Homeಅಂಕಣಗಳು10% ಮೀಸಲಾತಿಯ ಹೆಸರಲ್ಲಿ  ಮೇಲ್ಜಾತಿ ಬಡವರಿಗೆ ಮೋದಿ ಮೋಸ

10% ಮೀಸಲಾತಿಯ ಹೆಸರಲ್ಲಿ  ಮೇಲ್ಜಾತಿ ಬಡವರಿಗೆ ಮೋದಿ ಮೋಸ

- Advertisement -
‘ಮೇಲ್ಜಾತಿಯ ಬಡವರಿಗೆ 10% ಮೀಸಲಾತಿ’ ಎಂಬ ಹೆಡ್‍ಲೈನ್ ಇಂದು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಮೀಸಲಾತಿಯ ವಿಚಾರದ ಒಳಹೊಕ್ಕು ನೋಡಿದರೆ ಇದು ವಾಸ್ತವದಲ್ಲಿ ಮೇಲ್ಜಾತಿಯ ಬಡವರಿಗೆ ಮಾಡುತ್ತಿರುವ ಮೋಸ ಎಂಬುದು ಸ್ಪಷ್ಟವಾಗಿ ಅರಿವಾಗುತ್ತದೆ. ಕಾನೂನಿನ ಮತ್ತು ಸಂವಿಧಾನದ ಪರೀಕ್ಷೆಯಲ್ಲಿ ಇದು ತೇರ್ಗಡೆ ಹೊಂದುವುದಿಲ್ಲವೆಂಬುದಷ್ಟೇ ಇದಕ್ಕೆ ಕಾರಣವಲ್ಲ. ನಿಜಕ್ಕೂ ಇದರಿಂದ ಮೇಲ್ಜಾತಿ ಬಡವರಿಗೆ ಹಲವು ರೀತಿಯ ಅನ್ಯಾಯಗಳಾಗಲಿವೆ.
ಸರ್ಕಾರದ ಅಥವಾ ಸಮಾಜದಲ್ಲಿ ಲಭ್ಯವಾಗುವ ಯಾವುದೇ ಸೌಲಭ್ಯಗಳನ್ನು ಮೊದಲು ಪಡೆದುಕೊಳ್ಳಲು ಶಕ್ತವಾಗುವುದು ಯಾರಿಗೆ? ಬಲಾಢ್ಯರಿಗೆ. ಇದು ಮೀಸಲಾತಿಗೂ ಅನ್ವಯವಾಗುತ್ತದೆ. ಇಂದು ಶೋಷಿತ ಜಾತಿಗಳಿಗೆ ನೀಡಲಾಗುತ್ತಿರುವ ಮೀಸಲಾತಿಗೂ ಇದೇ ವಾಸ್ತವವೇ? ಹೌದು, ಇದೇ ವಾಸ್ತವ. ಅಸಮಾನವಾದ, ಅಪ್ರಜಾತಾಂತ್ರಿಕವಾದ ಸಾಮಾಜಿಕ ವ್ಯವಸ್ಥೆಯಲ್ಲಿ ಇದು ಸಹಜ. ಆದರೂ, ಅದು ಆಯಾ ಜಾತಿಗಳಿಗೇ ಸಿಗುತ್ತದೆ ಮತ್ತು ಆ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ತಾರತಮ್ಯ, ಶೋಷಣೆ, ದಬ್ಬಾಳಿಕೆಯನ್ನು ಯಾವುದೋ ಪ್ರಮಾಣಕ್ಕೆ ಅನುಭವಿಸಿರುವ ಅವರು ಅದಕ್ಕೆ ಅಷ್ಟರಮಟ್ಟಿಗೆ ಅರ್ಹರಿರುತ್ತಾರೆ. ಆದರೆ ಬಡವರು ಎನ್ನುವ ವ್ಯಾಖ್ಯಾನವನ್ನು ಮಾಡುವುದರಲ್ಲೇ ಹಲವು ಸಮಸ್ಯೆಗಳಿರುತ್ತವೆ. ಅಂಥದ್ದರಲ್ಲಿ ಅಧಿಕೃತವಾಗಿಯೇ ತಿಂಗಳಿಗೆ 66.66 ಸಾವಿರ ಸಂಪಾದನೆಯಿರುವವರೆಲ್ಲರಿಗೂ ಇದು ಅನ್ವಯಿಸುತ್ತದೆ ಎಂದಮೇಲೆ ಕೇಳಬೇಕೇ? ಇದು ಹೆಚ್ಚಿನ ಮುಖಬೆಲೆಯ ನೋಟುಗಳಿದ್ದರೆ ಹೆಚ್ಚೆಚ್ಚು ಕಪ್ಪುಹಣ ಸಂಗ್ರಹಣೆ ಸಾಧ್ಯವೆಂದು 500 ರೂ. 1000 ರೂ.ಗಳ ನೋಟುಗಳನ್ನು ನಿಷೇಧಿಸಿ 2000 ರೂ.ಗಳ ನೋಟು ತಂದ ರೀತಿಯದ್ದು. ಅಂದರೆ ಈಗಾಗಲೇ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದ ‘ಮೇಲ್ಜಾತಿಗಳ ಬಡವರು’ ಈಗ ಈ ಶೇ.10ರಿಂದಲೂ ವಂಚಿತರಾಗುತ್ತಾರೆ.
