Homeಕರ್ನಾಟಕಭ್ರಮಗಳಲ್ಲಿ ಬದುಕದೆ, ಭ್ರಮನಿರಸನಕ್ಕೂ ಗುರಿಯಾಗದೆ ಮುಂದಡಿ ಇಡಬೇಕಾದ ಕಾಲ

ಭ್ರಮಗಳಲ್ಲಿ ಬದುಕದೆ, ಭ್ರಮನಿರಸನಕ್ಕೂ ಗುರಿಯಾಗದೆ ಮುಂದಡಿ ಇಡಬೇಕಾದ ಕಾಲ

ಬದುಕು ಭ್ರಮೆಗಳ ಮೇಲೆ ನಡೆಯುವುದಿಲ್ಲ. ಕೃಷಿ ಬಿಕ್ಕಟ್ಟು ಭ್ರಮೆಯಲ್ಲ, ನಿರುದ್ಯೋಗ ಭ್ರಮೆಯಲ್ಲ, ವೇತನಗಳ ಕಡಿತ, ದಮನಿತರ ಮೇಲಿನ ದಾಳಿ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರಗಳು, ಕುಡಿತ, ಬೆಲೆ ಏರಿಕೆ, ಮೊಟಕುಗೊಳ್ಳುತ್ತಿರುವ ಸಂವಿಧಾನಾತ್ಮಕ ಹಕ್ಕುಗಳು ಯಾವುದೂ ಭ್ರಮೆಯಲ್ಲ.

- Advertisement -
- Advertisement -

|ನ್ಯಾಯಪಥ ಸಂಪಾದಕೀಯ|

“ಭ್ರಮೆಗಳಿಗೂ ಒಳಗಾಗದೆ ಭ್ರಮನಿರಸನಕ್ಕೂ ಗುರಿಯಾಗದೆ ಮುನ್ನಡೆಯಬೇಕಿರುವುದೇ ಇಂದಿನ ಸಮಾಜದ ಮುಂದಿರುವ ಅತಿದೊಡ್ಡ ಸವಾಲು” – ಇಟಲಿಯ ಸರ್ವಾಧಿಕಾರಿ ಆಳ್ವಿಕೆಯಡಿ ಜೈಲುಪಾಲಾಗಿ 1937ರಲ್ಲಿ ಜೈಲಲ್ಲೇ ಮರಣ ಹೊಂದಿದ ದಿಟ್ಟ ಹೋರಾಟಗಾರ, ಅಚ್ಚರಿಯ ಚಿಂತಕ ಆಂಟೋನಿಯೋ ಗ್ರಾಮ್ಷಿ ತಮ್ಮ ಜೈಲು ನೋಟ್ ಬುಕ್ಕಿನಲ್ಲಿ ಬರೆದ ಮಾತಿದು.

‘ಬಂಡವಾಳಶಾಹಿ ವ್ಯವಸ್ಥೆ ಸೃಷ್ಟಿಸಿರುವ ಸಮೂಹ ಉನ್ಮಾದಿ ಫ್ಯಾಸಿಸಂ ಅನ್ನು ಬೇಗನೇ ಸೋಲಿಸಿಬಿಡಬಹುದೆಂಬ ಭ್ರಮೆಗಳಿಗೂ ಒಳಗಾಗಬಾರದು. ಫ್ಯಾಸಿಸ್ಟ್ ಶಕ್ತಿಯನ್ನು ಮಣಿಸಲು ಸಾಧ್ಯವೇ ಇಲ್ಲ ಎಂಬ ಭ್ರಮನಿರಸನಕ್ಕೂ ಗುರಿಯಾಗದೆ ತಾಳ್ಮೆ, ವಿವೇಕ ಮತ್ತು ದೃಢ ಸಂಕಲ್ಪದ ಜೊತೆ ಕೆಲಸ ಮಾಡಬೇಕಾದ ಸಂದರ್ಭವಿದು’ ಎಂಬುದು ಅವರ ಮಾತಿನ ಅರ್ಥ. ಗ್ರಾಮ್ಷಿ ಹೇಳಿದಂತೆ ಅಂತಿಮವಾಗಿ ಫ್ಯಾಸಿಸಂ ಸೋತಿತು.

