Homeಅಂಕಣಗಳುಭಾಗವತ್ ಭಾಷಣ : ಭೂತದ ಬಾಯಲ್ಲಿ ಭಗವದ್ಗೀತೆ

ಭಾಗವತ್ ಭಾಷಣ : ಭೂತದ ಬಾಯಲ್ಲಿ ಭಗವದ್ಗೀತೆ

- Advertisement -
- Advertisement -

ದೆಹಲಿಯ ವಿಜ್ಞಾನ ಭವನದಲ್ಲಿ 3 ದಿನಗಳ ಕಾಲ ನಡೆದ ಸಮಾವೇಶದಲ್ಲಿ ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್‍ಭಾಗವತ್‍ರವರು ‘ಭವಿಷ್ಯದ ಭಾರತ – ಆರ್‍ಎಸ್‍ಎಸ್ ದೃಷ್ಟಿಕೋನ’ ಎಂಬ ವಿಷಯದ ಮೇಲೆ ಸರಣಿ ಭಾಷಣ ಮಾಡಿದರು. ಅವರ ಮಾತುಗಳಿಗೆ ಹಾಗೇ ಕಿವಿಗೊಟ್ಟರೆ ಆರ್‍ಎಸ್‍ಎಸ್‍ನ ಹಿಂದಿನ ನಿಲುವುಗಳು ಬದಲಾಗಿಬಿಟ್ಟಿವೆಯೇನೋ ಎಂಬ ಅಭಿಪ್ರಾಯ ಮೂಡಿಸುವಂತಿದ್ದವು. ಅವರ ಭಾಷಣದ ಕೆಲ ಮುಖ್ಯಾಂಶಗಳನ್ನು ನೋಡೋಣ.
1. ವಿವಿಧತೆಯನ್ನು ನಾವು ಮಾನ್ಯ ಮಾಡಬೇಕು.
2. ಮುಸ್ಲಿಮರಿಲ್ಲದ ಹಿಂದುತ್ವ ಸಾಧ್ಯವೇ ಇಲ್ಲ.
3. ಕಾಂಗ್ರೆಸ್ ಪಕ್ಷದ ಇತಿಹಾಸ ಶ್ಲಾಘನೀಯ… ಇತ್ಯಾದಿ
ಆರೆಸ್ಸೆಸ್ ಮುಖಂಡರ ಈ ವರಸೆ ಹಲವರಲ್ಲಿ ಆಶ್ಚರ್ಯ ಹುಟ್ಟಿಸುತ್ತಿರುವುದು ನಿಜ. ಆದರೆ ಕಾಲಕ್ಕೆ ತಕ್ಕಂತೆ ಬಣ್ಣಬದಲಿಸುವ ಆರೆಸ್ಸೆಸ್‍ನ ತಂತ್ರಗಾರಿಕೆಯನ್ನು ಗಮನಿಸುತ್ತಾ ಬಂದವರಿಗೆ ಇದರಲ್ಲಿ ಅಂಥಾ ಆಶ್ಚರ್ಯಕರವಾದುದೇನೂ ಕಾಣಿಸುವುದಿಲ್ಲ.
ಕೆಲವೇ ವಾರಗಳ ಹಿಂದೆ ಭಾಗವತ್‍ರವರು ತಮ್ಮ ಚಿಕಾಗೋ ಭಾಷಣದಲ್ಲಿ ಆಡಿದ ಮಾತುಗಳನ್ನು ನೆನಪಿಸಿಕೊಳ್ಳೋಣ. ‘ಕಾಡಿನೊಳಗಿನ ನಾಯಿಗಳು ಒಂದು ಹಿಂಡಾಗಿ ಬಲಶಾಲಿಯಾದ ಸಿಂಹವನ್ನೇ ಕೊಂದು ಹಾಕಬಲ್ಲವು’. ತಮ್ಮ ರಾಜಕೀಯ ವಿರೋಧಿಗಳು ಒಟ್ಟುಗೂಡುತ್ತಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಥದೊಂದು ಒಗಟಿನ ಮಾತನ್ನು ಭಾಗವತ್‍ರವರು ಹೇಳಿದ್ದು. ದ್ವೇಷದ ಭಾವನೆಯಲ್ಲದೆ ಇದರಲ್ಲಿ ಯಾವ ಉದಾತ್ತ ಭಾವನೆಯನ್ನು ನಾವು ಕಾಣಲು ಸಾಧ್ಯ?
