Homeಅಂಕಣಗಳುಹಾಸುಹೊಕ್ಕು ಅಂಕಣ: ಊರಭಾಷೆಯ ಸೆಳೆತ

ಹಾಸುಹೊಕ್ಕು ಅಂಕಣ: ಊರಭಾಷೆಯ ಸೆಳೆತ

- Advertisement -
- Advertisement -

ರಹಮತ್ ತರೀಕೆರೆ |

ಚರಿತ್ರೆಯ ವಿದ್ವಾಂಸರಾದ ಪ್ರೊ. ಷ. ಶೆಟ್ಟರ್ ಅವರು, ಒಮ್ಮೆ ನನ್ನನ್ನು ‘ಹರಿಹರನ ಹಾಗೆ ಹೊಯ್ಸಳರ ನಾಡಿನಿಂದ ವಿಜಯನಗರ ನಾಡಿಗೆ ವಲಸೆ ಬಂದವನು’ ಎಂದು ವರ್ಣಿಸಿದರು. ಆಡಳಿತಾನುಕೂಲಕ್ಕೆ ಮಾಡಿಕೊಂಡಿರುವ ಜಿಲ್ಲೆ-ತಾಲೂಕು ಎಂಬ ಕಂದಾಯ ಪರಿಭಾಷೆಗಿಂತ, ರಾಜಮನೆತನಗಳ ಚರಿತ್ರೆಯ ಪರಿಭಾಷೆಯಲ್ಲಿ ನನ್ನ ವಲಸೆಯನ್ನು ವಿವರಿಸಿದ್ದು ವಿಶಿಷ್ಟವಾಗಿ ಕಂಡಿತು. ಆದರೂ ನನ್ನ ವಲಸೆಯ ಪರಿಯನ್ನು ಕಂದಾಯವೂ ಅಲ್ಲದ, ರಾಜಕೀಯ ಚರಿತ್ರೆಗೂ ಸೇರದ ನುಡಿಗಟ್ಟುಗಳಲ್ಲಿ ಹೇಳಿಕೊಳ್ಳಲು ಅವಕಾಶ ಸಿಕ್ಕರೆ, ನಾನು ಭದ್ರಾ ಪ್ರದೇಶದಿಂದ ತುಂಗಭದ್ರಾ ಪ್ರದೇಶಕ್ಕೆ ಬಂದವನು ಎಂದು ಕರೆದುಕೊಳ್ಳುವೆನು. ಅಥವಾ ರಾಗಿ ಸೀಮೆಯಿಂದ ಜೋಳದ ಸೀಮೆಗೆ, ಲಕ್ಷ್ಮೀಶನ ಸೀಮೆಯಿಂದ ರಾಘವಾಂಕರ ಸೀಮೆಗೆ, ಬಾಬಾಬುಡನ್ ಸೀಮೆಯಿಂದ ಹೇರೂರ ವಿರುಪನಗೌಡರ ಸೀಮೆಗೆ ಬಂದವನು-ಎಂದರೂ ಸರಿಯೇ. ಕಾರಣ, ನೀರು ಆಹಾರ ಕಾವ್ಯ ಅಧ್ಯಾತ್ಮದ ಪರಿಭಾಷೆಗೆ ವರ್ತಮಾನದ ಜನಬದುಕಿನ ಜತೆ ರಾಜಕೀಯ ಚರಿತ್ರೆಗಿಂತಲೂ ಆಪ್ತವಾದ ಸಂಬಂಧವಿರುತ್ತದೆ.

