Homeಮುಖಪುಟಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ, ಇಂದಿಗೂ..

ಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ, ಇಂದಿಗೂ..

- Advertisement -
- Advertisement -

ಮಹಾತ್ಮಾ ಗಾಂಧಿ ಎಂಬ ಮನುಷ್ಯನನ್ನು ನಾಥುರಾಮ್ ಗೋಡ್ಸೆ ಎಂಬ ಹಿಂದೂ ಒಬ್ಬ ಕೊಲೆಮಾಡಿ (ಜನವರಿ 30, 1948) 73 ವರ್ಷಗಳಾಗಿವೆ. ಎಪ್ಪತ್ತೊಂಭತ್ತು ವರ್ಷತುಂಬಿದ್ದ ಹಣ್ಣು ಮುದುಕ ಗಾಂಧೀಜಿಯವರ ಎದೆಗೆ ಗುಂಡಿಕ್ಕುವ ಮುನ್ನ ಮೂವತ್ತೆಂಟರ ಹರೆಯದ ನಾಥೂರಾಮ್ ವಿನಾಯಕ ಗೋಡ್ಸೆ ಒಮ್ಮೆ ಅವರ ಕಾಲುಮುಟ್ಟಿ ನಮಸ್ಕರಿಸಿದ್ದನಂತೆ. ಅದು ನಟನೆಯಲ್ಲ, ನಿಜವಾದ ಗೌರವ ಸಲ್ಲಿಕೆ ಅಂತ ಗೋಡ್ಸೆ ತನ್ನ ’ನಾನೇಕೆ ಗಾಂಧಿಯನ್ನು ಕೊಂದೆ’ ಎಂಬ ಹೇಳಿಕೆಯಲ್ಲಿ ದಾಖಲಿಸುತ್ತಾನೆ. ಗುಂಡೇಟು ತಿಂದು ಕುಸಿಯುವ ಮುನ್ನ ಗಾಂಧಿ “ಹೇ ರಾಮ್ ಅಂತ ಉದ್ಗರಿಸಿದ್ದರಂತೆ. ಆ ಕುರಿತು ಭಿನ್ನಾಭಿಪ್ರಾಯಗಳಿವೆ. ಕೆಲವರ ಪ್ರಕಾರ ಗಾಂಧಿ ಮೌನವಾಗಿಯೇ ನೆಲಕ್ಕೆ ಕುಸಿದಿದ್ದರು. ಏನೇ ಇರಲಿ. ಒಂದು ವೇಳೆ ಅವರು ಹೇ ರಾಮ್ ಅಂತ ಹೇಳಿದ್ದು ನಿಜವೇ ಆಗಿದ್ದರೆ, ಗುಂಡು ಹಾರಿಸಿ ಕೈಚೆಲ್ಲಿ ನಿಂತಿದ್ದ ಗೋಡ್ಸೆಗೆ ಅದು ಗಾಂಧೀಜಿ ತನ್ನ ಹೆಸರು ಹಿಡಿದು ಪ್ರೀತಿಯಿಂದ ಕರೆದಂತೆ ಕೇಳಿಸಿರಬಹುದು.

