Homeಸಾಮಾಜಿಕನ್ಯಾಯಾಲಯಕ್ಕೆ ಜಾತಿವಾದಿಗಳ ‘ಅತಿರೇಕದ ದೌರ್ಜನ್ಯ’ ಕಾಣಲಿಲ್ಲವೇಕೆ?

ನ್ಯಾಯಾಲಯಕ್ಕೆ ಜಾತಿವಾದಿಗಳ ‘ಅತಿರೇಕದ ದೌರ್ಜನ್ಯ’ ಕಾಣಲಿಲ್ಲವೇಕೆ?

- Advertisement -
- Advertisement -

ಗುಜರಾತಿನ ಊನಾದಲ್ಲಿ ಗೋಭಯೋತ್ಪಾದಕರು ದಲಿತರನ್ನು ಹೀನಾಯವಾಗಿ ಕಬ್ಬಿಣದ ರಾಡುಗಳಿಂದ ಥಳಿಸಿ ವಿಡಿಯೋ ಮಾಡಿ ಬಹಿರಂಗವಾಗಿ ಪ್ರಚಾರ ಮಾಡಿದರು. ತುಮಕೂರಿನ ಗುಬ್ಬಿಯ ಅಭಿಷೇಕ್ ಎಂಬ ದಲಿತ ಹುಡುಗನನ್ನು ವಿವಸ್ತ್ರಗೊಳಿಸಿ ಥಳಿಸಿ ಆ ವಿಡಿಯೋವನ್ನು ಪ್ರಚಾರ ಮಾಡಲಾಯಿತು. ತಮಿಳುನಾಡಿನಲ್ಲಿ ವಾಚ್ ಕಟ್ಟಿದ್ದಕ್ಕೆ ದಲಿತನ ಕೈ ಕಡಿಯಲಾಯಿತು. ಪುಣೆಯಲ್ಲಿ ಅಂಬೇಡ್ಕರ್ ರಿಂಗ್ ಟೋನ್ ಹಾಕಿಕೊಂಡದ್ದಕ್ಕೆ ದಲಿತ ಯುವಕನನ್ನು ಅಪಹರಣಗೈದು ಕೊಲೆ ಮಾಡಲಾಯಿತು. ರಾಜಸ್ತಾನದಲ್ಲಿ ಅಂತರ್ಜಾತಿ ವಿವಾಹವಾದದ್ದಕ್ಕೆ ದಂಪತಿಗಳನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಲಾಯಿತು. ಮೊನ್ನೆ ತಾನೇ ಉತ್ತರಪ್ರದೇಶದಲ್ಲಿ ಕುದುರೆ ಸವಾರಿ ಮಾಡಿದ್ದಕ್ಕಾಗಿ ತಲೆ ಜಜ್ಜಿ ದಲಿತ ಯುವಕನನ್ನು ಕೊಲ್ಲಲಾಗಿದೆ. ಈ ಘಟನೆಗಳಾವುವೂ ಪ್ರಾಚೀನ ಭಾರತದಲ್ಲಿ ನಡೆದದ್ದಲ್ಲ. 21 ನೇ ಶತಮಾನದ ಭಾರತದಲ್ಲಿ. ಹೀಗೆ ಅದೆಷ್ಟು ಅಮಾನವೀಯ, ಕ್ರೂರ, ಕರುಳುಹಿಂಡುವ ದೌರ್ಜನ್ಯಗಳು ದೇಶಾದ್ಯಂತ ದಲಿತರ ಮೇಲೆ ನಡೆಯುತ್ತಿವೆ.

