Homeಅಂಕಣಗಳುಈ ಸಲ ಜ್ಞಾನಪೀಠಕ್ಕೆ ಕಾದೈತೆ ಗಂಡಾಂತರ

ಈ ಸಲ ಜ್ಞಾನಪೀಠಕ್ಕೆ ಕಾದೈತೆ ಗಂಡಾಂತರ

- Advertisement -
- Advertisement -

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ‘ಅಟ್ಯಾಕ್ ಹನ್ಮಂತ’. ಇದೀಗ ದೊಡ್ ಸುದ್ದಿಗಳು.
ಪರದೇಶಿ ದುಡ್ಡಿಗೆ ಆಸೆಪಟ್ಟು ಬ್ಲೂಜೆಪಿ ಮಾಡ್ತು ಎಡವಟ್ಟು: ಕಾನೂನಿಗೆ ತಂದ್ರು ತಿದ್ದುಪಡಿ, ಕೋರ್ಟ್ ಇಡ್ತು ದೊಡ್ಡ ಧಡಿ.
ಪೊಲಿಟಿಕಲ್ ಪಾರ್ಟಿಗಳು ವಿದೇಶದಿಂದ ಯಾವುದೇ ಬಗೆಯ ದೇಣಿಗೆ ಪಡೆಯುವುದು ಅಪರಾಧ ಎಂದಿದ್ದ ಹಿಂದಿನ ಕಾನೂನನ್ನು ಬದಲಾಯಿಸಿ, ದೇಶದೊಳಗಿನ ಪಕ್ಷಗಳು ಯಾವ ದೇಶದ ಶ್ರೀಮಂತರಿಂದ ಬೇಕಾದರೂ ಕೋಟಿಗಟ್ಟಲೆ ತಿರುಪೆ ಎತ್ತಬಹುದು ಎಂದು ತಿದ್ದುಪಡಿ ಮಾಡಿಕೊಂಡಿದ್ದ ಬ್ಲೂಜೆಪಿ ಪಕ್ಷದ ಮುಖಕ್ಕೆ ಖಡಕ್ ನೊಟೀಸ್ ಕಳಿಸಿರುವ ದೆಹಲಿ ಹೈಕೋರ್ಟ್, ಇಷ್ಟ ಬಂದಂತೆ ಕಾನೂನನ್ನು ಬದಲಿಸಲು, ಕೋರ್ಟ್‍ನ ತೀರ್ಪುಗಳನ್ನು ತಿರುಚಲು ಕಾನೂನು ನಿಮ್ಮಪ್ಪನ ಮನೆಯ ಆಸ್ತಿಯಲ್ಲ ಎಂದು ಕ್ಯಾಕರಿಸಿ ಉಗಿದಿದೆ. ಅಕ್ರಮವಾಗಿ ಅಘೋಷಿತ ಮೂಲಗಳಿಂದ ಪಕ್ಷಕ್ಕೆ ದೇಣಿಗೆ ಪಡೆದು ಜೇಬು ತುಂಬಿಸಿಕೊಂಡಿದ್ದ ಕಮಲ ಪಕ್ಷ ಕಾನೂನಿನ ಕುಣಿಕೆಗೆ ಸಿಲುಕಿ ಮುಖ ಕೆತ್ತಿಸಿಕೊಳ್ಳುವ ಸಂದರ್ಭ ಎದುರಾಗಿದೆ. ಕೈ ಪಕ್ಷ ಕೂಡ ಈ ದಂಧೆಯಲ್ಲಿ ಕಮಲ ಪಕ್ಷಕ್ಕೆ ಸಾಥ್ ಕೊಟ್ಟಿರುವುದೂ ಕೂಡ ಜಗಜ್ಜಾಹೀರಾಗಿದೆ. ಕಾನೂನು ಕುಣಿಕೆಯಿಂದ ಬಚಾವಾಗಲು ಎಫ್.ಸಿ.ಆರ್.ಎ ಕಾಯ್ದೆಗೇ ತಿದ್ದುಪಡಿ ತಂದು ಎಸ್ಕೇಪ್ ರೂಟ್ ಹುಡುಕಿದ್ದ ಊಸರವಳ್ಳಿ ಪಕ್ಷ ಈಗ ಹೆಗ್ಗಣ ಹಿಡಿಯಲು ಇಟ್ಟಿದ್ದ ಇಕ್ಕಳದೊಳಗೆ ಮುಖ ಸಿಗಿಸಿಕೊಂಡು ತಪ್ಪಿಸಿಕೊಳ್ಳಲಾರದೆ ಕುಯ್ಯೋ ಮರ್ರೋ ಎಂದು ನರಳಾಡುತ್ತಿರುವುದು ದೇಶದ ಜನತೆಗೆ ಸಂತಸವುಂಟು ಮಾಡಿದೆ.

