Homeಅಂಕಣಗಳುಸಂಪಾದಕೀಯ | ಕೊಲೆ, ಅತ್ಯಾಚಾರದ ಬೆದರಿಕೆಗಳಿಗೆ ರಾಜಾಶ್ರಯವಿದ್ದಾಗ...?

ಸಂಪಾದಕೀಯ | ಕೊಲೆ, ಅತ್ಯಾಚಾರದ ಬೆದರಿಕೆಗಳಿಗೆ ರಾಜಾಶ್ರಯವಿದ್ದಾಗ…?

- Advertisement -
- Advertisement -

ಒಬ್ಬ ತಂದೆಯ ಫೋನಿನಲ್ಲಿ ತನ್ನ ಮುವ್ವತ್ಮೂರು ವಯಸ್ಸಿನ ಮಗಳ ಮುಖವನ್ನು ಮಾರ್ಫ್ ಮಾಡಲಾಗಿರುವ ಒಂದು ಬ್ಲೂಫಿಲಂ ಬಂದು ಬೀಳುತ್ತದೆ; ಅವರು ಆ ನೀಲಿ ಚಿತ್ರವನ್ನು ಕೆಲಕ್ಷಣ ನೋಡಿ ನಿಲ್ಲಿಸುತ್ತಾರೆ. ತನ್ನ ಮಗಳಿಗೆ ಜೀವ ಬೆದರಿಕೆಯಿದೆಯೆನ್ನುವುದು ಅವರಿಗೆ ಈಗಾಗಲೇ ಗೊತ್ತಿತ್ತು. ತನ್ನ ಹೆಮ್ಮೆಯ ಎದೆಗಾರಿಕೆಯುಳ್ಳ ಮಗಳೊಂದಿಗೆ ಫೋನ್ ಕನೆಕ್ಟ್ ಆದಾಗ ಕೆಲಕ್ಷಣ ಮಗಳಿಗೆ ಮಾತೇ ಹೊರಡುವುದಿಲ್ಲ. ಕೊನೆಗೂ ಮಾತನಾಡಿದ ನಂತರ ಅವನು ತನ್ನ ಮಗಳಿಗೆ ಹೇಳುವುದು, it was a matter of time that this happened”. ಅಷ್ಟಾದರೂ ಆ ಮಗಳು ಮಾಡಿರುವ ಅಪರಾಧವಾದರೂ ಏನು?

ಮತ್ತೊಂದು ಯಶಸ್ವೀ ಸುಖೀ ಕುಟುಂಬವಿದೆ. ಆಕೆ ಕಾಲೇಜೊಂದರಲ್ಲಿ ಇತಿಹಾಸ ವಿಭಾಗದ ಎಚ್.ಓ.ಡಿ. ಆಗಿದ್ದಾಳೆ, ಇಬ್ಬರು ಹೆಣ್ಣುಮಕ್ಕಳು ಶಾಲೆಯಲ್ಲಿ ಓದುತ್ತಿವೆ, ಗಂಡನೂ ತನ್ನ ಕೆಲಸದಲ್ಲಿ ತುಂಬಾ ಯಶಸ್ವಿ ಮತ್ತು ಸಾಕಷ್ಟು ಹೆಸರು ಗಳಿಸಿದ್ದಾನೆ. ತನ್ನ ಗಂಡನ ಬಗ್ಗೆ ತುಂಬಾ ಹೆಮ್ಮೆಯಿದೆ ಅವಳಿಗೆ. ಆದರೆ ಕೆಲವರ್ಷಗಳಿಂದ ಗಂಡನಿಗೆ ಜೀವದ ಬೆದರಿಕೆಗಳು ಶುರುವಾಗಿವೆ. ಅವನಿಗಷ್ಟೇ ಅಲ್ಲ, ತನಗೂ ತನ್ನ ಮಕ್ಕಳಿಗೂ ಕೊಲೆ ಬೆದರಿಕೆ, ಅತ್ಯಾಚಾರದ ಬೆದರಿಕೆಗಳೂ ಪದೇಪದೇ ಬರುತ್ತಲೇ ಇವೆ ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಅಷ್ಟಾದರೂ ಆತ ಮಾಡಿದ ಅಪರಾಧವಾದರೂ ಏನು?