1949ರ ನವಂಬರ್ ತಿಂಗಳ 15ನೇ ತಾರೀಖಿನಂದು ಅಂಬಾಲ ಜೈಲಿನಲ್ಲಿ ಗೋಡ್ಸೆ ಯಾವ ಭಾವ ವಿಕಾರವೂ ಇಲ್ಲದೆ ನೇಣುಗಂಬ ಏರಿದ್ದ ಅಂತ ಚರಿತ್ರೆ ದಾಖಲಿಸುತ್ತದೆ. ಗಾಂಧಿ ನಾವೆಲ್ಲ ಅಂದುಕೊಂಡಿರುವ ಗಾಂಧೀಜಿಯೇ ಆಗಿದ್ದಿದ್ದರೆ ಆ ದಿನ ಅವರ ಆತ್ಮ ಗೋರಿಯೊಳಗೆ ವಿಚಿತ್ರವಾಗಿ ಚಡಪಡಿಸಿರುತಿತ್ತು. ಗೋಡ್ಸೆಯನ್ನು ನೇಣಿಗೇರಿಸಬಾರದಿತ್ತು. ಆತನನ್ನು ಕೊಂದದ್ದು ಗಾಂಧೀಜಿಗೆ ಸಮ್ಮತವಾಗಿರುತ್ತಿರಲಿಲ್ಲ ಎನ್ನುವುದು ಅದಕ್ಕೆ ಒಂದು ಕಾರಣ. ಅದಕ್ಕಿಂತ ಮುಖ್ಯವಾದ ಇನ್ನೊಂದು ಕಾರಣವಿದೆ. ತನ್ನ ಕೊನೆಯ ಹೇಳಿಕೆಯಲ್ಲಿ ಗೋಡ್ಸೆ ಹೇಳುತ್ತಾನೆ: “ನಾನು ಗಾಂಧೀಜಿಯನ್ನು ಕೊಂದದ್ದು ಒಂದು ಉದಾತ್ತವಾದ ಉದ್ದೇಶದಿಂದ. ಅದು ಏನೆಂದರೆ ಗಾಂಧೀಜಿ ಇಲ್ಲದ ಭಾರತದ ರಾಜಕೀಯ ಪ್ರಾಯೋಗಿಕವಾಗಿರುತ್ತದೆ, ಗಾಂಧೀಜಿ ಇಲ್ಲದ ಭಾರತದ ರಾಜಕೀಯಕ್ಕೆ ವೈರಿಗಳಿಗೆ ತಿರುಗೇಟು ನೀಡುವ ಶಕ್ತಿ ಬರುತ್ತದೆ. ಗಾಂಧೀಜಿ ಇಲ್ಲದ ಭಾರತ ತನ್ನ ಸೇನಾಬಲದಿಂದ ಸದೃಢವಾಗಿರುತ್ತದೆ. ಗಾಂಧೀಜಿ ಇಲ್ಲದ ಭಾರತದ ಜನ ಹೆಚ್ಚು ವಿವೇಕದಿಂದಲೂ, ವಿವೇಚನೆಯಿಂದಲೂ ವರ್ತಿಸುತ್ತಾರೆ ಎನ್ನುವ ಭರವಸೆ ನನಗಿದೆ.. ಅದಕ್ಕಾಗಿ ಗಾಂಧೀಜಿಯನ್ನು ಕೊಂದೆ..”. ಗೋಡ್ಸೆ ಬದುಕಿ ಗಾಂಧೀಜಿಯ ನಂತರದ ಭಾರತದಲ್ಲಿ ರಾಜಕೀಯ ತೋರಿದ ಪ್ರಾಯೋಗಿಕತೆ, ವಿವೇಕ, ವಿವೇಚನೆ ಇತ್ಯಾದಿಗಳನ್ನು ಕಣ್ಣಾರೆ ಕಾಣಬೇಕಿತ್ತು ಎನ್ನುವ ಕಾರಣಕ್ಕೆ ಆತನನ್ನು ನೇಣಿಗೇರಿಸಬಾರದಿತ್ತು.. ಗಾಂಧೀಜಿ ಇನ್ನೊಂದಷ್ಟು ದಿನ ಬದುಕಿ ಉಳಿದಿದ್ದರೂ ಭಾರತದಲ್ಲಿ ಮುಂದೆ ಏನೇನಾದವೋ ಅವೆಲ್ಲಾ ಆಗುತ್ತಿದ್ದವು. ಅದು ಬೇರೆ ವಿಚಾರ.