ಆರ್‍ಎಸ್‍ಎಸ್‍ನ ಅಧಿಪತಿಗಳಿಗೂ, ಬಿಜೆಪಿಯ ಅಮಿತ್ ಷಾ ಮತ್ತು ನರೇಂದ್ರ ಮೋದಿ ಅವರಿಗೂ ಒಂದು ವಿಷಯ ಮನದಟ್ಟಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರ ಕ್ರಿಶ್ಚಿಯನ್ನರ ಓಟುಗಳು ತಮ್ಮ ವಿರುದ್ಧ ಬೀಳುತ್ತವೆ ಎಂಬುದು. ಈ ಭಯ ಅವರನ್ನು ಕಾಡುತ್ತಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅದಕ್ಕಾಗಿಯೇ ಭಾಗವತ್‍ರವರು ಆರ್‍ಎಸ್‍ಎಸ್‍ನ ಮೂಲಭೂತ ನಿಲುವನ್ನು ಬದಲಾಯಿಸಿರುವುದಾಗಿ ಹೇಳಿರುವುದು. ಇದು ಚುನಾವಣೆಯ ಸ್ಟಂಟ್ ಎಂಬುದರಲ್ಲಿ ಎರಡು ಮಾತಿಲ್ಲ.
‘ಮುಸಲ್ಮಾನರಿಲ್ಲದ ಭಾರತ ಭಾರತವೇ ಅಲ್ಲ, ಮುಸ್ಲಿಮರಿಲ್ಲದೆ ಹಿಂದುತ್ವ ಸಾಧ್ಯವಿಲ್ಲ’ ಎಂದು ಭಾಗವತ್ ಹೇಳಿರುವುದು Devil quoting the Bible ಎಂಬ ಗಾದೆಯನ್ನು ನೆನಪಿಗೆ ತರುತ್ತದೆ. ಮುಸ್ಲಿಮರ ಮತ್ತು ಇತರ ಅಲ್ಪಸಂಖ್ಯಾತರಲ್ಲಿ ಗೊಂದಲ ಮೂಡಿಸಿ, ಒಂದಷ್ಟು ಮತಗಳನ್ನಾದರೂ ಕೀಳಲು ಈ ಮಾತಾಡಿದ್ದಾರೆ ಎಂಬುದು ಗಾಂಪನಿಗೂ ಹೊಳೆಯುತ್ತದೆ.
ಮತ್ತೊಂದು ಕಾಂಗ್ರೆಸ್ಸಿನ ಇತಿಹಾಸ ಶ್ಲಾಘನೀಯ ಎಂಬ ಮಾತು. ಗಾಂಧೀಜಿಯನ್ನೇ ಕೊಂದ ಆರ್‍ಎಸ್‍ಎಸ್‍ಗೆ ಕಾಂಗ್ರೆಸ್ಸನ್ನು ಹೊಗಳುವ ಅನಿವಾರ್ಯತೆ ಈಗ ಉಂಟಾಗಿದೆ. ಕಾಂಗ್ರೆಸ್ಸನ್ನು ನಿರ್ನಾಮ ಮಾಡುವುದಾಗಿ ಹೇಳಹೆಸರಿಲ್ಲದಂತೆ ಮಾಡುವುದಾಗಿ ಹೇಳುತ್ತಿರುವ ಮೋದಿ, ಷಾ, ಭಾಗವತ್‍ರವರ ಈ ಮಾತನ್ನು ಗೌರವಿಸುತ್ತಾರೆಯೇ? ಹಾಗೆ ಅವರು ಗೌರವಿಸದಿದ್ದರೆ ಅವರಿಬ್ಬರನ್ನೂ ಆರೆಸ್ಸೆಸ್‍ನಿಂದ ಕಿತ್ತೆಸೆಯಬೇಕಾಗುತ್ತದೆ. ಏಕೆಂದರೆ ಅವರಿಬ್ಬರೂ ಚಡ್ಡಿ ಹಾಕಿಕೊಂಡು ದಂಡ ಹಿಡಿದು ಆರ್‍ಎಸ್‍ಎಸ್ ಕವಾಯತ್ ಮಾಡಿದವರೇ! ಇತ್ತೀಚಿನ ಆರ್‍ಎಸ್‍ಎಸ್ ಭೈಟಕ್ಕಿಗೂ ಚಡ್ಡಿ, ಕರೀ ಟೋಪಿ ಹಾಕಿಕೊಂಡು ಹೋಗಿದ್ದವರೇ. ತನ್ನದೇ ಕೇಡರ್‍ಗಳ ತಪ್ಪು ನಡೆಯ ವಿರುದ್ಧ ಕ್ರಮಕೈಗೊಳ್ಳುವ ಆತ್ಮಶುದ್ಧಿ ಭಾಗವತ್ ಅವರಲ್ಲಿದೆಯೆ?