ಗ್ರಾಮ್ಷಿಯಂಥ ಸಹಸ್ರಾರು ಹೋರಾಟಗಾರರನ್ನು ಕೊಂದಿದ್ದ, ಫ್ಯಾಸಿಸಂ ಎಂಬ ಸಾಮಾಜಿಕ ಸರ್ವಾಧಿಕಾರಿ ವಿದ್ಯಮಾನಕ್ಕೆ ಚಾಲನೆ ನೀಡಿದ, ಹಿಟ್ಲರನ ವಿನಾಶಕಾರಿ ಚಿಂತನೆಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದ ಸರ್ವಾಧಿಕಾರಿ ಮುಸಲೋನಿ ಕೊನೆಯಲ್ಲಿ ತನ್ನ ಜನರ ಕೈಯಲ್ಲೇ ಕಲ್ಲಲ್ಲಿ ಹೊಡೆಸಿಕೊಂಡು ಸತ್ತ. ಆದರೆ ಫ್ಯಾಸಿಸಂ ಸುಲಭಕ್ಕೇನೂ ನಾಶವಾಗಿರಲಿಲ್ಲ. ಜನಾಂಗೀಯ ಹತ್ಯೆ ಹಾಗೂ ಪ್ರಪಂಚ ಯುದ್ಧದ ರೂಪದಲ್ಲಿ ವಿವರಿಸಲು ಅಸಾಧ್ಯವಾದ ನಷ್ಟಗಳಿಗೆ ಜಗತ್ತನ್ನು ಗುರಿಮಾಡಿತು. ಹೋರಾಟನಿರತ ಜನ ಧೀರ ಹಾಗೂ ದೀರ್ಘ ಸಂಘರ್ಷದ ಮೂಲಕ ಫ್ಯಾಸಿಸಂಅನ್ನು ಮಣಿಸಿ ಹಿಮ್ಮೆಟ್ಟಿಸುವಲ್ಲಿ ಅಂತಿಮವಾಗಿ ಯಶಸ್ವಿಯಾದರು. ಗ್ರಾಮ್ಷಿಯ ಮಾತನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾದ, ಅನ್ವಯಿಸಿಕೊಳ್ಳಬೇಕಾದ ಸಂದರ್ಭ ನಮ್ಮ ಮುಂದಿದೆ.

2019ರ ಚುನಾವಣಾ ಫಲಿತಾಂಶ 2014ರ ಚುನಾವಣಾ ಫಲಿತಾಂಶಕ್ಕಿಂತಲೂ ಘೋರ ಚಿತ್ರಣವನ್ನು ನಮ್ಮ ಮುಂದೆ ತೆರೆದಿಟ್ಟಿದೆ. ಸುಳ್ಳುಗಳ ಸರಮಾಲೆ, ಹಣದ ಹೊಳೆ, ಎಲೆಕ್ಷನ್ ಕಮಿಷನ್ನಿನ ದುರ್ಬಳಕೆ, ಪುಲ್ವಾಮ ದಾಳಿಯ ದುರ್ಬಳಕೆ, ಧ್ಯಾನದ ನಾಟಕ, ಇವಿಯಂ ತಿರುಚುವಿಕೆಯ ಸಾಧ್ಯತೆ ಈ ಎಲ್ಲಾ ಕಳ್ಳ ಮಾರ್ಗಗಳನ್ನು ಬಿಜೆಪಿ ಮತ್ತು ಸಂಘಪರಿವಾರ ಈ ಚುನಾವಣೆಯಲ್ಲಿ ಯಥೇಚ್ಛವಾಗಿ ಬಳಸಿದೆ. ಆದರೆ ಅದರಿಂದಲೇ ಅದು ಗೆದ್ದಿದೆ ಎಂದುಕೊಂಡರೆ ನಾವು ನಮ್ಮ ದೇಶದಲ್ಲಿ ರೂಪಗೊಳ್ಳುತ್ತಿರುವ ಅಪಾಯಕಾರಿ ಸಾಮಾಜಿಕ-ಆರ್ಥಿಕ-ರಾಜಕೀಯ ವಿದ್ಯಮಾನವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲಗೊಳ್ಳುತ್ತೇವೆ. ಸರ್ವಾಧಿಕಾರಿ ಮೌಲ್ಯ, ಮನಸ್ಥಿತಿ ಹಾಗೂ ಶಕ್ತಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ವ್ಯವಸ್ಥಿತವಾಗಿ ಹರಡಿ ಬೆಳೆದಿರುವುದನ್ನು ಮತ್ತು ಬೆಳೆಯುತ್ತಿರುವುದನ್ನು ಚುನಾವಣಾ ಫಲಿತಾಂಶಗಳು ತೋರಿಸುತ್ತಿವೆ.

