Homeಅಂಕಣಗಳುಅರ್ಜೆಂಟೀನಾ ವಸಾಹತು ಮತ್ತು ಆಧುನಿಕ ಇತಿಹಾಸದ ಪರಿಚಯ

ಅರ್ಜೆಂಟೀನಾ ವಸಾಹತು ಮತ್ತು ಆಧುನಿಕ ಇತಿಹಾಸದ ಪರಿಚಯ

- Advertisement -
- Advertisement -

ಹದಿನಾರನೇ ಶತಮಾನದಲ್ಲಿ ಫರ್ಡಿನ್ಯಾಂಡ್ ಮೆಗೆಲ್ಲಾನ್ ಎಂಬ ಪೋರ್ಚುಗೀಸ್ ಜಲಮಾರ್ಗ ಅನ್ವೇಷಕ, ಪ್ರಪಂಚದ ಕೊನೆ ಎಂದು ಕರೆಯಲ್ಪಡುವ ಅರ್ಜೆಂಟೀನ ಮತ್ತು ಚಿಲಿಯ ದೇಶಗಳ ದಕ್ಷಿಣದ ತುದಿ ಟಿಯೆರಾ ಡೆಲ್ ಫ್ಯೂಗೊ ದ್ವೀಪಸಮೂಹಗಳನ್ನು ತಲುಪಿದಾಗ, ಅಲ್ಲಿ ತಾನು ಕಂಡ ಮನುಷ್ಯರನ್ನು ಆಗಿನ ಯುರೋಪಿಯನ್ ಜನರಿಗಿಂತ ಎತ್ತರಕ್ಕಿರುವ ಜನರು ಎಂದು ದಾಖಲಿಸಿದ್ದ. ನಂತರ, ಈ ಪ್ರದೇಶ ಇತಿಹಾಸದ ಅನ್ವೇಷಣೆಯಲ್ಲಿ, ಇದು ಪೂರ್ವ ಶಿಲಾಯುಗದ (ಸುಮಾರು 13000 ವರ್ಷಗಳ ಹಿಂದಿನ) ಕಲೆ ಮತ್ತು ಜನರ ನಾಗರೀಕತೆಯ ಪಳೆಯುಳಿಕೆಯುಳ್ಳ ಪ್ರದೇಶವೆಂದು ಪತ್ತೆಯಾಗಿತ್ತು. ಅದಕ್ಕೆ ಪ್ಯಾಟಗೋನಿಯಾ ಎಂದು ಹೆಸರು ನೀಡಲಾಗಿತ್ತು. ಈಗಿನ ಅರ್ಜೆಂಟೀನದ ಗಡಿಗಳು ಉತ್ತರಕ್ಕೆ ಬೊಲಿವಿಯ, ಪೆರಾಗ್ವೆ ಹಾಗೂ ಬ್ರೆಸಿಲ್, ಪೂರ್ವಕ್ಕೆ ಉರುಗ್ವೆ ಮತ್ತು ಅಟ್ಲ್ಯಾಂಟಿಕ್ ಮಹಾಸಾಗರ, ದಕ್ಷಿಣಕ್ಕೆ ದೊಡ್ಡ ದೊಡ್ಡ ಹಿಮನದಿಗಳು ಹಾಗೂ ಅಂಟಾರ್ಟಿಕ, ಪಶ್ಚಿಮದ ಉದ್ದಗಲಕ್ಕೂ ಪೆಸಿಫಿಕ್ ಮಹಾಸಾಗರವನ್ನು ಬೇರ್ಪಡಿಸುವ ಸಣ್ಣ ಪಟ್ಟಿಯಂತಿರುವ ಚಿಲಿ ದೇಶ ಹಾಗೂ ಅದರ ಮಧ್ಯೆ ಆಂಡೀಸ್ ಪರ್ವತಗಳು.
