| ಹನುಮಂತ ಹಾಲಿಗೇರಿ |
ಕೊಳ್ಳೆಹೊಡೆಯುವವರ ಕೈಗೆ ದೇಶವನ್ನು ಕೊಟ್ಟುಬಿಟ್ಟು ನಾನು ದೇಶ ಕಾಯುವ ಚೌಕಿದಾರ ಅಂತ ಹೇಳ್ಕೊಂಡವನ ಟ್ರೋಲ್ಗಳನ್ನು ನಾವು ಕಳೆದ ಒಂದು ವಾರದಿಂದ ಗಮನಿಸುತ್ತಿದ್ದೇವೆ. ಅಂಥವನೇ ಇನ್ನೊಬ್ಬ ಚೌಕಿದಾರರಾದ ಮನು ಬಳಿಗಾರ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಗಿರಿ ಖುರ್ಚಿಯಲ್ಲಿ ಕುಳಿತಿದ್ದಾರೆ. ಬಳಿಗಾರರು ಅಧ್ಯಕ್ಷರಾದ ಮೇಲೆ ಅವರ ಸರ್ವಾಧಿಕಾರದ ಸ್ವಯಂಕೃತ ತಪ್ಪುಗಳು ಒಂದೆರಡಲ್ಲ. ಈಗ ಸೂಕ್ಷ್ಮ ಸಂವೇದನೆಯ ಕವಯತ್ರಿ ರೂಪಾ ಹಾಸನ ಅವರು ಪರಿಷತ್ತಿನ ಅಜೀವ ಸದಸ್ಯತ್ವಕ್ಕೆ ನೀಡಿರುವ ರಾಜಿನಾಮೆ ಪಡೆದುಕೊಂಡು ಮತ್ತೊಮ್ಮೆ ಕನ್ನಡ ಸಾಂಸ್ಕೃತಿಕ ಜೀವಿಗಳಿಂದ ಗೇಲಿಗೊಳಗಾಗಿದ್ದಾರೆ.
ರೂಪಾ ಅವರು ರಾಜಿನಾಮೆ ನೀಡಿದರೆ ನಾನೇನು ಮಾಡಲಿ ಎಂದು ಅವರ ಆಪ್ತರ ಹತ್ತಿರ ಸಮರ್ಥಿಸಿಕೊಳ್ಳುತ್ತಿದ್ದಾರಂತೆ. `ಅವರೇನೋ ರಾಜಿನಾಮೆ ನೀಡಿದರು. ನೀವು ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷ, ಯಾವುದನ್ನು ಸ್ವೀಕರಿಸಬೇಕು. ಯಾವುದನ್ನು ಸ್ವೀಕರಿಸಿಬಾರದು ಎಂಬ ಕಾಮನ್ ಸೆನ್ಸ್ ನಿನಗೆ ಇರಬೇಕಲ್ಲವೇ?’ ಎಂದು ಬಳಿಗಾರರ ಆಪ್ತರೇ ಹಿಂದೆಮುಂದೆ ಆಡಿಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ ರೂಪಾ ಅವರೇನು ತಮ್ಮ ಸ್ವಾರ್ಥ ಸಾಧನೆಗಾಗಿ ರಾಜೀನಾಮೆ ನೀಡಿದವರಲ್ಲ. ಅವರ ರಾಜೀನಾಮೆಯ ಹಿಂದೆ ಕನ್ನಡ ಶಾಲೆಗಳ ಏಳ್ಗೆಯ ಕುರಿತು ಸರ್ಕಾರ ಮತ್ತು ಸಾಹಿತ್ಯ ಪರಿಷತ್ತುಗಳ ನಿರ್ಲಕ್ಷ್ಯದ ವಿರುದ್ಧದ ಪ್ರತಿರೋಧದ ದನಿ ಇತ್ತು. ಮನೆಯ ಯಜಮಾನ ದಾರಿ ತಪ್ಪಿದಾಗ ಅವನ ತಪ್ಪನ್ನು ಸರಿಪಡಿಸಿ ಸರಿ ದಾರಿಗೆ ತರುವ ಉದ್ದೇಶದಿಂದ ಕನ್ನಡ ಮನೆಯ ಹಿರಿಮಗಳಾಗಿ ರೂಪಾ ಅವರು ಈ ಪತ್ರವನ್ನು ಬರೆದಿದ್ದರೇನೋ, ರಾಜಿನಾಮೆಯನ್ನು ನೀಡಲೇಬೇಕೆಂಬ ಹಟವೇನು ಅವರಲ್ಲಿ ಇದ್ದಂತಿರಲಿಲ್ಲ. ಆದರೆ, ಬಳಿಗಾರರು ರೂಪಾ ಅವರ ಎತ್ತಿರುವ ಮುಖ್ಯ ಪ್ರಶ್ನೆಗಳಾವುದರ ಬಗ್ಗೆಯೂ ಕಿಂಚಿತ್ ಗಮನ ನೀಡದೇ ಆಯ್ತು ಬೀಡಮ್ಮ ಎನ್ನುವ ದುರಹಂಕಾರಿಯಂತೆ ರಾಜೀನಾಮೆ ಪತ್ರಕ್ಕೆ ಅಂಗೀಕಾರದ ಮುದ್ರೆ ಒತ್ತಿ ತಮ್ಮ ಉದ್ದಟತನ ಮೆರೆದಿದ್ದಾರೆ.
