Homeಮುಖಪುಟಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ, ಇಂದಿಗೂ..

ಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ, ಇಂದಿಗೂ..

- Advertisement -
- Advertisement -

ಮಹಾತ್ಮಾ ಗಾಂಧಿ ಎಂಬ ಮನುಷ್ಯನನ್ನು ನಾಥುರಾಮ್ ಗೋಡ್ಸೆ ಎಂಬ ಹಿಂದೂ ಒಬ್ಬ ಕೊಲೆಮಾಡಿ (ಜನವರಿ 30, 1948) 73 ವರ್ಷಗಳಾಗಿವೆ. ಎಪ್ಪತ್ತೊಂಭತ್ತು ವರ್ಷತುಂಬಿದ್ದ ಹಣ್ಣು ಮುದುಕ ಗಾಂಧೀಜಿಯವರ ಎದೆಗೆ ಗುಂಡಿಕ್ಕುವ ಮುನ್ನ ಮೂವತ್ತೆಂಟರ ಹರೆಯದ ನಾಥೂರಾಮ್ ವಿನಾಯಕ ಗೋಡ್ಸೆ ಒಮ್ಮೆ ಅವರ ಕಾಲುಮುಟ್ಟಿ ನಮಸ್ಕರಿಸಿದ್ದನಂತೆ. ಅದು ನಟನೆಯಲ್ಲ, ನಿಜವಾದ ಗೌರವ ಸಲ್ಲಿಕೆ ಅಂತ ಗೋಡ್ಸೆ ತನ್ನ ’ನಾನೇಕೆ ಗಾಂಧಿಯನ್ನು ಕೊಂದೆ’ ಎಂಬ ಹೇಳಿಕೆಯಲ್ಲಿ ದಾಖಲಿಸುತ್ತಾನೆ. ಗುಂಡೇಟು ತಿಂದು ಕುಸಿಯುವ ಮುನ್ನ ಗಾಂಧಿ “ಹೇ ರಾಮ್ ಅಂತ ಉದ್ಗರಿಸಿದ್ದರಂತೆ. ಆ ಕುರಿತು ಭಿನ್ನಾಭಿಪ್ರಾಯಗಳಿವೆ. ಕೆಲವರ ಪ್ರಕಾರ ಗಾಂಧಿ ಮೌನವಾಗಿಯೇ ನೆಲಕ್ಕೆ ಕುಸಿದಿದ್ದರು. ಏನೇ ಇರಲಿ. ಒಂದು ವೇಳೆ ಅವರು ಹೇ ರಾಮ್ ಅಂತ ಹೇಳಿದ್ದು ನಿಜವೇ ಆಗಿದ್ದರೆ, ಗುಂಡು ಹಾರಿಸಿ ಕೈಚೆಲ್ಲಿ ನಿಂತಿದ್ದ ಗೋಡ್ಸೆಗೆ ಅದು ಗಾಂಧೀಜಿ ತನ್ನ ಹೆಸರು ಹಿಡಿದು ಪ್ರೀತಿಯಿಂದ ಕರೆದಂತೆ ಕೇಳಿಸಿರಬಹುದು.

