Homeಅಂಕಣಗಳುಸೋಲಿಸಬೇಕಾಗಿರುವುದು ಮುಖವಾಡವನ್ನಷ್ಟೇ ಅಲ್ಲ, ಮುಖವನ್ನು ಕೂಡಾ...

ಸೋಲಿಸಬೇಕಾಗಿರುವುದು ಮುಖವಾಡವನ್ನಷ್ಟೇ ಅಲ್ಲ, ಮುಖವನ್ನು ಕೂಡಾ…

- Advertisement -
- Advertisement -

– ದಿನೇಶ್ ಅಮೀನ್‍ಮಟ್ಟು |

ಮೇ ಹನ್ನೆರಡರಂದು ಚುನಾವಣೆ, ಹದಿನೈದಕ್ಕೆ ಫಲಿತಾಂಶ. ಆ ದಿನ ಚುನಾವಣಾ ಕಣದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧಾರವಾಗಿ ಬಿಡುತ್ತದೆ. ಅದರ ನಂತರ ಸೋತವರ ಬಗ್ಗೆ ಸ್ವಲ್ಪ ಅನುಕಂಪ ತೋರೋಣ, ಗೆದ್ದವರನ್ನು ಅಭಿನಂದಿಸೋಣ.

ಇವರೆಲ್ಲ ತೆರೆಯ ಮುಂದೆ ಕಾಣುತ್ತಿರುವ ಪಾತ್ರಧಾರಿಗಳು. ಚುನಾವಣೆಯ ನಂತರವೂ ಈ ಪಕ್ಷಗಳ, ಪಕ್ಷದ ನಾಯಕರ ಹೆಸರೆತ್ತಿ ಮನಸಾರೆ ಬೈದು ಬಿಡಬಹುದು, ಸ್ವಲ್ಪ ಧೈರ್ಯ ಮಾಡಿದರೆ ಕಲ್ಲೆತ್ತಿ ಹೊಡೆಯಲೂಬಹುದು. ಅಂತಹ ಸಾಹಸ ಮಾಡುವ ಧೈರ್ಯ ಇಲ್ಲ ಎಂದಾದರೆ ಮುಂದಿನ ಚುನಾವಣೆಯಲ್ಲಿ ಇವರನ್ನು ಸೋಲಿಸಿ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಬೆದರಿಸಲೂಬಹುದು.

ಆದರೆ ಈ ಸೋತವರ-ಗೆದ್ದವರ ಮರೆಯಲ್ಲಿ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗ ವಹಿಸಿದವರಿದ್ದಾರೆ. ಅವರು ರಾಜಕಾರಣ ಮಾಡುತ್ತಾರೆ, ಆದರೆ ರಾಜಕಾರಣಿಗಳಲ್ಲ. ಅವರು ಚುನಾವಣೆಯಲ್ಲಿ ಸ್ಪರ್ಧಿಸಿರುವುದಿಲ್ಲ, ಆದ್ದರಿಂದ ಸೋಲು-ಗೆಲುವಿನ ಭಯ ಇವರಿಗಿಲ್ಲ. ಬಹಿರಂಗ ಪ್ರಚಾರದಲ್ಲಿ ನಿಮ್ಮ ಕಣ್ಣಿಗೆ ಹೆಚ್ಚು ಕಾಣಿಸಿರುವುದಿಲ್ಲ, ಅವರ ಅಂತರಂಗದ ಪಿಸುಮಾತುಗಳು ಹೊರಗಿರುವವರಿಗೆ ಕೇಳಿಸುವುದಿಲ್ಲ.