ಗಾಂಧೀಜಿಯವರನ್ನು ಕೊಂದ ನಂತರ ಸ್ವತಃ ಗೊಡ್ಸೆಗೆ ಬದುಕುವಾಸೆ ಇರಲಿಲ್ಲ. ಜೈಲಿನ ಬಾಗಿಲು ತೆರೆದಿರಿಸಿದ್ದರೂ ಆತ ಓಡಿ ಹೋಗುತ್ತಿರಲಿಲ್ಲ. ಗಾಂಧೀಜಿಯನ್ನು ನೆನೆದು, ಗಾಂಧೀವಾದಿಗಳ ಒತ್ತಾಯಕ್ಕೆ ಮಣಿದು ತನ್ನನ್ನು ಎಲ್ಲಿ ಕ್ಷಮಿಸಿಬಿಡುತ್ತಾರೋ ಎನ್ನುವ ಆತಂಕ ಗೋಡ್ಸೆಯನ್ನು ಕೊನೆಯತನಕವೂ ಕಾಡಿತ್ತಂತೆ. ಗಾಂಧೀಜಿಗೆ ನಾನು ತೋರದ ಕರುಣೆಯನ್ನು ಸರಕಾರದಿಂದ ನಾನು ಬಯಸುವುದಿಲ್ಲ ಅಂತ ಆತ ಸ್ಪಷ್ಟವಾಗಿ ಹೇಳಿದ್ದ. ಗಾಂಧೀಜಿಯವರ ಕೊಲೆಗಾರ ಎನ್ನುವ ಅವಮಾನವನ್ನು ಹೊತ್ತು ಬದುಕುವುದಕ್ಕಿಂತ ಸಾವು ಎಷ್ಟೋ ಮೇಲು ಅಂತ ಆತ ಗಾಂಧೀಜಿ ನೆಲಕ್ಕುರುಳಿದಾಕ್ಷಣ ನಿರ್ಧರಿಸಿದ್ದ. ಅಷ್ಟೇ ಆಸಕ್ತಿಯ ವಿಚಾರವೆಂದರೆ ಕೊನೆಯ ದಿನಗಳಲ್ಲಿ ಗಾಂಧೀಜಿ ಕೂಡಾ ಜೀವನದಲ್ಲಿ ಆಸಕ್ತಿ ಕಳೆದುಕೊಂಡಿದ್ದರು.

ಒಂದು ಕಾಲದಲ್ಲಿ ತಾನು 125 ವರ್ಷ ಬದುಕಬೇಕೆಂದು ಹೇಳಿದ್ದ ಗಾಂಧೀಜಿಗೆ ದೇಶ ವಿಭಜನೆಯಾಗುತ್ತಲೇ ಇನ್ನು ಶಾಶ್ವತವಾಗಿ ಹೊರಟುಬಿಡಬೇಕು ಎಂಬ ಮನೋಭಾವ ಆವರಿಕೊಂಡಿತ್ತು ಅಂತ ಆ ದಿನಗಳಲ್ಲಿ ಅವರ ಹತ್ತಿರವಿದ್ದ ಅನುಯಾಯಿಗಳು ದಾಖಲಿಸಿದ್ದಾರೆ. ಆದರೆ ಖಾಯಿಲೆ ಬಿದ್ದು ಸಾಯುವುದಕ್ಕಿಂತ ಕೊಲೆಯಾಗುವುದು ಮೇಲು ಎನ್ನುವುದಾಗಿತ್ತಂತೆ ಅವರ ನಿರ್ಧಾರ. “ಇಷ್ಟೆಲ್ಲಾ ಆಗಿ ಕಾಯಿಲೆಯಿಂದ ಸತ್ತರೆ ನಾನ್ಯಾವ ಸೀಮೆಯ ಮಹಾತ್ಮ? ಸತ್ತರೆ ಕೊಲೆಗಾರನ ಧಾಳಿಗೆ ಎದೆಯೊಡ್ಡಿ ರಾಮನಾಮ ಪಠಿಸುತ್ತಾ ಸಾಯಬೇಕು” ಅಂತ ತನ್ನ ಮೊಮ್ಮಗಳಾದ ಮನುಬೆನ್‌ಗೆ ಹೇಳಿದ್ದರಂತೆ. ಹಾಗೆಯೇ ಆಯಿತು. ಹೇಗೂ ಸಾಯಲು ತಯಾರಾಗಿದ್ದ ಗಾಂಧೀಜಿಯನ್ನು ಗೋಡ್ಸೆ ಕೊಂದ. ಜೀವಂತವಾಗಿ ಅಪ್ರಸ್ತುತನಾದ ತಾನು ಸತ್ತು ಪ್ರಸ್ತುತನಾಗಬೇಕೆಂದುಕೊಂಡಿರಬೇಕು ಗಾಂಧೀಜಿ – ಏಸುಕ್ರಿಸ್ತನಂತೆ, ಸಾಕ್ರೆಟಿಸನಂತೆ. ಅದನ್ನು ಪೂರೈಸಿಕೊಟ್ಟದ್ದು ಗೋಡ್ಸೆ.

