Homeಅಂಕಣಗಳುಸಂಪಾದಕೀಯ | ಕೊಲೆ, ಅತ್ಯಾಚಾರದ ಬೆದರಿಕೆಗಳಿಗೆ ರಾಜಾಶ್ರಯವಿದ್ದಾಗ...?

ಸಂಪಾದಕೀಯ | ಕೊಲೆ, ಅತ್ಯಾಚಾರದ ಬೆದರಿಕೆಗಳಿಗೆ ರಾಜಾಶ್ರಯವಿದ್ದಾಗ…?

- Advertisement -
- Advertisement -

ಒಬ್ಬ ತಂದೆಯ ಫೋನಿನಲ್ಲಿ ತನ್ನ ಮುವ್ವತ್ಮೂರು ವಯಸ್ಸಿನ ಮಗಳ ಮುಖವನ್ನು ಮಾರ್ಫ್ ಮಾಡಲಾಗಿರುವ ಒಂದು ಬ್ಲೂಫಿಲಂ ಬಂದು ಬೀಳುತ್ತದೆ; ಅವರು ಆ ನೀಲಿ ಚಿತ್ರವನ್ನು ಕೆಲಕ್ಷಣ ನೋಡಿ ನಿಲ್ಲಿಸುತ್ತಾರೆ. ತನ್ನ ಮಗಳಿಗೆ ಜೀವ ಬೆದರಿಕೆಯಿದೆಯೆನ್ನುವುದು ಅವರಿಗೆ ಈಗಾಗಲೇ ಗೊತ್ತಿತ್ತು. ತನ್ನ ಹೆಮ್ಮೆಯ ಎದೆಗಾರಿಕೆಯುಳ್ಳ ಮಗಳೊಂದಿಗೆ ಫೋನ್ ಕನೆಕ್ಟ್ ಆದಾಗ ಕೆಲಕ್ಷಣ ಮಗಳಿಗೆ ಮಾತೇ ಹೊರಡುವುದಿಲ್ಲ. ಕೊನೆಗೂ ಮಾತನಾಡಿದ ನಂತರ ಅವನು ತನ್ನ ಮಗಳಿಗೆ ಹೇಳುವುದು, it was a matter of time that this happened”. ಅಷ್ಟಾದರೂ ಆ ಮಗಳು ಮಾಡಿರುವ ಅಪರಾಧವಾದರೂ ಏನು?

ಮತ್ತೊಂದು ಯಶಸ್ವೀ ಸುಖೀ ಕುಟುಂಬವಿದೆ. ಆಕೆ ಕಾಲೇಜೊಂದರಲ್ಲಿ ಇತಿಹಾಸ ವಿಭಾಗದ ಎಚ್.ಓ.ಡಿ. ಆಗಿದ್ದಾಳೆ, ಇಬ್ಬರು ಹೆಣ್ಣುಮಕ್ಕಳು ಶಾಲೆಯಲ್ಲಿ ಓದುತ್ತಿವೆ, ಗಂಡನೂ ತನ್ನ ಕೆಲಸದಲ್ಲಿ ತುಂಬಾ ಯಶಸ್ವಿ ಮತ್ತು ಸಾಕಷ್ಟು ಹೆಸರು ಗಳಿಸಿದ್ದಾನೆ. ತನ್ನ ಗಂಡನ ಬಗ್ಗೆ ತುಂಬಾ ಹೆಮ್ಮೆಯಿದೆ ಅವಳಿಗೆ. ಆದರೆ ಕೆಲವರ್ಷಗಳಿಂದ ಗಂಡನಿಗೆ ಜೀವದ ಬೆದರಿಕೆಗಳು ಶುರುವಾಗಿವೆ. ಅವನಿಗಷ್ಟೇ ಅಲ್ಲ, ತನಗೂ ತನ್ನ ಮಕ್ಕಳಿಗೂ ಕೊಲೆ ಬೆದರಿಕೆ, ಅತ್ಯಾಚಾರದ ಬೆದರಿಕೆಗಳೂ ಪದೇಪದೇ ಬರುತ್ತಲೇ ಇವೆ ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಅಷ್ಟಾದರೂ ಆತ ಮಾಡಿದ ಅಪರಾಧವಾದರೂ ಏನು?

