Homeಅಂಕಣಗಳುಸನಾತನ ಸಂಸ್ಥೆಯೋ? ಸೈತಾನ ಪಡೆಯೋ??

ಸನಾತನ ಸಂಸ್ಥೆಯೋ? ಸೈತಾನ ಪಡೆಯೋ??

- Advertisement -
- Advertisement -

ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸುವ ಉದ್ದೇಶದಿಂದ ಸಭೆ, ಸಮಾರಂಭ, ಅಧ್ಯಯನ ಶಿಬಿರ, ಉಪನ್ಯಾಸ ಮುಂತಾದ ಕಾರ್ಯಕ್ರಮಗಳನ್ನು ನಡೆಸುವ ‘ಸನಾತನ ಸಂಸ್ಥೆ’ ಬಾಂಬ್ ಸ್ಫೋಟಿಸುವ, ಕೊಲೆಗಳನ್ನು ನಡೆಸುವ ಹೀನ ಕೃತ್ಯದಲ್ಲಿ ತೊಡಗಿಕೊಂಡಿದೆಯೆಂದರೆ ಯಾರೂ ನಂಬುವುದಿಲ್ಲ. ಯಾಕೆಂದರೆ ಅದರ ಹೆಸರನ್ನು ಕೇಳಿದರೆ ಇದೊಂದು ಹರಿಕಥಾ ಪ್ರಸಂಗಗಳನ್ನು ನಡೆಸುತ್ತಾ, ರಾಮ ಭಜನೆ ಮಾಡುತ್ತಾ ಕಾಲಕ್ಷೇಪ ಮಾಡುವ ಸಂಸ್ಥೆಯೆಂದೇ ಅನಿಸುತ್ತದೆ. ಆದರೆ ಗೋವಾದಲ್ಲಿ ತನ್ನ ಹೆಡ್‍ಕ್ವಾರ್ಟರ್ ಹೊಂದಿದ್ದು ಇಡೀ ದೇಶದಲ್ಲಿ, ನೂರಾರು ಶಾಖೆಗಳನ್ನು ಹಾಗೂ ಜಾಲವನ್ನು ಹೊಂದಿರುವ ಈ ಸಂಸ್ಥೆಯ ಇತಿಹಾಸದ ಕೆದಕಿದರೆ ಭಾರೀ ರಕ್ತಸಿಕ್ತ ಹೀನ ಚರಿತ್ರೆಯೇ ಅಡಗಿದೆ.
ಕೆಲವೊಂದು ಘಟನಾವಳಿಗಳನ್ನು ನೋಡೋಣ.
2009ರ ಅಕ್ಟೋಬರ್ 16ರಂದು ಗೋವಾದ ಮಾರ್ಗೊ ಪಟ್ಟಣದಲ್ಲಿ ಭೀಕರ ಸ್ಫೋಟವೊಂದು ಸಂಭವಿಸಿ ಇಬ್ಬರು ಮೃತಪಟ್ಟಿದ್ದರು. ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಮೃತಪಟ್ಟ ಆ ಇಬ್ಬರು ಆಗಂತುಕರು ಅಂದು ನಡೆಯಲಿದ್ದ ಉತ್ಸವದಲ್ಲಿ ಬಾಂಬ್ ಸ್ಪೋಟಗೊಳಿಸಲು ಸ್ಕೂಟರ್‍ನಲ್ಲಿ ಸಾಗಿಸುತ್ತಿದ್ದರು ವೇಳೆಯಲ್ಲಿ ಆಕಸ್ಮಿಕವಾಗಿ ಬಾಂಬ್ ಸ್ಫೊಟಗೊಂಡು ತಾವೇ ಬಲಿಯಾಗಿದ್ದರು. ಮೃತಪಟ್ಟ ಮಲ್ಗೊಂಡ ಪಾಟೀಲ್ ಮತ್ತು ಯೋಗೇಶ್ ನಾಯಕ್ ಎಂಬ ಈ ಇಬ್ಬರು ಯುವಕರು ಸನಾತನ ಸಂಸ್ಥೆಯ ಸದಸ್ಯರಾಗಿದ್ದರು. ತನಿಖೆ ಮುಂದುವರೆದಂತೆ ಈ ಸ್ಫೋಟಕ್ಕೆ ಸಂಬಂಧಿಸಿದಂತೆ ವಿನಾಯಕ ಪಾಟೀಲ್ ಮತ್ತು ವಿನಯ್ ತಾಲೇಕರ್ ಎಂಬ ಮತ್ತಿಬ್ಬರು