Homeರಾಜಕೀಯಬೆಳಗಾವಿಯಲ್ಲೂ ಸೃಷ್ಟಿಯಾಯಿತಾ ಒಂದು ಮಿನಿ ರಿಪಬ್ಲಿಕ್?

ಬೆಳಗಾವಿಯಲ್ಲೂ ಸೃಷ್ಟಿಯಾಯಿತಾ ಒಂದು ಮಿನಿ ರಿಪಬ್ಲಿಕ್?

- Advertisement -
- Advertisement -

ಬಿಜೆಪಿಯ ಅಧಿಕಾರದಾಹ ಮತ್ತು ಬಿಜೆಪಿಯ ಪತ್ರಿಕೆಗಳು ಹಾಗೂ ಚಾನೆಲ್‍ಗಳ ನೀಚತನವನ್ನು ಎಷ್ಟು ಬೇಕಾದರೂ ಬಯ್ದುಕೊಳ್ಳಬಹುದು. ಆದರೆ, ಸಮ್ಮಿಶ್ರ ಸರ್ಕಾರದ ನೇತಾರರು, ಅದರಲ್ಲೂ ಕಾಂಗ್ರೆಸ್ ಪಕ್ಷದ ನೇತಾರರು ತಮ್ಮನ್ನೇ ಕೇಳಿಕೊಳ್ಳಬೇಕಾದ ಪ್ರಶ್ನೆ ಒಂದಿದೆ. ಅವರು ಅಧಿಕಾರಕ್ಕೆ ಬಂದಿದ್ದು ಯಾತಕ್ಕೆ? ತಮ್ಮಿಬ್ಬರ ಸಮ್ಮಿಶ್ರಕ್ಕೆ ಬಹುಮತವಿದೆ; ಜಾತ್ಯತೀತ ಸರ್ಕಾರ ರಚಿಸುತ್ತೇವೆ; ಜನಪರವಾದ ಆಡಳಿತ ನೀಡುತ್ತೇವೆ ಇತ್ಯಾದಿ ಹೇಳಿಕೊಂಡು ಬಂದವರು ಜನರ ಆಶೋತ್ತರಗಳಿಗೆ ಎಷ್ಟರಮಟ್ಟಿಗೆ ಗಮನ ಕೊಡುತ್ತಿದ್ದಾರೆ?
ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಬಳ್ಳಾರಿಯ ರೆಡ್ಡಿಗಳು ಮತ್ತು ರಾಮುಲು ನಡೆಸಿದಂತಹದ್ದೇ ಪಾಲಿಟಿಕ್ಸ್‍ಅನ್ನು ಚಿಕ್ಕ ಪ್ರಮಾಣದಲ್ಲಿ ಜಾರಕಿಹೊಳಿ ಸಹೋದರರು ನಡೆಸಿದಂತೆ ಕಾಣುತ್ತಿದೆ. ‘ನಮ್ಮ ಜಿಲ್ಲೆಗೆ ಬೇರೆಯವರು ತಲೆ ಹಾಕಬಾರದು; ನಾವು ಹೇಳಿದ ಅಧಿಕಾರಿಗಳನ್ನು ಇಲ್ಲಿಗೆ ಹಾಕಬೇಕು; ನಾವು ಹೇಳಿದವರಿಗೆ ಅಧಿಕಾರಸ್ಥಾನ ಕೊಡಬೇಕು, ಇಲ್ಲದಿದ್ದರೆ ಸರ್ಕಾರ ಉರುಳಿಸುವ ಶಕ್ತಿ ನಮಗೆ ಇದೆ’ ಎಂಬುದನ್ನೇ ರೆಡ್ಡಿ-ರಾಮುಲು ಹೇಳಿ ಸರ್ಕಾರವನ್ನು ಬ್ಲ್ಯಾಕ್‍ಮೇಲ್ ಮಾಡಿದ್ದರು.