1949ರ ನವಂಬರ್ ತಿಂಗಳ 15ನೇ ತಾರೀಖಿನಂದು ಅಂಬಾಲ ಜೈಲಿನಲ್ಲಿ ಗೋಡ್ಸೆ ಯಾವ ಭಾವ ವಿಕಾರವೂ ಇಲ್ಲದೆ ನೇಣುಗಂಬ ಏರಿದ್ದ ಅಂತ ಚರಿತ್ರೆ ದಾಖಲಿಸುತ್ತದೆ. ಗಾಂಧಿ ನಾವೆಲ್ಲ ಅಂದುಕೊಂಡಿರುವ ಗಾಂಧೀಜಿಯೇ ಆಗಿದ್ದಿದ್ದರೆ ಆ ದಿನ ಅವರ ಆತ್ಮ ಗೋರಿಯೊಳಗೆ ವಿಚಿತ್ರವಾಗಿ ಚಡಪಡಿಸಿರುತಿತ್ತು. ಗೋಡ್ಸೆಯನ್ನು ನೇಣಿಗೇರಿಸಬಾರದಿತ್ತು. ಆತನನ್ನು ಕೊಂದದ್ದು ಗಾಂಧೀಜಿಗೆ ಸಮ್ಮತವಾಗಿರುತ್ತಿರಲಿಲ್ಲ ಎನ್ನುವುದು ಅದಕ್ಕೆ ಒಂದು ಕಾರಣ. ಅದಕ್ಕಿಂತ ಮುಖ್ಯವಾದ ಇನ್ನೊಂದು ಕಾರಣವಿದೆ. ತನ್ನ ಕೊನೆಯ ಹೇಳಿಕೆಯಲ್ಲಿ ಗೋಡ್ಸೆ ಹೇಳುತ್ತಾನೆ: “ನಾನು ಗಾಂಧೀಜಿಯನ್ನು ಕೊಂದದ್ದು ಒಂದು ಉದಾತ್ತವಾದ ಉದ್ದೇಶದಿಂದ. ಅದು ಏನೆಂದರೆ ಗಾಂಧೀಜಿ ಇಲ್ಲದ ಭಾರತದ ರಾಜಕೀಯ ಪ್ರಾಯೋಗಿಕವಾಗಿರುತ್ತದೆ, ಗಾಂಧೀಜಿ ಇಲ್ಲದ ಭಾರತದ ರಾಜಕೀಯಕ್ಕೆ ವೈರಿಗಳಿಗೆ ತಿರುಗೇಟು ನೀಡುವ ಶಕ್ತಿ ಬರುತ್ತದೆ. ಗಾಂಧೀಜಿ ಇಲ್ಲದ ಭಾರತ ತನ್ನ ಸೇನಾಬಲದಿಂದ ಸದೃಢವಾಗಿರುತ್ತದೆ. ಗಾಂಧೀಜಿ ಇಲ್ಲದ ಭಾರತದ ಜನ ಹೆಚ್ಚು ವಿವೇಕದಿಂದಲೂ, ವಿವೇಚನೆಯಿಂದಲೂ ವರ್ತಿಸುತ್ತಾರೆ ಎನ್ನುವ ಭರವಸೆ ನನಗಿದೆ.. ಅದಕ್ಕಾಗಿ ಗಾಂಧೀಜಿಯನ್ನು ಕೊಂದೆ..”. ಗೋಡ್ಸೆ ಬದುಕಿ ಗಾಂಧೀಜಿಯ ನಂತರದ ಭಾರತದಲ್ಲಿ ರಾಜಕೀಯ ತೋರಿದ ಪ್ರಾಯೋಗಿಕತೆ, ವಿವೇಕ, ವಿವೇಚನೆ ಇತ್ಯಾದಿಗಳನ್ನು ಕಣ್ಣಾರೆ ಕಾಣಬೇಕಿತ್ತು ಎನ್ನುವ ಕಾರಣಕ್ಕೆ ಆತನನ್ನು ನೇಣಿಗೇರಿಸಬಾರದಿತ್ತು.. ಗಾಂಧೀಜಿ ಇನ್ನೊಂದಷ್ಟು ದಿನ ಬದುಕಿ ಉಳಿದಿದ್ದರೂ ಭಾರತದಲ್ಲಿ ಮುಂದೆ ಏನೇನಾದವೋ ಅವೆಲ್ಲಾ ಆಗುತ್ತಿದ್ದವು. ಅದು ಬೇರೆ ವಿಚಾರ.