ಸದಸ್ಯರನ್ನು ಬಂಧಿಸಲಾಯ್ತು. ಇವರು ರಾಮನಾಥಿಯಲ್ಲಿರುವ ಆಶ್ರಮವೊಂದರ ಮೂಲಕ ಸನಾತನ ಸಂಸ್ಥೆಯ ಸಂಬಂಧ ಹೊಂದಿದ್ದರು. ಈ ಪ್ರಕರಣದಲ್ಲಿ ಬಂದಿತನಾದ ಮತ್ತೊಬ್ಬ ಆರೋಪಿ 20 ವರ್ಷ ವಯಸ್ಸಿನ ಧನಂಜಯ್ ಅಷ್ಟೇಕರ್, ಈಚಲಕಾರಂಜಿಯಲ್ಲಿರುವ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯಾಗಿದ್ದ. ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಉತ್ಸವವೊಂದು ನಡೆಯಲಿದ್ದು ಸಾವಿರಾರು ಜನರು ಭಾಗವಹಿಸಲಿದ್ದರು. ಬಾಂಬ್ ಸ್ಪೋಟಿಸಿ, ಈ ಸ್ಫೋಟಕ್ಕೆ ಮುಸ್ಲಿಮರು ಕಾರಣವೆಂದು ಆರೋಪಿಸಿ, ನಂತರ ಕೋಮು ಗಲಭೆಗಳನ್ನು ನಡೆಸುವ ಯೋಜನೆ ತಯಾರಾಗಿತ್ತು. ಅದಕ್ಕಾಗಿ ದೆಹಲಿಯ ಖಾನ್ ಮಾರ್ಕೆಟ್ ಎಂಬ ಹೆಸರು ಮುದ್ರಿತವಾಗಿರುವ ಒಂದು ಬ್ಯಾಗ್ ಮತ್ತು ಅದರಲ್ಲಿ ಮುಸ್ಲಿಮರು ಬಳಸುವ ಸುಗಂಧ ದ್ರವ್ಯದ ಒಂದು ಬಾಟಲ್, ಸಂಪೂರ್ಣ ಉರ್ದು ಅಕ್ಷರಗಳಲ್ಲಿ ಪ್ರಿಂಟ್ ಆಗಿರುವ ಬಾಸ್ಮತಿ ಅಕ್ಕಿಯ ಒಂದು ಖಾಲಿ ಚೀಲ ಮುಂತಾದ ವಸ್ತುಗಳನ್ನು ಸ್ಪೋಟದ ಸ್ಥಳದಲ್ಲಿ ಬಿಟ್ಟು ಹೋಗಲಿಕ್ಕೆಂದು ತಂದಿದ್ದರು. ಕಾರಣ ಸ್ಪಷ್ಟವಿತ್ತು. ಸಹಜವಾಗಿ ಇದು ಮುಸ್ಲಿಮರ ಕೃತ್ಯ ಎಂದು ಮಾಧ್ಯಮಗಳ ಮೂಲಕ ಬಿಂಬಿಸುವುದು ಮತ್ತು ಕೋಮು ಗಲಭೆ ಸೃಷ್ಟಿಸುವುದು. ಆದರೆ ಅವರ ದುರಾದೃಷ್ಟ. ತಾವೇ ಬಲಿಯಾಗಿ ಹೋಗಿದ್ದರು.
2008ರಲ್ಲಿ ನಡೆದ ಬಾಂಬ್ ಬ್ಲಾಸ್ಟ್‍ನಲ್ಲಿ ಕೆಲವು ಸಾಧಕರು ಅರೆಸ್ಟ್ ಆಗಿದ್ದರು. ನವಿಮುಂಬೈ ಮತ್ತು ಥಾಣೆಗಳಲ್ಲಿ ‘ಅಮ್ಹಿ ಪಚ್‍ಪುಟೆ’ ಎಂಬ ನಾಟಕ ಪ್ರದರ್ಶನವಿತ್ತು. ಈ ನಾಟಕ ಹಿಂದೂಗಳ ಭಾವನೆಗಳಿಗೆ ದಕ್ಕೆಯಾಗುತ್ತಿದೆಯೆಂದು ಸನಾತನ ಸಂಸ್ಥೆ ಹುಯಿಲೆಬ್ಬಿಸಿತ್ತು. ನಂತರ ಈ ನಾಟಕ ಪ್ರದರ್ಶನ ನಡೆಯುತ್ತಿದ್ದ ಆಡಿಟೋರಿಯಂಗಳಲ್ಲಿ ಬಾಂಬ್‍ಗಳನ್ನು ಸ್ಫೋಟಿಸಲಾಯಿತು.
