Homeಮುಖಪುಟಸಿದ್ದು ಮೇಲೆ ಬಿಜೆಪಿಯ ದಿಢೀರ್ ಮಮಕಾರದ ಮರ್ಮವೇನು?

ಸಿದ್ದು ಮೇಲೆ ಬಿಜೆಪಿಯ ದಿಢೀರ್ ಮಮಕಾರದ ಮರ್ಮವೇನು?

- Advertisement -
- Advertisement -
  • ಮಾಚಯ್ಯ |

ರಾಜ್ಯದ ಎಲೆಕ್ಷನ್ ಸಮರ ಮುಗಿದು, ಒಂದರ ಮೇಲೊಂದರಂತೆ ಎರಡು ಸರ್ಕಾರಗಳು ರಚನೆಯಾದವು. ಉತ್ತರ ಸೀಮೆಯ ಮಜಬೂತು ಜೋಡಿ ಹೋರಿಗಳನ್ನು ನೆಚ್ಚಿಕೊಂಡು ನೊಗ ಕಟ್ಟಿದ್ದ ಯಡ್ಯೂರಪ್ಪನ ಚಕ್ಕಡಿಗೆ ಚಕ್ರಗಳೇ ಇರಲಿಲ್ಲ. ಹಾಗಾಗಿ ಅದು ಮೂರು ಗೇಣೂ ಮುಂದಕ್ಕೆ ಹೋಗದೆ ನಿಂತಲ್ಲೆ ಸುಸ್ತಾಗಿ ನೆಲಕಚ್ಚಿತು. ಈಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಹವಾ ಶುರುವಾಗಿದೆ. ಹೆಚ್ಚೂಕಮ್ಮಿ ಒಂದು ದಶಕದ ಕಾಲ ಅಧಿಕಾರವಿಲ್ಲದೆ ಇನ್ನೇನು ಬೂಸ್ಟು ಹಿಡಿಯುವ ಹಂತಕ್ಕೆ ಬಂದಿದ್ದ ಜೆಡಿಎಸ್‌ಗೆ ಕುಮಾರಣ್ಣ ಸಿಎಂ ಆಗುವ ಸುಯೋಗ ಬಂದಿರೋದು ದೇವೇಗೌಡರಿಗೆ ಯೌವ್ವನವನ್ನು ಮರಳಿ ತಂದುಕೊಟ್ಟಿರೋದು ಮಾತ್ರವಲ್ಲ, ಅವರ ತಲೆಯಲ್ಲಿ ಮಲಗಿದ್ದ ಫೀನಿಕ್ಸ್ ಹಕ್ಕಿಗಳೆಲ್ಲ ಒಂದೊಂದಾಗಿ ರೆಕ್ಕೆ ಬಿಚ್ಚುವಂತೆ ಮಾಡಿದೆ. ಕುಮಾರಣ್ಣ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಮೊದಲೇ ಸಿಎಸ್, ಐಜಿಯಂತಹ ಎ.ಸಿ ಚೇಂಬರ್ ಅಧಿಕಾರಗಳನ್ನು ತನ್ನ ಮನೆಗೇ ಕರೆಸಿಕೊಂಡು ಪಿಚ್ ರಿಪೋರ್ಟ್ ಕಲೆಹಾಕಿದ್ದ ದೇವೇಗೌಡರ ಲಗುಬಗೆ ನೋಡಿದರೆ ಅವರ ಹಳೇ ಆಟಗಳು ಶುರುವಾಗುವುದರಲ್ಲಿ ಡೌಟೇ ಇಲ್ಲ. ಅಂದರೆ, ಫ್ಯಾಮಿಲಿ ಸೆಂಟ್ರಿಕ್ ಡ್ರಾಮಾ ಶುರು ಹಚ್ಚಿಕೊಂಡು ತಮ್ಮ ಎದುರಾಳಿಗಳನ್ನು ಒಬ್ಬೊಬ್ಬರನ್ನಾಗಿ ತೆರೆಮರೆಗೆ ಸರಿಸುವ ಸೋಕಾಲ್ಡ್ ಚಾಣಾಕ್ಷ ತಂತ್ರ!