ಗುಜರಾತ್ ಊನಾದಲ್ಲಿ ದಲಿತರಿಗೆ ಸಾರ್ವಜನಿಕವಾಗಿ ರಾಡ್ ಗಳಿಂದ ಥಳಿಸುತ್ತಿರುವ ಸೋ ಕಾಲ್ಡ್ ಗೋ ರಕ್ಷಕರ ಆರ್ಭಟ

ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ಎಸ್.ಸಿ ಮತ್ತು ಎಸ್.ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1989 (ಅಟ್ರಾಸಿಟಿ ತಡೆ ಕಾಯ್ದೆ) ಮತ್ತು ತಿದ್ದುಪಡಿ 2015 ಇದನ್ನು ದಲಿತರು ‘ಅತಿರೇಕದ ದುರ್ಬಳಕೆ’ ಮಾಡಿಕೊಳ್ಳುತ್ತಿದ್ದಾರೆ ಎಂದು ತೀರ್ಪು ನೀಡುತ್ತದೆ. ದುರ್ಬಲ ಜನಾಂಗದವರ ಬೆನ್ನೆಲುಬಾಗಿ ನಿಲ್ಲಬೇಕಾದ ನ್ಯಾಯಾಲಯ ಇಂತಹ ತೀರ್ಪು ನೀಡಿರುವುದು ಕಳವಳ ಉಂಟುಮಾಡಿದೆ.

ಇದರ ಪರಿಣಾಮವಾಗಿ ದಲಿತರು ನಡೆಸಿದ ಭಾರತ್ ಬಂದ್ ಪ್ರತಿಭಟನೆ ವೇಳೆ ಗೋಲಿಬಾರ್‍ನಿಂದಾಗಿ 9 ದಲಿತರು ಪ್ರಾಣ ಕಳೆದುಕೊಂಡಿದ್ದಾರೆ. ಆಶ್ಚರ್ಯವೆಂದರೆ, 9 ದಲಿತರನ್ನು ಕೊಂದಿರುವ ಸರ್ಕಾರಗಳೆಲ್ಲವೂ ಬಿಜೆಪಿ ನೇತೃತ್ವದಲ್ಲಿವೆ. ಆದರೆ ಕೇಂದ್ರ ಸರ್ಕಾರ ನಾವು ದಲಿತರ ರಕ್ಷಣೆಗೆ ಬದ್ಧ ಎನ್ನುತ್ತಿದೆ. ಮತ್ತೊಂದು ಕಡೆ ಸುಪ್ರೀಂಕೋರ್ಟ್ `ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ’ ಎಂದು ಕೇಂದ್ರ ಸರ್ಕಾರದ ದ್ವಂದ್ವ ನಿಲುವನ್ನು ಪ್ರಶ್ನಿಸಿದೆ. ಇದು ಕೇಂದ್ರದ ದಲಿತ ವಿರೋಧಿ ನಿಲುವನ್ನು ಜಗಜ್ಜಾಹೀರು ಮಾಡಿದೆ. ಹೀಗಿರುವಾಗ ದಲಿತರು ಇಷ್ಟು ಆಕ್ರೋಷಭರಿತರಾಗಲು ಕಾರಣಗಳನ್ನು ಹುಡುಕುವುದು ಕಷ್ಟವೇ?

