Homeಅಂಕಣಗಳುಸನಾತನ ಸಂಸ್ಥೆಯೋ? ಸೈತಾನ ಪಡೆಯೋ??

ಸನಾತನ ಸಂಸ್ಥೆಯೋ? ಸೈತಾನ ಪಡೆಯೋ??

- Advertisement -
- Advertisement -

ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸುವ ಉದ್ದೇಶದಿಂದ ಸಭೆ, ಸಮಾರಂಭ, ಅಧ್ಯಯನ ಶಿಬಿರ, ಉಪನ್ಯಾಸ ಮುಂತಾದ ಕಾರ್ಯಕ್ರಮಗಳನ್ನು ನಡೆಸುವ ‘ಸನಾತನ ಸಂಸ್ಥೆ’ ಬಾಂಬ್ ಸ್ಫೋಟಿಸುವ, ಕೊಲೆಗಳನ್ನು ನಡೆಸುವ ಹೀನ ಕೃತ್ಯದಲ್ಲಿ ತೊಡಗಿಕೊಂಡಿದೆಯೆಂದರೆ ಯಾರೂ ನಂಬುವುದಿಲ್ಲ. ಯಾಕೆಂದರೆ ಅದರ ಹೆಸರನ್ನು ಕೇಳಿದರೆ ಇದೊಂದು ಹರಿಕಥಾ ಪ್ರಸಂಗಗಳನ್ನು ನಡೆಸುತ್ತಾ, ರಾಮ ಭಜನೆ ಮಾಡುತ್ತಾ ಕಾಲಕ್ಷೇಪ ಮಾಡುವ ಸಂಸ್ಥೆಯೆಂದೇ ಅನಿಸುತ್ತದೆ. ಆದರೆ ಗೋವಾದಲ್ಲಿ ತನ್ನ ಹೆಡ್‍ಕ್ವಾರ್ಟರ್ ಹೊಂದಿದ್ದು ಇಡೀ ದೇಶದಲ್ಲಿ, ನೂರಾರು ಶಾಖೆಗಳನ್ನು ಹಾಗೂ ಜಾಲವನ್ನು ಹೊಂದಿರುವ ಈ ಸಂಸ್ಥೆಯ ಇತಿಹಾಸದ ಕೆದಕಿದರೆ ಭಾರೀ ರಕ್ತಸಿಕ್ತ ಹೀನ ಚರಿತ್ರೆಯೇ ಅಡಗಿದೆ.
ಕೆಲವೊಂದು ಘಟನಾವಳಿಗಳನ್ನು ನೋಡೋಣ.
2009ರ ಅಕ್ಟೋಬರ್ 16ರಂದು ಗೋವಾದ ಮಾರ್ಗೊ ಪಟ್ಟಣದಲ್ಲಿ ಭೀಕರ ಸ್ಫೋಟವೊಂದು ಸಂಭವಿಸಿ ಇಬ್ಬರು ಮೃತಪಟ್ಟಿದ್ದರು. ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಮೃತಪಟ್ಟ ಆ ಇಬ್ಬರು ಆಗಂತುಕರು ಅಂದು ನಡೆಯಲಿದ್ದ ಉತ್ಸವದಲ್ಲಿ ಬಾಂಬ್ ಸ್ಪೋಟಗೊಳಿಸಲು ಸ್ಕೂಟರ್‍ನಲ್ಲಿ ಸಾಗಿಸುತ್ತಿದ್ದರು ವೇಳೆಯಲ್ಲಿ ಆಕಸ್ಮಿಕವಾಗಿ ಬಾಂಬ್ ಸ್ಫೊಟಗೊಂಡು ತಾವೇ ಬಲಿಯಾಗಿದ್ದರು. ಮೃತಪಟ್ಟ ಮಲ್ಗೊಂಡ ಪಾಟೀಲ್ ಮತ್ತು ಯೋಗೇಶ್ ನಾಯಕ್ ಎಂಬ ಈ ಇಬ್ಬರು ಯುವಕರು ಸನಾತನ ಸಂಸ್ಥೆಯ ಸದಸ್ಯರಾಗಿದ್ದರು. ತನಿಖೆ ಮುಂದುವರೆದಂತೆ ಈ ಸ್ಫೋಟಕ್ಕೆ ಸಂಬಂಧಿಸಿದಂತೆ ವಿನಾಯಕ ಪಾಟೀಲ್ ಮತ್ತು ವಿನಯ್ ತಾಲೇಕರ್ ಎಂಬ ಮತ್ತಿಬ್ಬರು ಸದಸ್ಯರನ್ನು ಬಂಧಿಸಲಾಯ್ತು. ಇವರು ರಾಮನಾಥಿಯಲ್ಲಿರುವ ಆಶ್ರಮವೊಂದರ ಮೂಲಕ ಸನಾತನ ಸಂಸ್ಥೆಯ ಸಂಬಂಧ ಹೊಂದಿದ್ದರು. ಈ ಪ್ರಕರಣದಲ್ಲಿ ಬಂದಿತನಾದ ಮತ್ತೊಬ್ಬ ಆರೋಪಿ 20 ವರ್ಷ ವಯಸ್ಸಿನ ಧನಂಜಯ್ ಅಷ್ಟೇಕರ್, ಈಚಲಕಾರಂಜಿಯಲ್ಲಿರುವ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯಾಗಿದ್ದ. ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಉತ್ಸವವೊಂದು ನಡೆಯಲಿದ್ದು ಸಾವಿರಾರು ಜನರು ಭಾಗವಹಿಸಲಿದ್ದರು. ಬಾಂಬ್ ಸ್ಪೋಟಿಸಿ, ಈ ಸ್ಫೋಟಕ್ಕೆ ಮುಸ್ಲಿಮರು ಕಾರಣವೆಂದು ಆರೋಪಿಸಿ, ನಂತರ ಕೋಮು ಗಲಭೆಗಳನ್ನು ನಡೆಸುವ ಯೋಜನೆ ತಯಾರಾಗಿತ್ತು. ಅದಕ್ಕಾಗಿ ದೆಹಲಿಯ ಖಾನ್ ಮಾರ್ಕೆಟ್ ಎಂಬ ಹೆಸರು ಮುದ್ರಿತವಾಗಿರುವ ಒಂದು ಬ್ಯಾಗ್ ಮತ್ತು ಅದರಲ್ಲಿ ಮುಸ್ಲಿಮರು ಬಳಸುವ ಸುಗಂಧ ದ್ರವ್ಯದ ಒಂದು ಬಾಟಲ್, ಸಂಪೂರ್ಣ ಉರ್ದು ಅಕ್ಷರಗಳಲ್ಲಿ ಪ್ರಿಂಟ್ ಆಗಿರುವ ಬಾಸ್ಮತಿ ಅಕ್ಕಿಯ ಒಂದು ಖಾಲಿ ಚೀಲ ಮುಂತಾದ ವಸ್ತುಗಳನ್ನು ಸ್ಪೋಟದ ಸ್ಥಳದಲ್ಲಿ ಬಿಟ್ಟು ಹೋಗಲಿಕ್ಕೆಂದು ತಂದಿದ್ದರು. ಕಾರಣ ಸ್ಪಷ್ಟವಿತ್ತು. ಸಹಜವಾಗಿ ಇದು ಮುಸ್ಲಿಮರ ಕೃತ್ಯ ಎಂದು ಮಾಧ್ಯಮಗಳ ಮೂಲಕ ಬಿಂಬಿಸುವುದು ಮತ್ತು ಕೋಮು ಗಲಭೆ ಸೃಷ್ಟಿಸುವುದು. ಆದರೆ ಅವರ ದುರಾದೃಷ್ಟ. ತಾವೇ ಬಲಿಯಾಗಿ ಹೋಗಿದ್ದರು.
2008ರಲ್ಲಿ ನಡೆದ ಬಾಂಬ್ ಬ್ಲಾಸ್ಟ್‍ನಲ್ಲಿ ಕೆಲವು ಸಾಧಕರು ಅರೆಸ್ಟ್ ಆಗಿದ್ದರು. ನವಿಮುಂಬೈ ಮತ್ತು ಥಾಣೆಗಳಲ್ಲಿ ‘ಅಮ್ಹಿ ಪಚ್‍ಪುಟೆ’ ಎಂಬ ನಾಟಕ ಪ್ರದರ್ಶನವಿತ್ತು. ಈ ನಾಟಕ ಹಿಂದೂಗಳ ಭಾವನೆಗಳಿಗೆ ದಕ್ಕೆಯಾಗುತ್ತಿದೆಯೆಂದು ಸನಾತನ ಸಂಸ್ಥೆ ಹುಯಿಲೆಬ್ಬಿಸಿತ್ತು. ನಂತರ ಈ ನಾಟಕ ಪ್ರದರ್ಶನ ನಡೆಯುತ್ತಿದ್ದ ಆಡಿಟೋರಿಯಂಗಳಲ್ಲಿ ಬಾಂಬ್‍ಗಳನ್ನು ಸ್ಫೋಟಿಸಲಾಯಿತು.
