Homeಅಂಕಣಗಳುಕನ್ನಡ ಸಾಹಿತ್ಯ ಪರಿಷತ್ ರಗಳೆ…

ಕನ್ನಡ ಸಾಹಿತ್ಯ ಪರಿಷತ್ ರಗಳೆ…

- Advertisement -
- Advertisement -

ಒಂದುಕಾಲಕ್ಕೆ ಕನ್ನಡಿಗರೆಲ್ಲರ ಆತ್ಮಾಭಿಮಾನದ ಪ್ರತೀಕದಂತಿದ್ದ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿನ ದಿನಗಳಲ್ಲಿ ಸಲ್ಲದ ಅವಾಂತರಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ಪೂರ್ಣಕುಂಭದ ಕುರಿತಂತೆ ಎದ್ದಿದ್ದ ವಿವಾದ ಮಾಸುವ ಮುನ್ನವೇ ಇದೀಗ ಅಜೀವ ಸದಸ್ಯರೊಬ್ಬರು ಸಾಮುದಾಯಿಕ ಪ್ರತಿರೋಧದ ಪ್ರತೀಕವಾಗಿ ನೀಡಿದ್ದ ರಾಜೀನಾಮೆಯನ್ನು ಕಸಾಪ ಅಧ್ಯಕ್ಷರು ಅಂಗೀಕರಿಸುವ ಮೂಲಕ ಸಾಹಿತ್ಯ ವಲಯದಲ್ಲಿ ಮತ್ತೆ ಸುದ್ದಿಗೆ ಬಂದಿದೆ. ನ್ಯಾಯಪಥ ಪತ್ರಿಕೆಯು ಈ ಕುರಿತ ಚರ್ಚೆಯನ್ನು ಇಲ್ಲಿ ಶುರು ಮಾಡುತ್ತಿದೆ. ರೂಪಾ ಹಾಸನ್ ಅವರು ತಮ್ಮ ಅಜೀವ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆ ಪತ್ರ, ಕಸಾಪ ಅಧ್ಯಕ್ಷರ ಈ ಕ್ರಮ ಪ್ರಶ್ನಿಸಿ ಬೆಂಗಳೂರು ನಗರ ಜಿಲ್ಲಾ ಕಸಾಪ ಗೌರವ ಸಂಚಾಲಕ ಲಿಂಗೇಶ್ ಅವರು ಬರೆದ ಬಹಿರಂಗ ಪತ್ರ, ಕಥೆಗಾರ ಹನುಮಂತ ಹಾಲಗೇರಿಯವರ ಒಟ್ಟಾರೆ ಒಳನೋಟ ಹಾಗೂ ಈ ವಿವಾದದ ಬಗ್ಗೆ ಸ್ವತಃ ಮನುಬಳಿಗಾರರು ನೀಡಿದ ಪುಟ್ಟ ಪ್ರತಿಕ್ರಿಯೆಯನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ. ಈ ಚರ್ಚೆಗೆ ಪ್ರತಿಕ್ರಿಯಿಸ ಬಯಸುವವರು ತಮ್ಮ ಅಭಿಪ್ರಾಯವನ್ನು ಪತ್ರಿಕೆಯ ಇಮೇಲ್ ಐಡಿ [email protected] ಗೆ ಕಳುಹಿಸಬಹುದು. ಪ್ರತಿಷ್ಠೆಗಳ ಕಾದಾಟಕ್ಕಿಂತ ಒಂದು ಆರೋಗ್ಯಕರ ಚರ್ಚೆ ಮಾತ್ರ ಕನ್ನಡಿಗರ ಈ `ಆತ್ಮಾಭಿಮಾನ’ವನ್ನು ವಿವಾದಗಳ ಹುತ್ತದಿಂದ ಹೊರಗೆಳೆದು ತರಬಲ್ಲದು ಎಂಬುದಷ್ಟೇ ಪತ್ರಿಕೆಯ ಆಶಯ…

ಶ್ರೀ ಮನು ಬಳಿಗಾರ್

ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು,

ಬೆಂಗಳೂರು.