ಈ ತೀರ್ಪಿನ ಪ್ರಕಾರ ಸದರಿ ಕಾಯ್ದೆಯನ್ನು ದಲಿತರು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಇನ್ನು ಮುಂದೆ ಈ ಕಾಯ್ದೆ ಅಡಿ ನೌಕರ ಅಥವಾ ಯಾರನ್ನೇ ಬಂಧಿಸುವ ಮೊದಲು ಡಿವೈಎಸ್‍ಪಿ ಅಥವಾ ಅದಕ್ಕಿಂತ ಮೇಲಿನ ದರ್ಜೆಯ ಪೊಲೀಸ್ ಅಧಿಕಾರಿಗಳು 7 ದಿನಗಳಲ್ಲಿ ಪ್ರಾಥಮಿಕ ತನಿಖೆ ನಡೆಸಿ ಒಪ್ಪಿಗೆ ನೀಡುವುದು ಕಡ್ಡಾಯ. ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸುವಂತಿಲ್ಲ. ಒಂದು ವೇಳೆ ಬಂಧನ ಅನಿವಾರ್ಯವಾದರೆ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಹೀಗೆ ತನ್ನ 89 ಪುಟಗಳ ತೀರ್ಪಿನಲ್ಲಿ ಕಾಯ್ದೆ ಜಾರಿ ಮಾಡಲು ನ್ಯಾಯಾಧೀಶರಾದ ಆದರ್ಶ ಗೋಯಲ್ ಮತ್ತು ಉದಯ್ ಲಲಿತ್ ಅವರ ಪೀಠ ಷರತ್ತುಗಳನ್ನು ಸೂಚಿಸಿದೆ. ಜೊತೆಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನೂ ತೀರ್ಪಿನಲ್ಲಿ ನಮೂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಅಟ್ರಾಸಿಟಿ ತಡೆ ಕಾಯ್ದೆಯ ಪ್ರಕಾರ ಆರೋಪಿಗಳಿಗೆ ಕಠಿಣ ಶಿಕ್ಷೆ ಜಾರಿಯಾಗಬೇಕು ಹಾಗೂ ನಿರೀಕ್ಷಣಾ ಜಾಮೀನಿನ ದಾರಿ ಕಠಿಣ. ಆದರೆ ಈ ತೀರ್ಪಿನ ಪ್ರಕಾರ ಇವೆರಡೂ ಕಾಗದದ ಮೇಲಿನ ಅಕ್ಷರಗಳಾಗಿ ಉಳಿಯುವ ಎಲ್ಲಾ ಸಾಧ್ಯತೆಗಳಿವೆ. ಇಂದು ಈ ಷರತ್ತುಗಳು ಕೇವಲ ಜಾತಿನಿಂದನೆ ಪ್ರಕರಣಗಳಿಗೆ ಸೀಮಿತ ಎಂದು ಹೇಳಿದರೂ ಇದೇ ತೀರ್ಪಿನ ಆಧಾರದಲ್ಲಿ ಮುಂದೆ ಇಡೀ ಕಾಯ್ದೆಯನ್ನೇ ಮತ್ತಷ್ಟು ದುರ್ಬಲಗೊಳಿಸಬಹುದಾಗಿದೆ.