ಗೊಂಬೆಗಳ ಕುಣಿತ ನೋಡಿ ಚಪ್ಪಾಳೆ ತಟ್ಟುವವರಿಗೆ ನೇಪಥ್ಯದಲ್ಲಿ ಕೂತ ಸೂತ್ರಧಾರರು ಕಾಣಿಸುವುದಿಲ್ಲ. ಇವರು ವಿಧಾನಸಭೆ ಪ್ರವೇಶಿಸದೆಯೂ ಅಧಿಕಾರವನ್ನು ಅನುಭವಿಸಬಲ್ಲರು, ಜಾತಿವಾದಿ ಎಂದು ಕರೆಸಿಕೊಳ್ಳದೆಯೇ ಜಾತಿಯ ರಾಜಕಾರಣ ಮಾಡಬಲ್ಲರು, ಭ್ರಷ್ಟರನ್ನು ಪೋಷಿಸುತ್ತಲೇ ಪ್ರಾಮಾಣಿಕರು ಎಂಬ ಹಣೆಪಟ್ಟಿ ಹಚ್ಚಿಕೊಂಡು ಓಡಾಡಬಲ್ಲರು. ಚುನಾವಣೆಯ ನಂತರವೂ ಇವರನ್ನು ಮರೆಯದಿರೋಣ. ಇವರನ್ನು ಕಾಣಬಲ್ಲ ಕಣ್ಣುಗಳನ್ನು ಕಳೆದುಕೊಳ್ಳದಿರೋಣ.

ಕಂಡರೂ ಕಾಣದಂತಿರುವ ಇವರ ದರ್ಶನ ಪಡೆಯಬೇಕಾದರೆ ಸಂಘಪರಿವಾರದ ಗರ್ಭಗುಡಿಯೊಳಗೆ ಇಣುಕಬೇಕು. ಅಲ್ಲಿನ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಶ್ವರೂಪವನ್ನು ಕಾಣಬೇಕು. ಸಂಘಪರಿವಾರ ಎಂಬ ದೊಡ್ಡ ಕುಟುಂಬದ ಯಜಮಾನನ ಸ್ಥಾನದಲ್ಲಿರುವ ಆರ್‍ಎಸ್‍ಎಸ್‍ನ್ನು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಂಡರೂ, ಸಂಸ್ಕೃತಿಯೇತರ ಚಟುವಟಿಕೆಗಳಿಗಾಗಿ ಅದು ಹಲವಾರು ಅಂಗಸಂಸ್ಥೆಗಳನ್ನು ಹುಟ್ಟುಹಾಕಿದೆ.

ರಾಜಕೀಯಕ್ಕಾಗಿ ಬಿಜೆಪಿ (ಮೊದಲು ಜನಸಂಘ), ಧರ್ಮಕ್ಕಾಗಿ ವಿಎಚ್‍ಪಿ, ಧರ್ಮ ಸಂಘರ್ಷಕ್ಕಾಗಿ ಹಿಂದೂ ಜಾಗರಣ ಮಂಚ, ಹೊಡೆದಾಟಕ್ಕಾಗಿ ಬಜರಂಗದಳ ಇತ್ಯಾದಿ,  ವಿದ್ಯಾರ್ಥಿಗಳಿಗಾಗಿ ಎಬಿವಿಪಿ, ಕಾರ್ಮಿಕರಿಗಾಗಿ ಬಿಎಂಎಸ್… ಹೀಗೆ ತರಹೇವಾರಿ ಸಂಘಟನೆಗಳು. ಇದರ ಜತೆಗೆ ನೂರಾರು ಸ್ವಯಂಸೇವಾಸಂಸ್ಥೆಗಳು.