ಉತ್ತರ- ಏನೂ ಇಲ್ಲ. ಅವರಿಬ್ಬರೂ ಯಾವ ಅಪರಾಧವನ್ನೂ ಮಾಡಿಲ್ಲ. ತಮ್ಮ ಕರ್ತವ್ಯಕ್ಕೆ ನಿಷ್ಠರಾಗಿ ದುಡಿಯುತ್ತಿರುವುದಕ್ಕಾಗಿ ಈ ಶಿಕ್ಷೆ.

ಅವಳ ಹೆಸರು ರಾಣಾ ಅಯುಬ್ ಮತ್ತು ಅವನು ರವೀಶ್ ಕುಮಾರ್, ಇಬ್ಬರೂ ಪತ್ರಕರ್ತರು. ನಮ್ಮ ದೇಶದಲ್ಲಿ ಪತ್ರಿಕೋದ್ಯಮದ ಧರ್ಮವನ್ನು ಕಾಪಾಡಿಕೊಂಡು ಬರುತ್ತಿರುವ ಕೆಲವರಲ್ಲಿ ಇಬ್ಬರದೂ ದೊಡ್ಡ ಹೆಸರು.

ರಾಣಾ ಅಯೂಬ್ 1984ರಲ್ಲಿ ಮುಂಬಯಿಯಲ್ಲಿ ಜನಿಸಿದರು. ತಂದೆ ಕೂಡ ಪತ್ರಕರ್ತ, ಈಗ ಮುಚ್ಚಿಹೋಗಿರುವ ‘Blitz’ ಎಂಬ ಟ್ಯಾಬ್ಲಾಯ್ಡ್ ಪತ್ರಿಕೆಗಾಗಿ ಕೆಲಸ ಮಾಡುತ್ತಿದ್ದರು. ಪತ್ರಕರ್ತೆಯಾಗಬೇಕೆಂಬ ಆಕಾಂಕ್ಷೆಯುಳ್ಳ ರಾಣಾ ಆಗ ತುಂಬಾ ಸುದ್ದಿ ಮಾಡುತ್ತಿದ್ದ, ದಿಟ್ಟ ಪತ್ರಿಕೋದ್ಯಮಕ್ಕೆ ಹೆಸರುವಾಸಿಯಾದ ‘ತೆಹೆಲ್ಕಾ’ ಸೇರಿಕೊಂಡರು. ಅಲ್ಲಿ ಅವರು ತೆಗೆದುಕೊಂಡ ಪ್ರಮುಖ ಕೆಲಸ ಗುಜರಾತನಲ್ಲಿ ಆದ ಗಲಭೆಗಳ ಬಗ್ಗೆ ಒಂದು ಸ್ಟಿಂಗ್ ಮಾಡುವುದು. ರಾಣಾ ಅವರು ಮೈಥಿಲಿ ತ್ಯಾಗಿ ಎನ್ನುವ ಹೆಸರಿನಲ್ಲಿ ಗುಜರಾತಿನಾದ್ಯಂತ ತಿರುಗಿ, ಬಿಜೆಪಿ ಹಾಗೂ ಸಂಘಪರಿವಾರದ ಅನೇಕ ಮುಖಂಡರೊಂದಿಗೆ ಮಾತನಾಡಿದರು, ಆ ಮಾತುಕತೆಗಳ ವಿಡಿಯೋ ಕೂಡ ಮಾಡಿದರು. ಅವರ ತನಿಖಾ ವರದಿಗಳು ಭಾರೀ ಪರಿಣಾಮಕಾರಿಯಾಗಿದ್ದು, ಅಂತರಾಷ್ಟ್ರೀಯ ಮನ್ನಣೆ ಗಳಿಸಿವೆ. ಇಂಥಾ ಒಂದು ತನಿಖಾ ವರದಿಯ ಪರಿಣಾಮವಾಗಿ ರಾಷ್ಟ್ರೀಯ ಪಕ್ಷವೊಂದರ ಹಾಲಿ ಅಧ್ಯಕ್ಷ ಜೈಲುವಾಸ ಅನುಭವಿಸಬೇಕಾಗಿ ಬಂದಿತ್ತು. ಜೈಲಿಗೆ ಹೋದ ಆ ಮಹನೀಯರ ಹೆಸರು ಅಮಿತ್ ಶಾ.