‘ಜೋಧಾ ಅಕ್ಬರ್’ ಹಿಂದಿ ಸಿನಿಮಾದಲ್ಲಿ ಹಿಂದೂ ಮಹಿಳೆಯನ್ನು ಕೆಟ್ಟದಾಗಿ ಚಿತ್ರಿಸಲಾಗಿದೆಯೆಂದು ಸನಾತನ ಸಂಸ್ಥೆ ಬೊಬ್ಬೆ ಹಾಕಿತ್ತು. ಪನ್ವೇಲ್‍ನಲ್ಲಿರುವ ಥಿಯೇಟರ್‍ನಲ್ಲಿ ಈ ಸಿನಿಮಾ ಪ್ರದರ್ಶನ ನಡೆಯುತ್ತಿದ್ದ ಸಂದರ್ಭದಲ್ಲೇ ಬಾಂಬ್ ಸ್ಫೋಟಿಸಿತ್ತು.
ಈ ಸ್ಫೋಟಗಳಿಗೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ವಿಕ್ರಮ್ ಭಾವೆ ಮತ್ತು ರಮೇಶ್ ಗಡ್ಕರಿ ಎಂಬ ಇಬ್ಬರು ಇಬ್ಬರು ಸನಾತನಿಗಳಿಗೆ ನ್ಯಾಯಾಲಯ ಹತ್ತು ವರ್ಷ ಜೈಲು ವಾಸದ ಶಿಕ್ಷೆ ವಿಧಿಸಿತ್ತು. ನಂತರದ ದಿನಗಳಲ್ಲಿ ಬಾಂಬೆ ಹೈಕೋರ್ಟ್ ಈ ಶಿಕ್ಷೆಯನ್ನು ರದ್ದುಪಡಿಸಿ, ಜಾಮೀನು ಮುಂಜೂರು ಮಾಡಿದೆ. ಬಾಂಬ್ ಸ್ಫೋಟದಲ್ಲಿ ಶಿಕ್ಷೆಗೊಳಗಾದವರಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂಬ ಮಾಮೂಲಿ ರಾಗವನ್ನು ಸಂಸ್ಥೆ ಹಾಡುತ್ತಲೇ ಬಂದಿದೆ.
ಮಹಾರಾಷ್ಟ್ರದಲ್ಲಿ 2013ರಲ್ಲಿ ನರೇಂದ್ರ ದಾಬೋಲ್ಕರ್ ಎಂಬ ವಿಚಾರವಾದಿಯೊಬ್ಬರ ಕೊಲೆಯಾಯಿತು. ಕೊಲೆಯಾದ ಸುದ್ದಿ ಹೊರಬೀಳುತ್ತಿದ್ದಂತೆಯೇ ಸನಾತನ ಸಂಸ್ಥೆಯ ಒಂದು ಅಂಗ ಸಂಸ್ಥೆ ‘ಹಿಂದೂ ಜನಜಾಗೃತಿ ಸಮಿತಿ’ ತನ್ನ ವೆಬ್‍ಸೈಟ್‍ನಲ್ಲಿ ದಾಬೋಲ್ಕರ್ ಫೋಟೋ ಅಪ್‍ಲೋಡ್ ಮಾಡಿ, ಮುಖದ ಮೇಲೆ ಘಿ ಮಾರ್ಕ್ ಹಾಕಿ ಪ್ರಕಟಿಸಿದರು. ಈ ಬಗ್ಗೆ ಎಲ್ಲೆಡೆ ಟೀಕೆಗಳು ಕೇಳಿಬಂದವು. ಪೂನಾ ಪೊಲೀಸರ ಸೈಬರ್ ಕ್ರೈಮ್ ಇಲಾಖೆಯವರು ಆ ಫೊಟೋ ಡಿಲೀಟ್ ಮಾಡುವಂತೆ ಸನಾತನ ಸಂಸ್ಥೆಗೆ ಸೂಚಿಸಿದರು. ಅಷ್ಟೇ, ಪೊಲೀಸರು ಕೈತೊಳೆದುಕೊಂಡರು.
