Homeಸಿನಿಮಾಕ್ರೀಡೆಹಿಮಾಳ ಸಾಧನೆ ನುಂಗಿಹಾಕಿದ ಭಾರತದ ಜಾತಿ ಮನಸ್ಸು

ಹಿಮಾಳ ಸಾಧನೆ ನುಂಗಿಹಾಕಿದ ಭಾರತದ ಜಾತಿ ಮನಸ್ಸು

- Advertisement -
- Advertisement -

ಭತ್ತದ ಗದ್ದೆಯ ತೆವರಿಗಳ ಮೇಲೆ ಬರಿಗಾಲಲ್ಲಿ ಓಡುತ್ತಿದ್ದ ಹಿಮಾದಾಸ್ ಈಗ ವಿಶ್ವ ಅಥ್ಲೆಟಿಕ್ ಜೂನಿಯರ್ ಚಾಂಪಿಯನ್‍ಶಿಪ್‍ನ ಚಿನ್ನದ ಪದಕ ಮುಡಿಗೇರಿಸಿಕೊಂಡ ಓಟದ ಜಿಂಕೆ. ಅಸ್ಸಾಂನ ನಾಗಾಂವ ಜಿಲ್ಲೆಯ ಧಿಂಗ್ ಹಳ್ಳಿಯ ಬಡರೈತ ಕುಟುಂಬದ ಈ ಕೂಸಿಗೆ ಕ್ರೀಡಾ ಹಿನ್ನೆಲೆ ಇಲ್ಲ. ಹುಟ್ಟಿದೂರಿನಲ್ಲಿ ಕ್ರೀಡೆಯ ಮೂಲ ಸೌಕರ್ಯದ ಯಾವ ಸವಲತ್ತೂ ಇರಲಿಲ್ಲ. ಇಂಥಾ ಹುಡುಗಿ ಇಡೀ ಜಗತ್ತೇ ನಿಬ್ಬೆರಗಾಗುವಂಥ ಸಾಧನೆ ಮಾಡಿದ್ದಾಳೆ. ಭಾರತದ ಕ್ರೀಡಾ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಚಿನ್ನ ಪಡೆದವಳು ಹಿಮಾ ದಾಸ್!

ದೇಶಕ್ಕೆ ವಿಶ್ವ ಚಾಂಪಿಯನ್ ಪಟ್ಟ ತಂದುಕೊಟ್ಟ ಹಿಮಾಳ ಬಗ್ಗೆ ದೇಶಾದ್ಯಂತ ಪ್ರಶಂಸೆಯ ಮಹಾಪೂರವೇ ಹರಿದು ಬಂತು. ಆಡಳಿತ ಪಕ್ಷ ವಿರೋಧ ಪಕ್ಷಗಳೆಲ್ಲವೂ ಹಿಮಾಳಿಗೆ ಅಭಿನಂದನೆ ಹೇಳಲು ಪೈಪೋಟಿಗೆ ಬಿದ್ದವು. ಕ್ರೀಡಾಲೋಕದ ದಿಗ್ಗಜರು, ಸಿನಿಮಾ ತಾರೆಯರು, ಸಾಹಿತ್ಯವಂತರು – ಹೀಗೆ ಎಲ್ಲರೂ ಅಭಿನಂದನೆಯ ಹೊಳೆಯನ್ನೇ ಹರಿಸಿದರು. ಸಾಮಾಜಿಕ ಜಾಲತಾಣಗಳಲ್ಲಂತೂ ಅಭಿನಂದನೆಯ ಪ್ರವಾಹವೇ ಹರಿಯಿತು. ಪ್ರಪ್ರಥಮ ಬಾರಿಗೆ ಭಾರತದ ಹುಡುಗಿ ವಿಶ್ವ ಚಾಂಪಿಯನ್ ಆಗಿ ಚಿನ್ನದ ಪದಕ ಗಳಿಸಿದ್ದರಿಂದ ಈ ಅಭಿಮಾನದ ಹೊಳೆ ಸಹಜವೇ ಆಗಿತ್ತು.

ಇಂಥಾ ಸಂಭ್ರಮದ ಗಳಿಗೆಯಲ್ಲೇ ಜಗತ್ತಿನೆದುರು ಭಾರತ ತಲೆತಗ್ಗಿಸಬೇಕಾದ ವಿದ್ಯಮಾನವೂ ಸಂಭವಿಸಿದೆ.
ಕ್ರೀಡಾ ಆಗಸದಲ್ಲಿ ದಿಡೀರ್ ಮಿಂಚಿನಂತೆ ಬಂದೆರಗಿದ ಹಿಮಾದಾಸ್ ಯಾರು, ಏನು ಎಂಬ ಬಗ್ಗೆ ಹೊರ ಜಗತ್ತಿಗಿರಲಿ, ಭಾರತೀಯರಿಗೇ ಗೊತ್ತಿರಲಿಲ್ಲ. ಹೀಗಾಗಿ ಕುತೂಹಲಭರಿತ ಭಾರತೀಯರು ಈ ಹೊಸ ತಾರೆಯ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಸರ್ಚ್ ಇಂಜಿನ್‍ನ ಮೊರೆಹೋದರು. ಹಿಮಾದಾಸ್ ಯಾರು? ಯಾವ ಊರು? ಹಿಂದಿನ ಕ್ರೀಡಾ ಸಾಧನೆ ಏನು? ಆಕೆಯ ಶಿಕ್ಷಣ ಎಲ್ಲಿ ನಡೆದಿದೆ? ತರಬೇತು ನೀಡಿದವರು ಯಾರು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿರಬಹುದೆಂದು ನೀವು ಸಹಜವಾಗಿ ಊಹಿಸುತ್ತೀರಿ. ಆದರೆ ಗೂಗಲ್‍ನಲ್ಲಿ ಹೆಚ್ಚಿನ ಮಂದಿ ಹುಡುಕಿದ್ದು ಆಕೆಯ ಜಾತಿಯನ್ನು! ಭಾರತೀಯರಿಗೆ ಯಾಕೆ ಅಷ್ಟೊಂದು ಕುತೂಹಲ ಗೊತ್ತೆ? ಆಕೆಯ ಜಾತಿ ಯಾವುದೆಂದು ಪತ್ತೆಯಾದರೆ ಅದಕ್ಕೆ ತಕ್ಕಂತೆ ಅವಳಿಗೆ ಬಿರುದು ಸನ್ಮಾನಗಳನ್ನು ಕೊಡಬಹುದು. ಆಕೆಯನ್ನು ತಮ್ಮ ಜಾತಿಯ ‘ಹಿರಿಮೆ’ಗೆ ಗರಿಯನ್ನಾಗಿಯೂ, ಐಕಾನ್ ಆಗಿಯೂ ಬಳಸಿಕೊಳ್ಳಬಹುದು. ಇದು ವಿಚಿತ್ರ ಅನಿಸಬಹುದು. ಆದರೆ ಇದುವೇ ಭಾರತದ ಅತ್ಯಂತ ಸಹಜ ಸ್ಥಿತಿ. ಭಾರತೀಯರ ಇಂಥಾ ಜಾತಿ ಬುದ್ದಿಯ ಬಗ್ಗೆ ಜಗತ್ತಿನ ಸಾವಿರಾರು ಮಂದಿ ಛೀಮಾರಿ ಹಾಕಿದ್ದಾರೆ.
ಗೂಗಲ್‍ನಲ್ಲಿ ಹಿಮಾ ದಾಸ್ ಎಂದು ಸರ್ಚ್ ಕೊಟ್ಟರೆ ನಮಗೆ ಮೊದಲು ಅದರ ನ್ಯೂಸ್ ಫೀಡ್‍ನ ಆಯ್ಕೆಗಳು ಕಾಣಸಿಗುತ್ತವೆ. ಇದೇ ವಿಷಯದ ವಿಭಿನ್ನ ಆಯಾಮಗಳ ಬಗ್ಗೆ ಅತಿ ಹೆಚ್ಚು ಹುಡುಕಾಟ ನಡೆಸಿರುವ ವಿಷಯ ಪಟ್ಟಿಯನ್ನು ಅನುಕ್ರಮವಾಗಿ ಗೂಗಲ್ ನಿಮಗೆ ಒದಗಿಸುತ್ತದೆ. ಹೀಗೆ ಭಾರತೀಯರ ಜಾತಿವಾದಿ ಮನಸ್ಥಿತಿ ಸರ್ಚ್ ಲಿಸ್ಟ್‍ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಹಿಮಾ ದಾಸ್‍ಳ ಪ್ರತಿಭೆ ವಿಶ್ವಮಟ್ಟದಲ್ಲಿ ಸಾಬೀತಾಗಿದೆಯಲ್ಲಾ? ಆಕೆಯ ಪ್ರತಿಭೆಯನ್ನು ಗುರುತಿಸಿದರಷ್ಟೇ ಸಾಲದೆ? ಇಲ್ಲ. ಆಕೆಯ ಜಾತಿ ಯಾವುದೆಂದು ತಿಳಿದುಕೊಂಡ ನಂತರವೇ ಆಕೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕೋ ಬೇಡವೋ ಎಂದು ನಿರ್ಧರಿಸಲು ಬಹುಶಃ ಈ ಮಂದಿ ನಿರ್ಣಯಿಸಿದ್ದಿರಬಹುದು. ಇದು ಭಾರತೀಯ ಮನಸ್ಥಿತಿ.