ಗುಜರಾತ್‍ನ ತನಿಖಾ ಕೆಲಸ ಮುಗಿಯುವ ಹೊತ್ತಿಗೆ ತೆಹೆಲ್ಕಾದಲ್ಲಿ ಸಮಸ್ಯೆಗಳು ಶುರುವಾಗಿದ್ದರಿಂದ ರಾಣಾ ಅಲ್ಲಿಂದ ಹೊರಬಂದು ತಾವು ಸಂಗ್ರಹಿಸಿದ ವಿಡಿಯೋಗಳು ಮತ್ತು ಸಂಭಾಷಣೆಗಳನ್ನಾಧರಿಸಿ ‘Gujrat Files, Anatomy of a cover up’ ಎನ್ನುವ ಪುಸ್ತಕವನ್ನು 2016 ರಲ್ಲಿ ಹೊರತಂದರು. (ಆ ಪುಸ್ತಕದ ಕನ್ನಡ ಅನುವಾದ ಕೃತಿಯನ್ನು ಗೌರಿ ಲಂಕೇಶ್ ಅವರು ತಮ್ಮ ಪ್ರಕಾಶನದಿಂದಲೇ ಪ್ರಕಟಿಸಿದ್ದರು).

ಆ ಪುಸ್ತಕ ಬಿಡುಗಡೆಯಾದೊಡನೆ ರಾಣಾಗೆ ಖ್ಯಾತಿ, ಪ್ರಶಸ್ತಿಗಳೇನೋ ಬಂದವು. ಆದರೆ ಅದಕ್ಕಿಂತ ಹೆಚ್ಚು ಬಂದಿದ್ದು ಕೊಲೆ, ಅತ್ಯಾಚಾರದ ಬೆದರಿಕೆಗಳು. ಇದ್ಯಾವುದಕ್ಕೂ ಜಗ್ಗದ ರಾಣಾಗೆ ಆಘಾತವೊಂದು ಕಾದಿತ್ತು. ಎರಡು ತಿಂಗಳ ಹಿಂದೆ ಕಾಶ್ಮೀರದಲ್ಲಿ ಹಸುಳೆ ಮೇಲೆ ಬಲಾತ್ಕಾರವಾದಾಗ ಆ ಬಲಾತ್ಕಾರವನ್ನು ರಾಣಾ ಸಮರ್ಥಿಸಿಕೊಂಡಳೆಂದು, ರಾಣಾ ಭಾರತವನ್ನು, ಭಾರತೀಯರನ್ನು ದ್ವೇಷಿಸುತ್ತಾಳೆನ್ನುವ ಹೇಳಿಕೆಗಳನ್ನು ಅವರ ಚಿತ್ರದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಯ ಬಿಡಲಾಯ್ತು. ಅಷ್ಟಕ್ಕೂ ನಿಲ್ಲದೇ ನೀಲಿ ಚಿತ್ರವೊಂದಕ್ಕೆ ಇವರ ಮುಖವನ್ನು ಸೇರಿಸಿ ಎರಡೂವರೆ ನಿಮಿಷದ ವಿಡಿಯೋ ಒಂದನ್ನು ಹರಿಬಿಟ್ಟರು, ಆ ವಿಡಿಯೋವನ್ನು ಅವರ ತಂದೆಗೂ ತಲುಪಿಸಲಾಯಿತು. ರಾಣಾ ಅವರ ವೈಯಕ್ತಿಕ ಫೋನ್ ನಂಬರಿನೊಂದಿಗೆ, ಅವರ ಚಿತ್ರವನ್ನು ಮತ್ತು ಮನೆಯ ವಿಳಾಸವನ್ನೂ ಸೇರಿಸಿ, ಅವಳು ಲಭ್ಯವಿದ್ದಾಳೆ ಎನ್ನುವ ಪೋಸ್ಟ್ ಕೂಡ ಹರಿಬಿಡಲಾಯಿತು. ಅವಳ ದರವನ್ನು ಕೇಳುತ್ತ ನೂರಾರು ಕರೆಗಳು ಬಂದವು. ದಿಟ್ಟ ರಾಣಾ ಕಂಗೆಟ್ಟು ಆಸ್ಪತ್ರೆ ಸೇರಬೇಕಾಯಿತು. ಇದರ ಬಗ್ಗೆ ರಾಣಾ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ದಿಟ್ಟ ಪತ್ರಕರ್ತೆ ಎದುರಿಸುತ್ತಿರುವ ಅಪಾಯವನ್ನು ಗಮನಿಸಿದ ವಿಶ್ವಸಂಸ್ಥೆ ರಾಣಾ ಅವರ ಸುರಕ್ಷತೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಭಾರತ ಸರ್ಕಾರವನ್ನು ಕೋರಿದೆ.