ಆರ್‍ಎಸ್‍ಎಸ್, ಎನ್ನುವುದು ಪರಿವಾರದ ಹೈಕಮಾಂಡ್. ಪರಿವಾರಕ್ಕೆ ಸಂಬಂಧಿಸಿದ ಎಲ್ಲ ನೀತಿ-ನಿರ್ಧಾರಗಳು ಇತ್ಯರ್ಥವಾಗುವುದು ಇದೇ ಗರ್ಭಗುಡಿಯಲ್ಲಿ. ಇದು ತನ್ನ ಆದೇಶಗಳನ್ನು ಪತ್ರಿಕಾಗೋಷ್ಠಿ ಕರೆದು ಇಲ್ಲವೇ ಪತ್ರಿಕಾಹೇಳಿಕೆಗಳ ಮೂಲಕ ಜಾರಿಗೊಳಿಸುವುದಿಲ್ಲ. ಅದೇನಿದ್ದರೂ ಕಣ್ಸನ್ನೆ, ಕೈಸನ್ನೆಯ  ಮೂಲಕವೇ ನಡೆಯುತ್ತದೆ. ಈ ಸಂಘಟನೆಯಲ್ಲಿ ಪ್ರಾಮಾಣಿಕತೆ, ತ್ಯಾಗ, ಸಾರ್ವಜನಿಕ ಸೇವೆ ಮತ್ತು ಸರಳ-ಶಿಸ್ತು ಬದ್ಧಜೀವನಕ್ಕೆ ಅರ್ಪಿಸಿಕೊಂಡ ಅನೇಕ ಹಿರಿಯ ಜೀವಗಳಿದ್ದವು. ಆರ್‍ಎಸ್‍ಎಸ್ ಜೊತೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಇಟ್ಟುಕೊಂಡವರು ಕೂಡಾ ವೈಯಕ್ತಿಕವಾಗಿ ಅವರಿಗೆ ಗೌರವದಿಂದ ತಲೆ ಬಾಗುತ್ತಿದ್ದರು.

ಆದರೆ ಬದಲಾಗಿರುವ ಆರ್‍ಎಸ್‍ಎಸ್‍ನಲ್ಲಿ ಹಳೆಯ ತಲೆಮಾರಿನ ನಾಯಕರು ಪಳೆಯುಳಿಕೆಯಂತೆ ಅಲ್ಲಲ್ಲಿ ಕಾಣುತ್ತಿದ್ದಾರೆಯೇ ಹೊರತು ಬಹುಸಂಖ್ಯಾತ ನಾಯಕರು ಬೇರೆ ದಾರಿ ಹಿಡಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆರ್‍ಎಸ್‍ಎಸ್‍ನ ಮೂಲ ಕ್ಷೇತ್ರಗಳಾದ ಧರ್ಮ ಮತ್ತು ಸಂಸ್ಕೃತಿಯನ್ನು ಪಕ್ಕಕ್ಕಿಟ್ಟು ರಾಜಕೀಯ ಕ್ಷೇತ್ರದಲ್ಲಿ ತೋರುತ್ತಿರುವ ಅತಿಯಾದ ಆಸಕ್ತಿ.

1925ರಲ್ಲಿ ಸ್ಥಾಪನೆಗೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘ 1949ರಲ್ಲಿ ಒಪ್ಪಿಕೊಂಡ ಲಿಖಿತ ಸಂವಿಧಾನದ ಪ್ರಕಾರ ನೇರವಾಗಿ ರಾಜಕೀಯ ಚಟುವಟಿಕೆಗಳನ್ನು ನಡೆಸುವಂತಿಲ್ಲ.  `ಹಿಂದೂ’ ಸಮಾಜದೊಳಗಿನ ವಿಭಿನ್ನ ಗುಂಪುಗಳನ್ನು ಸಂಘಟಿಸುವುದು ಮತ್ತು ಅದನ್ನು `ಧರ್ಮ’ ಮತ್ತು ಸಂಸ್ಕೃತಿಯ ಆಧಾರದಲ್ಲಿ ಪುನರುಜ್ಚೀವನಗೊಳಿಸಿ ಆ ಮೂಲಕ `ಭರತ ವರ್ಷದ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸುವುದು ಸಂಘದ ಗುರಿ ಮತ್ತು ಉದ್ದೇಶ…’ ಎಂದು ಆರ್‍ಎಸ್‍ಎಸ್ ಒಪ್ಪಿಕೊಂಡಿರುವ ಸಂವಿಧಾನದ ಮೂರನೆ ಪರಿಚ್ಛೇದ ಹೇಳುತ್ತದೆ.