*****

ಲಾಚಾರ್ ಸಾಹಿತಿ ‘ಬೊಯ್ರಪ್ಪ’ನ ‘ಮಕ್ಕನ್ ಮಾರ್’ ಅವಾಂತರ: ಈ ಸಲ ಗ್ಯಾರಂಟಿ ವಕ್ಕರಿಸುತ್ತಂತೆ ಜ್ಞಾನಪೀಠಕ್ಕೇ ಗಂಡಾಂತರ
ದೇಶದ ಅತ್ಯುನ್ನತ ಪ್ರಶಸ್ತಿಗಳು ಘೋಷಣೆಯಾಗಲು ಒಂದೆರಡು ತಿಂಗಳು ಇರುವಂತೆಯೇ ಗರ್ಭಧರಿಸಿದ ಬೆಕ್ಕಿನಂತೆ ಕಯೋವ್, ಮಿಯೋವ್ ಎಂದು ಎದ್ದು ಕೂರುವ ಕುಖ್ಯಾತ ಸಾಹಿತಿ ‘ಬೊಯ್ರಪ್ಪ’ನವರು ಪ್ರತೀವರ್ಷದಂತೆ ಈ ವರ್ಷವೂ ತಮ್ಮ ಮನೆಯಿಂದ ಹೊರಗೆ ಬಂದು ನರಳಾಡಲು ಶುರು ಮಾಡಿದ್ದಾರೆ. ದೇಶವನ್ನು ಅಭಿವೃದ್ಧಿಪಡಿಸಲು ಪಕೋಡೇಂದ್ರ ಫಕೀರಪ್ಪನಿಗೆ 5 ವರ್ಷಗಳು ಜುಜುಬಿ, ಕನಿಷ್ಟಪಕ್ಷ ಎರಡು ಶತಮಾನವಾದರೂ ಪಕೋಡಯ್ಯನು ದೇಶದ ಪ್ರಧಾನಿಯಾದರೆ ದೇಶ ಉದ್ದಾರವಾಗುತ್ತದೆ ಎಂಬ ಸುಸ್ಸು ಸ್ಟೇಟ್‍ಮೆಂಟನ್ನು ಮನೆಯೆದುರಿನ ಲೈಟುಕಂಬಕ್ಕೆ ಕಾಲೆತ್ತಿ ಹುಯ್ದು ವಾಪಸ್ ಮನೆಯೊಳಗೆ ಬುಡುಬುಡನೆ ಓಡಿಹೋಗಿ ಹೊಟ್ಟೆ ಮಕಾಡೆ ಮಲಗಿಬಿಟ್ಟರೆಂದು ನಂಬಲರ್ಹ ಗಾಳಿಸುದ್ದಿಗಳು ತಿಳಿಸಿವೆ.