ಭಾರತದಲ್ಲಿ ಜಾತಿ ವ್ಯವಸ್ಥೆ ಮುಂದುವರೆದಿರುವುದಕ್ಕೆ ಶಿಕ್ಷಣದ ಕೊರತೆ ಪ್ರಮುಖ ಕಾರಣ ಎಂದೂ, ಎಲ್ಲೋ ಮೂಲೆಯ ಕುಗ್ರಾಮಗಳಲ್ಲಿ ಮಾತ್ರ ಜಾತಿ ವ್ಯವಸ್ಥೆ ಉಳಿದುಕೊಂಡಿದೆ, ನಗರಪ್ರದೇಶಗಳಲ್ಲಿ ಜಾತಿ ವ್ಯವಸ್ಥೆ ನಾಮಾವಶೇಷವಾಗಿದೆಯೆಂತಲೂ ಎಂದು ಅನೇಕ ಆಸ್ಥಾನ ಪಂಡಿತರು ಸದಾ ತೌಡು ಕುಟ್ಟುತ್ತಾರೆ. ಹಾಗಾದರೆ ಜಾಲತಾಣದಲ್ಲಿ ಹಿಮಾಳ ಜಾತಿ ಕಂಡುಕೊಳ್ಳಲು ಪ್ರಯಾಸಪಟ್ಟವರು ಅವಿದ್ಯಾವಂತರೆ? ಅಥವಾ ಕುಗ್ರಾಮದ ಗಮಾರರೆ? ಹೀಗೆ ಕ್ಯಾಸ್ಟ್ ಸರ್ಚ್ ಮಾಡಿದ ಬಹುತೇಕರು ತಮ್ಮ ಕೈಗಳಲ್ಲಿ ಸ್ಮಾರ್ಟ್ ಫೋನ್ ಹಿಡಿದಿರುವ ಸುಶಿಕ್ಷಿತ ನಗರವಾಸಿಗಳೇ.

ವಿಪರ್ಯಾಸವೆಂದರೆ, ಸಾರ್ವಜನಿಕ ಚರ್ಚೆಗಳಲ್ಲಿ ‘ಜಾತಿ ಎಲ್ಲಿದೆ ಹೇಳಿ?’ ಎಂಬ ವಿತಂಡ ವಾದ ಹೂಡುವವರು ಇದೇ ಮಂದಿ! ನಮ್ಮ ಸಮಾಜದಲ್ಲಿ ಇಂಥಾ ಆಷಾಡಭೂತಿತನ ರಕ್ತಗತವಾಗಿಬಿಟ್ಟಂತಿದೆ.