ಇಲ್ಲೀವರೆಗೆ ಈ ಕಾಯ್ದೆಯಿಂದ ದಲಿತರಿಗೆ ನ್ಯಾಯ ದೊರಕಿದೆಯೇ ಎಂದು ಪ್ರಶ್ನಿಸಿದರೆ ಉತ್ತರ ನಿರಾಶದಾಯಕವಾಗಿದೆ. ಏಕೆಂದರೆ ಇಲ್ಲಿಯವರೆಗೆ ಈ ಕಾಯ್ದೆಯಿಂದ ಗಮನಾರ್ಹ ನ್ಯಾಯ ದಲಿತರಿಗೆ ಸಿಕ್ಕಿಲ್ಲ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಕೆಲವು ಪ್ರಕರಣಗಳ ಹಣೆ ಬರಹ ನೋಡಿದರೆ ಇದು ನಮಗೆ ಸ್ಪಷ್ಟವಾಗುತ್ತದೆ. ಆಂದ್ರ ಪ್ರದೇಶದಲ್ಲಿ ಐವರು ದಲಿತರನ್ನು ಕೊಂದುಹಾಕಿದ ಕಾರಂಚೇಡು ಪ್ರಕರಣದಲ್ಲಿ ಸೆಷನ್ ಕೋರ್ಟ್ ಆರೋಪಿಗಳಿಗೆ ಶಿಕ್ಷೆ ವಿಧಿಸಿತು. ಆದರೆ ಹೈ ಕೋರ್ಟ್ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತು. ಸುಪ್ರೀಂ ಕೋರ್ಟ್ ಸಹ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಿತು. ಚುಂಡೂರು ಪ್ರಕರಣದಲ್ಲಿ 8 ದಲಿತರನ್ನು ಕಡಿದು ಕೊಲ್ಲಲಾಗಿತ್ತು. ಸೆಷನ್ ಕೋರ್ಟ್ ಆರೋಪಿಗಳಿಗೆ ಶಿಕ್ಷೆ ವಿಧಿಸಿತು. ಆದರೆ ಮತ್ತದೇ ಹೈ ಕೋರ್ಟ್, ಸುಪ್ರೀಂ ಕೋರ್ಟುಗಳು ಆರೋಪಿಗಳನ್ನು ಖುಲಾಸೆಗೊಳಿಸಿದವು. ಬತಾನಿ ತೋಲ ಮತ್ತು ಲಕ್ಷ್ಮಣಪುರ ಬಾಥೆ ಸೇರಿದಂತೆ ಬಿಹಾರದ 6 ಪ್ರಕರಣಗಳಲ್ಲೂ ಇದೇ ಕಥೆ. ಅವೆಲ್ಲವೂ ಸುಪ್ರೀಂ ಕೋರ್ಟಿನಲ್ಲಿ ಧೂಳು ಹಿಡಿಯುತ್ತಿವೆ. ನಮ್ಮದೇ ರಾಜ್ಯದ ಕಂಬಾಲಪಲ್ಲಿ ಮತ್ತು ನಾಗಲಾಪಲ್ಲಿ ಪ್ರಕರಣದಲ್ಲಿ ಪ್ರತಿಕೂಲ ಸಾಕ್ಷಿಗಳಾಗಿ ಮಾರ್ಪಟ್ಟವರು ಬಹಿರಂಗವಾಗಿ ನಮಗೆ ರಕ್ಷಣೆ ಕೊಡಿ ಸತ್ಯ ಹೇಳುತ್ತೇವೆ ಎಂದರು. ನ್ಯಾಯಾಲಯಕ್ಕೆ ಈ ಕೂಗು ಕೇಳಲೇ ಇಲ್ಲ. ಈಗ ಸಾಕ್ಷಿ ಹೇಳಲು ಆ ಜೀವವೂ ಇಲ್ಲ. ಅವೆರಡೂ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿವೆ. ಹೀಗೆ ದಲಿತರ ಮೇಲಿನ ಹತ್ಯಾಕಾಂಡ, ದೌರ್ಜನ್ಯಗಳ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು. ಆದರೆ ಇದುವರೆವಿಗೂ ಅವರೆಲ್ಲರನ್ನು ಕೊಂದವರಾರು ಎಂಬುದಕ್ಕೆ ಈ ದೇಶದ ತನಿಖಾ ಮತ್ತು ನ್ಯಾಯಾಂಗ ವ್ಯವಸ್ಥೆ ಇದುವರೆಗೂ ಉತ್ತರ ಕೊಟ್ಟೇ ಇಲ್ಲ.

ಹಸಿವು ನೀಗಿಸಿಕೊಳ್ಳಲು ಪ್ರಸಾದ ಪಡೆಯಲೆಂದು ದೇವಸ್ಥಾನ ಪ್ರವೇಶಿಸಿದ ದಲಿತ ಮಕ್ಕಳನ್ನು ಮರಕ್ಕೆ ಕಟ್ಟಿಹಾಕಿ ಹರಿಯಾಣದಲ್ಲಿ ಮಾರಣಾಂತಿಕವಾಗಿ ಥಳಿಸಲಾಗಿತ್ತು