ಇದು ಇಡೀ ದಕ್ಷಿಣ ಅಮೆರಿಕಾದ ಎರಡನೇ ದೊಡ್ಡ ಪ್ರದೇಶವುಳ್ಳ ಅತ್ಯಂತ ವೈವಿದ್ಯಮಯ ಪ್ರದೇಶ. ನವೋದಯದ ಗುಂಗಿನಲ್ಲಿ ಹೊಸ ಪ್ರಪಂಚವನ್ನು ಹುಡುಕುತ್ತಾ ಹೊರಟ ಯುರೋಪಿನ ವಸಾಹತುಶಾಹಿ ರಾಷ್ಟ್ರಗಳಿಂದ ತನ್ನ ಸ್ವಂತ ನೈಜ ಇತಿಹಾಸ ಕಳೆದುಕೊಂಡ ಒಂದು ಉಪಖಂಡ. “ಅಜೆರ್ಂಟಿನ” ಎಂಬ ಹೆಸರೇ ಒಂದು ವಸಾಹುತುಶಾಹಿ ಮೂಲ ಕಲ್ಪನೆಯ ಸಂಕೇತ. ಲ್ಯಾಟಿನ್ ಭಾಷೆಯಲ್ಲಿ ಬೆಳ್ಳಕ್ಕಿರುವ ಹೊಳೆಯುವ ಬೆಳ್ಳಿಯನ್ನು “ಅಜೆರ್ಂಟುಂ” ಎಂದು ಕರೆಯುತ್ತಾರೆ. ವಸಾಹತುಶಾಹಿ ಶಕ್ತಿಗಳು ಬೆಳ್ಳಿಯನ್ನು ಹುಡುಕಲು ಬಂದ ಪ್ರದೇಶವೇ ಈಗಿನ ಅರ್ಜೆಂಟೀನ. ಆದರೆ ವಿಪರ್ಯಾಸವೆಂದರೆ ಅವರಿಗೆ ಬೆಳ್ಳಿ ಬಿಟ್ಟು ಬೇರೆಲ್ಲ ಖನಿಜಗಳು ಇಲ್ಲಿ ಅವರಿಗೆ ಸಿಗುತ್ತದೆ. ಆದರೆ ಅರ್ಜೆಂಟೀನ ಹೆಸರು ಮಾತ್ರ ಉಳಿದುಕೊಳ್ಳುತ್ತದೆ.
ಜಗತ್ತಿನಾದ್ಯಂತ ವಸಾಹತುಶಾಹಿ ಪರಂಪರೆಯು, ಸ್ಥಳೀಯ ಇತಿಹಾಸವನ್ನು ಅಳಿಸಿ ಅತ್ಯಂತ ಕ್ರೂರ ಹಾಗೂ ವಿಚಿತ್ರ ಇತಿಹಾಸವನ್ನು ನಿರ್ಮಿಸುತ್ತಾ ಬಂದಿದೆ. ಆದರೆ ಅದು ಅಮೆರಿಕಾ ಖಂಡದಲ್ಲಿ ಮತ್ತು ಆಸ್ಟ್ರೇಲಿಯ ಖಂಡದಲ್ಲಿ ನಡೆಸಿದ ಮೂಲನಿವಾಸಿಗಳ ಮಾರಣಹೋಮ, ಸ್ಥಳೀಯ ಇತಿಹಾಸದ ಕಗ್ಗೊಲೆಗಳು ಬೇರೆ ಯಾವುದೇ ಇತಿಹಾಸದ ಪುಟಗಳಲ್ಲಿ ಕಂಡುಬರುವುದಿಲ್ಲ. ಜನಪ್ರಿಯ ಕಲ್ಪನೆಯಲ್ಲಿ ಭಾರತೀಯರಿಗೆ ಅರ್ಜೆಂಟೀನ ಎಂದೊಡನೆ ಬಂಡಾಯ ಮತ್ತು ಚಿರಕ್ರಾಂತಿಯ ಪ್ರತೀಕವಾಗಿರುವ ಚೆ ಗುವೆರಾ ಹುಟ್ಟಿದ ನಾಡು. ಬ್ರೆಜಿóಲ್‍ನ್ ಪೆಲೆ ನಂತರ ಫುಟ್ಬಾಲ್ ಮಾಂತ್ರಿಕ ಎಂದೇ ಪ್ರಸಿದ್ಧಿಯಾಗಿರುವ ಡಿಯಾಗೊ ಮಾರೋಡೋನ ಹಾಗೂ ಈಗಿನ ಲಿಯೋನೆಲ್ ಮೆಸ್ಸಿ ಹೆಸರುಗಳು ಮೊದಲಿಗೆ ಬರುತ್ತವೆ. ಆದರೆ ಇದರ ವಸಾಹತು ವಾಸ್ತವಿಕ ಇತಿಹಾಸ ನಮ್ಮದೇ ದೇಶದ ದಲಿತ, ಆದಿವಾಸಿ, ಹಾಗೂ ಪ್ರಪಂಚದ ಎಲ್ಲಾ ಮೂಲನಿವಾಸಿ, ಆದಿವಾಸಿ, ಬುಡಕಟ್ಟು ಇತಿಹಾಸಗಳ ಕಗ್ಗೊಲೆಗಳ ಹಾಗೆ ನಮ್ಮನ್ನು ಸದಾ ಕಾಡುವ ದುಃಸ್ವಪ್ನದಂತಿದೆ.
ಇಲ್ಲಿ ಸ್ಥಳೀಯವಾಗಿ ಒಂದು ಪ್ರಸಿದ್ದ ಮಾತಿದೆ. “ಅಜೆರ್ಂಟೆನೀಯರು ಬೋಟು ಹಾಗೂ ಹಡಗುಗಳ ವಂಶಸ್ಥರು” ಎಂದು. ಏಕೆಂದರೆ ಇಲ್ಲಿನ ಇತಿಹಾಸವು ಯುರೋಪಿಯನ್ ವಸಾಹತುಶಾಹಿಗಳಿಂದ ಆಕ್ರಮಣ, ಸ್ವಾತಂತ್ರ್ಯದ ಹೋರಾಟಗಳು, ಒಂದು ವಸಾಹತು ಶಕ್ತಿಯಿಂದ ಇನ್ನೊಂದು ವಸಾಹತು ಶಕ್ತಿಗೆ ಅಧಿಕಾರದ ಹಸ್ತಾಂತರ ಇವೆಲ್ಲವನ್ನೂ ಒಳಗೊಂಡಿರುವಂಥದ್ದು. ಪೋರ್ಚುಗೀಸ್, ಸ್ಪೇನ್, ಫ್ರೆಂಚ್, ಬ್ರಿಟಿಷ್ ಹಾಗೂ ಇನ್ನಿತರೆ ಯುರೋಪ್ ರಾಷ್ಟ್ರಗಳು ಆಳುತ್ತಾ ಬಂದು ಈಗ ದಕ್ಷಿಣ ಅಮೆರಿಕಾದಲ್ಲೇ ಅತ್ಯಂತ ಹೆಚ್ಚು ಬಿಳಿಯ ಜನಸಂಖ್ಯೆ ಉಳ್ಳ ದೇಶವಾಗಿದೆ. 62% ಜನಸಂಖ್ಯೆ ಇಟಲಿ ಮೂಲದಿಂದ ಬಂದವರಾದರೆ, 17% ಫ್ರೆಂಚ್, 8% ಜರ್ಮನ್ ಹಾಗೂ ಮಿಕ್ಕವರು ಯೂರೋಪಿನಿಂದ ವಲಸೆ ಬಂದವರಾಗಿದ್ದಾರೆ. ಬ್ಯೂನಸ್ ಐರಿಸ್ ಇದರ ರಾಜಧಾನಿ ಹಾಗೂ ಇದರ ಒಟ್ಟು ಜನಸಂಖ್ಯೆ – 2011ರ ಪ್ರಕಾರ – 4.4 ಕೋಟಿ, ದಕ್ಷಿಣ ಅಮೆರಿಕಾದಲ್ಲೇ, ಬ್ರೆಜಿಲ್ ನಂತರ ಎರಡನೇ ದೊಡ್ಡ ಜನಸಂಖ್ಯೆಯುಳ್ಳ ದೇಶ. 16ನೇ ಶತಮಾನದಿಂದ 19ನೇ ಶತಮಾನದವರೆಗೂ ಮೂರನೇ ಒಂದರಷ್ಟು ಇದ್ದ ಗುಲಾಮಿ ಕರಿಯರ ಜನಸಂಖ್ಯೆ ಇತ್ತು. ಆದರೆ ಸ್ವಾತಂತ್ರದ ನಂತರ ಇವರು ಬ್ರೆಜಿಲ್‍ಗೆ ವಲಸೆ ಹೋಗುವಂತಾಯಿತು. ಈಗ ಆದಿವಾಸಿ, ಕಪ್ಪು ವರ್ಣೀಯರ ಸಂಖ್ಯೆ 3%ರಷ್ಟಿದೆ. ಆದರೂ ಕಪ್ಪು ಜನರ ಕಲೆ ಹಾಗೂ ಟ್ಯಾಂಗೊ ಅರ್ಜೆಂಟೀನಗೆ ತನ್ನದೇ ಮಹತ್ವವನ್ನು ನೀಡಿದೆ. ಫುಟ್ಬಾಲ್ ಮತ್ತು ಬ್ಯಾಸ್ಕೆಟ್ಬಾಲ್ ಇಲ್ಲಿಯ ಜನಪ್ರಿಯ ಆಟಗಳು. ಬೀಫ್, ವೈನ್ ಹಾಗೂ ಬೊರೊನ್ ಇಲ್ಲಿಂದ ಹೆಚ್ಚಾಗಿ ರಫ್ತಾಗುವ ಸರಕುಗಳು.

ಆಧುನಿಕ ಅರ್ಜೆಂಟೀನಾ ಮತ್ತು ಅದರ ‘ಸುವರ್ಣ ಯುಗ’
ಅಜೆರ್ಂಟೀನಾದ ಆಧುನಿಕ ಇತಿಹಾಸವೇ ಒಂದು ಬಿಕ್ಕಟ್ಟಿನಿಂದ ಇನ್ನೊಂದು ಬಿಕ್ಕಟ್ಟಿನೆಡೆಗೆ ಹೊರಳಿಕೊಳ್ಳುವುದಾಗಿದೆ. ಜೊತೆಗೆ ಕಬ್ಬಿಣದ ಕಟ್ಟಳೆಯ ಆರ್ಥಿಕ ವ್ಯವಸ್ಥೆಯಿಂದ ಆಳುತ್ತಿರುವ ಆಳುವ ವರ್ಗ ಹಾಗೂ ತನ್ನ ವಿಮೋಚನಾ ಹಕ್ಕುಗಳಿಗಾಗಿ ಹೋರಾಟ ಮಾಡುವ ದುಡಿಯುವ ವರ್ಗ. ಅರ್ಜೆಂಟೀನದ ಮುಖ್ಯ ವಹಿವಾಟು ಕೃಷಿ ಮತ್ತು ದನದ ಮಾಂಸದ ರಫ್ತು. ಇಲ್ಲಿನ ಆಳುವ ವರ್ಗವೆಂದರೆ ವಸಾಹತು ಮತ್ತು ಸಾಮ್ರಾಜ್ಯಶಾಹಿ ಬೆಂಬಲಿತ ದೊಡ್ಡ ದೊಡ್ಡ ಭೂಮಾಲೀಕರು ಮತ್ತು ದಯನೀಯವಾಗಿ ಬದುಕುತ್ತಿದ್ದ ಅಸಂಘಟಿತ ಕೃಷಿ ಕೂಲಿಕಾರ್ಮಿಕರು. ಇದು 1914ರ ವೇಳೆಗೆ ಪೂರ್ಣವಾಗಿ ವಿಸ್ತಾರಗೊಂಡು ಕೃಷಿ ಪೂರಕ ಮಾಂಸ ಸಂಸ್ಕರಣಾ ಘಟಕಗಳು, ಸರಕು ಸಾಗಣೆ, ರೈಲು ಮಾರ್ಗಗಳು, ಬಂದರುಗಳ ಕೈಗಾರಿಕೆಗಳು ಸ್ಥಾಪನೆಯಾಗಿದ್ದವು. ಇದರಿಂದ ಕರಾವಳಿ ಮತ್ತು ಕೆಲವು ನಗರಗಳಲ್ಲಿ ಯಥಾಸ್ಥಿತಿವಾದವನ್ನು ಪ್ರಶ್ನಿಸುವ ಮಧ್ಯಮವರ್ಗ ಮತ್ತು ಬಿಡಿ ಬಿಡಿಯಾದ ಸಂಘಟಿತ ಕಾರ್ಮಿಕ ವರ್ಗಗಳು ಹುಟ್ಟಿಕೊಂಡವು. ಇವು ಮುಂದೆ ಆಳುವ ವರ್ಗ ಮತ್ತು ದುಡಿಯುವ ವರ್ಗದ ಸಂಘರ್ಷಕ್ಕೆ ನಾಂದಿಯಾಯಿತು. ಅರ್ಜೆಂಟೀನದ ಆಧುನಿಕ ಇತಿಹಾಸ ಶುರುವಾಗುವುದೇ ಇಲ್ಲಿಂದ. ಇಲ್ಲಿ ಹಳೆಯ ಬಲಿಷ್ಟ ವಸಾಹತು ಕೃಷಿ ಕೇಂದ್ರಿತ ಭೂಮಾಲೀಕ ವ್ಯಾಪಾರಿ ಆಳುವ ವರ್ಗ ಮತ್ತು ಕೈಗಾರಿಕೆಗಳನ್ನು ಉತ್ತೇಜಿಸುವ ಹೊಸ ಆಳುವ ವರ್ಗವಿದೆ. ದುಡಿಯುವ ವರ್ಗ ರೂಪುಗೊಂಡಿರುವುದು ಹೀಗೆ. 1914ರ ಹೊತ್ತಿಗೆ ಇನ್ನು ಸಾಧ್ಯವಿಲ್ಲದಷ್ಟು ವಿಸ್ತಾರಗೊಂಡಿದ್ದ ಕೃಷಿ ವ್ಯವಹಾರದಲ್ಲಿದ್ದವರು ಮತ್ತು ಅಸಂಘಟಿತ ಕೂಲಿಕಾರ್ಮಿಕರಿಂದ ಸಂಘಟಿತ ಕಾರ್ಮಿಕರಾಗುತ್ತಿದ್ದ ವiಧ್ಯಮ ದುಡಿಯುವ ವರ್ಗ.
