Homeಮುಖಪುಟಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ, ಇಂದಿಗೂ..

ಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ, ಇಂದಿಗೂ..

- Advertisement -
- Advertisement -

ಮಹಾತ್ಮಾ ಗಾಂಧಿ ಎಂಬ ಮನುಷ್ಯನನ್ನು ನಾಥುರಾಮ್ ಗೋಡ್ಸೆ ಎಂಬ ಹಿಂದೂ ಒಬ್ಬ ಕೊಲೆಮಾಡಿ (ಜನವರಿ 30, 1948) 73 ವರ್ಷಗಳಾಗಿವೆ. ಎಪ್ಪತ್ತೊಂಭತ್ತು ವರ್ಷತುಂಬಿದ್ದ ಹಣ್ಣು ಮುದುಕ ಗಾಂಧೀಜಿಯವರ ಎದೆಗೆ ಗುಂಡಿಕ್ಕುವ ಮುನ್ನ ಮೂವತ್ತೆಂಟರ ಹರೆಯದ ನಾಥೂರಾಮ್ ವಿನಾಯಕ ಗೋಡ್ಸೆ ಒಮ್ಮೆ ಅವರ ಕಾಲುಮುಟ್ಟಿ ನಮಸ್ಕರಿಸಿದ್ದನಂತೆ. ಅದು ನಟನೆಯಲ್ಲ, ನಿಜವಾದ ಗೌರವ ಸಲ್ಲಿಕೆ ಅಂತ ಗೋಡ್ಸೆ ತನ್ನ ’ನಾನೇಕೆ ಗಾಂಧಿಯನ್ನು ಕೊಂದೆ’ ಎಂಬ ಹೇಳಿಕೆಯಲ್ಲಿ ದಾಖಲಿಸುತ್ತಾನೆ. ಗುಂಡೇಟು ತಿಂದು ಕುಸಿಯುವ ಮುನ್ನ ಗಾಂಧಿ “ಹೇ ರಾಮ್ ಅಂತ ಉದ್ಗರಿಸಿದ್ದರಂತೆ. ಆ ಕುರಿತು ಭಿನ್ನಾಭಿಪ್ರಾಯಗಳಿವೆ. ಕೆಲವರ ಪ್ರಕಾರ ಗಾಂಧಿ ಮೌನವಾಗಿಯೇ ನೆಲಕ್ಕೆ ಕುಸಿದಿದ್ದರು. ಏನೇ ಇರಲಿ. ಒಂದು ವೇಳೆ ಅವರು ಹೇ ರಾಮ್ ಅಂತ ಹೇಳಿದ್ದು ನಿಜವೇ ಆಗಿದ್ದರೆ, ಗುಂಡು ಹಾರಿಸಿ ಕೈಚೆಲ್ಲಿ ನಿಂತಿದ್ದ ಗೋಡ್ಸೆಗೆ ಅದು ಗಾಂಧೀಜಿ ತನ್ನ ಹೆಸರು ಹಿಡಿದು ಪ್ರೀತಿಯಿಂದ ಕರೆದಂತೆ ಕೇಳಿಸಿರಬಹುದು.