ಮೇಲ್ಕಾಣಿಸಿದ ನುಡಿಗಟ್ಟುಗಳಲೆಲ್ಲ ಜಲಸಂಸ್ಕೃತಿಯದೇ ನನಗೆ ಪ್ರಿಯ. ಇದಕ್ಕೆ ಕಾರಣ, ನನ್ನೂರಿನ ಹೆಸರಲ್ಲೇ ನೀರಿನ ಕುರುಹಿದೆ. ಇದಕ್ಕೆ ತಕ್ಕನಾಗಿ ನಮ್ಮೂರನ್ನು ನಾಲ್ಕು ದೊಡ್ಡಕೆರೆ ಆವರಿಸಿಕೊಂಡಿವೆ. ನಮ್ಮೂರ ಹೆಸರಿನ ಹಿನ್ನೆಲೆ ಕುರಿತು ಎರಡು ಊಹೆಗಳಿವೆ. ಮೊದಲನೆಯದು- ಮೈತುಂಬ ಮುಳ್ಳುಗಳುಳ್ಳ ತರೀ ಗಿಡಗಳ ಕಾರಣಗಳಿಂದ ಬಂದಿದ್ದು. ಎರಡನೆಯದು-ಬೌದ್ಧಯಕ್ಷಿ ತಾರಾ ಭಗವತಿಯ ಹೆಸರಲ್ಲಿ ಕಟ್ಟಿದ ಕೆರೆಯ ಕಾರಣದಿಂದ ಬಂದಿದ್ದು. ಇದರಲ್ಲಿ ಮೊದಲನೆಯದೇ ಹೆಚ್ಚು ನಿಜವಿರಬೇಕು. ಆದರೆ ಬೌದ್ಧಧರ್ಮದ ಬಗ್ಗೆ ಸೆಳೆತವುಳ್ಳ ನನಗೆ ಎರಡನೆಯ ವ್ಯಾಖ್ಯಾನದ ಬಗ್ಗೆ ತುಸು ಭಾವಪಕ್ಷಪಾತ. ಚರಿತ್ರೆಯ ಈ ಯಾವ ಖಬರೂ ಇಲ್ಲದೆ, ಬೆಸಗರಹಳ್ಳಿ, ಬರಗೂರು, ದೇವನೂರು, ನಾಗವಾರ ಇತ್ಯಾದಿ ಊರ ಹೆಸರಿಟ್ಟುಕೊಂಡು ಬರೆಯುತಲಿದ್ದ ಹಿರೀಕರನ್ನು ಅನುಕರಿಸುತ್ತ, ಊರ ಹೆಸರನ್ನು ಲಗತ್ತಿಸಿಕೊಂಡೆವು. ಆದರೆ ಊರಿನ ಕುರುಹು, ಅದರಿಂದ ದೂರಹೋದಂತೆಲ್ಲ ಕಾಡುವ ಪರಿ ಎಷ್ಟು ಸಂಕೀರ್ಣ ಎಂಬುದು ಬಳಿಕ ಹೊಳೆಯುತ್ತ ಹೋಯಿತು. ನಾನು ವಿದ್ಯಾಭ್ಯಾಸಕ್ಕಾಗಿ ಕಾವೇರಿ ದಡದ ಮೈಸೂರಿಗೆ ಹೋದೆ. ನೌಕರಿ ಶಿವಮೊಗ್ಗೆಯಲ್ಲಿ ಸಿಕ್ಕಿತು-ಅದು ತುಂಗಾಸೀಮೆ. ಬಳಿಕ ತುಂಗಭದ್ರೆಯ ಮಡಿಲಿಗೆ ಬಂದುಬಿದ್ದೆ. ನನ್ನ ಬಾಳಿನಲ್ಲಿ ನದಿ ಪ್ರದೇಶಗಳು ಹೇಗೋ ತೊಡಕಿಕೊಂಡಿವೆ. ಹೊಸಪೇಟೆಯಲ್ಲಿ ಈಗಿರುವ ಮನೆಗೆ ಸಮೀಪದಲ್ಲೆ ತುಂಗಭದ್ರೆಯ ಎಡದಂಡೆ ಕಾಲುವೆಯಿದ್ದು, ಅದರಲ್ಲಿ ಹರಿವ ನೀರನ್ನು ನೋಡುವಾಗ, ಇದರಲ್ಲಿ ನಮ್ಮ ಕೆರೆಗಳಿಂದ ಕೋಡಿಬಿದ್ದು ಹೊಳೆಸೇರಿದ ನೀರಿನ ಪಾಲೂ ಇರಬಹುದೆಂದು ಪುಳಕಿತನಾಗುತ್ತೇನೆ. ಹುಟ್ಟಿದ ಪ್ರದೇಶದ ಮಾಯೆ ಹಲವು ನೆಪಗಳಲ್ಲಿ ಹಿಂಬಾಲಿಸಿ ಬರುತ್ತದೆ. ಅದರಲ್ಲೂ ಕರ್ಣಕವಚದಂತೆ ನನ್ನ ನಾಮಕ್ಕೆ ಅಂಟಿಕೊಂಡಿರುವ ಕೆರೆಯ ಕುರುಹು, ಬಾಲ್ಯದ ಸುಪ್ತ ನೆನಪುಗಳನ್ನು ಸದಾ ಬಡಿದೆಬ್ಬಿಸುತ್ತದೆ. ನಾನು ಆಗಾಗ್ಗೆ ಬರೆಯುವ ಸಣ್ಣಕತೆ ಮತ್ತು ಲಲಿತ ಪ್ರಬಂಧಗಳಲ್ಲಿ, ನಮ್ಮ ಕಡೆಯ ಪಾತ್ರಗಳು ನಮ್ಮ ಸೀಮೆಯ ಭಾಷೆಯನ್ನಾಡುತ್ತ ಪ್ರತ್ಯಕ್ಷವಾಗುತ್ತವೆ. ಊರಭಾಷೆ, ಕುಡಿದು ಬೆಳೆದ ನೀರನಷ್ಟೇ ಉಂಡು ಬೆಳೆದ ಊಟದಷ್ಟೇ ಭಾವನಾತ್ಮಕ ಸಂಗತಿ.

ನಾನು, ನಮ್ಮ ಸೀಮೆಯ ಕನ್ನಡ ನುಡಿಯ ವಿಶಿಷ್ಟಲಯಗಳನ್ನು ಮೊದಲು ಕೇಳಿಸಿಕೊಂಡಿದ್ದು ಶಾಲೆಯಲ್ಲಲ್ಲ; ಬೀದಿಯಲ್ಲಿ, ಸಂತೆಯಲ್ಲಿ, ಹೊಲದಲ್ಲಿ, ಅಪ್ಪ ಕೆಲಸ ಮಾಡುತ್ತಿದ್ದ ಕುಲುಮೆ ಮನೆಯಲ್ಲಿ. ಕನ್ನಡ ತೆಲುಗು ತಮಿಳು ಹೀಗೆ ವಿಭಿನ್ನ ಭಾಷೆಯಾಡುವ ಬೇರೆಬೇರೆ ಜಾತಿಯ ಕುಟುಂಬಗಳ ನಡುವೆ ನಾವು ಬೆಳೆದೆವು. ಮನೆಯ ಹಿಂದಿನ ಬೀದಿ ಲಿಂಗಾಯತರದಾಗಿದ್ದು, ನಮ್ಮ-ಅವರ ಹಿತ್ತಲುಗಳ ನಡುವೆ ಸೋರೆ ಹಬ್ಬಿಸಿದ ಬೇಲಿಯಿರುತ್ತಿತ್ತು. ಬೇಲಿಯ ಆಚೀಚೆ ನಿಂತು ನಾವು ಮಾತಾಡುತ್ತಿದ್ದೆವು. ನಮ್ಮೂರ ಲಿಂಗಾಯತರಾದವರೂ ನಮ್ಮಂತೆ ಉರ್ದು ಮಾತಾಡುತ್ತಿದ್ದರು. ಅಪ್ಪ-ಅಮ್ಮನ ಗೆಳೆಯರು ಸಹ ನಾನಾ ಭಾಷೆಗೆ ಸೇರಿದವರಾಗಿದ್ದರು. ನಮ್ಮ ಕುಟುಂಬಕ್ಕೆ ಬಹಳ ಆಪ್ತವಾಗಿದ್ದುದು ಬೆಟ್ಟದಾವರೆಕೆರೆಯ ಒಂದು ಲಿಂಗಾಯತ ಕುಟುಂಬ. ಮಕ್ಕಳಿಲ್ಲದ ಪಾರ್ವತಕ್ಕ ನನ್ನನ್ನು ಎಳವೆಯಲ್ಲಿ ತನ್ನ ಮನೆಯಲ್ಲಿಟ್ಟುಕೊಂಡು ಸಾಕಿದಳು. ಅವಳ ಕನ್ನಡ ಅದೆಷ್ಟು ಒಗರಿನಿಂದ ಕೂಡಿರುತ್ತಿತ್ತು! ನಮ್ಮ ಕುಲುಮೆಗೆ ತರೀಕೆರೆ ಅಜುಬಾಜಿನ ಇಪ್ಪತ್ತು ಹಳ್ಳಿಯ ರೈತರು ಬರುತ್ತಿದ್ದರು. ಅವರು