ಪಿಟಿ ಉಷಾ ವಿಚಾರದಲ್ಲೂ ಇದೇ ಆಶ್ಚರ್ಯ ನಿಮಗೆ ಕಾದಿರುತ್ತದೆ. ಉಷಾ ಅಥ್ಲೀಟ್‍ನಿಂದ ನಿವೃತ್ತಿಯಾಗಿ ದಶಕ ಕಳೆದಿದ್ದರೂ ಇಂದಿಗೂ ಆಕೆಯ ಜಾತಿ ತಿಳಿದುಕೊಳ್ಳಲು ಹೆಚ್ಚಿನ ಜನ ಆಸಕ್ತಿ ತೋರುತ್ತಿದ್ದಾರೆ. 2016ರ ರಿಯೋ ಒಲಂಪಿಕ್ಸ್‍ನ ಬ್ಯಾಡ್ಮಿಂಟನ್‍ನಲ್ಲಿ ಪಿವಿ ಸಿಂಧು ಬೆಳ್ಳಿ ಪದಕ ಗಳಿಸಿದಾಗಲೂ ನಮ್ಮ ಹೆಮ್ಮೆಯ ಭಾರತೀಯರು ತಮ್ಮ ಚಿಲ್ಲರೆ ಜಾತಿ ಬುದ್ದಿ ತೋರಿಸಿದ್ದರು.

ಈ ಮೇಲಿನ ಉದಾಹರಣೆಗಳೆಲ್ಲ ಜಾತಿಯ ಬೇರುಗಳು ಎಷ್ಟು ಆಳದಲ್ಲಿವೆ ಎಂಬುದನ್ನು ನಿರ್ವಿವಾದಿತವಾಗಿ ಎತ್ತಿ ತೋರಿಸುತ್ತಿವೆ. ಮೋದಿ ಭಕ್ತಪಡೆ ಭಾರತ ‘ವಿಶ್ವ ಗುರು’ ಎಂದು ಬೊಬ್ಬಿಡುತ್ತಿದ್ದಾರೆ. ಆದರೆ ಭಾರತ ಸಾಗಬೇಕಾದ ದೂರ ಇನ್ನೂ ಬಹಳವಿದೆ ಎಂಬುದನ್ನು ಹಿಮಾ ದಾಸ್ ಎಪಿಸೋಡ್ ಅನುಮಾನಕ್ಕೆಡೆಯಿಲ್ಲದಂತೆ ತೋರಿಸಿಕೊಟ್ಟಿದೆ.

ಸಾಮಾನ್ಯ ಜನರ ಮಾತು ಒತ್ತಟ್ಟಿಗಿರಲಿ, ಅಥ್ಲೀಟ್ ಫೆಡರೇಷನ್ ಇಂಡಿಯ ಸಂಸ್ಥೆ ನಡೆದುಕೊಂಡ ರೀತಿ ನೋಡಿ. ಅಭಿನಂದನೆಗಳನ್ನು ಹೇಳಲಿಕ್ಕಾಗಿ ಟ್ವೀಟ್ ಮಾಡಿದ ಎಎಫ್‍ಐ “ಇಂಗ್ಲಿಷ್ ಮಾತಾಡಲು ಸರಿಯಾಗಿ ಬರದಿದ್ದರೂ ಕೂಡ ಹಿಮಾ ಉತ್ತಮ ಸಾಧನೆ ಮಾಡಿದ್ದಾಳೆ… ಹಿಮಾ ದಾಸ್‍ಗೆ ಅಭಿನಂದನೆಗಳು…”. ಎಎಫ್‍ಐನ ಧೋರಣೆಗೆ ಟ್ವಿಟ್ಟಿಗರು ‘ಹಿಮಾ ದಾಸ್ ಹೋಗಿದ್ದುದು ಓಟದ ಸ್ಪರ್ದೆಗೋ ? ಅಥವಾ ಇಂಗ್ಲಿಷ್ ಭಾಷಾ ಪಾಂಡಿತ್ಯ ಸ್ಪರ್ಧೆಗೋ?’ ಎಂದು ತಿರುಗೇಟು ನೀಡಿದ್ದಾರೆ.