ಇಂದು ಸಂದರ್ಭ ಬೇರೆ ಇದೆ. ವ್ಯಕ್ತಿಗಳೂ ಬೇರೆ. ಅದರಲ್ಲೂ ಸತೀಶ್ ಜಾರಕಿಹೊಳಿ ಉಳಿದವರಿಗಿಂತ ಭಿನ್ನವಾದ ರಾಜಕಾರಣಿ ಎಂದು ಹೆಸರು ಪಡೆದುಕೊಂಡಿದ್ದಾರೆ. ಆದರೂ ‘ಬೆಳಗಾವಿ ಮತ್ತು ಬಳ್ಳಾರಿಗಳಿಗೆ ಉಳಿದವರು ತಲೆ ಹಾಕುವಂತಿಲ್ಲ. ನಾವು ಹೇಳಿದ ಅಧಿಕಾರಿಗಳನ್ನು ಇಲ್ಲಿಗೆ ಹಾಕಬೇಕು. ನಾವು ಹೇಳಿದವರಿಗೆ ಅಧಿಕಾರ ಕೊಡಬೇಕು. ಸರ್ಕಾರ ಉರುಳಿಸುವ ಶಕ್ತಿ ನಮಗೂ ಇದೆ’ ಎಂಬ ಮಾತುಗಳು ಬಳ್ಳಾರಿ ಮಾತುಗಳಂತೆಯೇ ಕೇಳುತ್ತಿವೆ. ರಿಪಬ್ಲಿಕ್ ಮಾತುಗಳಂತೆ.
ಏಕೆಂದರೆ ಜನರಿಗೆ ಸಂಬಂಧಿಸಿದ ಯಾವ ಇಶ್ಯೂಗಳೂ ಇಲ್ಲಿ ಮುಂದೆ ಬಂದಿಲ್ಲ. ಈ ಸರ್ಕಾರವು ಟೇಕಾಫ್ ಆಯಿತಾ? ಸಾಮಾನ್ಯ ಜನರಿಗೆ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳಲ್ಲಿ – ರೈತರ ಸಾಲಮನ್ನಾ ಒಂದನ್ನು ಬಿಟ್ಟು ಉಳಿದಂತೆ – ಯಾವ್ಯಾವುದನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದೆ ಸಾಗಿದ್ದೇವೆ? ಎರಡೂ ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಇನ್ನೂ ಯಾಕೆ ತಯಾರಾಗಿಲ್ಲ? ಜಾತ್ಯತೀತತೆಯನ್ನು ನೆಲೆಗೊಳಿಸುವ ನಿಟ್ಟಿನಲ್ಲಿ ಮತ್ತು ಜನಪರವಾದ ನೀತಿಗಳನ್ನು ಅನುಷ್ಠಾನ ಮಾಡಲು ಅಧಿಕಾರ ಬಳಸಿಕೊಂಡು ಏನು ಮಾಡಬಹುದು? ಇವ್ಯಾವುವೂ ಎರಡೂ ಪಕ್ಷಗಳ ವರ್ತುಲಗಳಲ್ಲಿ ಚರ್ಚೆಯಾಗುತ್ತಿಲ್ಲ.
ಸರ್ಕಾರದ ಸ್ಥಿರತೆ, ತಮ್ಮ ಆದ್ಯತೆಗಳು, ಬಿಜೆಪಿಗಿಂತ ತಾವು ಹೇಗೆ ಭಿನ್ನ ಎಂಬುದನ್ನು ಸ್ಪಷ್ಟವಾಗಿ ಮಾತುಗಳಲ್ಲಿ ಹಾಗೂ ಸರ್ಕಾರದ ಕಾರ್ಯಕ್ರಮಗಳ ಮೂಲಕ ಮುಂದಿಡಬೇಕು ಎಂಬುದು ಎರಡೂ ಪಕ್ಷಗಳ ಮುಖಂಡರಿಗೆ ಆದ್ಯತೆಯಾಗಿದ್ದಂತೆ ತೋರುತ್ತಿಲ್ಲ. ಸಿದ್ದರಾಮಯ್ಯನವರು ಪ್ರಕೃತಿ ಚಿಕಿತ್ಸೆಗಾಗಿ ಧರ್ಮಸ್ಥಳದ ಶಾಂತಿವನದಲ್ಲಿದ್ದಾಗ ಮತ್ತು ಇದೀಗ ವಿದೇಶ ಪ್ರವಾಸಕ್ಕೆ ಹೋದಾಗ ಉಂಟಾದ ಭಿನ್ನಮತವು ಕಾಕತಾಳೀಯವೆಂಬಂತೆ ಕಾಣುತ್ತಿಲ್ಲ. ಶಾಂತಿವನದಿಂದ ಬೆಂಗಳೂರಿಗೆ ಮರಳಲು ಒಂದೇ ದಿನವಿದ್ದಾಗ ಇದೇ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಶಾಸಕರ ದಂಡು ಅಲ್ಲಿಗೆ ಹೋಗಿತ್ತು. ಅದೂ ಸಿದ್ದರಾಮಯ್ಯನವರು ಸಮ್ಮಿಶ್ರ ಸರ್ಕಾರದ ಸ್ಥಿರತೆಯ ಕುರಿತು ಅನುಮಾನ ವ್ಯಕ್ತಪಡಿಸಿದ ಮಾತುಗಳು ವಿಡಿಯೋ ರೆಕಾರ್ಡ್ ಆಗಿ ಲೀಕ್ ಆದ ನಂತರದಲ್ಲಿ. ಅದರ ಮೂಲಕ ತಾನೂ ಗುಂಪು ರಾಜಕೀಯ ಮಾಡಬಲ್ಲೆ ಎಂದು ತೋರಿಸಬೇಕೆಂದು ಸಿದ್ದರಾಮಯ್ಯನವರು ನಿಶ್ಚಯಿಸಿದರೆ ಎಂಬ ಪ್ರಶ್ನೆ ಉದ್ಭವವಾಗಿತ್ತು.