1949ರ ನವಂಬರ್ ತಿಂಗಳ 15ನೇ ತಾರೀಖಿನಂದು ಅಂಬಾಲ ಜೈಲಿನಲ್ಲಿ ಗೋಡ್ಸೆ ಯಾವ ಭಾವ ವಿಕಾರವೂ ಇಲ್ಲದೆ ನೇಣುಗಂಬ ಏರಿದ್ದ ಅಂತ ಚರಿತ್ರೆ ದಾಖಲಿಸುತ್ತದೆ. ಗಾಂಧಿ ನಾವೆಲ್ಲ ಅಂದುಕೊಂಡಿರುವ ಗಾಂಧೀಜಿಯೇ ಆಗಿದ್ದಿದ್ದರೆ ಆ ದಿನ ಅವರ ಆತ್ಮ ಗೋರಿಯೊಳಗೆ ವಿಚಿತ್ರವಾಗಿ ಚಡಪಡಿಸಿರುತಿತ್ತು. ಗೋಡ್ಸೆಯನ್ನು ನೇಣಿಗೇರಿಸಬಾರದಿತ್ತು. ಆತನನ್ನು ಕೊಂದದ್ದು ಗಾಂಧೀಜಿಗೆ ಸಮ್ಮತವಾಗಿರುತ್ತಿರಲಿಲ್ಲ ಎನ್ನುವುದು ಅದಕ್ಕೆ ಒಂದು ಕಾರಣ. ಅದಕ್ಕಿಂತ ಮುಖ್ಯವಾದ ಇನ್ನೊಂದು ಕಾರಣವಿದೆ. ತನ್ನ ಕೊನೆಯ ಹೇಳಿಕೆಯಲ್ಲಿ ಗೋಡ್ಸೆ ಹೇಳುತ್ತಾನೆ: “ನಾನು ಗಾಂಧೀಜಿಯನ್ನು ಕೊಂದದ್ದು ಒಂದು ಉದಾತ್ತವಾದ ಉದ್ದೇಶದಿಂದ. ಅದು ಏನೆಂದರೆ ಗಾಂಧೀಜಿ ಇಲ್ಲದ ಭಾರತದ ರಾಜಕೀಯ ಪ್ರಾಯೋಗಿಕವಾಗಿರುತ್ತದೆ, ಗಾಂಧೀಜಿ ಇಲ್ಲದ ಭಾರತದ ರಾಜಕೀಯಕ್ಕೆ ವೈರಿಗಳಿಗೆ ತಿರುಗೇಟು ನೀಡುವ ಶಕ್ತಿ ಬರುತ್ತದೆ. ಗಾಂಧೀಜಿ ಇಲ್ಲದ ಭಾರತ ತನ್ನ ಸೇನಾಬಲದಿಂದ ಸದೃಢವಾಗಿರುತ್ತದೆ. ಗಾಂಧೀಜಿ ಇಲ್ಲದ ಭಾರತದ ಜನ ಹೆಚ್ಚು ವಿವೇಕದಿಂದಲೂ, ವಿವೇಚನೆಯಿಂದಲೂ ವರ್ತಿಸುತ್ತಾರೆ ಎನ್ನುವ ಭರವಸೆ ನನಗಿದೆ.. ಅದಕ್ಕಾಗಿ ಗಾಂಧೀಜಿಯನ್ನು ಕೊಂದೆ..”. ಗೋಡ್ಸೆ ಬದುಕಿ ಗಾಂಧೀಜಿಯ ನಂತರದ ಭಾರತದಲ್ಲಿ ರಾಜಕೀಯ ತೋರಿದ ಪ್ರಾಯೋಗಿಕತೆ, ವಿವೇಕ, ವಿವೇಚನೆ ಇತ್ಯಾದಿಗಳನ್ನು ಕಣ್ಣಾರೆ ಕಾಣಬೇಕಿತ್ತು ಎನ್ನುವ ಕಾರಣಕ್ಕೆ ಆತನನ್ನು ನೇಣಿಗೇರಿಸಬಾರದಿತ್ತು.. ಗಾಂಧೀಜಿ ಇನ್ನೊಂದಷ್ಟು ದಿನ ಬದುಕಿ ಉಳಿದಿದ್ದರೂ ಭಾರತದಲ್ಲಿ ಮುಂದೆ ಏನೇನಾದವೋ ಅವೆಲ್ಲಾ ಆಗುತ್ತಿದ್ದವು. ಅದು ಬೇರೆ ವಿಚಾರ.