ದಲಿತರ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕಳೆದ ಹತ್ತು ವರ್ಷಗಳಲ್ಲಿ ಅದರ ಪ್ರಮಾಣ ಶೇ. 66 ಕ್ಕೆ ಏರಿದೆ. 2006 ರಲ್ಲಿ ದಾಖಲಾದ ದೌರ್ಜನ್ಯಗಳು 27,070. 2016 ರಲ್ಲಿ ದಾಖಲಾದ ಪ್ರಕರಣಗಳು 47,338. ಅಂದರೆ ಪ್ರತಿ 15 ನಿಮಿಷಗಳಿಗೊಂದು ದಲಿತರ ಮೇಲೆ ದೌರ್ಜನ್ಯ ನಡೆಯುತ್ತದೆ. 2016 ರಲ್ಲಿ ದಲಿತ ಮಹಿಳೆಯರ ಮೇಲಿನ ಹಲ್ಲೆ 3172. ಮಾರಣಾಂತಿಕ ಹಲ್ಲೆ 1071. ಅಪಹರಣ ಮತ್ತು ಕಿರುಕುಳ 855. ಕೊಲೆ 786. ಅತ್ಯಾಚಾರ 2541. ಗಲಭೆ 1725. ಆದರೆ ಶಿಕ್ಷೆ ನೀಡಿರುವ ಪ್ರಮಾಣ ಗುಜರಾತಿನಲ್ಲಿ ಶೇ.3, ಕರ್ನಾಟಕದಲ್ಲಿ ಶೇ.3.46, ಒರಿಸ್ಸಾದಲ್ಲಿ ಶೇ.3.45, ಆಂದ್ರಪ್ರದೇಶದಲ್ಲಿ ಶೇ.6, ರಾಜಸ್ಥಾನದಲ್ಲಿ ಶೇ.7, ಮಹಾರಾಷ್ಟ್ರದಲ್ಲಿ ಶೇ.7. ಉತ್ತರಪ್ರದೇಶ ಮತ್ತು ಬಿಹಾರಗಳಲ್ಲಿ ಗಮನಾರ್ಹ ಶಿಕ್ಷೆಗಳಾಗಿರುವ ಕಾರಣ ಇಡೀ ದೇಶದಲ್ಲಿ ಕೇವಲ ಶೇ.28. ಇನ್ನು ವಿಚಾರಣೆ ನಡೆಯುತ್ತಾ ಬಾಕಿ ಇರುವ ಪ್ರಕರಣಗಳು ಶೇ. 89. ಇದು ದಲಿತರಿಗೆ ನ್ಯಾಯಾಂಗ ನೀಡಿರುವ ನ್ಯಾಯ. ಅಟ್ರಾಸಿಟಿ ತಡೆ ಕಾಯ್ದೆ ಇಲ್ಲದಿದ್ದರೆ ಈ ಕನಿಷ್ಠ ನ್ಯಾಯವೂ ದಲಿತರಿಗೆ ಸಿಗುತ್ತಿರಲಿಲ್ಲ. ಇದಕ್ಕೆ 1989 ಕ್ಕೂ ಹಿಂದಿನ ಬೆಲ್ಚಿ, ಪಿಪ್ರ, ಕಿಲ್ವೇನ್ಮಣಿ, ಕೆಸ್ತಾರ ಮುಂತಾದ ನರಮೇಧಗಳೇ ಸಾಕ್ಷಿ.

ತುಂಡು ಭೂಮಿಗೆ ಸರ್ಕಾರದಿಂದ ಪಟ್ಟಾ ಪಡೆದುಕೊಂಡಿದ್ದಕ್ಕಾಗಿ ಮಧ್ಯಪ್ರದೇಶದ ಮಹಿಳೆಯನ್ನು ಅರೆಬೆತ್ತಲೆ ಮಾಡಿ ಥಳಿಸಿ, ಬಲವಂತವಾಗಿ ಮೂತ್ರ ಕೂಡಿಸಲಾಗಿತ್ತು