ರೂಪಾ ಹಾಸನ ಅವರು ಕಸಾಪದ ದುಂದುವೆಚ್ಚವನ್ನು ಮತ್ತು ಕನ್ನಡಪರ ನಿಷ್ಕಾಳಜಿಯನ್ನು ಪ್ರಶ್ನಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಚಂಪಾ ಅವರು ಅಧ್ಯಕ್ಷರಾಗಿದ್ದಾಗಲೂ ಹೀಗೆಯೇ ಅಜೀವ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ಕಳಿಸಿದ್ದರು. ಆದರೆ, ಒಬ್ಬ ಹಿರಿಯ ಜೀವಪರ ಕಾಳಜಿಯ ಸಾಹಿತಿಯೂ ಆಗಿರುವ ಚಂಪಾ ಅವರು ರೂಪಾ ಅವರನ್ನು ಕರೆಸಿಕೊಂಡು “ನಿನ್ನ ಅಜೀವ ಸದಸ್ಯತ್ವದ ರಾಜೀನಾಮೆಯನ್ನು ಸ್ವೀಕರಿಸಲು ನಾನೇನು ಅಜೀವ ಅಧ್ಯಕ್ಷನೇ. ಇನ್ನೆರಡು ವರ್ಷ ಅಷ್ಟೆ ನನ್ನ ಆಟ. ನಾನೆ ಅಜೀವ ಅಧ್ಯಕ್ಷನಲ್ಲವೆಂದ ಮೇಲೆ ನಾನ್ಹೇಗೆ ನಿನ್ನ ರಾಜೀನಾಮೆ ತೆಗೆದುಕೊಳ್ಳಲಿಕ್ಕಾಗುತ್ತೆ, ಆಗೂದಿಲ್ಲ. ಆದ್ರೆ ನೀನು ಎತ್ತಿರುವ ಪ್ರಶ್ನೆಗಳೆಲ್ಲವೂ ಮೌಲಿಕವಾದವು. ಕನ್ನಡ ಶಾಲೆಗಳ ಮುಚ್ಚುತ್ತಿರುವುದನ್ನು ನಾನು ವಿರೋಧಿಸುತ್ತೇನೆ. ಸರಕಾರದೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ” ಎಂದು ಸಮಾಧಾನ ಮಾಡಿ ಕಳಿಸಿದ್ದರಂತೆ. ಆದರೆ, ಬಳಿಗಾರರು ಮಾತ್ರ ರೂಪಾ ಅವರ ಯಾವ ಪ್ರಶ್ನೆಗಳಿಗೂ ತಲೆ ಕೆಡಿಸಿಕೊಳ್ಳದೆ ರಾಜೀನಾಮೆಯನ್ನು ಸ್ವೀಕರಿಸುವ ಮೂಲಕ ಕಸಾಪದ ಅಜೀವ ಅಧ್ಯಕ್ಷರಾದವರಂತೆ ವರ್ತಿಸಿದ್ದಾರೆ. ಅವರ ಅಧಿಕಾರ ದಾಹದ ಬಗ್ಗೆ ಗೊತ್ತಿರದ್ದೇನಿಲ್ಲ. ಮೂರು ವರ್ಷದ ಅವಧಿಯನ್ನು ಬೈಲಾ ತಿದ್ದುಪಡಿ ಮಾಡಿಸಿಕೊಂಡು ಐದು ವರ್ಷಕ್ಕೆ ಏರಿಸಿಕೊಂಡಿರುವ ಅವರು ಅಜೀವ ಅಧ್ಯಕ್ಷಗಿರಿಗೂ ಏನಾದ್ರೂ ಹುನ್ನಾರ ಮಾಡಿದ್ರೂ ಮಾಡುವವರೇ ಎಂದು ಅವರ ಪಟಾಲಮ್ಮಿನ ಬಳಗದವರೇ ಮಾತಾಡಿಕೊಳ್ಳುತ್ತಿದ್ದಾರೆ.