ಮೀಸಲಾತಿಯೇ ಸಿಗದ ಜನರಲ್ ಕೆಟಗರಿಯವರಿಗೆ ಮಾತ್ರ ಈ ಶೇ.10 ಮೀಸಲಾತಿ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಅಂಥವರು ಎಷ್ಟಿರಬಹುದು? ಶೇ.10 ಮಾತ್ರ. ಏಕೆಂದರೆ, ಗ್ರಾಮೀಣ ಒಕ್ಕಲಿಗರು ಮತ್ತು ಲಿಂಗಾಯಿತ ಉಪಪಂಗಡಗಳಿಗೂ ಕಡಿಮೆ ಆದಾಯದ ಕುಟುಂಬಗಳಿಗೆ ಮೀಸಲಾತಿ ‘3 ಎ’ಯಲ್ಲಿ ಲಭ್ಯವಿದೆ. ಅಂದರೆ, ಒಕ್ಕಲಿಗರಲ್ಲಿ ಬಹುತೇಕರು ಮತ್ತು ಲಿಂಗಾಯಿತರಲ್ಲೂ ಗಣನೀಯ ಭಾಗ ಹೊಸ ಮೀಸಲಾತಿ (ಜಾರಿಗೆ ಬಂದರೆ)ಯಿಂದ ಹೊರಗೇ ಉಳಿಯುತ್ತಾರೆ. ಇದರರ್ಥ, ತಮ್ಮ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಪಡೆದುಕೊಳ್ಳಲಾಗದ ಹಿಂದುಳಿದ ವರ್ಗಗಳಿಗಿಂತ ಜನಸಂಖ್ಯೆಗನುಗುಣವಾದ ಮೀಸಲಾತಿಯನ್ನು ಈ ಶೇ.10ರಷ್ಟು ಸಮುದಾಯಗಳು ಪಡೆದುಕೊಳ್ಳುತ್ತಾರೆ.
ಮೇಲ್ಜಾತಿಗಳ ಬಡವರು ವಾಸ್ತವದಲ್ಲಿ ಕ್ರುದ್ಧರಾಗಿದ್ದಾರೆ. ಶೋಷಿತ ಜಾತಿಗಳ ಬಡವರೂ ಸಂಕಷ್ಟದಲ್ಲಿದ್ದಾರೆ. ಏಕೆಂದರೆ, ದೇಶದಲ್ಲಿ ಸಿಗುತ್ತಿರುವ ಉದ್ಯೋಗಾವಕಾಶಗಳು, ಶಿಕ್ಷಣಾವಕಾಶಗಳು ಕಡಿಮೆಯಾಗುತ್ತಿವೆ. ವಿವಿಧ ರೀತಿಯ ಸಾರ್ವಜನಿಕ ಸಂಪನ್ಮೂಲಗಳು ಹೆಚ್ಚೆಚ್ಚು ಶ್ರೀಮಂತರ ಪಾಲಾಗುತ್ತಿವೆ. ಹಾಗಾಗಿ ಶೋಷಿತ ಜಾತಿಗಳ ಬಡವರು ತಮ್ಮನ್ನೇ ಹಳಿದುಕೊಳ್ಳುತ್ತಾರೆ ಅಥವಾ ಇಡೀ ವ್ಯವಸ್ಥೆಯನ್ನೇ ಬೈದುಕೊಳ್ಳುತ್ತಾರೆ ಅಥವಾ ಎಲ್ಲಾ ಜಾತಿಗಳಲ್ಲಿನ ಬಲಾಢ್ಯರು ಅದನ್ನು ಕಬಳಿಸಿದ್ದಾರೆಂದು ಅಸಹನೆ ಮಾಡಿಕೊಳ್ಳಬಹುದು. ಆದರೆ, ಮೇಲ್ಜಾತಿಗಳ ಬಡವರಿಗೆ ಇದೆಲ್ಲಕ್ಕೂ ಶೋಷಿತ ಜಾತಿಗಳವರೇ ಕಾರಣವೆಂದು ನಂಬಿಸುವ ಪ್ರಯತ್ನ ನಡೆಯುತ್ತಿದೆ.