‘ಜೋಧಾ ಅಕ್ಬರ್’ ಹಿಂದಿ ಸಿನಿಮಾದಲ್ಲಿ ಹಿಂದೂ ಮಹಿಳೆಯನ್ನು ಕೆಟ್ಟದಾಗಿ ಚಿತ್ರಿಸಲಾಗಿದೆಯೆಂದು ಸನಾತನ ಸಂಸ್ಥೆ ಬೊಬ್ಬೆ ಹಾಕಿತ್ತು. ಪನ್ವೇಲ್‍ನಲ್ಲಿರುವ ಥಿಯೇಟರ್‍ನಲ್ಲಿ ಈ ಸಿನಿಮಾ ಪ್ರದರ್ಶನ ನಡೆಯುತ್ತಿದ್ದ ಸಂದರ್ಭದಲ್ಲೇ ಬಾಂಬ್ ಸ್ಫೋಟಿಸಿತ್ತು.
ಈ ಸ್ಫೋಟಗಳಿಗೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ವಿಕ್ರಮ್ ಭಾವೆ ಮತ್ತು ರಮೇಶ್ ಗಡ್ಕರಿ ಎಂಬ ಇಬ್ಬರು ಇಬ್ಬರು ಸನಾತನಿಗಳಿಗೆ ನ್ಯಾಯಾಲಯ ಹತ್ತು ವರ್ಷ ಜೈಲು ವಾಸದ ಶಿಕ್ಷೆ ವಿಧಿಸಿತ್ತು. ನಂತರದ ದಿನಗಳಲ್ಲಿ ಬಾಂಬೆ ಹೈಕೋರ್ಟ್ ಈ ಶಿಕ್ಷೆಯನ್ನು ರದ್ದುಪಡಿಸಿ, ಜಾಮೀನು ಮುಂಜೂರು ಮಾಡಿದೆ. ಬಾಂಬ್ ಸ್ಫೋಟದಲ್ಲಿ ಶಿಕ್ಷೆಗೊಳಗಾದವರಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂಬ ಮಾಮೂಲಿ ರಾಗವನ್ನು ಸಂಸ್ಥೆ ಹಾಡುತ್ತಲೇ ಬಂದಿದೆ.
ಮಹಾರಾಷ್ಟ್ರದಲ್ಲಿ 2013ರಲ್ಲಿ ನರೇಂದ್ರ ದಾಬೋಲ್ಕರ್ ಎಂಬ ವಿಚಾರವಾದಿಯೊಬ್ಬರ ಕೊಲೆಯಾಯಿತು. ಕೊಲೆಯಾದ ಸುದ್ದಿ ಹೊರಬೀಳುತ್ತಿದ್ದಂತೆಯೇ ಸನಾತನ ಸಂಸ್ಥೆಯ ಒಂದು ಅಂಗ ಸಂಸ್ಥೆ ‘ಹಿಂದೂ ಜನಜಾಗೃತಿ ಸಮಿತಿ’ ತನ್ನ ವೆಬ್‍ಸೈಟ್‍ನಲ್ಲಿ ದಾಬೋಲ್ಕರ್ ಫೋಟೋ ಅಪ್‍ಲೋಡ್ ಮಾಡಿ, ಮುಖದ ಮೇಲೆ ಘಿ ಮಾರ್ಕ್ ಹಾಕಿ ಪ್ರಕಟಿಸಿದರು. ಈ ಬಗ್ಗೆ ಎಲ್ಲೆಡೆ ಟೀಕೆಗಳು ಕೇಳಿಬಂದವು. ಪೂನಾ ಪೊಲೀಸರ ಸೈಬರ್ ಕ್ರೈಮ್ ಇಲಾಖೆಯವರು ಆ ಫೊಟೋ ಡಿಲೀಟ್ ಮಾಡುವಂತೆ ಸನಾತನ ಸಂಸ್ಥೆಗೆ ಸೂಚಿಸಿದರು. ಅಷ್ಟೇ, ಪೊಲೀಸರು ಕೈತೊಳೆದುಕೊಂಡರು.