ರವೀಶ್ ಕುಮಾರ್, 1974ರಲ್ಲಿ ಬಿಹಾರನ ಮೊತಿಹಾರಿಯ ಮೂಲದವರು, ಉನ್ನತ ವ್ಯಾಸಂಗಕ್ಕಾಗಿ ದೆಹಲಿಗೆ ಬಂದರು. ದೆಹಲಿಯಲ್ಲಿ ಪತ್ರಿಕೋದ್ಯಮವನ್ನು ಅಭ್ಯಾಸ ಮಾಡಿದ ರವೀಶ್, ತಮಗೆ ಇಂಗ್ಲೀಷ್ ಬರದಿದ್ದಕ್ಕಾಗಿ ಕೀಳರಿಮೆಯನ್ನು ಅನುಭವಿಸಿದವರು. ಸ್ವಪ್ರಯತ್ನದಿಂದಲೇ ಮೇಲೆಬಂದ ರವೀಶ್ NDTV ಸೇರಿಕೊಂಡರು. NDTV India ಹಿಂದಿ ವಾಹಿನಿಯ ಸಂಪಾದಕರಾದರು. ಹಿಂದಿ ಗೊತ್ತಿರುವ ಎಲ್ಲರಿಗೂ ರವೀಶ್ ಚಿರಪರಿಚಿತರು. ಇವರ ಆಳವಾದ ವಿಶ್ಲೇಷಣೆ, ಪತ್ರಿಕೋದ್ಯಮದ ಸಾಂಪ್ರದಾಯಿಕವಲ್ಲದ ವಿಧಾನ, ಮಾತುಗಾರಿಕೆ, ಸತ್ಯವನ್ನು ಹುಡುಕುವುದಕ್ಕಾಗಿ ಎಲ್ಲೆಲ್ಲೋ ಸುತ್ತಾಡುವ ಇವರಿಗೆ ಖ್ಯಾತಿ, ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಇತರ ಟಿವಿ ಆಂಕರ್‍ಗಳು ಒಂದು ವಿಷಯದ ಬಗ್ಗೆ ಅರ್ಧ ಗಂಟೆ ಚರ್ಚೆ ನಡೆಸುವುದೇ ಕಷ್ಟವಾಗಿರುವಾಗ, ಕೆಲವು ಮಹತ್ವದ ಸಂದರ್ಭದಲ್ಲಿ ಒಂದೇ ವಿಷಯದ ಮೇಲೆ ವಾರಗಟ್ಟಲೆ ವರದಿ, ಚರ್ಚೆ ಮಾಡಿದ ದಿಟ್ಟ ಪತ್ರಕರ್ತ ಈತ. ತೋರಿಸಿದ್ದನ್ನೇ ಮತ್ತೆ ಮತ್ತೆ ತೋರಿಸುವ, ಜೋರು ಗಂಟಲಿನಲ್ಲಿ ಅರ್ಥವಿಲ್ಲದ ಪ್ರಲಾಪ ಮಾಡುವ ಅದೆಷ್ಟೋ ‘ಖ್ಯಾತ’ ಪತ್ರಕರ್ತರಿಗಿಂತ ರವೀಶ್ ತೀರಾ ಭಿನ್ನ. ಯಾವುದೇ ಅಬ್ಬರವಿಲ್ಲದೆ ತಣ್ಣಗೆ ಈ ದೇಶದ ಸಾಮಾಜಿಕ, ರಾಜಕೀಯ, ಧಾರ್ಮಿಕ ಸಮಸ್ಯೆಗಳನ್ನು ಆಧಾರಸಮೇತ ಎಳೆಎಳೆಯಾಗಿ ಬಿಚ್ಚಿಡುವ ರವೀಶ್ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಹಾಗೆಯೆ ಪಟ್ಟಭದ್ರ ಶಕ್ತಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಪರಿಣಾಮವಾಗಿ ಇವರಿಗೆ ಮಾತ್ರವಲ್ಲದೆ, ಇವರ ಕುಟುಂಬದ ಸದಸ್ಯರಿಗೂ ಬೆದರಿಕೆಗಳು ಶುರುವಾದವು. ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಎಷ್ಟು troll ಮಾಡಲಾಯಿತೆಂದರೆ ಇವರು ಸಾಮಾಜಿಕ ಜಾಲತಾಣಗಳನ್ನು ಸಂಪೂರ್ಣವಾಗಿ ತೊರೆಯುವಂತಾಯಿತು. ಕೊಲೆಯ ಬೆದರಿಕೆಗಳು ಸಾಮಾನ್ಯವಾದವು. ರವೀಶ್‍ರನ್ನು ಕೊಲೆ ಮಾಡುತ್ತೇನೆ ಎಂದು ಕೆಲವರು ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರವೀಶ್ ಪ್ರಸ್ತುತ ಸಮಯದಲ್ಲಿ ಎಲ್ಲಿದ್ದಾರೆ, ಎಲ್ಲಿಗೆ ಹೊರಟಿದ್ದಾರೆ ಎನ್ನುವ ವಿಷಯಗಳನ್ನು ಈ ಪೀಡಕರು ರವೀಶ್‍ಗೆ ನಿರಂತರವಾಗಿ ಕಳುಹಿಸುತ್ತಿರುತ್ತಾರೆ.