ಆದರೆ ಫಿನ್‍ಲೆಂಡ್‍ನ ವಿದೇಶಿ ನೆಲದಲ್ಲಿ ನೆಲೆಸಿರುವ ಕೆಲವು ಭಾರತೀಯರು ಈ ಚಿನ್ನದ ಹುಡುಗಿಗೆ ಏನಾದರೂ ಉಡುಗೊರೆ ಕೊಡಬೇಕೆಂದು ತಮ್ಮ ವಾಟ್ಸಪ್ ಗ್ರೂಪಿನಲ್ಲಿ ಚರ್ಚಿಸಿದರು. ಒಂದಷ್ಟು ಹಣವನ್ನು ಬಹುಮಾನವಾಗಿ ಕೊಡಲು ತೀರ್ಮಾನಿಸಿ ಅಂದೇ ಒಂದು ಲಕ್ಷ ರೂನಷ್ಟು ಹಣ ಸಂಗ್ರಹಿಸಿದರು. ಹಿಮಾ ದಾಸ್‍ಳನ್ನು ಭೇಟಿಯಾಗಿ ಅಭಿನಂದಿಸಿ, ಆತಿಥ್ಯ ನೀಡಿ ಸತ್ಕರಿಸಿದರು. ಆದರೆ ಹಣವನ್ನು ಸ್ಥಳದಲ್ಲೇ ಹಸ್ತಾಂತರಿಸಲಿಲ್ಲ. ಯಾಕೆಂದರೆ ಆ ಹಣ ಯಾರ ಕೈಗೆ ಸೇರುತ್ತದೋ ಎಂಬುದು ಅವರಿಗೆ ಖಾತ್ರಿಯಿರಲಿಲ್ಲ. ಹಾಗಾಗಿ ಆ ಹಣವನ್ನು ನೇರವಾಗಿ ಹಿಮಾಳ ಖಾತೆಗೆ ವರ್ಗಾಯಿಸಲು ತೀರ್ಮಾನಿಸಿದ್ದಾರೆ. ಅರ್ಹ ವ್ಯಕ್ತಿಗೆ ಸೇರಬೇಕಾದ ಹಣ ಮತ್ಯಾರೋ ಮಧ್ಯವರ್ತಿಗಳ ಪಾಲಾಗುತ್ತದೆಂಬುದು ಅವರ ಈ ತೀರ್ಮಾನಕ್ಕೆ ಕಾರಣ.

ಇನ್ನು ಹಿಮಾಳ ವೈಯುಕ್ತಿಕ ಹಿನ್ನೆಲೆಯನ್ನು ಗಮನಿಸಿದರೆ ಅವಳ ಸಾಧನೆಯ ಮಹತ್ವ ನಮ್ಮ ಅರಿವಿಗೆ ಬರುತ್ತದೆ. ಶಾಲಾ ದಿನಗಳಲ್ಲಿ ಹುಡುಗರ ತಂಡದಲ್ಲಿ ಪುಟ್ಬಾಲ್ ಆಡುತ್ತಿದ್ದ ಹಿಮಾ ಫಿನ್ಲೆಂಡ್‍ನಲ್ಲಿ ನಡೆದ 20 ವರ್ಷದೊಳಗಿನ ವಿಶ್ವ ಅಥ್ಲೇಟಿಕ್ ಜೂನಿಯರ್ಸ್ ಮಹಿಳಾ ವಿಭಾಗದ 400 ಮೀಟರ್ ಓಟದಲ್ಲಿ ಕೇವಲ 51.46 ಸೆಕೆಂಡುಗಳಲ್ಲಿ ಚಿನ್ನದ ಜಯ ಸಾಧಿಸಿ ದಾಖಲೆ ಬರೆದ ಭಾರತದ ಮೊದಲ ಅಥ್ಲೇಟ್.

16 ಜನರ ಅವಿಭಕ್ತ ಕುಟುಂಬದಲ್ಲಿ ಜೋನಿಲಾ ಮತ್ತು ರಂಜಿತ ದಾಸ್ ರೈತ ದಂಪತಿಗಳ ಕೂಸು ಹಿಮ. ಇಡೀ ಕುಟುಂಬ ಇರುವ ಭತ್ತದ ಗದ್ದೆಯಲ್ಲಿ ದುಡಿದರಷ್ಟೇ ಆದಾಯ. ಆದರೆ ಇದಾವುದು ಹಿಮಾ ಸಾಧನೆಗೆ ಅಡ್ಡಿಯಾಗಲೇ ಇಲ್ಲ. ಫುಟ್ಬಾಲ್ ಕನಸು ಕಂಡು, ವಾಸ್ತವದಲ್ಲಿ ಅಥ್ಳೇಟಿಕ್ಸ್‍ನಲ್ಲಿ ಹೆಜ್ಜೆಯಿರಿಸಿದ ಹಿಮಾಗೆ ಗುವಾಹಟಿಯ ಯುವಜನ ಕ್ರೀಡಾ ಇಲಾಖೆಯ ತರಬೇತುದಾರ ನಿಪೋ ದಾಸ್ ಬೆಂಬಲವಾಗಿ ನಿಂತರು. ರಾಷ್ಟ್ರೀಯ ತಂಡದ ಕೋಚ್ ಬಸಂತ ಸಿಂಗ್ ಹಿಮಾಳ ಹಾದಿಯನ್ನು ಮತ್ತಷ್ಟು ಸ್ಪಷ್ಟ ಮತ್ತು ನಿಚ್ಚಳವಾಗಿಸಿದರು. ಪಿ.ಟಿ.ಉಷಾ ಕೂಡ ಹಿಮಾಳ ಜೊತೆಯಲ್ಲೇ ಇದ್ದು ಆಕೆಯನ್ನು ಹುರಿದುಂಬಿಸಿದ್ದರು. ಈ ಎಲ್ಲರ ಶ್ರಮವನ್ನು ನಾವು ಗೌರವದಿಂದ ನೆನೆಯಬೇಕು.