ವಾಸ್ತವದಲ್ಲಿ, ನರೇಂದ್ರ ದಾಬೋಲ್ಕರ್ ಮೇಲೆ ಸನಾತನ ಸಂಸ್ಥೆ ನಿರಂತರ ದಾಳಿಗಳನ್ನು ನಡೆಸುತ್ತಲೇ ಬಂದಿತ್ತು. ಅವರ ಸಾರ್ವಜನಿಕ ಸಭೆಗಳಲ್ಲಿ ಗದ್ದಲವೆಬ್ಬಿಸುವುದು ಮಾಮೂಲಿಯಾಗಿ ಹೋಗಿತ್ತು. ಅವರನ್ನು ‘ಹಿಂದೂ ದ್ರೋಹಿ’ ಎಂದು ಘೋಷಿಸಿ ತನ್ನ ವೆಬ್‍ಸೈಟ್ ಮತ್ತಿತರ ಪ್ರಕಟಣೆಗಳಲ್ಲಿ ಘೋಷಿಸಲಾಗಿತ್ತು. ಹೀಗೆ ಬಹಿರಂಗ ಪ್ರಕಟಣೆ ಬಂದ ನಂತರ ಅನಾಮಧೇಯರಿಂದ ಬೆದರಿಕೆ ಕರೆಗಳು ಮಾಮೂಲಿಯಾಗಿ ಹೋದವು. ಅವರ ಕೊಲೆಯಾಗುವ ಮುನ್ನ ಬಂದ ಬೆದರಿಕೆ ಕರೆ ಈ ಸನಾತನ ಸಂಸ್ಥೆ ಹಾಗೂ ಅದರ ಹಿಂದಿರುವ ಇತರೆ ಶಕ್ತಿಗಳ ಚಾರಿತ್ರಿಕ ಪಾತ್ರವನ್ನು ಬಟಾಬಯಲು ಮಾಡುತ್ತದೆ. “ಗಾಂಧಿಯನ್ನು ನೆನಪಿಸಿಕೋ, ನಾವು ಅವನಿಗೆ ಏನು ಮಾಡಿದ್ದೀವೋ ಅದೇ ಕತೆ ನಿಂಗೂ ಕಾದಿದೆ” ಎಂಬ ಬೆದರಿಕೆಯನ್ನು ಅನಾಮಧೇಯರು ಹಾಕಿದ್ದರು. ಕೆಲವೊಮ್ಮೆ ಬೆದರಿಕೆಗಳು ಬಹಿರಂಗ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಸಂದರ್ಭದಲ್ಲೇ ಬಂದಿದ್ದವು. ಅಂದರೆ ಕೊಲೆಪಾತಕಿಗಳಿಗೆ ಯಾವುದೇ ಕಾನೂನಿನ ಭಯವೂ ಇದ್ದಂತಿರಲಿಲ್ಲ.
ದಾಬೋಲ್ಕರ್ ಹತ್ಯೆಯಾದ ದಿನ ಅವರ ವೆಬ್‍ಸೈಟ್‍ನ ಮುಖಪುಟದಲ್ಲಿ ಜಯಂತ್ ಅಠಾವಳೆ ಹೀಗೆ ಬರೆದಿದ್ದರು. “ಹುಟ್ಟು ಮತ್ತು ಸಾವುಗಳು ಮೊದಲೇ ನಿರ್ಧರಿತವಾಗಿರುತ್ತವೆ ಹಾಗೂ ಪ್ರತಿಯೊಬ್ಬರೂ ಅವರವರ ಕರ್ಮಕ್ಕೆ ತಕ್ಕಂತಹ ಫಲಗಳನ್ನು ಪಡೆದೇ ಪಡೆಯುತ್ತಾರೆ. ಕಾಯಿಲೆ ಬಿದ್ದು ಹಾಸಿಗೆ ಹಿಡಿದು ನರಳಿ ಸಾಯುವುದರ ಬದಲು, ಯಾವುದೋ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಸಾಯುವುದರ ಬದಲಿಗೆ ದಾಬೋಲ್ಕರ್ ಅವರಿಗೆ ಪರಮಾತ್ಮ ಒಳ್ಳೆಯ ಸಾವನ್ನೇ ಕೊಟ್ಟಿದ್ದಾನೆ.”