ವಾಸ್ತವದಲ್ಲಿ, ನರೇಂದ್ರ ದಾಬೋಲ್ಕರ್ ಮೇಲೆ ಸನಾತನ ಸಂಸ್ಥೆ ನಿರಂತರ ದಾಳಿಗಳನ್ನು ನಡೆಸುತ್ತಲೇ ಬಂದಿತ್ತು. ಅವರ ಸಾರ್ವಜನಿಕ ಸಭೆಗಳಲ್ಲಿ ಗದ್ದಲವೆಬ್ಬಿಸುವುದು ಮಾಮೂಲಿಯಾಗಿ ಹೋಗಿತ್ತು. ಅವರನ್ನು ‘ಹಿಂದೂ ದ್ರೋಹಿ’ ಎಂದು ಘೋಷಿಸಿ ತನ್ನ ವೆಬ್‍ಸೈಟ್ ಮತ್ತಿತರ ಪ್ರಕಟಣೆಗಳಲ್ಲಿ ಘೋಷಿಸಲಾಗಿತ್ತು. ಹೀಗೆ ಬಹಿರಂಗ ಪ್ರಕಟಣೆ ಬಂದ ನಂತರ ಅನಾಮಧೇಯರಿಂದ ಬೆದರಿಕೆ ಕರೆಗಳು ಮಾಮೂಲಿಯಾಗಿ ಹೋದವು. ಅವರ ಕೊಲೆಯಾಗುವ ಮುನ್ನ ಬಂದ ಬೆದರಿಕೆ ಕರೆ ಈ ಸನಾತನ ಸಂಸ್ಥೆ ಹಾಗೂ ಅದರ ಹಿಂದಿರುವ ಇತರೆ ಶಕ್ತಿಗಳ ಚಾರಿತ್ರಿಕ ಪಾತ್ರವನ್ನು ಬಟಾಬಯಲು ಮಾಡುತ್ತದೆ. “ಗಾಂಧಿಯನ್ನು ನೆನಪಿಸಿಕೋ, ನಾವು ಅವನಿಗೆ ಏನು ಮಾಡಿದ್ದೀವೋ ಅದೇ ಕತೆ ನಿಂಗೂ ಕಾದಿದೆ” ಎಂಬ ಬೆದರಿಕೆಯನ್ನು ಅನಾಮಧೇಯರು ಹಾಕಿದ್ದರು. ಕೆಲವೊಮ್ಮೆ ಬೆದರಿಕೆಗಳು ಬಹಿರಂಗ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಸಂದರ್ಭದಲ್ಲೇ ಬಂದಿದ್ದವು. ಅಂದರೆ ಕೊಲೆಪಾತಕಿಗಳಿಗೆ ಯಾವುದೇ ಕಾನೂನಿನ ಭಯವೂ ಇದ್ದಂತಿರಲಿಲ್ಲ.
ದಾಬೋಲ್ಕರ್ ಹತ್ಯೆಯಾದ ದಿನ ಅವರ ವೆಬ್‍ಸೈಟ್‍ನ ಮುಖಪುಟದಲ್ಲಿ ಜಯಂತ್ ಅಠಾವಳೆ ಹೀಗೆ ಬರೆದಿದ್ದರು. “ಹುಟ್ಟು ಮತ್ತು ಸಾವುಗಳು ಮೊದಲೇ ನಿರ್ಧರಿತವಾಗಿರುತ್ತವೆ ಹಾಗೂ ಪ್ರತಿಯೊಬ್ಬರೂ ಅವರವರ ಕರ್ಮಕ್ಕೆ ತಕ್ಕಂತಹ ಫಲಗಳನ್ನು ಪಡೆದೇ ಪಡೆಯುತ್ತಾರೆ. ಕಾಯಿಲೆ ಬಿದ್ದು ಹಾಸಿಗೆ ಹಿಡಿದು ನರಳಿ ಸಾಯುವುದರ ಬದಲು, ಯಾವುದೋ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಸಾಯುವುದರ ಬದಲಿಗೆ ದಾಬೋಲ್ಕರ್ ಅವರಿಗೆ ಪರಮಾತ್ಮ ಒಳ್ಳೆಯ ಸಾವನ್ನೇ ಕೊಟ್ಟಿದ್ದಾನೆ.”
ಮಹಾರಾಷ್ಟ್ರದ ಕಮ್ಯುನಿಸ್ಟ್ ಮುಖಂಡ ಗೋವಿಂದ್ ಪನ್ಸಾರೆ ಕೊಲೆ ಕೇಸಿನಲ್ಲಿ ಸನಾತನ ಸಂಸ್ಥೆಯ ಸಮೀರ್ ಗಾಯಕ್‍ವಾಡ್ ಅರೆಸ್ಟ್ ಎಂಬುವವನನ್ನು ಅರೆಸ್ಟ್ ಮಾಡಲಾಗಿದೆ. ಆತನ ಮೂಲಕ ಈ ಸಂಸ್ಥೆಯ ಮತ್ತಷ್ಟು ಪಾತಕ ಕೃತ್ಯಗಳು ಹೊರಬಿದ್ದಿವೆ.
ಅಫಿಷಿಯಲ್ ಲಿಂಕ್ಸ್
ಈ ಸಂಸ್ಥೆಗೆ ಮತ್ತೊಂದು ಅಪಾಯಕಾರಿ ಆಯಾಮವೂ ಇದೆ. ಗೋವಾದ ಪಿಡಬ್ಲ್ಯುಡಿ ಮಂತ್ರಿ ಸುದಿನ್ ಧವಳಿಕರ್‍ನ ಹೆಂಡತಿ ಜ್ಯೋತಿ ಧವಳಿಕರ್ ಸನಾತನ ಸಂಸ್ಥೆಯ ಸಕ್ರಿಯ ಕಾರ್ಯಕರ್ತೆ. ಸನಾತನ ಸಂಸ್ಥೆಯ ಕ್ರಿಮಿನಲ್ ಚಟುವಟಿಕೆಗಳ ಹಿನ್ನೆಲೆಯಲ್ಲಿ ಪೊಲೀಸರು ಈ ಮಂತ್ರಿಯನ್ನು ವಿಚಾರಣೆ ನಡೆಸಿದ್ದರು. ಆದರೆ ತನಿಖೆ ಅಲ್ಲಿಂದ ಮುಂದಕ್ಕೆ ಸಾಗಲಿಲ್ಲ.
ಈ ಸಂಸ್ಥೆ ನಡೆಸುವ ‘ಸನಾತನ ಪ್ರಭಾತ್. ಎಂಬ ಪತ್ರಿಕೆಯನ್ನು ನಡೆಸುತ್ತಿದೆ. ಅದರಲ್ಲಿ ವಿಚಾರವಾದಿಗಳ ವಿರುದ್ಧ ಲೇಖನಗಳು ಪ್ರಕಟವಾಗುತ್ತವೆ. ವಿಚಾರವಾದಿಗಳನ್ನು ‘ದ್ರೋಹಿಗಳು’ ಎಂದು ಘೋಷಿಸಿ, ಅದರ ಅನುಯಾಯಿಗಳನ್ನು ಎತ್ತಿಕಟ್ಟುವ ಬರಹಗಳೂ ಆಗಿಂದಾಗ್ಗೆ ಪ್ರಕಟವಾಗುತ್ತವೆ. ಸದರಿ ಪತ್ರಿಕೆಗೆ ಸರ್ಕಾರಿ ಜಾಹಿರಾತುಗಳೂ ಕೂಡ ಬಿಡುಗಡೆಯಾಗಿವೆ! ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಡ್ವೈಸರ್ ಆಗಿರುವ ವಿಷ್ಣು ವಾಘ್ ಅವರೇ ಹೇಳುವ ಪ್ರಕಾರ “ಈ ಪತ್ರಿಕೆಯ ಬರಹಗಳು ಸಮಾಜವನ್ನು ಒಡೆಯುವ ಸರಕನ್ನು ಒಳಗೊಂಡಿರುತ್ತವೆ, ಇವು ಟೆರರಿಸ್ಟ್‍ಗಳನ್ನು ಸೃಷ್ಟಿಮಾಡುವ ಸಾಧ್ಯತೆ ಇದೆ”.