ಗಾಂಧೀಜಿಯವರನ್ನು ಕೊಂದ ನಂತರ ಸ್ವತಃ ಗೊಡ್ಸೆಗೆ ಬದುಕುವಾಸೆ ಇರಲಿಲ್ಲ. ಜೈಲಿನ ಬಾಗಿಲು ತೆರೆದಿರಿಸಿದ್ದರೂ ಆತ ಓಡಿ ಹೋಗುತ್ತಿರಲಿಲ್ಲ. ಗಾಂಧೀಜಿಯನ್ನು ನೆನೆದು, ಗಾಂಧೀವಾದಿಗಳ ಒತ್ತಾಯಕ್ಕೆ ಮಣಿದು ತನ್ನನ್ನು ಎಲ್ಲಿ ಕ್ಷಮಿಸಿಬಿಡುತ್ತಾರೋ ಎನ್ನುವ ಆತಂಕ ಗೋಡ್ಸೆಯನ್ನು ಕೊನೆಯತನಕವೂ ಕಾಡಿತ್ತಂತೆ. ಗಾಂಧೀಜಿಗೆ ನಾನು ತೋರದ ಕರುಣೆಯನ್ನು ಸರಕಾರದಿಂದ ನಾನು ಬಯಸುವುದಿಲ್ಲ ಅಂತ ಆತ ಸ್ಪಷ್ಟವಾಗಿ ಹೇಳಿದ್ದ. ಗಾಂಧೀಜಿಯವರ ಕೊಲೆಗಾರ ಎನ್ನುವ ಅವಮಾನವನ್ನು ಹೊತ್ತು ಬದುಕುವುದಕ್ಕಿಂತ ಸಾವು ಎಷ್ಟೋ ಮೇಲು ಅಂತ ಆತ ಗಾಂಧೀಜಿ ನೆಲಕ್ಕುರುಳಿದಾಕ್ಷಣ ನಿರ್ಧರಿಸಿದ್ದ. ಅಷ್ಟೇ ಆಸಕ್ತಿಯ ವಿಚಾರವೆಂದರೆ ಕೊನೆಯ ದಿನಗಳಲ್ಲಿ ಗಾಂಧೀಜಿ ಕೂಡಾ ಜೀವನದಲ್ಲಿ ಆಸಕ್ತಿ ಕಳೆದುಕೊಂಡಿದ್ದರು.

ಒಂದು ಕಾಲದಲ್ಲಿ ತಾನು 125 ವರ್ಷ ಬದುಕಬೇಕೆಂದು ಹೇಳಿದ್ದ ಗಾಂಧೀಜಿಗೆ ದೇಶ ವಿಭಜನೆಯಾಗುತ್ತಲೇ ಇನ್ನು ಶಾಶ್ವತವಾಗಿ ಹೊರಟುಬಿಡಬೇಕು ಎಂಬ ಮನೋಭಾವ ಆವರಿಕೊಂಡಿತ್ತು ಅಂತ ಆ ದಿನಗಳಲ್ಲಿ ಅವರ ಹತ್ತಿರವಿದ್ದ ಅನುಯಾಯಿಗಳು ದಾಖಲಿಸಿದ್ದಾರೆ. ಆದರೆ ಖಾಯಿಲೆ ಬಿದ್ದು ಸಾಯುವುದಕ್ಕಿಂತ ಕೊಲೆಯಾಗುವುದು ಮೇಲು ಎನ್ನುವುದಾಗಿತ್ತಂತೆ ಅವರ ನಿರ್ಧಾರ. “ಇಷ್ಟೆಲ್ಲಾ ಆಗಿ ಕಾಯಿಲೆಯಿಂದ ಸತ್ತರೆ ನಾನ್ಯಾವ ಸೀಮೆಯ ಮಹಾತ್ಮ? ಸತ್ತರೆ ಕೊಲೆಗಾರನ ಧಾಳಿಗೆ ಎದೆಯೊಡ್ಡಿ ರಾಮನಾಮ ಪಠಿಸುತ್ತಾ ಸಾಯಬೇಕು” ಅಂತ ತನ್ನ ಮೊಮ್ಮಗಳಾದ ಮನುಬೆನ್‌ಗೆ ಹೇಳಿದ್ದರಂತೆ. ಹಾಗೆಯೇ ಆಯಿತು. ಹೇಗೂ ಸಾಯಲು ತಯಾರಾಗಿದ್ದ ಗಾಂಧೀಜಿಯನ್ನು ಗೋಡ್ಸೆ ಕೊಂದ. ಜೀವಂತವಾಗಿ ಅಪ್ರಸ್ತುತನಾದ ತಾನು ಸತ್ತು ಪ್ರಸ್ತುತನಾಗಬೇಕೆಂದುಕೊಂಡಿರಬೇಕು ಗಾಂಧೀಜಿ – ಏಸುಕ್ರಿಸ್ತನಂತೆ, ಸಾಕ್ರೆಟಿಸನಂತೆ. ಅದನ್ನು ಪೂರೈಸಿಕೊಟ್ಟದ್ದು ಗೋಡ್ಸೆ.

