Homeಸಿನಿಮಾಕ್ರೀಡೆಹಿಮಾಳ ಸಾಧನೆ ನುಂಗಿಹಾಕಿದ ಭಾರತದ ಜಾತಿ ಮನಸ್ಸು

ಹಿಮಾಳ ಸಾಧನೆ ನುಂಗಿಹಾಕಿದ ಭಾರತದ ಜಾತಿ ಮನಸ್ಸು

- Advertisement -
- Advertisement -

ಭತ್ತದ ಗದ್ದೆಯ ತೆವರಿಗಳ ಮೇಲೆ ಬರಿಗಾಲಲ್ಲಿ ಓಡುತ್ತಿದ್ದ ಹಿಮಾದಾಸ್ ಈಗ ವಿಶ್ವ ಅಥ್ಲೆಟಿಕ್ ಜೂನಿಯರ್ ಚಾಂಪಿಯನ್‍ಶಿಪ್‍ನ ಚಿನ್ನದ ಪದಕ ಮುಡಿಗೇರಿಸಿಕೊಂಡ ಓಟದ ಜಿಂಕೆ. ಅಸ್ಸಾಂನ ನಾಗಾಂವ ಜಿಲ್ಲೆಯ ಧಿಂಗ್ ಹಳ್ಳಿಯ ಬಡರೈತ ಕುಟುಂಬದ ಈ ಕೂಸಿಗೆ ಕ್ರೀಡಾ ಹಿನ್ನೆಲೆ ಇಲ್ಲ. ಹುಟ್ಟಿದೂರಿನಲ್ಲಿ ಕ್ರೀಡೆಯ ಮೂಲ ಸೌಕರ್ಯದ ಯಾವ ಸವಲತ್ತೂ ಇರಲಿಲ್ಲ. ಇಂಥಾ ಹುಡುಗಿ ಇಡೀ ಜಗತ್ತೇ ನಿಬ್ಬೆರಗಾಗುವಂಥ ಸಾಧನೆ ಮಾಡಿದ್ದಾಳೆ. ಭಾರತದ ಕ್ರೀಡಾ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಚಿನ್ನ ಪಡೆದವಳು ಹಿಮಾ ದಾಸ್!

ದೇಶಕ್ಕೆ ವಿಶ್ವ ಚಾಂಪಿಯನ್ ಪಟ್ಟ ತಂದುಕೊಟ್ಟ ಹಿಮಾಳ ಬಗ್ಗೆ ದೇಶಾದ್ಯಂತ ಪ್ರಶಂಸೆಯ ಮಹಾಪೂರವೇ ಹರಿದು ಬಂತು. ಆಡಳಿತ ಪಕ್ಷ ವಿರೋಧ ಪಕ್ಷಗಳೆಲ್ಲವೂ ಹಿಮಾಳಿಗೆ ಅಭಿನಂದನೆ ಹೇಳಲು ಪೈಪೋಟಿಗೆ ಬಿದ್ದವು. ಕ್ರೀಡಾಲೋಕದ ದಿಗ್ಗಜರು, ಸಿನಿಮಾ ತಾರೆಯರು, ಸಾಹಿತ್ಯವಂತರು – ಹೀಗೆ ಎಲ್ಲರೂ ಅಭಿನಂದನೆಯ ಹೊಳೆಯನ್ನೇ ಹರಿಸಿದರು. ಸಾಮಾಜಿಕ ಜಾಲತಾಣಗಳಲ್ಲಂತೂ ಅಭಿನಂದನೆಯ ಪ್ರವಾಹವೇ ಹರಿಯಿತು. ಪ್ರಪ್ರಥಮ ಬಾರಿಗೆ ಭಾರತದ ಹುಡುಗಿ ವಿಶ್ವ ಚಾಂಪಿಯನ್ ಆಗಿ ಚಿನ್ನದ ಪದಕ ಗಳಿಸಿದ್ದರಿಂದ ಈ ಅಭಿಮಾನದ ಹೊಳೆ ಸಹಜವೇ ಆಗಿತ್ತು.

