Homeಅಂಕಣಗಳು10% ಮೀಸಲಾತಿಯ ಹೆಸರಲ್ಲಿ  ಮೇಲ್ಜಾತಿ ಬಡವರಿಗೆ ಮೋದಿ ಮೋಸ

10% ಮೀಸಲಾತಿಯ ಹೆಸರಲ್ಲಿ  ಮೇಲ್ಜಾತಿ ಬಡವರಿಗೆ ಮೋದಿ ಮೋಸ

- Advertisement -
‘ಮೇಲ್ಜಾತಿಯ ಬಡವರಿಗೆ 10% ಮೀಸಲಾತಿ’ ಎಂಬ ಹೆಡ್‍ಲೈನ್ ಇಂದು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಮೀಸಲಾತಿಯ ವಿಚಾರದ ಒಳಹೊಕ್ಕು ನೋಡಿದರೆ ಇದು ವಾಸ್ತವದಲ್ಲಿ ಮೇಲ್ಜಾತಿಯ ಬಡವರಿಗೆ ಮಾಡುತ್ತಿರುವ ಮೋಸ ಎಂಬುದು ಸ್ಪಷ್ಟವಾಗಿ ಅರಿವಾಗುತ್ತದೆ. ಕಾನೂನಿನ ಮತ್ತು ಸಂವಿಧಾನದ ಪರೀಕ್ಷೆಯಲ್ಲಿ ಇದು ತೇರ್ಗಡೆ ಹೊಂದುವುದಿಲ್ಲವೆಂಬುದಷ್ಟೇ ಇದಕ್ಕೆ ಕಾರಣವಲ್ಲ. ನಿಜಕ್ಕೂ ಇದರಿಂದ ಮೇಲ್ಜಾತಿ ಬಡವರಿಗೆ ಹಲವು ರೀತಿಯ ಅನ್ಯಾಯಗಳಾಗಲಿವೆ.
ಸರ್ಕಾರದ ಅಥವಾ ಸಮಾಜದಲ್ಲಿ ಲಭ್ಯವಾಗುವ ಯಾವುದೇ ಸೌಲಭ್ಯಗಳನ್ನು ಮೊದಲು ಪಡೆದುಕೊಳ್ಳಲು ಶಕ್ತವಾಗುವುದು ಯಾರಿಗೆ? ಬಲಾಢ್ಯರಿಗೆ. ಇದು ಮೀಸಲಾತಿಗೂ ಅನ್ವಯವಾಗುತ್ತದೆ. ಇಂದು ಶೋಷಿತ ಜಾತಿಗಳಿಗೆ ನೀಡಲಾಗುತ್ತಿರುವ ಮೀಸಲಾತಿಗೂ ಇದೇ ವಾಸ್ತವವೇ? ಹೌದು, ಇದೇ ವಾಸ್ತವ. ಅಸಮಾನವಾದ, ಅಪ್ರಜಾತಾಂತ್ರಿಕವಾದ ಸಾಮಾಜಿಕ ವ್ಯವಸ್ಥೆಯಲ್ಲಿ ಇದು ಸಹಜ. ಆದರೂ, ಅದು ಆಯಾ ಜಾತಿಗಳಿಗೇ ಸಿಗುತ್ತದೆ ಮತ್ತು ಆ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ತಾರತಮ್ಯ, ಶೋಷಣೆ, ದಬ್ಬಾಳಿಕೆಯನ್ನು ಯಾವುದೋ ಪ್ರಮಾಣಕ್ಕೆ ಅನುಭವಿಸಿರುವ ಅವರು ಅದಕ್ಕೆ ಅಷ್ಟರಮಟ್ಟಿಗೆ ಅರ್ಹರಿರುತ್ತಾರೆ. ಆದರೆ ಬಡವರು ಎನ್ನುವ ವ್ಯಾಖ್ಯಾನವನ್ನು ಮಾಡುವುದರಲ್ಲೇ ಹಲವು ಸಮಸ್ಯೆಗಳಿರುತ್ತವೆ. ಅಂಥದ್ದರಲ್ಲಿ ಅಧಿಕೃತವಾಗಿಯೇ ತಿಂಗಳಿಗೆ 66.66 ಸಾವಿರ ಸಂಪಾದನೆಯಿರುವವರೆಲ್ಲರಿಗೂ ಇದು ಅನ್ವಯಿಸುತ್ತದೆ ಎಂದಮೇಲೆ ಕೇಳಬೇಕೇ? ಇದು ಹೆಚ್ಚಿನ ಮುಖಬೆಲೆಯ ನೋಟುಗಳಿದ್ದರೆ ಹೆಚ್ಚೆಚ್ಚು ಕಪ್ಪುಹಣ ಸಂಗ್ರಹಣೆ ಸಾಧ್ಯವೆಂದು 500 ರೂ. 1000 ರೂ.ಗಳ ನೋಟುಗಳನ್ನು ನಿಷೇಧಿಸಿ 2000 ರೂ.ಗಳ ನೋಟು ತಂದ ರೀತಿಯದ್ದು. ಅಂದರೆ ಈಗಾಗಲೇ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದ ‘ಮೇಲ್ಜಾತಿಗಳ ಬಡವರು’ ಈಗ ಈ ಶೇ.10ರಿಂದಲೂ ವಂಚಿತರಾಗುತ್ತಾರೆ.