`ಸಂಘಕ್ಕೆ ರಾಜಕೀಯ ಉದ್ದೇಶ ಇಲ್ಲ, ಇದು ಶುದ್ಧವಾಗಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬದ್ಧವಾದ ಸಂಸ್ಥೆ’ ಎಂದು ಪರಿಚ್ಛೇದ 4ರಲ್ಲಿ ಉದ್ದೇಶವನ್ನು ಇನ್ನಷ್ಟು ಸ್ಪಷ್ಟಪಡಿಸಲಾಗಿದೆ. ಇಷ್ಟು ಹೇಳಿದ ನಂತರ ಮುಂದುವರಿಯುತ್ತಾ `…ಸಂಘದ ಸದಸ್ಯರು ರಾಜಕೀಯ ಪಕ್ಷ ಸೇರುವುದಕ್ಕೆ ಅಭ್ಯಂತರ ಇಲ್ಲ… ಮುಂದೊಂದು ದಿನ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳಲು ಆರ್‍ಎಸ್‍ಎಸ್ ಸ್ವತಂತ್ರವಾಗಿದೆ (ಪ್ಯಾರಾ 18 ಮತ್ತು 19) ಎಂದು ಹೇಳಿ ಆರ್‍ಎಸ್‍ಎಸ್ ವಿಧಾನದಲ್ಲಿಯೇ ಅಡ್ಡಗೋಡೆಯ ಮೇಲೆ ದೀಪ ಇಡಲಾಗಿದೆ. ಈ ದ್ವಂದ್ವವನ್ನು ಆರ್‍ಎಸ್‍ಎಸ್ ಇತಿಹಾಸದುದ್ದಕ್ಕೂ ಅದರ ನಡವಳಿಕೆಯಲ್ಲಿ ಕಾಣಬಹುದು.

ಸಂವಿಧಾನದಲ್ಲಿ ಅವಕಾಶ ಇರುವಂತೆ ಆರ್‍ಎಸ್‍ಎಸ್ ನೇರವಾಗಿ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳಲಿಲ್ಲ, ಬದಲಿಗೆ 1951ರಲ್ಲಿ ಜನಸಂಘ ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿತು. ಇದರ ನಂತರವೂ ಹಿಂದಿನ ಜನಸಂಘ ಇಲ್ಲವೇ ಈಗಿನ ಬಿಜೆಪಿ ತಮ್ಮ ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ಅದು ಒಪ್ಪಿಕೊಳ್ಳುವುದಿಲ್ಲ.

ಆದರೆ ವಾಜಪೇಯಿ-ಅಡ್ವಾಣಿ-ಮೋದಿಯವರಿಂದ ಹಿಡಿದು ಯಡಿಯೂರಪ್ಪ-ಶೆಟ್ಟರ್‍ವರೆಗೆ ಎಲ್ಲರೂ ಆರ್‍ಎಸ್‍ಎಸ್‍ನಿಂದಲೇ ಬಂದವರು ಮತ್ತು ಅದಕ್ಕೆ ನಿಷ್ಠರಾಗಿರುವವರು.ಕೇಂದ್ರ ಸಂಪುಟದಲ್ಲಿ ಅವರೇ ತುಂಬಿದ್ದಾರೆ. ಬಿಜೆಪಿಯೊಳಗೆ ಆರ್‍ಎಸ್‍ಎಸ್‍ನಿಂದ ಎರವಲು ಸೇವೆಯ ರೂಪದಲ್ಲಿ ಬಂದ ಸ್ವಯಂಸೇವಕರಿರುತ್ತಾರೆ. ಇವರ ಮೂಲಕವೇ ಅದು ರಾಜಕೀಯ ಮತ್ತು ಚುನಾಯಿತ ಪ್ರತಿನಿಧಿಗಳನ್ನು ನಿಯಂತ್ರಿಸುತ್ತದೆ.