ಉದಾಹರಣೆಗೆ ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ವಿವಿಧ ಇಲಾಖೆಗಳಲ್ಲಿ ಗ್ರೂಪ್ ಬಿ ಮತ್ತು ಸಿ ವೃಂದದ 2,500 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅದಕ್ಕೆ 18,60,000 ಜನರು ಅರ್ಜಿ ಹಾಕಿದರು. ಒಂದು ವೇಳೆ ಒಬ್ಬರಿಗೂ ಮೀಸಲಾತಿ ಸಿಗದೇ ಇದ್ದರೂ, 18,57,500 ಜನರಿಗೆ ಆ ಉದ್ಯೋಗ ಸಿಗುತ್ತಿರಲಿಲ್ಲ. ಆದರೆ, ಈ ದೊಡ್ಡ ಸಮೂಹದಲ್ಲಿನ ಮೀಸಲಾತಿ ರಹಿತ ಸಮುದಾಯಗಳು (ಕರ್ನಾಟಕದಲ್ಲಿ ಬಹುತೇಕರಿಗೆ ಒಂದಲ್ಲಾ ಒಂದು ರೀತಿಯ ಮೀಸಲಾತಿಯಿದ್ದರೂ, 3 ಎ ಯಲ್ಲಿ ಇರುವ ಪಂಗಡಗಳೂ ಸೇರಿದಂತೆ ಕೆಲವರು ತಮ್ಮನ್ನು ಈ ಗುಂಪಿನ ಜೊತೆಗೆ ಗುರುತಿಸಿಕೊಳ್ಳುತ್ತಾರೆ) ಅದಕ್ಕಾಗಿ ಮೀಸಲಾತಿ ಪಡೆಯುವ ಜಾತಿಗಳನ್ನು, ಅದರಲ್ಲೂ ಪರಿಶಿಷ್ಟ ಜಾತಿ/ಪಂಗಡದ ಸಮುದಾಯದವರನ್ನು ಬೈದುಕೊಳ್ಳುತ್ತಾರೆ. ಹಾಗೆ ನೋಡಿದರೆ, ಆ ಜಾತಿಗಳ ಲಕ್ಷ ಲಕ್ಷ ಅಭ್ಯರ್ಥಿಗಳಿಗೂ ಆ ಉದ್ಯೋಗ ಸಿಕ್ಕಿರುವುದಿಲ್ಲ!
ಹಾಗಾಗಿ ಮೀಸಲಾತಿಯೆಂಬುದು ಶೋಷಿತ ಸಮುದಾಯಗಳಿಗೆ ದಕ್ಕಿಸಿಕೊಟ್ಟಿರುವುದು ಬಹಳ ಕಡಿಮೆಯೇ ಆದರೂ, ಅಸಹನೆಯನ್ನಂತೂ ಹೆಚ್ಚೆಚ್ಚು ಅನುಭವಿಸಬೇಕಿದೆ. ಈ ಅಸಹನೆಯು ತನ್ನಂತೆ ತಾನೇ ಬಂದಿತೆನ್ನುವುದಕ್ಕಿಂತ, ಇದನ್ನು ವ್ಯವಸ್ಥಿತವಾಗಿ ಬೆಳೆಸಲಾಗುತ್ತಿದೆ. ಆ ಕೆಲಸ ಮಾಡಿದವರಲ್ಲಿ ಇಂದು 10% ಮೀಸಲಾತಿಯನ್ನು ತರಲು ಹೊರಟಿರುವವರದ್ದು ಪ್ರಧಾನ ಪಾಲಿದೆ. ಸಂವಿಧಾನ ತಿದ್ದುಪಡಿ ಮಾಡದೇ ತರಲು ಸಾಧ್ಯವಿರದ, ಸಂವಿಧಾನ ತಿದ್ದುಪಡಿ ಮಾಡಲು ಬೇಕಾದಷ್ಟು ಬಹುಮತ ಹೊಂದಿರದೇ ಪ್ರಸ್ತಾಪಿಸಲಾಗುತ್ತಿರುವ ಇದರ ಹಿಂದೆ ಚುನಾವಣೆಗೆ ಮುಂಚೆ ಒಂದಷ್ಟು ಧ್ರುವೀಕರಣವನ್ನು ತರುವ, ಸಮುದಾಯಗಳ ಮಧ್ಯೆ ಒಡಕುಂಟುಮಾಡಲು ಯತ್ನಿಸುವ ಉದ್ದೇಶದ ಬಗ್ಗೆ ಯಾರಿಗೂ ಅನುಮಾನವಿಲ್ಲ.