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮಿಲಿಟರಿ ಅಧಿಕಾರಿ ಕರ್ನಲ್ ಪುರೋಹಿತ್‍ನೇ ಮಾಸ್ಟರ್ ಮೈಂಡ್ ಆಗಿದ್ದ ಎಂಬ ಸುದ್ದಿ ಈಗ ಹಳೆಯದು. ಅದೇ ರೀತಿಯಲ್ಲೇ ಈ ಸಂಸ್ಥೆಯೊಂದಿಗೆ ಹಲವು ಮಿಲಿಟರಿ ಅಧಿಕಾರಿಗಳೂ ಸಂಬಂಧ ಹೊಂದಿರುವ ಸುದ್ದಿಗಳು ಬಯಲಾಗಿವೆ. ಇಂಡಿಯನ್ ನೇವಿಯ ಮಾಜಿ ಅಧಿಕಾರಿ ಸಿಯಾನ್ ಮೈಕೆಲ್ ಕ್ಲಾರ್ಕ್ ಸನಾತನದ ಸಕ್ರಿಯ ಕಾರ್ಯಕರ್ತನಾಗಿದ್ದು, ರಾಮನಾಥಿ ಆಶ್ರಮದ ವಾಸಿಯಾಗಿದ್ದ. 2006ರಲ್ಲಿ ಈತ ಆಶ್ರಮವಾಸಿಯಾಗಿರುವಾಗಲೇ ಅಸ್ಟ್ರೇಲಿಯಾ ದೇಶದ ಪೌರತ್ವ ಪಡೆದುಕೊಂಡಿದ್ದ! ಆದರೆ ಇದೇ ಅವಧಿಯಲ್ಲಿ ಗೋವಾದಲ್ಲಿ ನಡೆದ ಭಜರಂಗದಳ, ವಿಶ್ವ ಹಿಂದೂ ಪರಿಷದ್ ಮತ್ತು ಆರೆಸ್ಸೆಸ್ ಸಂಘಟನೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ. ಈ ಸಂಘಟನೆಗಳ ಪರಸ್ಪರ ಸಂಬಂಧವೇನು ಎಂಬುದಕ್ಕೆ ಇದೊಂದು ಪುರಾವೆಯಷ್ಟೆ.
ಸನಾತನ ಸಂಸ್ಥೆಯ ಸ್ಥಾಪಕ ಜಯಂತ್ ಬಾಲಾಜಿ ಅಠಾವಳೆ ಮೂಲತಃ ತರಬೇತುಗೊಂಡ ಹಿಪ್ನೋ ಥೆರಾಪಿಸ್ಟ್. ಬಹಳಷ್ಟು ವರ್ಷ ಬ್ರಿಟನ್‍ನಲ್ಲಿದ್ದುಕೊಂಡು ಹಿಪ್ನೋ ಥೆರಪಿಸ್ಟ್ ಆಗಿ ಪ್ರಾಕ್ಟೀಸ್ ಮಾಡ್ತಾ ಇದ್ದರು. ಹಿಪ್ನೋ ಥೆರಪಿಯಲ್ಲಿ ಭಾರೀ ಸಂಶೋಧನೆ ಮಾಡಿರುವ ಈತ ‘ಆದ್ಯಾತ್ಮ’ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿಕ್ಕಾಗಿ ಭಾರತಕ್ಕೆ ವಾಪಸ್ ಬಂದ. ತನ್ನನ್ನು ಅವತಾರ ಪುರುಷ ಎಂಬಂತೆ ಪ್ರಚಾರ ಮಾಡಿಕೊಂಡ. ‘ಅಧ್ಯಾತ್ಮಿಕ ವಿಶ್ವವಿದ್ಯಾಲಯ’ ಎಂದು ಕರೆಯಲಾಗುವ ಸನಾತನ ಸಂಸ್ಥೆ ಸ್ಥಾಪಿಸಿದ್ದಾನೆ. ಆತನ ಕೆಲವು ಫೋಟೋಗಳು ನಾಲಿಗೆಯಲ್ಲಿ ಓಂ ಗುರುತಿನ ಮಚ್ಚೆ ಇರುವಂತೆ, ಉಗುರುಗಳಲ್ಲಿ ಓಂ ಎಂಬ ಬಿಳಿ ಮಚ್ಚೆ ಮೂಡಿರುವಂತೆ ಫೋಟೋಶಾಪ್ ಮಾಡಿ, ಭಕ್ತಾದಿಗಳನ್ನು ಮರುಳು ಮಾಡುವ ಕೆಲಸವೂ ನಡೆದಿದೆ.