ಮೀಸಲಾತಿಯೇ ಸಿಗದ ಜನರಲ್ ಕೆಟಗರಿಯವರಿಗೆ ಮಾತ್ರ ಈ ಶೇ.10 ಮೀಸಲಾತಿ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಅಂಥವರು ಎಷ್ಟಿರಬಹುದು? ಶೇ.10 ಮಾತ್ರ. ಏಕೆಂದರೆ, ಗ್ರಾಮೀಣ ಒಕ್ಕಲಿಗರು ಮತ್ತು ಲಿಂಗಾಯಿತ ಉಪಪಂಗಡಗಳಿಗೂ ಕಡಿಮೆ ಆದಾಯದ ಕುಟುಂಬಗಳಿಗೆ ಮೀಸಲಾತಿ ‘3 ಎ’ಯಲ್ಲಿ ಲಭ್ಯವಿದೆ. ಅಂದರೆ, ಒಕ್ಕಲಿಗರಲ್ಲಿ ಬಹುತೇಕರು ಮತ್ತು ಲಿಂಗಾಯಿತರಲ್ಲೂ ಗಣನೀಯ ಭಾಗ ಹೊಸ ಮೀಸಲಾತಿ (ಜಾರಿಗೆ ಬಂದರೆ)ಯಿಂದ ಹೊರಗೇ ಉಳಿಯುತ್ತಾರೆ. ಇದರರ್ಥ, ತಮ್ಮ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಪಡೆದುಕೊಳ್ಳಲಾಗದ ಹಿಂದುಳಿದ ವರ್ಗಗಳಿಗಿಂತ ಜನಸಂಖ್ಯೆಗನುಗುಣವಾದ ಮೀಸಲಾತಿಯನ್ನು ಈ ಶೇ.10ರಷ್ಟು ಸಮುದಾಯಗಳು ಪಡೆದುಕೊಳ್ಳುತ್ತಾರೆ.
ಮೇಲ್ಜಾತಿಗಳ ಬಡವರು ವಾಸ್ತವದಲ್ಲಿ ಕ್ರುದ್ಧರಾಗಿದ್ದಾರೆ. ಶೋಷಿತ ಜಾತಿಗಳ ಬಡವರೂ ಸಂಕಷ್ಟದಲ್ಲಿದ್ದಾರೆ. ಏಕೆಂದರೆ, ದೇಶದಲ್ಲಿ ಸಿಗುತ್ತಿರುವ ಉದ್ಯೋಗಾವಕಾಶಗಳು, ಶಿಕ್ಷಣಾವಕಾಶಗಳು ಕಡಿಮೆಯಾಗುತ್ತಿವೆ. ವಿವಿಧ ರೀತಿಯ ಸಾರ್ವಜನಿಕ ಸಂಪನ್ಮೂಲಗಳು ಹೆಚ್ಚೆಚ್ಚು ಶ್ರೀಮಂತರ ಪಾಲಾಗುತ್ತಿವೆ. ಹಾಗಾಗಿ ಶೋಷಿತ ಜಾತಿಗಳ ಬಡವರು ತಮ್ಮನ್ನೇ ಹಳಿದುಕೊಳ್ಳುತ್ತಾರೆ ಅಥವಾ ಇಡೀ ವ್ಯವಸ್ಥೆಯನ್ನೇ ಬೈದುಕೊಳ್ಳುತ್ತಾರೆ ಅಥವಾ ಎಲ್ಲಾ ಜಾತಿಗಳಲ್ಲಿನ ಬಲಾಢ್ಯರು ಅದನ್ನು ಕಬಳಿಸಿದ್ದಾರೆಂದು ಅಸಹನೆ ಮಾಡಿಕೊಳ್ಳಬಹುದು. ಆದರೆ, ಮೇಲ್ಜಾತಿಗಳ ಬಡವರಿಗೆ ಇದೆಲ್ಲಕ್ಕೂ ಶೋಷಿತ ಜಾತಿಗಳವರೇ ಕಾರಣವೆಂದು ನಂಬಿಸುವ ಪ್ರಯತ್ನ ನಡೆಯುತ್ತಿದೆ.