ಮಹಾರಾಷ್ಟ್ರದ ಕಮ್ಯುನಿಸ್ಟ್ ಮುಖಂಡ ಗೋವಿಂದ್ ಪನ್ಸಾರೆ ಕೊಲೆ ಕೇಸಿನಲ್ಲಿ ಸನಾತನ ಸಂಸ್ಥೆಯ ಸಮೀರ್ ಗಾಯಕ್‍ವಾಡ್ ಅರೆಸ್ಟ್ ಎಂಬುವವನನ್ನು ಅರೆಸ್ಟ್ ಮಾಡಲಾಗಿದೆ. ಆತನ ಮೂಲಕ ಈ ಸಂಸ್ಥೆಯ ಮತ್ತಷ್ಟು ಪಾತಕ ಕೃತ್ಯಗಳು ಹೊರಬಿದ್ದಿವೆ.
ಅಫಿಷಿಯಲ್ ಲಿಂಕ್ಸ್
ಈ ಸಂಸ್ಥೆಗೆ ಮತ್ತೊಂದು ಅಪಾಯಕಾರಿ ಆಯಾಮವೂ ಇದೆ. ಗೋವಾದ ಪಿಡಬ್ಲ್ಯುಡಿ ಮಂತ್ರಿ ಸುದಿನ್ ಧವಳಿಕರ್‍ನ ಹೆಂಡತಿ ಜ್ಯೋತಿ ಧವಳಿಕರ್ ಸನಾತನ ಸಂಸ್ಥೆಯ ಸಕ್ರಿಯ ಕಾರ್ಯಕರ್ತೆ. ಸನಾತನ ಸಂಸ್ಥೆಯ ಕ್ರಿಮಿನಲ್ ಚಟುವಟಿಕೆಗಳ ಹಿನ್ನೆಲೆಯಲ್ಲಿ ಪೊಲೀಸರು ಈ ಮಂತ್ರಿಯನ್ನು ವಿಚಾರಣೆ ನಡೆಸಿದ್ದರು. ಆದರೆ ತನಿಖೆ ಅಲ್ಲಿಂದ ಮುಂದಕ್ಕೆ ಸಾಗಲಿಲ್ಲ.
ಈ ಸಂಸ್ಥೆ ನಡೆಸುವ ‘ಸನಾತನ ಪ್ರಭಾತ್. ಎಂಬ ಪತ್ರಿಕೆಯನ್ನು ನಡೆಸುತ್ತಿದೆ. ಅದರಲ್ಲಿ ವಿಚಾರವಾದಿಗಳ ವಿರುದ್ಧ ಲೇಖನಗಳು ಪ್ರಕಟವಾಗುತ್ತವೆ. ವಿಚಾರವಾದಿಗಳನ್ನು ‘ದ್ರೋಹಿಗಳು’ ಎಂದು ಘೋಷಿಸಿ, ಅದರ ಅನುಯಾಯಿಗಳನ್ನು ಎತ್ತಿಕಟ್ಟುವ ಬರಹಗಳೂ ಆಗಿಂದಾಗ್ಗೆ ಪ್ರಕಟವಾಗುತ್ತವೆ. ಸದರಿ ಪತ್ರಿಕೆಗೆ ಸರ್ಕಾರಿ ಜಾಹಿರಾತುಗಳೂ ಕೂಡ ಬಿಡುಗಡೆಯಾಗಿವೆ! ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಡ್ವೈಸರ್ ಆಗಿರುವ ವಿಷ್ಣು ವಾಘ್ ಅವರೇ ಹೇಳುವ ಪ್ರಕಾರ “ಈ ಪತ್ರಿಕೆಯ ಬರಹಗಳು ಸಮಾಜವನ್ನು ಒಡೆಯುವ ಸರಕನ್ನು ಒಳಗೊಂಡಿರುತ್ತವೆ, ಇವು ಟೆರರಿಸ್ಟ್‍ಗಳನ್ನು ಸೃಷ್ಟಿಮಾಡುವ ಸಾಧ್ಯತೆ ಇದೆ”.
