವನೇ/ಳೇ ಅಲ್ಲ. ನನ್ನ ಗೆಲ್ಲಿಸಿದ ಜನರ ಸೇವೆಗೆ ಇದನ್ನು ಸದುಪಯೋಗ ಮಾಡಿಕೊಳ್ತೀನಿ’ ಅನ್ನೋ ಢಂಢಂ ಪಟಾಕಿ ಅಂಟಿಸೋದು ಸಹಜ. ಜಮಯಾಲ ಮೇಡಂ ಕೂಡಾ ಅಂತದ್ದೇ ಒಂದು ಢಂಢಂ ಪಟಾಕಿ ಅಂಟಿಸಿದ್ದಾರಾದರು ಅವರ ಮಂತ್ರಿಗಿರಿಯ ಹಿಂದೆ ಒಂದು ಪೊಲಿಟಿಕಲ್ ಲಾಬಿ ಇದ್ದೇ ಇದೆ ಅನ್ನೋದು ಮಾತ್ರ ಸುಳ್ಳಲ್ಲ.
ಬಣ್ಣದ ಲೋಕದಿಂದ ಬಂದ ಬೇರೆಬೇರೆ ಪಾರ್ಟ್‍ಟೈಂ ರಾಜಕಾರಣಿಗಳಿಗೆ ಹೋಲಿಸಿದರೆ ಜಯಮಾಲ ಮೇಡಮ್ಮು ಹೆಚ್ಚು ದಕ್ಷ, ದಿಟ್ಟ ರಾಜಕಾರಣಿ ಅನ್ನೋದ್ರಲ್ಲಿ ಸಂಶಯವಿಲ್ಲ. ಆದರೆ, ಇರೋ ಒಂದು ರೊಟ್ಟಿಯನ್ನೇ ಹರಿದು, ಹಸಿವಿನಿಂದ ರಂಪಾಟ ಮಾಡುತ್ತಿರುವ ತನ್ನ ಸಂತಾನ ಸೈನ್ಯಕ್ಕೆ ಹಂಚಬೇಕಾದ ನಿಕೃಷ್ಟ ಬರಗಾಲಕ್ಕೆ ಸಿಲುಕಿರುವ ಕಾಂಗ್ರೆಸ್ ಅನ್ನೋ ಶತಮಾನದ ಪಾರ್ಟಿ ಯಾವ ಲಾಬಿಯೂ ಇಲ್ಲದೆ, ದಕ್ಷತೆಯ ಮೈಲೇಜಿನ ಮೇಲೆ ಜಯಮಾಲರನ್ನು ಮಂತ್ರಿ ಮಾಡುತ್ತೆ ಅನ್ನೋದನ್ನು ನಂಬಲು ಕಷ್ಟ; ಅದೂ, ಮ್ಯಾನ್ ಆಫ್ ದಿ ಮ್ಯಾಚ್ ಡಿಕೇಶಿ ಬೆಟಾಲಿಯನ್ನಿನ ವಿಕೆಟನ್ನೇ ರನ್‍ಔಟ್ ಮಾಡಿಸಿ! ಜಯಮಾಲರನ್ನು ಮಂತ್ರಿ ಮಾಡಲೇಬೇಕು ಅಂತ ಪಟ್ಟು ಹಿಡಿದು, ಲಾಬಿ ಮಾಡಿದ್ದು ಮಾಜಿ ಸಿಎಂ ಸಿದ್ರಾಮಯ್ಯನವರು ಅನ್ನೋ ಮಾತುಗಳು ಕಾಂಗ್ರೆಸ್ ಪಡಸಾಲೆಯಿಂದಲೇ ಕೇಳಿಬರುತ್ತಿವೆ. ಜಯಮಾಲ ಮೊದಲಿನಿಂದಲೂ ಸಿದ್ರಾಮಯ್ಯನವರ ಅತ್ಯಾಪ್ತ ವಲಯದ ರಾಜಕೀಯ ಪಟು. ಸಿದ್ದು ಸಿಎಂ ಆಗಿದ್ದಾಗ, ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲು 16 ಜನರ ಒಂದು ಸಮಿತಿ ರಚಿಸಿದ್ದರು. ಆ ಸಮಿತಿಗೆ ಅಧ್ಯಕ್ಷೆಯನ್ನಾಗಿ ಸಿದ್ದು ಆಯ್ಕೆ ಮಾಡಿದ್ದು ಇದೇ ಜಯಮಾಲ ಮೇಡಂರನ್ನು. ಇನ್ನು ಮೊನ್ನೆಯ ಎಲೆಕ್ಷನ್ ವೇಳೆ, ಸಿದ್ದುವಿಗೆ ಚಾಮುಂಡೇಶ್ವರಿಯಲ್ಲಿ ಕಂಟಕವಿರುವ ಮುನ್ಸೂಚನೆ ಸಿಕ್ಕಾಗ ಜಯಮಾಲ ಮೇಡಂ, ಒಂದು ಕಾಲದ ಬಿಜೆಪಿ ಒಡನಾಡಿ ಮುಖ್ಯಮಂತ್ರಿ ಚಂದ್ರುರಂತಹ ಸಹೋದ್ಯೋಗಿಯನ್ನೇ ಕರಕೊಂಡು ಬಂದು ಸಿದ್ದು ಪರ ಅದ್ದೂರಿ ಪ್ರಚಾರ ಮಾಡಿದ್ದರು. ಅಷ್ಟರಮಟ್ಟಿಗೆ ಅವರಿಬ್ಬರ ನಡುವೆ ಆಪ್ತತೆ ಇದೆ, ಅಭಿಮಾನವಿದೆ. ಸಿದ್ದು, ಜಯಮಾಲರ ಮೇಲಿಟ್ಟಿರುವ ಆ ಅಭಿಮಾನವೇ ಇವತ್ತು ಅವರನ್ನು ಮಂತ್ರಿ ಮಾಡಿದೆ. ಅಂದಹಾಗೆ, ಸಿದ್ದು ಬಗ್ಗೆ ಜಯಮಾಲ ಮೇಡಂಗೆ ಅಭಿಮಾನ ತುಂಬಿ ಬಂದು, ಅಂತರಾಳದಿಂದ ಹೆಮ್ಮೆ ಎನಿಸಿದಾಗ ಏನಂತ ಹೊಗಳ್ತಾರೆ ಗೊತ್ತುಂಟಾ, `ನಂ ಸಿದ್ರಾಮಯ್ಯನೋರು ಗಂಡು ಹುಲಿ ಕಣ್ರೀ!’.
ಸಂಪುಟ ರಚನೆಯಲ್ಲಿ ಸಿದ್ರಾಮಯ್ಯರನ್ನು ಹೈಕಮಾಂಡ್ ಮೂಲೆಗುಂಪು ಮಾಡಿದೆ, ಅವರ ಆಪ್ತರಿಗೆ ಸಚಿವಗಿರಿ ತಪ್ಪಿಸಲಾಗಿದೆ ಅಂತ ಬೊಬ್ಬಿಡುವ ಖಾಲಿ ಡಬ್ಬಗಳಿಗೆ ಜಯಮಾಲ ಆಯ್ಕೆಯೇ ಒಂದು ದೊಡ್ಡ ಉತ್ತರ. ಕಾಂಗ್ರೆಸ್‍ನೊಳಗೆ ಸಿದ್ದು ಈಗಲೂ ಡಿಗ್ನಿಫೈಡ್ ರೋಲ್ ನಿಭಾಯಿಸುತ್ತಿದ್ದಾರೆ ಅನ್ನೋದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್‍ರನ್ನ ಓವರ್‍ಟೇಕ್ ಮಾಡಿ ಜಯಮಾಲ ಮಂತ್ರಿಯಾಗಿರೋದು ಸಾಕ್ಷಿ. ಇದೆಲ್ಲ ಆಯ್ಕೆ ಹಿಂದಿನ ಕಸರತ್ತಾಯ್ತು. ಇನ್ನು ದಕ್ಷತೆ ವಿಚಾರಕ್ಕೆ ಬಂದರೆ, ಈ ಸಮ್ಮಿಶ್ರ ಸಂಪುಟದಲ್ಲಿರುವ ಕೆಲವೇ ಕೆಲವು ಅರ್ಹ ಮಂತ್ರಿಗಳಲ್ಲಿ ಜಯಮಾಲ ಕೂಡಾ ಒಬ್ಬರು ಅನ್ನೋದ್ರಲ್ಲಿ ತಪ್ಪಿಲ್ಲ. ಸಿದ್ದು ಲಾಬಿಯಿಂದ ಸಿಕ್ಕಿದೆಯೋ, ಬಿಲ್ಲವ ಕೋಟಾದಡಿ ದಕ್ಕಿದೆಯೋ, ಒಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಬ್ಬ ಸಮರ್ಥ ಸಾರಥಿಯೇ ಸಿಕ್ಕಂತಾಗಿದೆ. ಯಾಕೆಂದರೆ ಜಯಮಾಲ ಗ್ರಾಮೀಣ ಮಹಿಳೆಯರ ಪುನರ್ವಸತಿ ವಿಷಯದ ಮೇಲೆ ಅಧ್ಯಯನ ಮಾಡಿಯೇ ಡಾಕ್ಟರೇಟ್ ಪದವಿ ಪಡೆದುಕೊಂಡಂತವರು. ಮೊದಲೇ ಹೇಳಿದಂತೆ ಕಳೆದ ಸರ್ಕಾರದಲ್ಲಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿದ ಸಮಿತಿಯ ಅಧ್ಯಕ್ಷೆಯಾಗಿಯೂ ಮಹಿಳಾ ಸವಾಲುಗಳನ್ನು ಕಂಡ ಅನುಭವವಿದೆ. ಈ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಕನ್ನಡ ಸಿನಿರಂಗದ ಬಿಕ್ಕಟ್ಟುಗಳನ್ನು ಬಗೆಹರಿಸಿದ ಗಟ್ಟಿತನವಿರುವ ಜಯಮಾಲರಿಗೆ ಮಂತ್ರಿಯಾಗುವ ಸಾಮಥ್ರ್ಯ ಉಳಿದ ಬಣ್ಣದ ಮಂದಿಗಿಂತ ಹೆಚ್ಚಿದೆ ಅನ್ನೋದ್ರಲ್ಲಿ ತಪ್ಪಿಲ್ಲ. ಅಂದಹಾಗೆ, 1993ರಲ್ಲಿ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಘಳಿಗೆಯಿಂದ ಇಲ್ಲಿಯವರೆಗು ಕಾಂಗ್ರೆಸ್‍ನಲ್ಲೇ ಗುರುತಿಸಿಕೊಂಡು ಬಂದಿದ್ದಾರೆ. ಇತರರಂತೆ ಪಕ್ಷಾಂತರ ಮಾಡಿದವರಲ್ಲ.
ತನ್ನ 13ನೇ ವಯಸ್ಸಿಗೇ ಬಣ್ಣ ಹಚ್ಚಿ, 16ನೇ ವಯಸ್ಸಿಗೆ ಡಾ.ರಾಜ್ ಎದುರು ಪ್ರೇಮದ ಕಾಣಿಕೆಯಲ್ಲಿ ನಾಯಕಿಯಾಗಿ ಮಿಂಚಿದ ಈ ಗಿರಿಕನ್ಯೆ ತನ್ನ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏಳುಬೀಳು ಕಂಡುಬಂದಂತವರು. ಪ್ರತಿಭಾವಂತ ನಟನಾಗಿದ್ದರೂ, ತನ್ನ ಚಟಗಳಿಗೆ ಮಿತಿ ಹೇರಿಕೊಳ್ಳದೆ ಮರೆಯಾಗಿ ಹೋದ ಟೈಗರ್ ಪ್ರಭಾಕರ್ ಜೊತೆ ಜಯಮಾಲ ಇಟ್ಟ ಮೊದಲ ದಾಂಪತ್ಯ ದೀರ್ಘಕಾಲ ಉಳಿಯಲಿಲ್ಲ. ಯಾವ ಮುಲಾಜುಗಳಿಗೂ ಕಟ್ಟುಬೀಳದೆ ಡೈವೋರ್ಸ್ ಪಡೆದು ಆ ದಾಂಪತ್ಯದಿಂದ ಹೊರಬಂದ ಅವರು ನಂತರ ಛಾಯಾಗ್ರಾಹಕ ರಾಮಚಂದ್ರರವರನ್ನು ಮದುವೆಯಾಗಿ ಮತ್ತೊಮ್ಮೆ ದಿಟ್ಟತೆ ತೋರಿದ್ದರು. ಮಹಿಳೆಯರಿಗೆ ಪ್ರವೇಶವಿಲ್ಲದ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದ ವಿವಾದ ಭುಗಿಲೆದ್ದಾಗಲೂ ಜಯಮಾಲ ಬಲು ದಿಟ್ಟತೆಯಿಂದಲೇ ಎದುರಿಸಿದ್ದರು. ಕಮರ್ಷಿಯಲ್ ಚಿತ್ರಗಳಲ್ಲಿ ಹೀರೋಯಿನ್ ಆಗಿ ಮಿಂಚುತ್ತಲೇ `ತಾಯಿ ಸಾಹೇಬ’ದಂತಹ ರಾಷ್ಟ್ರಪ್ರಶಸ್ತಿ ವಿಜೇತ ಕಲಾತ್ಮಕ ಚಿತ್ರವನ್ನೂ ನಿರ್ಮಿಸಿ ಸೈ ಅನ್ನಿಸಿಕೊಂಡಿದ್ದ ಅವರು ಮಹಿಳಾ ಕಲ್ಯಾಣ ಹಾಗೂ ಕನ್ನಡ, ಸಂಸ್ಕøತಿ ಇಲಾಖೆಗಳಿಗೆ ನ್ಯಾಯ ಸಲ್ಲಿಸುತ್ತಾರೆಂಬ ವಿಶ್ವಾಸವಿದೆ. ಕಾದು ನೋಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...