ಪರಿಸ್ಥಿತಿ ಹೀಗಿರುವಾಗ ನ್ಯಾಯಾಲಯ ಕಾಯ್ದೆಯನ್ನು ಚುರುಕುಗೊಳಿಸಲು ಶಿಫಾರಸ್ಸು ಮಾಡಬೇಕೋ ಅಥವಾ ಕಾಯ್ದೆ ಜಾರಿಯಾಗಲು ಷರತ್ತುಗಳನ್ನು ವಿಧಿಸಬೇಕೋ? ಅಟ್ರಾಸಿಟಿ ತಡೆ ಕಾಯ್ದೆ ಹೇಳುವಂತೆ ಜಿಲ್ಲೆಗೊಂದು ವಿಶೇಷ ನ್ಯಾಯಾಲಯ ರಚನೆಯಾಗಿಲ್ಲ. ಸಾಕ್ಷಿಗಳಿಗೆ ರಕ್ಷಣೆ ಕೊಡುವ ಕೆಲಸವಾಗಿಲ್ಲ. ಪ್ರತಿಕೂಲ ಸಾಕ್ಷಿಗಳಾಗಿ ಮಾರ್ಪಡುವವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಅಸ್ಪøಶ್ಯತೆ ಜೀವಂತವಾಗಿರುವುದಕ್ಕೆ ಸರ್ಕಾರಗಳಿಗೆ ಛೀಮಾರಿ ಹಾಕಿಲ್ಲ. ಪರಿಶಿಷ್ಟರಿಗೆ ರಕ್ಷಣೆ ದೊರಕುತ್ತಿದೆಯೇ ಎಂಬುದನ್ನು ಖಾತ್ರಿಗೊಳಿಸಿಕೊಂಡಿಲ್ಲ. ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾದ ತಕ್ಷಣ ಆರೋಪಿಗಳು ಕೌಂಟರ್ ಪ್ರಕರಣ ದಾಖಲಿಸುವುದಕ್ಕೆ ಯಾವುದೇ ಪರಿಶೀಲನೆಗಳಿಲ್ಲ. ಆದರೆ ದುರ್ಬಲರ ಮೇಲೆಸಗುವ ಅನ್ಯಾಯಗಳಿಗೆ ‘ಅತಿರೇಕದ ದುರ್ಬಳಕೆ’ ಎಂಬ ಹಣೆಪಟ್ಟಿ ಕಟ್ಟಿ ಷರತ್ತು ವಿಧಿಸುವುದು ಅತಿ ಸುಲಭದ ಕೆಲಸವಲ್ಲವೇ? ನಮ್ಮ ನ್ಯಾಯಾಲಯಗಳಿಗೆ ದಲಿತರನ್ನು ಸುಟ್ಟು, ಕೊಚ್ಚಿ ಕೊಲ್ಲುವುದು, ಮಹಿಳೆ ಎದೆ ಸೀಳುವುದು, ಶವಕ್ಕೂ ಅತ್ಯಾಚಾರವೆಸಗುವುದು ಯಾವತ್ತೂ ‘ಅತಿರೇಕದ ದೌರ್ಜನ್ಯ’ ಎನಿಸಲೇ ಇಲ್ಲ. ಅದಕ್ಕೆ ಅಪರಾಧಿಗಳಿಗೆ ಶಿಕ್ಷೆ ವಿಧಿಸಲೇ ಇಲ್ಲ.

ಶಾಲೆಯಲ್ಲಿ ಅಡುಗೆ ಮಾಡುವ ಸರ್ಕಾರಿ ಕೆಲವನ್ನು ಮೇಲ್ಜಾತಿಗಳ ಒತ್ತಾಯ ಮಾಡಿದರೂ ತ್ಯಜಿಸದಿದ್ದುದಕ್ಕೆ ಆಕೆಯನ್ನು ಮತ್ತು ಅವಳ ಎಳೆಯ ಮಗನನ್ನು ಗುಜರಾತ್ ನಲ್ಲಿ ಅಮಾನುಷವಾಗಿ ಥಳಿಸಿದ್ದರು
ಉತ್ತರಪ್ರದೇಶದಲ್ಲಿ ತಾವು ಕೊಟ್ಟ ದೂರನ್ನು ಸ್ವೀಕರಿಸುವಂತೆ ಮಾಡಲು ಇಡೀ ದಲಿತ ಕುಟುಂಬ (ಇಬ್ಬರು ಮಹಿಳೆಯರು ಒಳಗೊಂಡಂತೆ) ಪೊಲೀ ಸ್ ಠಾಣೆಯ ಮುಂದೆ ಬೆತ್ತಲಾಗಿ ಪ್ರತಿಭಟಿಸಬೇಕಾಗಿ ಬಂದಿತ್ತು