ಗಾಂಧೀಜಿಯವರನ್ನು ಕೊಂದ ನಂತರ ಸ್ವತಃ ಗೊಡ್ಸೆಗೆ ಬದುಕುವಾಸೆ ಇರಲಿಲ್ಲ. ಜೈಲಿನ ಬಾಗಿಲು ತೆರೆದಿರಿಸಿದ್ದರೂ ಆತ ಓಡಿ ಹೋಗುತ್ತಿರಲಿಲ್ಲ. ಗಾಂಧೀಜಿಯನ್ನು ನೆನೆದು, ಗಾಂಧೀವಾದಿಗಳ ಒತ್ತಾಯಕ್ಕೆ ಮಣಿದು ತನ್ನನ್ನು ಎಲ್ಲಿ ಕ್ಷಮಿಸಿಬಿಡುತ್ತಾರೋ ಎನ್ನುವ ಆತಂಕ ಗೋಡ್ಸೆಯನ್ನು ಕೊನೆಯತನಕವೂ ಕಾಡಿತ್ತಂತೆ. ಗಾಂಧೀಜಿಗೆ ನಾನು ತೋರದ ಕರುಣೆಯನ್ನು ಸರಕಾರದಿಂದ ನಾನು ಬಯಸುವುದಿಲ್ಲ ಅಂತ ಆತ ಸ್ಪಷ್ಟವಾಗಿ ಹೇಳಿದ್ದ. ಗಾಂಧೀಜಿಯವರ ಕೊಲೆಗಾರ ಎನ್ನುವ ಅವಮಾನವನ್ನು ಹೊತ್ತು ಬದುಕುವುದಕ್ಕಿಂತ ಸಾವು ಎಷ್ಟೋ ಮೇಲು ಅಂತ ಆತ ಗಾಂಧೀಜಿ ನೆಲಕ್ಕುರುಳಿದಾಕ್ಷಣ ನಿರ್ಧರಿಸಿದ್ದ. ಅಷ್ಟೇ ಆಸಕ್ತಿಯ ವಿಚಾರವೆಂದರೆ ಕೊನೆಯ ದಿನಗಳಲ್ಲಿ ಗಾಂಧೀಜಿ ಕೂಡಾ ಜೀವನದಲ್ಲಿ ಆಸಕ್ತಿ ಕಳೆದುಕೊಂಡಿದ್ದರು.

ಒಂದು ಕಾಲದಲ್ಲಿ ತಾನು 125 ವರ್ಷ ಬದುಕಬೇಕೆಂದು ಹೇಳಿದ್ದ ಗಾಂಧೀಜಿಗೆ ದೇಶ ವಿಭಜನೆಯಾಗುತ್ತಲೇ ಇನ್ನು ಶಾಶ್ವತವಾಗಿ ಹೊರಟುಬಿಡಬೇಕು ಎಂಬ ಮನೋಭಾವ ಆವರಿಕೊಂಡಿತ್ತು ಅಂತ ಆ ದಿನಗಳಲ್ಲಿ ಅವರ ಹತ್ತಿರವಿದ್ದ ಅನುಯಾಯಿಗಳು ದಾಖಲಿಸಿದ್ದಾರೆ. ಆದರೆ ಖಾಯಿಲೆ ಬಿದ್ದು ಸಾಯುವುದಕ್ಕಿಂತ ಕೊಲೆಯಾಗುವುದು ಮೇಲು ಎನ್ನುವುದಾಗಿತ್ತಂತೆ ಅವರ ನಿರ್ಧಾರ. “ಇಷ್ಟೆಲ್ಲಾ ಆಗಿ ಕಾಯಿಲೆಯಿಂದ ಸತ್ತರೆ ನಾನ್ಯಾವ ಸೀಮೆಯ ಮಹಾತ್ಮ? ಸತ್ತರೆ ಕೊಲೆಗಾರನ ಧಾಳಿಗೆ ಎದೆಯೊಡ್ಡಿ ರಾಮನಾಮ ಪಠಿಸುತ್ತಾ ಸಾಯಬೇಕು” ಅಂತ ತನ್ನ ಮೊಮ್ಮಗಳಾದ ಮನುಬೆನ್‌ಗೆ ಹೇಳಿದ್ದರಂತೆ. ಹಾಗೆಯೇ ಆಯಿತು. ಹೇಗೂ ಸಾಯಲು ತಯಾರಾಗಿದ್ದ ಗಾಂಧೀಜಿಯನ್ನು ಗೋಡ್ಸೆ ಕೊಂದ. ಜೀವಂತವಾಗಿ ಅಪ್ರಸ್ತುತನಾದ ತಾನು ಸತ್ತು ಪ್ರಸ್ತುತನಾಗಬೇಕೆಂದುಕೊಂಡಿರಬೇಕು ಗಾಂಧೀಜಿ – ಏಸುಕ್ರಿಸ್ತನಂತೆ, ಸಾಕ್ರೆಟಿಸನಂತೆ. ಅದನ್ನು ಪೂರೈಸಿಕೊಟ್ಟದ್ದು ಗೋಡ್ಸೆ.