ಆರ್‍ಎಸ್‍ಎಸ್ ತನ್ನದು ಹಿಂದೂಗಳ ಸಂಘಟನೆ ಎಂದು ಹೇಳಿಕೊಳ್ಳುತ್ತದೆ, ಆದರೆ ಹಿಂದುಗಳು ಯಾರು ಎನ್ನುವುದಕ್ಕೆ ಸ್ಪಷ್ಟತೆ ಇಲ್ಲ. ಇವರಿಂದ ಹಿಂದು ಎಂಬ ಸರ್ಟಿಫಿಕೇಟ್ ಪಡೆಯಲು ಬೇಕಾದ ಅರ್ಹತೆಗಳೇನು ಎನ್ನುವುದಕ್ಕೆ ಇವರಲ್ಲಿ ನೇರ ಉತ್ತರ ಇಲ್ಲ. ಹಿಂದು ಎಂದು ಅನಿಸಿಕೊಳ್ಳಲು ಹಿಂದು ತಂದೆತಾಯಿಗಳಿಗೆ ಹುಟ್ಟಿದರಷ್ಟೇ ಸಾಲದು, ನೀವು ಬಿಜೆಪಿ ಸದಸ್ಯರಾಗಿರಬೇಕು ಎನ್ನುತ್ತಿದೆ ಸಂಘದ ಅಲಿಖಿತ ನಿಯಮ. ಇವರದ್ದು ಧಾರ್ಮಿಕ ಹಿಂದುತ್ವ ಅಲ್ಲ, ರಾಜಕೀಯ ಹಿಂದುತ್ವ.

ಚುನಾವಣೆಯಲ್ಲಿ ಇವರು ಯಾರನ್ನು ಬೆಂಬಲಿಸುತ್ತಾರೆ ನೋಡಿ. ದೇವಸ್ಥಾನ ನಿರ್ಮಿಸಿ ಪೂಜೆ ಮಾಡುತ್ತಿರುವ ಜನಾರ್ದನ ಪೂಜಾರಿ ಇವರಿಗೆ ಹಿಂದೂ ಅಲ್ಲ, ಅವರ ಎದುರಾಳಿ ಬಿಜೆಪಿ ಸದಸ್ಯ ನಳಿನ್ ಕುಮಾರ್ ಕಟೀಲು ಹಿಂದು. ಅಖಂಡ ದೈವಭಕ್ತ ದೇವೇಗೌಡ ಹಿಂದೂ ಅಲ್ಲ, ಗಣಿ ಲೂಟಿ ಮಾಡಿ ಜೈಲಿಗೆ ಹೋಗಿಬಂದಿರುವ ಜನಾರ್ದನ ರೆಡ್ಡಿ ಇವರಿಗೆ ಹಿಂದು.

ಬೇರೆ ರಾಜಕೀಯ ಪಕ್ಷಗಳಿಗೆ ಸೇರಿದ ನಾಯಕರನ್ನೂ ಕೂಡಾ ಆರ್‍ಎಸ್‍ಎಸ್ `ನಮ್ಮವನು’ ಎಂದು ಒಪ್ಪಿಕೊಳ್ಳುವುದಿಲ್ಲ. ಬಿಜೆಪಿಯನ್ನು ಹೊರತುಪಡಿಸಿ ಬೇರೆ ಯಾವ ರಾಜಕೀಯ ಪಕ್ಷದಲ್ಲಿಯೂ ಆರ್‍ಎಸ್‍ಎಸ್‍ನಲ್ಲಿ ತನ್ನನ್ನು ಗುರುತಿಸಿಕೊಳ್ಳುವ ನಾಯಕರಿಲ್ಲ.