ಆ ಇಬ್ಬರಿಗೆ ಬಂದ ಬೆದರಿಕೆಗಳು, ಅವರಿಗೆ ಕೊಡಲಾದ ಮಾನಸಿಕ ಕಿರುಕುಳದ ಬಗ್ಗೆ ಬರೆಯತೊಡಗಿದರೆ ಅದೇ ಒಂದು ಪುಸ್ತಕವಾಗಬಹುದು.. ಕಿರುಕುಳ ಮತ್ತು ಬೆದರಿಕೆಗಳು ಎಷ್ಟರ ಮಟ್ಟಿಗೆ ಬಂದಿವೆಯೆಂದರೆ, ‘ಈಗ ಆ ಬೆದರಿಕೆಗಳನ್ನು ಕಾರ್ಯಗತಗೊಳಿಸುವುದಷ್ಟೇ ಉಳಿದಿರುವುದು’ ಎಂದು ರವೀಶ್ ಹೇಳಿದ್ದಾರೆ. ಬೊಗಳೋ ನಾಯಿ ಕಚ್ಚೋದಿಲ್ಲ ಎಂದು ತಿಳಿದರೆ ಅದು ಸಂಪೂರ್ಣ ತಪ್ಪು. 2017ರಲ್ಲಿ ನಾಲ್ಕು ಪತ್ರಕರ್ತರ ಕೊಲೆಯಾಗಿದೆ, ಈ ವóರ್ಷ ಆಗಲೇ ಇಬ್ಬರು ಪತ್ರಕರ್ತರ ಕೊಲೆಯಾಗಿದೆ. ಕರ್ನಾಟಕದ ದಿಟ್ಟ ಪತ್ರಕರ್ತೆಯಾದ ನಮ್ಮೆಲ್ಲರ ನೆಚ್ಚಿನ ಗೌರಿಲಂಕೇಶ್‍ರನ್ನು ಕೊಂದೇಬಿಟ್ಟರು. ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ಭಾರತ ದಿನೇದಿನೇ ಜಾರುತ್ತಾ ಈಗ 138ನೇ ಸ್ಥಾನಕ್ಕೆ ಇಳಿದಿದೆ. ಅಂದರೆ ಸತ್ಯನಿಷ್ಠ ಪತ್ರಕರ್ತರ ಪರಿಸ್ಥಿತಿ ಹೇಗಿರಬಹುದೆಂದು ಊಹಿಸಬಹುದು.