ಹಾಗಾಗಿಯೇ ಈ ಸಾರಿ ಸಿದ್ದರಾಮಯ್ಯನವರ ವಿದೇಶ ಪ್ರವಾಸದ ಸಂದರ್ಭದಲ್ಲಿ ಉದ್ಭವವಾದ ‘ಭಿನ್ನಮತದ’ ಚಟುವಟಿಕೆಗಳು ಅವರು ಬಂದ ತಕ್ಷಣ ನಿಲ್ಲುತ್ತವೆ ಮತ್ತು ಆ ಮೂಲಕ ತಾನು ಮಾತ್ರ ಈ ಭಿನ್ನಮತವನ್ನು ಶಮನ ಮಾಡಬಲ್ಲೆ ಎಂದು ತೋರಿಸುವ ಉದ್ದೇಶ ಅವರಿಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬಂದವು. ‘ಜಾತ್ಯತೀತ ಆಶಯಗಳಿಗೆ ಬದ್ಧವಾಗಿರುವ’ ಸಿದ್ದರಾಮಯ್ಯನವರು ಈ ಸಾರ್ವಜನಿಕ ಸಂದೇಶಗಳ ಕುರಿತು ಇನ್ನೂ ಹೆಚ್ಚಿನ ಎಚ್ಚರ ವಹಿಸದೇ ಇರುವುದು, ಮುಖ್ಯಮಂತ್ರಿಯೋತ್ತರ ಕಾಲದಲ್ಲಿ ಇರಬೇಕಾದ ಮುತ್ಸದ್ದಿತನದ ಕೊರತೆಯಲ್ಲದೇ ಬೇರೇನೂ ಅಲ್ಲ.
ಸಾಲಮನ್ನಾದ ಕುರಿತು ಇದುವರೆಗೂ ಗೊಂದಲವನ್ನು ಬಗೆಹರಿಸಿಲ್ಲ. ನಿಜಕ್ಕೂ ಎಷ್ಟು ಸಾವಿರ ಕೋಟಿಗಳ ಸಾಲ ಮನ್ನಾ ಆಗಿದೆ; ಎಷ್ಟು ಲಕ್ಷ ರೈತರು ಇದರಿಂದ ಅನುಕೂಲ ಪಡೆದುಕೊಳ್ಳುತ್ತಾರೆ ಎಂಬುದನ್ನು ಸರ್ಕಾರ ಅರ್ಧಂಬರ್ಧ ಹೇಳುವ ಪ್ರಯತ್ನ ಮಾಡಿದೆಯಾದರೂ ಯಾರೂ ಅದರಿಂದ ಕನ್‍ವಿನ್ಸ್ ಆದಂತೆ ಕಾಣುತ್ತಿಲ್ಲ. ಇನ್ನು ಖಾಸಗಿ ಸಾಲವನ್ನೂ ಮನ್ನಾ ಮಾಡುವುದು ಒಂದು ಕ್ರಾಂತಿಕಾರಿ ಯೋಜನೆ. ಆದರೆ ಯಾರಿಗೂ ಅದರಿಂದ ರೋಮಾಂಚನ ಆಗುತ್ತಿಲ್ಲ. ತುಣುಕು ತುಣುಕಾಗಿ ಸಾಲಮನ್ನಾದ ಕ್ರಮಗಳನ್ನು ಪ್ರಕಟಿಸುತ್ತಿರುವುದು ಒಂದೆಡೆಯಾದರೆ, ಖಾಸಗಿ ಸಾಲಮನ್ನಾ ಘೋಷಿಸಿದರೆ ಅದನ್ನು ಜಾರಿಗೆ ತರುವುದು ಹೇಗೆ ಮತ್ತು ಆಗ ಉಂಟಾಗುವ ಸಾಲ ಮಾರುಕಟ್ಟೆಯ ನಿರ್ವಾತವನ್ನು ತುಂಬಲು ಯಾವ ಬಗೆಯ ಸಾಂಸ್ಥಿಕ ಪರ್ಯಾಯವನ್ನು ಮಾಡುತ್ತೇವೆಂದು ಸರ್ಕಾರ ಮುಂದಿಟ್ಟಿಲ್ಲ.