ಇವರಿಗೆ ಹೊಲಸು ರಾಜಕಾರಣದ ಮೂಲಕ ಗಳಿಸುವ ರಾಜಕೀಯ ಅಧಿಕಾರಬೇಕು, ಆದರೆ ಅದರ ನೈತಿಕ ಹೊಣೆಗಾರಿಕೆ ಬೇಡ. ವಿಚಿತ್ರವೆಂದರೆ ಸಚ್ಚಾರಿತ್ರ್ಯ ಮತ್ತು ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಉಪನ್ಯಾಸ ನೀಡುವ ಆರ್‍ಎಸ್‍ಎಸ್ ನಾಯಕರಿಗೆ ಜನಾರ್ದನ ರೆಡ್ಡಿಯನ್ನು ಪಕ್ಕದಲ್ಲಿ ಕೂರಿಸಿಕೊಂಡಾಗ ಯಾವ ಮುಜುಗರವೂ ಆಗುವುದಿಲ್ಲ.  ತಾವು ಖಾಸಗಿಯಾಗಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಮತ್ತು ಸಂಘಸಂಸ್ಥೆಗಳಿಗೆ ಗಣಿಲೂಟಿಕೋರರಿಂದ ಕೈತುಂಬಾ ದೇಣಿಗೆ ಪಡೆಯುತ್ತಿದ್ದಾಗ ಯಾವ ಆತ್ಮಸಾಕ್ಷಿಯೂ ಇವರನ್ನು ಕಾಡಲಿಲ್ಲ.

ಯಡಿಯೂರಪ್ಪ ಒಬ್ಬ ರಾಜಕಾರಣಿ, ಯಾರೋ ಅಡ್ಡ ಮಾರ್ಗದಿಂದ ಗಳಿಸಿದ ಹಣವನ್ನು ದೇಣಿಗೆ ಪಡೆದು ಅವರು ರಾಜಕಾರಣ ಮಾಡಿದಾಗ ತಪ್ಪು ಎಂದು ಹೇಳಬಹುದು, ಆದರೆ ಅಸಹಜ ಎಂದು ಹೇಳಲಾಗುವುದಿಲ್ಲ. ಆದರೆ ಆರ್‍ಎಸ್‍ಎಸ್ ತನ್ನ ಆರು ಅಂಗಸಂಸ್ಥೆಗಳು ಮತ್ತು ನಾಯಕರಿಗೆ ಯಡಿಯೂರಪ್ಪ ಸರ್ಕಾರ ಅಂದಾಜು 50 ಕೋಟಿ ರೂಪಾಯಿ ಬೆಲೆಬಾಳುವ ಜಮೀನನ್ನು ನೀಡಿದೆ ಎಂಬ ಆರೋಪವನ್ನು ಆರ್‍ಎಸ್‍ಎಸ್ ನಿರಾಕರಿಸುವ ಸ್ಥಿತಿಯಲ್ಲಿದೆಯೇ? ಇದು ಅನೈತಿಕ ಎಂದು ಅನಿಸಲಿಲ್ಲವೇ?

ವಾಸ್ತವ ಸಂಗತಿ ಏನೆಂದರೆ ಆರ್‍ಎಸ್‍ಎಸ್‍ಗೆ ಕೂಡಾ ರಾಜಕೀಯ ಅಧಿಕಾರ ಬೇಕು ಮತ್ತು ಅದರ ಮೂಲಕ ಸುಲಭದಲ್ಲಿ ಬರುವ  ಸುಖ-ಸಂತೋಷಗಳನ್ನು ಅನುಭವಿಸಬೇಕು. ಆದರೆ ಜವಾಬ್ದಾರಿ ಬೇಡ. ಹಾಗಿಲ್ಲ ಎಂದಾದರೆ ಅವರು ಚುನಾವಣಾ ಕಣಕ್ಕಿಳಿದು ತಮ್ಮ ಶಕ್ತಿ ಪ್ರದರ್ಶನ ಮಾಡಬೇಕಲ್ಲಾ?