*****

ದೆಹಲಿ ಲೆಫ್ಟಿನೆಂಟ್ ಗೌರ್ನರ್ ಮುಸುಡಿಗೆ ಬಿತ್ತು ಕೋರ್ಟ್ ತಪರಾಕಿ: ಕೇಜ್ರಿವಾಲ್ ಎದುರು ಮಕಾಡೆಬಿದ್ದ ಬ್ಲೂಜೆಪಿ ಬಾಯಿಗೆ ಆನೆಪಟಾಕಿ.
ದೆಹಲಿಯಲ್ಲಿ ಕೇಜ್ರಿವಾಲ್ ಕೈಲಿ ಸಮಾ ಇಕ್ಕಿಸಿಕೊಂಡು ಚರಂಡಿಪಾಲಾಗಿದ್ದ ದ್ವೇಷಭಕ್ತ ಬ್ಲೂಜೆಪಿಗಳು ಮರ್ಮಸ್ಥಳಕ್ಕೆ ಬಿದ್ದ ಸುತ್ತಿಗೆ ಏಟಿಗೂ ಜಗ್ಗದೆ ಕೇಜ್ರಿವಾಲ್ ತಲೆಯ ಮೇಲೆ ಲೆಫ್ಟಿನೆಂಟ್ ಗೌರ್ನರ್ ಎಂಬ ಗಢವಗೂಬೆಯೊಂದನ್ನು ಕೂರಿಸಿ ಬ್ಯಾಕ್‍ಡೋರ್ ಪಾಲಿಟಿಕ್ಸಿಗೆ ಇಳಿದಿದ್ದರು. ಈ ಬಗ್ಗೆ ಸುಪ್ರೀಂಕೋರ್ಟಿಗೆ ಕೇಸು ಜಡಾಯಿಸಿದ್ದ ಕೇಜ್ರಿವಾಲ್ ಈ ವನ್ಯಜೀವಿ ಗಢವಗೂಬೆಯನ್ನು ಯಾವುದಾದರೂ ಅಭಯಾರಣ್ಯಕ್ಕೆ ಎಸೆಯಬೇಕೆಂದು ಹೋರಾಟ ನಡೆಸುತ್ತಿದ್ದರು. ಈ ಕೇಸಿನ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ‘ಲೆಫ್ಟಿನೆಂಟ್ ಗೌರ್ನರ್’ ಎಂಬ ಹುದ್ದೆಯೇ ಮೂರುಕಾಸಿನದ್ದು, ಅದಕ್ಕೆ ಯಾರೂ ಬೆಲೆ ಕೊಡುವ ಅಗತ್ಯವಿಲ್ಲ, ಬ್ಲೂಜೆಪಿಯ ಈ ಲಡಕಾಸಿ ಗೌರ್ನರ್ ಜನಪ್ರತಿನಿಧಿಗಳ ಅಧಿಕಾರದಲ್ಲಿ ಮೂಗುತೂರಿಸದೆ ಸರ್ವಾಂಗಗಳನ್ನೂ ಮುಚ್ಚಿಕೊಂಡು ತೆಪ್ಪಗಿರಬೇಕೆಂದು ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ ಕೇಜ್ರಿವಾಲ್ ಕೈ ಮೇಲಾಗಿ, ಬ್ಲೂಜೆಪಿಯ ವಯೋವೃದ್ಧ ಪಾಖಂಡಿಗಳು ತಾವು ಬಿದ್ದಿದ್ದ ಚರಂಡಿಯೊಳಗಿಂದ ಎದ್ದುಬರಲು ಯತ್ನಿಸುತ್ತಿರುವಾಗಲೇ ಮತ್ತೊಂದು ಮ್ಯಾನ್‍ಹೋಲ್ ಒಳಕ್ಕೆ ತಲೆಕೆಳಗಾಗಿ ಬಿದ್ದಂತಾಗಿದೆಯೆಂಬ ವಿಶ್ಲೇಷಣೆ ಹೊರಬಿದ್ದಿದೆ. ಈ ಕಿತಾಪತಿ ಪಿತೂರಿಯಲ್ಲಿ ಕೈ ಪಕ್ಷದ ಹಾಸ್ಯನಟರೂ ಸೇರಿಕೊಂಡು ಕೇಜ್ರಿವಾಲರನ್ನು ಈ ಸಲ ಕೆಡವಲು ನಡೆಸುತ್ತಿದ್ದ ಸಂಚು ಈ ಮೂಲಕ ವಿಫಲವಾಗಿದ್ದು, ಸದ್ಯಕ್ಕೆ ರಾಜಧಾನಿಯ ಗೋಶಾಲೆಯಲ್ಲಿ ಹಿಂಡಿಬೂಸಾ ಮೆಲ್ಲುತ್ತ ಪೊಗದಸ್ತಾಗಿದ್ದ ಕೈ ಪಕ್ಷದ ದೆಹಲಿ ನಾಯಕರು ಈ ಕೋರ್ಟ್ ತೀರ್ಪು ಕೇಳಿದ ಕೂಡಲೇ ಅಂಬಾ ಎಂದು ಅರಚಿ, ನಾಲಿಗೆ ಹೊರಚಾಚಿ ಮೂರ್ಛೆ ಹೋಗಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