ಉತ್ತರ- ಏನೂ ಇಲ್ಲ. ಅವರಿಬ್ಬರೂ ಯಾವ ಅಪರಾಧವನ್ನೂ ಮಾಡಿಲ್ಲ. ತಮ್ಮ ಕರ್ತವ್ಯಕ್ಕೆ ನಿಷ್ಠರಾಗಿ ದುಡಿಯುತ್ತಿರುವುದಕ್ಕಾಗಿ ಈ ಶಿಕ್ಷೆ.

ಅವಳ ಹೆಸರು ರಾಣಾ ಅಯುಬ್ ಮತ್ತು ಅವನು ರವೀಶ್ ಕುಮಾರ್, ಇಬ್ಬರೂ ಪತ್ರಕರ್ತರು. ನಮ್ಮ ದೇಶದಲ್ಲಿ ಪತ್ರಿಕೋದ್ಯಮದ ಧರ್ಮವನ್ನು ಕಾಪಾಡಿಕೊಂಡು ಬರುತ್ತಿರುವ ಕೆಲವರಲ್ಲಿ ಇಬ್ಬರದೂ ದೊಡ್ಡ ಹೆಸರು.

ರಾಣಾ ಅಯೂಬ್ 1984ರಲ್ಲಿ ಮುಂಬಯಿಯಲ್ಲಿ ಜನಿಸಿದರು. ತಂದೆ ಕೂಡ ಪತ್ರಕರ್ತ, ಈಗ ಮುಚ್ಚಿಹೋಗಿರುವ ‘Blitz’ ಎಂಬ ಟ್ಯಾಬ್ಲಾಯ್ಡ್ ಪತ್ರಿಕೆಗಾಗಿ ಕೆಲಸ ಮಾಡುತ್ತಿದ್ದರು. ಪತ್ರಕರ್ತೆಯಾಗಬೇಕೆಂಬ ಆಕಾಂಕ್ಷೆಯುಳ್ಳ ರಾಣಾ ಆಗ ತುಂಬಾ ಸುದ್ದಿ ಮಾಡುತ್ತಿದ್ದ, ದಿಟ್ಟ ಪತ್ರಿಕೋದ್ಯಮಕ್ಕೆ ಹೆಸರುವಾಸಿಯಾದ ‘ತೆಹೆಲ್ಕಾ’ ಸೇರಿಕೊಂಡರು. ಅಲ್ಲಿ ಅವರು ತೆಗೆದುಕೊಂಡ ಪ್ರಮುಖ ಕೆಲಸ ಗುಜರಾತನಲ್ಲಿ ಆದ ಗಲಭೆಗಳ ಬಗ್ಗೆ ಒಂದು ಸ್ಟಿಂಗ್ ಮಾಡುವುದು. ರಾಣಾ ಅವರು ಮೈಥಿಲಿ ತ್ಯಾಗಿ ಎನ್ನುವ ಹೆಸರಿನಲ್ಲಿ ಗುಜರಾತಿನಾದ್ಯಂತ ತಿರುಗಿ, ಬಿಜೆಪಿ ಹಾಗೂ ಸಂಘಪರಿವಾರದ ಅನೇಕ ಮುಖಂಡರೊಂದಿಗೆ ಮಾತನಾಡಿದರು, ಆ ಮಾತುಕತೆಗಳ ವಿಡಿಯೋ ಕೂಡ ಮಾಡಿದರು. ಅವರ ತನಿಖಾ ವರದಿಗಳು ಭಾರೀ ಪರಿಣಾಮಕಾರಿಯಾಗಿದ್ದು, ಅಂತರಾಷ್ಟ್ರೀಯ ಮನ್ನಣೆ ಗಳಿಸಿವೆ. ಇಂಥಾ ಒಂದು ತನಿಖಾ ವರದಿಯ ಪರಿಣಾಮವಾಗಿ ರಾಷ್ಟ್ರೀಯ ಪಕ್ಷವೊಂದರ ಹಾಲಿ ಅಧ್ಯಕ್ಷ ಜೈಲುವಾಸ ಅನುಭವಿಸಬೇಕಾಗಿ ಬಂದಿತ್ತು. ಜೈಲಿಗೆ ಹೋದ ಆ ಮಹನೀಯರ ಹೆಸರು ಅಮಿತ್ ಶಾ.