ಹಿಮಾ ದಾಸ್ ಒಂದು ಅಂಶವನ್ನಂತೂ ಅನುಮಾನಕ್ಕೆಡೆಯಿಲ್ಲದಂತೆ ಸಾಬೀತುಪಡಿಸಿದ್ದಾಳೆ. ಭಾರತಕ್ಕೆ ಚಿನ್ನದ ಪದಕಗಳನ್ನು ಗಳಿಸಬಲ್ಲ ಪ್ರತಿಭೆಗಳು ಮಹಾನಗರಗಳ ಕಾನ್ವೆಂಟುಗಳಲ್ಲಿ, ಭವ್ಯವಾದ ಮಹಲುಗಳಲ್ಲಿ ಇರುವುದಿಲ್ಲ; ನಮ್ಮ ಹಳ್ಳಿಗಾಡುಗಳಲ್ಲಿ, ಭತ್ತದ ಗದ್ದೆಗಳಲ್ಲಿ, ಆದಿವಾಸಿಗಳ ಹಾಡಿಗಳಲ್ಲಿಯೂ ಇದ್ದಾರೆ. ಆದರೆ ಅಲ್ಲಿನ ಪ್ರತಿಭೆಗಳನ್ನು ಹುಡುಕುವ ಮನಸ್ಸಿದೆಯೆ?

  • – ರೂಪಾ ಕೆ. ಮತ್ತಿಕೆರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...

ಚೆನ್ನೈನಲ್ಲಿ ಮಾಸಿಕ ಸಹಾಯಧನ ಹೆಚ್ಚಿಸುವಂತೆ ಹೋರಾಟ ನಡೆಸುತ್ತಿದ್ದ ಅಂಗವಿಕಲರ ಮೇಲೆ ಪೊಲೀಸ್ ದೌರ್ಜನ್ಯದ ಆರೋಪ

ಚೆನ್ನೈ: ರಾಜ್ಯ ಸರ್ಕಾರದಿಂದ ನೀಡುತ್ತಿರುವ ಮಾಸಿಕ ಸಹಾಯಧನ ಹೆಚ್ಚಿಸುವಂತೆ ಒತ್ತಾಯಿಸಿ ಚೆನ್ನೈನಲ್ಲಿ ಅಂಗವಿಕಲರು ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.  ಅಂಗವಿಕಲರು ನಡೆಸುತ್ತಿದ್ದ ಈ ಪ್ರತಿಭಟನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಹಲವಾರು ಪ್ರತಿಭಟನಾಕಾರರನ್ನು...

ರಾಜ್ಯಸಭೆ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ; ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ

10 ರಾಜ್ಯಗಳಿಂದ ಖಾಲಿ ಇರುವ 37 ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಬುಧವಾರ ವೇಳಾಪಟ್ಟಿ ಪ್ರಕಟಿಸಿದೆ. ಆಯೋಗದ ಪ್ರಕಾರ, ಮಾರ್ಚ್ 16 ರಂದು ಬೆಳಿಗ್ಗೆ 9:00...

ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಮಂಗಳವಾರ ಲಕ್ನೋದ ಸರಸ್ವತಿ ಶಿಶು ಮಂದಿರದಲ್ಲಿ ನಡೆದ ಸಾಮಾಜಿಕ ಸಾಮರಸ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಹಿಂದೂ...