*****

ಕ್ಯಾನ್ಸರ್‍ಗೆ ದನದ ಮೂತ್ರದಲ್ಲಿ ಔಷಧಿ ಕಂಡುಹಿಡಿದ್ರು ಗುಜರಾತಿಗರು: ಫ್ರಥಮ ದರ್ಜೆ ಮುಠ್ಠಾಳರ ಸಂಶೋಧನೆಯಾಯ್ತು ಜಗಜ್ಜಾಹೀರು
‘ಆಧುನಿಕ ವೈದ್ಯಶಾಸ್ತ್ರ’ ಅಂದರೆ ಕೇಜಿಗೆಷ್ಟು, ಅದು ನೋಡಲಿಕ್ಕೆ ಕರ್ರಗಿರುತ್ತೋ ಬೆಳ್ಳಗಿರುತ್ತೋ ಎಂದು ಕೇಳುವ ಪ್ರಥಮದರ್ಜೆ ಮುಠ್ಠಾಳರ ಗುಜರಾತಿನ ಪಡೆಯೊಂದು, ದನದ ಮೂತ್ರದಲ್ಲಿ ಕ್ಯಾನ್ಸರ್‍ಗೆ ಔಷಧಿ ಇದೆಯೆಂಬ ಎದೆಯೊಡೆಯುವ ಹಾಸ್ಯಾಸ್ಪದ ಸಂಶೋಧನೆಯನ್ನು ಮಾಡಿ ಮುಗಿಸಿದ್ದಾರೆ. ಗುಜರಾತಿನ ಜುನಾಗಢ್ ಯೂನಿವರ್ಸಿಟಿಯ ಪ್ರಾಧ್ಯಾಪಕರು ಈ ಕಿಸಲಗೇಡಿ ಕ್ರಿಸ್ತಪೂರ್ವ ಕಾಲದ ತಾಳೆಗರಿ ಸಂಶೋಧನೆ ನಡೆಸಿದ್ದಾರೆ. ಈ ಸುದ್ದಿ ತಿಳಿದ ವಿದೇಶದ ಯೂನಿವರ್ಸಿಟಿಗಳು ಈ ನಾಲ್ಕನೇ ದರ್ಜೆ ಸಂಶೋಧನೆ ನಡೆಸಿದ ಆದಿಮಾನವರು ಶಿಲಾಯುಗ ಕಾಲದಿಂದ 21ನೇ ಶತಮಾನಕ್ಕೆ ಟೈಂಟ್ರಾವೆಲ್ ಮಾಡಿಕೊಂಡು ಬಂದದ್ದಾದರೂ ಹೇಗೆ ಎಂಬ ಬಗ್ಗೆ ಸಂಶೋಧನೆ ನಡೆಸಲು ಅನುಮತಿ ಕೋರಿ ದ್ವೇಷಭಕ್ತರ ಸರ್ಕಾರದ ಅನುಮತಿ ಕೋರಿದ್ದಾರಂತೆ. ಈ ಅರ್ಜಿಯನ್ನು ಓದಿದ ಸನ್ಮಾನ್ಯ ಕೌಡಂಗ್‍ಪ್ರಿಯ ಪಕೋಡೇಂದ್ರ ಅವರು ಆ ಸಂಶೋಧನೆಗಿಂತಲೂ ಮುಂಚೆ ತನ್ನ ತಲೆಯನ್ನೇ ಮೊದಲು ಆಪರೇಷನ್ ಮಾಡಿ ಒಳಗಿರುವುದು ಮಾಂಸಮಜ್ಜೆಯಿಂದಾದ ಮಿದುಳೋ, ಇಲ್ಲಾ.. ದನದ ಸೆಗಣಿಯಿಂದ ತಯಾರಾದ ಮಿದುಳೋ ಎಂದು ಪತ್ತೆ ಮಾಡಿಕೊಡಲು ವಿದೇಶಿ ಸಂಶೋಧಕರನ್ನು ಅಂಗಲಾಚಿದ್ದಾರಂತೆ.