ಇಂಥಾ ಸಂಭ್ರಮದ ಗಳಿಗೆಯಲ್ಲೇ ಜಗತ್ತಿನೆದುರು ಭಾರತ ತಲೆತಗ್ಗಿಸಬೇಕಾದ ವಿದ್ಯಮಾನವೂ ಸಂಭವಿಸಿದೆ.
ಕ್ರೀಡಾ ಆಗಸದಲ್ಲಿ ದಿಡೀರ್ ಮಿಂಚಿನಂತೆ ಬಂದೆರಗಿದ ಹಿಮಾದಾಸ್ ಯಾರು, ಏನು ಎಂಬ ಬಗ್ಗೆ ಹೊರ ಜಗತ್ತಿಗಿರಲಿ, ಭಾರತೀಯರಿಗೇ ಗೊತ್ತಿರಲಿಲ್ಲ. ಹೀಗಾಗಿ ಕುತೂಹಲಭರಿತ ಭಾರತೀಯರು ಈ ಹೊಸ ತಾರೆಯ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಸರ್ಚ್ ಇಂಜಿನ್‍ನ ಮೊರೆಹೋದರು. ಹಿಮಾದಾಸ್ ಯಾರು? ಯಾವ ಊರು? ಹಿಂದಿನ ಕ್ರೀಡಾ ಸಾಧನೆ ಏನು? ಆಕೆಯ ಶಿಕ್ಷಣ ಎಲ್ಲಿ ನಡೆದಿದೆ? ತರಬೇತು ನೀಡಿದವರು ಯಾರು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿರಬಹುದೆಂದು ನೀವು ಸಹಜವಾಗಿ ಊಹಿಸುತ್ತೀರಿ. ಆದರೆ ಗೂಗಲ್‍ನಲ್ಲಿ ಹೆಚ್ಚಿನ ಮಂದಿ ಹುಡುಕಿದ್ದು ಆಕೆಯ ಜಾತಿಯನ್ನು! ಭಾರತೀಯರಿಗೆ ಯಾಕೆ ಅಷ್ಟೊಂದು ಕುತೂಹಲ ಗೊತ್ತೆ? ಆಕೆಯ ಜಾತಿ ಯಾವುದೆಂದು ಪತ್ತೆಯಾದರೆ ಅದಕ್ಕೆ ತಕ್ಕಂತೆ ಅವಳಿಗೆ ಬಿರುದು ಸನ್ಮಾನಗಳನ್ನು ಕೊಡಬಹುದು. ಆಕೆಯನ್ನು ತಮ್ಮ ಜಾತಿಯ ‘ಹಿರಿಮೆ’ಗೆ ಗರಿಯನ್ನಾಗಿಯೂ, ಐಕಾನ್ ಆಗಿಯೂ ಬಳಸಿಕೊಳ್ಳಬಹುದು. ಇದು ವಿಚಿತ್ರ ಅನಿಸಬಹುದು. ಆದರೆ ಇದುವೇ ಭಾರತದ ಅತ್ಯಂತ ಸಹಜ ಸ್ಥಿತಿ. ಭಾರತೀಯರ ಇಂಥಾ ಜಾತಿ ಬುದ್ದಿಯ ಬಗ್ಗೆ ಜಗತ್ತಿನ ಸಾವಿರಾರು ಮಂದಿ ಛೀಮಾರಿ ಹಾಕಿದ್ದಾರೆ.
ಗೂಗಲ್‍ನಲ್ಲಿ ಹಿಮಾ ದಾಸ್ ಎಂದು ಸರ್ಚ್ ಕೊಟ್ಟರೆ ನಮಗೆ ಮೊದಲು ಅದರ ನ್ಯೂಸ್ ಫೀಡ್‍ನ ಆಯ್ಕೆಗಳು ಕಾಣಸಿಗುತ್ತವೆ. ಇದೇ ವಿಷಯದ ವಿಭಿನ್ನ ಆಯಾಮಗಳ ಬಗ್ಗೆ ಅತಿ ಹೆಚ್ಚು ಹುಡುಕಾಟ ನಡೆಸಿರುವ ವಿಷಯ ಪಟ್ಟಿಯನ್ನು ಅನುಕ್ರಮವಾಗಿ ಗೂಗಲ್ ನಿಮಗೆ ಒದಗಿಸುತ್ತದೆ. ಹೀಗೆ ಭಾರತೀಯರ ಜಾತಿವಾದಿ ಮನಸ್ಥಿತಿ ಸರ್ಚ್ ಲಿಸ್ಟ್‍ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಹಿಮಾ ದಾಸ್‍ಳ ಪ್ರತಿಭೆ ವಿಶ್ವಮಟ್ಟದಲ್ಲಿ ಸಾಬೀತಾಗಿದೆಯಲ್ಲಾ? ಆಕೆಯ ಪ್ರತಿಭೆಯನ್ನು ಗುರುತಿಸಿದರಷ್ಟೇ ಸಾಲದೆ? ಇಲ್ಲ. ಆಕೆಯ ಜಾತಿ ಯಾವುದೆಂದು ತಿಳಿದುಕೊಂಡ ನಂತರವೇ ಆಕೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕೋ ಬೇಡವೋ ಎಂದು ನಿರ್ಧರಿಸಲು ಬಹುಶಃ ಈ ಮಂದಿ ನಿರ್ಣಯಿಸಿದ್ದಿರಬಹುದು. ಇದು ಭಾರತೀಯ ಮನಸ್ಥಿತಿ.

