ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳನ್ನು ಮತ್ತಷ್ಟು ಉಪವರ್ಗೀಕರಿಸುವ ಅಧಿಕಾರ ರಾಜ್ಯಗಳಿಗೆ ಇಲ್ಲ ಎಂಬ 2004ರ ತೀರ್ಪಿನ ಸಿಂಧುತ್ವವನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರ ಸಂವಿಧಾನ ಪೀಠವು, ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಲು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಉಪವರ್ಗೀಕರಣ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳು ಹೊಂದಿವೆಯೇ ಎಂಬ ಕಾನೂನಿನ ಪ್ರಶ್ನೆಯ ಬಗ್ಗೆ ಪರಿಶೀಲನೆ ಆರಂಭಿಸಿದೆ. ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಮಿಶ್ರಾ ಅವರನ್ನೊಳಗೊಂಡ ಪೀಠವು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ನ 2010ರ ತೀರ್ಪನ್ನು ಪ್ರಶ್ನಿಸಿ ಪಂಜಾಬ್ ಸರ್ಕಾರ ಸಲ್ಲಿಸಿದ ಪ್ರಮುಖ ಅರ್ಜಿ ಸೇರಿದಂತೆ 23 ಅರ್ಜಿಗಳ ವಿಚಾರಣೆ ನಡೆಸುತ್ತಿದೆ.
ಪಂಜಾಬ್ನ ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳ (ಸೇವೆಗಳಲ್ಲಿ ಮೀಸಲಾತಿ) ಕಾಯಿದೆ-2006 ರ ಸೆಕ್ಷನ್ 4 (5) ನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಅದು ‘ವಾಲ್ಮೀಕಿಗಳು’ ಮತ್ತು ‘ಮಝಬಿ ಸಿಖ್’ ಜಾತಿಗಳಿಗೆ ಸಾರ್ವಜನಿಕ ಉದ್ಯೋಗಗಳಲ್ಲಿ ಎಸ್ಸಿ ಕೋಟಾದೊಳಗೆ 50% ಮೀಸಲಾತಿಗೆ ಆದ್ಯತೆ ನೀಡುತ್ತಿತ್ತು. ಇವಿ ಚಿನ್ನಯ್ಯ ವರ್ಸಸ್ ಆಂಧ್ರಪ್ರದೇಶ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನ 2004ರ ಐವರು ನ್ಯಾಯಾಧೀಶರ ಸಂವಿಧಾನ ಪೀಠದ ತೀರ್ಪನ್ನು ಈ ನಿಬಂಧನೆ ಉಲ್ಲಂಘಿಸಿದೆ ಎಂಬುದನ್ನೂ ಒಳಗೊಂಡಂತೆ, ಈ ನಿಬಂಧನೆಯು ಅಸಂವಿಧಾನಿಕ ಎಂದು ಹೈಕೋರ್ಟ್ ಹೇಳಿತ್ತು.
ಪರಿಶಿಷ್ಟ ಜಾತಿಗಳು ಎಂದು ಪರಿಗಣಿತವಾಗಿರುವ ಜಾತಿಗಳನ್ನು, ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ತೆಗೆಯುವ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರವೇ ವಿನಾ ವಿಧಾನಸಭೆಗಳಿಗೆ ಇಲ್ಲ ಎಂದು 2004ರ ತೀರ್ಪಿನಲ್ಲಿ ಹೇಳಲಾಗಿದೆ. 2004ರ ತೀರ್ಪು ತಮಗೆ ಅನ್ವಯಿಸುವುದಿಲ್ಲ ಎಂದು ಕೂಡ ಪಂಜಾಬ್ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಹೇಳಿತ್ತು. ಪಂಜಾಬ್ ಸರ್ಕಾರದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ನ ಐವರು ನ್ಯಾಯಮೂರ್ತಿಗಳ ಪೀಠವು, ಚಿನ್ನಯ್ಯ ತೀರ್ಪಿನಲ್ಲಿ ಹೇಳಿದ್ದಕ್ಕೆ ಭಿನ್ನವಾದ ನಿಲುವು ತಾಳಿತು. ಇಡೀ ವಿಚಾರವನ್ನು 7 ಅಥವಾ ಅದಕ್ಕೂ ಹೆಚ್ಚಿನ ಸಂಖ್ಯೆಯ ನ್ಯಾಯಮೂರ್ತಿಗಳನ್ನು ಹೊಂದಿರುವ ವಿಸ್ತೃತವಾದ ನ್ಯಾಯಪೀಠವು ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಇತರ ಹಿಂದುಳಿದ ವರ್ಗಗಳ (ಒಬಿಸಿ) ಪ್ರಕರಣದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಗಳ ಒಳಗೆ ಉಪ-ವರ್ಗೀಕರಣಕ್ಕೆ ಅನುಮತಿಸಲಾಗಿದೆಯೇ ಎಂಬುವುದನ್ನು ಕೋರ್ಟ್ ಗಮನಿಸಿದೆ. ಒಬಿಸಿಗಳ ವಿಷಯದಲ್ಲಿ ಇಂದ್ರ ಸ್ವಾಹ್ನಿ (ಮಂಡಲ್ ಪ್ರಕರಣ) ತೀರ್ಪು ಪ್ರಕಾರ ಹೆಚ್ಚು ಹಿಂದುಳಿದವರು ಮೀಸಲಾತಿಯ ಪ್ರಯೋಜನವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಉಪ-ವರ್ಗೀಕರಣ ಮಾಡಬಹುದು ಎಂದು ಪೀಠ ಹೇಳಿದೆ. ಆದರೆ ಇದನ್ನು ಎಸ್ಸಿ ಮತ್ತು ಎಸ್ಟಿಗಳಿಗೆ ವಿಸ್ತರಿಸಲಾಗಿಲ್ಲ ಎಂದು ಕೋರ್ಟ್ ಗಮನಿಸಿದೆ.