ದೇವೇಗೌಡರ ಈ ಪರಿ ಹುಮ್ಮಸ್ಸಿನ ಕಾರಣಕ್ಕೇ ಇದೀಗ ಎಲ್ಲರ ಗಮನ ಮಾಜಿ ಸಿಎಂ ಸಿದ್ರಾಮಯ್ಯನತ್ತ ನೆಟ್ಟಿದೆ. ಕಾಂಗ್ರೆಸ್ ಪಾರ್ಟಿಯ ಪ್ರಸ್ತುತ ಅನಾಟಮಿ ಮತ್ತು ದೇಶದ ಮುಂದಿರುವ ಪೊಲಿಟಿಕಲ್ ಕ್ರೈಸಿಸ್ ಬಗ್ಗೆ ಆಳವಾಗಿ ಅರಿವಿಲ್ಲದವರು, `ಇನ್ನು ಸಿದ್ದು ಕಥೆ ಮುಗೀತು. ಒಂದು ಕಡೆ ತಮ್ಮ ವಿರುದ್ಧ ತೊಡೆ ತಟ್ಟಿದ್ದ ದೇವೇಗೌಡ್ರು, ಮತ್ತೊಂದು ಕಡೆ ಕಾಂಗ್ರೆಸ್ ಪಾರ್ಟಿಯೊಳಗೇ ಇರುವ ಹಿತಶತ್ರುಗಳು ಸೇರಿಕೊಂಡು ಸಿದ್ರಾಮಯ್ಯರನ್ನು ಮೂಲೆಗುಂಪು ಮಾಡ್ತಾರೆ. ಹೈಕಮಾಂಡ್ ಕೂಡಾ ಸಿದ್ರಾಮಯ್ಯರನ್ನ ಕ್ಯಾರೇ ಅನ್ನಲ್ಲ’ ಎಂಬಂತಹ ವಾದಗಳನ್ನು ಹರಿಬಿಡುತ್ತಿದ್ದಾರೆ. ಇಂಥಾ ವಾದದ ಲಾಭವನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ಸಲುವಾಗಿ ಬಿಜೆಪಿ ಕೂಡಾ ಸಿದ್ರಾಮಯ್ಯನ ಮೇಲೆ ದಿಡೀರ್ ಕಕ್ಕುಲಾತಿಯನ್ನು ಹುಟ್ಟಿಸಿಕೊಂಡು `ಅಯ್ಯೋ.., ಪಾಪಾ..’ ಎಂದು ಮರುಗಲು ಶುರು ಮಾಡಿದೆ. ಯಡ್ಯೂರಪ್ಪನವರು ಸಿದ್ರಾಮಯ್ಯನವರ ಕುರಿತು `ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರನ್ನು ಚೆನ್ನಾಗಿ ಬಳಸಿಕೊಂಡು, ಈಗ ಮೂಲೆಗೆ ಬಿಸಾಕಿದೆ’ ಎಂಬ ಹೇಳಿಕೆ ನೀಡಿದ್ದಲ್ಲದೆ ತಮ್ಮ ಪೌರಾಣಿಕ ಬುಟ್ಟಿಯೊಳಗಿರುವ ದುರಂತ ಪಾತ್ರಗಳನ್ನು ಹೆಕ್ಕಿತೆಗೆದು ಸಿದ್ದುವಿಗೆ ತಾಳೆ ಹಾಕುತ್ತಾ ಓಡಾಡುತ್ತಿದ್ದಾರೆ. ಇತ್ತ ಶೋಭಕ್ಕ, `ಸಿದ್ರಾಮಯ್ಯ ಇದ್ದಿದ್ದರಿಂದಲೇ ಕಾಂಗ್ರೆಸ್‌ಗೆ 78 ಸ್ಥಾನ ಬಂತು. ಆದ್ರೆ, ಕಾಂಗ್ರೆಸ್ ಅವರನ್ನು ಸರಿಯಾಗಿ ನಡೆಸಿಕೊಳ್ಳದೆ ಅವಮಾನ ಮಾಡುತ್ತಿದೆ’ ಅಂತ ಹೇಳಿಕೆ ಕೊಡುತ್ತಾರೆ.

ಬಿಜೆಪಿಗರ ಈ ಸಿದ್ದು ಮಮಕಾರದ ಹೇಳಿಕೆಗಳು ಕೇವಲ ಬಾಯಿಚಪಲಕ್ಕೆ ಹೊರಬೀಳುತ್ತಿರುವ ಡೈಲಾಗ್‌ಗಳಲ್ಲ. ಅಥವಾ ಸಿದ್ದುವನ್ನು ಗೇಲಿ ಮಾಡುವ ಸಿಂಪಲ್ ಕೊಂಕು ಮಾತುಗಳೂ ಅಲ್ಲ. ಅವುಗಳ ಹಿಂದೆ ಅಡಗಿರಬಹುದಾದ ತಂತ್ರವನ್ನು ಊಹಿಸುತ್ತಾ ಸಾಗಿದರೆ, ಬಿಜೆಪಿಯ ಸ್ಟ್ರಾಟಜಿಯ ಜೊತೆಜೊತೆಗೆ `ಸಿದ್ದು ಕಥೆ ಮುಗೀತಾ?’ ಎಂಬ ಪ್ರಶ್ನೆಗೆ ಒಂದು ಸಾಲಿಡ್ ಉತ್ತರವೂ ಅರ್ಥವಾಗುತ್ತದೆ. ಮೊನ್ನೆ ಮುಗಿದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಇಡಿಯಾಗಿ ಬಡಿದಾಡಿದ್ದು ಕಾಂಗ್ರೆಸ್ ಎಂಬ ಶತಮಾನದ ಪಾರ್ಟಿಯ ಜೊತೆಗಲ್ಲ, ದಿಲ್ಲಿಯ ರಾಹುಲ್ ಗಾಂಧಿ ಸಂಗಡವೂ ಅಲ್ಲ; ಸಿದ್ದರಾಮಯ್ಯನ ವಿರುದ್ಧ! ಯಾಕೆಂದರೆ ಹೇಳಿಕೊಳ್ಳುವಂತಹ ದೊಡ್ಡ ಹಗರಣವಿಲ್ಲದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾದಾಡಲು ಬಿಜೆಪಿಗೆ ಯಾವ ಘನಂದಾರಿ ನೆಪವೂ ಇರಲಿಲ್ಲ. ಇದ್ದರೂ ಅವು ಆಧಾರರಹಿತ ಆಪಾದನೆಗಳು ಮಾತ್ರ. ಅವುಗಳನ್ನು ನೆಚ್ಚಿಕೊಂಡು ಜಾಹೀರಾತು ಕೊಡಲು ಹೋಗಿ ಖುದ್ದು ಚುನಾವಣಾ ಆಯೋಗದಿಂದಲೇ ನೋಟಿಸ್ ಪಡೆದುಕೊಂಡಿದ್ದ ಬಿಜೆಪಿಗೆ ರಾಹುಲ್ ಕೂಡಾ ಪ್ರಬಲ ಎದುರಾಳಿಯಾಗಿರಲಿಲ್ಲ. ಆದರೆ ಮೋದಿ, ಅಮಿತ್ ಶಾರಂತಹ ಬಿಜೆಪಿ ದಿಗ್ಗಜರನ್ನೆ ಪಂಚಾಯ್ತಿ ಮಟ್ಟದ ಎದುರಾಳಿಗಳಂತೆ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸಿದ್ರಾಮಯ್ಯ ಬಿಜೆಪಿಗೆ ಬಲು ದೊಡ್ಡ ಸವಾಲಾಗಿ ಕಾಡಿದ್ದರು. ಹಾಗೆ ಕಾಡುವ ಸಾಮರ್ಥ್ಯವನ್ನು ಅವರ ಜನಪ್ರಿಯ ಯೋಜನೆಗಳು ಮತ್ತು ಕಪ್ಪುಚುಕ್ಕೆಯಿಲ್ಲದ ಆಡಳಿತ ಅವರಿಗೆ ನೀಡಿದ್ದವೆನ್ನುವುದರಲ್ಲಿ ಎರಡು ಮಾತಿಲ್ಲ.

