Homeಕರ್ನಾಟಕಹಿಂಗಿದ್ದ ನಮ್ಮ ರಾಮಣ್ಣ-14; "ಕಾವೇರಿಗೆ ಕ್ಯರೆ ಕಟ್ಟಿ ರೈತರ ಗದ್ದಿಗೆ ನೀರು ಹರಿಯಂಗೆ ಮಾಡಿದ್ದ. ರೇಷ್ಮೆಹುಳ...

ಹಿಂಗಿದ್ದ ನಮ್ಮ ರಾಮಣ್ಣ-14; “ಕಾವೇರಿಗೆ ಕ್ಯರೆ ಕಟ್ಟಿ ರೈತರ ಗದ್ದಿಗೆ ನೀರು ಹರಿಯಂಗೆ ಮಾಡಿದ್ದ. ರೇಷ್ಮೆಹುಳ ತಂದುಕೊಟ್ಟಿದ್ದ”

- Advertisement -
- Advertisement -

ಮುಂದೆ ರಾಮಣ್ಣ ಶ್ರೀರಂಗಪಟ್ಟಣಕ್ಕೆ ವರ್ಗ ಆದ. ಇದೊಂತರ ನಮ್ಮೂರ ದಾರಿಲೆ ಯಿತ್ತು. ಮೈಸೂರಿಂದ ಬೆಂಗಳೂರು ಅಥವಾ ಊರಿಗೆ ಬರಬೇಕಾದ್ರೆ ಶ್ರೀರಂಗಪಟ್ಟಣದಲ್ಲಿಳಿದು ರಾಮಣ್ಣನ್ನ ಮಾತಾಡಿಸಿಗಂಡು ಬರಬಹುದಿತ್ತು. ಅಂಗಾಗಿ ಶ್ರೀರಂಗಪಟ್ಟಣಕ್ಕೂ ಹೋದೆ.

“ಬಾಲ ಯಾಕಿನ್ನು ಬರಲಿಲ್ಲವಲ್ಲ ಅನ್ನಕಂಡಿದ್ದೆ” ಅಂದ.

“ಡಾಕ್ಟರು ನೀನೊಬ್ಬನೆಯಾ” ಅಂದೆ.

“ಹಂದಿ ಮರಿದ್ದಂಗಿದ್ದಿವಿ ಕಲ” ಅಂದ.

“ಅಂಗಾದ್ರಾರಾಮಾಗಿದ್ದಿ ಬುಡು” ಅಂದೆ.

“ಡಾಕ್ಟರು ಆರಾಮಾಗಿರಕ್ಕಾದತ್ಲ, ಈ ಜನಗಳ ಕಾಯಿಲೆ, ಅವುರ ಕಷ್ಟ, ಅವುರ ಬಡತನ ನೋಡುದ್ರೆ ಈ ಜನ್ಮ ಸಾಕು ಅನ್ನಸ್ತದೆ ಕಲ. ಟಿಪ್ಪು ಸುಲ್ತಾನ ಸಾಯೋವರಿಗೂ ಬರಿ ಯುದ್ಧ ಮಾಡಿದ ನೋಡು. ಅಂಗೆ ನಾವು ಈ ಜನಗಳ ಕಾಯಿಲೆ ವಿರುದ್ಧ ಹೋರಾಡಬೇಕಾಗ್ಯದೆ. ಟಿಪ್ಪು ನೋಡ್ಳ, ಅವುರಪ್ಪ ಸತ್ತಾಗ್ಲು ಯುದ್ಧ ಭೂಮಿಲಿದ್ದ ಕಲ ಅಂದ. ರಾಮಣ್ಣ ಟಿಪ್ಪು ಸುಲ್ತಾನನ ಜಾಗದಲ್ಲಿ ಕುತಗಂಡು ಅದೇ ಗ್ಯಾನದಲ್ಲಿದ್ದಂಗೆ ಕಂಡ. ನಾನು ಕಂಡುಕೂಡ್ಳೆ ಅವುನ ಜೊತೆಲಿದ್ದ ಡಾಕ್ಟರಿಗೆ “ಇಲ್ಲೆ ಬರ್ತಿನಿ” ಅಂತ ಹೇಳಿ ”ನಡಿಲ” ಅಂದ. ನಾನು ಕಾಫಿಕುಡಿಯಕ್ಕೆ ಕರಿತನೆ ಅನ್ನಕಂಡು ವಂಟ್ರೆ ಅವುನು ಮೈಸೂರು ರೋಡಲ್ಲಿ ವಸಿದೂರ ಹೋಗಿ ಯಡಕಡಿಗೆ ತಿರಿಕಂಡ

“ಇದೆಲ್ಲಿಗೊ” ಅಂದೆ.