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮಿಲಿಟರಿ ಅಧಿಕಾರಿ ಕರ್ನಲ್ ಪುರೋಹಿತ್‍ನೇ ಮಾಸ್ಟರ್ ಮೈಂಡ್ ಆಗಿದ್ದ ಎಂಬ ಸುದ್ದಿ ಈಗ ಹಳೆಯದು. ಅದೇ ರೀತಿಯಲ್ಲೇ ಈ ಸಂಸ್ಥೆಯೊಂದಿಗೆ ಹಲವು ಮಿಲಿಟರಿ ಅಧಿಕಾರಿಗಳೂ ಸಂಬಂಧ ಹೊಂದಿರುವ ಸುದ್ದಿಗಳು ಬಯಲಾಗಿವೆ. ಇಂಡಿಯನ್ ನೇವಿಯ ಮಾಜಿ ಅಧಿಕಾರಿ ಸಿಯಾನ್ ಮೈಕೆಲ್ ಕ್ಲಾರ್ಕ್ ಸನಾತನದ ಸಕ್ರಿಯ ಕಾರ್ಯಕರ್ತನಾಗಿದ್ದು, ರಾಮನಾಥಿ ಆಶ್ರಮದ ವಾಸಿಯಾಗಿದ್ದ. 2006ರಲ್ಲಿ ಈತ ಆಶ್ರಮವಾಸಿಯಾಗಿರುವಾಗಲೇ ಅಸ್ಟ್ರೇಲಿಯಾ ದೇಶದ ಪೌರತ್ವ ಪಡೆದುಕೊಂಡಿದ್ದ! ಆದರೆ ಇದೇ ಅವಧಿಯಲ್ಲಿ ಗೋವಾದಲ್ಲಿ ನಡೆದ ಭಜರಂಗದಳ, ವಿಶ್ವ ಹಿಂದೂ ಪರಿಷದ್ ಮತ್ತು ಆರೆಸ್ಸೆಸ್ ಸಂಘಟನೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ. ಈ ಸಂಘಟನೆಗಳ ಪರಸ್ಪರ ಸಂಬಂಧವೇನು ಎಂಬುದಕ್ಕೆ ಇದೊಂದು ಪುರಾವೆಯಷ್ಟೆ.
ಸನಾತನ ಸಂಸ್ಥೆಯ ಸ್ಥಾಪಕ ಜಯಂತ್ ಬಾಲಾಜಿ ಅಠಾವಳೆ ಮೂಲತಃ ತರಬೇತುಗೊಂಡ ಹಿಪ್ನೋ ಥೆರಾಪಿಸ್ಟ್. ಬಹಳಷ್ಟು ವರ್ಷ ಬ್ರಿಟನ್‍ನಲ್ಲಿದ್ದುಕೊಂಡು ಹಿಪ್ನೋ ಥೆರಪಿಸ್ಟ್ ಆಗಿ ಪ್ರಾಕ್ಟೀಸ್ ಮಾಡ್ತಾ ಇದ್ದರು. ಹಿಪ್ನೋ ಥೆರಪಿಯಲ್ಲಿ ಭಾರೀ ಸಂಶೋಧನೆ ಮಾಡಿರುವ ಈತ ‘ಆದ್ಯಾತ್ಮ’ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿಕ್ಕಾಗಿ ಭಾರತಕ್ಕೆ ವಾಪಸ್ ಬಂದ. ತನ್ನನ್ನು ಅವತಾರ ಪುರುಷ ಎಂಬಂತೆ ಪ್ರಚಾರ ಮಾಡಿಕೊಂಡ. ‘ಅಧ್ಯಾತ್ಮಿಕ ವಿಶ್ವವಿದ್ಯಾಲಯ’ ಎಂದು ಕರೆಯಲಾಗುವ ಸನಾತನ ಸಂಸ್ಥೆ ಸ್ಥಾಪಿಸಿದ್ದಾನೆ. ಆತನ ಕೆಲವು ಫೋಟೋಗಳು ನಾಲಿಗೆಯಲ್ಲಿ ಓಂ ಗುರುತಿನ ಮಚ್ಚೆ ಇರುವಂತೆ, ಉಗುರುಗಳಲ್ಲಿ ಓಂ ಎಂಬ ಬಿಳಿ ಮಚ್ಚೆ ಮೂಡಿರುವಂತೆ ಫೋಟೋಶಾಪ್ ಮಾಡಿ, ಭಕ್ತಾದಿಗಳನ್ನು ಮರುಳು ಮಾಡುವ ಕೆಲಸವೂ ನಡೆದಿದೆ.