ಹೀಗೆ ಕಾಡಿದ್ದ ಸಿದ್ದು ಬಗ್ಗೆ ಬಿಜೆಪಿಗೆ ಸುಖಾಸುಮ್ಮನೇ ಕಾಳಜಿ ಹುಟ್ಟಲು ಸಾಧ್ಯವೇ? ಅಧಿಕಾರಕ್ಕೆ ಹತ್ತಿರತ್ತಿರ ಬಂದು ಅವಕಾಶ ತಪ್ಪಿಸಿಕೊಂಡ ಹೊಟ್ಟೆಸಂಕಟದ ನಡುವೆಯೂ ಬಿಜೆಪಿ ಈಗ ಮೋದಿಗೋಸ್ಕರ 2019ರ ಚುನಾವಣೆಗೆ ಅಣಿಯಾಗಬೇಕಿದೆ. ಮೂರೇ ದಿನದ ಮುಖ್ಯಮಂತ್ರಿಗಿರಿಗೆ ರಾಜೀನಾಮೆ ಕೊಡುತ್ತಾ ಯಡ್ಯೂರಪ್ಪನವರು `ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ತೀವಿ’ ಎಂದು ಹೇಳಿದ ಮಾತನ್ನು ನಿಜ ಮಾಡಿಕೊಳ್ಳಲು ಹೆಣಗಾಡಬೇಕಿದೆ. ಅದರ ಭಾಗವಾಗಿಯೇ ಸಿದ್ದು ಮಮಕಾರದ ಮಾತುಗಳು ಬಿಜೆಪಿ ನಾಯಕರಿಂದ ಕೇಳಿ ಬರುತ್ತಿವೆ. ಬಿಜೆಪಿಗಿಂತ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಳ್ಳುವಲ್ಲಿ ಸಿದ್ದು ಸೋತಂತೆ ಕಾಣುತ್ತಾರಾದರು, ವೋಟ್ ಶೇರ್ ವಿಚಾರದಲ್ಲಿ ಬಿಜೆಪಿಗಿಂತಲೂ ಮುಂದಿದ್ದಾರೆ. ಬಿಜೆಪಿ ಶೇ.36.2 ಮತಗಳನ್ನಷ್ಟೆ ಗಳಿಸಿದ್ದರೆ, ಕಾಂಗ್ರೆಸ್ ಶೇ.38ರಷ್ಟು ಮತ ಗಳಿಸಿದೆ. ಅದರರ್ಥ, ಸಿದ್ರಾಮಯ್ಯ ನೇತೃತ್ವವನ್ನು ಒಪ್ಪುವವರ ಸಂಖ್ಯೆ ಜಾಸ್ತಿಯೇ ಇದೆ. ಅವುಗಳಲ್ಲಿ ಅಹಿಂದ ಮತಗಳ ಪ್ರಮಾಣ ಹೆಚ್ಚೆನ್ನುವುದನ್ನು ಅವರ ರಾಜಕೀಯ ಬದುಕನ್ನು ಕಂಡ ಎಂತವರಿಗೇ ಆದರು ಅರ್ಥವಾಗುತ್ತದೆ. ಅಂದರೆ, ಈಗಲೂ ಅಪಾರ ಸಂಖ್ಯೆಯಲ್ಲಿರುವ ಅಹಿಂದ ಮತಗಳಿಗೆ ಸಿದ್ರಾಮಯ್ಯನವರೇ ಫೇವರಿಟ್ಟು! ಈ ಅಂಶದ ಮೇಲೆ ಕಣ್ಣಿಟ್ಟೆ ಬಿಜೆಪಿ, ಸಿದ್ದು ಬಗ್ಗೆ ಮಮಕಾರದ ಮಾತಾಡುತ್ತಿದೆ.