“ಗೋಸಾಯಿ ಘಾಟಿಗೋಗು ಬರನ ನಡಿಲ” ಅಂದ.

“ಅದೆಲ್ಲದೋ” ಅಂದೆ.

“ತೋರ್‍ಸ್ತೀನಿ ಬಾ. ನಮ್ಮ ಜನ ಏನ್ನೂ ನೋಡಿರಲ ಕಲ. ಅಂಗೆ ಸತ್ತೋಯ್ತವೆ. ಈಗ ನಿನ್ನೆ ತಗೋ. ಶ್ರೀರಂಗಪಟ್ಟಣದಲ್ಲಿರೋ ಗೋಸಾಯಿಘಾಟನೆ ನೋಡಿಲ್ಲ” ಅಂದ.

“ನೋಡದೆಯಿದ್ರು ಕೇಳಿದ್ದಿನಿ ಕನೊ. ಅಲ್ಲಿ ಬ್ರಾಂಮಣರು ಸೇರಿಕೊಂಡು ಸತ್ತೋರಿಗೆ ಪಿಂಡ ಹಾಕತರಂತೆ. ಅದ್ಕೆ ಅಲ್ಲಿ ಯಾರೂ ಹೋಗದಿಲ್ಲ. ನಾನಿಲ್ಲಿ ಪಶ್ಚಿಮವಾಹಿನಿಗೆ ಒಂದು ಮದುವೆಗೆ ಬಂದಿದ್ದೆ, ಆಗಂಗಂದ್ರು” ಅಂದೆ.

ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-13; ರಾಮಣ್ಣನ ಒಂದು ಕತಿಗೆ ಲಂಕೇಶ್ ಕೇವಲ 200 ರೂಪಾಯಿ ಕಳಿಸಿದ್ರಂತೆ; ಸಿಟ್ಟು ಬಂದು ಅದನ್ನ ವಾಪಸ್ಸು ಕಳಿಸಿದನಂತೆ..

“ಈ ಶ್ರೀರಂಗಪಟ್ಟಣದಲ್ಲಿ ಹ್ಯಜ್ಜೆ ಮಡಗದಲ್ಯಲ್ಲ ಒಂದು ಇತಿಹಾಸ ಅದೆ ಕಲ. ನಾನು ಬಂದಾಗಿಂದ ಟಿಪ್ಪು ಸುಲ್ತಾನ್ ವಿಷಯ ಕೇಳದೆ ಆಗದೆ. ಇದೊಂಥರ ಪತನವಾದ ಊರು. ಟಿಪ್ಪು ಕಾಲದ ಕೋಟೆ ಕೊತ್ತಲದಿಂದ ಹಿಡಿದು ಈ ಸರಕಾರದ ಕಟ್ಟಡದವರಿಗೂ ಹೊಂದಾಣಿಕೆನೆ ಕಾಣದಿಲ್ಲ ಕಲ. ಇದು ಇಲ್ಲ ಅಂಗಿರಬೇಕಿತ್ತು, ಇಲ್ಲ ಹಿಂಗಿರಬೇಕಿತ್ತು ಕಲ” ಅಂದ.

“ಅದ್ಯಂಗಾಯ್ತದೊ, ರಾಜಾಡಳಿತದ ಕತೆನೆ ಬ್ಯಾರೆ. ನಮ್ಮ ಡೆಮಾಕ್ರಸಿ ಇಂಜಿನಿಯರ್ ಪ್ಲಾನೆ ಬ್ಯಾರೆ. ಅಂಗಾಗಿ ನಮ್ಮ ಯಾವುದೇ ರಾಜ ಪಾಳೆಗಾರನ ಊರು ನೋಡಿದ್ರು ಅಸಂಬದ್ಧವಾಗಿ ಕಾಣ್ತವೆ. ಏನು ಮಾಡನೆ” ಅಂದೆ.