*****

ಹೊಲದಲ್ಲಿ ನಿಂತು ಮಂತ್ರ ಹೇಳಿದ್ರೆ ಬೆಳೆ ಬರುತ್ತಂತೆ
ಗೋವಾ ಬ್ಲೂಜೆಪಿ ಸಚಿವನ ತಲೆಕೆಟ್ಟ ಅಂತೆಕಂತೆ
ರೈತರ ಹೊಲದಲ್ಲಿ ಸರಿಯಾಗಿ ಬೆಳೆ ಬರದೇ ಇದ್ರೆ ರೈತರು ಹೊಲದಲ್ಲಿ ನಿಂತು “ಓಂ ರುಂ ಜುಂ ಸ್ವಾಹಾ, ಓಂ ರುಂ ಜುಂ ಸ್ವಾಹಾ” ಎಂದು ಮಂತ್ರ ಪಠಿಸಿದರೆ ಬೆಳೆ ಚೆನ್ನಾಗಿ ಬರುತ್ತದೆಂದು ಗೋವಾದ ಬ್ಲೂಜೆಪಿ ಪಕ್ಷದ ಕೃಷಿಸಚಿವ ಹೊಸ ಸಂಶೋಧನೆ ಮಾಡಿದ್ದಾನೆ. ಹೀಗೆ ಮಂತ್ರ ಪಠಿಸುವಾಗ ಹಿಂದಿನಿಂದ ಯಾವುದಾದರೂ ಕೊಳಕುಮಂಡಲದ ಹಾವು ಬಂದು ತೊಡೆಗೆ ಕಡಿದರೆ ಓಡಿ ಹೋಗುವುದೋ, ಕಚ್ಚಿಸಿಕೊಂಡು ಅಲ್ಲೇ ನಿಂತು “ಓಂ ರುಂ ಜುಂ ಸ್ವಾಹಾ” ಮಂತ್ರ ಪಠಿಸುವುದೋ ಎಂದು ವದರಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಕೆಂಡಾಮಂಡಲರಾಗಿ ಕೈಲಿ ಹಿಡಿದಿದ್ದ ಮೈಕನ್ನೇ ಕಚಪಚನೆ ಅಗಿದು ‘ಪ್ಯಾಕಪ್’ ಎಂದು ಕಿರುಚಿ ಓಡಿಹೋದರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಎಲ್ಲ ಬಿಟ್ಟು ಈ ಬ್ಲೂಜೆಪಿಯವರಿಗೇ ಈ ಕಜ್ಜಿ ಐಡಿಯಾಗಳು ಹೇಗೆ ಬರುತ್ತವೆ? ಯಾವ ಫ್ಯಾಕ್ಟರಿಯಲ್ಲಿ ಇವರ ಮೆದುಳುಗಳನ್ನು ಪ್ರೊಡಕ್ಷನ್ ಮಾಡಲಾಗುತ್ತದೆ ಎಂದು ಕಕ್ಕಾಬಿಕ್ಕಿಯಾಗಿರುವ ಕೃಷಿ ವಿಜ್ಞಾನಿಗಳು ಸದರಿ ಬ್ಲೂಜೆಪಿ ಕೃಷಿ ಸಚಿವನನ್ನು ಗುಂಪುಗಲಭೆಯಲ್ಲಿ ಹೊಡೆದು ರೈತರ ಹೊಲಗಳಿಂದ ಒದ್ದೋಡಿಸಲು ತಯಾರಾಗಿದ್ದಾರೆಂದು ವರದಿಯಾಗಿದೆ. ಈ ಮನೆಹಾಳು ಐಡಿಯಾ ಮಾಡಿದ ಕೃಷಿಸಚಿವನ ಎಬಡೇಶಿ ಹೇಳಿಕೆಯ ದೆಸೆಯಿಂದ ಕಂಗಾಲಾಗಿರುವ ಗೋವಾದ ರೈತರು, ಹಂದಿ ಆಹಾರವನ್ನು ಪ್ಯಾಕ್ ಮಾಡಿ ವಿದೇಶಗಳಿಗೆ ಸಾಗಿಸುವ ಹಡಗಿನಲ್ಲಿ ಈ ಸಚಿವನನ್ನು ಹಾಕಿ ಯಾವುದಾದರೂ ಆಫ್ರಿಕನ್ ದೇಶಕ್ಕೆ ಆದಷ್ಟು ಬೇಗ ರಫ್ತು ಮಾಡಬೇಕೆಂದು ಒಕ್ಕೊರಲಿನಿಂದ ಸರ್ಕಾರವನ್ನು ಇನ್ನೂ ಆಗ್ರಹಿಸಿಲ್ಲದಿರುವುದು ಆಶ್ಚರ್ಯ ಹುಟ್ಟಿಸಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಇನ್ನಷ್ಟು ಮತ್ತಷ್ಟು ಆಘಾತ ಹುಟ್ಟಿಸುವ ವಾರ್ತೆಗಳಿಗಾಗಿ ಮುಂದಿನವಾರ ಸಿಗೋಣ. ಧನ್ಯವಾದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...