ಬಾಬಾ ರಾಮ್ ದೇವ್ ಮಾಲಕತ್ವದ ಪತಂಜಲಿಯ ‘ದಿವ್ಯ ಮಂಜನ್’ ಟೂತ್ ಪೇಸ್ಟ್ನಲ್ಲಿ ಮಾಂಸಾಹಾರ ಪದಾರ್ಥಗಳಿವೆ ಎಂದು ಆರೋಪಿಸಿ ವಕೀಲ ಯತಿನ್ ಶರ್ಮ ದೆಹಲಿ ಹೈಕೋರ್ಟ್ಗೆ ದೂರು ನೀಡಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಸುಬ್ರಮೊನಿಯಮ್ ಪ್ರಸಾದ್ ಅವರ ಪೀಠ, ಆಯುಷ್ ಸಚಿವಾಲಯವು ಸ್ಥಾಪಿಸಿರುವ ಸಮಿತಿಯು, ಔಷಧ ತಯಾರಿಕೆಯಲ್ಲಿ ಬಳಸಲಾಗುವ ಪದಾರ್ಥಗಳನ್ನು ಸಸ್ಯಾಹಾರ, ಮಾಂಸಾಹಾರ ಹಾಗೂ ಇನ್ನಿತರ ಪ್ರವರ್ಗ ಎಂದು ವರ್ಗೀಕರಿಸಲು ಮಾನದಂಡವನ್ನು ರೂಪಿಸುವಂತೆ ಸೂಚಿಸಿದ್ದು, ಈ ಕುರಿತು 10 ವಾರಗಳೊಳಗೆ ತನ್ನ ವರದಿ ಸಲ್ಲಿಸುವಂತೆ ಸಮಿತಿಗೆ ತಿಳಿಸಿದೆ. ಪತಂಜಲಿಯ ದಿವ್ಯ ಮಂಜನ್ ಟೂತ್ಪೇಸ್ಟ್ನಲ್ಲಿ ಮಾಂಸಾಹಾರಿ ಅಂಶಗಳಿವೆ ಎಂದು ಆರೋಪಿಸಿ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆಯಾಗಿ ಫೆಬ್ರವರಿ 2ರಂದು ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ.
ವಕೀಲ ಯತಿನ್ ಶರ್ಮಾ ಅವರು ಸಲ್ಲಿಸಿದ ಮನವಿಯಲ್ಲಿ, ಪತಂಜಲಿ ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಮಾಂಸಾಹಾರಿ ಪದಾರ್ಥಗಳ ಬಗ್ಗೆ ಉಲ್ಲೇಖಿಸಿದೆ, ಆದರೆ ‘ದಿವ್ಯ ಮಂಜನ್’ ಟೂತ್ ಪೇಸ್ಟ್ನ್ನು ಹಸಿರು ಚುಕ್ಕೆಯೊಂದಿಗೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದರಿಂದಾಗಿ ಗ್ರಾಹಕರನ್ನು ತಪ್ಪುದಾರಿಗೆಳೆಯಲಾಗಿದೆ, ಗ್ರಾಹಕರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಲಾಗಿದೆ, ಗ್ರಾಹಕರನ್ನು ವಂಚಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕೆಂಪು ಗುರುತಿನ ಬದಲು ಹಸಿರು ಗುರುತನ್ನು ಬಳಸಿ ಸಸ್ಯಹಾರವೆಂದು ಮೋಸ ಮಾಡಲಾಗಿದೆ ಎಂದು ಕೋರ್ಟ್ ಗಮನಕ್ಕೆ ತರಲಾಗಿದೆ.
ಶರ್ಮಾ ಅವರು ಕಳೆದ ವರ್ಷ ಜುಲೈನಲ್ಲಿ ಈ ಕುರಿತು ಮನವಿ ಸಲ್ಲಿಸಿದ್ದರು, ನಂತರ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಆದೇಶಿಸಲಾಗಿತ್ತು. ಇದರ ನಂತರ ವಕೀಲರು 23.07.2023ರಂದು ಆಯುಷ್ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದರು.
ಆಧುನಿಕ ವೈದ್ಯಕೀಯ ವ್ಯವಸ್ಥೆಗಳನ್ನು ಅವಹೇಳನ ಮಾಡುವ, ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸದಂತೆ ಪತಂಜಲಿ ಆಯುರ್ವೇದಕ್ಕೆ ಸುಪ್ರೀಂಕೋರ್ಟ್ ಇತ್ತೀಚೆಗೆ ಸೂಚನೆ ನೀಡಿತ್ತು. ನಿರ್ದಿಷ್ಟ ಕಾಯಿಲೆಗಳನ್ನು ಗುಣಪಡಿಸಬಹುದು ಎಂದು ಸೂಚಿಸುವ ಸುಳ್ಳು ಜಾಹೀರಾತು ನೀಡುವುದಕ್ಕಾಗಿ ಪ್ರತಿ ಉತ್ಪನ್ನದ ಮೇಲೆ 1 ಕೋಟಿ ರೂಪಾಯಿ ದಂಡವನ್ನು ವಿಧಿಸುವುದಾಗಿಯು ನ್ಯಾಯಾಲಯ ಎಚ್ಚರಿಸಿತ್ತು.
ಕಳೆದ ನವೆಂಬರ್ನಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು ಪತಂಜಲಿ ಆಯುರ್ವೇದ್ನ ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಮೌಖಿಕವಾಗಿ ಎಚ್ಚರಿಕೆ ನೀಡಿತ್ತು.
ಈ ಹಿಂದೆ ಆಗಸ್ಟ್ 23, 2022ರಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಮತ್ತು ಆಧುನಿಕ ಔಷಧಿಗಳ ವಿರುದ್ಧ ರಾಮ್ದೇವ್ ಅವರ ಅಭಿಯಾನದ ವಿರುದ್ಧದ IMA ಮನವಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂಕೋರ್ಟ್, ಕೇಂದ್ರ ಆರೋಗ್ಯ ಸಚಿವಾಲಯ, ಆಯುಷ್ ಸಚಿವಾಲಯ ಮತ್ತು ಪತಂಜಲಿ ಆಯುರ್ವೇದ್ ಲಿಮಿಟೆಡ್ಗೆ ನೋಟಿಸ್ ನೀಡಿತ್ತು.
ಇದನ್ನು ಓದಿ: ದಲಿತ ಬಾಲಕಿ ಮೇಲೆ ದೌರ್ಜನ್ಯ ಪ್ರಕರಣ: ಡಿಎಂಕೆ ಶಾಸಕನ ಪುತ್ರ, ಸೊಸೆಗೆ ನ್ಯಾಯಾಂಗ ಬಂಧನ