ದು.ಸರಸ್ವತಿ |
ಬ್ರಾಹ್ಮಿನಿಕಲ್ ಪೇಟ್ರಿಯಾರ್ಕಿ ಅನ್ನುವ ಕಾನ್ಸೆಪ್ಟನ್ನು ಮೊದಲು ಕೇಳಿದ್ದು ಉಮಾ ಚಕ್ರವರ್ತಿಯವರ ಜಂಡರಿಂಗ್ ಕಾಸ್ಟ್ ಎನ್ನುವ ಪುಸ್ತಕದಲ್ಲಿ. ಮಂಡಲ್ ಆಯೋಗ ವರದಿ ಜಾರಿಯಾದ ನಂತರ ದೇಶ ಹೊತ್ತಿ ಉರಿವಾಗ ಕೆಲವು ಹೆಣ್ಣು ಮಕ್ಕಳು, ಐಎಎಸ್, ಐಪಿಎಸ್ ಆಫೀಸರ್ ಗಂಡುಗಳು ಸಿಗುವುದಿಲ್ಲ ಎಂದು ಪ್ಲೆಕಾರ್ಡ್ ಹಿಡಿದು ನಿಂತಿದ್ದರು. ಅಂದರೆ ರಿಸರ್ವೇಶನ್ ಇದ್ರೆ ನಾವು ಮದುವೆ ಆಗಲು ಮೇಲ್ಜಾತಿ ಆಫೀಸರ್ಗಳು ಸಿಗುವುದಿಲ್ಲ ಎಂದು ಪರೋಕ್ಷವಾಗಿ ಮೀಸಲಾತಿಯ ವಿರುದ್ಧ ದನಿ ಎತ್ತಿದ್ದರು. ಮಹಿಳೆಯರೆಲ್ಲ ದಲಿತರು, ಶೋಷಿತರು ಎಂದು ಹೋರಾಟದಲ್ಲಿದ್ದ ಮಹಿಳಾ ಚಳುವಳಿಗೆ ಇದು ದೊಡ್ಡ ಸವಾಲಾಗಿ ಎದುರಾಯಿತು. ಈ ಸಂದರ್ಭದಲ್ಲಿ ಉಮಾ ಚಕ್ರವರ್ತಿ ‘ಜೆಂಡರಿಂಗ್ ಕಾಸ್ಟ್’ ಪುಸ್ತಕ ಬರೆದರು. ಮಹಾರಾಷ್ಟ್ರದ ದಲಿತ ಸ್ತ್ರೀವಾದಿಗಳು ಅಂಬೇಡ್ಕರ್ ಮತ್ತು ಮಹಿಳೆ ಬಗ್ಗೆ ತುಂಬಾ ಆಳವಾದ ಅಧ್ಯಯನ ಮಾಡಿದರು. ಆಗ, ಅಂಬೇಡ್ಕರ್ ಅವರ ಜಾತಿ ವಿನಾಶ ಚಳುವಳಿಯ ಪರಂಪರೆ ಅಂದರೆ, ಲಿಂಗ ತಾರತಮ್ಯದ ವಿರುದ್ಧವೂ ಹೋರಾಡುವ ಪರಂಪರೆ; ಅದನ್ನ ಯಾಕೆ ಮಹಿಳಾ ಚಳುವಳಿಗಳು ಗುರುತಿಸಲೇ ಇಲ್ಲ ಎಂದು ಮೊದಲನೇ ಬಾರಿ ಎಲ್ಲರೂ ಆಲೋಚಿಸುವಂತಾಯಿತು. ಜ್ಯೋತಿ ಬಾ ಪುಲೆ, ಸಾವಿತ್ರಿ ಬಾ ಪುಲೆ, ಅಂಬೇಡ್ಕರ್ರ ವಿಚಾರಗಳನ್ನು ಕುರಿತ ಪುಸ್ತಕಗಳು ಬಂದವು. ಅಂಬೇಡ್ಕರ್ ಮತ್ತು ಮಹಿಳೆ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಲಾಯಿತು. ಈ ಸಂದರ್ಭದಲ್ಲಿ ಬ್ರಾಹ್ಮಣಿಕೆಯ ಪಿತೃಪ್ರಧಾನತೆ ಎಂಬ ಪರಿಕಲ್ಪನೆ ನಮಗೆಲ್ಲ ಸರಿಯಾಗಿ ಅರ್ಥವಾದದ್ದು.