PC : StarsUnfolded

ದೇಶ ವಿಭಜನೆಗೆ ಗಾಂಧೀಜಿ ಕಾರಣ ಎನ್ನುವುದಕ್ಕೋಸ್ಕರ ಕೊಂದೆ ಎನ್ನುತ್ತಾನೆ ಗೋಡ್ಸೆ. ಆದರೆ ಗಾಂಧೀಜಿಯ ಹತ್ಯೆಯ ಪ್ರಯತ್ನ ದೇಶ ವಿಭಜನೆಗೆ ಬಹಳಷ್ಟು ಮುಂದೆಯೇ ನಡೆದಿತ್ತು. ಒಂದಲ್ಲ, ಎರಡಲ್ಲ. ಮೂರು ಬಾರಿ ನಡೆದಿತ್ತು. ಮೊದಲ ಪ್ರಯತ್ನ ನಡೆದದ್ದು 1934ರಲ್ಲಿ. ಆಗ ವಿಭಜನೆ ನಡೆದಿರಲಿಲ್ಲ. ಆ ಮೊದಲ ಪ್ರಯತ್ನವೂ ನಡೆದದ್ದು ಗೋಡ್ಸೆ ಹುಟ್ಟಿದ ಪೂನಾದಲ್ಲಿಯೇ. ಆಗ ಅಲ್ಲಿ ಗಾಂಧೀಜಿ ಅಸ್ಪೃಶ್ಯತೆಯ ವಿರುದ್ಧ ಹೋರಾಡುತ್ತಿದ್ದರು!

ಸಾಮಾನ್ಯವಾಗಿ ರಾಜಕೀಯ ನಾಯಕರ ವಿರುದ್ಧ ಪ್ರತಿಭಟಿಸುವವರು “ಮುರ್ದಾಬಾದ್, “ಡೌನ್, ಡೌನ್ ಇತ್ಯಾದಿ ಘೋಷಣೆ ಕೂಗುತ್ತಾರೆ. ಆದರೆ ಗಾಂಧೀಜಿಯವರ ವಿರುದ್ಧ ಆ ಕಾಲದಲ್ಲಿ ಪ್ರತಿಭಟಿಸುವವರೆಲ್ಲಾ “ಗಾಂಧೀಜಿಯನ್ನು ಕೊಂದುಬಿಡಿ (death to Gandhiji)” ಎನ್ನುವ ಘೋಷಣೆಯನ್ನು ಮತ್ತೆ ಮತ್ತೆ ಕೂಗುತಿದ್ದರು.. ಅಂದಿಗೂ ಇಂದಿಗೂ ಇಂತಹದ್ದೊಂದು ಘೋಷಣೆಯ ದಾಳಿಗೆ ಒಳಗಾದವರಿಲ್ಲ ಎನ್ನಿಸುತ್ತದೆ. ಇದನ್ನು ಕೇಳಿ ಬೇಸತ್ತುಕೊಳ್ಳದ ಗಾಂಧೀಜಿ ಕೊನೆಗೆ ಅದನ್ನು ಒಪ್ಪಿಕೊಂಡು “ಆಗಲಿ ಕೊಂದುಬಿಡಿ” ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಗಾಂಧೀಜಿಯವರ ಮೇಲೆ ಭಾರಿ ಭಾರಿ ದಾಳಿಯಾಗುತ್ತಿದ್ದರೂ ಅದರ ಬಗ್ಗೆ ಯಾರಿಗೂ ಕಾಳಜಿ ಇರಲಿಲ್ಲ.