ಈ ಇಡೀ ಸಂಸ್ಥೆಯ ಸ್ಥಾಪನೆ ಹಾಗೂ ಅದರ ವಿಸ್ತಾರವಾದ ಜಾಲದ ಹಿಂದೆ ಇದೇ ಸಂಘ ಪರಿವಾರದ ಶಕ್ತಿಗಳು ಕೆಲಸ ಮಾಡುತ್ತಿವೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಠಧಾರಗಳಿವೆ. ಆದರೆ ಸರ್ಕಾರಗಳು ಕುರುಡಾಗಿರುವಾಗ ಯಾರೇನು ಮಾಡಲು ಸಾಧ್ಯ?
ಸನಾತನಿಗಳು ತಮ್ಮ ಚಟುವಟಿಕೆಯನ್ನು ವಿವಿಧ ದೇಶಗಳಿಗೂ ವಿಸ್ತರಿಸಿದ್ದಾರೆ. ಗೌರಿ ಲಂಕೇಶ್ ಕೊಲೆ ಕೇಸಿನೊಂದಿಗೆ ಸಂಬಂಧ ಹೊಂದಿರುವ ಐವರಲ್ಲಿ ನಾಲ್ಕು ಮಂದಿ ದೇಶದಿಂದ ಹೊರಗಿದ್ದಾರೆಂಬ ಸುದ್ದಿಯನ್ನು ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿತ್ತು. ಅವರಲ್ಲಿ ನಮ್ಮ ಬೆಳಗಾವಿ ಮೂಲದ ರುದ್ರ ಪಾಟೀಲ್, ಮಂಗಳೂರು ಮೂಲದ ಜಯಪ್ರಕಾಶ್ ಕೂಡ ಇದ್ದಾರೆ. ಇವರ ಮೇಲೆ ರೆಡ್ ಕಾರ್ನರ್ ನೋಟೀಸ್ ಕೂಡ ಜಾರಿಯಲ್ಲಿದೆ.
ಸರ್ಬಿಯಾ ದೇಶದ ಕತೆ ಕೇಳಿ. ಇಲ್ಲಿ ‘ಮಾನವನ ಆದ್ಯಾತ್ಮಿಕ ಉನ್ನತಿ’ಯ ಹೆಸರಿನಲ್ಲಿ ಚಟುವಟಿಕೆ ನಡೆಸುತ್ತಿದ್ದ ಈ ಗುಂಪನ್ನು ನಿಷೇಧಿಸಲಾಗಿದೆ. “ಸನಾತನ ಸಂಸ್ಥೆ ಮಾನವ ಹಕ್ಕುಗಳ ವಿರೋಧಿಯಾಗಿರುವ, ವ್ಯಕ್ತಿಗತ ಆಯ್ಕೆಯ ಸ್ವಾತಂತ್ರ್ಯಕ್ಕೆ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿಯುಂಟು ಮಾಡುತ್ತಿರುವ ಸಂಘಟನೆ. ಈ ಸಂಸ್ಥೆ ಮಾನಸಿಕ ಹಾಗೂ ಸಾಮಾಜಿಕ ಸಮತೋಲನವನ್ನು ಹಾಳು ಮಾಡುತ್ತಿರುವ ಹಾಗೂ ವ್ಯಕ್ತಿಗಳ ಸುರಕ್ಷತೆಗೆ ಮತ್ತು ಸರ್ಕಾರದ ಭದ್ರತೆಗೆ ಅತ್ಯಂತ ಅಪಾಯಕಾರಿಯಾಗಿದೆ, ಮಾನವೀಯತೆಯ ಮುಸುಕಿನಲ್ಲಿ ಸನಾತನ ಸಂಸ್ಥೆ ಟೆರರಿಸಂಅನ್ನು ಬೆಳೆಸುತ್ತಿದೆ” ಎಂದು ಅಲ್ಲಿನ ಸರ್ಕಾರ ವಿವರಣೆ ನೀಡಿದೆ.
ಭಾರತ ದೇಶ ಪಾಠ ಕಲಿಯುವುದು ಯಾವಾಗ?

– ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...