ವಾಸ್ತವದಲ್ಲಿ ‘ಕಾಂಗ್ರೆಸ್ ಮುಕ್ತ ಭಾರತ’ ಮಾಡುತ್ತೇವೆಂದು ನಾಲ್ಕಾರು ವರ್ಷಗಳಿಂದ ಬೊಂಬಡಾ ಬಜಾಯಿಸುತ್ತಿದ್ದ ಬಿಜೆಪಿ ನಾಯಕರಿಗೆ ಬೆನ್ನೆಲುಬಾಗಿ ನಿಂತಿದ್ದು ಇದೇ ಆರೆಸ್ಸೆಸ್. ಈಗ ಇದ್ದಕ್ಕಿದ್ದಂತೆ ಕಾಂಗ್ರೆಸ್‍ನ ಭವ್ಯ ಇತಿಹಾಸವನ್ನು ಹೊಗಳುವ ಅನಿವಾರ್ಯತೆಯಾದರೂ ಏನು? ನಾಲ್ಕು ವರ್ಷಗಳ ಆಡಳಿತದ ನಂತರ ಮೋದಿಯ ಒಂದೊಂದೇ ಜುಮ್ಲಾಗಳು ಬಯಲಾಗುತ್ತಿದ್ದು ಹೆಚ್ಚೆಚ್ಚು ಜನರು ಭ್ರಮನಿರಸನಗೊಳ್ಳುತ್ತಿದ್ದಾರೆ. ಅಲ್ಲದೆ, ಮೋದಿ-ಶಾ ಆಡಳಿತ ಮಾದರಿಯಲ್ಲಿನ ಗುಂಪು ಹತ್ಯೆಗಳು, ಅಘೋಷಿತ ತುರ್ತು ಪರಿಸ್ಥಿತಿ, ದ್ವೇಷ ರಾಜಕಾರಣ, ಸರ್ವಾಧಿಕಾರಿ ಧೊರಣೆ ಮುಂತಾದುವು ಪ್ರಜಾತಂತ್ರಪ್ರಿಯ ಜನತೆಯಲ್ಲಿ ಜಿಗುಪ್ಸೆ ಮೂಡಿಸಿರುವುದೂ ಉಂಟು. ಇಂಥಾ ರಾಜಕೀಯ ಹವಾಮಾನವನ್ನು ಗ್ರಹಿಸಿದ ಆರೆಸ್ಸೆಸ್ ಉದಾರವಾದಿ ಪೋಷಾಕಿನಲ್ಲಿ ಕಾಣಿಸಿಕೊಳ್ಳಲು ಹವಣಿಸುತ್ತಿದೆ ಅಷ್ಟೆ.
ಆರ್‍ಎಸ್‍ಎಸ್ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂಬ ಇನ್ನೊಂದು ಸುಳ್ಳನ್ನು ಭಾಗವತ್ ಈಗ ಹರಿಯಬಿಟ್ಟಿದ್ದಾರೆ. ಕೆಲವು ತಿಂಗಳ ಹಿಂದೆ ಭಾಗವತ್ ಅವರೇ ರಾಷ್ಟ್ರೀಯ ಸ್ವಯಂ ಸೇವಕರನ್ನು ಮಧ್ಯ ಪ್ರದೇಶದ ರಾಜಸ್ಥಾನ ಚುನಾವಣಾ ಪ್ರಚಾರಕ್ಕೆ ಸಹಸ್ರ ಸಂಖ್ಯೆಯಲ್ಲಿ ಕಳುಹಿಸುವ ಮಾತನ್ನಾಡಿದ್ದರು. ಈಗ ಇದ್ದಕ್ಕಿದ್ದಂತೆ ಆರ್‍ಎಸ್‍ಎಸ್ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿರುವುದು ಅನುಮಾನಗಳಿಗೆ ಕಾರಣವಾಗಿದೆ. ಮೋದಿ-ಶಾ ಜೋಡಿಗೂ ಭಾಗವತ್‍ರವರಿಗೂ ಭಿನ್ನಾಭಿಪ್ರಾಯವೇನಾದರೂ ಹುಟ್ಟುಕೊಂಡಿದೆಯೇ ಎಂಬ ಅನುಮಾನ ಮೂಡಿಸುತ್ತದೆ.