ಮನು ಬಳಿಗಾರರ ಸರ್ವಾಧಿಕಾರಿ ಉದ್ದಟತನಗಳು ಒಂದೆರಡಲ್ಲ ಮತ್ತು ಇದೇ ಮೊದಲಲ್ಲ. ಈ ಹಿಂದೆ ಹಿರಿಯರಾದ ಎಂ.ಎಂ.ಕಲ್ಬುರ್ಗಿಯವರು ಹತ್ಯೆಯಾದಾಗ, ಆ ಹತ್ಯೆಯನ್ನು ವಿರೋಧಿಸಿ ಯುವ ಬರಹಗಾರರು ಕಸಾಪದ ಅರಳು ಪ್ರಶಸ್ತಿಯನ್ನು ವಾಪಸ್ ಮಾಡಿ ಪ್ರತಿಭಟನೆ ಮಾಡಿದ್ದರು. ಆಗ ಇದೇ ಬಳಿಗಾರರು “ಈ ಹುಡುಗರು ಪ್ರಚಾರಕ್ಕಾಗಿ ಇಂಥ ಅಗ್ಗದ ಗಿಮಿಕ್ ಮಾಡುತ್ತಿದ್ದಾರೆ” ಎಂದು ಲೂಜುಲೂಜಾಗಿ ಮಾತನಾಡುವ ಮೂಲಕ ತಮ್ಮ ಮರ್ಯಾದೆ ಕಳೆದುಕೊಂಡಿದ್ದರು. ತಮ್ಮ ಅಧಿಕಾರದ ಅವಧಿ ಮುಗಿಯಲು ಬಂದಾಗ ಕಸಾಪದ ಬೈಲಾವನ್ನೇ ಬದಲಾಯಿಸಿ ಮೂರು ವರ್ಷದ ಅವಧಿಯನ್ನು ಐದು ವರ್ಷಕ್ಕೆ ಏರಿಸಿಕೊಂಡರು. ಬೈಲಾ ಬದಲಾಯಿಸಿ ಐದು ವರ್ಷ ಮಾಡಿದ್ದು ಕಾನೂನು ಪ್ರಕಾರ ತಪ್ಪೇನೂ ಅಲ್ಲ, ಆದರೆ, ನಿಮಗೆ ಆತ್ಮಸಾಕ್ಷಿ ಅನ್ನೋದಿದ್ರೆ ಈಗ ಖುರ್ಚಿಯಿಂದ ಕೆಳಗಿಳಿಯಿರಿ. ಮುಂದಿನ ಅಧಿಕಾರಾವಧಿಯ ಅಧ್ಯಕ್ಷರು ಬೇಕಾದರೆ ಐದು ವರ್ಷ ಖುರ್ಚಿಯಲ್ಲಿರಲಿ ಎಂಬ ಪ್ರಜ್ಞಾವಂತರ ಕೂಗಿಗೆ ಬಳಿಗಾರರು ಕಿವಿಗೊಡುತ್ತಲೇ ಇಲ್ಲ.