“ಅದು ನಿಜವೆ ಬುಡು, ಆ ಕಾಲದಲ್ಲಿ ಡ್ಯಾಮ್, ಕಟ್ಟಡ ಕಟ್ಟಿದ್ರೆ ಅದರ ದುಡ್ಡು ಪೂರ ಅದಕೆ ಖರ್ಚಾಗದು. ಅದಕೆ ಅಲವೆ ಕನ್ನಂಬಾಡಿ ಕಟ್ಟೆ ಇನ್ನು ಭದ್ರವಾಗಿರದು”. ಅಂದ.

“ಅದಸರಿ ಗೋಸಾಯಿಘಾಟೆಲ್ಲೊ” ಅಂದೆ.

“ಮುಂದದೆ ಬಾರ್ಲ. ಅಯ್ಯನಿಗೆ ನ್ಯಡಿಯಕ್ಕಾಗದಿಲವೇನೋ” ಅಂದ.

“ನೀನು ಮಂಡ್ಯದಿಂದ ಓಡಾಡ್ತಿಯಲ್ಲ, ಟೈಮಾಗದಿಲವ” ಅಂದೆ.

“ಇಡೀ ರಾತ್ರೆ ಬಸ್ಸು ಓಡಾಡ್ತದೆ ಕಲ. ಈಗ ನೀನು ನ್ಯಡಕಂಡು ಬತ್ತಾಯಿದ್ದಿ ನೋಡು, ಅಲ್ಲಿ ಟಿಪ್ಪು ಸುಲ್ತಾನ್ ಬತ್ತಿದ್ದ ಕಲ. ಈ ಗೋಸಾಯಿಘಾಟಿನ ಕಲ್ಲು ಚಪ್ಪಡಿ ನೋಡಿದ್ರೆ, ಅವೂನ ಅವನ ಕಾಲ್ದವೆಯ. ನೋಡ್ಳ ಟಿಪ್ಪು ಒಕ್ಕಲಿಗರೇ ಜಾಸ್ತಿಯಿರೋ ಜಾಗದಲ್ಲಿ ರಾಜನಾಗಿದ್ದ. ಅಂಗಾಗಿ ರೈತಾಪಿ ಜನಗಳಿಗೆ ಭಾರಿ ಅನುಕೂಲ ಮಾಡಿದ್ದ ಕಲ. ಅಗೋ ಆಕಡೆ ಇರದೆ ಗಂಜಾಮು. ಅಲ್ಲಿ ವಳ್ಳೆ ಎತ್ತಿನಗಾಡಿ ತಯಾರಿಸಿ ರೈತರಿಗೆ ಕೊಡಂಗೆ ಮಾಡಿದ್ದ. ಕಾವೇರಿಗೆ ಕ್ಯರೆ ಕಟ್ಟಿ ರೈತರ ಗದ್ದಿಗೆ ನೀರು ಹರಿಯಂಗೆ ಮಾಡಿದ್ದ. ರೇಷ್ಮೆಹುಳ ತಂದುಕೊಟ್ಟಿದ್ದ. ಇದ್ಯಲ್ಲಾತಕಿಂತುವೆ ಅವುನ ಕಾಲದಲ್ಲಿ ನಮ್ಮ ಗ್ರಾಮ ದೇವತೆಗಳಿಗೆ ನರಬಲಿ ಇತ್ತು; ಅದನ್ನ ತಪ್ಪಿಸಿದ. ಸೂಳೆಗಾರಿಕೆ ಮಾಡಂಗಿರಲಿಲ್ಲ. ಮಕ್ಕಳ ಜೀತಕೆ ಇಟಗಳಂಗಿರಲಿಲ್ಲ. ಒಬ್ಬನೇ ವಬ್ಬ ಒಕ್ಕಲಿಗ ಟಿಪ್ಪು ಬಗ್ಗೆ ದೂರ ಹೇಳದಿಲ್ಲ ಗೊತ್ಲ. ಇನ್ನ ಶೃಂಗೇರಿ ಮಠದ ಕತೆ ಗೊತ್ಲ” ಅಂದ.