ಹೀಗಾಗಿ ಈ ಸರ್ಕಾರದ ಅತ್ಯಂತ ಮಹತ್ವದ ಸಾಂಸ್ಥಿಕ ಮತ್ತು ಖಾಸಗಿ ಸಾಲಮನ್ನಾವೂ ರೈತರಲ್ಲಿ ವಿಶ್ವಾಸ ತುಂಬಿಲ್ಲ. ಇಲ್ಲಿ ಸರ್ಕಾರಕ್ಕೆ ಬರಬೇಕಾದ ಕ್ರೆಡಿಟ್ಟಿನ ಅಂಶ ಅಷ್ಟು ಮುಖ್ಯವಲ್ಲ. ಕೃಷಿ ಬಿಕ್ಕಟ್ಟಿನ ಗೋಜಲಿನಿಂದ ಹೊರಬರಲು ಏನಾದರೂ ಆಸರೆ ಸಿಗಬಹುದೇ ಎಂದು ಆಸೆಗಣ್ಣಿನಿಂದ ನೋಡುವ ರೈತರಲ್ಲಿ ಭರವಸೆ ಮೂಡಬೇಕು. ನಾಳೆ ಆ ಕಾರಣಕ್ಕೆ ಸರ್ಕಾರ ನಡೆಸುವ ಪಕ್ಷಗಳಿಗೆ ಅನುಕೂಲವಾಗುವುದಾದರೆ ಆಗಲಿ. ಹತ್ತಾರು ಸಾವಿರ ಕೋಟಿ ರೂ.ಗಳು ಬೊಕ್ಕಸದಿಂದ ಖರ್ಚಾದ ನಂತರವೂ ಸರ್ಕಾರ ತಮ್ಮ ಪರವಾಗಿದೆ ಎಂದು ಜನರಿಗೆ ಅನ್ನಿಸದಿದ್ದರೆ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಖಚಿತವಾಗುತ್ತದೆ ಅಷ್ಟೇ.
ಬಿಜೆಪಿಯ ಕಾಲದಲ್ಲಿ ಭೂಗರ್ಭವನ್ನು ಬಗೆದು ಲೂಟಿ ಮಾಡಿ ಹಂಚಿಕೊಳ್ಳಲು ಇಂತಹ ಕದನಗಳು ನಡೆದಿತ್ತು; ನಮ್ಮಲ್ಲಿ ಹಾಗಲ್ಲ. ತಮ್ಮ ಪಾಳೆಯಪಟ್ಟಿನ ಮೇಲಿನ ಹಿಡಿತಕ್ಕೆ ಅಷ್ಟೇ ಅಲ್ಪಸ್ವಲ್ಪ ಗುದ್ದಾಟ. ಜಾರಕಿಹೊಳಿ ಸೋದರರೂ ಶ್ರೀಮಂತ ಉದ್ದಿಮೆದಾರರೇ ಇರಬಹುದಾದರೂ, ರೆಡ್ಡಿ ಸೋದರರ ಪರಮ ಅಕ್ರಮ ದಂಧೆಯೂ ಇವರದ್ದೂ ಒಂದೇ ಅಲ್ಲ. ಬಳ್ಳಾರಿ ರಿಪಬ್ಲಿಕ್ ಎಂದಾಗ ಅಲ್ಲಿ ಒಂದರ್ಥದಲ್ಲಿ ಪ್ರಜಾಪ್ರಭುತ್ವವೇ ಇರಲಿಲ್ಲ; ವಿಧಾನಸಭೆಯೊಳಗೇ ಬಳ್ಳಾರಿಗೆ ಬನ್ನಿ ಎಂದು ವಿರೋಧ ಪಕ್ಷದ ನಾಯಕರಿಗೇ ಆವಾಜ್ó ಹಾಕಿದ್ದರು. ಇದು ಆ ರೀತಿ ಅಲ್ಲ. ಜಾತಿಗಳ ಬಲ ಮತ್ತು ಸಾಮಾಜಿಕ ಸ್ಥಾನಮಾನವೂ ಬೇರೆ ಇತ್ಯಾದಿ ಇತ್ಯಾದಿಗಳನ್ನೆಲ್ಲಾ ಹೇಳಬಹುದು. ಜೊತೆಗೆ ಪರಮಘಾತುಕತನ ಹಾಗೂ ಟಿಆರ್‍ಪಿ ದಾಹದಿಂದ ವರ್ತಿಸುತ್ತಿರುವ ಮಾಧ್ಯಮಗಳು ಇಲ್ಲದ್ದನ್ನೂ ಸೃಷ್ಟಿಸುತ್ತಿವೆ ಎಂಬ ಕಾರಣವನ್ನೂ ಮುಂದಿಡಬಹುದು. ಇವೆಲ್ಲವೂ ನಿಜ.