ಗುಜರಾತ್‍ನ ತನಿಖಾ ಕೆಲಸ ಮುಗಿಯುವ ಹೊತ್ತಿಗೆ ತೆಹೆಲ್ಕಾದಲ್ಲಿ ಸಮಸ್ಯೆಗಳು ಶುರುವಾಗಿದ್ದರಿಂದ ರಾಣಾ ಅಲ್ಲಿಂದ ಹೊರಬಂದು ತಾವು ಸಂಗ್ರಹಿಸಿದ ವಿಡಿಯೋಗಳು ಮತ್ತು ಸಂಭಾಷಣೆಗಳನ್ನಾಧರಿಸಿ ‘Gujrat Files, Anatomy of a cover up’ ಎನ್ನುವ ಪುಸ್ತಕವನ್ನು 2016 ರಲ್ಲಿ ಹೊರತಂದರು. (ಆ ಪುಸ್ತಕದ ಕನ್ನಡ ಅನುವಾದ ಕೃತಿಯನ್ನು ಗೌರಿ ಲಂಕೇಶ್ ಅವರು ತಮ್ಮ ಪ್ರಕಾಶನದಿಂದಲೇ ಪ್ರಕಟಿಸಿದ್ದರು).

ಆ ಪುಸ್ತಕ ಬಿಡುಗಡೆಯಾದೊಡನೆ ರಾಣಾಗೆ ಖ್ಯಾತಿ, ಪ್ರಶಸ್ತಿಗಳೇನೋ ಬಂದವು. ಆದರೆ ಅದಕ್ಕಿಂತ ಹೆಚ್ಚು ಬಂದಿದ್ದು ಕೊಲೆ, ಅತ್ಯಾಚಾರದ ಬೆದರಿಕೆಗಳು. ಇದ್ಯಾವುದಕ್ಕೂ ಜಗ್ಗದ ರಾಣಾಗೆ ಆಘಾತವೊಂದು ಕಾದಿತ್ತು. ಎರಡು ತಿಂಗಳ ಹಿಂದೆ ಕಾಶ್ಮೀರದಲ್ಲಿ ಹಸುಳೆ ಮೇಲೆ ಬಲಾತ್ಕಾರವಾದಾಗ ಆ ಬಲಾತ್ಕಾರವನ್ನು ರಾಣಾ ಸಮರ್ಥಿಸಿಕೊಂಡಳೆಂದು, ರಾಣಾ ಭಾರತವನ್ನು, ಭಾರತೀಯರನ್ನು ದ್ವೇಷಿಸುತ್ತಾಳೆನ್ನುವ ಹೇಳಿಕೆಗಳನ್ನು ಅವರ ಚಿತ್ರದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಯ ಬಿಡಲಾಯ್ತು. ಅಷ್ಟಕ್ಕೂ ನಿಲ್ಲದೇ ನೀಲಿ ಚಿತ್ರವೊಂದಕ್ಕೆ ಇವರ ಮುಖವನ್ನು ಸೇರಿಸಿ ಎರಡೂವರೆ ನಿಮಿಷದ ವಿಡಿಯೋ ಒಂದನ್ನು ಹರಿಬಿಟ್ಟರು, ಆ ವಿಡಿಯೋವನ್ನು ಅವರ ತಂದೆಗೂ ತಲುಪಿಸಲಾಯಿತು. ರಾಣಾ ಅವರ ವೈಯಕ್ತಿಕ ಫೋನ್ ನಂಬರಿನೊಂದಿಗೆ, ಅವರ ಚಿತ್ರವನ್ನು ಮತ್ತು ಮನೆಯ ವಿಳಾಸವನ್ನೂ ಸೇರಿಸಿ, ಅವಳು ಲಭ್ಯವಿದ್ದಾಳೆ ಎನ್ನುವ ಪೋಸ್ಟ್ ಕೂಡ ಹರಿಬಿಡಲಾಯಿತು. ಅವಳ ದರವನ್ನು ಕೇಳುತ್ತ ನೂರಾರು ಕರೆಗಳು ಬಂದವು. ದಿಟ್ಟ ರಾಣಾ ಕಂಗೆಟ್ಟು ಆಸ್ಪತ್ರೆ ಸೇರಬೇಕಾಯಿತು. ಇದರ ಬಗ್ಗೆ ರಾಣಾ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ದಿಟ್ಟ ಪತ್ರಕರ್ತೆ ಎದುರಿಸುತ್ತಿರುವ ಅಪಾಯವನ್ನು ಗಮನಿಸಿದ ವಿಶ್ವಸಂಸ್ಥೆ ರಾಣಾ ಅವರ ಸುರಕ್ಷತೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಭಾರತ ಸರ್ಕಾರವನ್ನು ಕೋರಿದೆ.