5% ಮುಸ್ಲಿಂ ಮೀಸಲಾತಿ ಪ್ರಕ್ರಿಯೆ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ

ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಗಾಗಿ ಜಾತಿ ಪರಿಶೀಲನೆ ಮತ್ತು ಪ್ರಮಾಣೀಕರಣ ಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಸರ್ಕಾರ ಮಂಗಳವಾರ (ಫೆ.17) ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ತಕ್ಷಣದ ಬದಲಾವಣೆಯನ್ನು ತರದಿದ್ದರೂ,...

‘ಆರ್‌ಎಸ್‌ಎಸ್ ನೋಂದಣಿಗೆ ಕಾಂಗ್ರೆಸ್ ಕಾನೂನು ತರಲಿದೆ’: ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತ ತಮ್ಮ ಹೇಳಿಕೆಗಳನ್ನು ಮತ್ತು ಕರಾವಳಿ ಕರ್ನಾಟಕದ ಹೂಡಿಕೆಗಳ ಮೇಲೆ ಕೋಮು ಉದ್ವಿಗ್ನತೆ ಪರಿಣಾಮ...

ವಿನೋದ್ ಅದಾನಿ ಸಹಚರರ ವಿರುದ್ಧ ತನಿಖೆ ನಡೆಸಿದ ಇಟಾಲಿಯನ್ ಬ್ಯಾಂಕ್; ಅನುಮಾನಾಸ್ಪದ ‘ಹೆಡ್ಜ್ ಫಂಡ್’ ಹೂಡಿಕೆ ಪತ್ತೆ

ಜನವರಿ 2023 ರಲ್ಲಿ ಹಿಂಡೆನ್‌ಬರ್ಗ್‌ ರಿಸರ್ಚ್ ವರದಿಯ ಬೆನ್ನಲ್ಲೇ, ಇಟಲಿಯ ಅತಿದೊಡ್ಡ ಬ್ಯಾಂಕ್ 'ಇಂಟೆಸಾ ಸ್ಯಾನ್ಪೋಲೊ' ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರ ಇಬ್ಬರು ಸಹಚರರನ್ನು...

‘ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ’ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

"ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು, ಅವರನ್ನು ಚರಂಡಿ ಕಡೆಗೆ ಅಥವಾ ಮೋರಿಯ ಅಡಿಗೆ ಎಳೆಯುವುದು 'ಅತ್ಯಾಚಾರ ಅಥವಾ ಅತ್ಯಾಚಾರ ಯತ್ನವಲ್ಲ" ಎಂಬ ಅಲಹಾಬಾದ್‌ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪಿನ್ನು ಸುಪ್ರೀಂ...

‘ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ನಾವು ನಿಮ್ಮಿಂದ ಶಕ್ತಿ ಪಡೆಯುತ್ತೇವೆ’: ಕೇರಳ ಸಮ್ಮೇಳನದಲ್ಲಿ ಫಾರೂಕ್ ಅಬ್ದುಲ್ಲಾ ಭಾವುಕ ಮಾತು

"ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ಮತ್ತು ಅದು ಸ್ವತಂತ್ರವಾಗಿಯೇ ಉಳಿದಿದೆ ಮತ್ತು ಅಭಿವೃದ್ಧಿ ಹೊಂದುತ್ತದೆ ಮತ್ತು ಬಲಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ನಿಮ್ಮಿಂದ ಶಕ್ತಿಯನ್ನು ಪಡೆಯುತ್ತೇವೆ. ನಾವು ನಿಮ್ಮನ್ನು ನೋಡುತ್ತೇವೆ...

ದತ್ತಾಂಶ ಸಂರಕ್ಷಣಾ ಕಾನೂನಿನಡಿಯಲ್ಲಿ ಆರ್‌ಟಿಐ ತಿದ್ದುಪಡಿಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯ ಮೂಲಕ ಪರಿಚಯಿಸಲಾದ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿಯನ್ನು ತಡೆಹಿಡಿಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ ಎಂದು 'ಬಾರ್ ಮತ್ತು ಬೆಂಚ್' ವರದಿ ಮಾಡಿದೆ. ಸಾರ್ವಜನಿಕ ಹಿತಾಸಕ್ತಿಯ ಆಧಾರದ...