ಅಂದಿನ ಪೊಲೀಸರ ಮನಸ್ಥಿತಿ ಗೋಡ್ಸೆಯ ಮನಸ್ಥಿತಿಗಿಂತ ಭಿನ್ನವಾಗಿರಲಿಲ್ಲ. ಅವರಲ್ಲಿ ಹಲವರಿಗೆ ಹಿಂದೂ-ಮುಸ್ಲಿಂ ಸಂಘರ್ಷದ ಸಮಯದಲ್ಲಿ ಗಾಂಧೀಜಿ ಪಠಿಸುತಿದ್ದ ಶಾಂತಿ ಮಂತ್ರ ನಪುಂಸಕವಾದದಂತೆ ಕೇಳಿಸುತಿತ್ತು.. ಅವರೆಲ್ಲಾ ಹೇಳಿಕೇಳಿ ಬ್ರಿಟಿಷರ ಕೈಕೆಳಗೆ ಗಾಂಧೀಜಿಯ ವಿರುದ್ಧ ಕೆಲಸ ಮಾಡುತಿದ್ದವರು. ಸಾಲದ್ದಕ್ಕೆ ಹೆಚ್ಚಿನವರು ಯುದ್ಧಾಕಾಂಕ್ಷಿ ಕ್ಷತ್ರಿಯ ಜಾತಿಗಳಿಗೆ ಸೇರಿದವರು. ಗಾಂಧೀಜಿಯ ಕೊಲೆ ಸಂಚಿನ ಬಗ್ಗೆ ಬಂದ ಎಲ್ಲಾ ಗುಪ್ತ ಮಾಹಿತಿಗಳನ್ನೂ ಪೋಲಿಸರು ಕಡೆಗಣಿಸಿದ್ದರು. ಮುದುಕ ಬದುಕಿದರೆಷ್ಟು-ಸತ್ತರೆಷ್ಟು ಎನ್ನುವಂತಿತ್ತು ಅವರ ಮನೋಭಾವ. ಪೊಲೀಸರನ್ನು ನಿಯಂತ್ರಿಸುತಿದ್ದ ಅಂದಿನ ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಬಾಯಿ ಪಟೇಲರು ಗಾಂಧೀಜಿಯವರ ಆಪ್ತ ಶಿಷ್ಯ. ಉಕ್ಕಿನ ಮನುಷ್ಯ.

ಗಾಂಧೀಜಿಯ ಕೊನೆಯ ದಿನಗಳಲ್ಲಿ ನಡೆದ ಘಟನಾವಳಿಗಳನ್ನು ಗಮನಿಸಿದಾಗ ಆಯಕಟ್ಟಿನ ಜಾಗದಲ್ಲಿ ಇದ್ದವರೆಲ್ಲಾ ಸೇರಿ ಗಾಂಧೀಜಿಯನ್ನು ಎತ್ತಿಕೊಂಡು ಗೋಡ್ಸೆಯೆದುರು ನಿಲ್ಲಿಸಿದ್ದರೇನೋ ಎಂಬಂತೆ ಭಾಸವಾಗುತ್ತದೆ. ಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ. ಇಂದಿಗೂ ಒಬ್ಬಂಟಿಯಲ್ಲ. ನೆಹರೂ ಗೋಡ್ಸೆಯನ್ನು ಹುಚ್ಚ ಅಂತ ಕರೆದರು. ಗೋಡ್ಸೆಗೆ ಗಾಂಧಿ ಹುಚ್ಚ ಅಂತ ಅನ್ನಿಸಿರಬೇಕು. ನಾವು ನಂಬಿದ್ದೇ ಸತ್ಯ ಅಂತ ಯೋಚಿಸುವುದೇ ಒಂದು ರೀತಿಯ ಹುಚ್ಚು. ನಮ್ಮ ಕಾಲದ ಶ್ರೇಷ್ಠ ರಾಜಕೀಯ ಮನಶಾಸ್ತ್ರಜ್ಞ ಅಶೀಶ್ ನಂದಿ ಹೇಳುವಂತೆ ಯಾವುದೇ ರಾಜಕೀಯ ಹತ್ಯೆ ನಡೆಸುವ ಒಬ್ಬಾತ ತಾನು ಎಂದೂ ಒಬ್ಬಂಟಿಯಾಗಿರುವುದಿಲ್ಲ. ಆತ ಸಮಾಜದ ಒಂದಷ್ಟು ಮಂದಿಯ ಯಾವುದೋ ರೀತಿಯ ಹುಚ್ಚನ್ನು ಪ್ರತಿನಿಧಿಸುತ್ತಾನೆ.