ಆದರೆ, ಅಷ್ಟೇನಾ? ಪರಮ ಘಾತುಕರಿಗೂ, ಸಾಧಾರಣ ಘಾತುಕರಿಗೂ ನಡುವಿನ ವ್ಯತ್ಯಾಸವಷ್ಟೇ ನಿಮ್ಮಿಬ್ಬರ ನಡುವೆ ಇರುವುದಾದಲ್ಲಿ, ಇತರ ಕಾರಣಗಳಿಗಾಗಿ ಜನರು ಎ ಟೀಂಅನ್ನೇ ಆರಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಆಗ ಅಯ್ಯೋ ನಮ್ಮ ಜಾತ್ಯತೀತತೆಗೆ ಜನರು ಓಟು ಹಾಕಲಿಲ್ಲ ಎಂದು ಗೋಳುಗರೆಯುವುದು. ಇಂತಹ ಪಕ್ಷಗಳಿಗೆ ಜನರು ಬುದ್ಧಿ ಕಲಿಸದೇ ಬಿಡುವುದಿಲ್ಲ.
ಸರ್ಕಾರವನ್ನು ಪರಿಣಾಮಕಾರಿಯಾಗಿ ಮುನ್ನಡೆಸುವುದರಲ್ಲಿ ಕುಮಾರಸ್ವಾಮಿಯವರೂ ಇನ್ನೂ ಪಾಸ್ ಆಗಿಲ್ಲ. ಅವರೂ ಕಾರಣಗಳನ್ನು ಹೇಳಬಹುದು. ತಾನು ಸಾಂದರ್ಭಿಕ ಶಿಶು, ದೈವಕೃಪೆ, ಸಿದ್ದರಾಮಯ್ಯನವರ ಅವಕೃಪೆ, ರಾಹುಲ್‍ಗಾಂಧಿ ಆಶೀರ್ವಾದ ಇತ್ಯಾದಿ ಇತ್ಯಾದಿಗಳೆಲ್ಲಾ ಆಗಾಗ್ಗೆ ಉದುರಿಸಬಹುದು. ಸಾಲಮನ್ನಾದ ಕಾರಣದಿಂದ ಉಳಿದಂತೆ ಹೆಚ್ಚಿನ ಆರ್ಥಿಕ ಅನುದಾನಗಳನ್ನು ನೀಡಲಾಗುತ್ತಿಲ್ಲ ಎಂದು ಕೆಲವೆಡೆ ಹೇಳುವುದು, ಸಾಲಮನ್ನಾದಿಂದ ಸರ್ಕಾರದ ಹಣಕಾಸಿನ ಸ್ಥಿತಿಯೇನೂ ತೊಂದರೆಗೀಡಾಗಿಲ್ಲ ಎಂದು ಇನ್ನೊಂದೆಡೆ ಹೇಳುವುದನ್ನು ಎಚ್‍ಡಿಕೆ ಮಾಡುತ್ತಿದ್ದಾರೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿದ್ದ ವಿವಿಧ ಸಮುದಾಯಗಳ ವ್ಯಕ್ತಿಗತ ಫಲಾನುಭವಿಗಳಿಗೆ ಹಣಕಾಸಿನ ನೆರವನ್ನು ನೀಡುವುದನ್ನು ಮಾಡುವುದು ಸಾಧ್ಯವಾಗದೇ ಹೋಗಬಹುದು. ಆದರೆ, ಇದುವರೆಗೂ ವರ್ಗಾವಣೆಯ ಪರ್ವವೇ ಮುಗಿದಂತಿಲ್ಲ; ಆರ್ಥಿಕೇತರವಾದ ಬಿಗಿ ಆಡಳಿತದ ಮೂಲಕ ಜಾರಿಗೆ ತರಬಹುದಾದ ಅದೆಷ್ಟೋ ಸಂಗತಿಗಳು ಎಲ್ಲಿವೆಯೋ ಅಲ್ಲೇ ಇವೆ.