2014ರ ಚುನಾವಣೆಗಿಂತ 2019ರ ಚುನಾವಣೆಯಲ್ಲಿ ಅತಿ ದುಷ್ಟ ಪಕ್ಷವಾದ ಬಿಜೆಪಿಯ ಸೀಟುಗಳ ಸಂಖ್ಯೆ ಹಾಗೂ ಓಟುಗಳ ಸಂಖ್ಯೆ ಎರಡೂ ಹೆಚ್ಚಾಗಿವೆ. ಬಿಜೆಪಿಯಲ್ಲೇ ಅತಿಉಗ್ರ ಸ್ವರೂಪದ ಚಿಂತನೆಗಳನ್ನು ಹೊಂದಿದ್ದ ಸಾಕ್ಷಿ ಮಹಾರಾಜ್, ಪ್ರಗ್ಯಾ ಸಿಂಗ್, ಕಟೀಲ್, ಹೆಗ್ಡೆ, ತೇಜಸ್ವಿ ಸೂರ್ಯರಂಥವರಿಗೆ ಟಿಕೆಟ್ ನೀಡಿದ್ದಲ್ಲದೆ ಅವರೆಲ್ಲರೂ ಹೆಚ್ಚಿನ ಅಂತರದಿಂದ ಗೆದ್ದಿದ್ದಾರೆ. ವಿರೋಧ ಪಕ್ಷವಾದ ಕಾಂಗ್ರೆಸ್ ರಾಷ್ಟ್ರೀಯ ಸ್ವರೂಪವನ್ನೇ ಕಳೆದುಕೊಂಡಿದೆ. 22 ರಾಜ್ಯಗಳಲ್ಲಿ ಕಾಂಗ್ರೆಸ್ ಕೊಚ್ಚಿಹೋಗಿದೆ. ದೇಶಕ್ಕೇ ಮಾದರಿ ಎಂದು ಕರೆಯಲಾದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ನೆಲೆಕಚ್ಚಿದ್ದಷ್ಟೇ ಅಲ್ಲದೆ ಈ ಎರಡೂ ಪಕ್ಷದ ಗಮನಾರ್ಹ ಓಟುಗಳು ಬಿಜೆಪಿ ಕಡೆ ದೃವೀಕರಣಗೊಂಡಿವೆ.

ತಮಿಳುನಾಡು ಹಾಗೂ ಒರಿಸ್ಸಾಗಳನ್ನು ಹೊರತುಪಡಿಸಿದರೆ ಪ್ರಾಂತೀಯ ಪಕ್ಷಗಳು ಬಿಜೆಪಿಯ ಆರ್ಭಟದಿಂದ ತತ್ತರಿಸಿವೆ. ಕಮ್ಯುನಿಸ್ಟ್ ಭದ್ರಕೋಟೆಯಾಗಿದ್ದ, ಆಮೇಲೆ ದೀದಿಯ ಬಿಗಿಮುಷ್ಠಿಯಲ್ಲಿದ್ದ ಬೆಂಗಾಲದ ಕೋಟೆಯನ್ನು ಬಿಜೆಪಿ ಬೇಧಿಸಿದೆ. ತಮಿಳುನಾಡು, ಕೇರಳಗಳಲ್ಲೂ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಂಡಿದೆ. ದೇವೇಗೌಡರಂಥ ದಿಗ್ಗಜರೇ ಸೋತಿದ್ದಾರೆ. ರಾಹುಲ್ ಗಾಂಧಿ ತಮ್ಮ ಪಾರಂಪರಿಕ ಕ್ಷೇತ್ರವಾದ ಅಮೇಥಿಯಲ್ಲಿ ಸೋತಿದ್ದಾರೆ. ಮಲ್ಲಿಕಾರ್ಜುನರಂಥ ಹಿರಿಯ ನಾಯಕರೇ ಸ್ವಕ್ಷೇತ್ರದಲ್ಲಿ ಸೋತಿದ್ದಾರೆ. ಪರ್ಯಾಯ ಶಕ್ತಿಗಳಾಗಿ ಗಮನ ಸೆಳೆದಿದ್ದ ಪ್ರಕಾಶ್ ರೈ, ಕನ್ಹಯ್ಯ ಕುಮಾರ್, ಪ್ರಕಾಶ್ ಅಂಬೇಡ್ಕರ್ ಮುಂತಾದ ಅಭ್ಯರ್ಥಿಗಳೆಲ್ಲರೂ ಸೋತಿದ್ದಾರೆ.