ಕಾಂಗ್ರೆಸ್ ಪಕ್ಷದಿಂದ ಸಿದ್ರಾಮಯ್ಯನಿಗೆ ಅನ್ಯಾಯವಾಯ್ತು, ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಹೈಕಮಾಂಡ್ ಕೂಡಾ ದೇವೇಗೌಡರ ಶರತ್ತಿಗೆ ತಲೆಬಾಗಿ ಸಿದ್ರಾಮಯ್ಯನನ್ನು ದೂರ ಇಡುತ್ತಿದೆ ಎಂಬ ಗೊಂದಲವನ್ನು ಅಹಿಂದ ಮತಸಮೂಹದ ನಡುವೆ ಹುಟ್ಟುಹಾಕುವುದು ಈ ಮಮಕಾರದ ಇರಾದೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತೊ ಗೊತ್ತಿಲ್ಲ, ಆದರೆ ಇಂಡಿಯಾದ ಜನ ರಾಜಕೀಯ ವಿಚಾರದಲ್ಲಿ ವಸ್ತುಸ್ಥಿತಿ ವಿಸ್ಲೇಷಣೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಇಂತಹ ಭಾವನಾತ್ಮಕ ಮೆಲೊಡಿಗಳಿಗೆ ಈಡಾಗಿಬಿಡುತ್ತಾರೆ. ಇವತ್ತಿಗೂ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಜಾತಿ ಪ್ರಧಾನ ಪಾತ್ರ ವಹಿಸುತ್ತಿರುವುದು ಕೂಡಾ ಜನರ ಇಂತಹ ಭಾವನಾತ್ಮಕ ವೀಕ್ನೆಸ್ಸಿನಿಂದಾಗಿಯೇ. ಅದನ್ನೆ ಬಂಡವಾಳ ಮಾಡಿಕೊಂಡು ಒಂದು ಅಸ್ತ್ರ ಪ್ರಯೋಗಿಸಿ ನೋಡಲು ಬಿಜೆಪಿ ಮುಂದಾಗಿದೆ. ಆ ಮೂಲಕ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ಗೆ ಹರಿದುಹೋಗಿರುವ ಮತಗಳ ಪ್ರಮಾಣವನ್ನು ಕುಗ್ಗಿಸುವುದು ಅದರ ಹುನ್ನಾರ!

ದಿಲ್ಲಿಯತ್ತ ಸಿದ್ದಣ್ಣ?

ಆದರೆ ಕಾಂಗ್ರೆಸ್‌ನೊಳಗೆ ವಸ್ತುಸ್ಥಿತಿ ಈ ಥರ ಇಲ್ಲ. ಶಾಸಕರ ಸಂಖ್ಯಾ ಬಲದಲ್ಲಿ ಸೋತರೂ ಸಿದ್ರಾಮಯ್ಯನ ಸಾಮರ್ಥ್ಯ ಏನು ಅನ್ನೋದು ಹೊಸತನದ ತುಡಿತದಲ್ಲಿರುವ ರಾಹುಲ್ ಗಾಂಧಿಗೆ ಅರ್ಥವಾಗಿದೆ. ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥರಂತಹ ಬಿಜೆಪಿ ಘಟಾನುಘಟಿಗಳನ್ನೆ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸಿದ್ದುವಿನ `ಮಾಸ್ ಲೀಡರ್’ ಕೆಪಾಸಿಟಿ ರಾಹುಲ್‌ಗೆ ವಿಪರೀತ ಇಷ್ಟವಾಗಿದೆ. ವೇದಿಕೆ ಮೇಲಿರಬಹುದು, ಅಥವಾ ಸದನದ ಒಳಗಿರಬಹುದು ಒಂದು ಬಗೆಯ ನವಿರಾದ ಒರಟುತನದಿಂದ, ಅಸಂಬದ್ಧವಲ್ಲದ ಆಕ್ರೋಶದಿಂದ, ಸುಳ್ಳಲ್ಲದ ಅಂಕಿಅಂಶಗಳಿಂದ ಎದುರಾಳಿಗಳನ್ನು ತಿವಿಯುವ, ಕಟ್ಟಿಹಾಕುವ ಸಿದ್ದು ಸುಭದ್ರ ಅಹಿಂದ ಕೋಟೆಯನ್ನು ಕಟ್ಟಿರುವುದಲ್ಲದೇ ಅದರ ಸಾಮರ್ಥ್ಯ ಏನು ಅನ್ನೋದನ್ನು ವೋಟ್ ಶೇರ್ ಮೂಲಕವೂ ಸಾಬೀತು ಮಾಡಿ ತೋರಿದ್ದಾರೆ. 2013ರ ಚುನಾವಣೆಯಲ್ಲಿ ಶೇ.36.6ರಷ್ಟಿದ್ದ ಕಾಂಗ್ರೆಸ್‌ನ ಮತಗಳಿಕೆ 2018ರಲ್ಲಿ ಶೇ.38ಕ್ಕೆ ಏರಿಕೆಯಾಗಿರುವುದರ ಹಿಂದೆ ಸಿದ್ರಾಮಯ್ಯನ ಆಡಳಿತ ಕೆಲಸ ಮಾಡಿದೆ ಅನ್ನೋದು ಹೈಕಮಾಂಡ್‌ಗೆ ಗೊತ್ತಾಗಿರುವುದರಿಂದಲೇ ಸದ್ಯದ ಪರಿಸ್ಥಿತಿಯಲ್ಲಿ, ಅಂದರೆ 2019ರ ಲೋಕಸಭಾ ಎಲೆಕ್ಷನ್ ಪರಿಸ್ಥಿತಿಯಲ್ಲಿ, ಸಿದ್ದುವನ್ನು ಮೂಲೆಗುಂಪು ಮಾಡಿ ಮುನ್ನಡೆಯುವುದು ಕಾಂಗ್ರೆಸ್‌ಗೆ ಸಾಧ್ಯವಿಲ್ಲ. ಮುಖ್ಯವಾಗಿ, ರಾಹುಲ್‌ಗೆ ಅದು ಇಷ್ಟವೂ ಇಲ್ಲ.

ಆಡಳಿತದ ಬಿಗಿತದಿಂದ ಮಾತ್ರವಲ್ಲದೇ, ಯಾವ ಮರ್ಜಿ, ಮುಲಾಜೂ ಇಲ್ಲದೆ ತನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸಿದ್ರಾಮಯ್ಯನ ನೇರವಂತಿಕೆಯ ಬಗ್ಗೆ ರಾಹುಲ್ ಮೆಚ್ಚಿ ಮಾತಾಡಿದ ಹಲವು ನಿದರ್ಶನಗಳನ್ನು ಕಾಂಗ್ರೆಸ್ಸಿಗರೇ ಮಾತಾಡಿಕೊಳ್ಳುತ್ತಾರೆ. ತಮ್ಮ ಮುಂದೆ ಮಾತಾಡುವುದಕ್ಕೆ ಹಿಂದೇಟು ಹಾಕುವಷ್ಟು ಅತಿವಿನಯ ತೋರುವ ನಾಯಕರ ನಡುವೆ ಅಗತ್ಯಕ್ಕಿಂತ ಹೆಚ್ಚುವರಿ ಮುಲಾಜುಗಳಿಗೆ ಆಸ್ಪದವಿಲ್ಲದೆ ವ್ಯವಹರಿಸುವ ಸಿದ್ದು ಎಂದರೆ ಸದ್ಯದ ಹೈಕಮಾಂಡ್‌ಗೆ ಅಕ್ಕರೆ ಜಾಸ್ತಿ. ಚುನಾವಣೆಗೂ ಮುನ್ನ ಜೆಡಿಎಸ್, ಕುಮಾರಸ್ವಾಮಿ ಮತ್ತು ದೇವೇಗೌಡರ ಮೇಲೆ ರಾಜಕೀಯವಾಗಿ ಹರಿಹಾಯುತ್ತಿದ್ದ ಸಿದ್ರಾಮಯ್ಯ, ಫಲಿತಾಂಶ ಹೊರಬಿದ್ದು ಅತಂತ್ರವೇರ್ಪಟ್ಟಾಗ ಹೈಕಮಾಂಡ್ ಮಾತಿಗೆ ಬೆಲೆ ಕೊಡುವ ಸಲುವಾಗಿ ತನ್ನ ವೈಯಕ್ತಿಕ ಮುಜುಗರವನ್ನೆಲ್ಲ ಬದಿಗಿರಿಸಿ, ದೇವೇಗೌಡರ ಮನೆಗೆ ಹೋಗಿ ಮೈತ್ರಿಗೆ ಅಡಿಗಲ್ಲು ಹಾಕಿದ ಸಿದ್ದು ಪ್ರಾಮಾಣಿಕ ಪ್ರಯತ್ನದಿಂದಾಗಿ ಸಿದ್ರಾಮಯ್ಯನನ್ನು ದಿಲ್ಲಿ ರಾಜಕಾರಣದ ಕಡೆ ಕರೆದೊಯ್ಯಲು ಕಾಂಗ್ರೆಸ್ ನಿರ್ಧರಿಸಿದೆ ಅನ್ನೋದು ಲೇಟೆಸ್ಟ್ ಸುದ್ದಿ. ಪೂರಾ ಭಾರತಕ್ಕೆ ಅಲ್ಲದಿದ್ದರೂ ದಕ್ಷಿಣ ಭಾರತದ ರಾಜ್ಯಗಳ ಮಟ್ಟಿಗಾದರು ಸಿದ್ದು ಸ್ಟಾರ್ ಕ್ಯಾಂಪೇನ್ ಆಗುವುದರಲ್ಲಿ ಸಂಶಯವೇ ಇಲ್ಲ. ಯಾಕೆಂದರೆ ಬಿಜೆಪಿ-ವಿರೋಧಿ ಮೈತ್ರಿ ಬಳಗದ ಪ್ರಭಾವಕ್ಕೆ ಒಳಗಾಗಿರುವ ಈ ರಾಜ್ಯಗಳಲ್ಲಿ, ಯಡ್ಯೂರಪ್ಪ ಅಧಿಕಾರಕ್ಕೇರಲು ನಡೆಸಿದ ಹೈಡ್ರಾಮಾ `ಎಕ್ಸ್ಕ್ಲೂಸಿವ್ ಲೈವ್’ ಆಗಿ ಬಿತ್ತರಗೊಂಡ ತರುವಾಯ ಸಿದ್ದು ಚಿರಪರಿಚಿತ ಲೀಡರ್ ಎನಿಸಿಬಿಟ್ಟಿದ್ದಾರೆ. ಹಾಗಾಗಿ ಅವರನ್ನು ಎಂಪಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದು ಮತ್ತು ಲೋಕಸಭೆಯಲ್ಲಿ ಮೈತ್ರಿ ಬಲದಲ್ಲಿ ಅಧಿಕಾರಕ್ಕೇರಿದರೆ ಸೂಕ್ತ ಹುದ್ದೆ ಕೊಟ್ಟು ಗೌರವಿಸುವ ಲೆಕ್ಕಾಚಾರದಲ್ಲಿದೆ ಹೈಕಮಾಂಡ್.

ಸ್ಪೀಕರ್ ರಮೇಶ್ ಕುಮಾರ್‌ರು ಮೊನ್ನೆ ಮಾತಾಡುತ್ತಾ, `ಸಿದ್ರಾಮಯ್ಯ ಇನ್ನು ಎರಡ್ಮೂರು ತಿಂಗಳಲ್ಲಿ ಮತ್ತೆ ಮುನ್ನೆಲೆಗೆ ಬರಲಿದ್ದಾರೆ, ಅದಕ್ಕೆ ಬೇಕಾದ ತಯಾರಿಗಳೆಲ್ಲ ನಡೆಯುತ್ತಿವೆ’ ಅಂತ ಹೇಳಿದ್ದು ಇದರದ್ದೆ ಮುನ್ಸೂಚನೆಯಿರಬಹುದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...