PC : StarsUnfolded

ದೇಶ ವಿಭಜನೆಗೆ ಗಾಂಧೀಜಿ ಕಾರಣ ಎನ್ನುವುದಕ್ಕೋಸ್ಕರ ಕೊಂದೆ ಎನ್ನುತ್ತಾನೆ ಗೋಡ್ಸೆ. ಆದರೆ ಗಾಂಧೀಜಿಯ ಹತ್ಯೆಯ ಪ್ರಯತ್ನ ದೇಶ ವಿಭಜನೆಗೆ ಬಹಳಷ್ಟು ಮುಂದೆಯೇ ನಡೆದಿತ್ತು. ಒಂದಲ್ಲ, ಎರಡಲ್ಲ. ಮೂರು ಬಾರಿ ನಡೆದಿತ್ತು. ಮೊದಲ ಪ್ರಯತ್ನ ನಡೆದದ್ದು 1934ರಲ್ಲಿ. ಆಗ ವಿಭಜನೆ ನಡೆದಿರಲಿಲ್ಲ. ಆ ಮೊದಲ ಪ್ರಯತ್ನವೂ ನಡೆದದ್ದು ಗೋಡ್ಸೆ ಹುಟ್ಟಿದ ಪೂನಾದಲ್ಲಿಯೇ. ಆಗ ಅಲ್ಲಿ ಗಾಂಧೀಜಿ ಅಸ್ಪೃಶ್ಯತೆಯ ವಿರುದ್ಧ ಹೋರಾಡುತ್ತಿದ್ದರು!

ಸಾಮಾನ್ಯವಾಗಿ ರಾಜಕೀಯ ನಾಯಕರ ವಿರುದ್ಧ ಪ್ರತಿಭಟಿಸುವವರು “ಮುರ್ದಾಬಾದ್, “ಡೌನ್, ಡೌನ್ ಇತ್ಯಾದಿ ಘೋಷಣೆ ಕೂಗುತ್ತಾರೆ. ಆದರೆ ಗಾಂಧೀಜಿಯವರ ವಿರುದ್ಧ ಆ ಕಾಲದಲ್ಲಿ ಪ್ರತಿಭಟಿಸುವವರೆಲ್ಲಾ “ಗಾಂಧೀಜಿಯನ್ನು ಕೊಂದುಬಿಡಿ (death to Gandhiji)” ಎನ್ನುವ ಘೋಷಣೆಯನ್ನು ಮತ್ತೆ ಮತ್ತೆ ಕೂಗುತಿದ್ದರು.. ಅಂದಿಗೂ ಇಂದಿಗೂ ಇಂತಹದ್ದೊಂದು ಘೋಷಣೆಯ ದಾಳಿಗೆ ಒಳಗಾದವರಿಲ್ಲ ಎನ್ನಿಸುತ್ತದೆ. ಇದನ್ನು ಕೇಳಿ ಬೇಸತ್ತುಕೊಳ್ಳದ ಗಾಂಧೀಜಿ ಕೊನೆಗೆ ಅದನ್ನು ಒಪ್ಪಿಕೊಂಡು “ಆಗಲಿ ಕೊಂದುಬಿಡಿ” ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಗಾಂಧೀಜಿಯವರ ಮೇಲೆ ಭಾರಿ ಭಾರಿ ದಾಳಿಯಾಗುತ್ತಿದ್ದರೂ ಅದರ ಬಗ್ಗೆ ಯಾರಿಗೂ ಕಾಳಜಿ ಇರಲಿಲ್ಲ.