ಉದಾಹರಣೆಗೆ ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ವಿವಿಧ ಇಲಾಖೆಗಳಲ್ಲಿ ಗ್ರೂಪ್ ಬಿ ಮತ್ತು ಸಿ ವೃಂದದ 2,500 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅದಕ್ಕೆ 18,60,000 ಜನರು ಅರ್ಜಿ ಹಾಕಿದರು. ಒಂದು ವೇಳೆ ಒಬ್ಬರಿಗೂ ಮೀಸಲಾತಿ ಸಿಗದೇ ಇದ್ದರೂ, 18,57,500 ಜನರಿಗೆ ಆ ಉದ್ಯೋಗ ಸಿಗುತ್ತಿರಲಿಲ್ಲ. ಆದರೆ, ಈ ದೊಡ್ಡ ಸಮೂಹದಲ್ಲಿನ ಮೀಸಲಾತಿ ರಹಿತ ಸಮುದಾಯಗಳು (ಕರ್ನಾಟಕದಲ್ಲಿ ಬಹುತೇಕರಿಗೆ ಒಂದಲ್ಲಾ ಒಂದು ರೀತಿಯ ಮೀಸಲಾತಿಯಿದ್ದರೂ, 3 ಎ ಯಲ್ಲಿ ಇರುವ ಪಂಗಡಗಳೂ ಸೇರಿದಂತೆ ಕೆಲವರು ತಮ್ಮನ್ನು ಈ ಗುಂಪಿನ ಜೊತೆಗೆ ಗುರುತಿಸಿಕೊಳ್ಳುತ್ತಾರೆ) ಅದಕ್ಕಾಗಿ ಮೀಸಲಾತಿ ಪಡೆಯುವ ಜಾತಿಗಳನ್ನು, ಅದರಲ್ಲೂ ಪರಿಶಿಷ್ಟ ಜಾತಿ/ಪಂಗಡದ ಸಮುದಾಯದವರನ್ನು ಬೈದುಕೊಳ್ಳುತ್ತಾರೆ. ಹಾಗೆ ನೋಡಿದರೆ, ಆ ಜಾತಿಗಳ ಲಕ್ಷ ಲಕ್ಷ ಅಭ್ಯರ್ಥಿಗಳಿಗೂ ಆ ಉದ್ಯೋಗ ಸಿಕ್ಕಿರುವುದಿಲ್ಲ!
ಹಾಗಾಗಿ ಮೀಸಲಾತಿಯೆಂಬುದು ಶೋಷಿತ ಸಮುದಾಯಗಳಿಗೆ ದಕ್ಕಿಸಿಕೊಟ್ಟಿರುವುದು ಬಹಳ ಕಡಿಮೆಯೇ ಆದರೂ, ಅಸಹನೆಯನ್ನಂತೂ ಹೆಚ್ಚೆಚ್ಚು ಅನುಭವಿಸಬೇಕಿದೆ. ಈ ಅಸಹನೆಯು ತನ್ನಂತೆ ತಾನೇ ಬಂದಿತೆನ್ನುವುದಕ್ಕಿಂತ, ಇದನ್ನು ವ್ಯವಸ್ಥಿತವಾಗಿ ಬೆಳೆಸಲಾಗುತ್ತಿದೆ. ಆ ಕೆಲಸ ಮಾಡಿದವರಲ್ಲಿ ಇಂದು 10% ಮೀಸಲಾತಿಯನ್ನು ತರಲು ಹೊರಟಿರುವವರದ್ದು ಪ್ರಧಾನ ಪಾಲಿದೆ. ಸಂವಿಧಾನ ತಿದ್ದುಪಡಿ ಮಾಡದೇ ತರಲು ಸಾಧ್ಯವಿರದ, ಸಂವಿಧಾನ ತಿದ್ದುಪಡಿ ಮಾಡಲು ಬೇಕಾದಷ್ಟು ಬಹುಮತ ಹೊಂದಿರದೇ ಪ್ರಸ್ತಾಪಿಸಲಾಗುತ್ತಿರುವ ಇದರ ಹಿಂದೆ ಚುನಾವಣೆಗೆ ಮುಂಚೆ ಒಂದಷ್ಟು ಧ್ರುವೀಕರಣವನ್ನು ತರುವ, ಸಮುದಾಯಗಳ ಮಧ್ಯೆ ಒಡಕುಂಟುಮಾಡಲು ಯತ್ನಿಸುವ ಉದ್ದೇಶದ ಬಗ್ಗೆ ಯಾರಿಗೂ ಅನುಮಾನವಿಲ್ಲ.