ಟಿಪ್ಪುಸುಲ್ತಾನ್

“ಗೊತ್ತು ಬುಡು ಅದೇನೇಳ್ತಿ. ನಮಿಗ್ಯಾವತ್ತು ಮರಾಟ್ರೆ ವೈರಿಗಳಂಗೆ ನ್ಯಡಕಂಡವ್ರೆ. ಇನ್ನ ಟಿಪ್ಪು ಸುಲ್ತಾನ ಅಂದ್ರೆ ಸುಮ್ಮನಿದ್ದಾರೆ” ಅಂದೆ.

“ಟಿಪ್ಪುಸುಲ್ತಾನನ ಆಡಳಿತ ಒಕ್ಕಲಿಗರ ಪ್ರಾಬಲ್ಯಯಿರೊ ಪ್ರಾಂತ್ಯದಲ್ಲೇ ಇದ್ರು, ಎಂಟು ಜನ ಮಂತ್ರಿಗಳ ಪೈಕಿ ಐದು ಜನ ಬ್ರಾಮಣರಿದ್ರು. ಇನ್ನ ಮೂರು ಜನ ಮುಸ್ಲಿಮರಿದ್ರು. ದಿವಾನ್ ಪೂರ್ಣಯ್ಯನೇ ಬ್ರಾಹ್ಮಣ. ಇವುರ್ಯಲ್ಲ ಆಡಳಿತ ನ್ಯಡುಸ್ತಾಯಿದ್ರೆ, ಪಾಪ ಅವುನು ಯುದ್ಧ ಭೂಮಿಲಿದ್ದ ಕಲ. ಅವುನು ರಾಜ ಆಗಿ ಯಾವ ಸುಖ ಉಂಡವುನೆ ಅಂತ ನೋಡಿದ್ರೆ ಏನೂ ಇಲ್ಲ ಕಲ. ಆ ಕಡೆ ಮರಾಠರ ಹ್ವಡತ, ಈ ಕಡೆ ನಿಜಾಮರ ಕುತಂತ್ರ. ಇನ್ನ ಮೈಮರತ್ರೆ ಸಾಕು ಬ್ರಿಟಿಷ್ ಹೈನಾಗಳು ಬಾಯಾಕತಿದ್ದೊ. ಅವುರ ಓಡಸನ ಅಂತ ಯುದ್ಧ ಮಾಡಿದ್ರೆ, ಆ ಬ್ರಿಟಿಷ್ ಬಡ್ಡೆತ್ತವು ಯಂತ ನ್ಯಾಯ ತತ್ತರೆ ಅಂತೀ, ನಮಿಗೆ ಯುದ್ಧ ಬೇಕಿರಲಿಲ್ಲ, ಆದ್ರು ಯುದ್ಧ ಮಾಡಿದ್ದಿ; ಅದ್ಕೆ ಮೂರುಕೋಟಿ ರೂಪಾಯಿ ದಂಡ ಕೊಡು ಅಂತ ಮಂಡನ್ಯಾಯ ತಗಿತವೆ. ಪಾಪ ಇವುನೆಲ್ಲಿಂದ ತಂದನೂ. ಅದ್ಕೆ ಮಕ್ಕಳ ಅಡಯಿಟ್ಟು, ಆಗಾಗ್ಗೆ ದುಡ್ಡುಕೊಟ್ಟು ಬುಡುಸ್ಕಂಡೋಯ್ತಿನಿ ಅಂತ ಕಳುಸ್ತನೆ. ಆ ಹುಡುಗ್ರು ಅಳತ ಹೋಯ್ತವೆ. ಅದ ಓದಿದ್ರ ಒಂಥರ ಆಯ್ತದೆ ಕಲ. ಇನ್ನ ಅವತ್ತಿನ ನಿಜವಾದ ಸನ್ನಿವೇಶ ಯಂಗಿರಬಹುದು. ಆಗ ನಮ್ಮ ಬಡವರು ಮಕ್ಕಳ ಜೀತಕ್ಕೆ ಮಡಗಿ ದುಡ್ಡೀಸಗಂಡೋಗರು ನೋಡು, ಅಂಗದೆ ಕಲ ಟಿಪ್ಪು ಮಾಡಿದ ಕ್ಯಲಸ. ಇನ್ನ ಅವುನ ಮ್ಯಾಲೆ ಯುದ್ಧ ಆಯ್ತದೆ. ಬ್ರಿಟಿಷರು ಶ್ರೀರಂಗಪಟ್ಟಣದ ಕೋಟೆಗೆ ಮುತ್ತಿಗೆ ಹಾಕಿರತಾರೆ. ಅಲ್ಲಿ ಯಲ್ಲಾನು ಅರೇಂಜ್ ಮಾಡಿ, ಊಟ ಮಾಡಿಕಂಡೋಗಕ್ಕೆ ಬಂದು ಊಟಕ್ಕೆ ಕುಂತಿರತನೆ. ಬ್ರಿಟಿಷ್ ಸೈನಿಕರು ಕೋಟೆವಳಿಕೆ ನುಗ್ಗಿದ್ದು ಗೊತ್ತಾಯ್ತದೆ. ಊಟನೂ ಬುಟ್ಟೆದ್ದು ಬಂದು ಹೋರಾಡಿ ಸತ್ತೋಯ್ತನೆ. ಅವುನ ಹ್ಯಣ ಸಿಕ್ಕಿದಾಗ ಇನ್ನೂ ಬಿಸಿಯಾಗಿದ್ದ ಅಂದ್ರೆ, ಅವುನ ರಕ್ತ ಎಷ್ಟು ಕುದ್ದಿರಬೇಕು ಲೆಕ್ಕ ಹಾಕು”, ಅಂತ ಇವುನೆ ಚೆಕ್ ಮಾಡಿದೊನಂಗೆ ಮುಖ ನೋಡಿದ.