ಅಂದಿನ ಪೊಲೀಸರ ಮನಸ್ಥಿತಿ ಗೋಡ್ಸೆಯ ಮನಸ್ಥಿತಿಗಿಂತ ಭಿನ್ನವಾಗಿರಲಿಲ್ಲ. ಅವರಲ್ಲಿ ಹಲವರಿಗೆ ಹಿಂದೂ-ಮುಸ್ಲಿಂ ಸಂಘರ್ಷದ ಸಮಯದಲ್ಲಿ ಗಾಂಧೀಜಿ ಪಠಿಸುತಿದ್ದ ಶಾಂತಿ ಮಂತ್ರ ನಪುಂಸಕವಾದದಂತೆ ಕೇಳಿಸುತಿತ್ತು.. ಅವರೆಲ್ಲಾ ಹೇಳಿಕೇಳಿ ಬ್ರಿಟಿಷರ ಕೈಕೆಳಗೆ ಗಾಂಧೀಜಿಯ ವಿರುದ್ಧ ಕೆಲಸ ಮಾಡುತಿದ್ದವರು. ಸಾಲದ್ದಕ್ಕೆ ಹೆಚ್ಚಿನವರು ಯುದ್ಧಾಕಾಂಕ್ಷಿ ಕ್ಷತ್ರಿಯ ಜಾತಿಗಳಿಗೆ ಸೇರಿದವರು. ಗಾಂಧೀಜಿಯ ಕೊಲೆ ಸಂಚಿನ ಬಗ್ಗೆ ಬಂದ ಎಲ್ಲಾ ಗುಪ್ತ ಮಾಹಿತಿಗಳನ್ನೂ ಪೋಲಿಸರು ಕಡೆಗಣಿಸಿದ್ದರು. ಮುದುಕ ಬದುಕಿದರೆಷ್ಟು-ಸತ್ತರೆಷ್ಟು ಎನ್ನುವಂತಿತ್ತು ಅವರ ಮನೋಭಾವ. ಪೊಲೀಸರನ್ನು ನಿಯಂತ್ರಿಸುತಿದ್ದ ಅಂದಿನ ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಬಾಯಿ ಪಟೇಲರು ಗಾಂಧೀಜಿಯವರ ಆಪ್ತ ಶಿಷ್ಯ. ಉಕ್ಕಿನ ಮನುಷ್ಯ.

ಗಾಂಧೀಜಿಯ ಕೊನೆಯ ದಿನಗಳಲ್ಲಿ ನಡೆದ ಘಟನಾವಳಿಗಳನ್ನು ಗಮನಿಸಿದಾಗ ಆಯಕಟ್ಟಿನ ಜಾಗದಲ್ಲಿ ಇದ್ದವರೆಲ್ಲಾ ಸೇರಿ ಗಾಂಧೀಜಿಯನ್ನು ಎತ್ತಿಕೊಂಡು ಗೋಡ್ಸೆಯೆದುರು ನಿಲ್ಲಿಸಿದ್ದರೇನೋ ಎಂಬಂತೆ ಭಾಸವಾಗುತ್ತದೆ. ಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ. ಇಂದಿಗೂ ಒಬ್ಬಂಟಿಯಲ್ಲ. ನೆಹರೂ ಗೋಡ್ಸೆಯನ್ನು ಹುಚ್ಚ ಅಂತ ಕರೆದರು. ಗೋಡ್ಸೆಗೆ ಗಾಂಧಿ ಹುಚ್ಚ ಅಂತ ಅನ್ನಿಸಿರಬೇಕು. ನಾವು ನಂಬಿದ್ದೇ ಸತ್ಯ ಅಂತ ಯೋಚಿಸುವುದೇ ಒಂದು ರೀತಿಯ ಹುಚ್ಚು. ನಮ್ಮ ಕಾಲದ ಶ್ರೇಷ್ಠ ರಾಜಕೀಯ ಮನಶಾಸ್ತ್ರಜ್ಞ ಅಶೀಶ್ ನಂದಿ ಹೇಳುವಂತೆ ಯಾವುದೇ ರಾಜಕೀಯ ಹತ್ಯೆ ನಡೆಸುವ ಒಬ್ಬಾತ ತಾನು ಎಂದೂ ಒಬ್ಬಂಟಿಯಾಗಿರುವುದಿಲ್ಲ. ಆತ ಸಮಾಜದ ಒಂದಷ್ಟು ಮಂದಿಯ ಯಾವುದೋ ರೀತಿಯ ಹುಚ್ಚನ್ನು ಪ್ರತಿನಿಧಿಸುತ್ತಾನೆ.