ಇದೇ ಸಮಯದಲ್ಲಿ ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳಿಗೆ ಭಾರೀ ಬೇಡಿಕೆಯುಂಟಾಗಿ, ರಫ್ತು ಹೆಚ್ಚಾಗಿ ಭೂಮಾಲೀಕರ ಸಂಪತ್ತನ್ನು ಹೆಚ್ಚಿಸಿತು ಮತ್ತು ಹೊಸದಾಗಿ ಸ್ಥಾಪನೆಯಾಗುತ್ತಿದ್ದ ಕೈಗಾರಿಕೆಗಳಿಗೆ ಕಚ್ಛಾ ವಸ್ತುಗಳು ಮತ್ತು ಬಂಡವಾಳದ ಸರಕುಗಳ ಆಮದು ಇಳಿಕೆಯಿಂದ ಹೊಸ ಬಿಕ್ಕಟ್ಟನ್ನು ತೀವ್ರಗೊಳಿಸಿತು. ನಿರುದ್ಯೋಗ ಹೆಚ್ಚಾಯಿತು, ಸಂಬಳ ಕುಸಿಯಿತು ಮತ್ತು ಕಾರ್ಮಿಕರ ಪರಿಸ್ಥಿತಿ ಬಿಗಡಾಯಿಸಿತು. ಸರಣಿ ಮುಷ್ಕರಗಳು, ಅರ್ಜೆಂಟೀನಾದ ಸಾರಿಗೆ ಮತ್ತು ಪಟ್ಟಣಗಳ ಸೇವಾ ಕ್ಷೇತ್ರಗಳನ್ನು ಆವರಿಸಿದವು. ಇದೆ ಸಮಯದಲ್ಲಿ ಕಾರ್ಮಿಕರನ್ನು ಪ್ರತಿನಿಧಿಸುವ ನಾಯಕತ್ವದಲ್ಲೂ ಬದಲಾವಣೆಗಳಾಗುತ್ತಿದ್ದವು. 1905ರಲ್ಲಿ ತನ್ನ 5ನೇ ಮಹಾಧಿವೇಶನದಲ್ಲಿ ತನ್ನನ್ನು ತಾನೇ ಅರಾಜಕವಾದಿ-ಕಮ್ಯೂನಿಸ್ಟ್ ಎಂದು ಘೋಷಿಸಿಕೊಂಡಿದ್ದ ಕಾರ್ಮಿಕ ಸಂಘಟನೆಗಳ ಒಕ್ಕೂಟವಾಗಿದ್ದ ಫೋರ (ಫೆಡರೇಶನ್ ಒಬ್ರೆರ ರೀಜನಲ್ ಅರ್ಜೆಂಟೀನ) 1915ರ ಹೊತ್ತಿಗೆ ತನ್ನ ಕ್ರಾಂತಿಕಾರಿ ನಿಲುವುಗಳನ್ನು ತ್ಯಜಿಸಿತು.
ಇನ್ನೂ ಕ್ರಾಂತಿಕಾರಿ ನಿಲುವುಗಳಲ್ಲಿ ನಂಬಿಕೆ ಇಟ್ಟಿದ್ದ ಕಾರ್ಮಿಕ ಒಕ್ಕೂಟಗಳು ತಮ್ಮನ್ನು ತಾವೇ ಫೋರ 5 ಎಂಬ ಹೆಸರನ್ನು ಮುಂದುವರೆಸಿಕೊಂಡು ಬಂದವು. ಕಾರ್ಮಿಕರ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವಾಗಲೇ ರಶಿಯ ಕ್ರಾಂತಿಯ ಸುದ್ದಿ, ಫೋರ 5ಅನ್ನು ಮುಷ್ಕರಗಳು ಮತ್ತು ಹೋರಾಟಗಳಲ್ಲಿ ಮುಂಚೂಣಿಗೆ ತಂದು ನಿಲ್ಲಿಸಿತ್ತು. 