ರವೀಶ್ ಕುಮಾರ್, 1974ರಲ್ಲಿ ಬಿಹಾರನ ಮೊತಿಹಾರಿಯ ಮೂಲದವರು, ಉನ್ನತ ವ್ಯಾಸಂಗಕ್ಕಾಗಿ ದೆಹಲಿಗೆ ಬಂದರು. ದೆಹಲಿಯಲ್ಲಿ ಪತ್ರಿಕೋದ್ಯಮವನ್ನು ಅಭ್ಯಾಸ ಮಾಡಿದ ರವೀಶ್, ತಮಗೆ ಇಂಗ್ಲೀಷ್ ಬರದಿದ್ದಕ್ಕಾಗಿ ಕೀಳರಿಮೆಯನ್ನು ಅನುಭವಿಸಿದವರು. ಸ್ವಪ್ರಯತ್ನದಿಂದಲೇ ಮೇಲೆಬಂದ ರವೀಶ್ NDTV ಸೇರಿಕೊಂಡರು. NDTV India ಹಿಂದಿ ವಾಹಿನಿಯ ಸಂಪಾದಕರಾದರು. ಹಿಂದಿ ಗೊತ್ತಿರುವ ಎಲ್ಲರಿಗೂ ರವೀಶ್ ಚಿರಪರಿಚಿತರು. ಇವರ ಆಳವಾದ ವಿಶ್ಲೇಷಣೆ, ಪತ್ರಿಕೋದ್ಯಮದ ಸಾಂಪ್ರದಾಯಿಕವಲ್ಲದ ವಿಧಾನ, ಮಾತುಗಾರಿಕೆ, ಸತ್ಯವನ್ನು ಹುಡುಕುವುದಕ್ಕಾಗಿ ಎಲ್ಲೆಲ್ಲೋ ಸುತ್ತಾಡುವ ಇವರಿಗೆ ಖ್ಯಾತಿ, ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಇತರ ಟಿವಿ ಆಂಕರ್‍ಗಳು ಒಂದು ವಿಷಯದ ಬಗ್ಗೆ ಅರ್ಧ ಗಂಟೆ ಚರ್ಚೆ ನಡೆಸುವುದೇ ಕಷ್ಟವಾಗಿರುವಾಗ, ಕೆಲವು ಮಹತ್ವದ ಸಂದರ್ಭದಲ್ಲಿ ಒಂದೇ ವಿಷಯದ ಮೇಲೆ ವಾರಗಟ್ಟಲೆ ವರದಿ, ಚರ್ಚೆ ಮಾಡಿದ ದಿಟ್ಟ ಪತ್ರಕರ್ತ ಈತ. ತೋರಿಸಿದ್ದನ್ನೇ ಮತ್ತೆ ಮತ್ತೆ ತೋರಿಸುವ, ಜೋರು ಗಂಟಲಿನಲ್ಲಿ ಅರ್ಥವಿಲ್ಲದ ಪ್ರಲಾಪ ಮಾಡುವ ಅದೆಷ್ಟೋ ‘ಖ್ಯಾತ’ ಪತ್ರಕರ್ತರಿಗಿಂತ ರವೀಶ್ ತೀರಾ ಭಿನ್ನ. ಯಾವುದೇ ಅಬ್ಬರವಿಲ್ಲದೆ ತಣ್ಣಗೆ ಈ ದೇಶದ ಸಾಮಾಜಿಕ, ರಾಜಕೀಯ, ಧಾರ್ಮಿಕ ಸಮಸ್ಯೆಗಳನ್ನು ಆಧಾರಸಮೇತ ಎಳೆಎಳೆಯಾಗಿ ಬಿಚ್ಚಿಡುವ ರವೀಶ್ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಹಾಗೆಯೆ ಪಟ್ಟಭದ್ರ ಶಕ್ತಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಪರಿಣಾಮವಾಗಿ ಇವರಿಗೆ ಮಾತ್ರವಲ್ಲದೆ, ಇವರ ಕುಟುಂಬದ ಸದಸ್ಯರಿಗೂ ಬೆದರಿಕೆಗಳು ಶುರುವಾದವು. ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಎಷ್ಟು troll ಮಾಡಲಾಯಿತೆಂದರೆ ಇವರು ಸಾಮಾಜಿಕ ಜಾಲತಾಣಗಳನ್ನು ಸಂಪೂರ್ಣವಾಗಿ ತೊರೆಯುವಂತಾಯಿತು. ಕೊಲೆಯ ಬೆದರಿಕೆಗಳು ಸಾಮಾನ್ಯವಾದವು. ರವೀಶ್‍ರನ್ನು ಕೊಲೆ ಮಾಡುತ್ತೇನೆ ಎಂದು ಕೆಲವರು ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರವೀಶ್ ಪ್ರಸ್ತುತ ಸಮಯದಲ್ಲಿ ಎಲ್ಲಿದ್ದಾರೆ, ಎಲ್ಲಿಗೆ ಹೊರಟಿದ್ದಾರೆ ಎನ್ನುವ ವಿಷಯಗಳನ್ನು ಈ ಪೀಡಕರು ರವೀಶ್‍ಗೆ ನಿರಂತರವಾಗಿ ಕಳುಹಿಸುತ್ತಿರುತ್ತಾರೆ.