ಸರ್ವಾಧಿಕಾರಿ ಶಕ್ತಿಗಳು ನಮ್ಮ ದೇಶದ ಜನರ ಮಾನಸಿಕತೆಯ ಮೇಲೆ, ನಮ್ಮ ದೇಶದ ಸಾಮಾಜಿಕ ರಚನೆಯ ಮೇಲೆ, ನಮ್ಮ ದೇಶದ ಸಾಂಸ್ಥಿಕ ರಚನೆಗಳ ಮೇಲೆ, ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಜಯ ಸಾಧಿಸಿವೆ. ದೇಶದ ಪ್ರಮುಖ ಕಾರ್ಪೊರೇಟ್ ಶಕ್ತಿಗಳು ಬಿಜೆಪಿಯ ಜೊತೆ ಬಲವಾಗಿ ಕೈಗೂಡಿಸಿದ್ದಾರೆ. ಇವರಿಬ್ಬರ ಅಕ್ರಮ ಸಂತಾನವಾದ ಮಾಧ್ಯಮ ಭ್ರಮಾಲೋಕವನ್ನು ಸೃಷ್ಟಿಸುತ್ತಿದೆ. ಆಳಲು ಬೇಕಾದ ಅಭಿಪ್ರಾಯಗಳನ್ನು, ಓಟುಗಳನ್ನು, ಸೀಟುಗಳನ್ನು ಉತ್ಪಾದಿಸುವ ಸುಸ್ಥಿತ ಸ್ಥಿತಿಯಲ್ಲಿ ಅವರಿದ್ದಾರೆ. ಮತ್ತೊಂದೆಡೆ ಅದನ್ನು ಎದುರಿಸಬಲ್ಲ ರಾಜಕೀಯ ಪರ್ಯಾಯ ಈ ದೇಶಕ್ಕೆ ಇಲ್ಲವಾಗಿದೆ. ಜನರ ವಿಶ್ವಾಸವನ್ನು ಗೆಲ್ಲಬಲ್ಲ, ಜನರಿಗೆ ವಿಶ್ವಾಸ ಬರುವಂಥ ಪರಿಹಾರಗಳನ್ನು ಮುಂದಿಡುವಂಥ, ಜನರು ವಿಶ್ವಾಸ ಇಡುವಂಥ ರೀತಿಯಲ್ಲಿ ನಡೆದುಕೊಳ್ಳಬಲ್ಲ, ಜನರ ಸಂಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವಂತಹ ನಿಜವಾದ ಪರ್ಯಾಯ ರಾಜಕೀಯ ಶಕ್ತಿ ಇಲ್ಲವಾಗಿದೆ.

ಜನರ ವಿಶ್ವಾಸವನ್ನು ಗಳಿಸಿಕೊಳ್ಳುವುದರಲ್ಲಿ ಕಾಂಗ್ರೆಸ್ಸಿನಿಂದ ಹಿಡಿದು ಎಲ್ಲಾ ರಾಜಕೀಯ ಪಕ್ಷಗಳು ವಿಫಲಗೊಂಡಿವೆ. ದುರ್ಬಲ ವಿಪಕ್ಷಗಳಿಗಿಂತ ದೇಶ ಹಾಗೂ ಧರ್ಮದ ಬಗ್ಗೆ ಮಾತನಾಡುವ ಬಲಿಷ್ಟ ಪಕ್ಷ ಬಿಜೆಪಿ ಮತ್ತು ಮೋದಿ ಹೆಚ್ಚು ಆಕರ್ಷಿತರಾಗಿ ಕಾಣುತ್ತಿದ್ದಾರೆ. ಈ ಎಲ್ಲಾ ಆಳುವವರ ಬಣ್ಣವನ್ನು ಬಯಲುಗೊಳಿಸುವಂತಹ, ಜನರ ನಿಜವಾದ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ದೇಶದ ರಾಜಕಾರಣದ ಕೇಂದ್ರವನ್ನಾಗಿ ಮಾಡಬಲ್ಲಂಥ ಚಳವಳಿಗಳ ಅಲೆಯೂ ಇಲ್ಲವಾಗಿದೆ. ಈ ನಿರ್ವಾತ ಬಿಜೆಪಿಯ ಸಮೂಹ ಸನ್ನಿ ರಾಜಕಾರಣಕ್ಕೆ ವಿಪುಲ ಅವಕಾಶಗಳನ್ನು ಒದಗಿಸುತ್ತಿದೆ.