ಈಗ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಮೇಲಿನ ಇಬ್ಬರೂ ಹೆಸರಾಂತ ಪತ್ರಕರ್ತರು, ಅವರಿಗೆ ತಮ್ಮ ಭಾಷೆಯ, ತಾವು ಪ್ರತಿನಿಧಿಸುತ್ತಿರುವ ವರ್ಗದ ಹಾಗೂ ನಗರಪ್ರದೇಶದಲ್ಲಿ ಒಂದು ಮಟ್ಟಿಗೆ ಬೆಂಬಲವಿದೆ. ಇವರ ಕಾರ್ಯಕ್ರಮಗಳನ್ನು ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ. ಆದರೆ ದೂರದ ಊರುಗಳಲ್ಲಿ, ಹಳ್ಳಿಗಾಡುಗಳಲ್ಲಿ ಕೆಲಸ ಮಾಡುತ್ತಿರುವ, ಇಂಗ್ಲೀಷ್ ಭಾಷೆಯ ಬೆಂಬಲವಿಲ್ಲದ, ಅನಾಮಧೇಯರಾಗಿರುವ ನೂರಾರು ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಸತ್ಯವನ್ನು ಜನರ ಮುಂದಿಡಬೇಕೆಂದರೆ ಪಟ್ಟಭದ್ರರನ್ನು ಎದುರು ಹಾಕಿಕೊಳ್ಳಲೇಬೇಕಾಗುತ್ತದೆ. ಅವರೆಲ್ಲ ಎಂಥೆಂಥಾ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿರಬಹುದು?

ಇನ್ನೂ ಎರಡನೇ ಅತೀಮುಖ್ಯ ಪ್ರಶ್ನೆ,

ಇದು ಯಾವುದೋ ಒಂದು ರಾಜಕೀಯ ಪಕ್ಷ ಅಥವ ಸಂಘಟನೆಯ ಪ್ರಶ್ನೆ ಖಂಡಿತ ಅಲ್ಲ. ಇದೊಂದು ವ್ಯವಸ್ಥೆ. ಆ ವ್ಯವಸ್ಥೆ ಈ ದಿಟ್ಟ ಪತ್ರಕರ್ತರನ್ನು ಹಿಂದೂ ಧರ್ಮದ ವಿರೋಧಿಗಳಂತೆ ಬಿಂಬಿಸುತ್ತಿದೆ. ವಾಸ್ತವದಲ್ಲಿ ಈ ಇಬ್ಬರೂ ಹಿಂದೂ ಧರ್ಮ, ಸಂಸ್ಕøತಿಯ ವಿರುದ್ಧ ಮಾತನಾಡಿರುವ ಯಾವ ಉದಾಹರಣೆಗಳೂ ಇಲ್ಲ. ಹಾಗಾದರೆ ಇವರು ಹಿಂದೂ ಧರ್ಮದ ವಿರೋಧಿಗಳು ಆಗಿದ್ದಾದಾರೂ ಹೇಗೆ? ಹೀಗೆ ಧರ್ಮದ ಮುಸುಕಿನಲ್ಲಿ ಆಶ್ರಯ ಪಡೆಯುತ್ತಿರುವ ಶಕ್ತಿಗಳಾದರೂ ಯಾರು?