ಎಲ್ಲಾ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುವವರು ಇರುತ್ತಾರೆ. ಹಾಗೆಂದು ಕಾನೂನನ್ನೇ ದುರ್ಬಲಗೊಳಿಸುವುದು ಎಷ್ಟು ಸರಿ? ಕಣ್ಣಿಗೆ ಗಾಯವಾದರೆ ತಲೆಯನ್ನೇ ತೆಗೆಯಬೇಕೆ? ಜಾತಿವಾದಿಗಳಿಗೆ 7 ದಿನಗಳಲ್ಲ, ಒಂದು ಕ್ಷಣ ಸಿಕ್ಕರೂ ಸಾಕು ಬೆದರಿಕೆ ಒಡ್ಡಿ ದಲಿತರ ಬಾಯಿ ಮುಚ್ಚಿಸುತ್ತಾರೆ. ಹೀಗಿರುವಾಗ ಸಂವಿಧಾನದ ಕಲಂ 46 ದಲಿತರಿಗೆ ಎಲ್ಲಾ ರೀತಿಯ ದೌರ್ಜನ್ಯಗಳಿಂದ ರಕ್ಷಣೆ ನೀಡಬೇಕೆಂದು ಹೇಳುತ್ತದೆಯೇ ಹೊರತು ಇರುವ ಕಾನೂನನ್ನು ದುರ್ಬಲಗೊಳಿಸಲೆಂದಲ್ಲ. ಆ ಕಾರಣಕ್ಕಾಗಿಯೇ 1989 ರಲ್ಲಿ ಈ ಕಾಯ್ದೆಯನ್ನು ರಚಿಸಲಾಗಿತ್ತು. ಆದರೆ ಇಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ದಲಿತರನ್ನು ಶೋಷಿಸಲು ಸವರ್ಣಿಯರಿಗೆ ಮತ್ತಷ್ಟು ಧೈರ್ಯ ಕೊಡುತ್ತದೆ. ದಲಿತೇತರರ ಫ್ಯೂಡಲ್ ಮನಸ್ಥಿತಿ ವಿರುದ್ಧ ದಲಿತರಿಗಿರುವ ಚಿಕ್ಕದೊಂದು ರಕ್ಷಣೆಯನ್ನೇ ಮೊಟಕುಗೊಳಿಸಿದಂತಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರೆ ಇಂತಹ ದುರ್ಘಟನೆ ಜರುಗುತ್ತಿರಲಿಲ್ಲ. 9 ಜೀವಗಳು ನೆಲಕ್ಕೊರಗುತ್ತಿರಲಿಲ್ಲ. ಕೇಂದ್ರ ಸರ್ಕಾರ ಸ್ವತಃ ಅಟಾರ್ನಿ ಜನರಲ್ ಅವರಿಂದಲೇ ವಿಶೇಷ ಮುತುವರ್ಜಿ ವಹಿಸಿ ಕಾಯ್ದೆಯನ್ನು ಉಳಿಸಬೇಕಿದೆ. ದುರ್ಬಲರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಉಳಿಸಬೇಕಿದೆ. ಆದರೆ ಜನರ ಮುಂದೆ ಒಂದು ಮಾತು, ಕೋರ್ಟ್ ಮುಂದೆ ಇನ್ನೊಂದು ಮಾತನ್ನಾಡುವ ಕೇಂದ್ರ ಸರ್ಕಾರ ಈ ಕೆಲಸವನ್ನು ಮಾಡಬಲ್ಲದೆ?

ವಿಕಾಸ್ ಆರ್ ಮೌರ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...