ಆದರೆ, ಇದರಲ್ಲಿ ಮೇಲ್ಜಾತಿ ಬಡವರ ವಿರುದ್ಧದ ಹುನ್ನಾರವೇನು? ಮೇಲೆ ಹೇಳಿರುವ ಕಾರಣವಲ್ಲದೇ ಇನ್ನೊಂದು ಮುಖ್ಯ ಕಾರಣವಿದೆ. ಎಲ್ಲಾ ಬಡವರಿಗೂ ದಕ್ಕಲೇಬೇಕಾದ ಶಿಕ್ಷಣ, ಆರೋಗ್ಯ, ವಸತಿ ಇತ್ಯಾದಿ ಮೂಲಭೂತ ಅಗತ್ಯಗಳನ್ನು ಕಲ್ಪಿಸಲು ಒದಗಿಸಬೇಕಾದ ಅನುದಾನವನ್ನು ಸರ್ಕಾರಗಳು ಕಡಿಮೆ ಮಾಡುತ್ತಲಿವೆ. ಆ ವಿಚಾರದಲ್ಲಿ ಮೋದಿ ಸರ್ಕಾರವು ಮಿಕ್ಕೆಲ್ಲರಿಗಿಂತ ಒಂದು ಕೈ ಹೆಚ್ಚು ಜನವಿರೋಧಿಯಾಗಿದೆ. ದುಡಿಯುತ್ತಿರುವ ಸಮುದಾಯಗಳಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ, ಉದ್ಯೋಗ ಭದ್ರತೆ ಕಲ್ಪಿಸುವ ವಿಚಾರದಲ್ಲೂ ಈ ಸರ್ಕಾರವು ಜನವಿರೋಧಿಯೇ ಆಗಿದೆ. ರೈತರ ವಿಚಾರದಲ್ಲಂತೂ ಕೇಂದ್ರ ಸರ್ಕಾರವು ಬಹಳ ಕಟುವಾಗಿ ವರ್ತಿಸಿದೆ. ಇವೆಲ್ಲವನ್ನೂ ಸರಿಯಾಗಿ ಮಾಡಿದ್ದೇ ಆಗಿದ್ದಲ್ಲಿ ಮತ್ತು ಉದ್ಯೋಗ ಸೃಷ್ಟಿಗೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದಲ್ಲಿ ಮೇಲ್ಜಾತಿಗಳ ಬಡವರಿಗೆ ಬದುಕು ಕಟ್ಟಿಕೊಳ್ಳುವ ಅವಕಾಶಗಳು ಹೆಚ್ಚಾಗುತ್ತಿದ್ದವು.
ಅದನ್ನು ಮಾಡದ ಸರ್ಕಾರ ಏನು ಮಾಡಬೇಕು? ಜನರ ಗಮನವನ್ನು ಬೇರೆಡೆಗೆ ತಿರುಗಿಸಬೇಕು. ಹುಸಿ ಶತ್ರುಗಳನ್ನು ಸೃಷ್ಟಿಸಿ ಮಿಕ್ಕವರನ್ನು ಎತ್ತಿಕಟ್ಟಬೇಕು. ಈಗ ಅದನ್ನೇ ಮಾಡಲು ಹೊರಟಿದೆ. ಬಹುಶಃ ಇದು ಇಲ್ಲಿಗೇ ನಿಲ್ಲುವುದಿಲ್ಲ. ಜನರನ್ನು ಒಡೆಯಲು, ಪರಸ್ಪರ ಎತ್ತಿಕಟ್ಟಲು ಒಂದಾದ ನಂತರ ಒಂದು ಕ್ರಮಗಳು ಕೇಂದ್ರವನ್ನು ಆಳುತ್ತಿರುವ ಪಕ್ಷ ಮತ್ತು ಅದರ ಪರಿವಾರದಿಂದ ಬರುತ್ತಲೇ ಇರುತ್ತವೆ. ಚುನಾವಣೆಗೆ ಮೊದಲು ಮತ್ತು ನಂತರ ಹರಿದುಬರುವ ಈ ಕುತ್ಸಿತ ಹುನ್ನಾರಗಳನ್ನು ಎದುರಿಸಲು ಬೇಕಾದ ತಯಾರಿಯನ್ನು ದೇಶದ ಪ್ರಜ್ಞಾವಂತ ಜನರು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿಕೊಳ್ಳಬೇಕಿದೆ.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...