ತನ್ನ ಮಾತಿಗೆ ಗೋಣು ಆಡಿಸುವ ನಾಯಕರನ್ನಷ್ಟೇ ಅದು ಸಹಿಸಿಕೊಳ್ಳುತ್ತದೆ, ನಿರಾಕರಿಸಿದರೆ ಅದು ವಾಜಪೇಯಿ-ಅಡ್ವಾಣಿ ಇರಲಿ, ಯಡಿಯೂರಪ್ಪ-ಸದಾನಂದಗೌಡರಿರಲಿ ಯಾರ ಗೋಣು ಮುರಿಯಲೂ ಹಿಂದೆಮುಂದೆ ನೋಡುವುದಿಲ್ಲ. ಈ ಹಿಂದೆ ಯಡಿಯೂರಪ್ಪನವರ ಪದಚ್ಯುತಿಗೆ ಮತ್ತು ಈಗ ಅವರನ್ನು ಪಕ್ಷದಲ್ಲಿಯೇ ಮೂಲೆಗೆ ತಳ್ಳಲು ಮಾಡಲಾಗುತ್ತಿರುವ ಪ್ರಯತ್ನಕ್ಕೆ ಅವರ ಮೇಲಿನ ಭ್ರಷ್ಟಾಚಾರದ ಆರೋಪಗಳಷ್ಟೇ ಕಾರಣ ಅಲ್ಲ, ರಾಜ್ಯದ ಒಂದು ಪ್ರಬಲ ಕೋಮಿಗೆ ಸೇರಿದ ನಾಯಕನೊಬ್ಬ ತಮ್ಮ ನಿಯಂತ್ರಣವನ್ನು ಮೀರಿ ಬೆಳೆಯುತ್ತಿದ್ದಾರೆ ಎಂಬ ಅ`ಸಂತೋಷ’ ಕಾರಣ.

ಇವರು ವಾಜಪೇಯಿ, ಅಡ್ವಾಣಿಗಳನ್ನೂ ಇದೇರೀತಿ ಕಾಡಿದ್ದರು. ಮುಂದೆ ನರೇಂದ್ರ ಮೋದಿಯವರಿಗೂ ಇದೇ ಗತಿ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ ಖಂಡಿತ ನರೇಂದ್ರಮೋದಿ ಇಲ್ಲವೇ ಅಮಿತ್ ಶಾ ಆಯ್ಕೆಯಲ್ಲ, ಅದು ಆರ್‍ಎಸ್‍ಎಸ್ ಆಯ್ಕೆ.

ನಾಯಕನನ್ನು ಹುಟ್ಟು ಹಾಕಿದ ಮರುಗಳಿಗೆಯಲ್ಲಿಯೇ ಪ್ರತಿನಾಯಕನನ್ನು ಸೃಷ್ಟಿ ಮಾಡುವುದು ಆರ್‍ಎಸ್‍ಎಸ್ ಕಾರ್ಯತಂತ್ರ. ವಾಜಪೇಯಿ ಎದುರಿಗೆ ಅಡ್ವಾಣಿ, ಅಡ್ವಾಣಿ ಎದುರಿಗೆ ಮೋದಿ, ಈಗ ಮೋದಿ ಎದುರಿಗೆ ಯೋಗಿ. ಇದು ಮುಂದುವರಿಯಲಿದೆ. ಆದರೆ ಉಳಿದವರಂತೆ ಮೋದಿಯವರನ್ನು ಮಣಿಸುವುದು ಕಷ್ಟ ಎನ್ನುವುದು ಆರ್‍ಎಸ್‍ಎಸ್‍ಗೂ ಗೊತ್ತು. ಉತ್ತರ ಪ್ರದೇಶದ ಲೋಕಸಭಾ ಉಪಚುನಾವಣೆಗಳಲ್ಲಿ ಯೋಗಿ ಅನುಭವಿಸಿದ ಸೋಲಿಗೆ ವಿರೋಧಪಕ್ಷಗಳಷ್ಟೇ ಶ್ರಮಿಸಿರುವುದು ಎಂದು ತಿಳಿದುಕೊಂಡವರು ಮೂರ್ಖರು.