SC ವರ್ಗದೊಳಗೆ ಉಪ-ಜಾತಿಗಳನ್ನು ಗುರುತಿಸಲು ಮತ್ತು ತುಲನಾತ್ಮಕವಾಗಿ ಅಂಚಿನಲ್ಲಿರುವವರು ಮತ್ತು ತುಲನಾತ್ಮಕವಾಗಿ ಹೆಚ್ಚು ಅಂಚಿನಲ್ಲಿರುವವರು ಎಂಬ ಕಾರಣಕ್ಕಾಗಿ ಅವರಿಗೆ ಹೆಚ್ಚಿನ ಮೀಸಲಾತಿ ನೀಡಲು ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ ಪಂಜಾಬ್ ಸರ್ಕಾರವು ವಾದವನ್ನು ಮಂಡಿಸಿದೆ.
ಪಂಜಾಬ್ನ ಹೆಚ್ಚುವರಿ ಅಡ್ವೊಕೇಟ್-ಜನರಲ್ ಶದನ್ ಫರಾಸತ್ ಅವರು ಉಪವರ್ಗೀಕರಣವು ಮೀಸಲಾತಿಯ ಪರಿಣಾಮಕಾರಿತ್ವದ ಒಂದು ವಿಧಾನವಾಗಿದೆ, ಇದರಿಂದ ಎಲ್ಲಾ ಹಿಂದುಳಿದ ವರ್ಗಗಳಿಗೆ ಯೋಜನೆಯ ಪ್ರಯೋಜನಗಳು ತಲುಪಬಹುದು. ನಿಜವಾದ ದಕ್ಷತೆ ಏನೆಂದು ನಾವು ಇನ್ನೂ ನೋಡಿಲ್ಲ ಏಕೆಂದರೆ ನಾವು ಇನ್ನೂ ನಿಜವಾದ ಸಮಾನತೆಯನ್ನು ತಲುಪಿಲ್ಲ, ರಾಜ್ಯವು ದುರ್ಬಲ ವ್ಯಕ್ತಿಗೆ ಸಹಾಯ ಮಾಡುತ್ತಿದೆ. ರಾಜ್ಯವು ಎಲ್ಲರನ್ನೂ ಒಳಗೊಳ್ಳಬೇಕು ಎಂದು ಹೇಳಿದ್ದಾರೆ.
ಹಿಂದುಳಿದ ವರ್ಗಗಳಿಗೆ 50% ಮೀಸಲಾತಿ ನೀಡುವ ಮೂಲಕ, ನೀವು ಸಾಮಾನ್ಯ ವರ್ಗದ ಜನರನ್ನು 50% ಮೀಸಲಾತಿಯಿಂದ ಹೊರಗಿಡಲಿಲ್ಲವೇ? ಎಂದು ನ್ಯಾಯಮೂರ್ತಿ ಗವಾಯಿ ಈ ವೇಳೆ ಪ್ರಶ್ನಿಸಿದ್ದಾರೆ.
ಒಮ್ಮೆ ಒಬ್ಬ ವ್ಯಕ್ತಿಯು IPS ಅಥವಾ IAS ಆದರೆ, ಅವನ ಮಕ್ಕಳು ಹಳ್ಳಿಯಲ್ಲಿ ವಾಸಿಸುವ ಅವನ ಸಮುದಾಯದ ಇತರ ಮಕ್ಕಳು ಎದುರಿಸುವಂತಹ ಅನಾನುಕೂಲತೆಗಳನ್ನು ಎದುರಿಸುವುದಿಲ್ಲ, ಆದರೂ ಅವನ ಕುಟುಂಬವು ಮೀಸಲಾತಿಯ ಪ್ರಯೋಜನಗಳನ್ನು ಪಡೆಯುತ್ತದೆ ಎಂದು ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಪೀಠವು ಅಭಿಪ್ರಾಯ ವ್ಯಕ್ತಡಿಸಿದೆ. ಪ್ರಬಲ ಅಥವಾ ಪ್ರಭಾವಿ ಗುಂಪನ್ನು ಪಟ್ಟಿಯಿಂದ ಹೊರಗಿಡಬೇಕೇ ಅಥವಾ ಬೇಡವೇ ಎಂಬುದನ್ನು ಸಂಸತ್ತು ನಿರ್ಧರಿಸುತ್ತದೆ ಎಂದು ಅವರು ಹೇಳಿದ್ದಾರೆ.