ಗೋಸಾಯಿಘಾಟು ಚನ್ನಾಗಿತ್ತು. ನದಿ ನೀರಗಂಟ ಮೆಟ್ಳು ಕಲ್ಲಿದ್ದೊ. ಗಂಗೆ ಪೂಜೆ ಪಿಂಡ ಹಾಕೋರು ಯಸ್ದು ಹೋದ ಹೊಸಬಟ್ಟೆ, ಹರಸಣದನ್ನ ಯಲ್ಲಾ ಇಟ್ಟಾಡತ ನಮ್ಮ ಜನಗಳ ನಂಬುಕೆ ಯಂಗವೆ ಅನ್ನದ ತೋರತ ಬಿದ್ದಿದ್ದೊ. ಬ್ರಾಮಣರು ಪಿಂಡಹಾಕಿ ಹೋದ ಜಾಗ ಮಾಟ ಮಾಡಿದ ಜಾಗದಂಗೆ ಕಾಣತಿದ್ದೊ. ಕಾವೇರಿ ಸದ್ದು ಮಾಡ್ತ ಹರಿತಿದ್ಲು. ನದಿ ಪಕ್ಕದಲ್ಲಿ ಮರಗಿಡಗಳು ಸಮೃದ್ಧವಾಗಿದ್ದೊ. ಇದ್ದಕಿದ್ದಂಗೆ ಒಂದು ನಿಶಬ್ದ ಆವರುಸ್ತು. ಅಲ್ಲಿ ಅಂತೂ ರಾಮಣ್ಣ ವಳ್ಳೆ ಜಾಗಕ್ಕೆ ಕರಕಂಡು ಬಂದ ಅನ್ನಸ್ತು. ದೂರದಲ್ಲಿ ಯುವ ಪ್ರೇಮಿಗಳು ಕುಂತಿದ್ರು. ರಾಮಣ್ಣ ತಿರಗ ಟಿಪ್ಪುಸುಲ್ತಾನ್ ಇತಿಹಾಸಕ್ಕೆ ಮಗಚಿಗಂಡ.

ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-12; “ಶೈವ ಸಂಸ್ಕೃತಿಲಿ ನೀರೆ ಕಂಡ್ಲ ಪ್ರಧಾನ”

“ಟಿಪ್ಪು ಸಾವಿನಿಂದ ಶ್ರೀರಂಗಪಟ್ಟಣ ಪತನ ಆಯ್ತು ಕಲ. ರಾಜ ಸತ್ತೋದ. ಮಂತ್ರಿಗಳು ಅಂಗೆ ಉಳಕಂಡ್ರು. ದಿವಾನ ಬ್ರಿಟೀಷರನೇ ಅಲ್ಲಾಡಿಸಂಗಿದ್ದ. ಬ್ರಿಟಿಷರು ಕರ್ನಾಟಕನ ಮೂರು ಭಾಗ ಮಾಡಿ, ಉತ್ತರ ಕರ್ನಾಟಕದ ಅರ್ಧ ತಗದು ಬೊಂಬಾಯಿಗೆ ಕೊಟ್ರು. ಇನ್ನರ್ಧ ಹೈದರಾಬಾದಿಗೆ ದಾನ ಮಾಡಿದ್ರು. ಇನ್ನ ದಕ್ಷಿಣ ಕರ್ನಾಟಕನ ಮೈಸೂರು ರಾಜವಂಶದೊರಿಗೆ ಕೊಟ್ಟು ದಿವಾನ್ ಪೂರ್ಣಯ್ಯ ಮುಂದುವರಿಯಂಗೆ ಮಾಡಿಹೋದ್ರು. ಪೂರ್ಣಯ್ಯ ನಮ್ಮ ಮೈಸೂರು ಆಡಳಿತದ ರೆವಿನ್ಯೂ ಕಲಕ್ಷನ್ ಅಧಿಕಾರಿಗಳಾಗಿ ಶ್ಯಾನುಭೋಗರು ಅಂತ ಬ್ರಾಹ್ಮಣರನ್ನ ನೇಮಕ ಮಾಡಿದ. ಇವುರಿಗ್ಯಲ್ಲ ಭೂ ದಾಖಲೆ ಸಿಕ್ಕಿದ್ದರಿಂದ ಕ್ಯರೆ ಹಿಂದಿನ ಗದ್ದೆನ್ಯಲ್ಲ ತಮ್ಮೆಸರಿಗೆ ಖಾತೆ ಮಾಡಿಕಂಡು ಗುತ್ತಿಗೆ ಕೊಟ್ರು, ವಾರಕ್ಕೊಟ್ರು. ಅಂತು ಉಗುರು ಕಣ್ಣು ಮಣ್ಣಾಗದಂಗೆ ಉಣ್ಣತಾ ಕುತಗಂಡ್ರು. ಮಕ್ಕಳು ಓದಬೇಕಾದ್ರೆ ಒಂದು ಆದಾಯದ ಮೂಲ ಇರಬೇಕು ಕಲ. ಈ ಶ್ಯಾನುಭೋಗರಿಗೆ ಯಾವಾಗ ರೆವಿನ್ಯೂ ಆದಾಯ ಸಿಕ್ತೋ, ಆಗವುರ ಮಕ್ಕಳು ಓದಕ್ಕೋದ್ರು. ಓದದು ಬುಟ್ಟು ಇನ್ನೇನು ಮಾಡ್ಳಿಲ್ಲ. ಓದಿ ವಿದ್ಯಾವಂತರಾದ್ರು. ಅಂಚೆ ಕಚೇರಿ, ಎಲೈಸಿ, ಬ್ಯಾಂಕು, ಸರಕಾರಿ ಹುದ್ದೆಲ್ಯಲ್ಲ ಸೇರಿಕಂಡ್ರು. ನೋಡು ಪೂರ್ಣಯ್ಯನ ದೂರದೃಷ್ಟಿ ಏನು ಕ್ಯಲಸ ಮಾಡದೆ” ಅಂದ. ಅಂತೂ ರಾಮಣ್ಣ ಒಳ್ಳೆ ಪ್ರವಾಸ ಮಾಡಿಸಿದ್ದ. ಆ ಗೋಸಾಯಿಘಾಟಲ್ಲಿ ಮಾತೂ ಬ್ಯಾಡ ಅನ್ನುಸ್ತದೆ. ರಾಮಣ್ಣನ ನೋಡಕ್ಕೆ ಬಂದ್ಯಾಗಲ್ಲ ಇಲ್ಲಿಗೆ ಬರಬೇಕು ಅನ್ನಸ್ತು.