ಈ ಇಡೀ ಸಂಸ್ಥೆಯ ಸ್ಥಾಪನೆ ಹಾಗೂ ಅದರ ವಿಸ್ತಾರವಾದ ಜಾಲದ ಹಿಂದೆ ಇದೇ ಸಂಘ ಪರಿವಾರದ ಶಕ್ತಿಗಳು ಕೆಲಸ ಮಾಡುತ್ತಿವೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಠಧಾರಗಳಿವೆ. ಆದರೆ ಸರ್ಕಾರಗಳು ಕುರುಡಾಗಿರುವಾಗ ಯಾರೇನು ಮಾಡಲು ಸಾಧ್ಯ?
ಸನಾತನಿಗಳು ತಮ್ಮ ಚಟುವಟಿಕೆಯನ್ನು ವಿವಿಧ ದೇಶಗಳಿಗೂ ವಿಸ್ತರಿಸಿದ್ದಾರೆ. ಗೌರಿ ಲಂಕೇಶ್ ಕೊಲೆ ಕೇಸಿನೊಂದಿಗೆ ಸಂಬಂಧ ಹೊಂದಿರುವ ಐವರಲ್ಲಿ ನಾಲ್ಕು ಮಂದಿ ದೇಶದಿಂದ ಹೊರಗಿದ್ದಾರೆಂಬ ಸುದ್ದಿಯನ್ನು ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿತ್ತು. ಅವರಲ್ಲಿ ನಮ್ಮ ಬೆಳಗಾವಿ ಮೂಲದ ರುದ್ರ ಪಾಟೀಲ್, ಮಂಗಳೂರು ಮೂಲದ ಜಯಪ್ರಕಾಶ್ ಕೂಡ ಇದ್ದಾರೆ. ಇವರ ಮೇಲೆ ರೆಡ್ ಕಾರ್ನರ್ ನೋಟೀಸ್ ಕೂಡ ಜಾರಿಯಲ್ಲಿದೆ.
ಸರ್ಬಿಯಾ ದೇಶದ ಕತೆ ಕೇಳಿ. ಇಲ್ಲಿ ‘ಮಾನವನ ಆದ್ಯಾತ್ಮಿಕ ಉನ್ನತಿ’ಯ ಹೆಸರಿನಲ್ಲಿ ಚಟುವಟಿಕೆ ನಡೆಸುತ್ತಿದ್ದ ಈ ಗುಂಪನ್ನು ನಿಷೇಧಿಸಲಾಗಿದೆ. “ಸನಾತನ ಸಂಸ್ಥೆ ಮಾನವ ಹಕ್ಕುಗಳ ವಿರೋಧಿಯಾಗಿರುವ, ವ್ಯಕ್ತಿಗತ ಆಯ್ಕೆಯ ಸ್ವಾತಂತ್ರ್ಯಕ್ಕೆ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿಯುಂಟು ಮಾಡುತ್ತಿರುವ ಸಂಘಟನೆ. ಈ ಸಂಸ್ಥೆ ಮಾನಸಿಕ ಹಾಗೂ ಸಾಮಾಜಿಕ ಸಮತೋಲನವನ್ನು ಹಾಳು ಮಾಡುತ್ತಿರುವ ಹಾಗೂ ವ್ಯಕ್ತಿಗಳ ಸುರಕ್ಷತೆಗೆ ಮತ್ತು ಸರ್ಕಾರದ ಭದ್ರತೆಗೆ ಅತ್ಯಂತ ಅಪಾಯಕಾರಿಯಾಗಿದೆ, ಮಾನವೀಯತೆಯ ಮುಸುಕಿನಲ್ಲಿ ಸನಾತನ ಸಂಸ್ಥೆ ಟೆರರಿಸಂಅನ್ನು ಬೆಳೆಸುತ್ತಿದೆ” ಎಂದು ಅಲ್ಲಿನ ಸರ್ಕಾರ ವಿವರಣೆ ನೀಡಿದೆ.
ಭಾರತ ದೇಶ ಪಾಠ ಕಲಿಯುವುದು ಯಾವಾಗ?

– ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...