PC : StarsUnfolded

ದೇಶ ವಿಭಜನೆಗೆ ಗಾಂಧೀಜಿ ಕಾರಣ ಎನ್ನುವುದಕ್ಕೋಸ್ಕರ ಕೊಂದೆ ಎನ್ನುತ್ತಾನೆ ಗೋಡ್ಸೆ. ಆದರೆ ಗಾಂಧೀಜಿಯ ಹತ್ಯೆಯ ಪ್ರಯತ್ನ ದೇಶ ವಿಭಜನೆಗೆ ಬಹಳಷ್ಟು ಮುಂದೆಯೇ ನಡೆದಿತ್ತು. ಒಂದಲ್ಲ, ಎರಡಲ್ಲ. ಮೂರು ಬಾರಿ ನಡೆದಿತ್ತು. ಮೊದಲ ಪ್ರಯತ್ನ ನಡೆದದ್ದು 1934ರಲ್ಲಿ. ಆಗ ವಿಭಜನೆ ನಡೆದಿರಲಿಲ್ಲ. ಆ ಮೊದಲ ಪ್ರಯತ್ನವೂ ನಡೆದದ್ದು ಗೋಡ್ಸೆ ಹುಟ್ಟಿದ ಪೂನಾದಲ್ಲಿಯೇ. ಆಗ ಅಲ್ಲಿ ಗಾಂಧೀಜಿ ಅಸ್ಪೃಶ್ಯತೆಯ ವಿರುದ್ಧ ಹೋರಾಡುತ್ತಿದ್ದರು!

ಸಾಮಾನ್ಯವಾಗಿ ರಾಜಕೀಯ ನಾಯಕರ ವಿರುದ್ಧ ಪ್ರತಿಭಟಿಸುವವರು “ಮುರ್ದಾಬಾದ್, “ಡೌನ್, ಡೌನ್ ಇತ್ಯಾದಿ ಘೋಷಣೆ ಕೂಗುತ್ತಾರೆ. ಆದರೆ ಗಾಂಧೀಜಿಯವರ ವಿರುದ್ಧ ಆ ಕಾಲದಲ್ಲಿ ಪ್ರತಿಭಟಿಸುವವರೆಲ್ಲಾ “ಗಾಂಧೀಜಿಯನ್ನು ಕೊಂದುಬಿಡಿ (death to Gandhiji)” ಎನ್ನುವ ಘೋಷಣೆಯನ್ನು ಮತ್ತೆ ಮತ್ತೆ ಕೂಗುತಿದ್ದರು.. ಅಂದಿಗೂ ಇಂದಿಗೂ ಇಂತಹದ್ದೊಂದು ಘೋಷಣೆಯ ದಾಳಿಗೆ ಒಳಗಾದವರಿಲ್ಲ ಎನ್ನಿಸುತ್ತದೆ. ಇದನ್ನು ಕೇಳಿ ಬೇಸತ್ತುಕೊಳ್ಳದ ಗಾಂಧೀಜಿ ಕೊನೆಗೆ ಅದನ್ನು ಒಪ್ಪಿಕೊಂಡು “ಆಗಲಿ ಕೊಂದುಬಿಡಿ” ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಗಾಂಧೀಜಿಯವರ ಮೇಲೆ ಭಾರಿ ಭಾರಿ ದಾಳಿಯಾಗುತ್ತಿದ್ದರೂ ಅದರ ಬಗ್ಗೆ ಯಾರಿಗೂ ಕಾಳಜಿ ಇರಲಿಲ್ಲ.