ದಿವಾನ್ ಪೂರ್ಣಯ್ಯ

“ಈ ಶ್ರೀರಂಗಪಟ್ಟಣದಲ್ಲಿ ಇನ್ನೂ ಏಟೊರ್ಸ ಇರನ ಅಂತ ಮಾಡಿದ್ದಿ” ಅಂದೆ.

“ನಾನೆಲ್ಲೂ ನನ್ನ ಅವುಧಿ ಬಗ್ಗೆ ತಲೆಕೆಡಿಸಿಕೊಂಡೋನಲ್ಲ ಕಲ. ಆಗೇನು, ಹಳೇಬೀಡಿಗೋಗಿದ್ದು ಸೇಡಿನ ವರ್ಗಾವಣೆಯಿಂದ ಅಂತ ನಿಮ್ಮತ್ರಕೆ ಬಂದಿದ್ದೆ. ಈಗಂಗಿಲ್ಲ ಎಲ್ಲಿಗಾಕಿದ್ರು ಹೋಯ್ತಿನಿ. ಹುಲಿಗೆ ಯಾವ ಕಾಡಾದ್ರೇನ್ಲ, ಮಾಂಸನೆ ಅಲವೆ ತಿನ್ನದು ಅದು” ಅಂದ.

“ಅದು ಸರಿ. ಹುಲಿ ಉದಾಹರಣೆ ನಿನಿಗೆ ಸರಿಯಾಗದಿಲ್ಲ. ಹುಲಿ ಮಾಂಸನೆ ತಿಂದ್ರುವೆ ಕಡವೆ, ಜಿಂಕೆ, ಕಾಡೆಮ್ಮೆಯ ಬೇಟೆಯಾಡ್ತದೆ. ಅದೇ ಕುರುಚಲ ಕಾಡಲ್ಲಿ ಮೊಲ, ಇಲಿ, ತ್ವಾಡ ಇರತವೆ. ಅಲ್ಲಿರಕ್ಕಾದತೆ? ಅದು ಉಪಾಸಯಿದ್ದು ಸತ್ತೋಯ್ತದಪ್ಪ” ಅಂದೆ.

ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-11; ’ನಾಗೇಗೌಡ್ರ ದೊಡ್ಡಮನೆ ನೋಡಬೇಕು ಕಲ’ ಅಂದ-ಅವುನ ಕಲ್ಪನೆಯ ದೊಡ್ಡಮನೆ ಅಲ್ಲಿರಲಿಲ್ಲ

“ಏನಾರವೊಂದೇಳತಿ ಕಲ ನೀನು, ನಡಿಲ ಕತ್ಲಾತು” ಅಂದ.

ಬೆಳಕಲ್ಲಿ ನೋಡಿದ ಶ್ರೀರಂಗಪಟ್ಟಣ ಕತ್ಲೆಯಾದ ಮ್ಯಾಲೆ ಒಂಥರ ಕಾಣ್ತು. ರಾಮಣ್ಣ ಒಂದು ಅರ್ಥೈಸಲಾಗದ ಅನುಭವ ಮಾಡಿಸಿದ್ದ. ಅವುನು ಯಾರೇ ಬಂದ್ರು ಮನಿಗೆ ಕರಕಂಡೋಗಿ ಬಾಡ ತರೋನು. ಇಲ್ಲ ಬಾರಿಗೆ ಕರಕಂಡೋಗನು. ಆದ್ರೆ ಇವತ್ತು ಗೋಸಾಯಿಘಾಟತ್ರ ಕರಕಂಡು ಬಂದು ನದಿತಟದ ನಿಸರ್ಗ ತೋರಿ, ಟಿಪ್ಪು ಬಗ್ಗೆ ಪಾಠ ಮಾಡಿದ್ದು, ನಾನು ಮರಿಯಕ್ಕಾಗದ ನ್ಯನಪಾಯ್ತು.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...