ಈ ಎಲ್ಲ ಬೆದರಿಕೆ, ಕಿರುಕುಳಗಳಲ್ಲಿ ಒಂದು ಸಂಗತಿ ಸುಸ್ಪಷ್ಟವಾಗಿದೆ. I am a Troll ಎಂಬ ಸಂಶೋದನಾ ಕೃತಿ ರಚಿಸಿರುವ ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರು ಹೇಳುವಂತೆ ಇವೆಲ್ಲ ಯಾವುದೋ ಬಿಡಿಬಿಡಿ ಘಟನೆಗಳಲ್ಲ. ಇವು ಸುಸಜ್ಜಿತ ಯೋಜನೆಯೊಂದಿಗೆ ನಡೆಯುತ್ತಿವೆ, ಬೆದರಿಕೆ ಒಡ್ಡುವ ಈ ಪುಂಡರಿಗೆ ರಾಜಕೀಯ ಆಶ್ರಯವಿದೆ. ಇಂದಿನ ಪ್ರಧಾನಿಯವರನ್ನು ಒಳಗೊಂಡು ಹಲವು ಸಚಿವರು ಈ ಪುಂಡರನ್ನು ಟ್ವಿಟರ್‍ಗಳಲ್ಲಿ ಫಾಲೋ ಮಾಡುತ್ತಾರೆ, ಫೇಸ್‍ಬುಕ್‍ಗಳಲ್ಲಿ ಸ್ನೇಹಿತರಾಗಿರುತ್ತಾರೆ. ಈ Troll brigadeಗಳಿಗೆ ಭಾರೀ ಖದೀಮ ಕುಳಗಳ ಕೃಪೆಯೂ ಇರುತ್ತದೆ. ಇದು ಒಟ್ಟಾರೆ ವರ್ತಮಾನದ ಪತ್ರಿಕೋದ್ಯಮ ಎದುರಿಸುತ್ತಿರುವ ಅಪಾಯಕಾರಿ ಬಿಕ್ಕಟ್ಟಿನ ಭಾಗವೇ ಆಗಿದೆ.

ಪ್ರಜಾತಂತ್ರ ಯಶಸ್ವಿಯಾಗಬೇಕಾದರೆ ನಾಲ್ಕನೇ ಸ್ಥಂಬವೆಂದು ಪರಿಗಣಿತವಾಗಿರುವ ಪತ್ರಿಕಾರಂಗ ಸ್ವತಂತ್ರವಾಗಿ ಕೆಲಸ ಮಾಡುವಂತಿರಬೇಕು. ಮಾತ್ರವಲ್ಲ, ಪತ್ರಿಕಾರಂಗಕ್ಕೆ ಸಮಾಜದ ಹಿತವನ್ನು ಕಾಪಾಡುವ ಹೊಣೆಗಾರಿಕೆ ಇರಬೇಕು. ಇಂಥಾ ಜನಪರ ಪತ್ರಿಕೋದ್ಯಮವನ್ನು ಉಳಿಸಿ, ಬೆಳೆಸಲು ನಾವೇನು ಮಾಡಬೇಕು? ಸತ್ಯವನ್ನು ನುಡಿಯುವ ದಿಟ್ಟ ಪತ್ರಕರ್ತರ ರಕ್ಷಣೆಗೆ ನಾವು ಮಾಡಬೇಕಾಗಿರುವುದೇನು?

ಇದು ನಾವು ಆದ್ಯತೆಯ ಮೇಲೆ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆ.

ಸಂಪಾದಕೀಯ ತಂಡದ ಪರವಾಗಿ
ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...