ಅಂದಿನ ಪೊಲೀಸರ ಮನಸ್ಥಿತಿ ಗೋಡ್ಸೆಯ ಮನಸ್ಥಿತಿಗಿಂತ ಭಿನ್ನವಾಗಿರಲಿಲ್ಲ. ಅವರಲ್ಲಿ ಹಲವರಿಗೆ ಹಿಂದೂ-ಮುಸ್ಲಿಂ ಸಂಘರ್ಷದ ಸಮಯದಲ್ಲಿ ಗಾಂಧೀಜಿ ಪಠಿಸುತಿದ್ದ ಶಾಂತಿ ಮಂತ್ರ ನಪುಂಸಕವಾದದಂತೆ ಕೇಳಿಸುತಿತ್ತು.. ಅವರೆಲ್ಲಾ ಹೇಳಿಕೇಳಿ ಬ್ರಿಟಿಷರ ಕೈಕೆಳಗೆ ಗಾಂಧೀಜಿಯ ವಿರುದ್ಧ ಕೆಲಸ ಮಾಡುತಿದ್ದವರು. ಸಾಲದ್ದಕ್ಕೆ ಹೆಚ್ಚಿನವರು ಯುದ್ಧಾಕಾಂಕ್ಷಿ ಕ್ಷತ್ರಿಯ ಜಾತಿಗಳಿಗೆ ಸೇರಿದವರು. ಗಾಂಧೀಜಿಯ ಕೊಲೆ ಸಂಚಿನ ಬಗ್ಗೆ ಬಂದ ಎಲ್ಲಾ ಗುಪ್ತ ಮಾಹಿತಿಗಳನ್ನೂ ಪೋಲಿಸರು ಕಡೆಗಣಿಸಿದ್ದರು. ಮುದುಕ ಬದುಕಿದರೆಷ್ಟು-ಸತ್ತರೆಷ್ಟು ಎನ್ನುವಂತಿತ್ತು ಅವರ ಮನೋಭಾವ. ಪೊಲೀಸರನ್ನು ನಿಯಂತ್ರಿಸುತಿದ್ದ ಅಂದಿನ ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಬಾಯಿ ಪಟೇಲರು ಗಾಂಧೀಜಿಯವರ ಆಪ್ತ ಶಿಷ್ಯ. ಉಕ್ಕಿನ ಮನುಷ್ಯ.

ಗಾಂಧೀಜಿಯ ಕೊನೆಯ ದಿನಗಳಲ್ಲಿ ನಡೆದ ಘಟನಾವಳಿಗಳನ್ನು ಗಮನಿಸಿದಾಗ ಆಯಕಟ್ಟಿನ ಜಾಗದಲ್ಲಿ ಇದ್ದವರೆಲ್ಲಾ ಸೇರಿ ಗಾಂಧೀಜಿಯನ್ನು ಎತ್ತಿಕೊಂಡು ಗೋಡ್ಸೆಯೆದುರು ನಿಲ್ಲಿಸಿದ್ದರೇನೋ ಎಂಬಂತೆ ಭಾಸವಾಗುತ್ತದೆ. ಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ. ಇಂದಿಗೂ ಒಬ್ಬಂಟಿಯಲ್ಲ. ನೆಹರೂ ಗೋಡ್ಸೆಯನ್ನು ಹುಚ್ಚ ಅಂತ ಕರೆದರು. ಗೋಡ್ಸೆಗೆ ಗಾಂಧಿ ಹುಚ್ಚ ಅಂತ ಅನ್ನಿಸಿರಬೇಕು. ನಾವು ನಂಬಿದ್ದೇ ಸತ್ಯ ಅಂತ ಯೋಚಿಸುವುದೇ ಒಂದು ರೀತಿಯ ಹುಚ್ಚು. ನಮ್ಮ ಕಾಲದ ಶ್ರೇಷ್ಠ ರಾಜಕೀಯ ಮನಶಾಸ್ತ್ರಜ್ಞ ಅಶೀಶ್ ನಂದಿ ಹೇಳುವಂತೆ ಯಾವುದೇ ರಾಜಕೀಯ ಹತ್ಯೆ ನಡೆಸುವ ಒಬ್ಬಾತ ತಾನು ಎಂದೂ ಒಬ್ಬಂಟಿಯಾಗಿರುವುದಿಲ್ಲ. ಆತ ಸಮಾಜದ ಒಂದಷ್ಟು ಮಂದಿಯ ಯಾವುದೋ ರೀತಿಯ ಹುಚ್ಚನ್ನು ಪ್ರತಿನಿಧಿಸುತ್ತಾನೆ.