– ಇವರಿಗೆ

ಮಾನ್ಯರೇ,

ವಿಷಯ: ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವಕ್ಕೆ [ಸಂಖ್ಯೆ-44892]

ರಾಜೀನಾಮೆ ನೀಡುವ ಕುರಿತು.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರೆಲ್ಲರ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವಂತದ್ದು. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿ ಪರಿಷತ್ತಿನ ಉದ್ದೇಶವಾಗಿರತಕ್ಕುದೆಂದು ನಿಬಂಧನೆಯಲ್ಲಿ ಘೋಷಿಸಲಾಗಿದೆಯಷ್ಟೇ.

ಆದರೆ ಪರಿಷತ್ತು ತನ್ನ ಮೂಲ ಉದ್ದೇಶವನ್ನು ಮರೆತು ಲಕ್ಷ, ಕೋಟಿಗಟ್ಟಲೆ ಹಣ ವ್ಯಯಿಸುತ್ತಾ ಅಖಿಲ ಭಾರತ, ಜಿಲ್ಲಾ, ತಾಲ್ಲೂಕು, ಹೋಬಳಿ ಸಮ್ಮೇಳನಗಳನ್ನು, ಅದ್ಧೂರಿ ಕಾರ್ಯಕ್ರಮಗಳನ್ನು ವರ್ಷವಿಡೀ, ರಾಜ್ಯಾದ್ಯಂತಾ ಆಯೋಜನೆ ಮಾಡುವುದರಲ್ಲೇ ಕಳೆದು ಹೋಗುತ್ತಿದೆ. ಕನ್ನಡ ನಾಡು-ನುಡಿಗೆ ಒದಗಿರುವ ಅತ್ಯಂತ ಸಂಕಷ್ಟದ ಸನ್ನಿವೇಶದಲ್ಲೂ ಪರಿಷತ್ತಿನ ಅದ್ಧೂರಿತನ, ನಾಡು ನುಡಿಯ ಜ್ವಲಂತ ಸಮಸ್ಯೆಗಳಿಗೆ ಕೇವಲ ತುಟಿ ಮರುಕ ತೋರಿ ಗಟ್ಟಿ ನಿಲುವು ತೆಗೆದುಕೊಳ್ಳದೇ, ಕನ್ನಡಿಗರೆಲ್ಲರ ಪರವಾಗಿ ನಿರ್ಣಾಯಕ ಪಾತ್ರವಹಿಸದೇ, ರಚನಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳದೇ, ಆಂದೋಲನವನ್ನು ಕಟ್ಟದೇ… ಅದ್ಧೂರಿ, ವೈಭವದ ಸಮ್ಮೇಳನಗಳಲ್ಲಿ ಮುಳುಗಿರುವುದು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆಯಂತಾಗಿರುವುದು ವಿಪರ್ಯಾಸವೇ ಸರಿ.

ಜೊತೆಗೆ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ, ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಪಡೆದು ಅದ್ಧೂರಿ ಸಮ್ಮೇಳನಗಳನ್ನು, ಕಾರ್ಯಕ್ರಮಗಳನ್ನು ಹಳ್ಳಿಯಿಂದ ದಿಲ್ಲಿಯವರೆಗೆ ಆಯೋಜಿಸುವ ಸಾಹಿತ್ಯ ಪರಿಷತ್ತು ಮತ್ತದರ ಘಟಕಗಳು ತಾನು ಮಾಡುತ್ತಿರುವ ದುಂದು ವೆಚ್ಚದ ಲೆಕ್ಕವನ್ನು ಪಾರದರ್ಶಕವಾಗಿ ಸಾರ್ವಜನಿಕರಿಗಾಗಲೀ, ಕನಿಷ್ಠ ತನ್ನ ಸದಸ್ಯರಿಗಾಗಲೀ ಬಿಡುಗಡೆ ಮಾಡದೇ, ತನ್ನೊಳಗೇ ಗುಟ್ಟಾಗಿಟ್ಟುಕೊಳ್ಳುವ ಪರಿ ಅವ್ಯವಹಾರದ ಗುಮಾನಿಯನ್ನು ಹೆಚ್ಚಿಸುವ ಜೊತೆಗೆ ಇದು ಎಲ್ಲ ರೀತಿಯಲ್ಲೂ  ಕನ್ನಡಿಗರೆಲ್ಲರ ಪ್ರಾತಿನಿಧಿಕ ಸಂಸ್ಥೆಯ ಅಪ್ರಜಾಪ್ರಭುತ್ವವಾದಿ ನಿಲುವಾಗಿದೆ.