1919 ಜನವರಿ ತಿಂಗಳಲ್ಲಿ ದೊಡ್ಡ ದಂಗೆ ರಾಜಧಾನಿ ಬ್ಯೂನಸ್ ಐರಿಸ್‍ನಲ್ಲಿ ಸ್ಪೋಟಗೊಂಡಿತ್ತು. ಪೋಲೀಸ್ ಹಾಗೂ ಲೋಹ ಕಾರ್ಖಾನೆಯಲ್ಲಿನ ಕಾರ್ಮಿಕರ ನಡುವೆ ಆದ ಸಂಘರ್ಷದಿಂದ ಕಾರ್ಮಿಕರ ಸಾವು ಸಂಭವಿಸಿತ್ತು. ಫೋರ-5 ಜನವರಿ 9ಕ್ಕೆ ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಟ್ಟಿತ್ತು. ರಾಜಧಾನಿಯಲ್ಲಿ 2 ಲಕ್ಷ ಶಸ್ತ್ರಸಜ್ಜಿತ ಕಾರ್ಮಿಕರು, ನಾಗರಿಕರು, ಪೋಲೀಸ್ ಹಾಗೂ ವ್ಯವಸ್ಥೆಯನ್ನು ಒಂದು ವಾರಗಳ ಕಾಲ ಬುಡಮೇಲು ಮಾಡಿದ್ದರು. ಇದು ಒಂದು ಕಾರ್ಖಾನೆಯಲ್ಲಿ ನಡೆದ ಘಟನೆಗಿಂತ ಇಡೀ ಅರ್ಜೆಂಟೀನಾದ ಕಾರ್ಮಿಕರ ಅಸಮಾಧಾನ ಹೊರಗೆ ಬಂದಿತ್ತು. ಸೇನೆಯ ಮೂಲಕ ಇದನ್ನು ಹತ್ತಿಕ್ಕಲಾಯಿತು. ಇದೆ ರೀತಿ ಕಾರ್ಮಿಕರ ದಂಗೆಗಳು ಅರ್ಜೆಂಟೀನ ದೇಶದಾದ್ಯಂತ 2 ವರ್ಷಗಳ ಕಾಲ ಸ್ಫೋಟಗೊಂಡವು. ಇದನ್ನು ಪ್ರಭುತ್ವ ದಮನಕಾರಿ ರೀತಿಯಲ್ಲಿ ಹತ್ತಿಕ್ಕಿತು. ಮತ್ತೆ 1921ರ ಜನವರಿಯಲ್ಲಿ ಕಾರ್ಮಿಕ ಸಂಘಟನೆಗಳು ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಟ್ಟಾಗ ಅದನ್ನು ಪ್ರಭುತ್ವ ಕೊಲೆಗಾರನ ಹೀನ ರೀತಿಯಲ್ಲಿ ದಮನಿಸಿತು. ಗ್ರಾಮೀಣ ಪ್ರದೇಶದಲ್ಲಿ ತನ್ನ ಭೂಮಿ ಮತ್ತು ಶಕ್ತಿ ಕಳೆದುಕೊಂಡಿದ್ದ ವಸಾಹತುಷಾಹಿ ಬ್ರಿಟಿಷ್ & ಜರ್ಮನ್ನರು ಹಾಗೂ ಅರ್ಜೆಂಟೀನ ಆಳುವ ವರ್ಗದ ಜನ ನಿಟ್ಟುಸಿರು ಬಿಟ್ಟರು. 1900 ರಿಂದ 1930ರವರೆಗೆ ಅರ್ಜೆಂಟೀನ ಆರ್ಥಿಕತೆ ಚೇತರಿಸಿಕೊಂಡಿತು ಮತ್ತು 1929ರಲ್ಲಲಿ ಜಾಗತಿಕ ಆರ್ಥಿಕತೆ ಬೀಳುವವರೆಗೂ ಅರ್ಜೆಂಟೀನ ಪ್ರಪಂಚದ 10 ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿತ್ತು. ಇದನ್ನು ಅರ್ಜೆಂಟೀನ ಪ್ರಭುತ್ವ ಸುವರ್ಣ ಯುಗ ಎಂದು ಕರೆಯುತ್ತದೆ.

ಮುಂದಿನ ಸಂಚಿಕೆಯಲ್ಲಿ: ಪೆರನಿಸಮ್ ಮತ್ತು ಮಿಲಿಟರೀ ಸರ್ವಾಧಿಕಾರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...