ತಮ್ಮ ಕುಡ ಕುಳಗಳು ಸಿದ್ಧವಾಗುವವರೆಗೆ ಅಥವಾ ಗಾಡಿಗೆ ಹಳಿಕಟ್ಟುವ ಕೆಲಸ ಮುಗಿಯುವವರೆಗೆ ಅಪ್ಪನ ಜತೆ ಹರಟುತ್ತಿದ್ದರು. ಬೀಡಿಯಿಂದ ಹಿಡಿದು ಇಂದಿರಾಗಾಂಧಿಯ ತನಕ ವಿಷಯಗಳು ಚರ್ಚೆಗೆ ಬಂದು, ಕುಲುಮೆ ಮನೆ ಸಂಸತ್ತಾಗುತ್ತಿತ್ತು. ತಿದಿ ಎಳೆಯುತ್ತ ನಾನು ಅವನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದೆ. ಅವುಗಳಲ್ಲಿ ಬೇರೆಬೇರೆ ವೃತ್ತಿಗೆ ಸಂಬಂಧಿಸಿದ ಶಬ್ದಗಳು ವಿಶೇಷವಾಗಿದ್ದವು. ನನ್ನ ಅಜ್ಜಿ ಮತ್ತು ಅಮ್ಮ ಕನಲಿದಾಗ, ಚೂಪಾದ ಕನ್ನಡದ ಗಾದೆ ಮತ್ತು ಬೈಗುಳಗಳನ್ನು ಹೆಕ್ಕಿ ತೆಗೆದು ಎದುರಾಳಿಗಳ ಮೇಲೆ ಪ್ರಯೋಗಿಸುತ್ತಿದ್ದರು. ಭಾಷೆ ಮತ್ತು ಧರ್ಮದ ವಿಷಯದಲ್ಲಿ ನಾನು ಜಾತ್ಯತೀತತೆಯ ಮೊದಲ ಪಾಠಗಳ ಕಲಿತಿದ್ದು ಹೀಗೆ ಹರಟೆ ಜಗಳ ಪ್ರೀತಿಯ ಸನ್ನಿವೇಶಗಳಲ್ಲಿ.

ಈ ಕಾರಣದಿಂದ, ಮನೆಮಾತು ಉರ್ದುವಾದರೂ ಬೀದಿಯಲ್ಲಿ ಕಲಿತ ಕನ್ನಡವು ನನ್ನ ಪಾಲಿಗೆ ಲೋಕ ಗ್ರಹಿಸುವ, ಚಿಂತನೆ ಮಾಡುವ, ಪರಿಭಾವಿಸುವ, ಭಾವನೆ, ಚಿಂತನೆ ಅನುಭವಗಳನ್ನು ಹಂಚಿಕೊಳ್ಳುವ ಅಭಿವ್ಯಕ್ತಿ ಮಾಧ್ಯಮವಾಯಿತು. ನಾನು ವಿಶ್ವವಿದ್ಯಾಲಯ ಸೇರಿ, ಸಂಶೋಧನೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡು ಬಳಸುತ್ತಿರುವ ವಿಶ್ಲೇಷಣೆ-ವ್ಯಾಖ್ಯಾನದ ಭಾಷೆಯು, ಕನ್ನಡದ ಸಮಸ್ತ ಸಂಶೋಧಕರೂ ಬಳಸುತ್ತಿರಬಹುದಾದ ವಿದ್ವತ್ತಿನ ಸಾಮಾನ್ಯ ಭಾಷೆ. ಅಲ್ಲಿ ನನ್ನ ಸೀಮೆಯ ಸೊಗಡಿಗೆ ಆಸ್ಪದ ಸಹಜವಾಗಿಯೇ ಕಮ್ಮಿ. ಆದರೆ ನಾನು ತಿರುಗಾಟದ ಅನುಭವ ಬರೆಯಲು ಕೂತರೆ, ಹೇಗೂ ಮೆಲ್ಲಗೆ ನನ್ನ ಬಾಲ್ಯದ ಅನುಭವಗಳೂ ಅದರ ಜತೆ ನಮ್ಮ ಸೀಮೆಯ ನುಡಿಗಟ್ಟುಗಳು ನುಸುಳಲು