ನೇಣುಗಂಬದಿಂದ ಹೆಣವಾಗಿ ಇಳಿದ ಗೋಡ್ಸೆಯ ಅಂತ್ಯಕ್ರಿಯೆ ಅಂಬಾಲ ಜೈಲಿನ ಆವರಣದ ಹೊರಗೆ ನಡೆಯುತ್ತದೆ. ಅದು ಮುಗಿದ ತತ್‌ಕ್ಷಣ ಸರಕಾರ ಆ ಜಾಗವನ್ನು ನಿಷೇಧಿತ ಪ್ರದೇಶವನ್ನಾಗಿ ಮಾಡಿ ಸ್ಥಳವನ್ನು ಉತ್ತು ಇಡೀ ಪರಿಸರದಲ್ಲಿ ಹಸಿರು ಹುಲ್ಲು ನೆಡಿಸುತ್ತದೆ. ಆ ಜಾಗವನ್ನು ಯಾರೂ ಗುರುತಿಸದಂತೆ ಮಾರ್ಪಡಿಸುತ್ತದೆ. ಯಾರಾದರೂ ಗೋಡ್ಸೆಗೊಂದು ಗೋರಿ ಕಟ್ಟಿ ಅದನ್ನೊಂದು ಪವಿತ್ರ ಸ್ಥಳವನ್ನಾಗಿ ಮಾಡದಿರಲಿ ಎನ್ನುವ ಉದ್ದೇಶದಿಂದ ಸರಕಾರ ಹಾಗೆ ಮಾಡಿತ್ತು. ಗೋಡ್ಸೆ ಕೊಂದ ಗಾಂಧಿ ಮರಣಾನಂತರ ಉತ್ಕಟವಾಗಿ ಬದುಕಿದರು. ಗಾಂಧಿಯನ್ನು ಕೊಂದ ಗೋಡ್ಸೆಯೂ ಹಾಗೆಯೇ. ಅನಾಮಧೇಯನಾಗಿ ಅಳಿದು ಹೋಗುತಿದ್ದ ಗೋಡ್ಸೆ ಎಂಬ ಅಂಚೆ ಇಲಾಖೆ ನೌಕರನ ಮಗ ಚರಿತ್ರೆಯಲ್ಲಿ ಶಾಶ್ವತ ಸ್ಥಾನ ಪಡೆದುಬಿಟ್ಟ. ಗಾಂಧೀಜಿಯವರನ್ನು ಅರಿಯುವ ಪ್ರಯತ್ನದ ಜತೆಜತೆಗೆ ಗೋಡ್ಸೆಯನ್ನು ಅರಿಯುವ ಪ್ರಯತ್ನವೂ ನಡೆಯುತ್ತಲೇ ಇದೆ.

ಗಾಂಧೀಜಿಯವರನ್ನು ಸಾರ್ವಜನಿಕವಾಗಿ ಒಪ್ಪಿ ಅಂತರಂಗದಲ್ಲಿ ದ್ವೇಷಿಸುವರು ಹಲವರಿದ್ದಾರೆ. ಗೋಡ್ಸೆಯನ್ನು ಬಹಿರಂಗವಾಗಿ ಬಹಿಷ್ಕರಿಸಿ ಅಂತರಂಗದ ಅತಿಥಿಯನ್ನಾಗಿ ಮಾಡಿಕೊಂಡವರು ಅದಕ್ಕಿಂತ ಹೆಚ್ಚಿದ್ದಾರೆ. ಭಾರತದಲ್ಲಿ ಎಲ್ಲಾ ರೀತಿಯಲ್ಲೂ ಮುಕ್ತವಾಗಿ ಟೀಕಿಸಬಹುದಾದ ಒಬ್ಬ ರಾಜಕೀಯ ನಾಯಕ ಅಂತ ಇದ್ದರೆ ಅದು ಗಾಂಧೀಜಿ ಮಾತ್ರ. ಆದರೂ ಗಾಂಧೀಜಿಯವರ ಬಗ್ಗೆ ಬಾಲಿಶವಾಗಿ ಮಾತನಾಡುವವರು ಗಾಂಧೀಜಿ ಅವರನ್ನು ದ್ವೇಷಿಸುವರ ದೃಷ್ಟಿಯಲ್ಲೂ ತೀರ ಅಲ್ಪರಂತೆ ಕಾಣಿಸುತ್ತಾರೆ.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯ, ಕಾನೂನು ಮತ್ತು ಆಡಳಿತ ಹಾಗೂ ಭಾರತದಲ್ಲಿ ಆಡಳಿತದ ಸವಾಲುಗಳು ವಿಷಯವನ್ನು ಬೋಧಿಸುವ ನಾರಾಯಣ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿರುವ ಸ್ವತಂತ್ರ ಚಿಂತಕ.


ಇದನ್ನೂ ಓದಿ: ಸಂಪಿಗೆ ಬನದ ಹಾಡು ಹೇಳೋರು ಯಾರು? ಚಂಪಾರಣ ಸತ್ಯಾಗ್ರಹ ಮತ್ತು ರೈತ ಹೋರಾಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...