ನೇಣುಗಂಬದಿಂದ ಹೆಣವಾಗಿ ಇಳಿದ ಗೋಡ್ಸೆಯ ಅಂತ್ಯಕ್ರಿಯೆ ಅಂಬಾಲ ಜೈಲಿನ ಆವರಣದ ಹೊರಗೆ ನಡೆಯುತ್ತದೆ. ಅದು ಮುಗಿದ ತತ್‌ಕ್ಷಣ ಸರಕಾರ ಆ ಜಾಗವನ್ನು ನಿಷೇಧಿತ ಪ್ರದೇಶವನ್ನಾಗಿ ಮಾಡಿ ಸ್ಥಳವನ್ನು ಉತ್ತು ಇಡೀ ಪರಿಸರದಲ್ಲಿ ಹಸಿರು ಹುಲ್ಲು ನೆಡಿಸುತ್ತದೆ. ಆ ಜಾಗವನ್ನು ಯಾರೂ ಗುರುತಿಸದಂತೆ ಮಾರ್ಪಡಿಸುತ್ತದೆ. ಯಾರಾದರೂ ಗೋಡ್ಸೆಗೊಂದು ಗೋರಿ ಕಟ್ಟಿ ಅದನ್ನೊಂದು ಪವಿತ್ರ ಸ್ಥಳವನ್ನಾಗಿ ಮಾಡದಿರಲಿ ಎನ್ನುವ ಉದ್ದೇಶದಿಂದ ಸರಕಾರ ಹಾಗೆ ಮಾಡಿತ್ತು. ಗೋಡ್ಸೆ ಕೊಂದ ಗಾಂಧಿ ಮರಣಾನಂತರ ಉತ್ಕಟವಾಗಿ ಬದುಕಿದರು. ಗಾಂಧಿಯನ್ನು ಕೊಂದ ಗೋಡ್ಸೆಯೂ ಹಾಗೆಯೇ. ಅನಾಮಧೇಯನಾಗಿ ಅಳಿದು ಹೋಗುತಿದ್ದ ಗೋಡ್ಸೆ ಎಂಬ ಅಂಚೆ ಇಲಾಖೆ ನೌಕರನ ಮಗ ಚರಿತ್ರೆಯಲ್ಲಿ ಶಾಶ್ವತ ಸ್ಥಾನ ಪಡೆದುಬಿಟ್ಟ. ಗಾಂಧೀಜಿಯವರನ್ನು ಅರಿಯುವ ಪ್ರಯತ್ನದ ಜತೆಜತೆಗೆ ಗೋಡ್ಸೆಯನ್ನು ಅರಿಯುವ ಪ್ರಯತ್ನವೂ ನಡೆಯುತ್ತಲೇ ಇದೆ.

ಗಾಂಧೀಜಿಯವರನ್ನು ಸಾರ್ವಜನಿಕವಾಗಿ ಒಪ್ಪಿ ಅಂತರಂಗದಲ್ಲಿ ದ್ವೇಷಿಸುವರು ಹಲವರಿದ್ದಾರೆ. ಗೋಡ್ಸೆಯನ್ನು ಬಹಿರಂಗವಾಗಿ ಬಹಿಷ್ಕರಿಸಿ ಅಂತರಂಗದ ಅತಿಥಿಯನ್ನಾಗಿ ಮಾಡಿಕೊಂಡವರು ಅದಕ್ಕಿಂತ ಹೆಚ್ಚಿದ್ದಾರೆ. ಭಾರತದಲ್ಲಿ ಎಲ್ಲಾ ರೀತಿಯಲ್ಲೂ ಮುಕ್ತವಾಗಿ ಟೀಕಿಸಬಹುದಾದ ಒಬ್ಬ ರಾಜಕೀಯ ನಾಯಕ ಅಂತ ಇದ್ದರೆ ಅದು ಗಾಂಧೀಜಿ ಮಾತ್ರ. ಆದರೂ ಗಾಂಧೀಜಿಯವರ ಬಗ್ಗೆ ಬಾಲಿಶವಾಗಿ ಮಾತನಾಡುವವರು ಗಾಂಧೀಜಿ ಅವರನ್ನು ದ್ವೇಷಿಸುವರ ದೃಷ್ಟಿಯಲ್ಲೂ ತೀರ ಅಲ್ಪರಂತೆ ಕಾಣಿಸುತ್ತಾರೆ.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯ, ಕಾನೂನು ಮತ್ತು ಆಡಳಿತ ಹಾಗೂ ಭಾರತದಲ್ಲಿ ಆಡಳಿತದ ಸವಾಲುಗಳು ವಿಷಯವನ್ನು ಬೋಧಿಸುವ ನಾರಾಯಣ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿರುವ ಸ್ವತಂತ್ರ ಚಿಂತಕ.


ಇದನ್ನೂ ಓದಿ: ಸಂಪಿಗೆ ಬನದ ಹಾಡು ಹೇಳೋರು ಯಾರು? ಚಂಪಾರಣ ಸತ್ಯಾಗ್ರಹ ಮತ್ತು ರೈತ ಹೋರಾಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...