ಆ ಇಬ್ಬರಿಗೆ ಬಂದ ಬೆದರಿಕೆಗಳು, ಅವರಿಗೆ ಕೊಡಲಾದ ಮಾನಸಿಕ ಕಿರುಕುಳದ ಬಗ್ಗೆ ಬರೆಯತೊಡಗಿದರೆ ಅದೇ ಒಂದು ಪುಸ್ತಕವಾಗಬಹುದು.. ಕಿರುಕುಳ ಮತ್ತು ಬೆದರಿಕೆಗಳು ಎಷ್ಟರ ಮಟ್ಟಿಗೆ ಬಂದಿವೆಯೆಂದರೆ, ‘ಈಗ ಆ ಬೆದರಿಕೆಗಳನ್ನು ಕಾರ್ಯಗತಗೊಳಿಸುವುದಷ್ಟೇ ಉಳಿದಿರುವುದು’ ಎಂದು ರವೀಶ್ ಹೇಳಿದ್ದಾರೆ. ಬೊಗಳೋ ನಾಯಿ ಕಚ್ಚೋದಿಲ್ಲ ಎಂದು ತಿಳಿದರೆ ಅದು ಸಂಪೂರ್ಣ ತಪ್ಪು. 2017ರಲ್ಲಿ ನಾಲ್ಕು ಪತ್ರಕರ್ತರ ಕೊಲೆಯಾಗಿದೆ, ಈ ವóರ್ಷ ಆಗಲೇ ಇಬ್ಬರು ಪತ್ರಕರ್ತರ ಕೊಲೆಯಾಗಿದೆ. ಕರ್ನಾಟಕದ ದಿಟ್ಟ ಪತ್ರಕರ್ತೆಯಾದ ನಮ್ಮೆಲ್ಲರ ನೆಚ್ಚಿನ ಗೌರಿಲಂಕೇಶ್‍ರನ್ನು ಕೊಂದೇಬಿಟ್ಟರು. ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ಭಾರತ ದಿನೇದಿನೇ ಜಾರುತ್ತಾ ಈಗ 138ನೇ ಸ್ಥಾನಕ್ಕೆ ಇಳಿದಿದೆ. ಅಂದರೆ ಸತ್ಯನಿಷ್ಠ ಪತ್ರಕರ್ತರ ಪರಿಸ್ಥಿತಿ ಹೇಗಿರಬಹುದೆಂದು ಊಹಿಸಬಹುದು.

ಈಗ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಮೇಲಿನ ಇಬ್ಬರೂ ಹೆಸರಾಂತ ಪತ್ರಕರ್ತರು, ಅವರಿಗೆ ತಮ್ಮ ಭಾಷೆಯ, ತಾವು ಪ್ರತಿನಿಧಿಸುತ್ತಿರುವ ವರ್ಗದ ಹಾಗೂ ನಗರಪ್ರದೇಶದಲ್ಲಿ ಒಂದು ಮಟ್ಟಿಗೆ ಬೆಂಬಲವಿದೆ. ಇವರ ಕಾರ್ಯಕ್ರಮಗಳನ್ನು ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ. ಆದರೆ ದೂರದ ಊರುಗಳಲ್ಲಿ, ಹಳ್ಳಿಗಾಡುಗಳಲ್ಲಿ ಕೆಲಸ ಮಾಡುತ್ತಿರುವ, ಇಂಗ್ಲೀಷ್ ಭಾಷೆಯ ಬೆಂಬಲವಿಲ್ಲದ, ಅನಾಮಧೇಯರಾಗಿರುವ ನೂರಾರು ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಸತ್ಯವನ್ನು ಜನರ ಮುಂದಿಡಬೇಕೆಂದರೆ ಪಟ್ಟಭದ್ರರನ್ನು ಎದುರು ಹಾಕಿಕೊಳ್ಳಲೇಬೇಕಾಗುತ್ತದೆ. ಅವರೆಲ್ಲ ಎಂಥೆಂಥಾ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿರಬಹುದು?

ಇನ್ನೂ ಎರಡನೇ ಅತೀಮುಖ್ಯ ಪ್ರಶ್ನೆ,

ಇದು ಯಾವುದೋ ಒಂದು ರಾಜಕೀಯ ಪಕ್ಷ ಅಥವ ಸಂಘಟನೆಯ ಪ್ರಶ್ನೆ ಖಂಡಿತ ಅಲ್ಲ. ಇದೊಂದು ವ್ಯವಸ್ಥೆ. ಆ ವ್ಯವಸ್ಥೆ ಈ ದಿಟ್ಟ ಪತ್ರಕರ್ತರನ್ನು ಹಿಂದೂ ಧರ್ಮದ ವಿರೋಧಿಗಳಂತೆ ಬಿಂಬಿಸುತ್ತಿದೆ. ವಾಸ್ತವದಲ್ಲಿ ಈ ಇಬ್ಬರೂ ಹಿಂದೂ ಧರ್ಮ, ಸಂಸ್ಕøತಿಯ ವಿರುದ್ಧ ಮಾತನಾಡಿರುವ ಯಾವ ಉದಾಹರಣೆಗಳೂ ಇಲ್ಲ. ಹಾಗಾದರೆ ಇವರು ಹಿಂದೂ ಧರ್ಮದ ವಿರೋಧಿಗಳು ಆಗಿದ್ದಾದಾರೂ ಹೇಗೆ? ಹೀಗೆ ಧರ್ಮದ ಮುಸುಕಿನಲ್ಲಿ ಆಶ್ರಯ ಪಡೆಯುತ್ತಿರುವ ಶಕ್ತಿಗಳಾದರೂ ಯಾರು?