ನೇಣುಗಂಬದಿಂದ ಹೆಣವಾಗಿ ಇಳಿದ ಗೋಡ್ಸೆಯ ಅಂತ್ಯಕ್ರಿಯೆ ಅಂಬಾಲ ಜೈಲಿನ ಆವರಣದ ಹೊರಗೆ ನಡೆಯುತ್ತದೆ. ಅದು ಮುಗಿದ ತತ್‌ಕ್ಷಣ ಸರಕಾರ ಆ ಜಾಗವನ್ನು ನಿಷೇಧಿತ ಪ್ರದೇಶವನ್ನಾಗಿ ಮಾಡಿ ಸ್ಥಳವನ್ನು ಉತ್ತು ಇಡೀ ಪರಿಸರದಲ್ಲಿ ಹಸಿರು ಹುಲ್ಲು ನೆಡಿಸುತ್ತದೆ. ಆ ಜಾಗವನ್ನು ಯಾರೂ ಗುರುತಿಸದಂತೆ ಮಾರ್ಪಡಿಸುತ್ತದೆ. ಯಾರಾದರೂ ಗೋಡ್ಸೆಗೊಂದು ಗೋರಿ ಕಟ್ಟಿ ಅದನ್ನೊಂದು ಪವಿತ್ರ ಸ್ಥಳವನ್ನಾಗಿ ಮಾಡದಿರಲಿ ಎನ್ನುವ ಉದ್ದೇಶದಿಂದ ಸರಕಾರ ಹಾಗೆ ಮಾಡಿತ್ತು. ಗೋಡ್ಸೆ ಕೊಂದ ಗಾಂಧಿ ಮರಣಾನಂತರ ಉತ್ಕಟವಾಗಿ ಬದುಕಿದರು. ಗಾಂಧಿಯನ್ನು ಕೊಂದ ಗೋಡ್ಸೆಯೂ ಹಾಗೆಯೇ. ಅನಾಮಧೇಯನಾಗಿ ಅಳಿದು ಹೋಗುತಿದ್ದ ಗೋಡ್ಸೆ ಎಂಬ ಅಂಚೆ ಇಲಾಖೆ ನೌಕರನ ಮಗ ಚರಿತ್ರೆಯಲ್ಲಿ ಶಾಶ್ವತ ಸ್ಥಾನ ಪಡೆದುಬಿಟ್ಟ. ಗಾಂಧೀಜಿಯವರನ್ನು ಅರಿಯುವ ಪ್ರಯತ್ನದ ಜತೆಜತೆಗೆ ಗೋಡ್ಸೆಯನ್ನು ಅರಿಯುವ ಪ್ರಯತ್ನವೂ ನಡೆಯುತ್ತಲೇ ಇದೆ.

ಗಾಂಧೀಜಿಯವರನ್ನು ಸಾರ್ವಜನಿಕವಾಗಿ ಒಪ್ಪಿ ಅಂತರಂಗದಲ್ಲಿ ದ್ವೇಷಿಸುವರು ಹಲವರಿದ್ದಾರೆ. ಗೋಡ್ಸೆಯನ್ನು ಬಹಿರಂಗವಾಗಿ ಬಹಿಷ್ಕರಿಸಿ ಅಂತರಂಗದ ಅತಿಥಿಯನ್ನಾಗಿ ಮಾಡಿಕೊಂಡವರು ಅದಕ್ಕಿಂತ ಹೆಚ್ಚಿದ್ದಾರೆ. ಭಾರತದಲ್ಲಿ ಎಲ್ಲಾ ರೀತಿಯಲ್ಲೂ ಮುಕ್ತವಾಗಿ ಟೀಕಿಸಬಹುದಾದ ಒಬ್ಬ ರಾಜಕೀಯ ನಾಯಕ ಅಂತ ಇದ್ದರೆ ಅದು ಗಾಂಧೀಜಿ ಮಾತ್ರ. ಆದರೂ ಗಾಂಧೀಜಿಯವರ ಬಗ್ಗೆ ಬಾಲಿಶವಾಗಿ ಮಾತನಾಡುವವರು ಗಾಂಧೀಜಿ ಅವರನ್ನು ದ್ವೇಷಿಸುವರ ದೃಷ್ಟಿಯಲ್ಲೂ ತೀರ ಅಲ್ಪರಂತೆ ಕಾಣಿಸುತ್ತಾರೆ.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯ, ಕಾನೂನು ಮತ್ತು ಆಡಳಿತ ಹಾಗೂ ಭಾರತದಲ್ಲಿ ಆಡಳಿತದ ಸವಾಲುಗಳು ವಿಷಯವನ್ನು ಬೋಧಿಸುವ ನಾರಾಯಣ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿರುವ ಸ್ವತಂತ್ರ ಚಿಂತಕ.


ಇದನ್ನೂ ಓದಿ: ಸಂಪಿಗೆ ಬನದ ಹಾಡು ಹೇಳೋರು ಯಾರು? ಚಂಪಾರಣ ಸತ್ಯಾಗ್ರಹ ಮತ್ತು ರೈತ ಹೋರಾಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...