ಎಲ್ಲಕ್ಕಿಂತಾ ಮುಖ್ಯವಾಗಿ ಕನ್ನಡ ಶಾಲೆಗಳನ್ನು ವ್ಯವಸ್ಥಿತವಾಗಿ ಕತ್ತು ಮಿಸುಕಿ ಸಾಯಿಸಲಾಗುತ್ತಿದೆ. ಕನಿಷ್ಠ ಪ್ರಾಥಮಿಕ ಶಿಕ್ಷಣದಲ್ಲಾದರೂ ಕನ್ನಡ ಮತ್ತು ಇತರೇ ಮಾತೃಭಾಷೆಗಳು ಶಿಕ್ಷಣ ಮಾಧ್ಯಮವಾಗದಿದ್ದರೇ ಕನ್ನಡವೋ ಇತರ ಮಾತೃಭಾಷೆಗಳೋ ಹೇಗೆ ಉಳಿದೀತು? ಇದನ್ನು ಆಗುಮಾಡುವುದು ತನ್ನ ಉಸಿರು  ಎಂದು ಕೊಳ್ಳಬೇಕಾದ ಕನ್ನಡ  ಸಾಹಿತ್ಯ ಪರಿಷತ್ತು, ಕೇವಲ ಕಾಟಾಚಾರಕ್ಕೆ ಸರ್ಕಾರಗಳಿಗೆ ಪತ್ರ ಬರೆದು, ಮತ್ಯಾವ  ರಚನಾತ್ಮಕ  ಪ್ರಯತ್ನವನ್ನೂ  ಮಾಡದೇ, ಕೇವಲ ಸಮ್ಮೇಳನಗಳನ್ನು ಮಾಡಿ ಅಲ್ಲಿ ಕನ್ನಡ ಭಾಷೆ/ಶಾಲೆಯ ಪರವಾಗಿ ಪುಂಖಾನುಪುಂಖವಾಗಿ ಭಾಷಣ ಮಾಡಿಸಿ, ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕಷ್ಟೇ ಸಿಮಿತವಾಗಿರುವುದು ಕನ್ನಡ ನಾಡು, ನುಡಿಯ ಅಣಕದಂತೆ ತೋರುತ್ತಿದೆ.

ಇವೇ ಕಾರಣಗಳಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯಳಾಗಿ ಮುಂದುವರೆಯುವುದು ನನಗೆ ಅಸಹನೀಯವೆನಿಸುತ್ತಿರುವುದರಿಂದ ನನ್ನ ಈ ರಾಜಿನಾಮೆ ಪತ್ರವನ್ನು ತಮಗೆ ಕಳಿಸುತ್ತಿದ್ದೇನೆ. ದಯಮಾಡಿ ಈಗ್ಗೆ 15 ವರ್ಷಗಳ ಹಿಂದೆ ಪಡೆದಿದ್ದ ಪರಿಷತ್ತಿನ ನನ್ನ ಸದಸ್ಯತ್ವವನ್ನು[ಸದಸ್ಯತ್ವ ಸಂಖ್ಯೆ-44892] ರದ್ದುಪಡಿಸುವ ಜೊತೆಗೆ ಕಸಾಪ ಚುನಾವಣೆಯ ಅರ್ಹ ಮತದಾರರ ಪಟ್ಟಿಯಿಂದ ನನ್ನ ಹೆಸರನ್ನು ಕೈಬಿಡಬೇಕೆಂದು ನಿಮ್ಮಲ್ಲಿ ವಿನಂತಿಸುತ್ತೇನೆ.

ಈ  ಕುರಿತು ತಮ್ಮಿಂದ ಶೀಘ್ರ ಉತ್ತರದ ನಿರೀಕ್ಷೆಯಲ್ಲಿರುವೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ

ರೂಪ ಹಾಸನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...