ಆರಂಭಿಸುತ್ತವೆ. ಬಹುಶಃ ಕತೆ ಕಾದಂಬರಿಯ ಭಿತ್ತಿಯಲ್ಲಿ ಪಾತ್ರಗಳನ್ನು ಸೃಷ್ಟಿಸಿಕೊಳ್ಳದ ಹೊರತು ಯಾವುದೇ ಸೀಮೆಯ ಭಾಷೆ ತನ್ನೆಲ್ಲ ಸೊಕ್ಕಿನಲ್ಲಿ ವೈವಿಧ್ಯದಲ್ಲಿ ಜೀವಂತಿಕೆಯಲ್ಲಿ ಅವತರಿಸುವುದಿಲ್ಲ. ಆದರೆ ಕತೆ ಕಾದಂಬರಿ ನನಗೆ ಕೈವಶವಾಗಿಲ್ಲ. ಹೀಗಾಗಿ ನಮ್ಮ ಸೀಮೆಯ ಕನ್ನಡವು ನನ್ನ ಅಭಿವ್ಯಕ್ತಿಯ ಹೊರಗೇ ಉಳಿದುಬಿಟ್ಟಿದೆ.

ನಾವು ಹುಟ್ಟಿಬೆಳೆದ ಹಕ್ಕೆ ತೊರೆದು ಹೊಸ ಜಾಗಗಳಿಗೆ ಹೋಗದ ಹೊರತು, ನಮ್ಮ ಸೀಮೆಯ ಜನಜೀವನ, ಭಾಷೆ ಸಂಸ್ಕೃತಿಗಳ ಇತಿಮಿತಿ ವಿಶಿಷ್ಟತೆ ಗೊತ್ತಾಗುವುದಿಲ್ಲ; ವಲಸೆಯು ಹೋದ ಸೀಮೆಯ ವಿಶಿಷ್ಟತೆ ಮಿತಿಯನ್ನೂ ಕಾಣಿಸುತ್ತದೆ. ವಲಸೆಯ ಹೊರತು ನಮ್ಮ ವ್ಯಕ್ತಿತ್ವಕ್ಕೂ ಹೊಸ ಆಯಾಮ ದೊರಕುವುದಿಲ್ಲ. ಆದರೆ ಈ ವ್ಯಕ್ತಿತ್ವ ನಿರ್ಮಾಣದಲ್ಲಿ ಯಾವಾಗಲೂ ಹುಟ್ಟಿಬೆಳೆದ ಸೀಮೆಯ ಅನುಭವ ಮತ್ತು ಭಾಷೆಗಳು ಬುನಾದಿ ರೂಪದಲ್ಲಿರುತ್ತವೆ. ವಲಸೆ ಹೋಗಿ ನೆಲೆಸುವ ಕರ್ಮಭೂಮಿಯು ಜನ್ಮಭೂಮಿಯ ಭಾಷೆಗೆ ಅನುಭವಕ್ಕೆ ಹೊಸ ರೂಪಾಂತರ ಒದಗಿಸುತ್ತದೆ. ಕನ್ನಡದಲ್ಲಿ ತಾವು ಹುಟ್ಟಿ ಬೆಳೆದ ಪರಿಸರದಲ್ಲೇ ಇದ್ದು ಬರೆಹ ಮಾಡಿದವರುಂಟು-ಗುಲ್ವಾಡಿ ವೆಂಕಟರಾವ್, ಕಾರಂತ, ವೈದೇಹಿ, ಶಾಂತರಸರ ತರಹ. ಆದರೆ ಹುಟ್ಟಿದೂರನ್ನು ಬಿಟ್ಟು, ನೆಲೆಸಿದ ಊರಲ್ಲಿದ್ದು ಬರೆದವರೇ ಹೆಚ್ಚು-ಕುವೆಂಪು, ಚಿತ್ತಾಲ, ದೇವನೂರು, ಲಂಕೇಶ್ ತರಹ; ಅನಂತಮೂರ್ತಿ ‘ಸಂಸ್ಕಾರ’ ಬರೆದಿದ್ದು ಇಂಗ್ಲೆಂಡಿನಲ್ಲಿ. ಅನುಭವ ಪಡೆದ ಸ್ಥಳವನ್ನೂ ಅಲ್ಲಿನ ಭಾಷಿಕ ಪರಿಸರವನ್ನೂ ಬಿಟ್ಟು ದೂರಹೋದ ಕಾರಣದಿಂದಲೇ, ಅವುಗಳ ಸೆಳೆತ ಮಾತ್ರವಲ್ಲ, ಅದರೊಳಗಿನ ಮಾಂತ್ರಿಕತೆ ಕೂಡ ಹೆಚ್ಚು ಗಾಢವಾಗಿ ಅವತರಿಸುತ್ತದೆಯೊ ಏನೊ?

ಮಾತುಕತೆ, ಸಂಸ್ಕೃತಿ, ಆಹಾರದ ದೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಯ ಘಟ್ಟಪ್ರದೇಶದಲ್ಲಿ ಒಂದು ಬಗೆಯಿದ್ದರೆ, ಬಯಲು ಸೀಮೆಯ ಭಾಗದಲ್ಲಿ ಇನ್ನೊಂದು ಬಗೆಯಿದೆ. ಅಜ್ಜಂಪುರದಲ್ಲಿ ‘ಏಸ್ ಕೊತಂಬರಿ ಚೀಲಕ್ಕೆ ಬಾಳಿದೀಯೊ ನೀನು?’ ಎಂದು ಜನ ಜಗಳ ಮಾಡುತ್ತಿದ್ದರು. ಜನರನ್ನು ಧಾನ್ಯದ ಚೀಲದ ಜತೆಗಿಟ್ಟು ತೂಕಮಾಡುವುದು ಸೋಜಿಗವಾಗುತ್ತಿತ್ತು. ಇದು ೧೫ ಕಿಮೀ ದೂರದ ಕೆಮ್ಮಣ್ಣಿನ ಜಮೀನುಳ್ಳ ತರೀಕೆರೆಯಲ್ಲಿ ಇರಲಿಲ್ಲ. ಅಜ್ಜಂಪುರವು ಈರುಳ್ಳಿ, ದನಿಯಾ, ಜೋಳ ಬೆಳೆಯುವುದಕ್ಕೆ ಬೇಕಾದ ಎರೆಭೂಮಿ. ಭೂಮಿಗೂ ಬೆಳೆಗೂ ಭಾಷೆಗೂ ಒಳನಂಟಿದೆ. ಒಂದು ಪ್ರದೇಶದ ಭಾಷೆಯ ಸಾಂಸ್ಕೃತಿಕ ವೈಖರಿಯನ್ನು, ಅಮೂರ್ತ ಚಿಂತನೆ ಭಾವನೆಗಳ ಮೇಲೆ ಹುಟ್ಟುವ ಕವಿತೆ ಹೆಚ್ಚಾಗಿ ದುಡಿಸಿಕೊಳ್ಳುವುದಿಲ್ಲ. ಆದರೆ ಸ್ಥಳೀಯ ಅನುಭವ ಪ್ರಧಾನವಾದ ಗದ್ಯಕಥನಗಳು ದುಡಿಸಿಕೊಳ್ಳುತ್ತದೆ. ಈ ಮೂಲಕ ಆಯಾ ಪ್ರದೇಶದ ಬದುಕಿನ ಚಿತ್ರ ಕಟ್ಟಿಕೊಡುತ್ತವೆ. ‘ಮದುಮಗಳು’ ‘ಗ್ರಾಮಾಯಣ’ ‘ನಿಸರ್ಗ’ ‘ಒಡಲಾಳ’ ‘ಬದುಕು’ ‘ಮುಸ್ಸಂಜೆಯ ಕಥಾಪ್ರಸಂಗ’ ‘ಬೆಟ್ಟದಜೀವ’ ಕಾದಂಬರಿಗಳನ್ನು; ಮಾಸ್ತಿ, ಕುಂವೀ, ರಾಘವೇಂದ್ರ ಪಾಟೀಲ, ನಾಗವೇಣಿ, ಮೊಗಳ್ಳಿ, ರಶೀದ್, ವಸುಧೇಂದ್ರ, ನುಗಡೋಣಿಯವರ ಕತೆಗಳನ್ನು; ಬಿ. ಚಂದ್ರೇಗೌಡರ ಅಂಕಣಗಳನ್ನು ಓದುವಾಗ, ಆಯಾ ಲೇಖಕರ ಸೀಮೆಯ ಜನಬದುಕು ಮತ್ತು ಸಂಸ್ಕೃತಿಗಳು, ಅಲ್ಲಿನ ಭಾಷೆಯ ಬಾಗುಬಳುಕುಗಳ ಮೂಲಕ ಪ್ರಕಟವಾಗುವುದನ್ನು ಗಮನಿಸಬಹುದು. ಕನ್ನಡವು ಸಾಂಸ್ಕೃತಿಕವಾಗಿ ಏಕರೂಪಿಯಲ್ಲ. ಅದಕ್ಕೆ ಬಹರೂಪಿಯಾದ ಪ್ರಾದೇಶಿಕ ಒಳಸ್ತರಗಳಿವೆ. ಈ ಹಿನ್ನೆಲೆಯಲ್ಲಿ ಕನ್ನಡದ ವಿಭಿನ್ನ ಸೀಮೆಯ ಜೀವಂತ ಭಾಷೆಯನ್ನು ದುಡಿಸಿಕೊಳ್ಳಬಲ್ಲ, ಸಂಸ್ಕೃತಿಯನ್ನು ಸೃಜನಶೀಲವಾಗಿ ಮರುಸೃಷ್ಟಿಸಿ ಕೊಡಬಲ್ಲ ಕಥನಗಳು ಎಲ್ಲ ಮೂಲೆಗಳಿಂದಲೂ ಮೂಡಬೇಕಿದೆ. ತರೀಕೆರೆಯ ಸೀಮೆಯ ಕನ್ನಡ ಮತ್ತು (ಹೈದರಾಬಾದ್-ಲಖನೊ-ಬಿಜಾಪುರದ ಉರ್ದುವಿಗಿಂತ ವಿಶಿಷ್ಟವಾಗಿರುವ) ಉರ್ದುವಿನಲ್ಲೂ ಇದು ಸಂಭವಿಸಬೇಕು. ಅದನ್ನು ಮುಂಬರುವ ಯಾವುದೊ ಒಂದು ಪ್ರತಿಭೆ ಸಾಕಾರಗೊಳಿಸಬಹುದು ಎಂದು ಆಶಿಸುವೆ.

ಆದರೆ ಕತೆ-ಕಾದಂಬರಿ ಬರೆಯಲಾಗದ ನಾನು, ನಮ್ಮ ಸೀಮೆಗೆ ಹೋದರೆ ಜನರಾಡುವ ಭಾಷೆಯನ್ನು ಸಂಗೀತದ ಹಾಗೆ ಆಸಕ್ತಿಯಿಂದ ಪ್ರೀತಿಯಿಂದ ಆಲಿಸುತ್ತೇನೆ. ಅದು ನನ್ನ ಬಾಲ್ಯದ ಶಬ್ದಕೋಶವನ್ನೂ ವಾಕ್ಯರಚನೆಯನ್ನೂ ದನಿಯಲ್ಲಿರುವ ಕಾಕನ್ನೂ ಸಜೀವಗೊಳಿಸುತ್ತದೆ; ಆಗ ತುಂಗಭದ್ರೆಯ ಬಾಗಿನ ತೆಗೆದುಕೊಂಡು ಭದ್ರೆಗೆ ಅರ್ಪಿಸಲು ಹೋದಂತೆ ಆನಂದವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...