ಭಾರತದಲ್ಲಿ ಜಾತಿ ವ್ಯವಸ್ಥೆ ಮುಂದುವರೆದಿರುವುದಕ್ಕೆ ಶಿಕ್ಷಣದ ಕೊರತೆ ಪ್ರಮುಖ ಕಾರಣ ಎಂದೂ, ಎಲ್ಲೋ ಮೂಲೆಯ ಕುಗ್ರಾಮಗಳಲ್ಲಿ ಮಾತ್ರ ಜಾತಿ ವ್ಯವಸ್ಥೆ ಉಳಿದುಕೊಂಡಿದೆ, ನಗರಪ್ರದೇಶಗಳಲ್ಲಿ ಜಾತಿ ವ್ಯವಸ್ಥೆ ನಾಮಾವಶೇಷವಾಗಿದೆಯೆಂತಲೂ ಎಂದು ಅನೇಕ ಆಸ್ಥಾನ ಪಂಡಿತರು ಸದಾ ತೌಡು ಕುಟ್ಟುತ್ತಾರೆ. ಹಾಗಾದರೆ ಜಾಲತಾಣದಲ್ಲಿ ಹಿಮಾಳ ಜಾತಿ ಕಂಡುಕೊಳ್ಳಲು ಪ್ರಯಾಸಪಟ್ಟವರು ಅವಿದ್ಯಾವಂತರೆ? ಅಥವಾ ಕುಗ್ರಾಮದ ಗಮಾರರೆ? ಹೀಗೆ ಕ್ಯಾಸ್ಟ್ ಸರ್ಚ್ ಮಾಡಿದ ಬಹುತೇಕರು ತಮ್ಮ ಕೈಗಳಲ್ಲಿ ಸ್ಮಾರ್ಟ್ ಫೋನ್ ಹಿಡಿದಿರುವ ಸುಶಿಕ್ಷಿತ ನಗರವಾಸಿಗಳೇ.

ವಿಪರ್ಯಾಸವೆಂದರೆ, ಸಾರ್ವಜನಿಕ ಚರ್ಚೆಗಳಲ್ಲಿ ‘ಜಾತಿ ಎಲ್ಲಿದೆ ಹೇಳಿ?’ ಎಂಬ ವಿತಂಡ ವಾದ ಹೂಡುವವರು ಇದೇ ಮಂದಿ! ನಮ್ಮ ಸಮಾಜದಲ್ಲಿ ಇಂಥಾ ಆಷಾಡಭೂತಿತನ ರಕ್ತಗತವಾಗಿಬಿಟ್ಟಂತಿದೆ.