ಆರ್‍ಎಸ್‍ಎಸ್ ಅಂತರಂಗವನ್ನು ಚೆನ್ನಾಗಿ ಬಲ್ಲ ಮೋದಿ ಉಳಿದವರಿಗಿಂತ ಸಂಘದೊಳಗೆ ಹೆಚ್ಚು ಪಳಗಿದವರು. ಈ ಎಚ್ಚರದಿಂದಲೇ ಸಂಘಪರಿವಾರದ ಜತೆ ಒಂದು ಅಂತರ ಕಾಪಾಡಿಕೊಂಡು ಬಂದಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆ ರಾಜ್ಯದಲ್ಲಿ ಎಂದೂ ಸಂಘಪರಿವಾರವನ್ನು ತಲೆಎತ್ತಲು ಬಿಟ್ಟಿರಲಿಲ್ಲ. ತಾವು ಪ್ರಧಾನಿಯಾಗಲು ಹೊರಟಾಗ ಆರ್‍ಎಸ್‍ಎಸ್‍ಗೆ ಸಮಾನಾಂತರವಾಗಿ ತನ್ನ ಭಕ್ತರ ಗುಂಪನ್ನು ಹುಟ್ಟುಹಾಕಿದ್ದರು. ನಮೋ ಬ್ರಿಗೇಡ್‍ನಂತಹ ಸಂಘಟನೆಗಳ ಬಗ್ಗೆ ಆರ್‍ಎಸ್‍ಎಸ್‍ಗೆ ಈಗ ಅಸಮಾಧಾನ ಇದೆ. ಅದು ಸಮಯಕ್ಕಾಗಿ ಕಾಯುತ್ತಿದೆ.

ಕರ್ನಾಟಕದಲ್ಲಿ ತಮಗೆ ವಿರುದ್ಧವಾದ ಫಲಿತಾಂಶ ಬಂದರೆ, ನಂತರ ರಾಜಸ್ತಾನ, ಮಧ್ಯಪ್ರದೇಶಗಳಲ್ಲಿಯೂ ಹಿನ್ನಡೆಯಾದರೆ ಆರ್‍ಎಸ್‍ಎಸ್ ರಂಗಪ್ರವೇಶ ಮಾಡುವುದು ಖಂಡಿತ. ಅದು ಮೋದಿ ಮತ್ತು ಶಾ ಅವರ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತಿರುವ ಒಳಗಿನ ನಾಯಕರ ಅದುಮಿಟ್ಟ ಅಸಮಾಧಾನದ ಸ್ಫೋಟಕ್ಕೆ ಕಿಡಿಯಾಗಲೂಬಹುದು.

ಆದರೆ ಯಡಿಯೂರಪ್ಪ, ನರೇಂದ್ರ ಮೋದಿಯವರ ಸೋಲಿನಿಂದ ಕೋಮುವಾದದ ರಾಜಕಾರಣ ಕೊನೆಯಾಗಬಹುದೇ? ಬಿಜೆಪಿಯ ಐಡಲಾಗ್ ಕೆ.ಎನ್.ಗೋವಿಂದಾಚಾರ್ಯರು ಹೇಳಿದ ಹಾಗೆ ಇವರೆಲ್ಲ `ಮುಕೋಟ’ (ಮುಖವಾಡ)ಗಳು. ಒಂದನ್ನು ಕಿತ್ತು ಹಾಕಿದರೆ ಆ ಜಾಗದಲ್ಲಿ ಇನ್ನೊಂದನ್ನು ಕೂರಿಸಲಾಗುತ್ತದೆ. ಸೋಲಿಸಬೇಕಾಗಿರುವುದು ಮುಖವನ್ನು, ಅದು ಆರ್‍ಎಸ್‍ಎಸ್ ಮುಖ. ಈ ಮುಖವನ್ನು ಸರಿಯಾಗಿ ಗುರುತಿಸಬೇಕು, ಮುಖಾಮುಖಿಯಾಗಿ ಎದುರು ನಿಲ್ಲಬೇಕು ಮತ್ತು ಮಣಿಸಬೇಕು. ಇದು ರಾಜಕೀಯ ಸಂಘರ್ಷ ಅಲ್ಲ, ಸೈದ್ಧಾಂತಿಕ ಸಂಘರ್ಷ. ಚುನಾವಣಾ ಸೋಲು-ಗೆಲುವಿನ ನಂತರವೂ ಈ ಸಂಘರ್ಷ ನಿರಂತರವಾಗಿ ನಡೆಯಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...