ಆದರೆ, ಇದರಲ್ಲಿ ಮೇಲ್ಜಾತಿ ಬಡವರ ವಿರುದ್ಧದ ಹುನ್ನಾರವೇನು? ಮೇಲೆ ಹೇಳಿರುವ ಕಾರಣವಲ್ಲದೇ ಇನ್ನೊಂದು ಮುಖ್ಯ ಕಾರಣವಿದೆ. ಎಲ್ಲಾ ಬಡವರಿಗೂ ದಕ್ಕಲೇಬೇಕಾದ ಶಿಕ್ಷಣ, ಆರೋಗ್ಯ, ವಸತಿ ಇತ್ಯಾದಿ ಮೂಲಭೂತ ಅಗತ್ಯಗಳನ್ನು ಕಲ್ಪಿಸಲು ಒದಗಿಸಬೇಕಾದ ಅನುದಾನವನ್ನು ಸರ್ಕಾರಗಳು ಕಡಿಮೆ ಮಾಡುತ್ತಲಿವೆ. ಆ ವಿಚಾರದಲ್ಲಿ ಮೋದಿ ಸರ್ಕಾರವು ಮಿಕ್ಕೆಲ್ಲರಿಗಿಂತ ಒಂದು ಕೈ ಹೆಚ್ಚು ಜನವಿರೋಧಿಯಾಗಿದೆ. ದುಡಿಯುತ್ತಿರುವ ಸಮುದಾಯಗಳಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ, ಉದ್ಯೋಗ ಭದ್ರತೆ ಕಲ್ಪಿಸುವ ವಿಚಾರದಲ್ಲೂ ಈ ಸರ್ಕಾರವು ಜನವಿರೋಧಿಯೇ ಆಗಿದೆ. ರೈತರ ವಿಚಾರದಲ್ಲಂತೂ ಕೇಂದ್ರ ಸರ್ಕಾರವು ಬಹಳ ಕಟುವಾಗಿ ವರ್ತಿಸಿದೆ. ಇವೆಲ್ಲವನ್ನೂ ಸರಿಯಾಗಿ ಮಾಡಿದ್ದೇ ಆಗಿದ್ದಲ್ಲಿ ಮತ್ತು ಉದ್ಯೋಗ ಸೃಷ್ಟಿಗೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದಲ್ಲಿ ಮೇಲ್ಜಾತಿಗಳ ಬಡವರಿಗೆ ಬದುಕು ಕಟ್ಟಿಕೊಳ್ಳುವ ಅವಕಾಶಗಳು ಹೆಚ್ಚಾಗುತ್ತಿದ್ದವು.
ಅದನ್ನು ಮಾಡದ ಸರ್ಕಾರ ಏನು ಮಾಡಬೇಕು? ಜನರ ಗಮನವನ್ನು ಬೇರೆಡೆಗೆ ತಿರುಗಿಸಬೇಕು. ಹುಸಿ ಶತ್ರುಗಳನ್ನು ಸೃಷ್ಟಿಸಿ ಮಿಕ್ಕವರನ್ನು ಎತ್ತಿಕಟ್ಟಬೇಕು. ಈಗ ಅದನ್ನೇ ಮಾಡಲು ಹೊರಟಿದೆ. ಬಹುಶಃ ಇದು ಇಲ್ಲಿಗೇ ನಿಲ್ಲುವುದಿಲ್ಲ. ಜನರನ್ನು ಒಡೆಯಲು, ಪರಸ್ಪರ ಎತ್ತಿಕಟ್ಟಲು ಒಂದಾದ ನಂತರ ಒಂದು ಕ್ರಮಗಳು ಕೇಂದ್ರವನ್ನು ಆಳುತ್ತಿರುವ ಪಕ್ಷ ಮತ್ತು ಅದರ ಪರಿವಾರದಿಂದ ಬರುತ್ತಲೇ ಇರುತ್ತವೆ. ಚುನಾವಣೆಗೆ ಮೊದಲು ಮತ್ತು ನಂತರ ಹರಿದುಬರುವ ಈ ಕುತ್ಸಿತ ಹುನ್ನಾರಗಳನ್ನು ಎದುರಿಸಲು ಬೇಕಾದ ತಯಾರಿಯನ್ನು ದೇಶದ ಪ್ರಜ್ಞಾವಂತ ಜನರು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿಕೊಳ್ಳಬೇಕಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...