ಮೇಲ್ಕಂಡ ಕಠೋರ ವಾಸ್ತವವನ್ನು ಯಾವ ಮುಚ್ಚುಮರೆಯೂ ಇಲ್ಲದೆ ಕಣ್ಣು ತೆರೆದು ನಾವು ನೋಡಬೇಕಿದೆ. ವಿಚಲಿತಗೊಳ್ಳುವುದಲ್ಲ, ಚಿವುಟಿಕೊಂಡು ಮಂಪರಿಂದ ಹೊರಬರಬೇಕಿದೆ. ಹೆದರುವುದಲ್ಲ ವಾಸ್ತವವನ್ನು ಎದುರಿಸಲು ಸಿದ್ಧರಾಗಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಕರೆಯಲಾಗುವ ಈ ಬಲಾಢ್ಯರ ವ್ಯವಸ್ಥೆಯಲ್ಲಿ ದುಡಿಯುವವರು, ಬಡವರು, ಜನಪರರು ಗೆದ್ದು ಬರುವುದೇ ಕಷ್ಟ. ಇಡೀ ಸಮಾಜ, ಸರ್ಕಾರ, ಸಂಪತ್ತು, ಮಾಧ್ಯಮ ಅವರ ಕೈಯಲ್ಲಿರುವಾಗ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸುವುದು ಸುಲಭ ಸಾಧ್ಯವಿಲ್ಲ. ಒಂದು ವೇಳೆ ಚುನಾವಣೆಯಲ್ಲಿ ಸೋತರೂ ಸಮಾಜವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವ ವಿಕೃತ ಸಂತಾನ ಸೋತುಬಿಡುವುದಿಲ್ಲ. ಬೆನ್ನು ಮೂಳೆ ಇಲ್ಲದ, ಪರ್ಯಾಯ ಸತ್ವವಿಲ್ಲದ ರಾಜಕೀಯ ವಿಪಕ್ಷಗಳನ್ನು ನಂಬಿ ಕೂತರೂ ಈ ಕೆಲಸ ಆಗುವುದಿಲ್ಲ. ಪರ್ಯಾಯ ಪ್ರಜ್ಞೆಯನ್ನು ಜನರಲ್ಲಿ ಉದ್ದೀಪನಗೊಳಿಸಬಲ್ಲ ಪ್ರಬಲ ಚಳವಳಿಯನ್ನೂ ಕಟ್ಟದೆ ಪರ್ಯಾಯ ಅಭ್ಯರ್ಥಿಗಳಾಗಿ ನಿಲ್ಲುವ ಪ್ರಯತ್ನಗಳು ಯಾವ ಪ್ರಯೋಜನಕ್ಕೂ ಬರುವುದಿಲ್ಲ. ಹಾಗಿದ್ದರೆ ಮಾಡಬೇಕಾದುದೇನು?