ಸದ್ಯದಲ್ಲೇ ಪಾರ್ಲಿಮೆಂಟ್ ಚುನಾವಣೆ ಎದುರಿಸಬೇಕಿರುವುದರಿಂದ ತಮ್ಮ ನೆಚ್ಚಿನ ಮೋದಿಯವರಿಗೆ ಗೆಲುವಾಗಬೇಕಾದರೆ ಅವರು ತಮ್ಮ ಧೋರಣೆಯನ್ನು ತಾತ್ಕಾಲಿಕವಾಗಿ ಬದಲಾಯಿಸಿಕೊಳ್ಳಬೇಕೆಂಬ ಎಚ್ಚರಿಕೆಯ ಮಾತನ್ನು ಭಾಗವತ್ ಆಡಿರಬಹುದೇ? ಇಲ್ಲವೇ ಭಾಗವತ್‍ರವರು ಆರ್‍ಎಸ್‍ಎಸ್‍ನ ಧೋರಣೆಯನ್ನು ಆಮೂಲಾಗ್ರವಾಗಿ ಬದಲಾಯಿಸಲು ವಿದ್ಯುಕ್ತರಾಗಿರಬಹುದೇ? ಆರ್‍ಎಸ್‍ಎಸ್ ಸಂಸ್ಥಾಪಕ ಗೋಳ್ವಾಲ್ಕರ್ ಕ್ರಿಶ್ಚಿಯನ್, ಮುಸ್ಲಿಂ ಪಾರ್ಸಿ ಜನಾಂಗದವರನ್ನು ಭಾರತದಿಂದ ಓಡಿಸಿ ಹಿಂದೂ ರಾಜ್ಯ ಸ್ಥಾಪನೆ ಮಾಡಬೇಕೆಂಬ ಉದ್ದೇಶದಿಂದ ಆರ್‍ಎಸ್‍ಎಸ್ ಕಟ್ಟಿದರು. ಜರ್ಮನಿಯ ಹಿಟ್ಲರ್‍ನಿಂದ ಪ್ರೇರೇಪಿತರಾದವರು ಗೋಳ್ವಾಲ್ಕರ್ ಅವರು. ಹಿಟ್ಲರ್ ಯಹೂದಿಗಳನ್ನು ನಿರ್ನಾಮ ಮಾಡಬೇಕೆಂಬ ಸಂಕಲ್ಪ ಮಾಡಿ ಅವರನ್ನೆಲ್ಲ ಮಕ್ಕಳು ಮರಿ ಸಮೇತ ಗ್ಯಾಸ್‍ಛೇಂಬರ್‍ನಲ್ಲಿ ಹಾಕಿ ಬೂದಿ ಮಾಡಿದ್ದರೆಂಬುದನ್ನು ಮನುಕುಲದ ಇತಿಹಾಸ ಎಂದಿಗೂ ಮರೆಯುವುದಿಲ್ಲ. ಅದೇ ರೀತಿಯಲ್ಲಿ ಗೋಳ್ವಾಲ್ಕರ್ ಅವರು ಮೊದಲನೆಯ ಕ್ರಮವಾಗಿ ಹಿಂದುಗಳಲ್ಲದವರನ್ನೆಲ್ಲ ಭಾರತದಿಂದ ಓಡಿಸುವ ಸಂಕಲ್ಪ ಮಾಡಿದರು. ಹಿಂದೂ ಮುಗ್ಧ ಮಕ್ಕಳು ಮತ್ತು ಯುವಕರಲ್ಲಿ ಕೋಮು ವಿದ್ವೇಷ ಬೆಳೆಯುವುದಕ್ಕೆ ಬೇಕಾದ ಶಿಕ್ಷಣವನ್ನು ಕೊಟ್ಟು ಕೋಮು ದಳ್ಳುರಿಯಲ್ಲಿ ಸಾವಿರ ಎರಡೂ ಸಾವಿರ ವರ್ಷದಿಂದ ಭಾರತದಲ್ಲಿ ನೆಲೆಸಿರುವ ಬೌದ್ದರು, ಪಾರ್ಸಿಗಳು, ಜೈನರು, ಕ್ರಿಶ್ಚಿಯನ್ನರು, ಮಹಮದೀಯರು ಮುಂತಾದವರನ್ನೆಲ್ಲ ಬೇಯುವಂತೆ ಮಾಡುವುದು ಗೋಳ್ವಾಲ್ಕರ್ ಅವರ ಉತ್ಕಟೇಚ್ಛೆಯಾಗಿತ್ತು. ಗೋಳ್ವಾಲ್ಕರ್ 1960ನೇ ಮಾರ್ಚ್ 20ನೇ ತಾರೀಖು ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾತನಾಡುತ್ತಾ ‘ಸಾರ್ವಭೌಮ ಹಿಂದೂ ರಾಷ್ಟ್ರ ನಿರ್ಮಾಣವಾದ ದಿನದಂದು ನಮಗೆ ಸ್ವಾತಂತ್ರ್ಯ ಉದಯಿಸಲಿದೆ’ ಎಂದು ಘೋಷಿಸಿದ್ದರು. ಇಲ್ಲಿ ವಾಸಿಸುವ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲರೂ ಸೇರಿ ಒಂದು ರಾಷ್ಟ್ರವಾಗುವುದು ಎಂದಿಗೂ ಸಾಧ್ಯವಿಲ್ಲ ಎಂಬುದು ಅವರ ವಾದವಾಗಿತ್ತು.
ಈ ರೀತಿಯಲ್ಲಿ ಕ್ರೋಧ ಬೆಳೆಸುವುದನ್ನು ಕಾಯಕ ಮಾಡಿಕೊಂಡಿದ್ದರು ಗೂರೂಜಿ. ಮತ್ತೊಬ್ಬ ಪ್ರಮುಖ ನಾನಾಜಿ ದೇಶ್‍ಮುಖ್ ಅವರ ಈ ಮಾತನ್ನು ಕೇಳಿ. ಸ್ವಾತಂತ್ರ್ಯ ಬಂದ ಮೇಲೆ ರಾಷ್ಟ್ರ ಧ್ವಜವನ್ನು ಬದಲಿಸಿದಂತೆ ಮಸೀದಿಗಳನ್ನು ಒಡೆದು ಅದರ ಸ್ಥಾನದಲ್ಲಿ ಹಿಂದೂ ದೇವಾಲಯಗಳನ್ನು ಕಟ್ಟಬೇಕು. ಅವರ ಪ್ರಕಾರ ಅದು ರಾಷ್ಟ್ರದ ಹೆಮ್ಮೆಯ ಕೆಲಸ. ಹೀಗೆ ಇತಿಹಾಸದುದ್ದಕ್ಕೂ ಹಿಂದೂ ಪದವನ್ನು ರಾಜಕೀಯಕ್ಕಾಗಿ ಬಳಸಿಕೊಂಡು ಹುನ್ನಾರ ನಡೆಸಿದ ಮಂದಿ ಇದ್ದಕ್ಕಿದ್ದಂತೆ ‘ಮುಸ್ಲಿಮರು ಕೂಡ ಈ ದೇಶದ ಮಕ್ಕಳು’, ‘ಮುಸ್ಲಿಮರಿಲ್ಲದೆ ಹಿಂದುತ್ವ ಸಾಧ್ಯವಿಲ್ಲ’ ಎನ್ನುತ್ತಿದ್ದಾರೆಂದರೆ ಇದರ ಹಿಂದಿನ ಮಸಲತ್ತನ್ನು ನಾವು ಅರಿಯಲೇಬೇಕು.