ತನ್ನ ಕುಟುಂಬದೊಳಗೇ ಇರುವ ‘ನುರಿತ ಆಡಳಿತ ತಜ್ಞರು’, ಅಧಿಕಾರದಲ್ಲಿಲ್ಲದಾಗಲೂ ಅಲ್ಲಲ್ಲಿ ಪ್ರಭಾವ ಉಳಿಸಿಕೊಳ್ಳುವ ಮಟ್ಟಿಗಿನ ನೆಟ್‍ವರ್ಕ್ ಗೌಡರ ಕುಟುಂಬಕ್ಕಿದೆ. ಲೋಕಸೇವಾ ಆಯೋಗದ ಪ್ರಾಮುಖ್ಯತೆಯನ್ನು ಅವರಷ್ಟು ಚೆನ್ನಾಗಿ ಅರಿತವರು ಬೇರಿಲ್ಲ. ಅವರ ಕಾಲದಲ್ಲಿ ಆಯ್ಕೆಯಾದ ಬಹುತೇಕ ಅಧಿಕಾರಿಗಳು ಈಗ ಹಿರಿಯ ಅಧಿಕಾರಿಗಳಾಗಿದ್ದಾರೆ. ಹೀಗಾಗಿ ಅಧಿಕಾರಶಾಹಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸಿದ್ದರಾಮಯ್ಯನವರಿಗೆ ಇದ್ದಷ್ಟು ಕಷ್ಟವಲ್ಲ. ಇಷ್ಟೆಲ್ಲಾ ಇದ್ದರೂ, ಇಂದಿಗೂ ಅಧಿಕಾರಿಗಳೇ ಬಹುತೇಕ ಇಲಾಖೆಗಳನ್ನು ನಡೆಸುತ್ತಿದ್ದಾರೆ. ದಕ್ಷತೆ, ಆರ್ಥಿಕ ಶಿಸ್ತು ಇತ್ಯಾದಿ ಹೆಸರುಗಳಲ್ಲಿ ಜನವಿರೋಧಿಯಾದ ಸರ್ಕಾರವನ್ನು ನಡೆಸುವುದು ಅವರಿಗೆ ಕರಗತವಾಗಿದೆ.
ಇಂತಹ ವಿಚಾರಗಳ ಮೇಲೆ ಕೇಂದ್ರೀಕರಿಸುವುದು ಮತ್ತು ಕೆಲವು ಜನಪ್ರಿಯ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸುವುದು ಸಮ್ಮಿಶ್ರ ಸರ್ಕಾರದ ಆದ್ಯತೆಯಾಗಬೇಕಿದೆ. ಅದನ್ನು ಬಿಟ್ಟು ಭಿನ್ನಮತದ ಚೇಷ್ಟೆಗಳಲ್ಲೇ ಮುಳುಗಿ ಹೋಗುವಂತೆ ಒಳಗೊಳಗಿನ ವ್ಯವಹಾರಗಳಲ್ಲೇ ನಿರತರಾಗಿದ್ದರೆ ಈ ಪಕ್ಷಗಳಿಗೆ ಭವಿಷ್ಯವಿರುವುದಿಲ್ಲ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಬಿಜೆಪಿಯ ಬಿ ಟೀಂನಂತೆ ಅಧಿಕಾರವನ್ನು ನಡೆಸುತ್ತಾ ಹೋಗಬಹುದು ಅಷ್ಟೇ.
ಇನ್ನಾದರೂ ಸರ್ಕಾರದ ಹನಿಮೂನ್ ಅವಧಿ ಮುಗಿದುಹೋಗಿದೆ ಎಂಬುದನ್ನು ಅರಿತು ಒಗ್ಗಟ್ಟಿನಿಂದ ಕೆಲಸ ಮಾಡಲಿ, ಇಲ್ಲವಾದರೆ ಪರಿಣಾಮಗಳನ್ನು ಅನುಭವಿಸುತ್ತಾರೆ ಎಂದಷ್ಟೇ 100 ಚಿಲ್ಲರೆ ದಿನಗಳ ಸರ್ಕಾರದ ಭವಿಷ್ಯದ ಕುರಿತು ಹೇಳಬಹುದು.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....