ಪಿಟಿ ಉಷಾ ವಿಚಾರದಲ್ಲೂ ಇದೇ ಆಶ್ಚರ್ಯ ನಿಮಗೆ ಕಾದಿರುತ್ತದೆ. ಉಷಾ ಅಥ್ಲೀಟ್‍ನಿಂದ ನಿವೃತ್ತಿಯಾಗಿ ದಶಕ ಕಳೆದಿದ್ದರೂ ಇಂದಿಗೂ ಆಕೆಯ ಜಾತಿ ತಿಳಿದುಕೊಳ್ಳಲು ಹೆಚ್ಚಿನ ಜನ ಆಸಕ್ತಿ ತೋರುತ್ತಿದ್ದಾರೆ. 2016ರ ರಿಯೋ ಒಲಂಪಿಕ್ಸ್‍ನ ಬ್ಯಾಡ್ಮಿಂಟನ್‍ನಲ್ಲಿ ಪಿವಿ ಸಿಂಧು ಬೆಳ್ಳಿ ಪದಕ ಗಳಿಸಿದಾಗಲೂ ನಮ್ಮ ಹೆಮ್ಮೆಯ ಭಾರತೀಯರು ತಮ್ಮ ಚಿಲ್ಲರೆ ಜಾತಿ ಬುದ್ದಿ ತೋರಿಸಿದ್ದರು.

ಈ ಮೇಲಿನ ಉದಾಹರಣೆಗಳೆಲ್ಲ ಜಾತಿಯ ಬೇರುಗಳು ಎಷ್ಟು ಆಳದಲ್ಲಿವೆ ಎಂಬುದನ್ನು ನಿರ್ವಿವಾದಿತವಾಗಿ ಎತ್ತಿ ತೋರಿಸುತ್ತಿವೆ. ಮೋದಿ ಭಕ್ತಪಡೆ ಭಾರತ ‘ವಿಶ್ವ ಗುರು’ ಎಂದು ಬೊಬ್ಬಿಡುತ್ತಿದ್ದಾರೆ. ಆದರೆ ಭಾರತ ಸಾಗಬೇಕಾದ ದೂರ ಇನ್ನೂ ಬಹಳವಿದೆ ಎಂಬುದನ್ನು ಹಿಮಾ ದಾಸ್ ಎಪಿಸೋಡ್ ಅನುಮಾನಕ್ಕೆಡೆಯಿಲ್ಲದಂತೆ ತೋರಿಸಿಕೊಟ್ಟಿದೆ.

ಸಾಮಾನ್ಯ ಜನರ ಮಾತು ಒತ್ತಟ್ಟಿಗಿರಲಿ, ಅಥ್ಲೀಟ್ ಫೆಡರೇಷನ್ ಇಂಡಿಯ ಸಂಸ್ಥೆ ನಡೆದುಕೊಂಡ ರೀತಿ ನೋಡಿ. ಅಭಿನಂದನೆಗಳನ್ನು ಹೇಳಲಿಕ್ಕಾಗಿ ಟ್ವೀಟ್ ಮಾಡಿದ ಎಎಫ್‍ಐ “ಇಂಗ್ಲಿಷ್ ಮಾತಾಡಲು ಸರಿಯಾಗಿ ಬರದಿದ್ದರೂ ಕೂಡ ಹಿಮಾ ಉತ್ತಮ ಸಾಧನೆ ಮಾಡಿದ್ದಾಳೆ… ಹಿಮಾ ದಾಸ್‍ಗೆ ಅಭಿನಂದನೆಗಳು…”. ಎಎಫ್‍ಐನ ಧೋರಣೆಗೆ ಟ್ವಿಟ್ಟಿಗರು ‘ಹಿಮಾ ದಾಸ್ ಹೋಗಿದ್ದುದು ಓಟದ ಸ್ಪರ್ದೆಗೋ ? ಅಥವಾ ಇಂಗ್ಲಿಷ್ ಭಾಷಾ ಪಾಂಡಿತ್ಯ ಸ್ಪರ್ಧೆಗೋ?’ ಎಂದು ತಿರುಗೇಟು ನೀಡಿದ್ದಾರೆ.