ಭಾಗವತ್‍ರವರಿಗೆ ಈಗ ಧರ್ಮಜ್ಞಾನಿಯಾಗಿದೆಯೇ ಇಲ್ಲವೇ ಪಾಪಪ್ರಜ್ಞೆ ಕಾಡುತ್ತಿದೆಯೇ? ಪಾಪಪ್ರಜ್ಞೆ ಅವರನ್ನು ಕಾಡುತ್ತಿದ್ದರೆ ಅದು ಒಳ್ಳೆಯ ಬೆಳವಣಿಗೆ. ಹಾಗೆಯೇ ಮೂರ್ಖ ಶಿಖಾಮಣಿಗಳಾದ ಷಾ ಮತ್ತು ಮೋದಿ ಈ ಮಾತಿಗೆ ಕಿವಿಕೊಡುತ್ತಾರೆ ಎಂಬುದು ಹಗಲು ಕನಸು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಆರ್‍ಎಸ್‍ಎಸ್‍ನ ಹಿರಿಯ ಮುಖಂಡರೂ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯೂ ಆದ ರಾಮ್‍ಮಾಧವ್ ಎರಡೂ ಸಂಸೆÀ್ಥಯಲ್ಲಿರುವವರು. ಇತ್ತೀಚೆಗೆ ನೇರವಾಗಿ ಬಿಜೆಪಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಭಾಗವತ್‍ರವರು ಪರೋಕ್ಷವಾಗಿ ಹೇಳುತ್ತಿರುವ ಎಚ್ಚರಿಕೆಯ ಮಾತುಗಳನ್ನು ರಾಮ್‍ಮಾಧವ್ ನೇರವಾಗಿ ಬಿಜೆಪಿಗೆ ಹೇಳಿದ್ದಾರೆ ಅಷ್ಟೆ. ಇವೆಲ್ಲವೂ ಮುಂದಿನ ಪಾರ್ಲಿಮೆಂಟ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಡಿರುವ ಮಾತೇ ಹೊರತು ಅದು ಆರ್‍ಎಸ್‍ಎಸ್‍ನಲ್ಲಾದ ಬದಲಾವಣೆಯೂ ಅಲ್ಲ; ಅಥವ ಅವರ ಶಾಶ್ವತ ನಿಲುವೂ ಅಲ್ಲ ಎಂಬುದು ಸುಸ್ಪಷ್ಟ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಭಾಷಣ ಸರಣಿ ಇದು ಎಂಬುದು ನಿಚ್ಚಳವಾಗಿದೆ. ಆರೆಸ್ಸೆಸ್ ರಾಜಕೀಯ ಪಕ್ಷವಲ್ಲ, ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅದರ ನಾಯಕರು ಘೋಷಿಸುತ್ತಾರಾದರೂ ಅವರದೇ ನಿಯಂತ್ರಣದಲ್ಲಿರುವ ಬಿಜೆಪಿ ಪಕ್ಷ ಇಂದು ದೆಹಲಿಯ ಗದ್ದುಗೆಯಲ್ಲಿದೆ ಎಂಬುದು ಇಂದು ಜಗಜ್ಜಾಹೀರಾಗಿದೆ. ಪ್ರಧಾನಿ ಮೋದಿಯಾದಿಯಾಗಿ ಹಲವು ಮಂತ್ರಿವರ್ಯರು ಆರೆಸ್ಸೆಸ್‍ನ ಶಾಖೆಗಳಲ್ಲಿ ಚಡ್ಡಿ ತೊಟ್ಟು ಕವಾಯತು ಮಾಡಿದ್ದರ ಬಗ್ಗೆ ಹಲವಾರು ಬಾರಿ ಹೇಳಿಕೊಂಡಿದ್ದಾರೆ.
ಆರ್‍ಎಸ್‍ಎಸ್ ಧುರೀಣರು ಚುನಾವಣೆಯ ಸಂದರ್ಭಕ್ಕೆ ತಕ್ಕಂತೆ ಡಬಲ್‍ಗೇಮ್ ಆಡುತ್ತಿದ್ದಾರೆ. ಇವರ ಢೋಂಗಿತನಕ್ಕೆ ಮರುಳಾಗದಿರೋಣ. ‘ಭವಿಷ್ಯದ ಭಾರತ – ಆರ್‍ಎಸ್‍ಎಸ್ ದೃಷ್ಠಿಕೋನ’ ಎಂಬ ಆಕರ್ಷಕ ತಲೆಬರಹವನ್ನು ‘ಮುಂಬರುವ ಚುನಾವಣೆ – ಆರೆಸ್ಸೆಸ್ ತಂತ್ರಗಾರಿಕೆ’ ಎಂದು ಬದಲಿಸಿಕೊಂಡು ಅರ್ಥಮಾಡಿಕೊಂಡರೆ ಯಾವುದೇ ಗೊಂದಲವಿಲ್ಲದೆ ಇವರ ಹಗಲುವೇಷವನ್ನು ಅರ್ಥ ಮಾಡಿಕೊಳ್ಳಬಹುದು.

 

– ಹೆಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

"ಒಳಮೀಸಲಾತಿ ಇಲ್ಲದೆ ಒಂದೇಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ" ಎಂದು ಆಹಾರ...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...