ಈ ಎಲ್ಲ ಬೆದರಿಕೆ, ಕಿರುಕುಳಗಳಲ್ಲಿ ಒಂದು ಸಂಗತಿ ಸುಸ್ಪಷ್ಟವಾಗಿದೆ. I am a Troll ಎಂಬ ಸಂಶೋದನಾ ಕೃತಿ ರಚಿಸಿರುವ ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರು ಹೇಳುವಂತೆ ಇವೆಲ್ಲ ಯಾವುದೋ ಬಿಡಿಬಿಡಿ ಘಟನೆಗಳಲ್ಲ. ಇವು ಸುಸಜ್ಜಿತ ಯೋಜನೆಯೊಂದಿಗೆ ನಡೆಯುತ್ತಿವೆ, ಬೆದರಿಕೆ ಒಡ್ಡುವ ಈ ಪುಂಡರಿಗೆ ರಾಜಕೀಯ ಆಶ್ರಯವಿದೆ. ಇಂದಿನ ಪ್ರಧಾನಿಯವರನ್ನು ಒಳಗೊಂಡು ಹಲವು ಸಚಿವರು ಈ ಪುಂಡರನ್ನು ಟ್ವಿಟರ್‍ಗಳಲ್ಲಿ ಫಾಲೋ ಮಾಡುತ್ತಾರೆ, ಫೇಸ್‍ಬುಕ್‍ಗಳಲ್ಲಿ ಸ್ನೇಹಿತರಾಗಿರುತ್ತಾರೆ. ಈ Troll brigadeಗಳಿಗೆ ಭಾರೀ ಖದೀಮ ಕುಳಗಳ ಕೃಪೆಯೂ ಇರುತ್ತದೆ. ಇದು ಒಟ್ಟಾರೆ ವರ್ತಮಾನದ ಪತ್ರಿಕೋದ್ಯಮ ಎದುರಿಸುತ್ತಿರುವ ಅಪಾಯಕಾರಿ ಬಿಕ್ಕಟ್ಟಿನ ಭಾಗವೇ ಆಗಿದೆ.

ಪ್ರಜಾತಂತ್ರ ಯಶಸ್ವಿಯಾಗಬೇಕಾದರೆ ನಾಲ್ಕನೇ ಸ್ಥಂಬವೆಂದು ಪರಿಗಣಿತವಾಗಿರುವ ಪತ್ರಿಕಾರಂಗ ಸ್ವತಂತ್ರವಾಗಿ ಕೆಲಸ ಮಾಡುವಂತಿರಬೇಕು. ಮಾತ್ರವಲ್ಲ, ಪತ್ರಿಕಾರಂಗಕ್ಕೆ ಸಮಾಜದ ಹಿತವನ್ನು ಕಾಪಾಡುವ ಹೊಣೆಗಾರಿಕೆ ಇರಬೇಕು. ಇಂಥಾ ಜನಪರ ಪತ್ರಿಕೋದ್ಯಮವನ್ನು ಉಳಿಸಿ, ಬೆಳೆಸಲು ನಾವೇನು ಮಾಡಬೇಕು? ಸತ್ಯವನ್ನು ನುಡಿಯುವ ದಿಟ್ಟ ಪತ್ರಕರ್ತರ ರಕ್ಷಣೆಗೆ ನಾವು ಮಾಡಬೇಕಾಗಿರುವುದೇನು?

ಇದು ನಾವು ಆದ್ಯತೆಯ ಮೇಲೆ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆ.

ಸಂಪಾದಕೀಯ ತಂಡದ ಪರವಾಗಿ
ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....