ಆದರೆ ಫಿನ್‍ಲೆಂಡ್‍ನ ವಿದೇಶಿ ನೆಲದಲ್ಲಿ ನೆಲೆಸಿರುವ ಕೆಲವು ಭಾರತೀಯರು ಈ ಚಿನ್ನದ ಹುಡುಗಿಗೆ ಏನಾದರೂ ಉಡುಗೊರೆ ಕೊಡಬೇಕೆಂದು ತಮ್ಮ ವಾಟ್ಸಪ್ ಗ್ರೂಪಿನಲ್ಲಿ ಚರ್ಚಿಸಿದರು. ಒಂದಷ್ಟು ಹಣವನ್ನು ಬಹುಮಾನವಾಗಿ ಕೊಡಲು ತೀರ್ಮಾನಿಸಿ ಅಂದೇ ಒಂದು ಲಕ್ಷ ರೂನಷ್ಟು ಹಣ ಸಂಗ್ರಹಿಸಿದರು. ಹಿಮಾ ದಾಸ್‍ಳನ್ನು ಭೇಟಿಯಾಗಿ ಅಭಿನಂದಿಸಿ, ಆತಿಥ್ಯ ನೀಡಿ ಸತ್ಕರಿಸಿದರು. ಆದರೆ ಹಣವನ್ನು ಸ್ಥಳದಲ್ಲೇ ಹಸ್ತಾಂತರಿಸಲಿಲ್ಲ. ಯಾಕೆಂದರೆ ಆ ಹಣ ಯಾರ ಕೈಗೆ ಸೇರುತ್ತದೋ ಎಂಬುದು ಅವರಿಗೆ ಖಾತ್ರಿಯಿರಲಿಲ್ಲ. ಹಾಗಾಗಿ ಆ ಹಣವನ್ನು ನೇರವಾಗಿ ಹಿಮಾಳ ಖಾತೆಗೆ ವರ್ಗಾಯಿಸಲು ತೀರ್ಮಾನಿಸಿದ್ದಾರೆ. ಅರ್ಹ ವ್ಯಕ್ತಿಗೆ ಸೇರಬೇಕಾದ ಹಣ ಮತ್ಯಾರೋ ಮಧ್ಯವರ್ತಿಗಳ ಪಾಲಾಗುತ್ತದೆಂಬುದು ಅವರ ಈ ತೀರ್ಮಾನಕ್ಕೆ ಕಾರಣ.

ಇನ್ನು ಹಿಮಾಳ ವೈಯುಕ್ತಿಕ ಹಿನ್ನೆಲೆಯನ್ನು ಗಮನಿಸಿದರೆ ಅವಳ ಸಾಧನೆಯ ಮಹತ್ವ ನಮ್ಮ ಅರಿವಿಗೆ ಬರುತ್ತದೆ. ಶಾಲಾ ದಿನಗಳಲ್ಲಿ ಹುಡುಗರ ತಂಡದಲ್ಲಿ ಪುಟ್ಬಾಲ್ ಆಡುತ್ತಿದ್ದ ಹಿಮಾ ಫಿನ್ಲೆಂಡ್‍ನಲ್ಲಿ ನಡೆದ 20 ವರ್ಷದೊಳಗಿನ ವಿಶ್ವ ಅಥ್ಲೇಟಿಕ್ ಜೂನಿಯರ್ಸ್ ಮಹಿಳಾ ವಿಭಾಗದ 400 ಮೀಟರ್ ಓಟದಲ್ಲಿ ಕೇವಲ 51.46 ಸೆಕೆಂಡುಗಳಲ್ಲಿ ಚಿನ್ನದ ಜಯ ಸಾಧಿಸಿ ದಾಖಲೆ ಬರೆದ ಭಾರತದ ಮೊದಲ ಅಥ್ಲೇಟ್.