ಇನ್ನು ಇತ್ತೀಚೆಗೆ ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ವಾನಗಳಂತೂ ಒಂದೆರಡಲ್ಲ. ಆರಂಭದಲ್ಲೇ ಸುಮಂಗಲಿಯರಿಂದ ಪೂರ್ಣಕುಂಭ ಮೆರವಣಿಗೆ ಎಂಬ ಕಂದಾಚಾರದ ವಿರುದ್ಧ ರಾಜ್ಯಾದ್ಯಂತ ಪ್ರತಿರೋಧ ಬುಗಿಲೆದ್ದರೂ ತಮ್ಮ ನವರಂದ್ರಗಳನ್ನೆಲ್ಲ ಮುಚ್ಚಿಕೊಂಡಿದ್ದ ಈ ಬಳಿಗಾರ ಸಾಹೇಬರು ಕೊನೆ ಕ್ಷಣದಲ್ಲಿ ತಾವು ಅಂದುಕೊಂಡು ಸುಮಂಗಲಿಯರ ಕುಂಭ ಮೆರವಣಿಗೆಯನ್ನು ನಡೆಸಿ ತಮ್ಮ ಹಟವನ್ನೇ ಸಾಧಿಸಿದರು.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶೀಗ್ಲಿಯವರಾದ ಈ ಬಳಿಗಾರರ ಮೂಲತಃ ಗೌಡ್ಕಿ ಮನೆತನದಿಂದ ಬಂದವರು. ಆ ಜಮೀನ್ದಾರಿಕೆಯ ಪಳಿಯುಳಿಕೆಯೂ ಅವರ ನಡೆನುಡಿಗಳಲ್ಲಿ ಈಗಲೂ ಜೀವಂತವಾಗಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಉನ್ನತ ಅಧಿಕಾರದ ಹುದ್ದೆಗಳನ್ನು ಕೂಡ ಅದೇ ಗೌಡ್ಕಿ ಗತ್ತಿನಲ್ಲಿಯೇ ನಿಭಾಯಿಸಿದ್ದರು. ಕುಂತರೂ, ನಿಂತರೂ ಭಲೆ, ಭಲೆ ಎನ್ನುವ, ಬಹುಫರಾಕ್ ಹೇಳುವ ಬಾಲಬಡುಕರಿಗೆ ಮಾತ್ರ ಬಹುತೇಕ ಅನುದಾನ ಮತ್ತು ಅವಕಾಶಗಳನ್ನು ನೀಡಿದವರು. ಮುಂದೆ ಈ ಬಾಲಬಡುಕರೇ ಇವರನ್ನು ಕಸಾಪ ಚುನಾವಣೆಯಲ್ಲಿ ಗೆಲ್ಲಿಸುವಲ್ಲಿ ನೆರವಾದರು. ಕೆಲವು ಪ್ರಜ್ಞಾವಂತ ಹಿರಿಯರು ಕೂಡ ಬಳಿಗಾರರನ್ನು ಚುನಾವಣೆಯ ಸಂದರ್ಭದಲ್ಲಿ ಬೆಂಬಲಿಸಿದ್ದು ವಿಷಾದನೀಯ. ಯಾಕಾದ್ರೂ ಈ ಪುಣ್ಯಾತ್ಮನನ್ನು ಗೆಲ್ಲಿಸಿದೆವೋ ಎಂದು ಈಗ ಅವರೆಲ್ಲ ಮುಖ ಕಿವುಚಿತ್ತಿದ್ದಾರಂತೆ.
ಒಟ್ನಲ್ಲಿ ಈ ಮನುಷ್ಯ ಮನು`ಸ್ಮತಿ’ ಬಳಿಗಾರ್ ಕಸಾಪವವನ್ನು ವಸಾಹತು ಮಾಡಿಕೊಂಡಿದ್ದು ಮತ್ತೊಮ್ಮೆ ಸಾಬೀತಾಗಿದೆ. ಒಂಚೂರು ಸಾಹಿತ್ಯಿಕ ಸಂವೇದನೆ ಇದ್ದಿದ್ದರೆ, ಒಂದಿಷ್ಟು ಕನ್ನಡ ಪುಸ್ತಕಗಳನ್ನು ಓದಿಕೊಂಡಿದ್ದರೆ, ಬಹುಶಃ ಬಳಿಗಾರರು ಹೀಗೆ ಮಾಡುತ್ತಿರಲಿಲ್ಲವೇನೋ. ಈಗಲೂ ಕಾಲ ಮಿಂಚಿಲ್ಲ. ಸಾಂಸ್ಕೃತಿಕ ವಲಯದ ಪ್ರಜ್ಞಾವಂತರೆಲ್ಲರೂ ಒಟ್ಟಾಗಿ ನೀನು ನಿನ್ನ ದುರಾಡಳಿತವನ್ನು ಬಿಡದಿದ್ದರೆ ನಾವೆಲ್ಲರೂ ಸೇರಿ ಅಜೀವ ಸದಸ್ಯತ್ವಕ್ಕೆ ರಾಜಿನಾಮೆಯನ್ನು ನೀಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿ ತಿದ್ದಬೇಕಿದೆ. ಇಲ್ಲದಿದ್ದರೆ ರೂಪಾ ಅವರ ರಾಜೀನಾಮೆ ಅರ್ಥ ಕಳೆದುಕೊಳ್ಳುತ್ತದೆ.