ಈ ಬ್ರಾಹ್ಮಿಣಿಕಲ್ ಪೇಟ್ರಿಯಾರ್ಕಿ ಅನ್ನೋದು ಪಿತೃಪ್ರಧಾನವಾದುದ್ದು ಎಂದು ಎಲ್ಲರಿಗೂ ಗೊತ್ತು. ರಾಜ್ಯವನ್ನು, ಆಸ್ತಿಯನ್ನ ಹಾಗೂ ಎಲ್ಲಾ ಅಧಿಕಾರವನ್ನು ಚಲಾಯಿಸುವಂತಹ, ಗಂಡು ನಾನೇ ಸುಪ್ರೀಂ ಎನ್ನುವ ವ್ಯವಸ್ಥೆ ಇದು. ಬ್ಯಾಹ್ಮಣ್ಯದ ಶ್ರೇಣೀಕರಣದಲ್ಲಿ ಬ್ರಾಹ್ಮಣರು ಜಾತಿ ವ್ಯವಸ್ಥೆಯ ಮೇಲ್ದರ್ಜೆಯ ತುತ್ತ ತುದಿಯಲ್ಲಿದ್ದಾರೆ. ಗಂಡು ಎನ್ನುವ ಶ್ರೇಷ್ಠತೆ, ಮೇಲ್ಜಾತಿ ಎನ್ನುವ ಶ್ರೇಷ್ಠತೆ ಎರಡೂ ಕೂಡಿ ಬ್ರಾಹ್ಮಣ ಶ್ರೇಷ್ಠತೆ ಉತ್ಕೃಷ್ಟ ಮಾದರಿಯಾಗಿ ನಿಲ್ಲುತ್ತದೆ. ಹಾಗಾಗಿ ಎಲ್ಲಾ ದೇವಾಲಯಗಳಲ್ಲಿ ಬ್ರಾಹ್ಮಣ ಗಂಡಸರು ಪೂಜೆ ಮಾಡುತ್ತಾರೆ, ಇತರರು ಕೈ ಮುಗಿದು ನಿಲ್ಲುತ್ತಾರೆ, ದಲಿತರು ಹೊರಗಿರಿಸಲ್ಪಡುತ್ತಾರೆ. ಇದು ಎಲ್ಲ ಸಮುದಾಯಗಳ ಒಳಕ್ಕೂ ಇಳಿದುಬಿಟ್ಟಿದೆ. ಮಾದಿಗರ ದಾಸಯ್ಯರು ಪೂಜೆ ಮಾಡ್ತಾರೆ, ಸಮಗಾರರು ಚರ್ಮದ ಕೆಲಸವನ್ನು ಮಾಡ್ತಾರೆ. ಇನ್ನು ಹೈರಾರ್ಕಿಯಲ್ಲಿ ಎಲ್ಲಾ ಸಮುದಾಯದಲ್ಲೂ ಪುರುಷರು ಮೇಲು ಎನ್ನುವುದೂ ಬೆಳೆದು ಬಂದಿದೆ, ಮೇಲ್ ಹೈರಾರ್ಕಿ, ಬ್ರಾಹ್ಮಿಣಿಕಲ್ ಹೈರಾರ್ಕಿಯ ಆಳದಲ್ಲಿ ಕಾಸ್ಟ್ ಸುಪ್ರಿಮಸಿ ಪ್ರಧಾನವಾಗಿದೆ, ಈ ಮೇಲರಿಮೆಯಲ್ಲಿ ಖಾಸಗಿ ಆಸ್ತಿಯೂ ಸೇರಿಕೊಂಡಿದೆ. ಇದು ಬೌದ್ಧಿಕ ಪವರ್ನೂ ಹೌದು ಮತ್ತೂ ಮೆಟಿರಿಯಲ್ ಪವರ್ ಕೂಡ ಹೌದು. ಅಕಾಡೆಮಿಕ್ ಬಳಕೆಯಲ್ಲಿ ಬ್ರಾಹ್ಮಿಣಿಕಲ್ ಪೇಟ್ರಿಯಾರ್ಕಿ ಅನ್ನೋದು ಬ್ರಾಹ್ಮಣರನ್ನು ವಿರೋಧಿಸುವಂತದ್ದಲ್ಲ, ತಾನೇ ಸುಪ್ರೀಂ ನಾವಿರುವುದೇ ಆಳುವುದಕ್ಕೆ ಎನ್ನುವಂತಹ ವಾದವನ್ನು ಪ್ರಶ್ನಿಸುವಂತದ್ದು. ಈಗ ಮೇಲ್ಜಾತಿ ಎತ್ತಿರುವ ತಕರಾರು ಅಸಮಂಜಸವಾದದ್ದು. ವಿದ್ವತ್ ವಲಯದಲ್ಲಿ ಚರ್ಚೆಯಲ್ಲಿರುವ ಜಾಗತೀಕರಣ, ಆಳುವ ವರ್ಗ, ಫ್ಯೂಡಲಿಸಂ ಎನ್ನುವಂತಹ ಪರಿಕಲ್ಪನೆಗಳನ್ನು ಚರ್ಚೆ ಮಾಡಬೇಡಿ, ಇದರ ಬಗ್ಗೆ ಮಾತನಾಡಬೇಡಿ ಎಂದರೆ ಅದನ್ನೆಲ್ಲ ನಿಲ್ಲಸಲಾಗುತ್ತದೆಯೇ? ಖಂಡಿತಾ ಇಲ್ಲ. ಹಾಗೆಯೆ ಇದು ಕೂಡ. ಬ್ರಾಹ್ಮಣ್ಯದ ವಿರುದ್ಧದ ದನಿಯೇ ಹೊರತು ಮನುಷ್ಯರಾದ ಬ್ರಾಹ್ಮಣರ ವಿರುದ್ಧವಾದುದ್ದಲ್ಲ.