ನಾವು ತುರ್ತಾಗಿ ಮಾಡಬೇಕಾದ್ದು, ಮಾಡಿಕೊಳ್ಳಬೇಕಾದದ್ದು ನಿಷ್ಠುರ ಆತ್ಮಾವಲೋಕನ. ಸರ್ವಾಧಿಕಾರಿ ಶಕ್ತಿಗಳನ್ನು ಮಣಿಸಬೇಕೆಂದು ಬಯಸಿದ, ಪ್ರಯತ್ನಿಸಿದ ನಾವೆಲ್ಲರೂ ನಮ್ಮ ಇದುವರೆಗಿನ ಪ್ರಯತ್ನಗಳನ್ನು ಬಿಚ್ಚು ಮನಸ್ಸಿನಿಂದ ತಿರುಗಿ ನೋಡಿಕೊಳ್ಳಬೇಕಾದ ಸಂದರ್ಭವಿದು. ಸತ್ವರಹಿತ ವಿಪಕ್ಷಗಳು ಸರ್ವಾಧಿಕಾರಿ ಶಕ್ತಿಗಳನ್ನು ಮಣಿಸುತ್ತವೆ ಎಂಬ ಭ್ರಮೆಯನ್ನು ಬೆಳೆಸಿಕೊಳ್ಳದೆ, ಕೂಡಲೇ ಚುನಾವಣೆಗೆ ನಿಂತು ಗೆಲ್ಲಬೇಕೆಂಬ ಶಾರ್ಟ್‍ಕಟ್ ಮಾರ್ಗಗಳನ್ನು ಹುಡುಕದೆ ತಾಳ್ಮೆಯ, ಯೋಜಿತ, ದೀರ್ಘಕಾಲೀನ ಹೋರಾಟಕ್ಕೆ ರಂಗ ಸಜ್ಜುಗೊಳಿಸಿಕೊಳ್ಳುವ ಕಾಲವಿದು.

ಸುಳ್ಳು ಮೇಲ್ಗೈ ಸಾಧಿಸಿದೆ, ಆದರೆ ನಮ್ಮ ದೇಶದಲ್ಲಿ ಸತ್ಯವಿನ್ನು ಸತ್ತಿಲ್ಲ. ಸರ್ವಾಧಿಕಾರಿ ಶಕ್ತಿಗಳು ಹೂಂಕರಿಸುತ್ತಿವೆ ಆದರೆ ಈ ನೆಲದೊಳಗಿನ ಪ್ರಜಾಪ್ರಭುತ್ವದ ಮೌಲ್ಯಗಳು ಮುರುಟಿಲ್ಲ. ಎಲ್ಲಾ ಸತ್ವಶಾಲಿ ಮನಸ್ಸುಗಳನ್ನು, ಶಕ್ತಿಶಾಲಿ ಹೋರಾಟದ ಸೆಲೆಗಳನ್ನು ಒಂದುಗೂಡಿಸಿಕೊಂಡಲ್ಲಿ, ಸರಿಯಾದ ಸಮಗ್ರವಾದ ಯೋಜನೆ ಜೊತೆ, ತಾಳ್ಮೆಯಿಂದ ಕೆಲಸ ಮಾಡಿದಲ್ಲಿ ಇಡೀ ದೇಶ ನಿದ್ದೆಯಿಂದ ಮೈಕೊಡವಿ ಏಳುವಂಥ ಚಳವಳಿಯನ್ನು ದೇಶದ ಹೋರಾಟಗಾರರೆಲ್ಲರೂ ಸೇರಿ ಹುಟ್ಟುಹಾಕಬಹುದು.