16 ಜನರ ಅವಿಭಕ್ತ ಕುಟುಂಬದಲ್ಲಿ ಜೋನಿಲಾ ಮತ್ತು ರಂಜಿತ ದಾಸ್ ರೈತ ದಂಪತಿಗಳ ಕೂಸು ಹಿಮ. ಇಡೀ ಕುಟುಂಬ ಇರುವ ಭತ್ತದ ಗದ್ದೆಯಲ್ಲಿ ದುಡಿದರಷ್ಟೇ ಆದಾಯ. ಆದರೆ ಇದಾವುದು ಹಿಮಾ ಸಾಧನೆಗೆ ಅಡ್ಡಿಯಾಗಲೇ ಇಲ್ಲ. ಫುಟ್ಬಾಲ್ ಕನಸು ಕಂಡು, ವಾಸ್ತವದಲ್ಲಿ ಅಥ್ಳೇಟಿಕ್ಸ್‍ನಲ್ಲಿ ಹೆಜ್ಜೆಯಿರಿಸಿದ ಹಿಮಾಗೆ ಗುವಾಹಟಿಯ ಯುವಜನ ಕ್ರೀಡಾ ಇಲಾಖೆಯ ತರಬೇತುದಾರ ನಿಪೋ ದಾಸ್ ಬೆಂಬಲವಾಗಿ ನಿಂತರು. ರಾಷ್ಟ್ರೀಯ ತಂಡದ ಕೋಚ್ ಬಸಂತ ಸಿಂಗ್ ಹಿಮಾಳ ಹಾದಿಯನ್ನು ಮತ್ತಷ್ಟು ಸ್ಪಷ್ಟ ಮತ್ತು ನಿಚ್ಚಳವಾಗಿಸಿದರು. ಪಿ.ಟಿ.ಉಷಾ ಕೂಡ ಹಿಮಾಳ ಜೊತೆಯಲ್ಲೇ ಇದ್ದು ಆಕೆಯನ್ನು ಹುರಿದುಂಬಿಸಿದ್ದರು. ಈ ಎಲ್ಲರ ಶ್ರಮವನ್ನು ನಾವು ಗೌರವದಿಂದ ನೆನೆಯಬೇಕು.

ಹಿಮಾ ದಾಸ್ ಒಂದು ಅಂಶವನ್ನಂತೂ ಅನುಮಾನಕ್ಕೆಡೆಯಿಲ್ಲದಂತೆ ಸಾಬೀತುಪಡಿಸಿದ್ದಾಳೆ. ಭಾರತಕ್ಕೆ ಚಿನ್ನದ ಪದಕಗಳನ್ನು ಗಳಿಸಬಲ್ಲ ಪ್ರತಿಭೆಗಳು ಮಹಾನಗರಗಳ ಕಾನ್ವೆಂಟುಗಳಲ್ಲಿ, ಭವ್ಯವಾದ ಮಹಲುಗಳಲ್ಲಿ ಇರುವುದಿಲ್ಲ; ನಮ್ಮ ಹಳ್ಳಿಗಾಡುಗಳಲ್ಲಿ, ಭತ್ತದ ಗದ್ದೆಗಳಲ್ಲಿ, ಆದಿವಾಸಿಗಳ ಹಾಡಿಗಳಲ್ಲಿಯೂ ಇದ್ದಾರೆ. ಆದರೆ ಅಲ್ಲಿನ ಪ್ರತಿಭೆಗಳನ್ನು ಹುಡುಕುವ ಮನಸ್ಸಿದೆಯೆ?

  • – ರೂಪಾ ಕೆ. ಮತ್ತಿಕೆರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...