ಒಂದಷ್ಟು ವರ್ಷ ಭಾವುಕ ಹಾಗೂ ಭ್ರಾಮಕ ರಾಜಕಾರಣದ ಮೇಲೆ ಜನರನ್ನು ತೇಲಿಸಿಕೊಂಡು ಹೋಗಬಹುದು. ಆದರೆ ಬದುಕು ಭ್ರಮೆಗಳ ಮೇಲೆ ನಡೆಯುವುದಿಲ್ಲ. ಕೃಷಿ ಬಿಕ್ಕಟ್ಟು ಭ್ರಮೆಯಲ್ಲ, ನಿರುದ್ಯೋಗ ಭ್ರಮೆಯಲ್ಲ, ವೇತನಗಳ ಕಡಿತ, ದಮನಿತರ ಮೇಲಿನ ದಾಳಿ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರಗಳು, ಕುಡಿತ, ಬೆಲೆ ಏರಿಕೆ, ಮೊಟಕುಗೊಳ್ಳುತ್ತಿರುವ ಸಂವಿಧಾನಾತ್ಮಕ ಹಕ್ಕುಗಳು ಯಾವುದೂ ಭ್ರಮೆಯಲ್ಲ. ಎಲ್ಲವೂ ವರ್ಷವರ್ಷಕ್ಕೂ ಗಂಭೀರ ಸ್ವರೂಪ ತಾಳುತ್ತಿರುವ, ಜನರ ಬದುಕನ್ನು ಸುಡುತ್ತಿರುವ ಜೀವಂತ ವಾಸ್ತವಗಳು. ಜನರ ಈ ಜೀವಂತ ಸಮಸ್ಯೆಗಳ ಮೇಲೆ ನಮ್ಮ ಗಮನ ಕೇಂದ್ರೀಕರಿಸಿ, ಆಯಾ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಶಕ್ತಿಗಳನ್ನೆಲ್ಲಾ ಒಂದುಗೂಡಿಸಿ, ಜನರ ಜೊತೆ ನಿಂತು ಕೆಲಸ ಮಾಡುವ ಶಕ್ತಿಗಳು ಕ್ರಿಯಾಶೀಲರಾಗಬೇಕು. ಹಾಗೆ ಮಾಡಿದಾಗ ಮುಂದಿನ ಕೆಲವು ವರ್ಷಗಳಲ್ಲಿ ವಿವಿಧ ಜನ ಸಮುದಾಯಗಳ ಹೋರಾಟದ ಧಾರೆಗಳು ಈ ನೆಲದಲ್ಲಿ ಹರಿಯತೊಡಗುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ಎಲ್ಲಾ ಧಾರೆಗಳು ಸಾಮಾನ್ಯ ಅಜೆಂಡಾದ ಮೇಲೆ ಎದ್ದು ನಿಂತಲ್ಲಿ ಅದು ಜನರ ಸಂಯುಕ್ತ ಶಕ್ತಿಯಾಗಿ ಹೊರಹೊಮ್ಮುತ್ತದೆ. ನೈಜ ಹಾಗೂ ಅತ್ಯಗತ್ಯ ಹಕ್ಕುಗಳಿಗಾಗಿ ಮೂಡಿಬರುವ ಇಂತಹ ಪ್ರಬಲ ಜನರ ಶಕ್ತಿಯೇ ಸರ್ವಾಧಿಕಾರಿ ಶಕ್ತಿಗಳನ್ನು ಎದುರಿಸಬಲ್ಲದು, ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡು ಜನರ ಅಜೆಂಡ ದೇಶದ ಅಜೆಂಡ ಆಗುವಂತೆ ಮಾಡಬಲ್ಲದು. ಇದಕ್ಕಾಗಿ ರಾಜ್ಯದ, ದೇಶದ ಹೋರಾಟನಿರತ ಶಕ್ತಿ ಒಗ್ಗೂಡಬೇಕು, ಹಂತಹಂತವಾಗಿ ಸರ್ವಾಧಿಕಾರಿಗಳನ್ನು ಮಣಿಸಬಲ್ಲಂಥ ಯುಕ್ತಿ ರೂಪುಗೊಳ್ಳಬೇಕು.

ಆದರೆ ಇದನ್ನು ಮಾಡುವುದು ಹೇಗೆ? ಸಾಧಿಸುವುದು ಹೇಗೆ? ಈ ಪ್ರಶ್ನೆಗೆ ಉತ್ತರ ನಮ್ಮ ಆತ್ಮಾವಲೋಕನದಿಂದ ಹುಟ್ಟಬೇಕು, ನಮ್ಮೊಳಗಿನ ಪ್ರಾಮಾಣಿಕ ಮತ್ತು ಆಳವಾದ ಮಂಥನದಿಂದ ಹುಟ್ಟಬೇಕು. ಈ ಅತ್ಯಗತ್ಯ ತುರ್ತು ಕರ್ತವ್ಯಕ್ಕೆ ನಮ್ಮನ್ನು ನಾವು ಒಡ್ಡಿಕೊಂಡಲ್ಲಿ, ಹೊಸ ಬಯಲಿಗೆ ನಮ್ಮನ್ನು ತೆರೆದುಕೊಂಡಲ್ಲಿ ಹೊಸ ಹಾದಿ ಖಂಡಿತ ಗೋಚರಿಸುತ್ತದೆ. ಕಗ್ಗತ್ತಲಿನೊಳಗಿಂದಲೇ ಬೆಳಕು ಹುಟ್ಟುತ್ತದೆ. ಇಂದಿನ ಸಂದಿಗ್ಧ, ಸಂಕಷ್ಟಮಯ ಪರಿಸ್ಥಿತಿಯೇ ಹೊಸ ಹಾದಿಯ ಹುಟ್ಟಿಗೆ ಕಾರಣವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...